Site icon Vistara News

Karnataka Weather: ಈ ಜಿಲ್ಲೆಗಳಲ್ಲಿ ಇರಲಿದೆ ಭಾರಿ ಚಳಿ; ಬೆಂಗಳೂರಲ್ಲಿ ಹೇಗಿದೆ ವಾತಾವರಣ?

Cold weather in Karnataka

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶುಕ್ರವಾರ ಶುಷ್ಕ ವಾತಾವರಣವು (Dry Weather) ಮುಂದುವರಿದಿದೆ. ರಾತ್ರಿ ವೇಳೆಗೆ ಚಳಿಗಾಳಿ ಬೀಸಲಿದೆ. ಆದರೆ, ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ಹೆಚ್ಚಿತ್ತು. ಆದರೆ, ಉತ್ತರ ಒಳನಾಡಿನ ಕೆಲವೆಡೆ ಕನಿಷ್ಠ ಉಷ್ಣಾಂಶ ಇಳಿಕೆ ಕಂಡಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಹೆಚ್ಚಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ತಿಳಿಸಿದೆ.

ಇನ್ನು ಬೆಂಗಳೂರು ಸೇರಿ ಮಲೆನಾಡಿನ ಭಾಗದಲ್ಲಿ ರಾತ್ರಿ ವೇಳೆ ಚಳಿ ಹೆಚ್ಚಾಗಲಿದ್ದು, ಶನಿವಾರ ಮುಂಜಾನೆ ಮಂಜು ಮುಸುಕಿನ ವಾತಾವರಣ ಇರುತ್ತದೆ. ಅಂದರೆ, ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಯಲ್ಲಿ ಈ ವಾತಾವರಣ ಇರಲಿದೆ. ಹಾಗಂತ ಮಧ್ಯಾಹ್ನದ ವೇಳೆ ಬಿಸಿಲು ಇದ್ದೇ ಇರುತ್ತದೆ.

ಕರಾವಳಿ ದಕ್ಷಿಣ ಒಳನಾಡಲ್ಲಿ ಹೇಗೆ?

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಕನಿಷ್ಠ ಉಷ್ಣಾಂಶ ಏರಿಕೆ ಆಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮಂಡ್ಯ, ಕೋಲಾರ, ರಾಮನಗರ ಸೇರಿದಂತೆ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದಲ್ಲಿ ಒಣಹವೆ ಇರಲಿದೆ. ಕೆಲವೊಮ್ಮೆ ಈ ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಒಳನಾಡಲ್ಲಿ ಚಳಿ ಹೆಚ್ಚು

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ವಾತಾವರಣ ಶುಷ್ಕತೆಯಿಂದ ಕೂಡಿದ್ದರೂ, ಹೆಚ್ಚಿನ ಪ್ರಮಾಣದ ಚಳಿ ಇರಲಿದೆ. ಹೀಗಾಗಿ ರಾತ್ರಿ ಅಥವಾ ಮುಂಜಾನೆ ಹೊರಗೆ ಹೋಗುವವರು ಮೈ ಬೆಚ್ಚಗೆ ಇಡುವ ಉಡುಪುಗಳನ್ನು ಧರಿಸಿ ಹೋದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಲಹೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: Tele ICU: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು: ದಿನೇಶ್ ಗುಂಡೂರಾವ್

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ -19 ಡಿ.ಸೆ
ಮಂಗಳೂರು: 33 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 32 ಡಿ.ಸೆ – 16 ಡಿ.ಸೆ
ಗದಗ: 32 ಡಿ.ಸೆ – 16 ಡಿ.ಸೆ
ಹೊನ್ನಾವರ: 34 ಡಿ.ಸೆ- 19 ಡಿ.ಸೆ
ಕಲಬುರಗಿ: 33 ಡಿ.ಸೆ – 20 ಡಿ.ಸೆ
ಬೆಳಗಾವಿ: 31 ಡಿ.ಸೆ – 11 ಡಿ.ಸೆ
ಕಾರವಾರ: 34 ಡಿ.ಸೆ – 19 ಡಿ.ಸೆ

ಇದನ್ನೂ ಓದಿ: HD Kumaraswamy: ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದು ತಪ್ಪು ಎಂದ ದೇವೇಗೌಡ; ಗೌಡರ ಸ್ಥಿತಿ ನೋಡಿದರೆ ಭಯವಾಗುತ್ತೆ ಎಂದ ಡಿಕೆಶಿ

ಎಲ್ಲೆಲ್ಲಿ ಕನಿಷ್ಠ ತಾಪಮಾನ ಭಾರಿ ಇಳಿಕೆ?

ಬೆಳಗಾವಿ, ಚಿತ್ರದುರ್ಗ, ಗದಗಿನಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದ್ದು, ಚಳಿಯ ಪ್ರಮಾಣ ಹೆಚ್ಚಿದೆ. ಇಲ್ಲಿಗೆ ಹೋಲಿಕೆ ಮಾಡಿದರೆ ಬೆಂಗಳೂರು, ಮಂಗಳೂರು, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರಗಳಲ್ಲಿ ಅಲ್ಪ ಪ್ರಮಾಣದಲ್ಲಿ ಚಳಿ ಕಡಿಮೆ ಇರಲಿದೆ. ಆದರೆ, ಬಹುತೇಕ ಕಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ಹೇಳಿದೆ.

Exit mobile version