Site icon Vistara News

ವಿಸ್ತಾರ TOP 10 NEWS | G20ಯಲ್ಲಿ ಸಿರಿಧಾನ್ಯ ಧ್ಯಾನದಿಂದ ಮೈಸೂರು ʼಗುಂಬಜ್‌ʼ ಗಲಾಟೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 15112022

ಬೆಂಗಳೂರು: ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಸಿರಿಧಾನ್ಯದ ವಿಶೇಷತೆಯನ್ನು ಜಗತ್ತಿಗೆ ಸಾರಿದ್ದಾರೆ. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಅರ್ಜಿ ಸಲ್ಲಿಕೆ ಬಿರುಸಿನಿಂದ ನಡೆದಿದ್ದು, ಅಂತಿಮ ದಿನಾಂಕವನ್ನು ಒಂದು ವಾರ ವಿಸ್ತರಣೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಹೊಸ ಅಭಿಯಾನ ಆರಂಭಿಸಿದೆ. ಮೈಸೂರಿನಲ್ಲಿ ಟಿಪ್ಪು ಪುಸ್ತಕದಿಂದ ಆರಂಭವಾದ ವಿವಾದ ಇದೀಗ ಗುಂಬಜ್‌ ಗಲಾಟೆಯಾಗಿ ಪರಿವರ್ತನೆಯಾಗಿದೆ, ಚಲನಚಿತ್ರ ಕ್ಷೇತ್ರದಿಂದ ಆಮೀರ್‌ ಖಾನ್‌ ಬ್ರೇಕ್‌ ತೆಗೆದುಕೊಂಡಿದ್ದಾರೆ ಎನ್ನುವುದೂ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. G20 Summit | ಜಿ20 ಶೃಂಗಸಭೆಯಲ್ಲಿ ಸಿರಿಧಾನ್ಯಗಳ ಮಹತ್ವ ಹೇಳಿದ ಪ್ರಧಾನಿ ಮೋದಿ; ಉಕ್ರೇನ್​ ಕದನ ವಿರಾಮಕ್ಕೆ ಕರೆ
ಇಂಡೋನೇಷ್ಯಾದ ಬಾಲಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿ20 ಶೃಂಗಸಭೆ (G20 Summit)ಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಸಿರಿಧಾನ್ಯಗಳಂಥ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುತ್ತಿದ್ದೇವೆ. ಸಿರಿಧಾನ್ಯಗಳು ಜಾಗತಿಕವಾಗಿ ಹಸಿವು ಮತ್ತು ಅಪೌಷ್ಟಿಕತೆಯನ್ನು ದೂರ ಮಾಡಬಲ್ಲವು ರಸಗೊಬ್ಬರ ಕೊರತೆ, ಆಹಾರ ಬಿಕ್ಕಟ್ಟಿನ ಬಗ್ಗೆಯೂ ಎಚ್ಚರವಾಗಿರಬೇಕು. ಬರುವ ವರ್ಷದಿಂದ ನಾವೆಲ್ಲರೂ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನವನ್ನು ಉತ್ಸಾಹದಿಂದ ಆಚರಣೆ ಮಾಡಬೇಕು ಎಂದು ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದರು. ವಿಶ್ವ ಸಮುದಾಯದ ನಡುವೆ ಭಾರತದ ಪಾರಮ್ಯ ಸಾಧಿಸಿದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೨. Election 2023 | ಕಾಂಗ್ರೆಸ್‌ ಟಿಕೆಟ್‌ ಅರ್ಜಿ ಪಡೆದ 1,000 ಮಂದಿ: ಕೋಲಾರಕ್ಕೆ ಸುದರ್ಶನ್‌, ಫ್ಯಾಮಿಲಿ ಲೆಕ್ಕದಲ್ಲಿ ಅನೇಕರ ಸ್ಪರ್ಧೆ, ಅವಧಿ ಮುಂದೂಡಿಕೆ
ಕರ್ನಾಟಕ ಪ್ರದೇಶ ಕಾಂಗ್ರೆಸ್‌ (ಕೆಪಿಸಿಸಿ) ವತಿಯಿಂದ ಈ ಬಾರಿ ವಿಧಾನಸಭೆ ಚುನಾವಣೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚಿನವರು ಅರ್ಜಿ ಪಡೆದಿದ್ದಾರೆ. ಸುಮಾರು ನಾಲ್ಕು ನೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗಷ್ಟೆ ತಿಳಿಸಿದ್ದ ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಅರ್ಜಿ ಪಡೆದಿರುವುದು ವಿಶೇಷ. ಉಳಿದಂತೆ ರಾಜ್ಯದ ವಿವಿಧೆಡೆ, ರಾಜಕೀಯ ಹಿನ್ನೆಲೆಯ ಕುಟುಂಬದವರು ಅರ್ಜಿ ಪಡೆದಿದ್ದಾರೆ. ಒಂದೇ ಕ್ಷೇತ್ರಕ್ಕೆ 2-3 ಅರ್ಜಿಗಳನ್ನು ಪಡೆಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Election 2023 | ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಯಶವಂತಪುರಕ್ಕೆ ಭಾವನಾ ಅರ್ಜಿ

