Site icon Vistara News

Explainer: ಜ್ಞಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ, ಮಂದಿರ ಪರ ಇನ್ನೊಂದು ಪುರಾವೆ?

Supreme Court On Gyanvapi Case

Gyanvapi Case: Supreme Court allows ASI survey without excavation

ವಾರಾಣಸಿ: ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆಸುತ್ತಿರುವ ಕಮಿಷನರ್‌ ನೇತೃತ್ವದ ವಿಡಿಯೋ ಸಮೀಕ್ಷೆ ಇನ್ನೊಂದು ಹಂತಕ್ಕೆ ಹೋಗಿದೆ. ಸಮೀಕ್ಷೆಯ ಸಂದರ್ಭದಲ್ಲಿ ಮಸೀದಿಯ ಕೊಳವನ್ನು ಖಾಲಿ ಮಾಡಿದಾಗ ಅಲ್ಲಿ ಶಿವಲಿಂಗ ದೊರೆತಿದೆ ಎಂದು ಹಿಂದೂ ಕಕ್ಷಿದಾರರ ಪರ ವಕೀಲರು ತಿಳಿಸಿದ್ದಾರೆ. ಈ ವಿಚಾರವನ್ನು ಕೋರ್ಟ್‌ನ ಗಮನಕ್ಕೆ ತರಲಾಗಿದೆ. ಇದನ್ನು ಅನುಸರಿಸಿ ಕೊಳವನ್ನು ಸೀಲ್‌ ಮಾಡಲು ಕೋರ್ಟ್‌ ಆದೇಶ ನೀಡಿದೆ. ನಮಾಜ್‌ಗೆ ಮುನ್ನ ಕೈಕಾಲು ತೊಳೆದು ಶುಚಿಯಾಗಲು (ವುಝು) ಈ ಕೊಳವನ್ನು ಮುಸ್ಲಿಮರು ಬಳಸುತ್ತಿದ್ದರು.
ಆದರೆ ಕೊಳದಲ್ಲಿ ಪತ್ತೆಯಾದುದು ಶಿವಲಿಂಗವಲ್ಲ, ಅದು ಕಾರಂಜಿಯ ಒಂದು ಭಾಗ ಎಂದು ಮಸೀದಿಯ ಆಡಳಿತ ಮಂಡಳಿಯ ಕಡೆಯವರು ಹೇಳಿದ್ದಾರೆ.
ಈ ಕುರಿತು ಇನ್ನಷ್ಟು ಸ್ಪಷ್ಟ ಚಿತ್ರಣ ಇನ್ನಷ್ಟೇ ಸಿಗಬೇಕಿದೆ. ಈಗ ಲಭ್ಯವಾಗಿರುವ ದಾಖಲೆಗಳನ್ನು ಪರಿಗಣಿಸಿ, ಇನ್ನಷ್ಟು ಸಮೀಕ್ಷೆ ಅಥವಾ ಉತ್ಖನನವನ್ನು ಭಾರತೀಯ ಪುರಾತತ್ವ ಇಲಾಖೆಯ ಮೂಲಕ ನಡೆಸಬೇಕೇ ಬೇಡವೇ ಎಂಬುದನ್ನು ಕೋರ್ಟ್‌ ತೀರ್ಮಾನಿಸಬೇಕಿದೆ.
ಶಿವಲಿಂಗ ಪತ್ತೆಯು ಈಗ ಮಸೀದಿಯಿರುವ ಜಾಗದಲ್ಲಿ ವಿಶ್ವನಾಥನ ಮಂದಿರವಿತ್ತು ಎಂಬುದನ್ನು ಸಾಧಿಸಲು ಪೂರಕ ಸಾಕ್ಷ್ಯಾಧಾರವಾಗಿದೆ ಎಂದು ಹಿಂದೂಪರ ಕಕ್ಷಿದಾರರು ಹೇಳಿದ್ದಾರೆ. ಹಾಗಿದ್ದರೆ ಇದನ್ನು ಸಮರ್ಥಿಸುವ ಇತರ ಸಾಕ್ಷಿಗಳು ಯಾವುವು?

