Site icon Vistara News

Karnataka Weather: ರಾಜ್ಯದಲ್ಲಿ ಬಿಸಿಲು, ಮಳೆ, ಗಾಳಿ ಒಟ್ಟೊಟ್ಟಿಗೆ ದಾಳಿ

Karnataka weather Forecast

ಬೆಂಗಳೂರು: ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಹಗುರವಾದ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಮುಖ್ಯವಾಗಿ ಒಣ ಹವೆ (Dry Weather) ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು(Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಶುಷ್ಕ ಹವಾಮಾನವು ಮೇಲುಗೈ ಸಾಧಿಸಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಒಣ ಹವೆ ಮುಂದುವರಿಯಲಿದೆ.

ಮಲೆನಾಡಿನ ಕೊಡಗು, ಶಿವಮೊಗ್ಗ ಮತ್ತು ಹಾಸನ, ಚಿಕ್ಕಮಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕನ್ನಡದಲ್ಲೂ ಗುಡುಗು ಸಹಿತ ಮಳೆಯಾಗಲಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 22 ಹಾಗೂ 36ರ ಆಸುಪಾಸಿನಲ್ಲಿರಲಿದೆ.

ಇದನ್ನೂ ಓದಿ: Physical Abuse : ದಾರಿಯುದ್ದಕ್ಕೂ ಪುಂಡರ ಚೇಸಿಂಗ್‌; ಕಾರಿನಲ್ಲಿದ್ದ ಯುವತಿಯರನ್ನು ಸುತ್ತುವರಿದು ಟಾರ್ಚರ್‌

ಉತ್ತರಒಳನಾಡಲ್ಲಿ ಉಷ್ಣ ಹವೆ

ಏಪ್ರಿಲ್‌ 5ರವರೆಗೆ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ಯಾದಗಿರಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.

ತಾಪಮಾನ ಮುನ್ಸೂಚನೆ

ಮುಂದಿನ 3 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Shiva Rajkumar: ನಟ ಶಿವರಾಜ್‌ ಕುಮಾರ್‌ ಆಸ್ಪತ್ರೆಗೆ ದಾಖಲು, ಯಾವಾಗ ಡಿಸ್ಚಾರ್ಜ್‌?

Summer Tips: ಬೇಸಿಗೆಯಲ್ಲಿ ಪದೇಪದೆ ಫ್ರಿಜ್‌ ನೀರು ಕುಡಿದರೆ ಏನಾಗುತ್ತದೆ?

ಬಿಸಲಿನ ಝಳ (Summer Tips) ತಡೆಯಲಾಗುತ್ತಿಲ್ಲ. ಊಟ-ತಿಂಡಿ ಎಲ್ಲವನ್ನೂ ಬಿಟ್ಟು ಪೀಪಾಯಿಗಟ್ಟಲೆ ಪೇಯಗಳನ್ನು ಕುಡಿಯುತ್ತಿರಬೇಕೆನಿಸಿದರೆ, ಅದು ಸಹಜ. ಅದರಲ್ಲೂ ಹೊರಗೆ ಬಿಸಿಲು ಏರುತ್ತಿದ್ದಂತೆಯೇ ಫ್ರಿಜ್ ಒಳಗಿನ (Chilled water)ತಂಪಾದ ಪೇಯಗಳತ್ತ ಮನಸ್ಸು ಹಾತೊರೆಯುತ್ತದೆ. ನೀರಾದರೂ ಸೈ- ಕೊರೆಯುವಷ್ಟು ತಣ್ಣಗೇ ಇರಲಿ ಎಂದು ಬಯಸುತ್ತೇವೆ. ಬಿಸಿಲಿನಿಂದ ಬಂದರಂತೂ, ತಣ್ಣೀರನ್ನು ಕೊಟ್ಟವರಿಗೆ ಇಡೀ ಜನ್ಮಕ್ಕೆ ತೀರದಷ್ಟು ಹರಸುತ್ತೇವೆ. ಹೀಗೆ ಫ್ರಿಜ್ ನಿಂದ ತೆಗೆದಿದ್ದನ್ನು ನೇರ ಗಂಟಲಿಗೆ ಸುರಿದುಕೊಳ್ಳುವಾಗೆಲ್ಲಾ, ʻಬೇಡ! ಆರೋಗ್ಯ ಕೆಡುತ್ತದೆ’ ಎಂದು ಮನೆಮಂದಿ ಎಚ್ಚರಿಸುವುದು ಸಾಮಾನ್ಯ ಸಂಗತಿ. ಹಾಗಾದರೆ ಫ್ರಿಜ್ಞಲ್ಲಿರುವ ತಣ್ಣಗಿನ ನೀರು ಅಥವಾ ಪೇಯವನ್ನೇ ಸದಾ ಕುಡಿಯುತ್ತಿದ್ದರೆ ಆರೋಗ್ಯ ಕೆಡುವುದು ಹೌದೇ? ಕುಡಿದರೇನಾಗುತ್ತದೆ?

