Site icon Vistara News

Karnataka Election 2023: ಮತದಾನದ ದಿನ ‘ಜೈ ಬಜರಂಗಬಲಿ’ ಎನ್ನುತ್ತಾ ಕಮಲದ ಬಟನ್ ಒತ್ತಿ: ಪ್ರಧಾನಿ ನರೇಂದ್ರ ಮೋದಿ

Vote for bjp with chanting Jai bajrangabali Says PM Narendra Modi

ಅಂಕೋಲಾ, ಉತ್ತರ ಕನ್ನಡ: ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಹೇಗೆ ಮತ ಕೇಳುತ್ತಿದೆ ಗೊತ್ತಾ? ನಮ್ಮ ನಾಯಕ(ಸಿದ್ದರಾಮಯ್ಯ) ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾನೆ, ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು ಸಹಿಸಿಕೊಳ್ಳುತ್ತಾರೆಯೇ? ಇಲ್ಲ ಅಲ್ಲವೇ, ಅಂಥವರಿಗೆ ಶಿಕ್ಷೆ ಕೊಡಬೇಕಲ್ಲವೇ? ಹಾಗಿದ್ದರೆ, ಮತದಾನದ ದಿನ ‘ಜೈ ಬಜರಂಗಬಲಿ’ ಎಂದು ಕಮಲದ ಬಟನ್ ಒತ್ತುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಹೇಳಿದರು(Karnataka Election 2023).

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೇಗೆ ನಕಲಿ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿತ್ತು, ಮೋದಿ ಸರ್ಕಾರ ಆ ವ್ಯವಸ್ಥೆಯನ್ನು ಹೇಗೆ ನಿರ್ನಾಮ ಮಾಡಿತು ಎಂಬ ಕುರಿತು ವಿವರಿಸಿದರು. ಅಲ್ಲದೇ, ಮೀನುಗಾರರಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ದಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆಯೂ ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ನಕಲಿ ಹೆಸರುಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಸರ್ಕಾರಿ ಯೋಜನೆಗಳ ಹಣವನ್ನು ಲೂಟಿ ಮಾಡಲಾಗುತ್ತಿತ್ತು. ಕಾಂಗ್ರೆಸ್‌ನವರು 4.2 ಕೋಟಿ ನಕಲಿ ಜನರಿಗೆ ರೇಷನ್ ಕೊಟ್ಟಿದ್ದರು. 4 ಕೋಟಿ ನಕಲಿ ಹೆಸರಿನಲ್ಲಿ ಗ್ಯಾಸ್‌ ಸಬ್ಸಿಡಿ ನೀಡಿದ್ದರು. 1 ಕೋಟಿ ನಕಲಿ ಹೆಸರಿನಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಯೋಜನೆಯ ಹಣ ನೀಡಿದ್ದರು. 30 ಲಕ್ಷ ನಕಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತಿದ್ದರು. ಭಾರತದ ಮೂಲೆ ಮೂಲೆಯಿಂದ 10 ಕೋಟಿ ಜನರ ನಕಲಿ ಹೆಸರಗಳನ್ನ ಕಾಂಗ್ರೆಸ್ ಸರ್ಕಾರಿ ದಾಖಲೆಗ ಪತ್ರಗಳಿಗೆ ಸೇರಿಸಿತ್ತು.ಹೀಗೆ ನಕಲಿ ಹೆಸರಿನಲ್ಲಿ ಬರುತ್ತಿದ್ದ ಹಣ ಎಲ್ಲಿ ಹೋಗುತ್ತಿತ್ತು? ಖಂಡಿತವಾಗಿಯೂ ಈ ಕಾಂಗ್ರೆಸ್‌ನ ಮೇಲಸ್ತರದ ನಾಯಕರಿಂದ ಕಳ ಹಂತದ ನಾಯಕರ ಜೇಬಿಗೆ ಹೋಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು.

ಕಾಂಗ್ರೆಸ್‌ನವರು ಮೋದಿಗೆ ಯಾಕೆ ಬೈಯುತ್ತಾರೆ ಗೊತ್ತಾ? ಕಾಂಗ್ರೆಸ್ ಸೃಷ್ಟಿಸಿದ ಈ ಭ್ರಷ್ಟ ವ್ಯವಸ್ಥೆಯನ್ನು ನಾನು ನಾಶ ಮಾಡಿದೆ. ಅದಕ್ಕೆ ಕಾಂಗ್ರೆಸ್‌ನವರು ಮೋದಿಯನ್ನು ಬೈಯುತ್ತಾರೆ. ನಾನು 9 ವರ್ಷಗಳಲ್ಲಿ ಈ ನಕಲಿ ಹೆಸರಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆದಿದ್ದೇನೆ. ಇದರಿಂದ 3.75 ಲಕ್ಷ ಕೋಟಿ ರೂ. ಉಳಿತಾಯ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದರು.

ಕಾಂಗ್ರೆಸ್‌ಗೆ ಆದಿವಾಸಿಗಳನ್ನು ಕಂಡರೆ ಆಗದು

ಕಾಂಗ್ರೆಸ್ ಪಕ್ಷವೂ ಎಂದಿಗೂ ಆದಿವಾಸಿಗಳ ಪರವಾಗಿ ಇರಲಿಲ್ಲ. ಬಿಜೆಪಿಯು ದೇಶದ ಮೊದಲ ಆದಿವಾಸಿ ಮಹಿಳೆಯನ್ನು ದೇಶದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿತು. ಕಾಂಗ್ರೆಸ್ ಇದಕ್ಕೂ ವಿರೋಧ ವ್ಯಕ್ತಪಡಿಸಿತು. ಬಿಜೆಪಿ ಅಭ್ಯರ್ಥಿ ಎಂಬ ಕಾರಣಕ್ಕೆ ಆದಿವಾಸಿ ಮಹಿಳೆಯನ್ನು ವಿರೋಧಿಸಲಿಲ್ಲ. ಬದಲಾಗಿ, ಅದರ ನೀತಿಯೇ ಆದಿವಾಸಿಗಳನ್ನು ಉದ್ದರಿಸುವುದಾಗಿಲ್ಲ ಎಂದು ಹೇಳಿದರು. ಇದೇ ವೇಳೆ, ಅವರು ಉತ್ತರ ಕನ್ನಡ ಜಿಲ್ಲೆಯ ಸಕ್ರಿ ಬೊಮ್ಮಗೌಡ ಸೇರಿದಂತೆ ಇತರ ಮಹಿಳೆಯರನ್ನು ಸ್ಮರಿಸಿಕೊಂಡರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಮೊಳಗಿದ ಜೈ ಬಜರಂಗ ಬಲಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅಂಕೋಲಾದಲ್ಲಿ ತಮ್ಮ ಭಾಷಣವನ್ನು ಜೈ ಬಜರಂಗಿಬಲಿ ಎಂದು ಐದು ಬಾರಿ ಘೋಷಣೆ ಕೂಗುವ ಮೂಲಕ ಆರಂಭಿಸಿದರು. ಕನ್ನಡದಲ್ಲಿ ಶುರು ಮಾಡಿದ ಭಾಷಣಕ್ಕೆ ನೆರೆದಿದ್ದ ಜನರು ಕೂಡ ಅಷ್ಟೇ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದರು.

Exit mobile version