Site icon Vistara News

Deepavali 2023: ಅಂಧಕಾರದ ವಿರುದ್ಧ ಪ್ರಕಾಶದ ವಿಜಯ, ತಮಸೋಮಾ ಜ್ಯೋತಿರ್ಗಮಯ…

Deepavali 2023

Deepavali 2023: A Festival Is light over darkness, good over evil, and wisdom over ignorance

| ಗಣೇಶ ಭಟ್ಟ, ಸಂಸ್ಕೃತ ಉಪನ್ಯಾಸಕರು, ಕುಮಟಾ

ದೀಪವೊಂದು ಹಣತೆಯಲ್ಲಿ ಬಂದು ಉರಿದು ಅಂಧಕಾರವನ್ನು ಹೋಗಲಾಡಿಸಿದುವುದರ ಜೊತೆಜೊತೆಗೆ ಹಣತೆಯನ್ನೂ ಪೂಜನೀಯವಾಗಿ ಮಾಡುತ್ತದೆ. ದೀಪ ಮತ್ತು ಹಣತೆಯ ಸಂಯೋಗವನ್ನು ನಮ್ಮ ಪೂರ್ವಜರು ʼದೀಪಾವಳಿʼ (Deepavali 2023) ಎಂಬ ಹೆಸರಿನಿಂದ ದೇಶದಾದಂತ್ಯ ದೊಡ್ಡ ಹಬ್ಬವಾಗಿ ಆಚರಣೆಗೆ ತಂದರು.

ದೀಪಾವಳಿಯು ಮಥುರಾದಿಂದ ಮಣಿಪುರದ ತನಕ, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಎಲ್ಲರೂ ಒಟ್ಟಾಗಿ ಸಡಗರ-ಸಂಭ್ರಮದಿಂದ ಆಚರಿಸುವ ಅತ್ಯಂತ ದೊಡ್ಡ ಹಬ್ಬವಾಗಿದೆ. ದೀಪಗಳ ಅವಲಿ (ಸಾಲು) ದೀಪಾವಳಿ. ಮನೆ-ಮಂದಿರಗಳಲ್ಲಿ ಎಲ್ಲೆಲ್ಲೂ ಅಪಮೃತ್ಯುವಿನ ನಿವಾರಣೆಗೆ, ಜೀವನದಲ್ಲಿ ಸಕಲ ಸಂಪತ್ತು ನೆಲೆಗೊಳಿಸಲು, ಒಳಿತಾಗಲು ದೀಪಗಳ ಸಾಲು ರಾರಾಜಿಸಬೇಕು.

ನಮ್ಮ ಸಂತ-ಮಹಾಂತ ಋಷಿಗಳು ಪರ್ವ-ಉತ್ಸವದ ಮೂಲಕ ಶುಭವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಎಲ್ಲಾ ಧರ್ಮಶಾಸ್ತçಗಳಲ್ಲೂ ಆರೋಗ್ಯ–ಧನ ಸಮೃದ್ಧಿಗಾಗಿ, ನೆಮ್ಮದಿಯ ಬದುಕಿಗಾಗಿ ಏನು ಮಾಡಬೇಕೆಂದು ಮಾರ್ಗ ಸೂಚಿಸಿದೆ. ಈ ಹಬ್ಬ-ಉತ್ಸವಗಳ ಹಿನ್ನೆಲೆಯಲ್ಲಿ ಮಾನವಬದುಕಿನ ಸಂಪೂರ್ಣ ಜೀವನ ದರ್ಶನವೇ ಅಡಗಿದೆ.

