Site icon Vistara News

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column National science day

Raja Marga Column : ಇಂದು (ಫೆಬ್ರುವರಿ 28) ರಾಷ್ಟ್ರೀಯ ವಿಜ್ಞಾನ ದಿನ. ಭಾರತೀಯರು ಹೆಮ್ಮೆ ಪಡಬೇಕಾದ ದಿನ. ಭಾರತರತ್ನ ಡಾ. ಸಿ.ವಿ ರಾಮನ್ ಅವರು ತಮ್ಮ ಶ್ರೇಷ್ಠವಾದ ಸಂಶೋಧನೆಯಾದ ರಾಮನ್ ಪರಿಣಾಮವನ್ನು (Raman Effect) ಜಗತ್ತಿಗೆ ತೋರಿಸಿಕೊಟ್ಟ ದಿನ. ಮುಂದೆ ಅದೇ ಸಂಶೋಧನೆಯು ನೊಬೆಲ್ ಪುರಸ್ಕಾರವನ್ನು ಪಡೆಯಿತು ಅನ್ನುವುದು ಭಾರತದ ಹೆಮ್ಮೆ.

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಹೇಗೆ?

ವೈಜ್ಞಾನಿಕ ಮನೋಭಾವವನ್ನು (Scientific Attitude) ಮಕ್ಕಳಲ್ಲಿ ಬೆಳೆಸಬೇಕು ಅನ್ನುವುದು ಈ ದಿನದ ಸಂಕಲ್ಪ. ಅದು ನಮ್ಮೆಲ್ಲರ ಯೋಚನಾ ವಿಧಾನವನ್ನು ಅವಲಂಬಿಸಿಕೊಂಡಿದೆ. ಅದರ ಕೆಲವು ಆಯಾಮಗಳು ಇಲ್ಲಿವೆ.

1. ಪ್ರಶ್ನಿಸುವುದು ಮತ್ತು ಉತ್ತರ ಕಂಡುಕೊಳ್ಳುವುದು (Questioning and finding Answer)

ಮಕ್ಕಳಲ್ಲಿ ವೈಜ್ಞಾನಿಕವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು ಅತ್ಯಂತ ಮುಖ್ಯ. ಅದರಲ್ಲಿಯೂ ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳು ಹೆಚ್ಚು ಜ್ಞಾನವನ್ನು ಕೊಡುತ್ತವೆ. ಪ್ರಶ್ನೆ ಮಾಡಿ ಅಲ್ಲಿಗೆ ಬಿಟ್ಟರೆ ಜ್ಞಾನ ದೊರೆಯುವುದಿಲ್ಲ. ಉತ್ತರವನ್ನು ಪಡೆಯುವ ತನಕ ವಿರಮಿಸಬಾರದು ಎನ್ನುವುದು ಮುಖ್ಯ. ಪ್ರಶ್ನೆಗಳನ್ನು ಕೇಳುವುದರಿಂದ ಮಕ್ಕಳ ಬಲ ಮೆದುಳು ಚುರುಕಾಗುತ್ತದೆ ಮತ್ತು ಮಕ್ಕಳು ಹೆಚ್ಚು ಕ್ರಿಯೇಟಿವ್ ಆಗುತ್ತಾರೆ.

2. ತಾರ್ಕಿಕ ಮತ್ತು ಕ್ರಮಬದ್ಧವಾದ ಯೋಚನೆ (Logical thinking and Reasoning)

