Site icon Vistara News

ರಾಜ ಮಾರ್ಗ ಅಂಕಣ | ಭಾರತೀಯ ಪತ್ರಿಕಾ ರಂಗದ ಹಿಮಾಲಯ ಪರ್ವತ ಎಂ.ವಿ. ಕಾಮತ್‌ ಜೀವನ ಪಥವೂ ಮಾದರಿ

M V Kamath

ನನಗೆ ಸರಿಯಾಗಿ ನೆನಪಿದೆ ಆ ಸಂದರ್ಶನ!
ಆಗ ಉಡುಪಿಯ ಪ್ರಸಿದ್ಧ ʻಸ್ಪಂದನʼ ಟಿವಿ ವಾಹಿನಿಯಲ್ಲಿ ಸಂಜೆಯ ಹೊತ್ತು ದಿನಕ್ಕೊಂದು ಸಂದರ್ಶನ ಮಾಡುತ್ತಾ ಇದ್ದವನು ನಾನು. ಅವು ನನ್ನ ಆರಂಭದ ಹೆಜ್ಜೆಗಳು. ಆಗ 2011ರ ಆಗಸ್ಟ್ 15 ಬಂದಾಗ ಏನಾದ್ರೂ ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಟಿವಿ ಆಡಳಿತ ಮಂಡಳಿಯ ಮೀಟಿಂಗ್ ಏರ್ಪಾಡಾಗಿತ್ತು. ನಾನು ಆರಂಭ ಮಾಡಿದೆ.

1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತದ ತ್ರಿವರ್ಣ ಧ್ವಜ ಮೊದಲ ಬಾರಿಗೆ ಮೇಲೆ ಏರಿದಾಗ ಆ ಐತಿಹಾಸಿಕ ಘಟನೆಯನ್ನು ವೀಕ್ಷಿಸಿ ಪತ್ರಿಕೆಗೆ ವರದಿ ಮಾಡಿದ ಏಕೈಕ ಪತ್ರಕರ್ತ ಈಗ ಭಾರತದಲ್ಲಿ ಜೀವಂತ ಇದ್ದಾರೆ. ನಮ್ಮ ಸೌಭಾಗ್ಯ ಅವರು ಮಣಿಪಾಲದಲ್ಲಿಯೇ ಇದ್ದಾರೆ! ಎಂ.ವಿ.ಕಾಮತರ ಸಂದರ್ಶನ ಮಾಡಬಹುದು ಎಂದೆ.

ಆಗ ಆಡಳಿತ ಮಂಡಳಿ – ಅದು ಸರಿ. ಆದರೆ ಅವರಿಗೆ 90 ವರ್ಷ ತುಂಬಿದೆ. ಆರೋಗ್ಯ ಕೂಡ ಕ್ಷೀಣ ಆಗಿದೆ. ಅವರು ಒಪ್ಪುತ್ತಾರಾ? ಎಂದು ಕೇಳಿತು.

ನಾನು ಒಂದು ಪ್ರಯತ್ನ ಮಾಡಿ ನೋಡುವ ಎಂದೆ. ಮ್ಯಾನೇಜ್ಮೇಂಟ್ ಹಸಿರು ನಿಶಾನೆ ಕೊಟ್ಟ ಮುಂದಿನ ಅರ್ಧ ಗಂಟೆಯಲ್ಲಿ ನಾನು ಮಣಿಪಾಲದ ಅವರ ಮನೆಯ ಬಾಗಿಲು ತಟ್ಟಿದೆ. ಅವರೇ ಬಂದು ಬಾಗಿಲು ತೆರೆದರು. ಅತ್ಯಂತ ಸರಳ ಮನೆ. ಸರಳವಾದ ದಿರಿಸು. ಅವರಿಗೆ ನಾನು ಯಾರೆಂದು ಗೊತ್ತಿರಲಿಲ್ಲ. ಆದರೆ ನನಗೆ ಅವರು ಯಾರು, ಅವರ ಎತ್ತರ ಏನು ಎಂದು ಗೊತ್ತಿತ್ತು!

ನನ್ನ ಪರಿಚಯ ಮಾಡಿಕೊಂಡು ಆವರ ಪಾದಸ್ಪರ್ಶ ಮಾಡಿ ಅವರ ಕಾಲಬುಡದಲ್ಲಿ ಕೂತೆ. ನನಗೆ ನಿಮ್ಮ ಸಂದರ್ಶನ ಬೇಕು ಎಂದು ಕೇಳಿದೆ.

