Site icon Vistara News

ಸೈಬರ್‌ ಸೇಫ್ಟಿ ಅಂಕಣ: ಮುದ್ರಾ ಯೋಜನೆಯ ಹೆಸರಲ್ಲಿ ರಾಷ್ಟ್ರವ್ಯಾಪಿ ಸೈಬರ್ ವಂಚನೆ

cyber safety column pm mudra scheme

ಸೈಬರ್‌ ಸೇಫ್ಟಿ ಅಂಕಣ: ಏನಿದು ಪ್ರಧಾನ ಮಂತ್ರಿ ಮುದ್ರಾ (PM Mudra scheme) ಯೋಜನೆ? ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಬೆಳವಣಿಗೆಯನ್ನು ಬೆಂಬಲಿಸಲು ಪರಿಚಯಿಸಲಾಗಿದೆ. ಇದು ಕೃಷಿಯೇತರ, ಕಾರ್ಪೊರೇಟ್ ಅಲ್ಲದ ಸಣ್ಣ ವ್ಯಾಪಾರ ಕ್ಷೇತ್ರಗಳಿಗೆ ವಿಸ್ತರಿಸಲು, ಆಧುನೀಕರಿಸಲು ಅಥವಾ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ರೂ. 10 ಲಕ್ಷಗಳವರೆಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯನ್ನು ದೇಶದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು 2015ರಲ್ಲಿ ಜಾರಿಗೊಳಿಸಲಾಯಿತು.

• ಇದರ ಮುಖಾಂತರ ಸಾಲ ಪಡೆಯಲು ಯಾವುದೇ ಮೇಲಾಧಾರ ಅಗತ್ಯವಿಲ್ಲ: ಸಾಲಗಾರರು ಯಾವುದೇ ಭದ್ರತೆ ಅಥವಾ ಮೂರನೇ ವ್ಯಕ್ತಿಯ ಖಾತರಿಯನ್ನು(ಶ್ಯೂರಿಟಿ) ಒದಗಿಸುವ ಅಗತ್ಯವಿಲ್ಲ.
• ಸ್ಪರ್ಧಾತ್ಮಕ ಬಡ್ಡಿ ದರಗಳು: ಬಡ್ಡಿದರಗಳು ಕೈಗೆಟುಕುವವು, ಸಾಮಾನ್ಯವಾಗಿ ತಿಂಗಳಿಗೆ ಶೇಕಡ ಒಂದು ಮೀರುವುದಿಲ್ಲ.
• ಬಳಕೆ: ಬ್ಯಾಂಕ್ ಭೇಟಿಗಳನ್ನು ತಪ್ಪಿಸುವ ಮೂಲಕ ಮುದ್ರಾ ಲೋನ್ ಕಾರ್ಡ್ ಬಳಸಿ ಹಣವನ್ನು ಸುಲಭವಾಗಿ ಬಳಸಬಹುದು.
• ವ್ಯಾಪಕ ವ್ಯಾಪ್ತಿ: ಮಾರಾಟಗಾರರು, ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಸೇರಿದಂತೆ ಹಲವಾರು ವ್ಯಾಪಾರಗಳಿಗೆ ಲಭ್ಯವಿದೆ.
• ಸರ್ಕಾರ-ಬೆಂಬಲಿತ: ಸರ್ಕಾರ-ಅನುಮೋದಿತ ಯೋಜನೆಯ ವಿಶ್ವಾಸಾರ್ಹತೆಯನ್ನು ನೀಡುತ್ತದೆ.
• ಹೊಂದಿಕೊಳ್ಳುವ ಮರುಪಾವತಿ ನಿಯಮಗಳು: ಸಣ್ಣ ವ್ಯವಹಾರಗಳ ಆರ್ಥಿಕ ಪರಿಸ್ಥಿತಿಯನ್ನು ಸರಿಹೊಂದಿಸಲು ವಿನ್ಯಾಸಗೊಳಿಸಲಾಗಿದೆ.
• ಅಂತರ್ಗತ ಹಣಕಾಸು: ಆರ್ಥಿಕತೆಯ ಕೆಳ ಮತ್ತು ಹಿಂದುಳಿದ ವಿಭಾಗಗಳನ್ನು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸೇರಿಸುವ ಗುರಿಯನ್ನು ಹೊಂದಿದೆ.

