Site icon Vistara News

ಸ್ಮರಣೆ: ಬಾಹ್ಯಾಕಾಶ ಸಂಶೋಧನೆಯ ತ್ರಿವಿಕ್ರಮ ಡಾ.ವಿಕ್ರಮ್ ಸಾರಾಭಾಯಿ

vikram sarabhai

:: ಡಾ. ಡಿ.ಸಿ. ರಾಮಚಂದ್ರ

ಪರಮಾಣು ಕ್ಷೇತ್ರದಲ್ಲಿ ಭಾರತ ಪರಾಕ್ರಮ ಮೆರೆಯಲು ಕಾರಣೀಭೂತರಾದವರೇ ಡಾ. ವಿಕ್ರಮ್ ಸಾರಾಭಾಯಿ (Dr Vikram A Sarabhai) . ಆಗಸ್ಟ್ 12 ಬಂತೆಂದರೆ ಸಾಕು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಅವಿಸ್ಮರಣೀಯ ದಿನ. ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಯ ಹಿಂದಿನ ಶಕ್ತಿಯಾಗಿರುವ, ಡಾ. ವಿಕ್ರಮ್ ಎ. ಸಾರಾಭಾಯಿ ಅವರ ಜನ್ಮದಿನವೂ ಹೌದು. ಇಸ್ರೊ (ISRO) ಸ್ಥಾಪನೆಯ ಹಿಂದಿನ ಈ ಚಾಲಕ ಶಕ್ತಿಗೆ ಗೂಗಲ್ ʼಡೂಡಲ್’ (google doodle) ಗೌರವವನ್ನು ನೀಡಿ ಕೈಮುಗಿದಿದ್ದು ಭಾರತೀಯರು ಸಂತಸ ಪಡುವ ವಿಚಾರ.

ಸಾರಾಭಾಯಿ ಬಾಲ್ಯ

1919ರ ಆಗಸ್ಟ್ 12ರಂದು ಅಹಮದಾಬಾದ್‍ನ ಶ್ರೀಮಂತ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದ ವಿಕ್ರಮ್ ಸಾರಾಭಾಯಿ ಗುಜರಾತ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ಕೇಂಬ್ರಿಡ್ಜ್ ವಿವಿಯಿಂದ ಡಾಕ್ಟರೇಟ್ ಪಡೆದರು. ಭಾರತಕ್ಕೆ ಮರಳಿದ ಅವರು 1947ರಲ್ಲಿ ಅಹಮದಾಬಾದ್‍ನಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಿದರು. ಬಳಿಕ ಬಾಹ್ಯಾಕಾಶ ಬಳಕೆ ಕೇಂದ್ರ ಆರಂಭಿಸಿ ಮುಂದೆ ಇಸ್ರೊ ಸ್ಥಾಪನೆಗೆ ಕಾರಣೀಭೂತರಾದರು. ಅವರ ಬದುಕಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ಮೆಲುಕು ಹಾಕುವುದಾದರೆ:

ಇಸ್ರೊಗೆ ಸ್ಪುಟ್ನಿಕ್ ಸ್ಫೂರ್ತಿ

ರಷ್ಯಾ ಸ್ಪುಟ್ನಿಕ್ ಉಪಗ್ರಹವನ್ನು ಉಡಾಯಿಸಿದಾಗ ಮೊದಲು ಕಿಚ್ಚು ಹೊತ್ತಿದ್ದು ವಿಕ್ರಮ್ ಸಾರಾಭಾಯಿ ಮನಸ್ಸಲ್ಲಿ. “ಭಾರತವೂ ಬಾಹ್ಯಾಕಾಶ ಕೇಂದ್ರ ಹೊಂದಬೇಕು. ನಮ್ಮ ಕನಸು ಚಂದ್ರನಲ್ಲಿಗೆ, ಮಂಗಳನ ಮೇಲೆ ಮನುಷ್ಯರನ್ನು ಕಳುಹಿಸುವುದಲ್ಲ. ತಂತ್ರಜ್ಞಾನದ ಮೂಲಕ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಾದರೆ ಸಾಕು,” ಎನ್ನುವುದು ಅವರ ಕಳಕಳಿಯಾಗಿತ್ತು. ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಮನವೊಲಿಸಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (ಇಂಕೊಸ್ಪಾರ್) ಸ್ಥಾಪನೆಗೆ ಕಾರಣರಾದರು. ಅದುವೇ ಮುಂದೆ ಇಸ್ರೊ ಆಯಿತು.