“ನೋ, ನೋ! ನಾನು ಯಾರಿಗೂ ಸಂದರ್ಶನ ಕೊಡುವುದಿಲ್ಲ. ನೀನಿನ್ನು ಹೋಗಬಹುದು! ನನಗೆ ಬೇರೆ ಕೆಲಸ ಇದೆ” ಎಂದರು.

ನನಗೆ ಮುಜುಗರ ಆಯ್ತು. ಆದರೂ ಮುಖದಲ್ಲಿ ನಗು ತುಳುಕಿಸುತ್ತ ಕೂತೆ. ಸರ್, ನಿಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಓದಿದ್ದೇನೆ ಅಂದೆ. ನರೇಂದ್ರ ಮೋದಿಯ ಬಗ್ಗೆ ಮೊದಲ ಪುಸ್ತಕ ಬರೆದವರು ನೀವು ಅಂದೆ. ನಾನು ನಿಮ್ಮ ಹಾಗೆ ವಿಜ್ಞಾನದ ವಿದ್ಯಾರ್ಥಿ. ನೀವು ನನಗೆ ಸಂದರ್ಶನ ಕೊಟ್ಟರೆ ಅದು ನನ್ನ ಜೀವಮಾನದ ಸ್ಮರಣೆ ಆಗುತ್ತದೆ ಅಂದೆ. ಸುಮಾರು ಅರ್ಧ ಗಂಟೆ ಅವರ ಕಾಲ ಬುಡದಿಂದ ಏಳಲೇ ಇಲ್ಲ!

ಅವರಿಗೆ ಎಲ್ಲಿ ಕನೆಕ್ಟ್ ಆಯ್ತೋ ಗೊತ್ತಿಲ್ಲ. ನಾಳೆ ಕ್ಯಾಮೆರಾ ತೆಗೆದುಕೊಂಡು ಬಾ ಅಂದರು. ನನಗೆ ಪ್ರಶ್ನೆ ಮೊದಲೇ ಕೊಡಬೇಕು ಎಂದು ಕಣ್ಣು ಮಿಟುಕಿಸಿ ನಕ್ಕರು. ನನ್ನ ಕನ್ನಡ ಚೆನ್ನಾಗಿಲ್ಲ ಮಾರಾಯ ಎಂದು ನನ್ನ ಭುಜ ತಟ್ಟಿದರು. ಅವರ ಆಶೀರ್ವಾದ ತೆಗೆದುಕೊಂಡು ಹೊರಟೆ.

ಮರುದಿನ ಸಂಜೆ ಅರ್ಧ ಗಂಟೆ ಮೊದಲೇ ಅವರ ಮನೆಗೆ ತಲುಪಿದ್ದೆ. ನನ್ನ ಆಶ್ಚರ್ಯ ಏನೆಂದರೆ ಕಾಮತರು ನೀಟ್ ಆಗಿ ಡ್ರೆಸ್ ಮಾಡಿಕೊಂಡು ಕೂತಿದ್ದರು. ಅವರೇ ದೋಸೆ ತಂದುಕೊಟ್ಟರು. ಬಿಸಿ ಕಾಫಿ ಕೊಟ್ಟರು. ಟಿವಿ ಕ್ಯಾಮೆರಾ ಮುಂದೆ ಬಂದು ಮುಗ್ಧವಾಗಿ ಕೂತರು.

ನನ್ನ ಮುಂದೆ ಭಾರತೀಯ ಪತ್ರಿಕಾರಂಗದ ಹಿಮಾಲಯ ಪರ್ವತವೇ ಕೂತಿತ್ತು! ನಾನು ಪತ್ರಿಕೋದ್ಯಮಕ್ಕೆ ಹೊಸಬ. ಆದರೆ ಇಡೀ ಒಂದು ಗಂಟೆ ನನಗೆ ಒಂದಿಷ್ಟೂ ಆತಂಕ, ಭಯ ಅನ್ನಿಸಲೇ ಇಲ್ಲ. ಇಡೀ ಭಾರತದ ಇತಿಹಾಸವನ್ನು ಅವರು ನನ್ನ ಮುಂದೆ ಬಿಚ್ಚಿ ಇಟ್ಟಿದ್ದರು. ಆಗ ಅವರ ವಯಸ್ಸು 90 ದಾಟಿತ್ತು! ಆಗಲೂ ಅವರ ಮೆಮೊರಿ ಅದ್ಭುತ ಆಗಿತ್ತು. ನಾನು ಬೆರಗಾಗಿ ಕೂತಿದ್ದೆ. ಆ ಸಂದರ್ಶನವು ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವ ಆಯಿತು. ಮುಂದೆ ಸೆಪ್ಟೆಂಬರ್ 7ರಂದು ಪತ್ರಿಕಾ ದಿನದಂದು ಅವರು ನನಗೆ ಎರಡನೇ ಟಿವಿ ಸಂದರ್ಶನ ಕೊಟ್ಟರು. ಅಂದು ಅವರು ಪತ್ರಿಕಾ ಮನೋಧರ್ಮದ ಬಗ್ಗೆ ನೇರವಾಗಿ ಮತ್ತು ದಿಟ್ಟವಾಗಿ ಮಾತಾಡಿದ್ದರು.

