Site icon Vistara News

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Prosecution against Siddaramaiah Hc reserves verdict after hearing arguments

ಬೆಂಗಳೂರು:ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸುದೀರ್ಘ ವಾದ -ಪ್ರತಿವಾದ ಆಲಿಸಿ ಹೈಕೋರ್ಟ್‌ ತೀರ್ಪು ಕಾಯ್ದಿಸಿರಿದೆ. ಅಂತಿಮ ತೀರ್ಪು ಬರುವವರೆಗೂ ಮಧ್ಯಂತರ ಆದೇಶ ಮುಂದುವರಿಸಿ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಮೊದಲಿಗೆ ದೂರದಾರರ ವಾದ ಆಲಿಸಿ ಬಳಿಕ ಅರ್ಜಿದಾರರ ಪ್ರತಿವಾದ ಆಲಿಸಿ ಗುರುವಾರ ಬೆಳಗ್ಗೆ ವಾದ-ವಿವಾದ ಆಲಿಸಿದ್ದ ಏಕಸದಸ್ಯ ಪೀಠವು ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಮಧ್ಯಾಹ್ನದ ನಂತರ ಶುರುವಾದ ವಿಚಾರಣೆಯಲ್ಲಿ ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಆರಂಭಿಸಿದರು. ಅಭಿಷೇಕ್‌ ಅವರು ಸುಭಾಷ್ ದೇಸಾಯಿ ಪ್ರಕರಣ ತೀರ್ಪು ಉಲ್ಲೇಖಿಸುವಾಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಇದೆಲ್ಲವೂ ಆರ್ಟಿಕಲ್ 356 ಸಂಬಂಧ ಇರುವ ತೀರ್ಪುಗಳು ಎಂದರು.

ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು. ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ, ನೇಮಕಗೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರಿಗೆ ಹೆಚ್ಚಿನ ಉತ್ತರದಾಯಿತ್ವ ಇದೆ. ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ತೀರ್ಪು ಉಲ್ಲೇಖಿಸಿದರು. 17A ಆದೇಶ ಮರುಪರಿಶೀಲನೆಗೆ ಒಳಪಡಿಸಬಹುದು. ಇಲ್ಲಿ ಸರಿಯಾದ ರಕ್ಷಣೆ ನೀಡದೇ ಇದ್ದರೆ, ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತೆ ಎಂದು ಅಭಿಷೇಕ್‌ ಮನುಸಿಂಘ್ವಿ ವಾದಿಸಿದರು.

ರಾಷ್ಟ್ರಪತಿ ಆಳ್ವಿಕೆಗಿಂತ ಇದು ಹೆಚ್ಚು ರಾಜಕೀಯ ಪ್ರೇರಿತ

ಎಂ.ಪಿ.ಪೋಲೀಸ್ ಎಸ್ಟಾಬ್ಲಿಷ್ಮೆಂಟ್ ಕೇಸ್ ಉಲ್ಳೇಖಿಸಿ ವಾದ ಮುಂದುವರಿಸಿದ ಅಭಿಷೇಕ್‌ ಮನುಸಿಂಘ್ವಿ, ಸರಿಯಾದ ಅಂಶಗಳು ಇದ್ದರೂ ರಾಜ್ಯಪಾಲರು ಅಸಂಬಂಧ ಆದೇಶ ನೀಡಿದ್ದಾರೆ ಎಂದರು. ರಾಷ್ಟ್ರಪತಿ ಆಳ್ವಿಕೆ ಹೇರಿದ ಪ್ರಕರಣಗಳು 17A ಕೇಸ್‌ಗಿಂತ ಗಂಭೀರವಲ್ಲವೇ? ಆರ್ಟಿಕಲ್ 356 ತೀರ್ಪುಗಳನ್ನು ಸೆ. 17A ಕೇಸ್‌ಗೆ ಉಲ್ಲೇಖಿಸುವುದು ಸೂಕ್ತವೇ ಎಂದು ಸಿಎಂ ಪರ ವಕೀಲ ಅಭಿಷೇಕ್‌ ಮನುಸಿಂಘ್ವಿಗೆ ನ್ಯಾಯಾಧೀಶರು ಪ್ರಶ್ನಿಸಿದರು.

ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗಿಂತ ಇದು ಹೆಚ್ಚು ರಾಜಕೀಯ ಪ್ರೇರಿತವಾಗಿದೆ. ಸೆಕ್ಷನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ ಎಂದರು. ಆಗ ಮತ್ತೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಪಾಲಿಸಲೇಬೇಕೆಂದಿಲ್ಲ. ಆದರೆ ಭಿನ್ನ ನಿಲುವಿಗೆ ಕಾರಣ ನೀಡಬೇಕೆಂಬುದು ನಿಮ್ಮ ವಾದವೇ ಎಂದು ಕೇಳಿದರು. ಸಚಿವ ಸಂಪುಟದ ನಿರ್ಧಾರವನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸು ತಪ್ಪು ಎಂದು ಹೇಳಿಲ್ಲ. ಹೀಗಾಗಿ ಕಾರಣವೇ ಹೇಳದೆ ಸಚಿವ ಸಂಪುಟದ ಕ್ರಮ ತಾರತಮ್ಯಪೂರಿತವೆನ್ನಲಾಗದು. ರಾಜ್ಯಪಾಲರು ಮಧ್ಯಪ್ರದೇಶ ಪೊಲೀಸ್‌ ಸ್ಥಾಪನಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸಿದ್ದಾರೆ. ಆದರೆ ನಮ್ಮ ಕೇಸ್‌ನಲ್ಲಿ ಇಡೀ ತೀರ್ಪು ಸಿದ್ದರಾಮಯ್ಯ ಪರವಾಗಿದೆ ಎಂದು ಸಿಂಘ್ವಿ ವಾದಿಸಿದರು.