ತೊಂದರೆ ಇಲ್ಲ ಆದರೆ…

ಸಾಮಾನ್ಯವಾಗಿ ಫ್ರಿಜ್‌ ನೀರು ಆರೋಗ್ಯಕ್ಕೆ ಸುರಕ್ಷಿತವೇ ಆಗಿರುತ್ತದೆ. ಒಮ್ಮೊಮ್ಮೆ ಕುಡಿದರೆ ಆರೋಗ್ಯಕ್ಕೆ ಹೇಳುವಂಥ ತೊಂದರೆಯೇನೂ ಆಗುವುದಿಲ್ಲ. ಆದಾಗ್ಯೂ ಚಿಲ್ಡ್ ನೀರು ಸದಾ ಕುಡಿಯುತ್ತಿದ್ದರೆ ಮೂಗು-ಗಂಟಲಲ್ಲಿ ಕಫ ಕಟ್ಟಿದಂತಾಗುತ್ತದೆ ಎಂದು ಹಲವಾರು ಮಂದಿ ದೂರುವುದು ಸಾಮಾನ್ಯ. ಇದಲ್ಲದೆ, ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಅತಿಯಾದ ತಣ್ಣಗಿನ ಪಾನೀಯಗಳು ಇದ್ದಕ್ಕಿದ್ದಂತೆ ತಲೆನೋವಿಗೆ ದಾರಿ ಮಾಡಿಕೊಡುತ್ತವೆ. ಇದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ಪರಿಣತರಲ್ಲಿಯೇ ಕೆಲವರ ವಾದವಿದೆ. ಆದರೆ ಅನುಭವಿಗಳು ಈ ವಾದಕ್ಕೆ ಪುಷ್ಟಿ ನೀಡುವವರಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸಮಸ್ಯೆಗಳು ದಾರಿ ಕಾಯಬಹುದು

ಜೀರ್ಣಾಂಗದ ತೊಂದರೆ

ಅತಿಯಾಗಿ ತಣ್ಣೀರು ಕುಡಿಯುವುದು ಜೀರ್ಣಕ್ರಿಯೆಗೆ ತೊಡಕುಂಟು ಮಾಡಬಹುದು. ಅದರಲ್ಲೂ ಹೆಚ್ಚಿನ ಪ್ರಮಾಣದ ಚಿಲ್ಡ್ ನೀರನ್ನು ಕಡಿಮೆ ಸಮಯದಲ್ಲಿ ಹೊಟ್ಟೆಗಿಳಿಸಿದರೆ ಸಮಸ್ಯೆಗಳ ಪ್ರಮಾಣಾವೂ ಹೆಚ್ಚು. ಇದರಿಂದ ಹೊಟ್ಟೆಯುಬ್ಬರ, ಆಹಾರ ಪಚನವಾಗದಿರುವುದು ಮುಂತಾದ ತೊಂದರೆಗಳು ಕಾಣಿಸಿಕೊಂಡು ಆರೋಗ್ಯವನ್ನು ಹದಗೆಡಿಸುತ್ತವೆ.

ಪ್ರಮಾಣ ಕಡಿಮೆ

ಸಾಮಾನ್ಯ ತಾಪಮಾನದ ನೀರನ್ನು ಕುಡಿಯುವಷ್ಟು ಚಿಲ್ಡ್ ನೀರನ್ನು ಕುಡಿಯುವುದು ಸಾಧ್ಯವಿಲ್ಲ. ನಾಲ್ಕಾರು ಗುಟುಕುಗಳು ಕುಡಿಯುತ್ತಿದ್ದಂತೆ ಸಾಕು ಎನಿಸಲು ಆರಂಭಿಸುತ್ತದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಮಾಣ ಕ್ಷೀಣಿಸಬಹುದು. ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದೇ ಹೋಗುವ ಸಾಧ್ಯತೆಯೂ ಇದೆ. ನಮ್ಮ ಜೀರ್ಣಾಂಗಗಳ ಕ್ಷಮತೆಗೆ, ಚರ್ಮ ಮತ್ತು ಕಿಡ್ನಿಗಳ ಸುಸ್ಥಿತಿಗೆ, ದೇಹದ ಉಷ್ಣತೆ ನಿಯಂತ್ರಿಸಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು- ಹೀಗೆ ಬಹಳಷ್ಟು ಕೆಲಸಗಳಿಗೆ ನಮ್ಮ ದೇಹಕ್ಕೆ ನೀರು ಅಗತ್ಯವಾಗಿ ಬೇಕು.

