Site icon Vistara News

Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ

ತುರ್ತುಪರಿಸ್ಥಿತಿ
ಸಾಲದಲ್ಲಿ ಮುಳುಗಿರುವ, ವಿದೇಶಿ ವಿನಿಮಯ ಸಂಗ್ರಹವನ್ನೆಲ್ಲ ಮುಗಿಸಿಕೊಂಡಿರುವ ಪಕ್ಕದ ದೇಶದ ಶ್ರೀಲಂಕಾದಲ್ಲಿ ಈಗ ಮತ್ತೆ ತುರ್ತುಪರಿಸ್ಥಿತಿ. ಒಂದು ತಿಂಗಳ ಹಿಂದೆಯೇ ಆರ್ಥಿಕ ಎಮರ್ಜೆನ್ಸಿ ಘೋಷಿಸಲಾಗಿತ್ತು. ದೇಶವನ್ನು ಆಳುತ್ತಿರುವ ರಾಜಪಕ್ಸ ಫ್ಯಾಮಿಲಿಯ ಮೇಲೆ ದೇಶದ ಜನತೆಗೆ ಆಕ್ರೋಶ ಭುಗಿಲೆದ್ದಿದೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಜನರನ್ನು ಸುಮ್ಮನಿರಿಸಲು ಅಧ್ಯಕ್ಷ ಗೋತಾಬಯ ರಾಜಪಕ್ಸ ಹೊಸ ಅಸ್ತ್ರವಾಗಿ ಎಮರ್ಜೆನ್ಸಿ ಪ್ರಯೋಗಿಸಿದ್ದಾರೆ. ಏಪ್ರಿಲ್‌ ಒಂದರಂದು ಕೂಡ ಅವರು ಎಮರ್ಜೆನ್ಸಿ ಘೋಷಿಸಿದ್ದರು, ಏಪ್ರಿಲ್‌ ಐದರಂದು ಹಿಂದೆಗೆದುಕೊಂಡಿದ್ದರು.

ಮಹಿಂದ ಔಟ್‌
ಹಲವು ವರ್ಷಗಳಿಂದ ಈ ಪುಟ್ಟ ದೇಶವನ್ನು ರಾಜಪಕ್ಸ ಕುಟುಂಬ ಆಳುತ್ತಿದೆ. ಅಧ್ಯಕ್ಷರಾಗಿ ಗೋತಾಬಯ ರಾಜಪಕ್ಸ, ಪ್ರಧಾನಿಯಾಗಿ ಮಹಿಂದ ರಾಜಪಕ್ಸ ಇದ್ದಾರೆ. ಈ ಹಿಂದೆ ಪ್ರಧಾನಿಯಾಗಿ ಮಹಿಂದ ಇದ್ದರು. ಇಬ್ಬರೂ ಬ್ರಹ್ಮಾಂಡ ಭ್ರಷ್ಟಾಚಾರ ಪರಿಣತರು. ದೇಶದ ಮೇಲೆ ಸುಮಾರು 50 ಶತಕೋಟಿ ಡಾಲರ್‌ ಹೊರಗಿನ ಸಾಲದ ಹೊರೆಯಿದೆ. ಆಡಳಿತದ ಮೇಲೆ ಜನಕ್ಕೆ ಸಿಟ್ಟು ಹೆಚ್ಚುತ್ತಿದೆ ಎಂದು ಗೊತ್ತಾದಾಗ, ಮಹಿಂದ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿ ಅಧ್ಯಕ್ಷರು ಸೂಚನೆ ಕಳುಹಿಸಿದ ನಾಟಕ ಮಾಡಿದರು. ಆದರೆ ಅಂಥದೊಂದು ಸೂಚನೆಯೇ ತನಗೆ ಬಂದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ನಾಟಕ ಆಡುತ್ತಿದೆ. ಅಂತೂ ಶ್ರೀಲಂಕೆಯ ಜನತೆಗೆ ಈ ನಾಟಕಕಾರರಿಂದ ಮುಕ್ತಿಯೇ ಇಲ್ಲ.