ಯಾವುದೇ ಒಂದೇ ಒಂದು ರೀಸನ್ ನೀಡದೆ ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ಶಿಫಾರಸ್ಸಿನಲ್ಲಿ ಇಂತಹ ತಪ್ಪಿದೆ ಎಂದು ರಾಜ್ಯಪಾಲರು ಹೇಳಿಲ್ಲ. ವಿವೇಚನಾಧಿಕಾರವನ್ನು ರಾಜ್ಯಪಾಲರು ಬಾಹಿರವಾಗಿ ಬಳಸಿದ್ದಾರೆ. ಎಂ.ಪಿ. ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕೇಸನ್ನು ರಾಜ್ಯಪಾಲರು ತಪ್ಪಾಗಿ ಬಳಸಿದ್ದಾರೆ. ಪೂರ್ವಾನುಮತಿಯನ್ನು ಯಾವ ಕಾರಣದಿಂದ ನೀಡಬೇಕು ಅನ್ನೋದು ಮುಖ್ಯ. ಹೀಗಾಗಿ ರಾಜ್ಯಪಾಲರ ಆದೇಶವನ್ನು ಕೋರ್ಟ್ ಮರುಪರಿಶೀಲಿಸಬೇಕಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು. 1000 ಪುಟಗಳ ದಾಖಲೆ ಪರಿಶೀಲಿಸಿ 5 ಪುಟಗಳಲ್ಲಿ ಆದೇಶ ಹೇಳಲಾಗದು. ರಾಜ್ಯಪಾಲರ ಆದೇಶ ಓದಿದರೆ ಎಲ್ಲವೂ ಅರ್ಥವಾಗುವಂತಿರಬೇಕು. ರಾಜ್ಯಪಾಲರ ಆದೇಶದಲ್ಲಿ ಅನುಮತಿಗೆ ನೀಡುವ ಕಾರಣ ಶೂನ್ಯವಾಗಿದೆ ಎಂದು ಸಿಎಂ ಪರ ವಕೀಲ ಅಭಿಷೇಕ್‌ ಮನುಸಿಂಘ್ವಿ ವಾದಿಸಿದರು.

ಪ್ರಾಸಿಕ್ಯುಷನ್ ಅನುಮತಿಯನ್ನು ಏಕೆ ಕೊಡಲಾಗಿದೆ ಎಂಬ ಅಂಶವೇ ರಾಜ್ಯಪಾಲರ ಆದೇಶದಲ್ಲಿ ಇಲ್ಲ. ಸಿದ್ದರಾಮಯ್ಯ ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ? ಮೂಡಾ ಹಗರಣದ ಬಗ್ಗೆ ವರದಿ ನೀಡಿ ಸಿಎಸ್‌ಗೆ ರಾಜ್ಯಪಾಲರು ಕೇಳಿದ್ರೆ, ಸಿಎಸ್ ವರದಿ ನೀಡಿದ್ದು ಅದರಲ್ಲಿ ಸಿಎಂ ಪಾತ್ರ ಶೂನ್ಯವಾಗಿದೆ. ರಾಜ್ಯಪಾಲರ ಆದೇಶದಲ್ಲಿಯೂ ಅವರು ಪರಿಶೀಲಿಸಿದ ಫೈಲ್‌ಗಳ ಉಲ್ಲೇಖವಿಲ್ಲ. ಇಂತಹ ಟಿಪ್ಪಣಿಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದೇನೆಂದು ಹೇಳಿಲ್ಲ. ಕಂಪಾರಿಟೀವ್ ಚಾರ್ಟ್ ಬಗ್ಗೆಯೂ ರಾಜ್ಯಪಾಲರ ಆದೇಶದಲ್ಲಿ ಉಲ್ಲೇಖಿಸಿಲ್ಲ. ಸಿಎಂ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಉಲ್ಲೇಖಿಸಿಲ್ಲ. ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಪಾತ್ರವೇನು ಎಂದೂ ರಾಜ್ಯಪಾಲರು ಹೇಳಿಲ್ಲ. ಪಕ್ಷಪಾತದಿಂದ ರಾಜ್ಯಪಾಲರು ಕೇವಲ 6 ಆರು ಪುಟಗಳ ಆದೇಶ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಗೆ ಸೆಕ್ಷನ್ 17A ಸೇರ್ಪಡೆಗೆ ಕಾರಣವಿದೆ ಮೊದಲಿಗೆ ಲೋಕಾಯುಕ್ತ, ಲೋಕಪಾಲರ ಅನುಮತಿಗೆ ಪ್ರಸ್ತಾಪವಿತ್ತು. ಆದರೆ ನಂತರ ಸಕ್ಷಮ ಪ್ರಾಧಿಕಾರಕ್ಕೆ ಇದರ ಹೊಣೆ ನೀಡಲಾಯಿತು. ತನಿಖಾಧಿಕಾರಿಯಿಂದ ಮಾತ್ರ 17A ಅನುಮತಿ ಕೇಳಬೇಕು. ಪರ್ಯಾಯ ಮಾಡಿ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಸಿಂಘ್ವಿ ವಾದಿಸಿದರು.

