Site icon Vistara News

ವಿಸ್ತಾರ Explainer: ರಾಷ್ಟ್ರಪತಿ ಚುನಾವಣೆ 2022- ಯಾರ ಮತಕ್ಕೆ ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

rashtrapathi bhavan

ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಭಾರತದ ಚುನಾವಣಾ ಆಯೋಗವು ಜುಲೈ 18ರಂದು ರಾಷ್ಟ್ರಪತಿ ಚುನಾವಣೆಯನ್ನು ಘೋಷಿಸಿದೆ. ಲೋಕಸಭೆ, ರಾಜ್ಯಸಭೆ ಹಾಗೂ ಹಲವು ರಾಜ್ಯಗಳ ವಿಧಾನಸಭೆಗಳಲ್ಲಿ ಇರುವ ತನ್ನ ಬಲದಿಂದಾಗಿ ಬಿಜೆಪಿಯು ತನ್ನ ನಾಮನಿರ್ದೇಶಿತ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾಗಿದೆ.

ಜೂನ್ 15ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜೂನ್ 29ರಂದು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಜುಲೈ 21ರಂದು ದಿಲ್ಲಿಯಲ್ಲಿ ಮತ ಎಣಿಕೆ ನಡೆಯಲಿದೆ.

ಪ್ರಸ್ತುತ ರಾಷ್ಟ್ರಪತಿಗಳ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೆ ಮುಂಚಿತವಾಗಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಕುರಿತು ನೀವು ತಿಳಿದು ಕೊಳ್ಳಬೇಕಾದ ಪೂರ್ಣ ಮಾಹಿತಿ ಇಲ್ಲಿದೆ:

ಮತದಾರರು ಯಾರು?

ಸಂಸತ್ತಿನ ಎರಡೂ ಸದನಗಳ ಒಟ್ಟಾರೆ 776 ಸಂಸದರು ಮತ್ತು ಎಲ್ಲಾ ರಾಜ್ಯಗಳ 4,033 ಶಾಸಕರು ಸೇರಿದಂತೆ ಒಟ್ಟು 4,809 ಮತದಾರರು ಮತದಾನ ಮಾಡಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳ ಆವರಣದಲ್ಲಿ ಮತದಾನ ನಡೆಯಲಿದ್ದು, ರಾಜ್ಯಸಭೆಯ ಮಹಾಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ.

ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುವ ಮತದಾರರು ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ಶಾಸಕಾಂಗ ಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ.

ಸದನ ಅಥವಾ ಶಾಸಕಾಂಗ ಸಭೆಯ ನಾಮನಿರ್ದೇಶಿತ ಸದಸ್ಯರು ಮತದಾನಕ್ಕೆ ಅರ್ಹರಲ್ಲ. ಆದ್ದರಿಂದ, ಅವರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಅದೇ ರೀತಿ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರು ಕೂಡ ಮತದಾರರಲ್ಲ. ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಯಾರು ನಾಮನಿರ್ದೇಶನಗಳನ್ನು ಸಲ್ಲಿಸಬಹುದು?
ಜೂನ್ 15ರಂದು ಅಧಿಸೂಚನೆ ಹೊರಡಿಸಿದ ನಂತರ ಜೂನ್ 29ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಜೂನ್ 30 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜುಲೈ 2 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಜೂನ್ 15ರಂದು ನಾಮಪತ್ರಗಳ ಸಲ್ಲಿಕೆಯ ನಿಯಮಗಳನ್ನು ತಿಳಿಸಲಾಗುವುದು.

