Site icon Vistara News

ವಿಸ್ತಾರ TOP 10 NEWS | ಸಿದ್ದು ವಿರುದ್ಧದ ಪ್ರತಿಭಟನೆಯಿಂದ ಸಿದ್ದಿವಿನಾಯಕನ ಪ್ರತಿಷ್ಠಾಪನೆವರೆಗಿನ ಸುದ್ದಿಗಳಿವು

Vistara TOP 10 18082022

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆಣೆಸಿದವರ ಕುರಿತು ಹೇಳಿಕೆ ನೀಡುವ ಭರಾಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಡಿದ್ದ ಮಾತು ಇದೀಗ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಸಿದ್ದರಾಮಯ್ಯ ಅವರು ತೀವ್ರ ಪ್ರತಿಭಟನೆಯ ಬಿಸಿ ಎದುರಿಸಿದ್ದಾರೆ. ಈ ನಡುವೆ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಬಿಜೆಪಿಯಲ್ಲಿ ಸ್ಥಾನ ಸಿಕ್ಕಾಗಿನಿಂದ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ. ಗಣೇಶೋತ್ಸವಕ್ಕೆ ಸ್ಥಾಪಿಸುವ ಮೂರ್ತಿಯ ಎತ್ತರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮಿತಿ ವಿಧಿಸಿದೆ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ (IND vs ZIM ODI) ಮೊದಲ ಪಂದ್ಯದಲ್ಲಿ ಭಾರತ ತಂಡ ೧೦ ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ ಎಂಬುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Savarkar Issue | ಸಿದ್ದರಾಮಯ್ಯ ಕಾರಿಗೆ ಮಡಿಕೇರಿಯಲ್ಲಿ ಮೊಟ್ಟೆ ಎಸೆತ, ಕಪ್ಪು ಪಟ್ಟಿ ಪ್ರದರ್ಶನ!
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಫೋಟೊವನ್ನು (Savarkar Issue) ಯಾಕೆ ಹಾಕಬೇಕಿತ್ತು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅವರ ಕೊಡಗು ಪ್ರವಾಸಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತರು ಅವರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಈ ಕುರಿತು ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾವೂ ಮೊಟ್ಟೆ ಎಸೆದೇ ಬಂದಿದ್ದೇವೆ, ನಾವು ಪ್ರತಿಭಟಿಸಿದ್ರೆ ಸಿಎಂ ಎಲ್ಲೂ ಓಡಾಡೋ ಹಾಗಿಲ್ಲ ಎಂದಿದ್ದಾರೆ.

