ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ 2024 (Mysore Dasara) ಸಡಗರ ಕಳೆಗಟ್ಟಿದೆ. ಅ.12ರಂದು ಮೈಸೂರು ಅರಮನೆಯಲ್ಲಿ ದಶಮಿ ಕಾರ್ಯಕ್ರಮಗಳು ನಡೆಯಲಿದೆ. ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ.
ದಿನವಿಡೀ ಏನೆಲ್ಲ ಕಾರ್ಯಕ್ರಮ ನಡೆಯಲಿದೆ
-ಬೆಳಗ್ಗೆ 10:15ಕ್ಕೆ ಅರಮನೆ ಆವರಣದಲ್ಲಿ ಉತ್ತರ ಪೂಜೆ.
ಅರಮನೆಗೆ ಆಗಮಿಸಲಿರುವ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ.
-ಬೆಳಗ್ಗೆ 10 ಗಂಟೆಗೆ ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಜಟ್ಟಿಗಳ ಸಿದ್ಧತೆ.
-ಬೆಳಗ್ಗೆ 10:45 ರಿಂದ 11 ಗಂಟೆಗೆ ಜೆಟ್ಟಿ ಕಾಳಗ.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಲಿರುವ ಜಟ್ಟಿ ಕಾಳಗ.
-ಬೆಳಗ್ಗೆ 11.10ಕ್ಕೆ ವಿಜಯ ಯಾತ್ರೆ ನಡೆಸಲಿರುವ ಯದುವೀರ್.
-ಬೆಳಗ್ಗೆ 11:20 ರಿಂದ 11:45ಕ್ಕೆ ಭುವನೇಶ್ವರಿ ದೇವಸ್ಥಾನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಆಗಮನ.
-ಬನ್ನಿ ಪೂಜೆ ಸಲ್ಲಿಸಲಿರುವ ಯದುವೀರ್. ಬನ್ನಿ ಪೂಜೆಯ ಬಳಿಕ ಯದುವೀರ್ ಸ್ವಸ್ಥಾನಕ್ಕೆ ವಾಪಸ್.
ಪೂಜೆ ಬಳಿಕ ಕಂಕಣ ವಿಸರ್ಜನೆ ಮಾಡಿ ಅರಮನೆ ದಸರಾ ಸಮಾಪ್ತಿ.
ದಾರಿಯುದ್ದಕ್ಕೂ ಸಿಸಿ ಕ್ಯಾಮೆರಾ ಕಣ್ಗಾವಲು
ಜಂಬೂ ಸವಾರಿ ಸಾಗುವ ದಾರಿಯುದ್ದಕ್ಕೂ ಸಿಸಿ ಕ್ಯಾಮರಾ ಕಣ್ಗಾವಲು ಹಾಕಲಾಗಿದೆ. ಸುಮಾರು 150 ಸಿಸಿ ಕ್ಯಾಮರಾ, ಮೊಬೈಲ್ ಕಮಾಂಡ್ ವಾಹನ, ಟ್ರಾಫಿಕ್ ಕ್ಯಾಮರಾ, ಪೊಲೀಸ್ ಬಾಡಿ ಕ್ಯಾಮರಾಗಳ ಬಳಕೆ ಮಾಡಲಾಗುತ್ತಿದೆ. ಸರಗಳ್ಳತನ, ಜೇಬುಗಳ್ಳತನ, ಯುವತಿಯರನ್ನು ಚುಡಾಯಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಡಲಿದ್ದಾರೆ.
ಪಾರಂಪರಿಕ ಕಟ್ಟಡಗಳ ಮೇಲೆ ಜಂಬೂ ಸವಾರಿ ವೀಕ್ಷಣೆ ನಿಷಿದ್ಧ
ಪಾರಂಪರಿಕ ಕಟ್ಟಡಗಳ ಮೇಲೆ ಜಂಬೂ ಸವಾರಿ ವೀಕ್ಷಣೆ ನಿಷಿದ್ಧ ಮಾಡಲಾಗಿದೆ. ಹಳೆಯ ಕಟ್ಟಡಗಳ ಮೇಲೆ ಹತ್ತದಂತೆ ಮಹಾನಗರ ಪಾಲಿಕೆ ಆದೇಶಿಸಿದೆ. ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹತ್ತಾರು ಪಾರಂಪರಿಕ ಕಟ್ಟಡಗಳ ಮೇಲೆ ಜನರು ಹತ್ತದಂತೆ ಸೂಚಿಸಲಾಗಿದೆ.
ಮುಂಜಾನೆಯೇ ಲಗ್ಗೆ ಇಟ್ಟ ಪ್ರವಾಸಿಗರು
ಮೈಸೂರು ಅರಮನೆ ನೋಡಲು ಶನಿವಾರ ಮುಂಜಾನೆಯೇ ಪ್ರವಾಸಿಗರು ಮುಗಿಬಿದ್ದಿದ್ದರು. ಜಯರಾಮ- ಬಲರಾಮ ದ್ವಾರದ ಬಳಿ ಜಮಾಯಿಸಿದ್ದು, ಅರಮನೆ ಸುತ್ತಲೂ ಬ್ಯಾರಿಕೇಡ್ ಕೋಟೆ ನಿರ್ಮಾಣ ಮಾಡಲಾಗಿದೆ. ಪಾಸ್ ಇಲ್ಲದ ಜನರನ್ನುಪೊಲೀಸರು ಹೊರಗಡೆ ಕಳುಹಿಸುತ್ತಿದ್ದಾರೆ.