Site icon Vistara News

Murder case: 3 ವರ್ಷಗಳ ಹಿಂದಿನ ಉದ್ಯಮಿ ಕೊಲೆಗೆ ಟ್ವಿಸ್ಟ್‌; ಕೊಲೆ ಮಾಡಿಸಿದವಳೇ ಹೆಂಡತಿ!

Murder case

ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಸಂಚು ರೂಪಿಸಿ ತನ್ನ ಪತಿಯನ್ನೇ ಕೊಲೆ(Murder case) ಮಾಡಿದ ಘಟನೆಯ ಹಿಂದಿನ ಕತೆ ಕುತೂಹಲಕರವಾಗಿದೆ. ಮೂರು ವರ್ಷಗಳ ಹಿಂದೆ ಹರಿಯಾಣದ ಪಾಣಿಪತ್‌ನಲ್ಲಿ ಕೊಲೆ ನಡೆದಿತ್ತು. ಇದೀಗ ಈ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದೆ.

ಹರಿಯಾಣದಲ್ಲಿ ಪಾಣಿಪತ್‌ನಲ್ಲಿ ಡಿಸೆಂಬರ್ 15, 2021ರಂದು ಉದ್ಯಮಿಯೊಬ್ಬರನ್ನು ಅವರ ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ವಿನೋದ್ ಭರಾರ ಕೊಲೆಯಾದ ವ್ಯಕ್ತಿ, ಶೂಟ್ ಮಾಡಿದ ಟ್ರಕ್ ಚಾಲಕ ದೇವ್ ಸುನರ್ ಎನ್ನಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದರು. ಆರೋಪಿ ಕೂಡ ಜೈಲಿನಲ್ಲಿದ್ದ. ಆದರೆ ಇದೀಗ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿದ್ದು, ವಿನೋದ್ ಅವರಿಗೆ ಬಹಳ ಹತ್ತಿರದಲ್ಲಿ ಸಂಬಂಧವಿರುವ ವ್ಯಕ್ತಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡುವಂತೆ ಮನವಿ ಮಾಡಲಾಗಿತ್ತು. ಪೊಲೀಸರು ಈ ಸಂದೇಶದ ಬಗ್ಗೆ ಮಾಹಿತಿ ಕಲೆಹಾಕಿದಾಗ ಈ ಸಂದೇಶ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನೋದ್ ಅವರ ಸಹೋದರ ಪ್ರಮೋದ್ ಎಂಬಾತ ಕಳುಹಿಸಿರುವುದಾಗಿ ತಿಳಿದು ಬಂತು.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಈ ಪ್ರಕರಣದ ತನಿಖೆಯನ್ನು ವಹಿಸಲಾಯಿತು. ಆಗ ತನಿಖೆಯ ವೇಳೆ, ಕೊಲೆ ಮಾಡಿದ ಆರೋಪಿ ದೇವ್ ಸುನರ್‌ಗೂ ಕೊಲೆಯಾದ ವಿನೋದ್ ಅವರಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಆರೋಪಿ ದೇವ್, ಜಿಮ್ ಟ್ರೈನರ್ ಸುಮಿತ್ ಎಂಬಾತನಿಗೆ ಹತ್ತಿರದವನಾಗಿದ್ದ. ವಿನೋದ್ ಭರಾರ ಅವರ ಪತ್ನಿ ನಿಧಿ, ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂತು.

ಈ ಬಗ್ಗೆ ವಿಚಾರಣೆ ನಡೆಸಿದಾಗ ನಿಧಿ ಅವರು ತಮ್ಮ ಮಗಳ ಜೊತೆ ಆಗಾಗ ಜಿಮ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಜಿಮ್ ಟ್ರೈನರ್ ಸುಮಿತ್‌ನನ್ನು ಭೇಟಿಯಾದ ನಿಧಿ ಆತನೊಂದಿಗೆ ಸಲುಗೆ ಬೆಳೆದು ಸಂಬಂಧದಲ್ಲಿದ್ದರು. ಈ ವಿಚಾರ ತಿಳಿದ ವಿನೋದ್ ಅವರು ಆತನಿಂದ ದೂರವಿರುವಂತೆ ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದರು. ಹೀಗಾಗಿ ನಿಧಿ ಮತ್ತು ಸುಮಿತ್ ಸೇರಿ ವಿನೋದ್ ಅವರ ಕೊಲೆಗೆ ಸಂಚು ರೂಪಿಸಿದರು.

ಅದಕ್ಕಾಗಿ ಸುಮಿತ್ ಪಂಜಾಬ್‌ನ ಟ್ರಕ್ ಚಾಲಕ ದೇವ್ ಸುನಾರ್‌ನನ್ನು ಈ ಕೆಲಸಕ್ಕೆ ಸಂಪರ್ಕಿಸಿ ಆತನಿಗೆ 10 ಲಕ್ಷ ರೂ. ನೀಡಿ ಜನವರಿ 2, 2021ರಂದು ದೇವ್ ವಿನೋದ್ ಅವರ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಆದರೆ ಈ ಅಪಘಾತದಲ್ಲಿ ವಿನೋದ್ ಗಂಭೀರವಾಗಿ ಗಾಯಗೊಂಡರೂ ಬದುಕುಳಿದಿದ್ದರು. ದೇವ್ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ವಿನೋದ್ ಮನೆಗೆ ಭೇಟಿ ನೀಡಿದ್ದಾನೆ. ಆಗ ವಿನೋದ್ ಇದಕ್ಕೆ ಒಪ್ಪದಿದ್ದಾಗ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಮೊದಲು ಕತೆ ಕಟ್ಟಲಾಗಿತ್ತು. ಆದರೆ ಆಳವಾದ ತನಿಖೆ ನಡೆಸಿದಾಗ ಇದು ಕಟ್ಟು ಕತೆ. ದೇವ್‌ ಅಪಘಾತ ಮಾಡಿ ಉದ್ಯಮಿಯನ್ನು ಆಕ್ಸಿಡೆಂಟ್‌ ಮಾಡಿ ಕೊಲ್ಲಲು ಯತ್ನಿಸಿದ್ದ. ಅದು ವಿಫಲವಾದಾಗ ಗುಂಡಿಕ್ಕಿ ಕೊಂದ ಎನ್ನುವುದು ಖಚಿತವಾಯಿತು.

ಇದನ್ನೂ ಓದಿ:Pakistan Begger: ಪಾಕಿಸ್ತಾನವೇ ಒಂದು ಭಿಕ್ಷುಕ ದೇಶ! ಆದರೆ ಅಲ್ಲಿಯ ಈ ಭಿಕ್ಷುಕ ಎಷ್ಟು ಶ್ರೀಮಂತ ನೋಡಿ!

ಪತಿ ಕೊಲೆಯಾದ ಬಳಿಕ ನಿಧಿ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿರುವ ವಿನೋದ್ ಸಹೋದರ ಪ್ರಮೋದ್ ಬಳಿಗೆ ಕಳುಹಿಸಿ ಸುಮಿತ್ ಜೊತೆ ಸುತ್ತಾಡಲು ಶುರು ಮಾಡಿದ್ದಳು. ಇದೀಗ ಇವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡು ಜೈಲು ಪಾಲಾಗಿದ್ದಾರೆ.

Exit mobile version