1997ರಿಂದ ಆಡಳಿತ ಮತ್ತು ವಿರೋಧ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ. ಅಭ್ಯರ್ಥಿಯ ಹೆಸರನ್ನು 50 ಸಂಸದರು ಪ್ರಸ್ತಾಪಿಸುವುದು ಮತ್ತು 50 ಮಂದಿ ಉಮೇದುವಾರಿಕೆಯನ್ನು ಅನುಮೋದಿಸುವುದು ಕಡ್ಡಾಯವಾಗಿದೆ. ಗಂಭೀರವಲ್ಲದ ಅಭ್ಯರ್ಥಿಗಳನ್ನು ರಾಷ್ಟ್ರಪತಿ ಚುನಾವಣೆಯಿಂದ ಹೊರಗಿಡುವುದು ಈ ನಿಯಮದ ಉದ್ದೇಶವಾಗಿದೆ.

ಅಭ್ಯರ್ಥಿಯು 15,000 ರೂ.ಗಳ ಭದ್ರತಾ ಠೇವಣಿ ಇರಿಸಬೇಕಾಗುತ್ತದೆ. 1997ರಲ್ಲಿ ಭದ್ರತಾ ಠೇವಣಿಯನ್ನು ರೂ 2,500ರಿಂದ ರೂ 15,000ಕ್ಕೆ ಹೆಚ್ಚಿಸಲಾಯಿತು, ಈ ಮೊದಲು ಪ್ರಸ್ತಾವಕರು ಮತ್ತು ಅನುಮೋದಕರ ಒಟ್ಟು ಸಂಖ್ಯೆ 10 ಇರಬೇಕಾಗಿತ್ತು. ಕಾನೂನು ತಿದ್ದುಪಡಿಯ ಬಳಿಕ ಅದನ್ನು 50ಕ್ಕೆ ಹೆಚ್ಚಿಸಲಾಯಿತು.

ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು ಮತ್ತು 35 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಜೊತೆಗೆ ಯಾವುದೇ ಸದನದ ಸದಸ್ಯರಾಗಿದ್ದು ಚುನಾವಣೆಗೆ ಅರ್ಹತೆ ಹೊಂದಿರಬೇಕು. ರಾಷ್ಟ್ರಪತಿಗಳ ಅಧಿಕಾರಾವಧಿ ಐದು ವರ್ಷಗಳಾಗಿರುತ್ತವೆ.

ಚುನಾವಣೆ ಆಯೋಗದ ಪ್ರಕಾರ, ಒಬ್ಬ ವ್ಯಕ್ತಿಯು ಭಾರತ ಸರ್ಕಾರ ಅಥವಾ ಯಾವುದೇ ರಾಜ್ಯದ ಸರ್ಕಾರದ ಅಡಿಯಲ್ಲಿ ಅಥವಾ ಯಾವುದೇ ರಾಜ್ಯ ಸರ್ಕಾರಗಳ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ರೀತಿಯ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗುವುದಿಲ್ಲ,

ಒಬ್ಬ ಮತದಾರನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ನಾಮನಿರ್ದೇಶನ ಪತ್ರಗಳನ್ನು ಪ್ರಸ್ತಾಪಿಸುವುದಾಗಲಿ, ಅನುಮೋದಿಸುವುದಾಗಲಿ ಮಾಡುವಂತಿಲ್ಲ ಎಂದು ಚುನಾವಣೆ ಆಯೋಗ ಹೇಳುತ್ತದೆ. ಯಾರಾದರೂ ಹಾಗೆ ಮಾಡಿದಲ್ಲಿ ಅವರ ಸಹಿಯು ಮೊದಲು ವಿತರಿಸಿದ ನಾಮನಿರ್ದೇಶನವನ್ನು ಹೊರತುಪಡಿಸಿ ಬೇರೆ ಯಾವುದೇ ನಾಮನಿರ್ದೇಶನ ಪತ್ರದಲ್ಲಿ ಅಮಾನ್ಯವಾಗಿರುತ್ತದೆ. ಅಲ್ಲದೆ, ಅಭ್ಯರ್ಥಿಯಿಂದ ಅಥವಾ ಅವರ ಪರವಾಗಿ ನಾಲ್ಕಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸುವಂತಿಲ್ಲ ಅಥವಾ ಚುನಾವಣಾಧಿಕಾರಿ ಅವುಗಳನ್ನು ಸ್ವೀಕರಿಸುವಂತೆಯೂ ಇಲ್ಲ.