ಸಾಲದ ಮೇಲೆ ಸಾಲ
ಸಾಲದ ಸುಳಿಯಲ್ಲಿ ಮುಳುಗಿರುವ ಲಂಕೆಗೆ ಒಂದು ತಿಂಗಳ ಹಿಂದೆ 250 ಕೋಟಿ ಡಾಲರ್‌ ಹಣವನ್ನು ಭಾರತ ನೀಡಿತ್ತು. ಆದರೆ ಅದರಿಂದ ಏನೂ ಉಪಯೋಗವಾದಂತಿಲ್ಲ. ಆ ಹಣ ಎಲ್ಲಿಗೆ ಹೋಗಿದೆ ಎಂದೇ ತಿಳಿಯದಂತಾಯಿತು. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವಂತೆ ಲಂಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಮೊರೆಯಿಟ್ಟಿದೆ. ಸಾಲ ಕೊಟ್ಟು ಕೊಟ್ಟು ಲಂಕೆಯ ದಿವಾಳಿತನಕ್ಕೆ ಪ್ರಮುಖ ಕಾರಣವಾಗಿರುವ ಚೀನಾದ ಸಾಲದ ಪಾಲು ಶೇಕಡ ಹತ್ತರಷ್ಟಿದೆ. ಜಪಾನ್‌, ಐಎಂಎಫ್‌, ವಿಶ್ವ ಬ್ಯಾಂಕ್‌, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ಗಳ ಪಾಲೂ ಇದೆ.

ಏನಿದೆ ಲಂಕೆಯ ಪರಿಸ್ಥಿತಿ?
ಲಂಕೆಯ ವಿದೇಶಿ ವಿನಿಮಯ ಸಂಗ್ರಹದ 70%ಕ್ಕಿಂತಲೂ ಕೆಳಗೆ ಇಳಿದಿದೆ. ಶೇಕಡ ನೂರರಷ್ಟು ವಿದೇಶಿ ವಿನಿಮಯ ಹೊಂದಿದ್ದರೆ ಅಂಥ ದೇಶ ಸುಸ್ಥಿರವಾಗಿದೆ ಎಂದರ್ಥ. ಅದು ಇತರ ದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ನಡೆಸಲು ಸಮರ್ಥವಾಗಿರುತ್ತದೆ. ಇದು ಒಂದು ಬಗೆಯಲ್ಲಿ ಸುರಕ್ಷತಾ ಠೇವಣಿ ಇದ್ದಂತೆ. ಇದನ್ನು ನೋಡಿಯೇ ಇತರ ದೇಶಗಳು ಕೂಡ ಆ ದೇಶದ ಜೊತೆಗೆ ವಾಣಿಜ್ಯ ನಡೆಸಲು ಮುಂದಾಗುತ್ತವೆ. ಆದರೆ ಲಂಕೆ ಇಟ್ಟ ವಿದೇಶಿ ವಿನಿಮಯದಲ್ಲಿ ಮೂರನೇ ಎರಡು ಭಾಗ ಖಾಲಿಯಾಗಿದೆ. ಹೀಗಾಗಿ ಇತರ ದೇಶಗಳು ಅದರೊಂದಿಗೆ ವ್ಯಾಪಾರ ನಡೆಸಲು ಹಿಂದೇಟು ಹಾಕುತ್ತಿವೆ. ಇದು ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಿದೆ. ಉದಾಹರಣೆ ಪೆಟ್ರೋಲ್.‌ ಪೆಟ್ರೋಲ್‌ ಬಂಕ್‌ಗಳ ಮುಂದೆ ಉದ್ದುದ್ದ ಕ್ಯೂಗಳಿವೆ. ಆದರೂ ಸಿಗುತ್ತಿಲ್ಲ. ದಿನಸಿ ಅಂಗಡಿಗಳ ಮುಂದೆಯೂ ಇದೇ ಪರಿಸ್ಥಿತಿ. ಶ್ರೀಮಂತರು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಬಡವರಿಗೆ ಅಲಭ್ಯವಾಗಿದೆ. ಹೀಗಾಗಿ ಅಕ್ಕಿ, ಗೋಧಿ, ಬೇಳೆಕಾಳು, ಸಕ್ಕರೆ, ಆಹಾರಧಾನ್ಯಗಳ ಬೆಲೆ ಗಗನಕ್ಕೇರಿದೆ.