೩. BJP vs Congress | ಏಕೆ ʼಸಿಎಂ ಅಂಕಲ್‌?ʼ ಎಂಬ ಪ್ರಶ್ನೆಗೆ ʼಕಾಂಗ್ರೆಸ್‌ ಅವಿವೇಕʼ ಎಂದ ಬಿಜೆಪಿ !
ಶಾಲೆಗಳನ್ನು ದುರಸ್ತಿ ಮಾಡಿಸಿ ಬಣ್ಣ ಬಳಿಸುವ ಸಂಬಂಧ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಗುದ್ದಾಟ ಜೋರಾಗಿದೆ. ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದನ್ನು ಬಿಟ್ಟು ಗುಣಮಟ್ಟದ ಶಿಕ್ಷಣ ನೀಡಿ ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡುತ್ತಿದೆ. ಶಾಲಾ ಮಕ್ಕಳೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ʼಸಿಎಂ ಅಂಕಲ್‌?ʼ ಎಂಬ ಪ್ರಶ್ನಾರ್ಥಕದೊಂದಿಗೆ ಪೋಸ್ಟ್‌ಗಳನ್ನು ಹರಿಯಬಿಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೪. ಶೆಲ್ಟರ್‌ನಲ್ಲಿ ಗುಂಬಜ್‌!| ಗುಂಬಜ್‌ ನಾನೇ ಒಡೀತೇನೆ ಎಂದ ಪ್ರತಾಪ್ ಸಿಂಹ; ಒಡೆಯೋದಕ್ಕೆ ಪ್ರತಾಪ್‌ ಸಿಂಹ ಯಾವನ್ರೀ? ಎಂದ ಸಿದ್ದರಾಮಯ್ಯ
ಮೈಸೂರು-ಊಟಿ ರಸ್ತೆಯಲ್ಲಿ ಕೆಲವು ಕಡೆ ಬಸ್‌ ಶೆಲ್ಟರ್‌ ಮೇಲೆ ನಿರ್ಮಿಸಿರುವ ಗುಂಬಜ್‌ಗಳನ್ನು ಎರಡು ದಿನದೊಳಗೆ ತೆರವುಗೊಳಿಸದಿದ್ದರೆ ತಾನೇ ಒಡೆದು ಹಾಕುವುದಾಗಿ ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದ್ದಾರೆ. ʻʻಗುಂಬಜ್ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನು ಎರಡು ದಿನ ಬಾಕಿ ಇದೆ. ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆʼʼ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ. ʻʻʻಬಸ್ ಶೆಲ್ಟರ್ ತೆರವು ಮಾಡುವುದಿಲ್ಲ. ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆʼʼ ಎಂದು ಸ್ಪಷ್ಟಪಡಿಸಿದ್ದಾರೆ. ʻʻಗುಂಬಜ್ ಒಡೆಯುತ್ತೇನೆ ಅನ್ನೋದಕ್ಕೆ ಪ್ರತಾಪ್ ಸಿಂಹ ಯಾವನ್ ರೀʼʼ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೫. Live | BJP Janasankalpa Yatre | ಸಿದ್ದರಾಮಯ್ಯ ಮಾಡಿದ್ದು ಭಾಷಣ; ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ: ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡಿದರೇ ಹೊರತು, ನಿಜವಾಗಿ ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೃಹತ್‌ ಜನಸಂಕಲ್ಪ ಯಾತ್ರೆಯಲ್ಲಿ ಬೊಮ್ಮಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮಾಜಿ ಶಾಸಕರಾದ ಜೀವರಾಜ್‌, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮುಂತಾದವರು ಉಪಸ್ಥಿತರಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Janasankalpa Yatre | ಒಂದೇ ನಿಮಿಷದಲ್ಲಿ 300 ಕೆ.ಜಿ. ಸೇಬಿನ ಹಾರ ಮಂಗಮಾಯ !