ನರಕ ಚತುರ್ದಶಿ

ಭೂದೇವಿಯ ಪುತ್ರನಾದ ನರಕಾಸುರನು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ, ಅನುಗ್ರಹ ಪಡೆದು ದೇವಾಸುರರನ್ನು ಮಣಿಸಿದ್ದ. ಭೂಲೋಕದ ರಾಜರುಗಳನ್ನು ಜಯಿಸಿ ಅವರ ಹದಿನಾರು ಸಾವಿರ ಕನ್ಯೆಯರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ. ಕೃಷ್ಣ, ದೇವತೆಗಳ ಪ್ರಾರ್ಥನೆಯ ಮೇರೆಗೆ ಆಶ್ವೀಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ನಡುರಾತ್ರಿ ನರಕಾಸುರನನ್ನು ಸಂಹರಿಸಿದ. ನರಕಾಸುರನ ತಾಯಿ ಭೂದೇವಿಯ ಇಚ್ಛೆಯಂತೆ ವರುಷದಲ್ಲಿ ಒಮ್ಮೆ ಆತನ ಸ್ಮರಿಸುವ ರೀತಿಯಲ್ಲಿ ಕೃಷ್ಣನು ಈ ಹಬ್ಬವನ್ನು ನೆಲೆಗೊಳಿಸಿದ. ನರಕಾಸುರನ ಸಂಹರಿಸಿದ ದಿನವೇ ನರಕಚತುರ್ದಶಿ.

ಈ ದಿನ ಕುರಿತು ಧರ್ಮಸಿಂಧುವಿನಲ್ಲಿ…

“ಆಶ್ವೀನ ಕೃಷ್ಣಪಕ್ಷ ಚತುರ್ದಶ್ಯಾಂ ಚಂದ್ರೋದಯ ವ್ಯಾಪಿನ್ಯಾಂ ನರಕಭೀರುಭಿ: ತಿಲತೈಲೇನ ಅಭ್ಯಂಗಸ್ನಾನ ಕಾರ್ಯಂ, ಅಭ್ಯಂಗಸ್ನಾನೋತ್ತರ ತಿಲಕಾದಿಕೃತ್ವಾ ಕಾರ್ತಿಕಸ್ನಾನಂ ಕಾರ್ಯಂ, ಕಾರ್ತಿಕ ಸ್ನಾನೋತ್ತರಂ, ಯಮತರ್ಪಣಂ, ಕಾರ್ಯಂ”…. ಅಂದರೆ ಚಂದ್ರೋದಯದವರೆಗೆ ತಿಥಿ ವ್ಯಾಪ್ತಿ ಇರುವ ಆಶ್ವೀಜ ಕೃಷ್ಭ ಚತುರ್ದಶಿಯಂದು, ಎಳ್ಳೆಣ್ಣೆಯಿಂದ ಅಭ್ಯಂಗಸ್ನಾನ ಮಾಡಿ ಕಾರ್ತಿಕ ಸ್ನಾನ, ಯಮ ತರ್ಪಣಗಳನ್ನು ಕೊಡಬೇಕು.
ಈ ನರಕ ಚತುರ್ದಶಿ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಮನೆಯವರೆಲ್ಲಾ ಅಭ್ಯಂಗ ಸ್ನಾನ ಮಾಡುವರು. ಯಮತರ್ಪಣಾದಿಗಳ ನಂತರ, ದೇವರನ್ನು ಪೂಜಿಸಿ, ಮಂಗಳ ಆರತಿಗಳನ್ನು ಬೆಳಗಿದ ಮೇಲೆ, ಮನೆಯ ಗಂಡಸರಿಗೆ, ಮುತ್ತೈದೆ-ಕುಮಾರಿಯರು ಆರತಿ ಬೆಳಗುವರು. ಹಬ್ಬಕ್ಕೋಸ್ಕರ ಸಿದ್ಧಗೊಳಿಸಿದ ಸಿಹಿಕಡಬು ಕಜ್ಜಾಯ ಒಳಗೊಂಡ ಭೋಜನ ಸೇವಿಸಿ, ಬಂಧುಬಾಂಧವರೊಂದಿಗೆ ಸೇವಿಸುತ್ತಾ, ಹೊಸವಸ್ತ್ರ ಧರಿಸುತ್ತಾ, ಹಬ್ಬದ ಸಂಭ್ರಮವನ್ನು ತಾವೂ ಅನುಭವಿಸಿ, ಇನ್ನೊಬ್ಬರೂ ಸಂಭ್ರಮಿಸಿದ್ದನ್ನು ಕಂಡು ಸಂತೋಷಿಸುವರು.
ದೀಪಾವಳಿ ಅಮವಾಸ್ಯೆ-ಲಕ್ಷ್ಮೀ ಪೂಜೆ:-