ಜ್ಞಾನವಾಪಿ
ಇದೊಂದು ಬಾವಿ. ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಜ್ಞಾನದ ಬಾವಿ ಎಂಬುದು ಇದರ ಅಕ್ಷರಾರ್ಥ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ಒಂದು ಬಾವಿ ಕಡ್ಡಾಯವಾಗಿ ಇರುತ್ತದೆ. ಶಿವಲಿಂಗಕ್ಕೆ ನಿತ್ಯ ಅಭಿಷೇಕ ಮಾಡಲು ಈ ಬಾವಿಯ ನೀರನ್ನು ಬಳಸಲಾಗುತ್ತದೆ. ಸದ್ಯ ಈ ಬಾವಿಯನ್ನು ಮಂದಿರ ಹಾಗೂ ಮಸೀದಿಗಳು ಹಂಚಿಕೊಂಡಿವೆ.
ಹಿಂದೆ ಮುಸ್ಲಿಂ ರಾಜರ ದಾಳಿಯಾದಾಗ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರೊಬ್ಬರು ಶಿವಲಿಂಗ ಅಪವಿತ್ರವಾಗದಂತೆ ಅದನ್ನು ತೆಗೆದುಕೊಂಡು ಬಂದು ಈ ಬಾವಿಗೆ ಎಸೆದು ರಕ್ಷಿಸಿದರು ಎಂದು ಕತೆಯಿದೆ.

ಶೃಂಗಾರ ಗೌರಿ
ಮಸೀದಿಯ ಪಶ್ಚಿಮ ಭಾಗದ ಗೋಡೆಯಲ್ಲಿ ಶೃಂಗಾರ ಗೌರಿಯ ಮೂರ್ತಿಯಿದೆ. ಇಲ್ಲಿ ಈಗ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶವಿದೆ. ಈ ಮೊದಲು ಪ್ರತಿನಿತ್ಯ ಪೂಜೆಗೆ ಅವಕಾಶವಿತ್ತು. ಮತ್ತೆ ನಿತ್ಯಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿ ನಾಲ್ವರು ಹಿಂದೂ ಮಹಿಳೆಯರು ಕೋರ್ಟ್‌ಗೆ ಹೋಗಿದ್ದು, ಅದಕ್ಕೆ ಸಂಬಂಧಿಸಿದ ಕೇಸ್‌ ಈಗ ನಡೆಯುತ್ತಿರುವುದು.
ಶೈವ ದೇವಾಲಯಗಳು ಇರುವಲ್ಲಿ ಪ್ರತ್ಯೇಕವಾಗಿ ಆತನ ಪತ್ನಿ ಗೌರಿಯ ಪೂಜೆಗಾಗಿ ಒಂದು ಗುಡಿ ಇರುವುದು ವಾಡಿಕೆ. 8ನೇ ಶತಮಾನದಲ್ಲಿ ಶ್ರೀ ಶಂಕರಾಚಾರ್ಯರು ತಂದ ಪಂಚಾಯತನ ಪೂಜಾ ಪದ್ಧತಿಯ ಪ್ರಕಾರ ಶಿವ, ಗೌರಿ, ಗಣಪತಿ, ಸೂರ್ಯ ಹಾಗೂ ವಿಷ್ಣುವಿನ ಪೂಜೆಗಳು ಒಂದು ದೇವಾಲಯ ಪ್ರಾಕಾರದಲ್ಲಿ ನಡೆದುಕೊಂಡು ಬರುತ್ತವೆ. ಹೀಗೆ ನಿರ್ಮಾಣವಾದ ಗೌರಿಯ ಗುಡಿಯಿರಬೇಕು ಇದು. ಇಂದು ಈ ವಿಗ್ರಹ ಮಸೀದಿ ಇರುವ ಭಾಗದಲ್ಲಿದೆ.

ನಂದಿ ವಿಗ್ರಹ
ಗರ್ಭಗುಡಿಯಲ್ಲಿ ಇರುವ ಶಿವಲಿಂಗಕ್ಕೆ ಮುಖಾಮುಖಿಯಾಗಿ ನಂದಿಯ ವಿಗ್ರಹ ಇರುವುದು ಪುರಾತನ ರೂಢಿ. ಇಲ್ಲಿ ಸ್ಥಾಪಿಸಲಾಗಿರುವ ನಂದಿಯ ವಿಗ್ರಹ, ಮಸೀದಿಯತ್ತ ಮುಖ ಮಾಡಿದೆ. ಆದ್ದರಿಂದ ಅಲ್ಲಿ ವಿಶ್ವನಾಥನ ಗರ್ಭಗುಡಿ ಇದ್ದಿರಬಹುದು ಎಂಬುದು ಒಂದು ತರ್ಕ.

