Site icon Vistara News

ರಾಜ ಮಾರ್ಗ ಅಂಕಣ| 3 ವರ್ಷ ಹಾಸಿಗೆ ಮೇಲೆ ಶವದಂತೆ ಬಿದ್ದುಕೊಂಡಿದ್ದ ಈ ಮಹಾನ್‌ ನಟ ಚಿಯಾನ್ ವಿಕ್ರಮ್!

Chiyaan Vikram

ಈ ತಮಿಳು ಸಿನೆಮಾ ನಟನ ಬದುಕೇ ಒಂದು ಅದ್ಭುತವಾದ ಹೋರಾಟ. ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು ಸತತವಾದ ಸೋಲು, ಹತಾಶೆ, ನೋವು, ಸವಾಲುಗಳು ಎಲ್ಲವುಗಳನ್ನು ಗೆದ್ದುಬಂದಿರುವ ಚಿಯಾನ್ ವಿಕ್ರಮ್ ಅವರ ಬದುಕಿನಿಂದ ನಾವು ಕಲಿಯುವುದು ಬೆಟ್ಟದಷ್ಟು ಇದೆ!

ಆತನಿಗೆ ಹೆತ್ತವರು ಇಟ್ಟ ಉದ್ದವಾದ ಹೆಸರು ಜಾನ್ ಕೆನ್ನೆಡಿ ವಿನೋದ್ ರಾಜ್ ಎಂದು! ಆತನ ತಂದೆ ವಿಕ್ಟರ್ ಕೂಡ ಸಿನೆಮಾ ನಟ ಆಗುವ ಹುಚ್ಚು ತಲೆಗೇರಿಸಿಕೊಂಡು ಮನೆ ಬಿಟ್ಟು ಓಡಿ ಹೋದವರು. ಅದರಿಂದಾಗಿ ಮಗನಿಗೂ ಚಿಕ್ಕಂದಿನಿಂದ ಹೀರೊ ಆಗುವ ಕನಸು! ‘ಓದಿನ ಕಡೆ ಹೆಚ್ಚು ಗಮನ ಕೊಡು’ ಎಂದು ಅಪ್ಪ ಎಷ್ಟೇ ಬೈದರೂ ಸಿನೆಮಾ ಹುಚ್ಚು ಬಿಡಲಿಲ್ಲ.

ಸೇಲಂ ಕಾಲೇಜಿನಲ್ಲಿ ಓದುವಾಗ ಅಸಂಗತ ನಾಟಕಗಳನ್ನು ಮಾಡಿ ಹುಡುಗ ಹಲವಾರು ಬಹುಮಾನ ಗೆದ್ದಿದ್ದ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ, MBA ಮುಗಿಸಿದರೂ ಕೂಡ ಅವನ ಮನಸ್ಸು ಬೆಳ್ಳಿ ಪರದೆಯ ಕಡೆಗೆ ಇತ್ತು. ಆದರೆ ಅವನ ದುರದೃಷ್ಟ ಅವನಿಗಿಂತ ಮುಂದೆ ಇತ್ತು!

ಒಮ್ಮೆ ನಾಟಕ ಮುಗಿಸಿ ಬೈಕಲ್ಲಿ ಮನೆಗೆ ಬರುತ್ತಿದ್ದಾಗ ಭೀಕರವಾದ ಅಪಘಾತ. ಲಾರಿ ಬಂದು ಡಿಕ್ಕಿ ಹೊಡೆದು ಅವನ ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು! ದೇಹದಲ್ಲಿ ನೂರಾರು ಗಾಯಗಳು. ಬಲಗಾಲು ಪೂರ್ತಿ ಹುಡಿ ಹುಡಿ ಆಗಿತ್ತು! ವೈದ್ಯರು ಕಾಲು ಕತ್ತರಿಸಲೇ ಬೇಕು, ಇಲ್ಲವಾದರೆ ಜೀವಕ್ಕೆ ಅಪಾಯ ಅಂದರು! ಆದರೆ ಅರೆಪ್ರಜ್ಞೆಯ ಅವಸ್ಥೆಯಲ್ಲಿ ಕೂಡ ಆತ ಚೀರಿ ಹೇಳಿದ್ದ – “ನನಗೆ ಹೀರೊ ಆಗಲೇ ಬೇಕು. ಎಷ್ಟು ನೋವು ಬೇಕಾದರೂ ಸಹಿಸಿಕೊಳ್ಳಲು ನಾನು ರೆಡಿ. ಆದರೆ ಕಾಲು ಕತ್ತರಿಸುವುದು ಬೇಡ!”