2. ರಾಜ್ಯ ರಾಜಕಾರಣದ ಹೊಸ ಶಕ್ತಿ ಕೇಂದ್ರ ʻಕಾವೇರಿʼ: ಬಿಜೆಪಿಗೆ ಚೈತನ್ಯ ನೀಡಿದ ನೇಮಕ
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಕ ಮಾಡಿರುವುದರಿಂದ ರಾಜ್ಯ ಬಿಜೆಪಿಗೆ ಹೊಸ ಚೈತನ್ಯ ನೀಡಿದಂತಾಗಿದೆ. ಚುನಾವಣೆಗೆ ಸಜ್ಜಾಗುವ ಮುನ್ನ ಬಿಜೆಪಿಯಲ್ಲಿ ನಡೆಯುತ್ತಿದ್ದ ವಿಭಿನ್ನ ರೀತಿಯ ಹೇಳಿಕೆಗಳು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ದಿನದಲ್ಲಿ ಯಡಿಯೂರಪ್ಪ ಅವರ ನಿವಾಸ ‘ಕಾವೇರಿʼ ಹೊಸ ಶಕ್ತಿ ಕೇಂದ್ರವಾಗಿ ಬದಲಾಗಿದೆ. ಗುರುವಾರ ಬೆಳಗ್ಗೆಯಿಂದಲೂ ಕಾವೇರಿ ನಿವಾಸ ಅತ್ಯಂತ ಹೆಚ್ಚಿನ ಜನಜಂಗುಳಿಯಿಂದ ಕೂಡಿದೆ. ಮೊದಲಿಗೆ ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಭೇಟಿಯಾಗಿ ಶುಭ ಕೋರಿದರು. ರಾಜ್ಯ ಸರ್ಕಾರದ ಪ್ರಮುಖ ಸಚಿವರುಗಳು, ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಗಣೇಶೋತ್ಸವ: ಈ ಬಾರಿಯೂ ಇರುತ್ತಾ ವಿಗ್ರಹದ ಎತ್ತರಕ್ಕೆ ನಿರ್ಬಂಧ? ಗರಿಷ್ಠ ಐದು ಅಡಿಯಂತೆ
ಆಗಸ್ಟ್‌ ೩೧ರಂದು ಗಣೇಶ ಚತುರ್ಥಿ. ಅದಕ್ಕಾಗಿ ಈಗಾಗಲೇ ದೊಡ್ಡ ಮಟ್ಟದ ಸಿದ್ಧತೆಗಳು ನಡೆದಿವೆ. ಗೌರಿ-ಗಣೇಶ ಮತ್ತು ಗಣೇಶ ಮೂರ್ತಿಗಳ ಮಾರಾಟವೂ ಆರಂಭಗೊಂಡಿದೆ. ಇದರ ನಡುವೆಯೇ ಸಾರ್ವಜನಿಕವಾಗಿ ಪೂಜೆ ಮಾಡಬಹುದಾದ ಗಣೇಶ ಮೂರ್ತಿಗಳ ಎತ್ತರದ ಬಗ್ಗೆ ಗೊಂದಲ ಸೃಷ್ಟಿಯ ಸನ್ನಿವೇಶ ಎದುರಾಗಿದೆ. ಈ ಬಾರಿಯೂ ಮಣ್ಣಿನ ಮೂರ್ತಿಗೇ ಆದ್ಯತೆ. ಯಾವ ಕಾರಣಕ್ಕೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿಗಳನ್ನು ಬಳಸುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟವಾಗಿ ಹೇಳಿದೆ. ಜತೆಗೆ ಮೂರ್ತಿಯ ಎತ್ತರ ಮತ್ತು ಅಗಲಕ್ಕೆ ಸಂಬಂಧಿಸಿ ನಿಯಮಗಳನ್ನು ಜಾರಿ ಮಾಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಗೆ ಒತ್ತಡ: ಪಾಲಿಕೆಗೇ ಮೂರ್ತಿ ತಂದು ಮನವಿ

4. Krishna Janmashtami̇ 2022 | ನೀವು ಜೀವನದಲ್ಲಿ ಒಮ್ಮೆ ನೋಡಲೇಬೇಕಾದ 10 ಕೃಷ್ಣ ದೇಗುಲಗಳಿವು!
ಶ್ರೀ ಕೃಷ್ಣ ಎಲ್ಲರ ನೆಚ್ಚಿನ ದೇವರು. ಕೃಷ್ಣನಿಲ್ಲದ ಗ್ರಾಮವಿಲ್ಲ, ಆರಾಧಿಸದ ಜನರಿಲ್ಲ. ಕೃಷ್ಣನ ನೂರಾರು ದೇಗುಲಗಳು ನಮ್ಮ ದೇಶದಲ್ಲಿವೆ. ಅವುಗಳಲ್ಲಿ ಕೆಲ ಜನಪ್ರಿಯ ದೇಗುಲಗಳ ಪುಟ್ಟ ಅವಲೋಕನವನ್ನು ಇಲ್ಲಿ ಮಾಡಲಾಗಿದೆ. ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಕೃಷ್ಣ ಜನ್ಮಾಷ್ಟಮಿ ಕುರಿತು ಕುರಿತು ಲೇಖಕರು, ಜ್ಯೋತಿಷಿ, ವಾಸ್ತುತಜ್ಞರಾದ ದೈವಜ್ಞ ಡಾ. ಹರೀಶ್‌ ಕಾಶ್ಯಪ ಅವರ ವಿಶೇಷ ಲೇಖನಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