ಬಲಿರಾಜ್ಯೇ ದೀಪದಾನಾತ್ ಸದಾ ಲಕ್ಷ್ಮೀ ಸ್ಥಿರಾ ಭವೇತ್|
ದೀಪೈಃ ನೀರಾಜನಾತ್ ಅತ್ರ ಸೈಷಾ ದೀಪಾವಲೀ ಸ್ಮೃತಾ||

ಸರ್ವಸಂಪತ್ ಪ್ರದಾಯನಿಯಾದ ಮಹಾಲಕ್ಷ್ಮೀ ಜ್ಯೋತಿಯ ಸ್ವರೂಪಿಣೆ, ದೀಪಾವಳಿಯಿಂದು ಲಕ್ಷ್ಮೀಯನ್ನು ಪೂಜಿಸಿದರೆ ಸಂಪತ್ತು ಸ್ಥಿರವಾಗುವುದು. ವರ್ಧಿಸುವುದು. ಅದಕ್ಕಾಗಿ ದೀಪಾವಳಿ ಅಮವಾಸ್ಯೆಯಂದು ಲಕ್ಷ್ಮೀ ಪೂಜೆಗೆ ಪ್ರಾಶಸ್ತ್ಯ

ಈ ದಿನ ಅಮಾವಾಸ್ಯೆಯ ಸಾಯಂಕಾಲ ದೀಪ ಬೆಳಗಿಸಿ, ತಳಿರುತೋರಣಗಳಿಂದ ಲಕ್ಷ್ಮೀಯನ್ನು ಅಲಂಕರಿಸಿ ಪೂಜಿಸಬೇಕು. ವಿಶೇಷವಾಗಿ ಗ್ರಹಸ್ಥರು, ವ್ಯಾಪಾರಸ್ಥರು ಮುಂತಾದವರು ಲಕ್ಷ್ಮೀ ಕೃಪಾಕಟಾಕ್ಷ ಬಯಸಿ ಪೂಜನೆ-ವಂದನೆಗಳನ್ನು ಸಲ್ಲಿಸುವರು. ದೀಪಾವಳಿ ಅಮಾವಾಸ್ಯೆಯ ದಿನ ಸಿದ್ಧಿಬುದ್ಧಿದಾಯಕ ಗಣಪತಿಯೊಂದಿಗಿನ ಲಕ್ಷ್ಮೀಯನ್ನು ಪೂಜಿಸಲಾಗುವುದು. ಇದರ ಮರ್ಮ ಸಂದೇಶವೇನಿರಬಹುದು? ಹೀಗೊಂದು ಕಥೆ ಪ್ರಚಲಿತವಾಗಿದೆ.