ಮಕ್ಕಳ ಮೆದುಳು ಲಾಜಿಕಲ್ ಯೋಚನೆ ಮಾಡುವುದು ತುಂಬಾ ಮುಖ್ಯ. ಅನ್ವೇಷಣೆಯ ಪ್ರತೀ ಹಂತವನ್ನು ಬರೆದಿಟ್ಟು, ಅದಕ್ಕೆ ಕಾರಣವನ್ನು ಕೊಟ್ಟು ಮುನ್ನಡೆಯುವುದು ತುಂಬಾ ಮುಖ್ಯ. ಹಂತ ಹಂತವಾಗಿ ಮತ್ತು ತರ್ಕಬದ್ಧವಾಗಿ ಯೋಚನೆ ಮಾಡುವಂತೆ ಮಕ್ಕಳ ಮೆದುಳಿಗೆ ತರಬೇತು ಕೊಟ್ಟರೆ ಮಕ್ಕಳು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ. ಪ್ರಯೋಗಾತ್ಮಕ ಫಲಿತಾಂಶಗಳನ್ನು ದಾಖಲಿಸಲು ಮಕ್ಕಳು ಕಲಿಯುವುದು ಅಗತ್ಯ.

3. ವೀಕ್ಷಣಾ ಪ್ರವೃತ್ತಿ (Observation)

ಪ್ರಕೃತಿಯು ಅನೂಹ್ಯ ರಹಸ್ಯಗಳ ಮೂಟೆ. ನಮ್ಮ ಸುತ್ತಲೂ ಇರುವ ಹಲವು ಜೀವಿಗಳು, ಹಕ್ಕಿಗಳು, ಸಸ್ಯಗಳು, ಕೀಟಗಳು, ಸರೀಸೃಪಗಳು, ಇರುವೆಗಳು, ಚಿಟ್ಟೆಗಳು…… ಹೀಗೆ ಎಲ್ಲವನ್ನೂ ಗಮನಿಸುತ್ತಾ ಹೋದ ಹಾಗೆ ಮಗುವಿನ ಜ್ಞಾನವು ವಿಕಸಿತ ಆಗುತ್ತದೆ. ಆ ವೀಕ್ಷಣೆಗಳು ಮುಂದಿನ ಮಹಾ ಸಂಶೋಧನೆಗಳಿಗೆ ನಾಂದಿ ಹಾಡಿದ ನೂರಾರು ನಿದರ್ಶನಗಳು ಇವೆ.

4 ಸಂಶೋಧನಾ ಪ್ರವೃತ್ತಿ(Inventions)

ಆರಂಭದಿಂದಲೂ ಮನುಷ್ಯನ ಸಹಜ ಪ್ರವೃತ್ತಿ ಅಂದರೆ ಸಂಶೋಧನೆ. ಪ್ರಕೃತಿಯ ಒಂದೊಂದೇ ರಹಸ್ಯಗಳನ್ನು ಮಾನವನು ಬೇಧಿಸುತ್ತ ಮುಂದುವರಿದಂತೆ ಹೊಸ ಆವಿಷ್ಕಾರಗಳು ಹುಟ್ಟು ಪಡೆದವು. ಕಾಡಿನ ಗುಹೆಗಳಲ್ಲಿ ಬದುಕುತ್ತಿದ್ದ ಮನುಷ್ಯನು ಇಂದು ನಾಗರೀಕತೆಯ ಕಡೆಗೆ ಮುಖ ಮಾಡಲು ಕಾರಣ ಆದದ್ದು ಅದೇ ಅನ್ವೇಷಣಾ ಪ್ರವೃತ್ತಿಯಿಂದ.

5. ಸಮಸ್ಯೆ ಬಿಡಿಸುವ ವಿಧಾನ (Problem Solving Method)

ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವುಗಳಿಗೆ ಬೆನ್ನು ಹಾಕದೆ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟದ್ದು ನಿಜಕ್ಕೂ ಅದ್ಭುತ. ತನ್ನ ದ್ವೀಪವಾಸಿಗಳು ಸಮುದ್ರದ ಬದಿಯಲ್ಲಿ ದೀಪದ ಬೆಳಕಿನಲ್ಲಿ ಕಷ್ಟ ಪಡುವುದನ್ನು ಕಂಡು ಥಾಮಸ್ ಆಲ್ವಾ ಎಡಿಸನನ ನಿದ್ರೆ ಹಾರಿಹೋಗಿತ್ತು. ಆ ಸಮಸ್ಯೆಗೆ ಪರಿಹಾರ ಹುಡುಕಲು ಆತ ಮಾಡಿದ ಹೋರಾಟವೇ ಬಲ್ಬಿನ ಅನ್ವೇಷಣೆ. ವಿಜ್ಞಾನದ ಹೆಚ್ಚಿನ ಸಂಶೋಧನೆಗಳು ಆಗಿರುವುದು ಈ ಸಮಸ್ಯಾಪೂರಣ ವಿಧಾನದಿಂದ. ಹೌದಲ್ಲ. ಯೋಚನೆ ಮಾಡಿ.

6. ಸೃಜನಶೀಲ ಯೋಚನೆ (Creative Thinking)

ತಾನು ಬೇರೆಯವರಿಗಿಂತ ಭಿನ್ನವಾಗಿ ಮತ್ತು ಅನನ್ಯವಾಗಿ ಯೋಚನೆ ಮಾಡಲು ಹೊರಡುವುದೇ ಸೃಜನಶೀಲ ಮನೋಭಾವ. ಇದು ಕೂಡ ಬಲ ಮೆದುಳಿನ ಚಮತ್ಕಾರ. If NECCESSITY is the mother of inventions then CREATIVITY is the father.

7. ಉನ್ನತೀಕರಣ (Improvisation)

ಮಾನವ ಮೆದುಳಿನ ಅದ್ಭುತ ಸಾಮರ್ಥ್ಯ ಎಂದರೆ ಪರಿಪೂರ್ಣತೆಯ ಕಡೆಗೆ ಹೋಗುವುದು. ಅದರ ಫಲಿತಾಂಶಗಳು ಪ್ರತೀ ಹಂತದಲ್ಲಿ ಉನ್ನತೀಕರಣವನ್ನು ಪಡೆಯುತ್ತಾ ಮುಂದೆ ಹೋಗುತ್ತವೆ. ಉದಾಹರಣೆಗೆ ಚಾರ್ಲ್ಸ್ ಬ್ಯಾಬೇಜ್ ಜಗತ್ತಿನ ಮೊದಲ ಕಂಪ್ಯೂಟರ್ ಕಂಡುಹಿಡಿದಾಗ ಅದು ದೊಡ್ಡ ಕಟ್ಟಡದಷ್ಟು ದೊಡ್ಡದಿತ್ತು. ಮುಂದೆ ಟೇಬಲ್ ಟಾಪ್, ಲಾಪ್ ಟಾಪ್, ಪಾಮ್ ಟಾಪ್, ಫಿಂಗರ್ ಟಾಪ್….. ಹೀಗೆ ಉನ್ನತೀಕರಣ ಆಗುತ್ತಾ ಹೋಯಿತು. ಎಡಿಸನ್ ಮೊದಲ ಬಲ್ಬ್ ಕಂಡುಹಿಡಿದಾಗ ಕಾರ್ಬನ್ ಫಿಲಮೆಂಟ್ ಇತ್ತು. ಮುಂದೆ ಟಂಗ್‌ಸ್ಟನ್‌ ಫಿಲಮೆಂಟ್‌ ಬಂತು. ಮುಂದೆ CFL ಇತ್ಯಾದಿ ಬಂದವು.

8. ಜ್ಞಾನದ ವಿಕಾಸ (Knowledge Explode)

ನೂರು ವರ್ಷಗಳ ಹಿಂದೆ ಜ್ಞಾನ ವಿಕಾಸವಾಗಲು ದಶಕಗಳೇ ಬೇಕಾದವು. ನಂತರ ಪ್ರತೀ ವರ್ಷಕ್ಕೊಮ್ಮೆ ಜ್ಞಾನವು ಡಬಲ್ ಆಯಿತು. ಈಗ ಪ್ರತೀ ದಿನವೂ ಜಗತ್ತಿನ ಜ್ಞಾನವು ಡಬ್ಬಲ್ ಆಗ್ತಾ ಇದೆ ಎಂದರೆ ನೀವು, ನಾವು ನಂಬಲೇಬೇಕು. ಇದಕ್ಕೆ ಕಾರಣ ಮಾನವನ ಜ್ಞಾನತೃಷೆ ಮತ್ತು ಮೆದುಳಿನ ಅದ್ಭುತವಾದ ವಿಕಾಸ.