ಅವನ ಹಟದ ಮುಂದೆ ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನವು ಶರಣಾಯಿತು! ಆತನ ದೇಹದಾದ್ಯಂತ 23 ಸಂಕೀರ್ಣ ಶಸ್ತ್ರಚಿಕಿತ್ಸೆಗಳು ನಡೆದವು. ಅಸಾಧ್ಯವಾದ ನೋವು ಸಹಿಸಿಕೊಂಡು ಆತ ಮೂರು ವರ್ಷ ಆಸ್ಪತ್ರೆಯ ಹಾಸಿಗೆಯಲ್ಲಿ ಶವದ ಹಾಗೆ ಬಿದ್ದುಕೊಂಡಿದ್ದ! ನಂತರ ಒಂದು ವರ್ಷ ಕ್ಲಚಸ್ ಹಿಡಿದುಕೊಂಡು ನಡೆಯಲು ಅಭ್ಯಾಸ ಮಾಡಿದ್ದ! ಹೀಗೆ ನಾಲ್ಕು ವರ್ಷಗಳ ಕಾಲ ಜಿದ್ದಿಗೆ ಬಿದ್ದು ಕಾಲು ಉಳಿಸಿಕೊಂಡು ಆತ ಮತ್ತೆ ಸಿನೆಮಾದ ಕಡೆಗೆ ಮುಖ ಮಾಡಿದ್ದ. ಆತನ ಸಂಕಲ್ಪ ಶಕ್ತಿಯ ಮುಂದೆ ದುರದೃಷ್ಟ ಕೂಡ ಸೋತಿತ್ತು!

ಮುಂದೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಆತ ಸೂಕ್ತವಾದ ಪಾತ್ರಕ್ಕಾಗಿ ಕಾದು ಕೂತ. ಸಣ್ಣ ಪುಟ್ಟ ಪಾತ್ರಗಳು, ಪೋಷಕ ಪಾತ್ರಗಳು, ಧಾರಾವಾಹಿಗಳು ಎಲ್ಲವನ್ನೂ ಮಾಡಿದ. ಜಾಹೀರಾತುಗಳನ್ನು ಕೂಡ ಮಾಡಬೇಕಾಯಿತು. ತುಂಬಾ ನಿರೀಕ್ಷೆ ಇರಿಸಿದ್ದ ಎನ್ ಕಾದಲ್ ಕಣ್ಮಣಿ ಮತ್ತು ಮೀರಾ ಎಂಬ ಎರಡು ಸಿನೆಮಾಗಳು ಸೋತು ಹೋದವು. ಖಾಲಿ ಕಿಸೆ ಮತ್ತು ಹಸಿವಿನ ತೀವ್ರತೆಗಳು ಆತನಿಂದ ಡಬ್ಬಿಂಗ್ ಕೆಲಸವನ್ನು ಮಾಡಿಸಿತು! ಆದರೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದ ಕಾದು ಕೂತ! ಮಾಡೆಲಿಂಗ್ ಮಾಡಿದ.

ಸೇತು ಚಿತ್ರದಲ್ಲಿ ಅಪೂರ್ವ ಅಭಿನಯ

1999ರ ಹೊತ್ತಿಗೆ ತಮಿಳಲ್ಲಿ ‘ಸೇತು’ ಎಂಬ ಕಡಿಮೆ ಬಜೆಟ್ ಸಿನೆಮಾ ಆರಂಭವಾಯಿತು. ವಿಕ್ರಮ್ ಆ ಸಿನೆಮಾದಲ್ಲಿ ಸವಾಲಿನ ಪಾತ್ರವನ್ನು ಮಾಡಬೇಕಾಗಿತ್ತು. ಶೂಟಿಂಗ್ ಎರಡು ವರ್ಷಗಳಷ್ಟು ದೀರ್ಘ ಕಾಲ ನಡೆಯಿತು. ವಿಕ್ರಮ್ ತನ್ನ ಪಾತ್ರಕ್ಕಾಗಿ ತಲೆಯನ್ನು ನುಣ್ಣನೆ ಬೋಳಿಸಿಕೊಂಡ. ಉದ್ದುದ್ದ ಉಗುರುಗಳನ್ನು ಬಿಟ್ಟ. ಕೇವಲ ಬೀಟ್ರೂಟ್ ರಸ, ಒಂದು ಚಪಾತಿ, ಮೊಟ್ಟೆಯ ಬಿಳಿ ತಿರುಳು ತಿಂದು ದೇಹದ ತೂಕವನ್ನು ಹದಿನಾರು ಕೆಜಿಯಷ್ಟು ಇಳಿಸಿಕೊಂಡ! ಎರಡು ವರ್ಷ ಬೇರೆ ಯಾವ ಸಿನೆಮಾ ಕೂಡ ಒಪ್ಪಿಕೊಳ್ಳದೆ ಆ ಪಾತ್ರದಲ್ಲಿ ಮುಳುಗಿಬಿಟ್ಟ! ಸೇತು ಸಿನೆಮಾ ಸೂಪರ್ ಹಿಟ್ ಆಯ್ತು! ಅಲ್ಲಿಂದ ಮುಂದೆ ವಿಕ್ರಮ್ ಸೂಪರ್ ಸ್ಟಾರ್ ಆದ! ಜನ ಅವನನ್ನು ಚಿಯಾನ್ ವಿಕ್ರಮ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು.