ಹೀಗೊಂದು ಕಥೆ

ಒಬ್ಬ ರಾಜ ತನ್ನ ರಾಜ್ಯದಲ್ಲಿ ಸಂಚರಿಸುವ ಸಂದರ್ಭದಲ್ಲಿ ಒಬ್ಬ ಕಟ್ಟಿಗೆ ಮಾರಿ ಪರಿಶ್ರಮದಿಂದ ಬದುಕು ಸಾಗಿಸುವವ ಕಣ್ಣಿಗೆ ಬಿದ್ದ. ರಾಜನಿಗೆ ಆತನ ಮೇಲೆ ಕರುಣೆ ಹುಟ್ಟಿ, ಆತನ ಪರಿಶ್ರಮಕ್ಕೆ ಸಂತೋಷಗೊಂಡು, ಆ ಕಟ್ಟಿಗೆ ಮಾರಿ ಜೀವಿಸುವ ಕಟ್ಟಿಗೆಯವನಿಗೆ ಒಂದು ಶ್ರೀಗಂಧವನವನ್ನೇ ದಾನವಾಗಿ ನೀಡಿದ. ಮರ ಕಡಿದು, ಕಟ್ಟಿಗೆ ಮಾಡಿ, ಮಾರುವ ಕಟ್ಟಿಗೆಯವನಿಗೆ ರಾಜ ತನಗೆ ದಾನವಾಗಿ ನೀಡಿದ ಶ್ರೀಗಂಧ-ವನದ ಮಹತ್ವ ಹಾಗೂ ಮೌಲ್ಯದ ತಿಳಿವಳಿಕೆ ಇರಲಿಲ್ಲ. ಆತ ಶ್ರೀಗಂಧದ ಮರ ಕಡಿದು ಕಟ್ಟಿಗೆ ಮಾಡಿ, ಮಾರಿದ, ಕೆಲವನ್ನು ತನ್ನ ದಿನನಿತ್ಯದ ಅಡುಗೆ ಮಾಡಲು, ಸ್ನಾನದ ನೀರು ಕಾಯಿಸಲು ಬಳಸತೊಡಗಿದ. ರಾಜನಿಗೆ ಈ ವಿಷಯ ತನ್ನ ಗುಪ್ತಚರರ ಮೂಲಕ ತಿಳಿಯಿತು. ಹಣದ ಸಂಪತ್ತಿನ ಸದುಪಯೋಗ ಎಲ್ಲರೂ ತಿಳಿದಿಲ್ಲ. ಹಣದ ಸದುಪಯೋಗ ತಿಳಿಯಲು ಬುದ್ಧಿ ಅಥವಾ ಜ್ಞಾನದ ಅವಶ್ಯಕತೆ ಇದೆ. ಸಂಪತ್‌ಪ್ರದಾಯಿನಿ ಲಕ್ಷ್ಮೀಯೊಂದಿಗೆ, ಬುದ್ಧಿ ನೀಡುವ ಗಣಪತಿಯನ್ನು ಪೂಜಿಸುವ ಗೂಡಾರ್ಥವಿದು. ಧನದ ಸದ್ವಿನಿಯೋಗದ ಅರಿವು ಆಗದೇ ಇದ್ದರೆ ಧನ ವ್ಯರ್ಥವಷ್ಟೇ.

ಈ ದಿನ ಸಾಯಂಕಾಲ ನಾವು ಗಳಿಸಿದ ಎಲ್ಲ ಸಂಪತ್ತುಗಳನ್ನು ಅದು ವಾಹನಗಳಾಗಿರಬಹುದು, ಒಡವೆ ಆಭರಣ ಹಣ ವಸ್ತುಗಳೆಲ್ಲವನ್ನು ಎದುರಿಗೆ ಇಟ್ಟು ಪೂಜಿಸಬೇಕೆಂಬ ನಿಯಮವಿದೆ. ಈ ಎಲ್ಲ ಸಂಪತ್ತುಗಳ ಸಮೃದ್ಧಿಯ ಅನುಭವವನ್ನು ನಾವು ಹೊಂದಬೇಕು. ಇಲ್ಲವಾದದ್ದರ ಕುರಿತು ಯೋಚಿಸಿದರೆ ಆ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕೃತವಾಗುವುದು. ನಮ್ಮ ಲಕ್ಷ್ಮೀ ನಮ್ಮ ಸಮೃದ್ಧಿಯ ಗಮನಕ್ಕೆ ಬರುವುದು ಎಂಬ ಉದ್ದೇಶ ಈ ಪದ್ಧತಿಯ ಹಿಂದಿನ ಮರ್ಮವಾಗಿದೆ. ಈ ಸಂಸಾರದಲ್ಲಿ ನಮಗೆ ಎನೆಲ್ಲಾ ದೊರಕಿದೆಯೋ ತಂದೆ-ತಾಯಿ, ಪತಿ-ಪತ್ನಿ,ಮಕ್ಕಳು, ಮಿತ್ರರು-ಬಂಧು-ಬಾಂಧವರು ಮುಂತಾದ ಜನರು, ಮನೆ ವಾಹನ ಮುಂತಾದ ಭೋಗದ ವಸ್ತುಗಳು ಇವುಗಳೆಲ್ಲಾ ನಮಗೆ ನಮ್ಮ ಜೀವನದಲ್ಲಿ ದೊರಕಿದವುಗಳು,ಲಾಭವಾದವುಗಳು.ನಮಗೆ ಲಾಭವಾದ ಇವುಗಳೆಲ್ಲಾ ನಮ್ಮಲ್ಲೇ ಇರಬೇಕು ಎಂದಾದರೆ,ಶುಭವಾಗಬೇಕು. ಅದಕ್ಕೋಸ್ಕರವೇ ಶುಭ-ಲಾಭ ಎಂದು ಲಕ್ಷ್ಮೀ ಪೂಜೆ ಎಂದು ಬರೆದು ಪೂಜಿಸುವುದು. ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಧಾರ್ಮಿಕ-ಸಾಮಾಜಿಕವಾಗಿ ಈ ದಿನ ಮಹತ್ವ ಪಡೆದಿದೆ.