ಶೇಷನಾಗ
ಮಸೀದಿಗೆ ಅಂಟಿಕೊಂಡಿರುವ, ಸಂಪೂರ್ಣ ಶಿಥಿಲವಾಗಿರುವ ಪಶ್ಚಿಮ ಭಾಗದ ಗೋಡೆಯು ಸಂಪೂರ್ಣವಾಗಿ ದೇವಾಲಯ ವಾಸ್ತುಶಿಲ್ಪವನ್ನು ಹೊಂದಿದೆ. ಇದಲ್ಲದೆ ಈ ಗೋಡೆಯಲ್ಲಿ ಶೇಷನಾಗನ ಚಿತ್ರಣವಿದೆ. ಈ ಶೇಷನಾಗ ಹಿಂದೂ ಪುರಾಣ ಪರಿಕಲ್ಪನೆಯಲ್ಲಿ ಶಿವ ಹಾಗೂ ವಿಷ್ಣುವಿನೊಂದಿಗೆ ತಳುಕು ಹಾಕಿಕೊಂಡ ಸರ್ಪದೇವತೆ. ಆದಿಶೇಷ ಭೂಮಿಯನ್ನು ಹೊತ್ತುಕೊಂಡವನು, ಅವನು ಶಿವ ಕೊರಳಲ್ಲಿಯೂ ಆಭರಣವಾಗಿ ಇರುವವನು, ಮಹಾವಿಷ್ಣುವಿನ ಹಾಸಿಗೆಯಾಗಿ ಇರುವವನು ಎಂಬುದು ಪುರಾಣ.

ದೇವಾಲಯ ಸಂಕೀರ್ಣ
ವಾರಾಣಸಿಯ ಕಾಶಿ ಶ್ರೀ ವಿಶ್ವನಾಥ ದೇವಾಲಯ ಇರುವ ಪ್ರದೇಶ, ಪುರಾತನ ಕಾಲದಲ್ಲಿ ಹತ್ತು ಹಲವಾರು ದೇವಾಲಯಗಳು ಇದ್ದ ದೊಡ್ಡದಾದ ಸಂಕೀರ್ಣ. ಇದರಲ್ಲಿ ಹೆಚ್ಚಿನ ದೇವಾಲಯಗಳನ್ನು, ಮುಖ್ಯವಾಗಿ ಅಪಾರ ಸಂಪತ್ತು ಸಂಗ್ರಹವಾಗುತ್ತಿದ್ದ ವಿಶ್ವನಾಥ ದೇವಾಲಯವನ್ನು 17ನೇ ಶತಮಾನದಲ್ಲಿ ಮೊಗಲ್‌ ದೊರೆ ಔರಂಗಜೇಬ ಒಡೆಸಿ ಹಾಕಿದ.
ಕಾಶಿ ವಿಶ್ವನಾಥ ದೇವಾಲಯವನ್ನು ಮಹಾರಾಜ ವಿಕ್ರಮಾದಿತ್ಯ ಸುಮಾರು 2,050 ವರ್ಷಗಳ ಹಿಂದೆ ನಿರ್ಮಿಸಿದ ಎಂದು ನಂಬಲಾಗುತ್ತದೆ. ವಿಶ್ವನಾಥ ದೇವಾಲಯ ಇತಿಹಾಸದಲ್ಲಿ ಹಲವಾರು ಬಾರಿ ಕೆಡವಲ್ಪಟ್ಟಿದೆ ಮತ್ತು ಪುನರ್ನಿರ್ಮಾಣಗೊಂಡಿದೆ. ಇತಿಹಾಸಕಾರರ ಪ್ರಕಾರ, 1669ರಲ್ಲಿ ಔರಂಗಜೇಬ್ ಈ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ. ಈಗ ಇರುವ ವಿಶ್ವನಾಥ ದೇವಾಲಯವನ್ನು 18ನೇ ಶತಮಾನದಲ್ಲಿ ಮಾಳವ ಸಾಮ್ರಾಜ್ಯದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಮರುನಿರ್ಮಾಣ ಮಾಡಿದರು. ಆಗ ಮಸೀದಿ ಪಕ್ಕದಲ್ಲೇ ಇತ್ತು. ಮಸೀದಿಯನ್ನು ಕೆಡವರು ಅವರು ಮುಂದಾಗಲಿಲ್ಲ. ಹೀಗಾಗಿ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ. ಆದರೆ ಅವುಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ವಿವಿಧ ದಿಕ್ಕುಗಳಲ್ಲಿವೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್‌ ಮಾಡಿ ಎಂದ ಕೋರ್ಟ್‌

Exit mobile version