ಮತದಾನದ ಕ್ರಮ ಹೇಗಿರುತ್ತದೆ?

ಒಂದೇ ವರ್ಗಾವಣೆ ಮಾಡಬಹುದಾದ ಮತ ಪದ್ಧತಿಯನ್ನು ಬಳಸಿಕೊಂಡು ಪ್ರಮಾಣಾನುಗುಣ ಪ್ರಾತಿನಿಧ್ಯದ ಮೂಲಕ ಮತ್ತು ರಹಸ್ಯ ಮತದಾನದ ಮೂಲಕ ಮತದಾನ ನಡೆಸಲಾಗುತ್ತದೆ. ʼʼಸಂವಿಧಾನವು ರಾಷ್ಟ್ರಪತಿಗಳ ಪದವಿಗೆ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ, ಮತದಾರರು ಸೂಕ್ಷ್ಮವಾಗಿ ಮತದ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮುಕ್ತ ಮತದಾನದ ಪರಿಕಲ್ಪನೆ ಇಲ್ಲ ಮತ್ತು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಮತಪತ್ರವನ್ನು ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ” ಎಂದು ಸಿಇಸಿ ರಾಜೀವ್ ಕುಮಾರ್ ಹೇಳುತ್ತಾರೆ.

ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣೆ ಅಧಿಕಾರಿ ಬ್ಯಾಲೆಟ್ ಪೇಪರ್ ಅನ್ನು ರದ್ದುಗೊಳಿಸುತ್ತಾರೆ. ಮತದಾರರಿಗೆ ಚುನಾವಣಾಧಿಕಾರಿ ನೀಡುವ ನಿರ್ದಿಷ್ಟ ಪೆನ್‌ನಿಂದ ಮಾತ್ರ ಮತದ ಗುರುತು ಮಾಡಬಹುದಾಗಿದೆ.

ದೇಶದ ಅತ್ಯುನ್ನತ ಹುದ್ದೆಗೆ ನಡೆಯುವ ಈ ಚುನಾವಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯಬಾರದು ಎಂಬುದು ಚುನಾವಣಾ ಆಯೋಗದ ಸಂಕಲ್ಪವಾಗಿದ್ದು, ಅಂಥವು ಏನಾದರೂ ಕಂಡುಬಂದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ರದ್ದತಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಎಂದು ಕುಮಾರ್ ಹೇಳಿದರು.

ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆಗಳ ಕಾಯಿದೆ, 1952ರ ಸೆಕ್ಷನ್ 18ರ ಪ್ರಕಾರ, ಹಿಂದಿರುಗಿದ ಅಭ್ಯರ್ಥಿ ಅಥವಾ ಯಾವುದೇ ವ್ಯಕ್ತಿಯಿಂದ ಐಪಿಸಿಯ ಸೆಕ್ಷನ್ 171ಬಿ ಮತ್ತು 171ಸಿಯಲ್ಲಿ ವ್ಯಾಖ್ಯಾನಿಸಲಾದ “ಲಂಚ” ಅಥವಾ “ಅನಾವಶ್ಯಕ ಪ್ರಭಾವ”ದ ಅಪರಾಧವು ಚುನಾವಣಾ ಅರ್ಜಿಯಲ್ಲಿ ಉಲ್ಲೇಖವಾಗಿದ್ದರೆ ಸುಪ್ರೀಂ ಕೋರ್ಟ್‌ ಚುನಾವಣೆಯನ್ನು ಅನೂರ್ಜಿತ ಗೊಳಿಸಬಹುದಾಗಿದೆ.