ಬಲಿಪಾಡ್ಯ – ಗೋಪೂಜೆ

ಪ್ರಹ್ಲಾದನ ಮೊಮ್ಮಗ, ಬಲಿ ಚಕ್ರವರ್ತಿ ತಾನು ಕೈಗೊಂಡ ಅಶ್ವಮೇಧ ಯಾಗದಲ್ಲಿ ಬಂದವರಿಗೆ ಕೇಳಿದ್ದನ್ನು ಕೊಡುವ ಸಂಕಲ್ಪ ಮಾಡಿದ್ದ. ಮಹಾವಿಷ್ಣು ವಾಮನ ರೂಪದಿಂದ ಅಲ್ಲಿಗೆ ಬಂದು ಬಲಿಯಲ್ಲಿ ಮೂರು ಹೆಜ್ಜೆಗಳನ್ನು ಬೇಡಿದ. ಬಲಿ ಅದಕ್ಕೆ ಒಪ್ಪಿಗೆ ನೀಡಿದ. ಭಗವಂತ ಒಂದು ಹೆಜ್ಜೆಯಿಂದ ಆಕಾಶ, ಇನ್ನೊಂದು ಹೆಜ್ಜೆಯಿಂದ ಭೂಮಿ ಹಾಗೂ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ಅಟ್ಟಿದ. ಆತನ ದಾನÀ ಶೂರತ್ವಕ್ಕೆ ಮೆಚ್ಚಿ ‘ಬೇಕಾದ ವರ ಕೆಳು’ ಎಂದಾಗ ಬಲಿ ವರ್ಷದಲ್ಲಿ ಮೂರು ದಿನ ನನ್ನ ರಾಜ್ಯವನ್ನು ನೋಡುವ ಅವಕಾಶ ಕೊಡು, ಈ ದಿನಗಳಲ್ಲಿ ಯಾರು ದೀಪ ಬೆಳಗುವರೋ ಅವರ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿ ನೆಲೆ ನಿಲ್ಲಲಿ’ ಎಂದು ಬೇಡಿಕೊಂಡ ಪ್ರಕಾರ ವಿಷ್ಣು ‘ತಥಾಸ್ತು’ ಎಂದ.

ಮಹಾವ್ಯಕ್ತಿತ್ವಶಾಲಿ, ಪ್ರಜಾಹಿತವನ್ನೇ ಬಯಸುವವ ಬಲಿಯ ನೆನೆಪಿಗಾಗಿ ಬಲಿಪಾಡ್ಯದ ತನಕ ಮೂರು ದಿನ ಬಲೀಂದ್ರನನ್ನು ಪೂಜಿಸುವ ಪದ್ಧತಿ ಬೆಳದು ಬಂದಿದೆ. ಇಷ್ಟ ನೈವೇದ್ಯ ಅರ್ಪಿಸಿ, ಹಾಲು-ಹೈನುಗಳನ್ನು ನೀಡುವ ರೈತರ ಕೃಷಿ ಬದುಕಿಗೆ ಆಧಾರವಾದ ಗೋವನ್ನೂ ಪೂಜಿಸಿ, ಬಲಿಯನ್ನು-

ಬಲಿರಾಜನಮಸ್ತುಭ್ಯಂ, ವಿರೋಚನ ಸುತ: ಪ್ರಭೋ|
ಭವಿಷ್ಯೇಂದ್ರ ಸುರಾರಾತೇ, ಪೂಜೇಯಂ ಪ್ರತಿಗೃಹ್ಯತಾಮ್||

ಎಂದು ಪ್ರಾರ್ಥಿಸಿ, ಬಂಧು-ಬಾಂಧವರೊಂದಿಗೆ ಭೋಜನ ಸೇವಿಸಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವುದನ್ನು ಕಾಣುತ್ತೇವೆ.

