Site icon Vistara News

Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

rain in karnataka

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ (belagavi news) ಹಾಗೂ ಚಿಕ್ಕೋಡಿ (Chikkodi news) ಅವಳಿ ಜಿಲ್ಲೆಗಳ ಜನತೆ ಮಳೆ (Rain in Karnataka) ಹಾಗೂ ನದಿಗಳ ಅಬ್ಬರದಿಂದ ತತ್ತರಿಸಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು (Flood situation), ಘಟಪ್ರಭಾ ನದಿಯ (Ghataprabha River) ನೀರು ಮನೆಬಾಗಿಲವರೆಗೂ ಬಂದಿರುವುದರಿಂದ ಜನತೆ ಮನೆ ತೊರೆದು ಕಾಳಜಿ ಕೇಂದ್ರಗಳ ಕಡೆ ಸಾಗಿದ್ದಾರೆ.

ಘಟಪ್ರಭಾ ನದಿಯ ನೀರು ಉಕ್ಕಿ ಬಂದು ಮನೆಯ ಬಾಗಿಲವರೆಗೂ ತಲುಪಿರುವುದರಿಂದ, ಹೆಚ್ಚಿನ ಅನಾಹುತ ಆಗದಿರಲೆಂದು ಜನ ಮನೆ ಖಾಲಿ ಮಾಡುತ್ತಿದ್ದಾರೆ. ಗೋಕಾಕದ ದನದ ಪೇಟೆಗೆ ನದಿ ನೀರು ನುಗ್ಗುತ್ತಿದೆ. ನೀರು ಹೆಚ್ಚಾಗುತ್ತಿರುವುದರಿಂದ ಜನ ಕಂಗಾಲಾಗಿದ್ದು, ಈಗಾಗಲೇ ಕೆಲವು ಶೆಡ್‌ಗಳು ನೀರಲ್ಲಿ ಮುಳುಗಿವೆ. ದನದ ಪೇಟೆ ಪಟಗುಂದಿ ಹನುಮ ಗುಡಿಗೂ ಜಲಕಂಟಕ ಎದುರಾಗಿದೆ. ಸದ್ಯ ನೀರಿನಲ್ಲಿಯೇ ಜನ ನಿತ್ಯ ಕೆಲಸಗಳಿಗಾಗಿ ಓಡಾಡುತ್ತಿದ್ದು, ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ನದಿ ಒಳಹರಿವು 55 ಸಾವಿರ ಕ್ಯೂಸೆಕ್ ದಾಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಗೋಕಾಕ್ ತಾಲೂಕಿನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ, ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತವಾಗಿವೆ. ಇದರಿಂದ ಜಿಲ್ಲೆಯ ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 87 ಗ್ರಾಮಗಳಿಗೆ, ಬೆಳಗಾವಿ ವ್ಯಾಪ್ತಿಯಲ್ಲಿ 35 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 122 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 45 ಬೋಟ್‌ಗಳು ಸಿದ್ಧತೆಯಲ್ಲಿವೆ. ಈಗಾಗಲೇ ಒಂದು ಎನ್‌ಡಿಆರ್‌ಎಫ್ ತಂಡ ಬೀಡುಬಿಟ್ಟಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ದೂಧಗಂಗಾ ನದಿ ಅಬ್ಬರಿಸಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ ನದಿ ನೀರು ಗ್ರಾಮದ ಕುರುಬರ ಗಲ್ಲಿಗೆ ನುಗ್ಗಿದೆ. ಹೀಗಾಗಿ ಜನ ಊರು ಖಾಲಿ ಮಾಡುತ್ತಿದ್ದು, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ನಿನ್ನೆ ರಾತ್ರಿಯೆಲ್ಲ‌ ನಿದ್ದೆಯಿಲ್ಲದೆ ಕಂಗೆಟ್ಟ ಗಡಿ ಜಿಲ್ಲೆಯ ಜನ, ಇಂದು ಹುಣ್ಣರಗಿ ಗ್ರಾಮದಿಂದ ಸುರಕ್ಷಿತ ಸ್ಥಳಗಳತ್ತ, ಊರ ಹೊರಗಿನ ಶಾಲೆಯತ್ತ ಸಾಗುತ್ತಿದ್ದಾರೆ.

ಗೋಕಾಕ: ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಅಬ್ಬರಕ್ಕೆ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆಯಲ್ಲಿ ಮೂಡಿರುವ ಬಿರುಕಿನಿಂದಾಗಿ ಜನ ಆತಂಕದಲ್ಲಿದ್ದಾರೆ. ಈ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು, ಜನ ಓಡಾಡುತ್ತಾರೆ. ಇನ್ನೊಂದು ಕಡೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದನ್ನೂ ಓದಿ: Karnataka Rain News: ಮುಂದುವರಿದ ಮಳೆ ಅವಾಂತರ; ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವು

Exit mobile version