Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್‌, ವಿಮಾನ ಏರ್ತಾರಾ ಇಲ್ವಾ?

Prajwal Revanna Case

ಬೆಂಗಳೂರು: ನಾಳೆ ಎಸ್ಐಟಿ (SIT) ಎದುರು ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ (Prajwal Revanna Case) ಬಿಡುಗಡೆ ಮಾಡಿದ ವಿಡಿಯೋದಲ್ಲಿ (pen drive case) ಹೇಳಿರುವ ಹಾಗೂ ಇಂದು ಮಧ್ಯಾಹ್ನ ಜರ್ಮನಿಯ ಮ್ಯೂನಿಚ್‌ನಿಂದ ಪ್ರಜ್ವಲ್ ರೇವಣ್ಣ ಹೆಸರಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಹಿನ್ನೆಲೆಯಲ್ಲಿ, ಹಾಸನ ಸಂಸದರ (Hassan MP) ಬಂಧನಕ್ಕೆ ಪೊಲೀಸರು ಕ್ಷಣಗಣನೆ ಆರಂಭಿಸಿದ್ದಾರೆ.

ಫ್ಲೈಟ್ ಟಿಕೆಟ್ ಬುಕ್‌ ಮಾಡಿರುವ ಆಧಾರದಂತೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 12.35ಕ್ಕೆ ಟರ್ಮಿನಲ್ 2ಗೆ ಆಗಮಿಸಲಿರುವ ಪ್ರಜ್ವಲ್ ಅನ್ನು ʼಸ್ವಾಗತಿಸಲುʼ ಟರ್ಮಿನಲ್ 2ನಲ್ಲಿ ಎಸ್ಐಟಿ ತಂಡ ಬೀಡು ಬಿಟ್ಟಿದೆ. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತಿದ್ದಾರೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.

ಪ್ರಜ್ವಲ್ ವಿಡಿಯೋ ಮಾಡಿ ಕಳಿಸಿರುವುದು ಎಲ್ಲಿಂದ ಎಂಬುದನ್ನು ನಿನ್ನೆಯೇ ಎಸ್‌ಐಟಿ ಪತ್ತೆ ಹಚ್ಚಿದೆ. ಯುರೋಪ್‌ನ ಹಂಗೇರಿನಿಂದ ಈ ವಿಡಿಐೋ ಬಿಡುಗಡೆಯಾಗಿದೆ. ಅಲ್ಲಿಂದ ಮ್ಯೂನಿಚ್‌ಗೆ ಬಂದು ಪ್ರಜ್ವಲ್‌ ವಿಮಾನ ಹಿಡಿಯಬೇಕಿದೆ. ಹಂಗೇರಿ, ಬುಡಾಪೆಸ್ಟ್‌, ಜರ್ಮನಿ ಎಂದು ಕಳೆದ ಒಂದು ತಿಂಗಳಿನಿಂದ ಪ್ರಜ್ವಲ್‌ ಓಡಾಡುತ್ತಿದ್ದಾರೆ. ಅವರು ಇಲ್ಲೆಲ್ಲಾ ತಮ್ಮ ಗೆಳೆಯರ ಆಶ್ರಯ ಪಡೆದಿದ್ದರೇ, ಎಲ್ಲಿ ತಂಗಿದ್ದರು ಎಂಬ ಮಾಹಿತಿ ದೊರೆಯಬೇಕಿದೆ.

ಇನ್ನೊಂದೆಡೆ, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ರೊಚ್ಚಿಗೆದ್ದಿರುವ ಮಹಿಳಾ ಸಂಘಟನೆಗಳು, ಕೆಂಪೇಗೌಡ ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆಗೆ ಇಳಿಯಲು ಸಿದ್ಧತೆ ನಡೆಸಿವೆ. ಹಾಸನದಲ್ಲಿ ಇಂದು ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನೂರಕ್ಕೂ ಹೆಚ್ಚು ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಹೋರಾಟಗಾರರು ಆಗಮಿಸುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಸನದಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.