ರಾಮ ಪಟ್ಟಾಭಿಷೇಕದ ದಿನ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಮರಳಿ ಪಟ್ಟಾಭಿಷೇಕಗೊಂಡ ದಿನ. ಪಾಂಡವರು ಅಜ್ಞಾತವಾಸ ಕಳೆದು ವನವಾಸ ಮುಗಿಸಿದ ದಿನ. ಕೃಷ್ಣ ಭಗವಾನ್ ಗೋವರ್ಧನ ಪರ್ವತ ಎತ್ತಿ ಹಿಡಿದ ದಿನ, ಬಲಿ ಪಾಡ್ಯ. ಗೋಶಾಲೆಯನ್ನು ಗೋವುಗಳನ್ನು ಅಲಂಕರಿಸಿ, ಗೋವುಗಳಿಗೆ ಗೋಗ್ರಾಸ, ಇಷ್ಟ ತಿನಿಸುಗಳನ್ನು ನೀಡಿ, ಗೋವುಗಳನ್ನು ಬೆಚ್ಚಿಸಿ ಬಿಡುವುದನ್ನು ಕಾಣುತ್ತೇವೆ. ಕೆಲವು ಕಡೆ ದ್ಯೂತ(ಜೂಜು)ವನ್ನು ಆಡುವುದನ್ನು ಕಾಣುತ್ತೇವೆ. ಅಳಿಯಂದಿರು ಪತ್ನಿ ಸಹಿತವಾಗಿ ಅತ್ತೆ-ಮಾವಂದಿರಿಗೆ, ಹಿರಿಯರಿಗೆ ಎರಡು ತೆಂಗಿನ ಕಾಯಿಗಳನ್ನಿಟ್ಟು ವಂದಿಸಿ, ಅವರ ಆಶೀರ್ವಾದವನ್ನು ಪಡೆಯುವ ಹಬ್ಬಗಾಣಿಕೆ ಅರ್ಪಿಸುವುದು ಈ ಹಬ್ಬದ ವಿಶೇಷವಾಗಿದೆ.

ಇದನ್ನೂ ಓದಿ: Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು; ಮತ್ತೆ ಗಿನ್ನಿಸ್‌ ದಾಖಲೆ

ಗುಡಿಸಲಿನಲ್ಲಿ ವಾಸಿಸುವನಿಂದ ಅರಮನೆಯಲ್ಲಿ ವಾಸಿಸುವವನ ತನಕ ಬೆಳಗುವ ದೀಪ, ಅದೇ ದೀಪವೆ. ಅದರ ಪ್ರಕಾಶವೂ ಒಂದೇ. ಅದರಿಂದ ಪಡೆಯುವ ಫಲವೂ ಪ್ರಾಯಃ ಭಿನ್ನ ಭಿನ್ನವಾಗಿರುವುದಿಲ್ಲ,ಒಂದೇ ಆಗಿರುವುದು.ಎಲ್ಲರೂ ಒಟ್ಟಾಗಿ ಬೆಳಗುವ ದೀಪಗಳ ಮಾಲೆಯೇ ದೀಪಾವಳಿ.ಕೆಟ್ಟದರ ವಿರುದ್ಧ ಒಳ್ಳೆಯ, ಅಂಧಕಾರದ ವಿರುದ್ಧ ಪ್ರಕಾಶದ, ಅಜ್ಞಾನದ ವಿರುದ್ಧ ಜ್ಞಾನದ ವಿಜಯದ ಪ್ರತೀಕವೇ ದೀಪಾವಳಿ. ಜೀವನದ ಪರಮ ಸತ್ಯದ ನೆಮ್ಮದಿಯ ಬದುಕಿನ ಬೆಳಕನ್ನು ಕಂಡುಕೊಳ್ಳುವ ದಿನ. ಈ ಮೂಲಕ ನಮ್ಮ ಬದುಕಿಗೆ ಇಷ್ಟ ಸಮೃದ್ಧಿಯನ್ನು ನೀಡಿದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ಮಹಾಪರ್ವ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version