ಇಂತಹ ಬಹು ಉಪಯೋಗಿ ಸಾಲ ಯೋಜನೆಯನ್ನು ಬಳಸಿಕೊಂಡು ರಾಷ್ಟ್ರವ್ಯಾಪಿ ಸೈಬರ್ ವಂಚನೆಯ ಜಾಲ ಉತ್ತರಾಖಂಡದಿಂದ ಸಕ್ರಿಯವಾಗಿತ್ತು. ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಆಯುಷ್ ಅಗರ್‌ವಾಲ್ ಅವರ ಮಾರ್ಗದರ್ಶನದಲ್ಲಿ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಐ4ಸಿ ಜೊತೆ ಸಮನ್ವಯದಲ್ಲಿ ಈ ಸೈಬರ್ ವಂಚನೆ ಗ್ಯಾಂಗ್ ಅನ್ನು ಯಶಸ್ವಿಯಾಗಿ ಬಹಿರಂಗಪಡಿಸಿದೆ.

ವಂಚಕರ ತಂಡವು ಮುಖ್ಯವಾಗಿ ದಕ್ಷಿಣ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ನಿವಾಸಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಗ್ಯಾಂಗ್‌ನ ಕಾರ್ಯಾಚರಣೆಗಳು ವ್ಯಾಪಕವಾಗಿದ್ದು, ಈ ಮೋಸದ ಬಲೆಗೆ ನೂರಾರು ಉದ್ದಿಮೆದಾರರು ಬಲಿಯಾದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯದ I4C ಅಡಿಯಲ್ಲಿ ವಿವಿಧ ವೆಬ್ ಪೋರ್ಟಲ್‌ಗಳ ದತ್ತಾಂಶದಿಂದ ದೃಢೀಕರಿಸಲ್ಪಟ್ಟಿದೆ. ಈ ಡೇಟಾವು ಡೆಹ್ರಾಡೂನ್‌ನ ಪ್ರೇಮ್‌ನಗರ ಪ್ರದೇಶದಲ್ಲಿ ಹೆಚ್ಚಿನ ಮಟ್ಟದ ಸೈಬರ್ ವಂಚನೆ ಚಟುವಟಿಕೆಯನ್ನು ಸೂಚಿಸಿದೆ. ಮುದ್ರಾ ಸಾಲ ಯೋಜನೆಯ ನೆಪದಲ್ಲಿ ಸುವ್ಯವಸ್ಥಿತ ನೆಟ್‌ವರ್ಕ್‌ ಕಾರ್ಯನಿರ್ವಹಿಸುತ್ತಿರುವ ಸುಳಿವು ಅದರಿಂದ ದೊರೆಯಿತು. ಎಸ್‌ಎಸ್‌ಪಿ ಆಯುಷ್ ಅಗರ್ವಾಲ್ ಅವರ ತಂಡವು ಹಲವಾರು ವಾರಗಳವರೆಗೆ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದರು. ವಂಚಕರ ವಹಿವಾಟಿನ ಮಾದರಿ ಮತ್ತು ಸಂವಹನದ ಹರಿವನ್ನು ವಿಶ್ಲೇಷಿಸುತ್ತಿತ್ತು. ಆಗ ನಕಲಿ ಗುರುತುಗಳು ಮತ್ತು ಗ್ಯಾಂಗ್ ಸಕ್ರಿಯವಾಗಿ ಬಳಸಿದ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಗೆ ಮೋಸದ ವಹಿವಾಟುಗಳು ಜಮೆಯಾಗಿದ್ದು ಕಂಡುಬಂದಿದೆ.

