Site icon Vistara News

Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!

ಕುಂಬಳಕಾಯಿ (Health Tips Kannada) ಎನ್ನುತ್ತಿದ್ದಂತೆ ಹೆಗಲು ಮುಟ್ಟಿ ನೋಡುವ ಗಾದೆ ನಮಗೆಲ್ಲ ಗೊತ್ತು. ಆದರೆ ಅದಕ್ಕಾಗಿ ನಾವು ತರಬೇಕಾದ್ದು ಸಿಹಿ ಕುಂಬಳಕಾಯನ್ನಲ್ಲ, ಬೂದುಗುಂಬಳ ಕಾಯನ್ನು. ಕಾರಣ, ಹೆಗಲ ಮೇಲಿಟ್ಟಾಗ ಬೂದಿ ಬಳಿದು ಕಳ್ಳನ ಸುಳಿವು ಕೊಡುವ ಕಾಯೆಂದರೆ ಅದೇ! ಇದೀಗ ಕಳ್ಳನ ಪತ್ತೇದಾರಿಕೆ ಮಾಡುವ ಉದ್ದೇಶಕ್ಕೆ ಕುಂಬಳಕಾಯನ್ನು ಪ್ರಸ್ತಾಪ ಮಾಡುತ್ತಿರುವುದಲ್ಲ. ಬದಲಿಗೆ, ಇದರ ರಸವನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಆಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಹೇಳುವುದಕ್ಕೆ. ಹಲವು ರೀತಿಯ ಖನಿಜಗಳು, ವಿಟಮಿನ್‌ಗಳು ಮತ್ತು ನಾರು ಹೇರಳವಾಗಿರುವ ಬೂದುಗುಂಬಳ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ, ಮೂಳೆಗಳು ಬಲವಾಗುತ್ತವೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದಿಡೀ ಗ್ಲಾಸ್‌ ಬೂದುಗುಂಬಳದ ರಸವನ್ನು ಕುಡಿಯುವುದು ಹಲವು ರೀತಿಯಲ್ಲಿ ಉಪಕಾರಿ. ಆಸಿಡಿಟಿ, ಹುಳಿತೇಗು ಮುಂತಾದ ಜೀರ್ಣಾಂಗಗಳ ತೊಂದರೆ ನಿವಾರಿಸುವಂಥ ಅಮೃತದಂತೆ ಇದು ಕೆಲಸ ಮಾಡುತ್ತದೆ. ಈ ಕಾಯಿಯಲ್ಲಿರುವ ತಿರುಳಿನ ಬಹುಪಾಲು ನೀರು ಮತ್ತು ನಾರಿನಲ್ಲೇ ತುಂಬಿಹೋಗಿದೆ. ಹಾಗಾಗಿ ಇಡೀ ಶರೀರಕ್ಕೆ ಬೇಕಾದ ನೀರಿನಂಶವನ್ನು ಬೆಳಗಿನಿಂದಲೇ ದೇಹಕ್ಕೆ ಒದಗಿಸಲು ಈ ಮೂಲಕ ಸಾಧ್ಯವಾಗುತ್ತದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಇದನ್ನು ಸೇವಿಸುವುದು ಶರೀರವನ್ನು ತಂಪಾಗಿ ಇರಿಸಲಿಕ್ಕೆ ಸಹಕಾರಿ.

ಕ್ಯಾನ್ಸರ್‌ ದೂರ

ಇದರಲ್ಲಿರುವ ನೈಸರ್ಗಿಕ ನೀರಿನಂಶ ಮತ್ತು ಖನಿಜದ ಸಾಂದ್ರತೆಯು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್‌ ಭೀತಿಯನ್ನು ತಡೆಯುವಲ್ಲಿ ಇದರ ಪಾತ್ರವನ್ನು ಹಿರಿದಾಗಿಸಲಾಗಿದೆ. ಕೆರಾಟಿನಾಯ್ಡ್‌ಗಳಂಥ ಉತ್ತಮ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕ್ಯಾನ್ಸರ್‌ಕಾರಕಗಳ ಕೆಲಸಕ್ಕೆ ತಡೆಯೊಡ್ಡುತ್ತವೆ; ಜೊತೆಗೆ, ಕ್ಯಾನ್ಸರ್‌ ಕಣಗಳು ಹರಡದಂತೆ ಮಾಡುವಲ್ಲಿ ಪ್ರಭಾವಶಾಲಿಯಾಗಿವೆ.