ಇದು ಹಳೆಯ ಕತೆ
ಶ್ರೀಲಂಕೆಯ ಪರಿಸ್ಥಿತಿ ಹೀಗೆ ಆಗಿರಲು ಕಾರಣಗಳು ಇಂದು ನಿನ್ನೆಯದ್ದಲ್ಲ. ಅದು ಹಲವು ವರ್ಷಗಳಿಂದಲೂ ಬಿಗಡಾಯಿಸುತ್ತಾ ಸಾಗಿತ್ತು. ಪ್ರತೀ ಸರಕಾರಗಳು ಅದನ್ನು ತಾತ್ಕಾಲಿಕವಾಗಿ ಪಾರಾಘುವ ಶಾರ್ಟ್‌ಕಟ್‌ಗಳನ್ನು ರೂಢಿಸಿಕೊಂಡಿದ್ದವು. ಕಳೆದ ಹದಿನೈದು ವರ್ಷಗಳಿಂದ ಸರಕಾರಗಳು ಪಾವತಿಗಾಗಿ ಬಾಂಡ್‌ಗಳನ್ನು ಪೂರೈಸುತ್ತಿದ್ದವು, ಆದರೆ ಅದಕ್ಕೆ ನಗದು ವ್ಯವಸ್ಥೆ ಮಾಡುತ್ತಿರಲಿಲ್ಲ. ವಿದೇಶಿ ವಿನಿಮಯದ ಸಂಗ್ರಹವನ್ನು ಕೂಡ ರಫ್ತು ಮತ್ತು ಆಮದಿನ ಮೂಲಕ ಕಟ್ಟಿಕೊಳ್ಳದೆ, ವಿದೇಶ ಸಾಲದ ಮೂಲಕ ಕಟ್ಟಿಕೊಳ್ಳಲಾಯಿತು. ಕಳೆದ ಒಂದು ದಶಕದಿಂದ ಚೀನಾದಿಂದ ಪಡೆದ ಸುಮಾರು 500 ಕೋಟಿ ಡಾಲರ್‌ ಹಣವನ್ನು ಕಡಿಮೆ ರಿಟರ್ನ್ಸ್‌ ಬರುವ ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು ವಿದ್ಯುತ್‌ ಸ್ಥಾವರಗಳಂಥ ಮೂಲಸೌಕರ್ಯಗಳಲ್ಲಿ ತೊಡಗಿಸಲಾಯಿತು. ಇದರಿಂದ ಲಂಕೆಗೆ ಲಾಭವೇನೂ ಆಗಲಿಲ್ಲ.

ಕೋವಿಡ್‌ ತಂದಿಟ್ಟ ಕುತ್ತು
ಲಂಕೆಯ ಸನ್ನಿವೇಶವನ್ನು ಮತ್ತಷ್ಟು ಬಿಗಡಾಯಿಸಿದ್ದು ಕೋವಿಡ್.‌ ಕೊರೊನಾ ವೈರಸ್‌ ಹೆಚ್ಚುತ್ತಿದ್ದಾಗ ಹಾಕಲಾದ ಲಾಕ್‌ಡೌನ್‌ನಿಂದ, ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಶ್ರೀಲಂಕಾ ಥಂಡ ಹೊಡೆದುಹೋಯಿತು. ರಷ್ಯಾ- ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯದಿಂದ ಉಂಟಾದ ನಿರ್ಭಂಧಗಳ ಪಶ್ಚಾತ್‌ ಕಂಪನಗಳು ಕೂಡ ಶ್ರೀಲಂಕೆಗೆ ಮುಳುವಾದವು.