ಖಾಸಗಿ ದೂರು ಪ್ರಕರಣ ದಾಖಲಿಸಲು 17A ಅಗತ್ಯವಿದೆ. ತನಿಖಾಧಿಕಾರಿ ಪಬ್ಲಿಕ್ ಸರ್ವೆಂಟ್ ಅನುಮತಿ ಪಡೆಯಲು ಹೇಗೆ ಸಾಧ್ಯ? 156 ಅಡಿ ಮಾತ್ರ ತನಿಖಾಧಿಕಾರಿ ಅನುಮತಿ ಕೇಳಲು ಸಾಧ್ಯ. ಖಾಸಗಿ ದೂರು ದಾಖಲಿಸಲು 17A ಅನುಮತಿ ಅಗತ್ಯ ಎಂದು ನಾನೇ ಆದೇಶ ಮಾಡಿದ್ದೇನೆ ಎಂದು ನ್ಯಾಯಾಧೀಶರು ತಿಳಿಸಿದರು. ಖಾಸಗಿ ದೂರಲ್ಲಿ ಪಬ್ಲಿಕ್ ಸರ್ವೆಂಟ್ ವಿರುದ್ಧ ತನಿಖೆ ಆರಂಭಿಸಲು 17A ಅಗತ್ಯವಿದೆ. ಹೀಗಿದ್ದಾಗ ತನಿಖಾಧಿಕಾರಿ ಅನುಮತಿ ಕೇಳುವ ಸಂದರ್ಭ ಹೇಗೆ ಎದುರಾಗುತ್ತೆ ಎಂದು ಪ್ರಶ್ನಿಸಿದರು. ಸೆಕ್ಷನ್ 17A ಅಡಿಯಲ್ಲಿ ಪೊಲೀಸ್ ಅಧಿಕಾರಿಯೇ ಅನುಮತಿ ಕೇಳಬೇಕು. ತನಿಖಾಧಿಕಾರಿಯೇ ತನಿಖೆಯ ಸಂಪೂರ್ಣ ಹಕ್ಕು ಹೊಂದಿರುತ್ತಾನೆ ಎಂದು ಸಿಂಘ್ವಿ ವಾದಿಸಿದಾಗ, ಪೊಲೀಸ್ ಅಧಿಕಾರಿ ದೂರು ಸ್ವೀಕರಿಸಲಿಲ್ಲವೆಂದಾದರೆ ಏನು ಮಾಡಬೇಕು? ಖಾಸಗಿ ದೂರುದಾರರಿಗೆ ಇರುವ ಮಾರ್ಗ ಯಾವುದು ಎಂದು ನ್ಯಾಯಾಧೀಶರು ಮರು ಪ್ರಶ್ನಿಸಿದರು. ನ್ಯಾಯಾಧೀಶರ ಪ್ರಶ್ನೆಗೆ ಉತ್ತರ ನೀಡಲು ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಗಲಿಬಿಲಿಗೊಂಡರು.

ಜುಲೈ 18ರಂದು ಟಿ.ಜೆ.ಅಬ್ರಹಾಂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಜುಲೈ 26ಕ್ಕೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಎಸ್‌ಪಿಗೆ ದೂರು ನೀಡಬೇಕಿತ್ತು ಅದನ್ನು ಮಾಡಿಲ್ಲ. ಖಾಸಗಿ ದೂರುದಾರರಿಗೆ ಅವಕಾಶ ನೀಡಿದರೆ ಎಲ್ಲದಕ್ಕೂ ದೂರು ದಾಖಲಿಸುತ್ತಾರೆ. ಅದಕ್ಕೆಂದೇ 17A ರಕ್ಷಣೆ ಇದೆಯಲ್ಲಾ. ಸಕ್ಷಮ ಪ್ರಾಧಿಕಾರದ ಅನುಮತಿ ಬೇಕೆಂದಿರುವುದು ಇದಕ್ಕಾಗಿಯೇ ಎಂದು ನ್ಯಾಯಾಧೀಶರು ಉತ್ತರಿಸಿದರು.

ರಾಜ್ಯಪಾಲರು ಪಕ್ಷಾತೀತರಾಗಿರಬೇಕೆಂಬ ಮಾತುಗಳು ಕೇಳಲು ಮಾತ್ರ ಇದೆ. ಹಲವು ರಾಜ್ಯಪಾಲರು ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಖಾಸಗಿ ದೂರುದಾರರು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಅವಕಾಶ ನೀಡಬಾರದು. ವಿಪಕ್ಷಗಳ ಸರ್ಕಾರಗಳ ವಿರುದ್ಧ ದೂರುಗಳು ದಾಖಲಿಸಲು ಬಳಕೆಯಾಗಬಹುದು ಎಂದು ಸಿಂಘ್ವಿ ವಾದಿಸಿದರು. ಆಗ ಮತ್ತೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಪೊಲೀಸ್ ಅಧಿಕಾರಿ ದೂರು ದಾಖಲಿಸದಿದ್ದರೆ ಏನು ಮಾಡಬೇಕು ಎಂದಾಗ ಸಿಎಂ ಪರ ವಕೀಲ ಸಿಂಘ್ವಿ ಆಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲು ಅವಕಾಶವಿದೆಯಲ್ಲಾ. ತನಿಖೆಗೆ ನಿರ್ದೇಶಿಸುವಂತೆ ಹೈಕೋರ್ಟ್ ಅನ್ನು ಕೋರಬಹುದು ಎಂದರು.