ಪತ್ರಿಕಾರಂಗದ ಶಿಶು ಆಗಿದ್ದ ನನ್ನ ಜೊತೆ ಅವರು ವ್ಯವಹರಿಸಿದ ರೀತಿ ನನಗೆ ಅದ್ಭುತವೇ ಆಗಿತ್ತು. ಇಂತಿರ್ಪ ಪದ್ಮಭೂಷಣ ಎಂ.ವಿ. ಕಾಮತರನ್ನು ಕೆಲವೇ ಶಬ್ದಗಳಲ್ಲಿ ಪರಿಚಯ ಮಾಡುವುದು ನನಗೆ ತುಂಬಾ ಕಷ್ಟ.

ಮಾಧವ ವಿಠ್ಠಲ್ ಕಾಮತರು ಮೂಲತಃ ಉಡುಪಿಯವರು. ಉಡುಪಿಯಲ್ಲಿಯೇ ಕಲಿತವರು. ಅವರು ಪಡೆದದ್ದು ವಿಜ್ಞಾನದ ಪದವಿ. ಮುಂದೆ ಮುಂಬೈಯ ಒಂದು ಪ್ರಸಿದ್ಧ ಔಷಧ ಕಂಪೆನಿಗೆ ಸೇರಿದ ಅವರು ಕೆಲವೇ ವರ್ಷಗಳಲ್ಲಿ ಅಧಿಕಾರಿ ಹುದ್ದೆಗೆ ಏರಿದರು. ನಂತರ ಅವರ ಆಸಕ್ತಿ ನಿಧಾನವಾಗಿ ಬರವಣಿಗೆ ಮತ್ತು ಪತ್ರಿಕೋದ್ಯಮದ ಕಡೆಗೆ ಹೊರಳಿತು. ಸಂಡೇ ಟೈಮ್ಸ್ ಪತ್ರಿಕೆಯ ವರದಿಗಾರರಾಗಿ, ಮುಂದೆ ಸಂಪಾದಕರಾಗಿ ಅವರು ಕೀರ್ತಿಯ ಶಿಖರವನ್ನು ಏರಿದರು. ಮುಂದೆ ILLUSTRATED WEEKLY, TIMES of INDIA ಹೀಗೆ ಅವರ ಪತ್ರಿಕಾ ಜೀವನದ ಜರ್ನಿಯು ಮುಂದುವರಿಯಿತು.

PTI ವರದಿಗಾರರಾಗಿ ಅವರು ವಾಷಿಂಗ್ಟನ್, ಜರ್ಮನಿ, ಇಂಗ್ಲೆಂಡ್, ಇನ್ನಿತರ ಹಲವು ಯುರೋಪ್ ದೇಶಗಳನ್ನು ಸುತ್ತಿ ಬಂದರು. ಇಂದಿರಾ ಗಾಂಧಿ, ಪ್ರಧಾನಿ ನೆಹರೂ, ಜಯಪ್ರಕಾಶ್ ನಾರಾಯಣ್, ಅಂಬೇಡ್ಕರ್, ಶಾಸ್ತ್ರಿ ಮೊದಲಾದ ರಾಷ್ಟ್ರೀಯ ನಾಯಕರ ಸಂದರ್ಶನ ಮಾಡಿದರು. ಸುಮಾರು ಎಪ್ಪತ್ತು ವರ್ಷ ನಿರಂತರ ಪತ್ರಕರ್ತರಾಗಿ ಕೆಲಸ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಅವರು!