ಲೆಕ್ಕಾಚಾರವು ಹೇಗೆ ನಡೆಯುತ್ತದೆ?
ಜಮ್ಮು-ಕಾಶ್ಮೀರದಲ್ಲಿ ಶಾಸಕಾಂಗ ಸಭೆ ಇಲ್ಲದ ಕಾರಣ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರೊಬ್ಬರ ಮತದ ಮೌಲ್ಯ 708ರಿಂದ 700ಕ್ಕೆ ಇಳಿದಿದೆ. ಚುನಾವಣೆ ಆಯೋಗದ ಪ್ರಕಾರ, ಈ ಮೌಲ್ಯವು ದೆಹಲಿ, ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ರಾಜ್ಯಗಳು ಮತ್ತು ಯುಟಿಗಳ ಶಾಸಕಾಂಗ ಸಭೆಗಳಲ್ಲಿ ಇರುವ ಚುನಾಯಿತ ಸದಸ್ಯರ ಸಂಖ್ಯೆಯನ್ನು ಆಧರಿಸಿದೆ.

ರಾಜ್ಯಗಳಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು 208ರಷ್ಟಿದೆ, ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ 176ರಷ್ಟಿದೆ. ಮಹಾರಾಷ್ಟ್ರದಲ್ಲಿ, ಇದು 175. ಸಿಕ್ಕಿಂನಲ್ಲಿ, ಮೌಲ್ಯವು ಏಳು, ನಾಗಾಲ್ಯಾಂಡ್‌ನಲ್ಲಿ ಇದು ಒಂಬತ್ತು ಮತ್ತು ಮಿಜೋರಾಂನಲ್ಲಿ ಎಂಟು ಆಗಿದೆ.

ಬಿಜೆಪಿಯು ತನ್ನ ನಾಮನಿರ್ದೇಶಿತ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಅನುಕೂಲಕರ ಸ್ಥಿತಿಯಲ್ಲಿದೆ. ಆಡಳಿತಾರೂಢ ಎನ್‌ಡಿಎ 440 ಸಂಸದರನ್ನು ಹೊಂದಿದ್ದರೆ, ಪ್ರತಿಪಕ್ಷ ಯುಪಿಎ ಸುಮಾರು 180 ಸಂಸದರನ್ನು ಹೊಂದಿದೆ, ಜೊತೆಗೆ ಟಿಎಂಸಿಯ 36 ಸಂಸದರನ್ನು ಹೊಂದಿದೆ, ಇದು ಸಾಮಾನ್ಯವಾಗಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ.

ಸ್ಥೂಲವಾಗಿ ಲೆಕ್ಕಾಚಾರ ಮಾಡಿದರೆ, ಎಲ್ಲಾ ಮತದಾರರ ಒಟ್ಟು 10,86,431 ಮತಗಳಲ್ಲಿ ಎನ್‌ಡಿಎ ಸುಮಾರು 5,35,000 ಮತಗಳನ್ನು ಹೊಂದಿದೆ. ಇದು ತನ್ನ ಸಂಸದರ 3,08,000 ಮತಗಳು ಮತ್ತು ಮತ್ತು ಮಿತ್ರಪಕ್ಷಗಳ ಬೆಂಬಲವನ್ನು ಒಳಗೊಂಡಿದೆ.