ಮೊದಲ ಉಡಾವಣಾ ಕೇಂದ್ರ

ಸರ್ಕಾರ ಬಾಹ್ಯಾಕಾಶ ಯೋಜನೆಗೆ ಒಪ್ಪಿದಾಗ ಡಾ. ಸಾರಾಭಾಯಿ ಅವರಿಗೆ ಬೆಂಬಲ ನೀಡಿದ್ದು ಖ್ಯಾತ ಪರಮಾಣು ವಿಜ್ಞಾನಿ ಡಾ. ಹೋಮಿ ಜಹಂಗೀರ್ ಭಾಭಾ(Homi J Bhabha) . ಕೇರಳದ ತಿರುವನಂತಪುರದ ಸೈಂಟ್ ಮ್ಯಾಗ್ದಲೀನ್ ಚರ್ಚ್ ಸಮೀಪ 1963ರಲ್ಲಿ ದೇಶದ ಮೊದಲ ಉಡಾವಣಾ ಕೇಂದ್ರ ಸ್ಥಾಪಿಸಲಾಯಿತು. ಇದನ್ನು ಇವತ್ತಿಗೂ ಭಾರತೀಯ ರಾಕೆಟ್ ತಂತ್ರಜ್ಞಾನ ಮೆಕ್ಕಾ ಅಂತಾರೆ.

ಹೋಮಿ ಜಹಾಂಗೀರ್ ಭಾಭಾ

‘ಆರ್ಯಭಟ’ನಿಗೂ ಪಿತಾಮಹ

1976ರ ಜುಲೈನಲ್ಲಿ ಭಾರತ ಗಗನಕ್ಕೇರಿಸಿದ ಮೊದಲ ಕೃತಕ ಉಪಗ್ರಹ ‘ಆರ್ಯಭಟ’ದ (Aryabhata satellite) ಕನಸುಗಾರ ಸಾರಾಭಾಯಿ. ಆದರೆ, ಅವರ ಮರಣದ 4 ವರ್ಷಗಳ ನಂತರ ಇದನ್ನು ರಷ್ಯನ್ ರಾಕೆಟ್ ಮೂಲಕ ಉಡಾಯಿಸಲಾಯಿತು.

ಮಾರ್ಕೆಟ್ ಟ್ರೆಂಡ್ ಸಂಶೋಧಕ !

ಸಾರಾಭಾಯಿ ಕೇವಲ ಒಬ್ಬ ವಿಜ್ಞಾನಿಯಲ್ಲ. ಇವತ್ತು ಜನಪ್ರಿಯವಾಗಿ ಮಾರ್ಕೆಟ್ ಟ್ರೆಂಡ್ ಅನಾಲಿಸಿಸ್‌ ಅನ್ನು 50 ವರ್ಷದ ಹಿಂದೆಯೇ ನಡೆಸಿದ್ದರು ಅವರು. ಉದ್ಯಮಕ್ಕೆ ದತ್ತಾಂಶ ವಿಶ್ಲೇಷಣೆಯ ಮೆರುಗು ಕೊಟ್ಟ ಟ್ರೆಂಡ್ ಸೆಟ್ಟರ್ ಆದರು.

ಐಐಎಂ ಅಹಮದಾಬಾದ್ ಸ್ಥಾಪಕ !

ಭಾರತದ ಸಮೃದ್ಧಿಯಲ್ಲಿ ಉದ್ಯಮದ ಪಾತ್ರವನ್ನು ಚೆನ್ನಾಗಿ ಅರಿತಿದ್ದ ಸಾರಾಭಾಯಿ ಉದ್ಯಮ ನಿರ್ವಹಣೆಯನ್ನು ಪಾಠವಾಗಿ ಕಲಿಸಲು ಕಟ್ಟಿದ್ದೇ ಐಐಎಂ ಅಹಮದಾಬಾದ್. ಇದು ದೇಶದ 2ನೇ ಐಐಎಂ.

ಡ್ಯಾನ್ಸ್ ಅಕಾಡೆಮಿಯ ಸಹಸ್ಥಾಪಕ !