9. ಮೌಢ್ಯ ಮತ್ತು ಅಂಧಶೃದ್ಧೆಗಳ ವಿರುದ್ಧ ಹೋರಾಟ

ಶತಮಾನಗಳಿಂದ ಜಗತ್ತನ್ನು ಆವರಿಸಿದ್ದ ಮೌಢ್ಯಗಳ ವಿರುದ್ಧ ವಿಜ್ಞಾನವು ಭಾರಿ ಹೋರಾಟವನ್ನು ಆರಂಭ ಮಾಡಿತು. ಅದುವರೆಗಿನ ನಂಬಿಕೆಗಳಿಗೆ ಸಾಕ್ಷಿ ಹುಡುಕುತ್ತ ಮುಂದೆ ಹೋದಂತೆ ಎಷ್ಟೋ ನಂಬಿಕೆಗಳಿಗೆ ಆಧಾರ ಸಿಗದೆ ಅವುಗಳು ಮೌಢ್ಯಗಳಾಗಿ ಬದಲಾದವು. ಉದಾಹರಣೆಗೆ ಸಹಸ್ರಮಾನಗಳಿಂದ ಜಗತ್ತನ್ನು ಆಳುತ್ತಿದ್ದ ಭೂಮಿಯೇ ಸೌರವ್ಯೂಹದ ಕೇಂದ್ರ ಎಂಬ ನಂಬಿಕೆ ಸುಳ್ಳು ಎಂದು ಸಾಬೀತಾದಾಗ ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ಸಿದ್ಧಾಂತವು ಮುನ್ನೆಲೆಗೆ ಬಂದಿತು. ಮುಂದೆ ಗೊತ್ತಿಲ್ಲ!

ಇದನ್ನೂ ಓದಿ : Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

10. ಆತ್ಮಾನಂದದ ಅನ್ವೇಷಣೆ (Invention of BLISS)

ವೈಜ್ಞಾನಿಕ ಸಂಶೋಧನೆಗಳು ಮಾನವನ ಬದುಕನ್ನು ಹೆಚ್ಚು ಸಂಭ್ರಮ ಮತ್ತು ಸಂತಸದಾಯಕವಾಗಿ ಮಾಡಿವೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಮಹಾಮಾರಿ ರೋಗಗಳಿಗೆ ಲಸಿಕೆ ಕಂಡು ಹಿಡಿದದ್ದು, ಮಾನವನ
ತ್ರಾಸದಾಯಕವಾದ ಕೆಲಸಗಳನ್ನು ನೂರಾರು ಯಂತ್ರಗಳ ಮೂಲಕ ಆರಾಮದಾಯಕ ಮಾಡಿದ್ದು ವಿಜ್ಞಾನದ ಕೊಡುಗೆ ಹೌದಲ್ಲ. ಆದ್ದರಿಂದ ನಮ್ಮೊಳಗಿನ ಸಂತೋಷವನ್ನು ಹುಡುಕುವುದೇ ವೈಜ್ಞಾನಿಕ ಸಂಶೋಧನೆಯ ಉದ್ದೇಶ.

ನಮ್ಮ ಮುಂದಿನ ಜನಾಂಗವಾದ ಮಕ್ಕಳು ಈ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಲಿ ಅನ್ನುವುದೇ ಇಂದಿನ ವಿಜ್ಞಾನ ದಿನದ ಸಂಕಲ್ಪ.

Exit mobile version