೬. Delhi Crime | ಕೊಲೆ ಹಿಂದೆ ಲವ್‌ ಜಿಹಾದ್‌, ಹಂತಕ ಅಫ್ತಾಬ್‌ನನ್ನು ಗಲ್ಲಿಗೇರಿಸಿ ಎಂದು ಶ್ರದ್ಧಾ ತಂದೆ ಒತ್ತಾಯ
ಪೋಷಕರ ವಿರೋಧವನ್ನೂ ಧಿಕ್ಕರಿಸಿ ತನ್ನ ಜತೆ ಬಂದ ಶ್ರದ್ಧಾಳನ್ನು (Shraddha Walker) ಹತ್ಯೆಗೈದ ಅಫ್ತಾಬ್‌ ಅಮೀನ್‌ ಪೂನಾವಾಲಾನ (Aftab Amin Poonawalla) ಕೃತ್ಯದ (Delhi Crime) ಹಿಂದೆ ಲವ್‌ ಜಿಹಾದ್‌ (Love Jihad) ಉದ್ದೇಶವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆಕೆಯ ತಂದೆಯೂ ಇದೇ ಆರೋಪ ಮಾಡಿದ್ದಾರೆ. ಹಾಗೆಯೇ, ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Delhi Crime | ದೆಹಲಿ ಹಲವೆಡೆ ಶ್ರದ್ಧಾ ದೇಹದ 10 ಭಾಗ ಪತ್ತೆ, ಕೃತ್ಯದ ಸ್ಥಳಕ್ಕೆ ಅಫ್ತಾಬ್‌ನನ್ನು ಕರೆದೊಯ್ದ ಪೊಲೀಸರು

೭. ವಿಸ್ತಾರ Explainer | ಏನಿದು ಡೆಕ್ಸ್‌ಟರ್‌ ಕ್ರೈಮ್ ಥ್ರಿಲ್ಲರ್ ಶೋ? ಶ್ರದ್ಧಾಳ ಬರ್ಬರ ಕೊಲೆಗೆ ಹೇಗೆ ಪ್ರೇರಣೆ?