ಗ್ಯಾಂಗ್‌ನ ಕಾರ್ಯಾಚರಣೆಯು ಸರ್ಕಾರಿ ನೌಕರರಂತೆ ನಟಿಸಿ ಮುದ್ರಾ ಸಾಲದ ಪ್ರಕ್ರಿಯೆಯನ್ನು ಸುಗಮಗೊಳಿಸಿ ಕೊಡುವಂತೆ ನಡೆಯುತ್ತಿತ್ತು. ನಂತರ ನಕಲಿ ಸಾಲ ಮಂಜೂರಾತಿ ಪತ್ರವನ್ನು ತೋರಿಸಿ ಮೋಸಗೊಳಿಸಿ ಸಾಲದ ಮೊತ್ತದ 5-10% ಅನ್ನು ಕಮಿಷನ್ ಅಥವಾ ಸಂಸ್ಕರಣಾ ಶುಲ್ಕವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಹೇಳುತ್ತಿದ್ದರು. ಈ ಖಾತೆಗಳು ಮತ್ತು ಸಂಬಂಧಿತ ಮೊಬೈಲ್ ಸಂಖ್ಯೆಗಳು ನಕಲಿಯಾಗಿದ್ದು, ಹಗರಣವನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದರು. ಹೀಗೆ ಪಡೆದ ಹಣವನ್ನು ತಕ್ಷಣವೇ ಎಟಿಎಂಗಳನ್ನು ಬಳಸಿ ಹಿಂಪಡೆಯಲಾಗಿದೆ. ಟ್ರ್ಯಾಕಿಂಗ್ ತಪ್ಪಿಸಲು ಪ್ರತಿ 3-4 ತಿಂಗಳಿಗೊಮ್ಮೆ ಬಳಸಿದ ಎಲ್ಲಾ ಸಿಮ್ ಕಾರ್ಡ್‌ಗಳನ್ನು ನಾಶಪಡಿಸುತ್ತಿದ್ದರು.

cyber crime

ತೆಲಂಗಾಣದ ಚರಣ್ ಕುಮಾರ್ ಎಂಬ ವ್ಯಾಪಾರಿ ಗೂಗಲ್‌ನಲ್ಲಿ ತನ್ನ ವಹಿವಾಟಿಗಾಗಿ ಸಾಲಕ್ಕೆ ಹುಡುಕಿದಾಗ PMMY ಸಾಲವನ್ನು ಕೊಡಿಸುವ ಮೊಬೈಲ್ ಸಂಖ್ಯೆ ಕಂಡುಬಂದಿದೆ. ಅವರನ್ನು ಸಂಪರ್ಕಿಸಿದಾಗ ವ್ಯಕ್ತಿಯೊಬ್ಬರು ಮೋಹಿತ್ ಸಿಂಗ್ ಎಂದು ಪರಿಚಯಿಸಿಕೊಂಡು ತಾನು PMMY ಉದ್ಯೋಗಿ ಎಂದು ತಿಳಿದರು. ಹಿಂದಿಯಲ್ಲಿ ಮಾತನಾಡುತ್ತಾ, ಅವರು ತಮ್ಮ ಗುರುತಿನ ಚೀಟಿ ಮತ್ತು ವೆಬ್‌ಸೈಟ್ URL http://pmmudrayojana.com ಅನ್ನು ಹಂಚಿಕೊಂಡಿದ್ದಾರೆ. ಇದರಿಂದ ಚರಣ್ ಕುಮಾರ್ ಅವರನ್ನು ನಂಬಿ ತಮ್ಮ ಆಧಾರ್, ಪ್ಯಾನ್ ಕಾರ್ಡ್ ಮತ್ತು ಐಟಿ ರಿಟರ್ನ್ಸ್‌ಗಳನ್ನು ವಾಟ್ಸಾಪ್‌ನಲ್ಲಿ ಕಳಿಸಿದರು. ನಂತರ ಅವರು ಸಾಲದ ಅನುಮೋದನೆಯ ಬಗ್ಗೆ ದೃಢೀಕರಣವನ್ನು ಪಡೆದರು ಮತ್ತು ಸ್ಕ್ಯಾನ್ ಮಾಡಿದ ಅನುಮೋದನೆ ಪತ್ರದ ಪ್ರತಿಯನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿದೆ. ನಂತರ, ವಿಮೆ, ಟಿಡಿಎಸ್, ಸಂಸ್ಕರಣಾ ಶುಲ್ಕ ಇತ್ಯಾದಿಗಳಿಗೆ ಬೇಡಿಕೆಗಳು ಪ್ರಾರಂಭವಾದವು. ವಂಚಕರು ಇನ್ನೊಂದು ವೆಬ್‌ಸೈಟ್ www.mudrafinserve.in ಅನ್ನು ಸಹ ಹೊಂದಿದ್ದರು.