ರಾಜ್ಯಗಳ ಪೈಕಿ, 273 ಶಾಸಕರನ್ನು ಹೊಂದಿರುವ ಯುಪಿಯಿಂದ ಬಿಜೆಪಿ ಗರಿಷ್ಠ 56,784 ಮತಗಳನ್ನು ಹೊಂದಿದೆ. ಯುಪಿಯಲ್ಲಿ ಪ್ರತಿ ಎಂಎಲ್‌ಎ ಗರಿಷ್ಠ 208 ಮತಗಳನ್ನು ಹೊಂದಿದೆ. ಬಿಹಾರದಿಂದ ಎನ್‌ಡಿಎ ತನ್ನ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆಯುತ್ತದೆ, ಅಲ್ಲಿ 127 ಶಾಸಕರನ್ನು ಹೊಂದಿದ್ದು, ಪ್ರತಿ ಶಾಸಕರು 173 ಮತಗಳನ್ನು ಹೊಂದಿರುವುದರಿಂದ ಆ ರಾಜ್ಯದ ಒಟ್ಟು ಮತಗಳ ಮೌಲ್ಯ 21,971 ಮತಗಳಾಗುತ್ತವೆ. ನಂತರ ಮಹಾರಾಷ್ಟ್ರದಿಂದ 18,375 ಮತಗಳನ್ನು ಪಡೆಯುತ್ತದೆ. ಅಲ್ಲಿ 105 ಬಿಜೆಪಿಗೆ ಶಾಸಕರಿದ್ದು ತಲಾ 175 ಮತಗಳ ಮೌಲ್ಯ ಹೊಂದಿದೆ. 131 ಶಾಸಕರನ್ನು ಹೊಂದಿರುವ ಎನ್‌ಡಿಎ ಮಧ್ಯಪ್ರದೇಶದಿಂದ 17,161 ಮತಗಳನ್ನು, ಗುಜರಾತ್‌ನಿಂದ 112 ಶಾಸಕರ 16,464 ಮತಗಳನ್ನು ಮತ್ತು ಕರ್ನಾಟಕದಲ್ಲಿ ತನ್ನ 122 ಶಾಸಕರ ಪೈಕಿ 15,982 ಮತಗಳನ್ನು ಪಡೆಯಲಿದೆ. ಯುಪಿಎ ಸಂಸದರು ಮತ್ತು ಶಾಸಕರಿಂದ 1,50,000 ಕ್ಕಿಂತ ಸ್ವಲ್ಪ ಹೆಚ್ಚು ಮತಗಳನ್ನು ಹೊಂದಿದೆ. ಈ ಹಿಂದೆಯೂ ವಿರೋಧ ಪಕ್ಷದ ಅಭ್ಯರ್ಥಿಗಳು ಮೂರು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಮತಗಳನ್ನು ಪಡೆದಿದ್ದರು.

ಮತಗಳ ಎಣಿಕೆ ಹೇಗೆ ನಡೆಯುತ್ತದೆ?
ರಾಜ್ಯಗಳ ಎಲ್ಲಾ ಮತಪತ್ರಗಳನ್ನು ತಂದ ನಂತರ ಎಣಿಕೆ ಮಾಡಲಾಗುತ್ತದೆ. ಈ ಬಾರಿ ಜುಲೈ 21 ರಂದು ರಾಷ್ಟ್ರ ರಾಜಧಾನಿಯಲ್ಲಿ ಎಣಿಕೆ ನಡೆಯಲಿದೆ. ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳುತ್ತದೆ ಮತ್ತು ಜುಲೈ 25 ರಂದು ಹೊಸ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, ಫಲಿತಾಂಶ 21ಕ್ಕೆ; ಚುನಾವಣಾ ಆಯೋಗ ಘೋಷಣೆ

ಮೇಲುಗೈ ಪಡೆಯುವ ಅಂಶಗಳು ಏನೇನು?
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸ್ಪಷ್ಟವಾದ ಮೇಲುಗೈ ಹೊಂದಿರುವುದರಿಂದ ಬಿಜೆಪಿಯ ಆಯ್ಕೆ ಯಾರೆಂಬುದರ ಮೇಲೆ ಎಲ್ಲರ ಕಣ್ಣುಗಳೂ ನೆಟ್ಟಿವೆ. 2017 ರ ರಾಷ್ಟ್ರಪತಿ ಚುನಾವಣೆಗಿಂತ ಈ ಚುನಾವಣೆಯಲ್ಲಿ ಎನ್‌ಡಿಎ ಕಡಿಮೆ ಶಾಸಕರನ್ನು ಹೊಂದಿದ್ದರೂ, ಸಂಸದರ ಸಂಖ್ಯೆ ಹೆಚ್ಚಾಗಿದೆ.