ನಿಜಕ್ಕೂ ವಾಪಸಾಗ್ತಾರಾ ಪ್ರಜ್ವಲ್?‌

ಪ್ರಜ್ವಲ್ ರೇವಣ್ಣ ಕುಟುಂಬ ಸಲ್ಲಿಸಿದ ಜಾಮೀನು ಅರ್ಜಿಗಳೆಲ್ಲವೂ ಕೂಡ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಮುಂದೂಡಿಕೆ ಆಗುತ್ತಲೇ ಇವೆ. ಹೀಗಾಗಿ ಪ್ರತಿ ದಿನ ರೇವಣ್ಣ ಕುಟುಂಬ ಟೆನ್ಷನ್‌ನಲ್ಲಿರಬೇಕಾಗಿದೆ. ನಿನ್ನೆ ನಡೆದ ಭವಾನಿ ರೇವಣ್ಣ ಅವರ ಸುದೀರ್ಘ ವಿಚಾರಣೆ ಬಳಿಕವೂ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗಯಿಂದ ಪ್ರಜ್ವಲ್ ವಾಪಾಸಾಗ್ತಾರಾ ಎಂಬುದೇ ಅನುಮಾನಕ್ಕೀಡು ಮಾಡಿದೆ.‌

ಪ್ರಜ್ವಲ್ ಬರುತ್ತಿದ್ದಂತೆ SIT ಅಧಿಕಾರಿಗಳು ಪ್ರಜ್ವಲ್‌ರನ್ನು ಬಂಧಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಹೈ ಅಲಟ್೯ ಆದ ಪ್ರಜ್ವಲ್ ರೇವಣ್ಣ, ಇದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವಕಾಶ ನೀಡದ ನ್ಯಾಯಾಲಯ, ಮೊದಲು ಅವರು ಬರಲಿ ಆಮೇಲೆ ನೋಡೋಣ, ಮೇ 31ಕ್ಕೆ ಅರ್ಜಿ ವಿಚಾರಣೆ ಮಾಡೋಣ ಅಂತ ಹೇಳಿ SIT ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಸದ್ಯ 3 ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್‌ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸ್ ಠಾಣೆ, ಸೈಬರ್ ಕ್ರೈಂ ಠಾಣೆ, ಹೊಳೆನರಸೀಪುರ ಠಾಣೆಗಳಲ್ಲಿ ಕೇಸ್‌ ದಾಖಲಾಗಿವೆ.

ಮೈಸೂರಿನ ಕೆ.ಆರ್. ನಗರ ಠಾಣೆಯ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ ವಿಚಾರದಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿದೆ. ಇದೇ ವಿಚಾರಕ್ಕೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, SIT ಕೂಡಾ ಆಕ್ಷೇಪಣಾ ಅರ್ಜಿ ಸಲ್ಲಿಸಿ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣಗೆ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಚಾರದ ಆದೇಶವನ್ನು ಮೇ 31ಕ್ಕೆ ಮುಂದೂಡಿದ್ದಾರೆ.

ತನಿಖೆಗೆ ಸಹಕರಿಸುವುದಾಗಿ ಪ್ರಜ್ವಲ್‌ ಹೇಳಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ, ಬಂಧನ ತಪ್ಪಿಸಿಕೊಳ್ಳಲು ಅಲ್ಲೇ ಉಳಿಯುವ ಚಿಂತನೆ ಮಾಡುವ ಸಾಧ್ಯತೆಯೂ ಇದೆ. ಕಳೆದ ಬಾರಿಯೂ SIT ವಿಚಾರಣೆಗೆ ಬರಲು ಪ್ರಜ್ವಲ್‌ ಒಂದು ವಾರ ಕಾಲಾವಕಾಶ ಕೇಳಿದ್ದರು. ಆದರೆ ಒಂದು ತಿಂಗಳ ನಂತರವೂ SIT ವಿಚಾರಣೆಗೆ ಬಂದಿಲ್ಲ.

ಇದನ್ನೂ ಓದಿ: Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Exit mobile version