ಹೃದಯದ ಮಿತ್ರ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒಂದೆರಡೇ ಅಲ್ಲ. ಸರಳವಾದ ವಿಟಮಿನ್‌ ಸಿ ಯಂಥ ಉರಿಯೂತ ಶಾಮಕಗಳಿಂದ ಹಿಡಿದು, ಸಂಕೀರ್ಣ ಕೆರಾಟಿನಾಯ್ಡ್‌ಗಳವರೆಗೆ ಈ ಅಂಶಗಳು ಬೂದುಗುಂಬಳದಲ್ಲಿ ಸಾಂದ್ರವಾಗಿವೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಮಾತ್ರವಲ್ಲ, ಹಲವು ರೀತಿಯ ಮಾರಕ ರೋಗಗಳು ಬಳಿ ಬರದಂತೆ ತಡೆಯುತ್ತವೆ.

ಮಧುಮೇಹಿಗಳಿಗೆ ಪೂರಕ

ತೂಕ ಇಳಿಸುವವರಿಗೆ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಯಸುವವರಿಗೆ ಇದು ಒಳ್ಳೆಯ ಆಯ್ಕೆ. ಇದರಲ್ಲಿ ಕ್ಯಾಲರಿ ಅತಿ ಕಡಿಮೆ, ಸತ್ವ ಹೆಚ್ಚು. ಪೊಟಾಶಿಯಂ, ಕ್ಯಾಲ್ಶಿಯಂ, ಕಬ್ಬಿಣ, ಫಾಸ್ಫರಸ್‌ನಂಥ ಖನಿಜಗಳಿಂದ ಸಾಂದ್ರವಾಗಿರುವ ಇದು ದೇಹದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿ. ನೈಸರ್ಗಿಕವಾದ ನಾರಿನಂಶವು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಇದರಿಂದ ತೂಕ ಇಳಿಕೆಗೆ ಅನುಕೂಲ. ಜೊತೆಗೆ ರಕ್ತದಲ್ಲಿನ ಸಕ್ಕರೆಯಂಶ ತ್ವರಿತವಾಗಿ ಏರದಂತೆ ತಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Health Tips: ನಿಂತು ಊಟ ಮಾಡುವುದಕ್ಕಿಂತ ಕೂತು ಊಟ‌ ಮಾಡಿದರೆ ಏನೇನು ಲಾಭಗಳಿವೆ ನೋಡಿ!

ದೃಷ್ಟಿ ಚುರುಕು

ವಿಟಮಿನ್‌ ಎ ಮತ್ತು ಸಿಯಂಥ ಜೀವಸತ್ವಗಳು ಕಣ್ಣಿನ ರೆಟಿನಾದ ಕಾಳಜಿ ಮಾಡುತ್ತವೆ. ಅದರಲ್ಲೂ ಕಣ್ಣಿಗೆ ದೊರೆಯುವ ಸಿ ಯಂಥ ಜೀವಸತ್ವಗಳು ಕಡಿಮೆಯಾಗಿ ದೃಷ್ಟಿ ಮಂದವಾಗುವುದನ್ನು ತಡೆಯಲು ಇದು ಒಳ್ಳೆಯ ಉಪಾಯ. ವಯಸ್ಸಾದಂತೆ ಕಾಡುವ ದೃಷ್ಟಿಹೀನತೆಯನ್ನೂ ಹತ್ತಿರ ಬಾರದಂತೆ ಇಋಿಸಲು ಇದು ಸಹಾಯಕ.

ಸುಂದರ ತ್ವಚೆ

ಇದರಲ್ಲಿರುವ ನೀರಿನಂಶ, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ತ್ವಚೆಯ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ, ಚರ್ಮ ಸುಕ್ಕಾಗದಂತೆ ತಡೆಯುವ ಸಾಮರ್ಥ್ಯ ಈ ಸತ್ವಗಳಿಗೆ ಇದೆ. ಅದರಲ್ಲೂ ವಿಟಮಿನ್‌ ಸಿ ಹೇರಳವಾಗಿರುವ ಆಹಾರ ಇದಾದ್ದರಿಂದ, ದೇಹದಲ್ಲಿ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಕೊಲಾಜಿನ್‌ ಅಂಶ ಚರ್ಮದಲ್ಲಿ ಸಾಕಷ್ಟಿದ್ದರೆ, ತ್ವಚೆಯ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಿ, ತಾರುಣ್ಯಭರಿತ ಚರ್ಮವನ್ನು ಹೊಂದಲು ಸಾಧ್ಯ.

Exit mobile version