ಎಲೆಕ್ಟೋರಲ್‌ ಕಾಲೇಜಿನಲ್ಲಿ ಶೇಕಡಾ 50ರಷ್ಟು ಮತಗಳು ಎನ್‌ಡಿಎ ಬಳಿ ಇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಅಲ್ಲದೆ ಮೈತ್ರಿಕೂಟವು ಸ್ವತಂತ್ರ ಪ್ರಾದೇಶಿಕ ಪಕ್ಷಗಳಾದ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಮತ್ತು ಒಡಿಶಾದಲ್ಲಿ ಬಿಜೆಡಿಯ ಬೆಂಬಲದ ಭರವಸೆಯನ್ನು ಹೊಂದಿದೆ. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಿತ್ರಪಕ್ಷವಾದ ಎಐಎಡಿಎಂಕೆ ಬೆಂಬಲದ ಮೇಲೆಯೂ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.

ಸಂಖ್ಯಾಬಲ ಇಲ್ಲದಿದ್ದರೂ ಪ್ರತಿಪಕ್ಷಗಳು ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯದ ಬಗ್ಗೆ ಸಮಾಲೋಚಿಸಲು ಕೆಲವು ವಿರೋಧ ಪಕ್ಷಗಳ ಜತೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. “ವಿವಿಧ ವಿರೋಧ ಪಕ್ಷಗಳ ನಡುವೆ ರಾಷ್ಟ್ರಪತಿ ಚುನಾವಣೆಗೆ ಸಮಾಲೋಚನೆಗಳು ಪ್ರಾರಂಭವಾಗಿವೆ” ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ವರ್ಷದ ಸಿದ್ಧತೆಗಳು ಹೇಗಿವೆ?
ಮತದಾನ ಮತ್ತು ಮತ ಎಣಿಕೆಯ ಸಮಯದಲ್ಲಿ ಚುನಾವಣೆ ಆಯೋಗವು ಎಲ್ಲಾ ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತದೆ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ. ಇಡೀ ಮತದಾನ ಪ್ರಕ್ರಿಯೆ ದಾಖಲಾಗಲಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಯಾವುದೇ ರೀತಿಯ ವಿಪ್ ಜಾರಿ ಮಾಡಲು ಅವಕಾಶವಿರುವುದಿಲ್ಲ.

ಹಿಂದಿನ ಚುನಾವಣೆಗಳಲ್ಲಿ ಏನಾಯಿತು?
2017ರ ಚುನಾವಣೆಯಲ್ಲಿ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಸೋಲಿಸಿ ಕೋವಿಂದ್ ರಾಷ್ಟ್ರಪತಿಯಾದರು. ಅವರು ಒಟ್ಟು 10,69,358 ಮತಗಳಲ್ಲಿ 7,02,000 ಮತಗಳನ್ನು ಪಡೆದು ಜಯಶಾಲಿಯಾದರು. ಮೀರಾ ಕುಮಾರ್ 3,67,000 ಮತಗಳನ್ನು ಪಡೆದಿದ್ದರು.

1977ರಲ್ಲಿ ಒಂದೇ ಒಂದು ರಾಷ್ಟ್ರಪತಿ ಚುನಾವಣೆಯಲ್ಲಿ, ನಾಮಪತ್ರ ಸಲ್ಲಿಸಿದ 37 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕೃತಗೊಂಡ ನಂತರ ನೀಲಂ ಸಂಜೀವ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ರಾಜೇಂದ್ರ ಪ್ರಸಾದ್ ಅವರು ಎರಡು ಪೂರ್ಣ ಅವಧಿಯನ್ನು ಪಡೆದ ಏಕೈಕ ರಾಷ್ಟ್ರಪತಿಗಳಾಗಿದ್ದು, ಜಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಅಲಿ ಅಹ್ಮದ್ ಅವರು ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಇವರಲ್ಲಿ ಯಾರಾಗ್ತಾರೆ ಭಾರತದ ಮುಂದಿನ ರಾಷ್ಟ್ರಪತಿ?; ಎನ್‌ಡಿಎ ಒಕ್ಕೂಟದ ಒಲವು ಯಾರತ್ತ?

Exit mobile version