Site icon Vistara News

Actor Darshan: ಹಾಸ್ಯನಟ ಚಿಕ್ಕಣ್ಣ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೂ ನೋಟೀಸ್‌, ವಿಚಾರಣೆ

actor darshan yashas surya

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ (Actor Darshan) ಜೊತೆ ಅದೇ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ (comedian Chikkanna) ಅವರ ವಿಚಾರಣೆ ನಡೆಸಲಾಗಿದ್ದು, ಅದೇ ಪಾರ್ಟಿಯಲ್ಲಿದ್ದ ಇನ್ನೊಬ್ಬ ನಟನಿಗೂ ಪೊಲೀಸ್‌ ವಿಚಾರಣೆ ನೋಟೀಸ್‌ (police notice) ಹೋಗಿದೆ.

ನಟ ಯಶಸ್‌ ಸೂರ್ಯ (Yashas Surya) ಕೂಡ ಅಂದು ಕುಖ್ಯಾತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಲ್ಲಿ ಡಿ ಗ್ಯಾಂಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಗೊತ್ತಾಗಿದೆ. ಈತ ದರ್ಶನ್‌ಗೆ ಆಪ್ತನಾಗಿದ್ದು, ಅದೇ ದಿನ ನಡೆಸಲಾದ ಪಾರ್ಟಿಯಲ್ಲಿ ಚಿಕ್ಕಣ್ಣ ಜೊತೆಗೆ ಹಾಜರಿದ್ದರು. ಇದೀಗ ವಿಚಾರಣೆಗೆ ಹಾಜರಾಗಲು ಯಶಸ್‌ಗೂ ನೋಟೀಸ್‌ ನೀಡಲಾಗಿದೆ.

ಚಿಕ್ಕಣ್ಣ, ಯಶಸ್ ಸೂರ್ಯ ಸೇರಿದಂತೆ ಇನ್ನೂ ಕೆಲ ನಟರಿಗೂ ಪೊಲೀಸರು ನೋಟೀಸ್ ನೀಡುವ ಸಾಧ್ಯತೆ ಇದೆ. ಮುಖ್ಯವಾಗಿ, ಅಂದು ದರ್ಶನ್‌ ಯಾರುಯಾರನ್ನು ಭೇಟಿಯಾಗಿದ್ದರೋ ಅವರೆಲ್ಲರೂ ಪೊಲೀಸ್‌ ತನಿಖೆಯನ್ನು ಎದುರಿಸಬೇಕಿದೆ. ಅಂದು ನಡೆಸಿದ ಮಾತುಕತೆಯನ್ನು ದರ್ಶನ್‌, ರೇಣುಕಾಸ್ವಾಮಿ ವಿಚಾರ ಎತ್ತಿದ್ದರೇ ಎಂಬುದು ತನಿಖೆಯ ಮುಖ್ಯ ವಿಚಾರವಾಗಿರಲಿದೆ.

actor darshan yashas surya

ಸಾಕ್ಷಿದಾರರಾಗಿ ಬಳಕೆ

ದರ್ಶನ್ ಆಂಡ್ ಗ್ಯಾಂಗ್‌ನಿಂದ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಲ್ಲದೇ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹೇಳಿಕೆ ನೀಡಿದವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳು ಸೇರಿ 27ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ. 27 ಮಂದಿಯಲ್ಲಿ 17 ಮಂದಿ ಬಂಧಿತ ಆರೋಪಿಗಳು. ನಟ ದರ್ಶನ್, ಪವಿತ್ರ ಗೌಡ ಸೇರಿ 17 ಮಂದಿ ಬಂಧಿತ ಆರೋಪಿಗಳು. ಇನ್ನುಳಿದ 10 ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಸಾಕ್ಷಿಗಳು ಎಂದು ಈವರೆಗೆ 10 ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.

ಘಟನಾ ಸ್ಥಳದಲ್ಲಿ ಹಾಜರಿದ್ದ ಕೆಲವರು, ಬೇರೆಬೇರೆ ಕಡೆಗಳಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಕಂಡು ಬಂದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ. ಅವರನ್ನು ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕ್ಷಿಗಳು ಎಂದು ಪರಿಗಣಿಸಿ ಹೇಳಿಕೆ ದಾಖಲು ಮಾಡಲಾಗಿದೆ. ಶೆಡ್ ಬಳಿ ಇದ್ದ ಇನ್ನೂ ಕೆಲವರ ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆ ಹೇಗಾಯ್ತು, ಯಾರು ಯಾರು ಇದ್ದರು, ಎಷ್ಟು ಜನ ಸೇರಿದ್ದರು, ದರ್ಶನ್ ಎಷ್ಟು ಹೊತ್ತಿಗೆ ಬಂದಿದ್ದು, ಯಾವಯಾವ ಆಯುಧಗಳಿಂದ ಹಲ್ಲೆ ಮಾಡಿದರು, ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ. ಶೆಡ್‌ನ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ದರ್ಶನ್‌ ಗ್ಯಾಂಗ್‌ ನಾಶ ಮಾಡಿರುವ ಹಿನ್ನೆಲೆಯಲ್ಲಿ, ಈ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ.

ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌

ನಟ ದರ್ಶನ್ (Actor Darshan) ಜೊತೆ ಕೊಲೆಯ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸ್‌ ತನಿಖೆಯ ಉರುಳು ಸುತ್ತಿಕೊಂಡಿದ್ದು, ನಿನ್ನೆ ಮೂರು ಗಂಟೆಗಳ ಕಾಲ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭದಲ್ಲಿ, ಅದೇ ದಿನ ತಾನು ದರ್ಶನ್ ಜೊತೆ ಪಾರ್ಟಿ ಮಾಡಿದ್ದು ನಿಜ ಎಂದು ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ.

“ಇಬ್ಬರೂ ಪಾರ್ಟಿ ಮುಗಿಸಿ ಒಟ್ಟಿಗೆ ಪಬ್‌ನಿಂದ ಹೋದೆವು ಎಂದು ಚಿಕ್ಕಣ್ಣ ಹೇಳಿದ್ದಾರೆ. 8ನೇ ತಾರೀಕು ಆರ್‌ಆರ್ ನಗರದ ಸ್ಟೋನಿ ಬ್ರೋಕ್ ಪಬ್‌ಗೆ ನಾನು ಬಂದಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಬಂದಿದ್ದೆ. ದರ್ಶನ್ ಮತ್ತು ನಾನು ಒಂದೇ ಟೇಬಲ್ ನಲ್ಲಿ ಪಾರ್ಟಿ ಮಾಡಿದೆವು. ಸುಮಾರು 4:30ರ ಹೊತ್ತಿಗೆ ಅವರು ಹೊರಟರು. ಅವರ ಜೊತೆಗೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ‌ ಮನೆಗೆ ಹೋದೆ, ದರ್ಶನ್ ಎಲ್ಲಿಗೆ ಹೋದ್ರೋ ನನಗೆ ಗೊತ್ತಿಲ್ಲ” ಎಂದು ಚಿಕ್ಕಣ್ಣ ಹೇಳಿದ್ದಾರೆ.

ʼನಾವು ಸೇರಿದ್ದು ಸಿನಿಮಾ ವಿಚಾರ ಮಾತಾನಾಡೋಕೆ. ಅದನ್ನಷ್ಟೇ ಮಾತಾಡಿ ಅಲ್ಲಿಂದ ಹೊರಟೆʼ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ವಕೀಲರ ಜೊತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ ಅವರ ಬಳಿ ಪೊಲೀಸರು ನೂರಾರು ಪ್ರಶ್ನೆಗಳನ್ನು ಹಾಕಿ ವಿಷಯ ಸಂಗ್ರಹಿಸಿದರು. 1.30ರಿಂದ 4.30ರವರೆಗೆ ಏನೆಲ್ಲಾ ಆಯ್ತು? ಮತ್ತೋರ್ವ ನಟ ಹಾಗೂ ನಿರ್ಮಾಪಕ ಇದ್ರಾ? ಯಾವ ಸಿನಿಮಾ ವಿಚಾರಕ್ಕೆ ಮಾತು ಕತೆ ನಡೀತಿತ್ತು? ಬರೀ ಸಿನಿಮಾ‌ ವಿಚಾರವಾ ಅಥವಾ ಬೇರೆ ಏನಾದ್ರೂ ಮಾತು ಕತೆ ನಡೆದಿತ್ತಾ? ಅವತ್ತು ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವಾ?ರೇಣುಕಾಸ್ವಾಮಿ ಬಗ್ಗೆ ಅವತ್ತು ಚರ್ಚೆ ಏನಾದ್ರು ಆಗಿತ್ತಾ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನನ್ನು ಪ್ರಶ್ನೆ ಮಾಡಲಾಗಿದೆ.

ಪೊಲೀಸ್‌ ವಿಚಾರಣೆ ಬಳಿಕ ಹೊರಗೆ ಬಂದ ಚಿಕ್ಕಣ್ಣ, “ಇವತ್ತು ಪೊಲೀಸರು ವಿಚಾರಣೆಗೆ ಕರೆದಿದ್ರು, ಹೋಗಿದ್ದೆ. ಅವತ್ತು ಊಟಕ್ಕೆ ಹೋಗಿದ್ದೆ ಅದನ್ನು ಹೇಳಿದೆ. ತನಿಖೆಯಲ್ಲಿರುವ ಕಾರಣ ಬೇರೆ ಏನೂ ಹೇಳುವುದಕ್ಕೆ ಆಗದು. ಅವರು ಕೇಳಿದ್ದಕ್ಕೆ ಉತ್ತರ ಕೊಟ್ಟಿದೀನಿ” ಎಂದು ತಿಳಿಸಿದರು.

ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Exit mobile version