ಅದೂ ಸಾಧ್ಯವಿದೆ ಎಂದರೆ ಖಾಸಗಿ ದೂರಿಗೂ ಅವಕಾಶವಿದೆಯಲ್ಲಾ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ ದೂರುದಾರರು ರಾಜ್ಯಪಾಲರ ಮನೆ ಮುಂದೆ ನಿಲ್ಲುತ್ತಾರೆ. ರಾಜ್ಯಪಾಲರು ಎಲ್ಲರ ವಿರುದ್ಧದ ದೂರುಗಳಿಗೆ ಸಕ್ಷಮ ಪ್ರಾಧಿಕಾರಿಯಲ್ಲ. ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೋರಬಹುದು ಎಂದು ಸಿಂಘ್ವಿ ವಾದಿಸಿದರು. ಒಂದು ದೂರಿನಲ್ಲಿ ಮಾತ್ರ ಶೋಕಾಸ್ ನೋಟಿಸ್ ನೀಡಲಾಗಿದೆ.

ಉಳಿದ ಎರಡು ದೂರಿನಲ್ಲಿ ಶೋಕಾಸ್ ನೋಟಿಸ್ ನೀಡಿಲ್ಲ. ಇಲ್ಲಿ ನೈಸರ್ಗಿಕ ನ್ಯಾಯ ಉಲ್ಲಂಘನೆ ಆಗಿದೆ ಎಂದು ಅಭಿಷೇಕ್‌ ಮನುಸಿಂಘ್ವಿ ವಾದಿಸಿದರು. ರಾಜ್ಯಪಾಲರು ಉಳಿದ ಎರಡು ದೂರುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ನ್ಯಾಯಾಧೀಶರು ಕೇಳಿದಾಗ, ದೂರುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಸಿಂಘ್ವಿ ಉತ್ತರಿಸಿದರು. ಯಾರ ದೂರಿಗೂ ಶೋಕಾಸ್ ನೋಟಿಸ್ ನೀಡಿಲ್ಲದಿದ್ದರೆ ಅಗತ್ಯವಿಲ್ಲವೆನ್ನಬಹುದಿತ್ತು. ಒಬ್ಬರ ದೂರಿಗೆ ನೀಡಿ, ಇಬ್ಬರ ದೂರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ಕನ್ನಡದಲ್ಲಿ ನೂರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಒಂದೇ ಬಾರಿ ಪರಿಶೀಲಿಸಿ ಶೋಕಾಸ್ ನೊಟೀಸ್ ನೀಡುತ್ತಾರೆ. ಆದರೆ ಮತ್ತೊಂದು ಪ್ರಕರಣದಲ್ಲಿ ಟ್ರಾನ್ಸಲೇಷನ್ ಕೇಳಿ ಕಡತವನ್ನು ವಾಪಸ್ಸು ಕಳಿಸಿದ್ದಾರೆ. ಇದು ಹೇಗೆ ಸಾಧ್ಯವಾಗುತ್ತೆ? ಎಂದು ಸಿಂಘ್ವಿ ವಾದಿಸಿದರು. ರಾಜ್ಯಪಾಲರು ಸಿಎಂ ಬಿಟ್ಟು ಉಳಿದವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ. ಶಶಿಕಲಾ ಜೊಲ್ಲೆ ಕೇಸ್‌ನಲ್ಲಿ ತಿರಸ್ಕರಿಸಲಾಗಿದೆ. ಮುರುಗೇಶ್ ನಿರಾಣಿ ಕೇಸ್‌ನಲ್ಲಿ ಸ್ಪಷ್ಟನೆ ಕೇಳಿ ಹಿಂತಿರುಗಿಸಲಾಗಿದೆ. ಎಚ್‌ಡಿ ಕುಮಾರಸ್ವಾಮಿ ಕೇಸಿನಲ್ಲೂ ಹಿಂತಿರುಗಿಸಲಾಗಿದೆ.

ಈ ಪ್ರಕರಣವೆಲ್ಲವೂ ಬಿಜೆಪಿಯ ಆಡಳಿತದಲ್ಲಿ ನಡೆದಿದೆ

ಕೆಸರೆ ಗ್ರಾಮದ ಜಮೀನು 1992 ರಲ್ಲಿ ಮುಡಾಗೆ ಭೂಮಿ ಸ್ವಾಧೀನವಾಗಿತ್ತು. ದೇವರಾಜು ಎಂಬುವರು ಜಮೀನಿನ ಮಾಲೀಕರಾಗಿದ್ದರು ಎಂದು ಸಿಂಘ್ವಿ ಹೇಳಿದಾಗ, ದೇವರಾಜು ಜಮೀನಿನ ಮಾಲೀಕರು ಹೇಗಾದರು ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ 10.04.1993 ರಲ್ಲಿ ದೇವರಾಜುವಿನ ಹೆಸರಲ್ಲಿ ಫವತಿ ಖಾತೆಯಾಗಿದೆ. ನಂತರ ಜಮೀನು ಕಾನೂನಿನ ಪ್ರಕ್ರಿಯೆಯಂತೆ ಡಿನೋಟಿಫೈ ಆಗಿದೆ.