5. Charges on payment | ಪೇಟಿಎಂ, ಫೋನ್‌ಪೇ, ಆನ್‌ಲೈನ್‌ ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ಹೊರಟ ಆರ್‌ಬಿಐ
ಪೇಟಿಎಂ, ಜಿ-ಪೇ, ಫೋನ್‌ಪೇ ಇತ್ಯಾದಿ ಯುಪಿಐ ಆಧಾರಿತ ಹಣಕಾಸು ವರ್ಗಾವಣೆಗಳ (Charges on payment) ಮೇಲೆ ಶುಲ್ಕ ವಿಧಿಸಲು ಮೊದಲ ಬಾರಿಗೆ ಆರ್‌ಬಿಐ ಚಿಂತನೆ ನಡೆಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯವನ್ನು ನಿರೀಕ್ಷಿಸಿದೆ.‌ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಸುವ ಹಣ ವರ್ಗಾವಣೆಗಳ ಮೇಲೆಯೂ ನಿಯಮಿತ ಶುಲ್ಕ ವಿಧಿಸಲು ಉದ್ದೇಶಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಲು ಅಲ್ಲಿನವರೇ ಕೇಳುತ್ತಿದ್ದಾರೆಂದ ಕೆಸಿಆರ್; ವಿವಾದದ ಮೂಲ ಬಿಜೆಪಿ ಶಾಸಕ!
‘ಕರ್ನಾಟಕದ ರಾಯಚೂರಿನ ಜನರು ತಮ್ಮ ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸುವಂತೆ (Raichur to be merged with Telangana) ಒತ್ತಾಯ ಮಾಡುತ್ತಿದ್ದಾರೆ’ ಎಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ವಿವಾದದ ಕಿಡಿ ಹೊತ್ತಿಸಿದ್ದಾರೆ. ಆದರೆ ಅವರು ಈ ಹೇಳಿಕೆ ನೀಡಲು, ಕರ್ನಾಟಕ ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ್‌ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಶಿವರಾಜ್‌ ಪಾಟೀಲ್‌ ಮೂರ್ಖ ಎಂದ ಕಾಂಗ್ರೆಸ್‌, ಅವರು ಲೆಕ್ಕಕ್ಕಿಲ್ಲ ಎಂದ ಬಿಜೆಪಿ

