Site icon Vistara News

Bhavani Revanna: ಭವಾನಿ ರೇವಣ್ಣಗೆ ಒಂದು ವಾರ ಮಧ್ಯಂತರ ಜಾಮೀನು, ಇಂದು 1 ಗಂಟೆಗೆ ವಿಚಾರಣೆಗೆ ಬರಲೇಬೇಕು!

bhavani revanna Prajwal Revanna Case

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯ ಕಿಡ್ನಾಪ್‌ ಪ್ರಕರಣದಲ್ಲಿ (Kidnap Case) ಆರೋಪಿಯಾಗಿರುವ, ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಕೋರ್ಟ್‌ ಮಧ್ಯಂತರ ಜಾಮೀನು (Interim Bail) ನೀಡಿದೆ. ಇದರಿಂದ ಭವಾನಿ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದರಲ್ಲಿ ಇಂದು ಟ್ವಿಸ್ಟ್‌ ಇದೆ. ಅದೇನೆಂದರೆ, ಇಂದು ಮಧ್ಯಾಹ್ನ 1 ಗಂಟೆಗೆ ಅವರು ಎಸ್‌ಐಟಿ (SIT) ಮುಂದೆ ಹಾಜರಾಗಬೇಕಿದೆ.

ಕೆ.ಆರ್. ನಗರ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿದೆ. ಆದರೆ ಇಂದು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು ಎಂದಿದೆ. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿದೆ.

ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು 11 ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್‌ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಭವಾನಿ ಅವರಿಗೆ ಕೋರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವರು ನಡೆದುಕೊಳ್ಳಬೇಕಿದೆ. ಅವುಗಳು ಹೀಗಿವೆ:
1) ಭವಾನಿ ಅವರು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಬೇಕು.
2) ವಿಚಾರಣೆಯ ನಂತರ ಐದು ಗಂಟೆಯ ಬಳಿಕ ಅವರನ್ನು ಇಟ್ಟುಕೊಳ್ಳಬಾರದು.
3) ಕೆ.ಆರ್‌ ನಗರ ತಾಲ್ಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಬಾರದು.
4) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.

ಇದೀಗ ಕುತೂಹಲದ ಅಂಶವೆಂದರೆ ಇಂದು 1 ಗಂಟೆಗೆ ಅವರು ಎಸ್‌ಐಟಿ ಮುಂದೆ ಹಾಜರಾಗ್ತಾರಾ ಎಂಬುದು. ಬೆಂಗಳೂರಿನಲ್ಲೇ ಇದ್ದರೆ ಅವರು ಎಸ್‌ಐಟಿ ಮುಂದೆ ಹಾಜರಾಗಬಹುದು. ಆದರೆ ಬೆಂಗಳೂರಿನಿಂದ ದೂರ ಎಲ್ಲಾದರೂ ಅಥವಾ ಹೊರರಾಜ್ಯದಲ್ಲಿ ಇದ್ದರೆ ಒಂದು ಗಂಟೆ ವೇಳೆಗೆ ಆಗಮಿಸುವುದು ಕಷ್ಟವಾಗಲಿದೆ. ಅಷ್ಟು ಹೊತ್ತಿಗೆ ಬರದಿದ್ದರೆ ಅದೇ ಕಾರಣ ನೀಡಿ ಅವರನ್ನು ಎಸ್‌ಐಟಿ ಬಂಧಿಸಬಹುದಾಗಿದೆ.

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗಿತ್ತು. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆದಿತ್ತು. ಅವರ ಮೊಬೈಲ್ ಲೊಕೇಶನ್‌ ಟವರ್ ಡಂಪ್, ಸಿಡಿಆರ್ ಪರಿಶೀಲನೆ ನಡೆಸಲಾಗಿತ್ತು.

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

Exit mobile version