23 ವರ್ಷಗಳ ಹಗರಣದಂತೆ ದೊಡ್ಡ ದನಿಯಲ್ಲಿ ಬಿಂಬಿಸಲಾಗಿದೆ. ಇದು ಸಿಎಂ ವಿರುದ್ಧದ ಭ್ರಷ್ಟಾಚಾರ ಪ್ರಕರಣವಲ್ಲ. ಪೇಪರ್ ಮೇಲೆ ಮಾತ್ರ ಮುಡಾ ನಿವೇಶನ ಹಂಚಿಕೆಯಾಗಿದೆ. 2004 ರಲ್ಲಿ ಭಾಮೈದನಿಗೆ ಕ್ರಯ ಪತ್ರವಾಗಿದೆ. 2005 ರಲ್ಲಿ ಭೂಪರಿವರ್ತನೆ ಮಾಡಲಾಗಿದೆ. 2010 ರಲ್ಲಿ ಸಿದ್ದರಾಮಯ್ಯ ಪತ್ನಿಗೆ ದಾನಪತ್ರವಾಗಿದೆ.

ಅಕ್ರಮವಾಗಿದ್ದರೆ 5 ವರ್ಷಗಳ ನಂತರ ಯಾರಾದರೂ ದಾನಪತ್ರ ಮಾಡಿಸಿಕೊಳ್ಳುತ್ತಾರಾ? ಸಿಎಂ ಪತ್ನಿಗೆ ಮಾತ್ರ ಈ ರೀತಿಯ ಬದಲಿ ನಿವೇಶನ ಹಂಚಿಕೆಯಾಗಿಲ್ಲ. ಮುಡಾ ಸಭೆಯಲ್ಲಿ ಸಿಎಂ ಪುತ್ರ ಇದ್ದರೂ ಮಾತನಾಡಿಲ್ಲ. ದೂರು ಇರುವುದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಂದು ಅಭಿಷೇಕ್‌ ಸಿಂಘ್ವಿ ವಾದಿಸಿದರು. ಮೂಡಾ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 50 :50 ಅನುಪಾತದಲ್ಲಿ ನಿವೇಶನ ಹಂಚಿಕೆ ಬಗ್ಗೆ ನಿರ್ಧಾರವಾಗಿದೆ. ಇಡೀ ಪ್ರಕರಣ ಬಿಜೆಪಿಯ ಆಡಳಿತದಲ್ಲಿ ನಡೆದಿದೆ ಎಂದು ಹೇಳಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ ಮನುಸಿಂಘ್ವಿ ವಾದ ಮುಕ್ತಾಯಗೊಳಿಸಿದರು.

ಟಿ.ಜೆ.ಅಬ್ರಹಾಂರನ್ನು ಪ್ರೀತಿಯಿಂದ ಕರೆದು ಮಾತಾಡಿ ಆದೇಶ ಮಾಡಲಾಗಿದೆ- ರವಿವರ್ಮ ಕುಮಾರ್

ಸಿದ್ದರಾಮಯ್ಯ ಪರ ಹಿರಿಯ ವಕೀಲ ಫ್ರೋ ರವಿವರ್ಮ ಕುಮಾರ್ ವಾದ ಮಂಡನೆ ಶುರು ಮಾಡಿದರು. ಆಗಸ್ಟ್‌ 14ರಂದು ಅಬ್ರಹಾಂ ಅವರಿಂದ ಹೆಚ್ಚುವರಿ ಮಾಹಿತಿ ಪಡೆಯಲಾಗಿದೆ. ನಂತರ ಸ್ಯಾಂಕ್ಷನ್ ನೀಡಿ ಆದೇಶ ಮಾಡಲಾಗಿದೆ. 05/07 ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ರಾಜ್ಯಪಾಲರು ಟಿ.ಜೆ.ಅಬ್ರಹಾಂ ಅವರನ್ನು ಪ್ರೀತಿಯಿಂದ ಕರೆದು ಮಾತಾಡಿ ಆದೇಶ ಮಾಡಲಾಗಿದೆ. ಸ್ನೇಹಮಯಿ ಕೃಷ್ಣ ಅವರಿಂದ ಯಾವುದೇ ಸಮಜಾಯಿಸಿ ಕೇಳಿಲ್ಲ, ಪ್ರದೀಪ್ ಕುಮಾರ್ ಅವರಿಂದಲೂ ಯಾವುದೇ ಮಾಹಿತಿ ಕೇಳಿಲ್ಲ. ಕಾನೂನು ಸಲಹೆ ಪಡೆದು ಸಿದ್ದರಾಮಯ್ಯ ಅವರಿಂದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಈ ಮಧ್ಯೆ ರಾಜ್ಯಪಾಲರು ವಿವೇಚನೆ ಬಳಸಿ ಆದೇಶ ಮಾಡಲಾಗಿದೆ ಎಂದು ಬರೆದಿದ್ದಾರೆ.

ಒಬ್ಬ ಭಕ್ತ ಕೈಲಾಸಕ್ಕೆ ಹೋಗಬೇಕೋ ಅಥವಾ ವೈಕುಂಠಕ್ಕೆ ಹೋಗಬೇಕಾ ಅಂತ ಯೋಚನೆ ಮಾಡಿದ್ದ. ಈ ವೇಳೆ ಲೋಲಾಕ್ ಧರಿಸಿದ್ದ. ಲೋಲಾಕ್ ಸ್ಪರ್ಷಿಸುತ್ತಿದ್ದಂತೆ ವಿಷ್ಣು ನೆನಪಾಗುತ್ತಿದ್ದ. ಅಂತಿಮವಾಗಿ ಕೈಲಾಸಕ್ಕೆ ಹೋಗದೇ ಆತ ವೈಕುಂಠಕ್ಕೆ ಹೋದ ಎಂದು ಪುರಾಣದ ಕಥೆಯನ್ನು ಉಲ್ಲೇಖಿಸಿ ರಾಜ್ಯಪಾಲರು ಸಂಪುಟದ ವರದಿಯ ಪೀಡನೆಗೆ ಒಳಗಾಗಿದ್ದಾರೆ.