7. Terror Alert | ಮಹಾರಾಷ್ಟ್ರದಲ್ಲಿ ಸಿಕ್ಕ ಬೋಟ್‌ ಉಗ್ರರದ್ದಲ್ಲ, ಆಸ್ಟ್ರೇಲಿಯಾದ್ದು?
ಮಹಾರಾಷ್ಟ್ರದ ರಾಯಗಢ ಜಿಲ್ಲೆ ಹರಿಹರೇಶ್ವರ ಬೀಚ್‌ನಲ್ಲಿ ಎಕೆ-೪೭ ಗನ್‌ಗಳು ಸೇರಿ ಹಲವು ಶಸ್ತ್ರಾಸ್ತ್ರಗಳುಳ್ಳ ಹಡಗು ಪತ್ತೆಯಾಗಿರುವ ಪ್ರಕರಣ (Terror Alert) ದೇಶಾದ್ಯಂತ ಆತಂಕ ಮೂಡಿಸಿದ ಬೆನ್ನಲ್ಲೇ, ಸಿಕ್ಕ ಬೋಟ್‌ ಉಗ್ರರದ್ದಲ್ಲ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ.
ಹರಿಹರೇಶ್ವರ ಬೀಚ್‌ನಲ್ಲಿ ಪತ್ತೆಯಾದ ಬೋಟ್‌ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ್ದಾಗಿದೆ. ಅದು ಮಸ್ಕಟ್‌ ಮೂಲಕ ಯುರೋಪ್‌ಗೆ ಸಾಗುತ್ತಿತ್ತು. ಅಲೆಗಳಲ್ಲಿ ತೀವ್ರವಾಗಿ ಏರುಪೇರು ಉಂಟಾದ ಕಾರಣ ಅದು ಸಂಕಷ್ಟಕ್ಕೆ ಸಿಲುಕಿತ್ತು. ಇದು ಉಗ್ರರಿಗೆ ಸಂಬಂಧಿಸಿದ ಬೋಟ್‌ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸ್ಪಷ್ಟಪಡಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Electric double-decker bus | ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ಡಬಲ್‌-ಡೆಕ್ಕರ್‌ ಬಸ್‌ಗೆ ಚಾಲನೆ
ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ಡಬಲ್-ಡೆಕ್ಕರ್‌ ಬಸ್‌ಗೆ (Electric double-decker bus) ಮುಂಬಯಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಚಾಲನೆ ನೀಡಿದರು. ಅಶೋಕ್‌ ಲೇಲ್ಯಾಂಡ್ಸ್‌ ಕಂಪನಿಯ ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್‌ ಬಸ್‌ಗೆ ಚಾಲನೆ ನೀಡಿದ ಅವರು, ಎಲೆಕ್ಟ್ರಿಕ್‌ ವಾಹನಗಳ ಬಳಕೆಯಿಂದ ಕಚ್ಚಾ ತೈಲದ ಆಮದು ತಗ್ಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್‌ ಭಾರತ್‌ ಅಭಿಯಾನಕ್ಕೆ ಇದು ಪೂರಕವಾಗಿದೆ ಎಂದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?
ರಕ್ಕಮ್ಮ ಅಲಿಯಾಸ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರ ಬೆನ್ನಟ್ಟಿರುವ ಜಾರಿ ನಿರ್ದೇಶನಾಲಯ ಆಕೆಯ ಕುರಿತು ಒಂದೊಂದೇ ಆರೋಪಗಳನ್ನು ಪಟ್ಟಿ ಮಾಡುತ್ತಿದೆ. ಜಾಕ್ವೆಲಿನ್‌ ಮತ್ತು ವಂಚಕ ಸುಕೇಶ್‌ ಚಂದ್ರಶೇಖರ್‌ ಸೇರಿ ಮಾಡಿರುವ ವಂಚನೆಯ ಮೊತ್ತ ಸಣ್ಣದಲ್ಲ- 200 ಕೋಟಿ ರೂಪಾಯಿಗೂ ಹೆಚ್ಚು. ಇದಲ್ಲದೇ ಇನ್ನೊಂದಷ್ಟು ಹೊಸ ವಿವರಗಳು ಹೊರಬಿದ್ದಿವೆ. ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. IND vs ZIM ODI | ಧವನ್‌- ಗಿಲ್‌ ಜೋಡಿಯ ಕಮಾಲ್, ಭಾರತಕ್ಕೆ 10 ವಿಕೆಟ್‌ ಭರ್ಜರಿ ಜಯ
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ (IND vs ZIM ODI) ಮೊದಲ ಪಂದ್ಯದಲ್ಲಿ ಭಾರತ ತಂಡ ೧೦ ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿದೆ. ಆರಂಭಿಕ ಬ್ಯಾಟರ್‌ಗಳಾದ ಶಿಖರ್‌ (೮೧*) ಧವನ್ ಹಾಗೂ ಶುಬ್ಮನ್‌ ಗಿಲ್‌ (೮೨*) ಜೋಡಿಯ ಮುರಿಯದ ಶತಕದ ಜತೆಯಾಟ ಭಾರತದ ಗೆಲುವಿನ ಸುಲಭವಾಗಿಸಿತು. ಅದಕ್ಕಿಂತ ಮೊದಲು ಭಾರತದ ಬೌಲರ್‌ಗಳು ಆತಿಥೇಯ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿಯುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿಕೊಟ್ಟಿದ್ದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version