ಕಾರ್ಯಾಚರಣೆಯಲ್ಲಿ, ಎಸ್‌ಟಿಎಫ್ ಈ ಗ್ಯಾಂಗ್‌ನ ಇಬ್ಬರು ಪ್ರಮುಖ ಸದಸ್ಯರನ್ನು ಡೆಹ್ರಾಡೂನ್‌ನ ಪ್ರೇಮ್‌ನಗರ ಪ್ರದೇಶದಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ಅವರಿಂದ ರೂ. 1,31,100 ನಗದು, 64 ಸಿಮ್ ಕಾರ್ಡ್‌ಗಳು, 11 ಎಟಿಎಂ ಕಾರ್ಡ್‌ಗಳು, 10 ಮೊಬೈಲ್ ಫೋನ್‌ಗಳು, 2 ಪಾಸ್‌ಬುಕ್‌ಗಳು ಮತ್ತು 7 ವಿವಿಧ ಬ್ಯಾಂಕ್‌ಗಳ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ವ್ಯಕ್ತಿಗಳನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಮೂಲದ ರಾಹುಲ್ ಚೌಧರಿ ಅಲಿಯಾಸ್ ರಾಹುಲ್ ಕನೌಜಿಯಾ (30) ಮತ್ತು ಉತ್ತರ ಪ್ರದೇಶದ ಬದೌನ್‌ನ ಸಿದ್ಧಾಂತ್ ಚೌಹಾಣ್ ಅಲಿಯಾಸ್ ಸಿದ್ಧ ಚೌಹಾಣ್ (22) ಎಂದು ಗುರುತಿಸಲಾಗಿದೆ.

ಗ್ಯಾಂಗ್‌ನ ಉಳಿದ ಸದಸ್ಯರನ್ನು ಬಂಧಿಸಲು ಎಸ್‌ಟಿಎಫ್ ಸಕ್ರಿಯವಾಗಿ ತನಿಖೆಯನ್ನು ಮುನ್ನಡೆಸುತ್ತಿದೆ ಮತ್ತು ಮುಂದಿನ ಮೋಸದ ಚಟುವಟಿಕೆಗಳನ್ನು ತಡೆಯಲು ಹಣಕಾಸಿನ ವರ್ಗಾವಣೆ ಹಾದಿಗಳನ್ನು ನಿಕಟವಾಗಿ ಗಮನಿಸುತ್ತಿದೆ. ಎಸ್‌ಎಸ್‌ಪಿ ತನಿಖೆಯ ಸಾಗುತ್ತಿರುವ ಸ್ವರೂಪವನ್ನು ಹೇಳುತ್ತಾ ಈ ಪ್ರಕರಣದ ಮಾಸ್ಟರ್ ಮೈಂಡ್ ದೀಪಕ್ ರಾಜ್ ಶರ್ಮಾ ಅವರ ಜಾಡನ್ನು ಹಿಂಬಾಲಿಸಿರುವುದಾಗಿಯೂ ಮತ್ತು ಈ ಜಾಲವನ್ನು ಸಂಪೂರ್ಣವಾಗಿ ಕಿತ್ತುಹಾಕುವುದಾಗಿಯೂ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಜಾಗರೂಕರಾಗಿರಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಸಾಲ ಯೋಜನೆಗಳಿಗೆ ಸಂಬಂಧಿಸಿದ ಕೊಡುಗೆಗಳು ಅಥವಾ ಕರೆಗಳು ಬಂದರೆ ಅದನ್ನು ವರದಿ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ. ದೂರುದಾರರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ವಂಚಕರನ್ನು ನ್ಯಾಯಾಲಯದ ಮುಂದೆ ತರಲು ಪೊಲೀಸರು ಬದ್ಧರಾಗಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಪಿಗ್‌ಬುಚ್ಚರಿಂಗ್- ಹೂಡಿಕೆಯ ಸೋಗಿನಲ್ಲಿ ಸೈಬರ್ ವಂಚನೆ

Exit mobile version