1942ರಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮೃಣಾಲಿನಿ ಅವರನ್ನು ಮದುವೆಯಾದ ಸಾರಾಭಾಯಿ ದರ್ಪಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ ಸ್ಥಾಪಿಸಿದರು. ಅವರ ಕುಟುಂಬಸ್ಥರು ಡ್ಯಾನ್ಸ್ ಅಕಾಡೆಮಿ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Shivakumara Swami: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ: ಕರುಣೆಯೇ ಕಣ್ಣು ತೆರೆದಂತೆ…

ಚಂದ್ರನ ಕುಳಿಗೆ ಹೆಸರು

1974ರಲ್ಲಿ ಅಂತಾರಾಷ್ಟ್ರೀಯ ಗಗನಯಾತ್ರಿಗಳ ಒಕ್ಕೂಟ ಚಂದ್ರನ 8 ಕಿ.ಮೀ ವ್ಯಾಸದ ಕಪ್ಪು ಕುಳಿಯನ್ನು ಆವಿಷ್ಕರಿಸಿದಾಗ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಹೆಸರಿಟ್ಟದ್ದು ವಿಶೇಷ.

ಚಂದ್ರಯಾನದ ಲ್ಯಾಂಡರ್ ವಿಕ್ರಮ್

ಜುಲೈ 22ರಂದು ಇಸ್ರೊ ಉಡಾಯಿಸಿರುವ ಚಂದ್ರಯಾನ ವ್ಯೋಮ ನೌಕೆಯಲ್ಲಿರುವ ಲ್ಯಾಂಡರ್‌ಗೆ ವಿಕ್ರಮ್ ಸಾರಾಭಾಯಿ ಹೆಸರಿಡಲಾಗಿತ್ತು ಚಂದ್ರನನ್ನು ಸುತ್ತುವ ಆರ್ಬಿಟರ್ ಮತ್ತು ಚಂದ್ರನ ದಕ್ಷಿಣ ಗೋಲದ ಅಧ್ಯಯನ ನಡೆಸುವ ರೋವರ್ ನಡುವಿನ ಸಂಪರ್ಕ ಕೊಂಡಿಯಾಗಿತ್ತು. ಆದರೆ ಚಂದ್ರಯಾನದ ಕೊನೆ ಕ್ಷಣದಲ್ಲಿ ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳಕ್ಕೆ ರಭಸವಾಗಿ ಅಪ್ಪಳಿಸಿ ಸಂಪರ್ಕ ಕಳೆದುಕೊಂಡಿದ್ದು ಇಡೀ ವಿಶ್ವವೇ ಕುತೂಹಲದ ಕಡಲಲ್ಲಿ ತೇಲಾಡುವಂತೆ ಮಾಡಿದ್ದ ನೆನಪು ಇಂದಿಗೂ ಖಗೋಳ ಪ್ರಿಯರ ಮನದಲ್ಲಿದೆ.

ಬಾಹ್ಯಲೋಕಕ್ಕೆ ಮರಳಿದರು

ಭಾರತದಲ್ಲಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕೆಂಬ ಆಸೆಯಿಂದಲೇ 1971ರ ಡಿಸೆಂಬರ್ 30ರಂದು ರಷ್ಯನ್ ರಾಕೆಟ್ ಲಾಂಚ್‍ಗೆ ಸಾಕ್ಷಿ ನುಡಿದು, ತುಂಬಾ ರೈಲ್ವೇ ಸ್ಟೇಷನ್‍ಗೆ ಅಡಿಗಲ್ಲು ಹಾಕಿ ಕೇರಳದ ಹೋಟೆಲ್ ರೂಮಿನಲ್ಲಿ ಮಲಗಿದ್ದವರು ಅಲ್ಲಿಯೇ ಚಿರನಿದ್ರೆಗೆ ಜಾರಿದರು. ಭಾರತದ ಬಾಹ್ಯಕಾಶ ಲೋಕ ಬೆಳಗಲು ಬಂದಿದ್ದ ವಿಕ್ರಮ ಆಗಸದಲ್ಲಿ ಮರೆಯಾದರು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಶೋಕ ಗೀತೆಗಳ ಸಾಮ್ರಾಟ ಮುಕೇಶ್ 100ರ ನೆನಪು; ಅದು ನೋವಿನಲ್ಲಿ ಅದ್ದಿ ತೆಗೆದ ಧ್ವನಿ

Exit mobile version