ವಿಚಾರಣೆ ಆರಂಭವಾದ ಬಳಿಕ ರಾಜ್ಯಪಾಲರ ಕಡತವನ್ನು ಸಲ್ಲಿಸಲಾಗಿದೆ. ಅಕ್ರಮ ಮತ್ತು ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದು ರಾಜ್ಯಪಾಲರ ಉಲ್ಲೇಖವಿದೆ. ಸಹಿ ಹಾಕಿದ ಬಳಿಕ ಶೋಕಾಸ್ ನೋಟಿಸ್ ನೀಡಿದ್ದಾರೆ. 14.08.2024 ರಂದು ಫೈಲ್ ಪರಿಶೀಲಿಸಿದ್ದೇನೆ, ಡಿಕ್ಟೇಷನ್ ನೀಡಿದ್ದೇನೆ ಎಂದು ಬರೆಯಲಾಗಿದೆ. ಟಿ.ಜೆ.ಅಬ್ರಹಾಂ ಜು. 26ರಂದು ನೀಡಿದ ದೂರಿನ ಮೇಲೆ ಫೈಲ್ ಸಿದ್ದಪಡಿಸಲಾಗಿದೆ. ಜು. 5 ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ಕಡತದಲ್ಲಿ ಅದರ ಉಲ್ಲೇಖವಿಲ್ಲವೆಂದು ರವಿಕುಮಾರ್‌ ವಾದಮಂಡನೆ ಮಾಡಿದರು. ಸಚಿವ ಸಂಪುಟದ ಆದೇಶ ತಿರಸ್ಕರಿಸಿದ ನಂತರ ರಾಜ್ಯಪಾಲರು ಏನು ಮಾಡಿದ್ದಾರೆ. ಸಿಎಂ ನೀಡಿದ ಉತ್ತರಕ್ಕೂ ರಾಜ್ಯಪಾಲರು ಪ್ರತಿಕ್ರಿಯೆ ನೀಡಿಲ್ಲ. ಎರಡು ವರ್ಷನ್‌ಗಳನ್ನು ಪರಿಗಣಿಸಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. 1. ಮೇಲ್ನೋಟಕ್ಕೆ ಕಾನೂನು ಬಾಹಿರ ಕೃತ್ಯ ನಡೆದಿದ್ದು ವಿವೇಚನೆ ಬಳಸಿ ಸ್ಯಾಂಕ್ಷನ್ ನೀಡಲಾಗಿದೆ. 2. ಲೀಗಲ್ ಓಪಿನಿಯನ್ ಹಾಗೂ ಕ್ಯಾಬಿನೆಟ್ ಆದೇಶ ಪರಿಶೀಲಿಸಿ ಸ್ವತಂತ್ರವಾಗಿ ನಿರ್ಧಾರ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯಪಾಲರ ಆದೇಶವೇ ಕಾನೂನುಬಾಹಿರ

28 ವರ್ಷಗಳ ಹಿಂದೆ ನಿಂಗ ಸಾವನ್ನಪ್ಪಿದ್ದಾನೆ. ನಿಂಗನ ಹೆಸರಿಗೆ ಜಮೀನು ಅವಾರ್ಡ್ ಆಗಿತ್ತು. ಯಾವಾಗ ಮೂಡಾ ಈ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ದೂರು ನೀಡಿಲ್ಲ ಎಂದು ರವಿವರ್ಮ ವಾದಿಸಿದಾಗ, ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಆದರೆ ಎಲ್ಲಾ ದಾಖಲೆಗಳಲ್ಲಿಯೂ ಈ ಜಾಗ ಮೂಡಾ ವಶದಲ್ಲಿ ಇದೆ ಎಂದು ಹೇಳುತ್ತಿವೆ ಎಂದರು. ಆದರೆ, ಈ ಜಾಗ ಮೂಡಾ ವಶದಲ್ಲಿ ಇಲ್ಲ ಅನ್ನೋದಕ್ಕೆ‌ ದಾಖಲೆಗಳು ನನ್ನ ಬಳಿ ಇವೆ ಎಂದು ರವಿವರ್ಮ ಕುಮಾರ್ ವಾದಿಸಿದರು.

ರಾಜ್ಯಪಾಲರ ಆದೇಶದಲ್ಲಿ 25 ಸೆಕ್ಷನ್‌ಗಳನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ಫೋರ್ಜರಿ ಮತ್ತಿತರ ಸೆಕ್ಷನ್ ಉಲ್ಲೇಖಿಸಿದ್ದಾರೆ. ಆದರೆ ಸಿಎಂ ಫೋರ್ಜರಿ ಮಾಡಿದ್ದಾರಾ ಎಂಬುದಕ್ಕೆ ಉತ್ತರವಿಲ್ಲ. ಜಮೀನು ಸ್ವಾಧೀನವಾದ ಬಳಿಕ ಪರಿಹಾರದ ನೋಟಿಸ್ ವಿಳಂಬವಾಗಿ ತಲುಪಿದೆ. ಮುಡಾ ಜಮೀನನ್ನು ಭೌತಿಕವಾಗಿ ಸ್ವಾಧೀನಕ್ಕೆ ಪಡೆದಿರಲಿಲ್ಲ. ನಂತರ ಸೆ.48 ಅಡಿ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಮಹಜರ್ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ಆದರೂ ರಾಜ್ಯಪಾಲರು ಮುಡಾ ಸ್ವಾಧೀನದಲ್ಲಿತ್ತು ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶವೇ ಕಾನೂನುಬಾಹಿರವಾಗಿದೆ.