ಮುಂಬೈನ 26 ವರ್ಷದ ಯುವತಿ ಶ್ರದ್ಧಾ ವಾಳ್ಕರ್ ಬರ್ಬರ ಕೊಲೆ ಹಾಗೂ ಹತ್ಯೆಗೈದ ಆರೋಪಿ ಬಗ್ಗೆ ಹೊರ ಬರುತ್ತಿರುವ ಮಾಹಿತಿಗಳು ಬೆಚ್ಚಿ ಬೀಳಿಸುತ್ತಿವೆ. ಊಹೆಗೆ ನಿಲುಕದ ರೀತಿಯಲ್ಲಿ ಕೊಲೆ ಮಾಡಿದ ವಿಕ್ಷಿಪ್ತ ಅಫ್ತಾಬ್, ಏನೂ ಆಗೇ ಇಲ್ಲ ಎನ್ನುವಂತೆ ಇದ್ದ. ಗೆಳತಿಯ ಶವವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಕೊಲೆಪಾತಕಿ, ಮತ್ತೊಬ್ಬ ಯುವತಿಯ ಜತೆ ಅದೇ ಫ್ಲ್ಯಾಟ್‌ನಲ್ಲಿ ಸರಸ-ಸಲ್ಲಾಪವಾಡುತ್ತಿದ್ದ ಎನ್ನುವುದು ಈಗ ಗೊತ್ತಾಗಿರುವ ಹೊಸ ಮಾಹಿತಿ! ಆರೋಪಿ ಅಫ್ತಾಬ್‌ನ ಈ ಕೊಲೆ ಹಾಗೂ ಶವವನ್ನು ವಿಲೇವಾರಿ ಮಾಡುವುದಕ್ಕೆ ಅಮೆರಿಕನ್ ಕ್ರೈಮ್ ಡ್ರಾಮಾ ‘ಡೆಕ್ಸ್‌ಟರ್’ ಶೋ ಪ್ರೇರಣೆಯಾಗಿದೆ ಎಂದು ದಿಲ್ಲಿ ಪೊಲೀಸರು ಹೇಳುತ್ತಿದ್ದಾರೆ. 8 ಸೀಸನ್‌ಗಳಲ್ಲಿ ಪ್ರಸಾರವಾದ 96 ಎಪಿಸೋಡ್‌ಗಳ ಈ ಸೀರೀಸ್, ಅಮೆರಿಕದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸೆಳೆಯುವಲ್ಲಿ ಸಕ್ಸೆಸ್ ಆಗಿತ್ತು. ಡೆಕ್ಸ್‌ಟರ್ ಹೇಗೆ ಶ್ರದ್ಧಾಳ ಕೊಲೆ ಆರೋಪಿಗೆ ಪ್ರೇರಣೆ ಒದಗಿಸಿತು ಎಂಬ ಬಗ್ಗೆ ವಿಸ್ತಾರ Explainer. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೮. PSU | ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಕೇಂದ್ರ ಸೂಚನೆ
ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳನ್ನು (PSU) ಮುಚ್ಚುವಂತೆ ಕೇಂದ್ರ ಸರ್ಕಾರ, ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡಿದೆ. ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಬಗ್ಗೆ ದಿವಾಳಿ ಪ್ರಕ್ರಿಯೆ ಕುರಿತ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿ ವಿಲೇವಾರಿ ಮಾಡಬೇಕು. ನಷ್ಟದಲ್ಲಿ ಮುಂದುವರಿದರೆ ಅಂಥ ಕಂಪನಿಗಳನ್ನು ಮುಚ್ಚಿ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

೯. ಮಗುವಿಗೆ 6 ವರ್ಷ ತುಂಬಿದ್ರೆ ಮಾತ್ರ 1ನೇ ತರಗತಿ ಪ್ರವೇಶ: ಈ ನಿಯಮ ಈ ವರ್ಷದಿಂದಲೇ ಜಾರಿ ಇಲ್ಲ, ಮತ್ಯಾವಾಗ?
ಮುಂದಿನ ಶೈಕ್ಷಣಿಕ ವರ್ಷದಿಂದ (೨೦೨೩-೨೪) ಮಗುವಿಗೆ ಆರು ವರ್ಷ ತುಂಬಿದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಈಗ ಅದರಲ್ಲಿ ತಿದ್ದುಪಡಿ ಮಾಡಿದ್ದು, ಈ ನಿಯಮದ ಅನುಷ್ಠಾನವನ್ನು ಎರಡು ವರ್ಷ ಮುಂದೂಡಿದೆ. ಅಂದರೆ, ಈ ನಿಯಮ ೨೦೨೫-೨೬ನೇ ಸಾಲಿನಿಂದ ಅನ್ವಯವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Aamir Khan | ನಟನೆಯಿಂದ ದೂರ ಸರಿಯುತ್ತಿದ್ದೇನೆ ಎಂದ ಆಮೀರ್​ ಖಾನ್​; ಲಾಲ್‌ ಸಿಂಗ್‌ ಛಡ್ಡಾ ಸೋಲು ಕಂಗೆಡಿಸಿತೇ?
