Site icon Vistara News

Al-Qaeda Terror module: ಮೂರು ರಾಜ್ಯಗಳಲ್ಲಿ ಭರ್ಜರಿ ಉಗ್ರರ ಬೇಟೆ; 11ಶಂಕಿತರು ಅರೆಸ್ಟ್‌

Al-Qaeda terror module

ನವದೆಹಲಿ: ದೆಹಲಿ ಪೊಲೀಸರು ಗುರುವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಅಲ್‌ಖೈದಾ(Al-Qaeda terror module) ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ 11ಜನ ಶಂಕಿತರನ್ನು ಅರೆಸ್ಟ್‌ ಮಾಡಿದ್ದಾರೆ. ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಾದ್ಯಂತ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮೂರು ರಾಜ್ಯಗಳ ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ದೆಹಲಿ ಪೊಲೀಸ್‌ನ ಮೂರು ವಿಶೇಷ ತಂಡ ಗುರುವಾರ ಜಂಟೀ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಬರೋಬ್ಬರಿ 15ಸ್ಥಳಗಳಲ್ಲಿ ದಾಳಿಸಿ ನಡೆಸಿ 11ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿಂದ ಒಂದು AK-47 ರೈಫಲ್, .38 ಬೋರ್ ರಿವಾಲ್ವರ್, .38 ಬೋರ್‌ನ ಆರು ಲೈವ್ ಕಾರ್ಟ್ರಿಡ್ಜ್‌ಗಳು, .32 ಬೋರ್‌ನ 30 ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು AK-47 ಗಾಗಿ 30 ಲೈವ್ ಕಾರ್ಟ್ರಿಡ್ಜ್‌ಗಳು ಸೇರಿದಂತೆ ಭಾರೀ ಸಶ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಪೊಲೀಸರು ಡಮ್ಮಿ ಇನ್ಸಾಸ್ ರೈಫಲ್, ಏರ್ ರೈಫಲ್ ಮತ್ತು ಕಬ್ಬಿಣದ ಮೊಣಕೈ ಪೈಪ್, ಹ್ಯಾಂಡ್‌ ಗ್ರೆನೇಡ್, ಕೀ ರಿಮೋಟ್ ಕಂಟ್ರೋಲ್ ಯಾಂತ್ರಿಕ ವ್ಯವಸ್ಥೆ, ಕೆಲವು ತಂತಿಗಳು, 1.5-ವೋಲ್ಟ್ ಎಎ ಬ್ಯಾಟರಿ, ಟೇಬಲ್ ವಾಚ್, ನಾಲ್ಕು ನೆಲದ ಹಾಳೆಗಳು, ಗುರಿ, ಕ್ಯಾಂಪಿಂಗ್ ಟೆಂಟ್ ಮತ್ತು ವಿವಿಧ ಆಹಾರ ಪದಾರ್ಥಗಳಾದ ಬಿಸ್ಕತ್ತುಗಳು, ಪ್ಯಾಕೆಟ್ ಚಿಪ್ಸ್, ಮತ್ತು ನೀರಿನ ಬಾಟಲ್ ಮೊದಲಾದವುಗಳನ್ನು ಸೀಜ್‌ ಮಾಡಿದ್ದಾರೆ.

ರಾಜಸ್ಥಾನದ ಭಿವಾಡಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ. ಜಾರ್ಖಂಡ್ ನಿವಾಸಿಗಳಾದ ಹಸನ್ ಅನ್ಸಾರಿ, ಇನಾಮುಲ್ ಅನ್ಸಾರಿ, ಅಲ್ತಾಫ್ ಅನ್ಸಾರಿ, ಅರ್ಷದ್ ಖಾನ್, ಉಮರ್ ಫಾರೂಕ್ ಮತ್ತು ಶಹಬಾಜ್ ಅನ್ಸಾರಿ ಬಂಧಿತರು. ಅವರು ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇವರ ಬಂಧನದ ನಂತರ ಜಾರ್ಖಂಡ್‌ನ ರಾಂಚಿಯಲ್ಲಿ ಇನ್ನೂ ಐವರನ್ನು ಬಂಧಿಸಲಾಗಿದೆ. ಹೆಚ್ಚುವರಿ ಶಂಕಿತರನ್ನು ಇಶ್ತಿಯಾಕ್ ಅಹ್ಮದ್, ಮೋತಿಯುರ್, ರಿಜ್ವಾನ್, ಮುಫ್ತಿ ರಹಮತುಲ್ಲಾ ಮತ್ತು ಫೈಜಾನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಯೋತ್ಪಾದನಾ ಘಟಕದ ಸದಸ್ಯರು ರಾಜಸ್ಥಾನದ ಅರಾವಳಿ ಬೆಟ್ಟಗಳ ಕಾಡುಗಳಂತಹ ವಿವಿಧ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ನಿರ್ವಹಣೆ ಸೇರಿದಂತೆ ತರಬೇತಿಯನ್ನು ಪಡೆದಿದ್ದರು ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಶಂಕಿತರನ್ನು ಬಂಧಿಸಲು ಈ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಲಾಯಿತು.
ಉತ್ತರ ಪ್ರದೇಶದ ಅಲಿಗಢದಿಂದ ಮೂವರು ಶಂಕಿತ ಉಗ್ರರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ವರದಿ ಮಾಡಿದ್ದಾರೆ.

ಇದನ್ನೂ ಓದಿ: Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

Exit mobile version