ಜುಜುಬಿ ಸೈಟ್‌ಗೆ ಅಕ್ರಮ ಮಾಡ್ತಾರಾ

ಅಂತಿಮ ಭೂಸ್ವಾಧೀನದ ನಂತರ ಜಮೀನು ಮುಡಾ ಸ್ವಾಧೀನಕ್ಕೆ ಹೋಗುತ್ತದಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಇಲ್ಲ ಪ್ರಕ್ರಿಯೆ ಪಾಲಿಸದಿರುವುದರಿಂದ ಸ್ವಾಧೀನಕ್ಕೆ ಹೋಗುವುದಿಲ್ಲ ಎಂದು ರವಿಕುಮಾರ್‌ ಉತ್ತರಿಸಿದರು. ಸ್ವಾಧೀನದಲ್ಲಿ ಇದ್ದಿದ್ದಾದರೆ ಮುಡಾ ಲೇಔಟ್ ರಚಿಸಲು ಹೇಗೆ ಬಿಟ್ಟಿರಿ? ನೀವು ಏಕೆ ಮುಡಾ ಬಡಾವಣೆ ವಿರೋಧಿಸಲಿಲ್ಲಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಮುಡಾ ಬಡಾವಣೆ ನಕ್ಷೆಯಲ್ಲಿ ನಮ್ಮ ಜಮೀನು ಇರಲಿಲ್ಲ. ಹೀಗಾಗಿ ನಾವು ಅದನ್ನು ವಿರೋಧಿಸುವ ಅಗತ್ಯವಿರಲಿಲ್ಲ. ಇದರಲ್ಲಿ ಸಿಎಂ ಪಾತ್ರವೇನು ಎಂಬುದಕ್ಕೆ ಯಾರೂ ಉತ್ತರಿಸಿಲ್ಲ. ಜಮೀನು ಮುಡಾ ಸ್ವಾಧೀನದಲ್ಲಿತ್ತು ಎಂಬ ಭಾವನೆ ಆಧಾರದಲ್ಲಿ ರಾಜ್ಯಪಾಲರು ಆದೇಶಿಸಿದ್ದಾರೆ. ಕಳೆದ 50 ವರ್ಷದ ಇತಿಹಾಸವನ್ನು ನೀವು ನೋಡಬಹುದು. ಸಿದ್ದರಾಮಯ್ಯ ಒಬ್ಬರೇ 5 ವರ್ಷ ಸಂಪೂರ್ಣ ಅಧಿಕಾರದಲ್ಲಿದ್ದರು. ಈಗ ಮತ್ತೆ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಮೇಲೆ ಯಾವುದೇ ಆರೋಪವೂ ಕೇಳಿ ಬಂದಿಲ್ಲ. ಒಂದು ಜುಜುಬಿ ಸೈಟ್‌ಗೆ ಅಕ್ರಮ ಮಾಡ್ತಾರಾ ಎಂದು ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದರು. ಆ ಸೈಟ್‌ ಬೆಲೆ 55 ಕೋಟಿ ರೂ. ಆಗಿದೆ ಎಂಬುದೇ ತಕರಾರು ಎಂದು ನ್ಯಾಯಾಧೀಶರು ತಿಳಿಸಿದರು. ಒಂದು ಸರ್ಕಾರ ಇದ್ದಾಗ ಹಲವರಿಗೆ ಸಹಕಾರ ಆಗಬಹುದು. ಅವರ ಸಂಬಂಧಿಕರಿಗೆ ಅನುಕೂಲ ಆಗಿರಬಹುದು. ಅದಕ್ಕೆ ಈ ರೀತಿ ಸ್ಯಾಂಕ್ಷನ್ ನೀಡಬಹುದೇ? ಎಂದು ರವಿವರ್ಮ ವಾದಿಸಿದಾಗ, ಅದು ಸ್ಯಾಂಕ್ಷನ್ ಅಲ್ಲ, ಅಪ್ರೂವಲ್ ಎಂದು ನ್ಯಾಯಾಧೀಶರು ತಿಳಿಸಿದರು.

ರಾಜಕೀಯ ದುರುದ್ದೇಶ

ಕೆಸರೆ ಗ್ರಾಮವೇ ಇಲ್ಲ ಎಂದು ದೂರುದಾರರು ಹೇಳಿದ್ದಾರೆ ಎಂದಾಗ 2011ರಲ್ಲಿ ಜನಗಣತಿ ಪ್ರಕಾರ ಕೆಸರೆ ಗ್ರಾಮ ಇದೆ. ಈ ಗ್ರಾಮದಲ್ಲಿ 4 ಸಾವಿರ ಎಕರೆ ಭೂಮಿ, ಸ್ಕೂಲ್ ಹಾಗೂ ಆಸ್ಪತ್ರೆ ಇದೆ. ಮೈಸೂರು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಈ ಗ್ರಾಮ ಇದೆ. 60:40 ಗೆ ಅವರ ತಕರಾರಿಲ್ಲ, 50:50 ಅನುಪಾತಕ್ಕೆ ತಕರಾರಿದೆ. ಪರಿಹಾರದ ನಿವೇಶನ ಕೊಟ್ಟಿರುವುದು ಸಿದ್ದರಾಮಯ್ಯ ಅಲ್ಲ ಮುಡಾ ಪ್ರಾಧಿಕಾರ. ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಬಾರದಿತ್ತು. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ . ಅಧಿಕಾರದಲ್ಲಿದ್ದಾಗ ಸಂಬಂಧಿಕರು, ಅಧಿಕಾರಿಗಳು ಅಸೂಯೆಯಿಂದ ಏನಾದರೂ ಮಾಡಿರಬಹುದು. ಅದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಪರ ಪ್ರೊ. ರವಿವರ್ಮಕುಮಾರ್ ವಾದಮಂಡನೆ ಮುಕ್ತಾಯಗೊಳಿಸಿದರು.