ಗಂಟಲು ನೋವು

ಈಗಾಗಲೇ ನೆಗಡಿ, ಕೆಮ್ಮು ಅಥವಾ ಗಂಟಲಲ್ಲಿ ಸಂವೇದನೆಗಳಿದ್ದರೆ ಅವೆಲ್ಲವೂ ಹೆಚ್ಚಾಗಬಹುದು. ಹಾಗಾಗಿ ಆರೋಗ್ಯದ ಸಮಸ್ಯೆಗಳು ಇದ್ದವರಿಗೆ ಶೀತಲ ಜಲ ಹೇಳಿಸಿದ್ದಲ್ಲ. ಹಾಗೆಂದು ಎಂಥಾ ತಣ್ಣೀರು ಕುಡಿದರೂ ಏನೂ ಆಗದೆ ಗುಂಡುಕಲ್ಲಿನಂತೆ ಇರುವವರಿಗೇನೂ ಕೊರತೆಯಿಲ್ಲ. ಆರೋಗ್ಯಕ್ಕೆ ಒಗ್ಗಿದರೆ ಯಾವ ತೊಂದರೆಯೂ ಆಗದಿರಬಹುದು. ಅಪರೂಪಕ್ಕೆ ಅಥವಾ ತೀರಾ ಬಾಯಾರಿದಾಗ ತಣ್ಣೀರು ಕುಡಿದರೆ ಸಾಕು ಎನ್ನುವವರೂ ಇದ್ದಾರೆ. ಆದರೆ ನಂನಮ್ಮ ಆರೋಗ್ಯಕ್ಕೆ ಇದು ಹೇಳಿಸಿದ್ದಲ್ಲ, ಇಂಥ ಕೆಲವು ಚಿಕ್ಕ-ಪುಟ್ಟ ತೊಂದರೆಗಳು ಬರುತ್ತವೆ ಎನಿಸಿದರೆ, ಅದರಿಂದ ದೂರ ಉಳಿಯುವುದು ಕ್ಷೇಮ.

ರಕ್ತನಾಳಗಳ ಸಮಸ್ಯೆ

ಅತಿಯಾದ ತಣ್ಣೀರಿನ ಸೇವನೆಯಿಂದ ಹೊಟ್ಟೆಯ ಭಾಗದಲ್ಲಿರುವ ರಕ್ತನಾಳಗಳು ಸಂಕುಚಿತಗೊಳ್ಳಬಹುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೀರಲ್ಪಡದೆ ವ್ಯರ್ಥವಾಗಬಹುದು. ಹಾಗಾಗಿ ಊಟ-ತಿಂಡಿಯ ಜೊತೆಗೆ ಫ್ರಿಜ್‌ನ ತಣ್ಣೀರನ್ನು ಕುಡಿಯದಿರುವುದು ಒಳ್ಳೆಯದು.

ಹಲ್ಲಿನ ಕಿರಿಕಿರಿ

ಅತಿಯಾದ ತಣ್ಣಗಿನ ವಸ್ತುಗಳು ಹಲ್ಲಿನ ತೊಂದರೆ ಇರುವವರಿಗೆ ಸಾಕಷ್ಟು ಉಪದ್ರವವನ್ನು ಕೊಡುತ್ತವೆ. ಸಂವೇದನೆಗಳು ಹೆಚ್ಚಿದ್ದರಂತೂ ಬಿಸಿ-ತಣ್ಣ ಎಂದಲ್ಲದೆ ಮಾಮೂಲಿ ಆಹಾರ ತೆಗೆದುಕೊಳ್ಳುವುದೂ ಕಷ್ಟ ಎನ್ನುವ ಹಂತಕ್ಕೆ ಬರುತ್ತದೆ. ಹಾಗಾಗಿ ಒಸಡು ಮತ್ತು ಹಲ್ಲಿನ ತೊಂದರೆ ಇರುವವರಿಗೆ ತಣ್ಣಗೆ ಕೊರೆಯುವ ಪಾನೀಯಗಳು ಹೇಳಿಸಿದ್ದಲ್ಲ

ಏನು ಮಾಡಬೇಕು?

ಸಮಸ್ಯೆ ಬಂದಿರುವ ತಣ್ಣೀರಿನಿಂದಲೇ ಎಂಬುದು ಖಾತ್ರಿಯಾದರೆ, ಕೆಲ ದಿನಗಳ ಮಟ್ಟಿಗೆ ಚಿಲ್ಡ್‌ ನೀರು ಕುಡಿಯುವುದನ್ನು ನಿಲ್ಲಿಸಿ. ಬದಲಿಗೆ ಉಗುರು ಬಿಸಿಯ ನೀರು ಒಂದೆರಡು ದಿನಗಳ ಮಟ್ಟಿಗೆ ಆರಾಮ ನೀಡೀತು. ಗಂಟಲು, ಹಲ್ಲು ಮತ್ತು ಜೀರ್ಣಾಂಗಗಳ ಸಮಸ್ಯೆಗಳಿಗೆ ಉಗುರು ಬಿಸಿಯ ನೀರಿನ ಉಪಚಾರ ನೆರವಾಗುತ್ತದೆ. ಸಮಸ್ಯೆ ಪರಿಹಾರವಾದ ಮೇಲೆ ವಾತಾವರಣದ ಉಷ್ಣತೆಯಲ್ಲಿರುವ ನೀರಿನಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version