ಯಾರ ಮುಲಾಜಿಗೂ ಒಳಗಾಗದೆ ನೇರವಾಗಿ ಬರೆದರು. ಇಂದಿರಾ ಗಾಂಧಿ ಬಗ್ಗೆ ಒಲವಿದ್ದ ಕಾಮತರು ಅದೇ ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ನೇರವಾಗಿ ಖಂಡಿಸಿದರು. ಎಡ, ಬಲ ಯಾವ ಇಸಮ್ಮಿಗೆ ಕೂಡ ಬಲಿ ಆಗದೆ ಬರೆಯುತ್ತ ಹೋದರು. ಪತ್ರಕರ್ತನಿಗೆ ಯಾವ ಇಸಮ್ ಕೂಡ ಇರಬಾರದು ಎಂದು ಪ್ರತಿಪಾದನೆ ಮಾಡಿದರು. ಗಾಂಧೀಜಿಯವರ ಸಿದ್ಧಾಂತಗಳನ್ನು ಒಪ್ಪಿದರು. ಅದೇ ಗಾಂಧೀಜಿಯ ಹತ್ಯೆ ಆಗಿ ನಾಥೂರಾಮ್ ಗೋಡ್ಸೆ ವಿಚಾರಣೆಯು ಕೋರ್ಟಿನಲ್ಲಿ ಆರಂಭ ಆದಾಗ ಪ್ರತೀ ದಿನದ ಕೋರ್ಟ್ ಕಲಾಪಗಳನ್ನು ಬಿಡದೆ ವರದಿ ಮಾಡಿದ್ದರು ಕಾಮತರು.

ಭಾರತದ ಎಲ್ಲ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳನ್ನು ನಿಯಂತ್ರಿಸುವ ಕೇಂದ್ರ ಸರಕಾರದ ‘ಪ್ರಸಾರ ಭಾರತಿ’ ಸಂಸ್ಥೆಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದರು. ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅವರು ಅನ್ನುವುದು ನಮಗೆ ಹೆಮ್ಮೆ.

ಐವತ್ತಕ್ಕೂ ಹೆಚ್ಚು ಶ್ರೇಷ್ಠ ಪುಸ್ತಕಗಳನ್ನು ಅವರು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಅದರಲ್ಲಿ ಮೂರು ಅತಿ ಶ್ರೇಷ್ಠ ಪುಸ್ತಕ ಎಂದು ಅವರು ನನಗೆ ಹೇಳಿದ್ದಾರೆ.
1) A Reporter at Large – ಇದು ಅವರ ಆತ್ಮಚರಿತ್ರೆಯ ಪುಸ್ತಕ
2) Gandhi – A spiritual Journey.
3) The man of the moment – Narendra Modi.

ಭಾರತ ಸರಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನನ್ನ ಸಂದರ್ಶನಗಳಲ್ಲಿ ಅವರು ಹೇಳಿದ ಒಂದೆರಡು ವಿಚಾರ ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.

‘ಪತ್ರಿಕೆಗಳು ಕೇವಲ ಸತ್ಯವನ್ನು ಮಾತ್ರ ಹೇಳಬೇಕು! ಅರ್ಧ ಸತ್ಯವನ್ನು ಅಲ್ಲ. ನಾವು ಪತ್ರಕರ್ತರು ಅಪ್ರಿಯ ಸತ್ಯವನ್ನು ಹೇಳಲು ಹೆದರಬಾರದು. ಮತ್ತೆ ತೀರ್ಪು ಕೊಡಲು ಹೊರಡಬಾರದು. ಎಲ್ಲವನ್ನೂ ಓದುಗರ ವಿವೇಚನೆಗೆ ಬಿಡಬೇಕು!’

ಕಾಮತರು 2014ರ ಅಕ್ಟೋಬರ್ 9ರಂದು ನಿಧನರಾದಾಗ ನಾನು ಮಾಡಿದ ಸಂದರ್ಶನವು ಸ್ಪಂದನ ಟಿವಿಯಲ್ಲಿ ಮರುಪ್ರಸಾರ ಆಯಿತು.

ಅಂದ ಹಾಗೆ ನಿನ್ನೆ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಕಾಮತ್ ಸರ್ ಅವರಿಗೆ ನಿನ್ನೆ (ಸೆಪ್ಟೆಂಬರ್ 7) ನೂರಾ ಒಂದು ವರ್ಷ ತುಂಬಿರುತ್ತಿತ್ತು. ಎಂ ವಿ ಕಾಮತರು ಭಾರತೀಯ ಪತ್ರಿಕಾ ರಂಗದ ಭೀಷ್ಮ ಎನ್ನುವ ಮಾತಿನಲ್ಲಿ ಒಂದಿನಿತೂ ಉತ್ಪ್ರೇಕ್ಷೆ ಇಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕಂಫರ್ಟ್ ಝೋನಿಂದ ಹೊರಬನ್ನಿ:ರೇಷ್ಮೆ ಹುಳದಿಂದ ಕಲಿಯಬೇಕಾದ ಜೀವನ ಪಾಠ!

Exit mobile version