ಬಳಿಕ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಆರಂಭಿಸಿದರು. ತನಿಖಾಧಿಕಾರಿಗೆ ಕಾಗ್ನಿಜೇಬಲ್ ಪ್ರಕರಣ ಅನ್ನಿಸಿದಾಗ ಮಾತ್ರ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಅದಕ್ಕೆ ನಾನು ಡಾ.ಅಶೋಕ್ ಪ್ರಕರಣದಲ್ಲಿ ಅನುಮತಿ ಇಲ್ಲದೆ ಪಬ್ಲಿಕ್ ಸರ್ವೆಂಟ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬಾರದು ಅಂತ ಆದೇಶ ಮಾಡಿರುವುದು ಎಂದು ಎಜಿ ವಾದ ಮುಕ್ತಾಯಗೊಳಿಸಿದರು. ಕೇಂದ್ರ ಸರ್ಕಾರದ ಎಸ್ಓಪಿ ಪ್ರಕಾರ 17A ಅಡಿ ಪೂರ್ವಾನುಮತಿಯನ್ನ ತನಿಖಾಧಿಕಾರಿ ಪಡೆಯಬೇಕು. ಈ ಹಂತದಲ್ಲಿ ಪೂರ್ವಾನುಮತಿ ನೀಡಲು ಸಾಧ್ಯವಿಲ್ಲ, ಇಟ್ಸ್ ಪ್ರಿಮೆಚುರ್ ಎಂದಾಗ ಯಾವಾಗ ಪೂರ್ವಾನುಮತಿ ನೀಡಬೇಕಿತ್ತು ಎಂದು ಜಡ್ಜ್ ಪ್ರಶ್ನಿಸಿದರು. ಲಲಿತಾ ಕುಮಾರಿ ಪ್ರಕಾರ ತನಿಖಾಧಿಕಾರಿ ಪಡೆಯಬೇಕು ಎಂದೇಳಿ ಎಜಿ ವಾದ ಮುಕ್ತಾಯಗೊಳಿಸಿದರು.

ಟಿ.ಜೆ.ಅಬ್ರಹಾಂ ಪರ ರಂಗನಾಥ್ ರೆಡ್ಡಿ ವಾದ ಆರಂಭಿಸಲು ಮುಂದಾದಾಗ ಕೇವಲ 5 ನಿಮಿಷದಲ್ಲಿ ವಾದ ಮುಗಿಸಬೇಕು. ಈಗಾಗಲೇ ಹೇಳಿದ ವಿಷಯ ಪ್ರಸ್ತಾಪಿಸಬಾರದು ಎಂದು ಜಡ್ಜ್‌ ಸೂಚನೆ ಕೊಟ್ಟರು. ಸಿಎಂ ಪರ ವಕೀಲರು ಒಂದೆಡೆ ಕೃಷಿ ಜಮೀನು ಅಂತಾರೆ. ಮತ್ತೊಂದೆಡೆ ಮುಡಾ ಜಮೀನು ಒತ್ತುವರಿ ಮಾಡಿದೆ ಎನ್ನುತ್ತಿದ್ದಾರೆ. ಎರಡೆರಡು ರೀತಿಯಲ್ಲಿ ಸಿಎಂ ಪರ ವಕೀಲರು ವಾದಿಸಿದ್ದಾರೆ. ಪ್ರಕ್ರಿಯೆ ಪಾಲಿಸದೇ ಹಣವನ್ನು ಠೇವಣಿ ಇಡುವುದು ಸಾಧ್ಯವಿಲ್ಲ. ದೇವನೂರು ಬಡಾವಣೆಯ ಜಮೀನಿಗೆ ವಿಜಯನಗರದಲ್ಲಿ ಬದಲಿ ನಿವೇಶನ ನೀಡಲಾಗಿದೆ. ಚಿಂತಾಮಣಿಯ ಜಮೀನಿಗೆ ಸದಾಶಿವನಗರದಲ್ಲಿ ನಿವೇಶನ ಕೊಟ್ಟಂತಾಗಿದೆ ಎಂದು ವಾದ ಮುಗಿಸಿದರು. ಈ ವೇಳೆ ನಾಳೆಯೂ ವಾದ ಮಾಡಲು ರವಿವರ್ಮಾ ಕುಮಾರ್ ಅವಕಾಶ ಕೇಳಿದರು.

ಸುದೀರ್ಘ ವಾದ -ಪ್ರತಿವಾದ ಆಲಿಸಿ ಕೋರ್ಟ್‌ ತೀರ್ಪು ಕಾಯ್ದಿಸಿರಿದೆ. ಅಂತಿಮ ತೀರ್ಪು ಬರುವವರೆಗೂ ಮಧ್ಯಂತರ ಆದೇಶ ಮುಂದುವರಿಸಿ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

Exit mobile version