ಗಗನಕ್ಕೇರಿದ ಬೆಲೆಗಳು
ಪ್ರಸ್ತುತ ಒಂದು ಒಂದು ಲಂಕಾ ರೂಪಾಯಿಯ ಬೆಲೆ ಭಾರತೀಯ ರೂಪಾಯಿಯ ಕಾಲು ಭಾಗಕ್ಕಿಂತಲೂ ಕಡಿಮೆ. ಅಂದರೆ ಒಂದು ಭಾರತೀಯ ರೂಪಾಯಿಗೆ ನಾಲ್ಕು ಶ್ರೀಲಂಕಾ ರೂಪಾಯಿಗಳು ಅರುವತ್ತು ಪೈಸೆ ಸಿಗುತ್ತವೆ. ಇದೇ ಮಾದರಿಯಲ್ಲಿ ಅಗತ್ಯ ವಸ್ತುಗಳು ಬೆಲೆಗಳು ಕೂಡ ಭಾರತಕ್ಕಿಂತ ನಾಲ್ಕು ಪಟ್ಟು ಏರಿವೆ. ಅಕ್ಕಿಯ ಬೆಲೆ ಕಿಲೋಗೆ 290 ರೂಪಾಯಿ, ಸಕ್ಕರೆಯ ಬೆಲೆಯೂ ಅಷ್ಟೇ ಆಗಿದೆ. ಕಳೆದೆರಡು ತಿಂಗಳಲ್ಲಿ ಲಂಕೆಯ ಮಧ್ಯಮವರ್ಗದ ಕುಟುಂಬವೊಂದರ ಜೀವನವೆಚ್ಚ ಮೂರು ಪಟ್ಟು ಏರಿದೆ. ಗ್ಯಾಸ್‌ ಸಿಲಿಂಡರ್‌ನ ಬೆಲೆ 4000 ರೂಪಾಯಿ ದಾಟಿದೆ. ದಿನಕ್ಕೆ ಕೇವಲ ನಾಲ್ಕು ಗಂಟೆ ಮಾತ್ರ ವಿದ್ಯುತ್.‌ ಕರೆಂಟ್‌ ಉಳಿಸಲು ಬೀದಿ ದೀಪಗಳನ್ನೂ ಉರಿಸಲಾಗುತ್ತಿಲ್ಲ.

ಸಾವಯವ ಕೃಷಿ
ಆರು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಗೋತಾಬಯ ರಾಜಪಕ್ಸ ಸರಕಾರ, ಇನ್ನು ಮುಂದೆ ರಾಸಾಯನಿಕ ಗೊಬ್ಬರಗಳನ್ನು ಬಳಸುವಂತಿಲ್ಲ, ದೇಶವಿಡೀ ಸಾವಯವ ಕೃಷಿಯನ್ನು ಆಚರಿಸಬೇಕು ಎಂದಿತು. ಅದುವರೆಗೂ ಶ್ರೀಲಂಕಾ ಅಕ್ಕಿ ಬೆಳೆಯುವಿಕೆಯಲ್ಲಿ ಸ್ವಾವಲಂಬಿಯಾಗಿತ್ತು. ರಾಸಾಯನಿಕ ನಿಷೇಧದ ಹಿಂದೆ ಕಾರಣವೂ ಇತ್ತು- ಅದು ಎಲ್ಲ ರಾಸಾಯನಿಕಗಳನ್ನೂ ಕೀಟನಾಶಕಗಳನ್ನೂ ಆಮದು ಮಾಡಿಕೊಳ್ಳುತ್ತಿತ್ತು. ಆ ಹಣವನ್ನು ಉಳಿಸುವುದಕ್ಕಾಗಿ ರಾಸಾಯನಿಕ ನಿರ್ಬಂಧ. ಆದರೆ ಇದು ದೀರ್ಘಕಾಲಿಕವಾಗಿ ಪರಿಣಾಮ ಬೀರಿತು. ಅಕ್ಕಿಯಲ್ಲಿ ಸ್ವಾವಲಂಬಿಯಾಗಿದ್ದ ಲಂಕೆ ಅದನ್ನು ಆಮದು ಮಾಡಿಕೊಳ್ಳುವಂತಾಯಿತು.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 76 ಸಾವಿರ ಟನ್ ಇಂಧನ ನೆರವು

Exit mobile version