ಮುಂದೆ ಸಾಲು ಸಾಲಾಗಿ ಕಠಿಣ ಸವಾಲಿನ ಪಾತ್ರಗಳು! ಹುಚ್ಚ, ತಲೆಹಿಡುಕ, ರೌಡಿ, ಡಾನ್, ಬುದ್ದಿಮಾಂದ್ಯ, ಕುಡುಕ, ಪೋಲಿಸ್, ಪಿಂಪ್, ವಕೀಲ, ಸೀರಿಯಲ್ ಕಿಲ್ಲರ್, ಪತ್ತೇದಾರ, ವೃದ್ಧ, ಆದಿವಾಸಿ, ಕಾಲೇಜ್ ಲವರ್, ಮಾಡೆಲ್ ಮೊದಲಾದ ಸಂಕೀರ್ಣವಾದ ಪಾತ್ರಗಳನ್ನು ಗೆಲ್ಲಿಸಿದ!

ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಆತನಿಗೆ ಈಗ 55 ವರ್ಷ! ಆತನ ಯಶಸ್ಸಿನ ಗ್ರಾಫ್ ಇಂದಿಗೂ ಏರುಗತಿಯಲ್ಲಿ ಇದೆ. ಆತನಷ್ಟು ವೈವಿಧ್ಯಮಯವಾದ ಪಾತ್ರಗಳನ್ನು(ಕಮಲ ಹಾಸನ್ ಹೊರತುಪಡಿಸಿ) ಭಾರತದ ಯಾವ ನಟನೂ ಮಾಡಿಲ್ಲ ಎನ್ನುವುದು ವಿಕ್ರಮ್ ಹೆಚ್ಚುಗಾರಿಕೆ! ಆತನ ಸಿನೆಮಾಗಳನ್ನು ಬೇರೆ ಭಾಷೆಗೆ ರಿಮೇಕ್ ಮಾಡುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಮಾಡಿದರೂ ಸಕ್ಸೆಸ್ ಆದ ಉದಾಹರಣೆ ಕಡಿಮೆ. ಯಾಕೆಂದರೆ ವಿಕ್ರಮ್ ಪ್ರತೀ ಒಂದು ಪಾತ್ರಕ್ಕೂ ಬೇರೆ ಬೇರೆ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾನೆ. ಅವನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ನಡಿಗೆ, ನಗು, ಹಾವಭಾವ ಬೇರೆ ಬೇರೆ ಪಾತ್ರಕ್ಕೆ ಬೇರೆ ಬೇರೆ ಆಗಿರುತ್ತದೆ. ವಿಕ್ರಮ ಅಭಿನಯವನ್ನು ಯಾರಿಂದಲೂ ಕಾಪಿ ಮಾಡಲು ಸಾಧ್ಯವೇ ಇಲ್ಲ!

ಆತನ ಪಿತಾಮಗನ್, ಐ, ದಿಲ್, ಜೆಮಿನಿ, ಅರುಲ್, ಸಾಮಿ, ಆನಿಯನ್, ರಾವಣ್, ಕಿಂಗ್, ಧೂಳ್, ಕಾಸಿ, ಕಾಂತಾ, ತಿರುಮಗಲ್…ಮೊದಲಾದ ಸಿನೆಮಾಗಳನ್ನು ನೋಡಿದರೆ ವಿಕ್ರಮ್ ಎಷ್ಟು ಅದ್ಭುತ ನಟ ಎಂಬ ಅರಿವಾಗುತ್ತದೆ. ಆತನಿಗೆ ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ಬಾರಿ ರಾಜ್ಯಪ್ರಶಸ್ತಿ, ಪಿತಾಮಗನ್ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ, ತಮಿಳುನಾಡಿನಲ್ಲಿ ಮಹಾನ್ ಕಲಾವಿದರಿಗೆ ಮಾತ್ರ ನೀಡುವ ಕಲೈಮಾಮಣಿ ಪ್ರಶಸ್ತಿ, ಎಲ್ಲವೂ ಈಗಾಗಲೇ ದೊರೆತಿವೆ!

ತಾನೇ ಸ್ಥಾಪನೆ ಮಾಡಿರುವ ವಿಕ್ರಮ್ ಫೌಂಡೇಶನ್ ಮೂಲಕ ಆತ ನಡೆಸುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳು, ಹೃದಯದ ಸರ್ಜರಿಗಳು, ವಿಶೇಷ ಮಕ್ಕಳ ಶಾಲೆಗಳು, ನೇತ್ರದಾನ ಸಂಕಲ್ಪ ಶಿಬಿರಗಳು…ಇವುಗಳ ಬಗ್ಗೆ ಬರೆಯುತ್ತ ಹೋದಂತೆ ವಿಕ್ರಮ್ ನನಗೆ ವಿಶ್ವಮಾನವರಾಗಿ ಕಾಣುತ್ತಾರೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ| ಟೈಮಿಂಗ್‌ ಅಂತೀವಲ್ಲಾ.. ಏನಿದು? ಜಿಂಕೆಗೂ, ವಿರಾಟ್‌ ಕೊಹ್ಲಿಗೂ ಏನು ಸಂಬಂಧ?

Exit mobile version