ನಟ ಆಮೀರ್ ಖಾನ್​ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ಕೊಟ್ಟಿದ್ದಾರೆ. ನಟನೆಯಿಂದ ಕೆಲ ಸಮಯದವರೆಗೆ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಆಮೀರ್ ಖಾನ್​ ವೃತ್ತಿ ಬದುಕಿನಲ್ಲಿ ಒಂದರ ಮೇಲೊಂದು ಸೋಲು ಕಾಣುತ್ತಿದ್ದಾರೆ. ತುಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದ ‘ಲಾಲ್​ ಸಿಂಗ್​ ಛಡ್ಡಾ’ ಬಹಿಷ್ಕಾರದ ಬಿಸಿ ಕಂಡಿತ್ತು. ಹಿಂದೊಮ್ಮೆ ಆಮೀರ್ ಖಾನ್ ಆಡಿದ್ದ ಭಾರತ ವಿರೋಧಿ ಮಾತುಗಳು ಅವರನ್ನು ಬೆಂಬಿಡದಂತೆ ಕಾಡುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲೂ ಜನರು ಆಮಿರ್​ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಈ ಬೆಳವಣಿಗೆ ಮಧ್ಯೆಯೇ ಆಮಿರ್ ಖಾನ್​ ಈ ನಿರ್ಧಾರ ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴 Online scam | ಓಲಾ ಸ್ಕೂಟರ್ ಬುಕಿಂಗ್‌ ನೆಪದಲ್ಲಿ ಸಾವಿರಾರು ಜನರಿಗೆ ವಂಚನೆ‌, ಬೆಂಗಳೂರಲ್ಲೇ ನಕಲಿ ವೆಬ್‌ಸೈಟ್
🔴 MS Dhoni | ಐಸಿಸಿ ಕಪ್​ ಗೆಲ್ಲಲು ಮಹೇಂದ್ರ ಸಿಂಗ್​ ಧೋನಿ ನೆರವು ಬಯಸಿದ ಬಿಸಿಸಿಐ; ವರದಿ
🔴 Jacqueline Fernandez | 200 ಕೋಟಿ ರೂ. ಹವಾಲ ಕೇಸ್‌ನಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಬೇಲ್
🔴 SBI Interest rate hike | ಎಸ್‌ಬಿಐ ಸಾಲದ ಬಡ್ಡಿ ದರದಲ್ಲಿ 0.15% ಏರಿಕೆ
🔴 ದಕ್ಷಿಣ ಭಾರತದ ಮೊದಲ ಕೌಬಾಯ್‌, ಜೇಮ್ಸ್‌ ಬಾಂಡ್ ಸಿನೆಮಾ ಮಾಡಿದ ಸೂಪರ್‌ಸ್ಟಾರ್‌ ಕೃಷ್ಣ
🔴 108 ambulance | ಚಾಲಕರಿಗೆ ಸಿಗದ 3 ತಿಂಗಳ ಸಂಬಳ; ಜಿವಿಕೆಗೆ ಕೊನೇ ಡೆಡ್‌ಲೈನ್ ನೀಡಿದ ಆರೋಗ್ಯ ಇಲಾಖೆ
🔴 ರಾಜ ಮಾರ್ಗ ಅಂಕಣ | ಮರಣಕ್ಕೂ ಗೌರವ ತಂದ ಷರೀಫ್‌ ಚಾಚಾ: ಅವರು ಅಂತ್ಯಸಂಸ್ಕಾರಗೈದ ಅನಾಥ ಶವಗಳು 25,000!
🔴 ಲೈಫ್ ಸರ್ಕಲ್ ಅಂಕಣ | ಸಂಬಂಧಗಳ ಗುಟ್ಟು ರಟ್ಟು
🔴 ತುಮಕೂರಿನಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್‌ ಪತನ: ಮಾಜಿ ಶಾಸಕ ಎಚ್‌. ನಿಂಗಪ್ಪ ರಾಜೀನಾಮೆ, ಕಾಂಗ್ರೆಸ್‌ ಕಡೆ ಪಯಣ

Exit mobile version