Site icon Vistara News

SM Krishna: ಬೆಂಗಳೂರಿಗೆ ಐಟಿ ಗರಿ ಮೂಡಿಸಿದ ಯುವಜನರ ಕಣ್ಮಣಿ, ಪದ್ಮವಿಭೂಷಣ ಎಸ್.ಎಂ. ಕೃಷ್ಣ

Padma Vibhushan SM Krishna has converted bengaluru as IT city says Dinesh Gooligowda
ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿ ತಮ್ಮ ಅಪಾರ ವಿದ್ವತ್, ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿ ಜನನಾಯಕರಾಗಿ ರೂಪುಗೊಂಡವರು (SM Krishna) ಎಸ್.ಎಂ. ಕೃಷ್ಣ.

1932ರಲ್ಲಿ ಮದ್ದೂರಿನ ಜನರ ಪಾಲಿನ ಪ್ರಾತಃ ಸ್ಮರಣೀಯ ಜನಾನುರಾಗಿ ನಾಯಕರಾಗಿದ್ದ ದಿವಂಗತ ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮರವರ ಏಳನೇ ಮಗನಾಗಿ ತುಂಬು ಕುಟುಂಬದಲ್ಲಿ ಜನಿಸಿದ ಎಸ್.ಎಂ. ಕೃಷ್ಣ ರವರು 1962ರಲ್ಲಿ ಪ್ರಥಮ ಬಾರಿಗೆ ಶಾಸನ ಸಭೆ ಪ್ರವೇಶಿಸಿದರು. ಆ ನಂತರ ರಾಷ್ಟ್ರದ ಪ್ರಜಾಪ್ರಭುತ್ವ ನಾಲ್ಕು ಸ್ತಂಭಗಳಾದ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕಳೆದ ಅರವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಕೃಷ್ಣ ರವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆಗುರುತು ಮೂಡಿಸಿದವರು.

ಅಂದಿನ ಕಾಲಘಟ್ಟದಲ್ಲಿಯೇ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಅಮೆರಿಕದಿಂದ ಸ್ವಗ್ರಾಮಕ್ಕೆ ಆಗಮಿಸಿದಾಗ ಮದ್ದೂರು ರೈಲ್ವೆ ನಿಲ್ದಾಣದಿಂದ ಹುಟ್ಟೂರು ಸೋಮನಹಳ್ಳಿ ವರೆಗೆ ತಳಿರು ತೋರಣಗಳಿಂದ ಸಿಂಗರಿಸಿ ಕೃಷ್ಣ ಅವರನ್ನು ಸ್ವಾಗತಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ದೇಶ ಕಂಡ ಅನುಭವಿ ರಾಜಕಾರಣಿಯವರಲ್ಲೊಬ್ಬರಾದ ಕೃಷ್ಣ ಅವರನ್ನು ವಿಶಿಷ್ಟ ಸ್ಥಾನದಲ್ಲಿ ಕಾಣಬಹುದಾಗಿದ್ದು ಅವರ ಸಜ್ಜನ ವ್ಯಕ್ತಿತ್ವ, ಸಾರ್ವಜನಿಕ ನಡವಳಿಕೆ ಮಾತಿನ ಶೈಲಿ ಜನರನ್ನೂ ಪ್ರೀತಿಯಿಂದ ನೋಡುವ ರೀತಿ, ಗೌರವಿಸುವ ಪರಿ ಎಂಥವರನ್ನೂ ಮೋಡಿ ಮಾಡಬಲ್ಲದು. ತಮ್ಮ ಬಾಲ್ಯ ಜೀವನದಲ್ಲಿ ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದ ಕೃಷ್ಣ ಅವರು ಎಂದೂ ಸೋಲಿಗೆ ಕುಗ್ಗಲಿಲ್ಲ, ಗೆದ್ದು ಬೀಗಲಿಲ್ಲ.

ಇಂದು ಅವರ ಗರಡಿಯಲ್ಲಿ ಪಳಗಿದ ಅದೆಷ್ಟೊ ಮಂದಿ ರಾಜಕೀಯ ಕ್ಷೇತ್ರದಲ್ಲಿ ಹಲವು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಆಡಳಿತ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರಭಾವ ಬೀರಿದವರು ಕೃಷ್ಣರವರು.

ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎಸ್.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದಲ್ಲಿಯೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ. ಇವರ ಸುದೀರ್ಘ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರ ರಾಜಕೀಯ ಪಯಣ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು ತಮ್ಮ ವಿರೋಧಿಗಳ ಬಗ್ಗೆ ಟೀಕೆ ಮಾಡಿದರೂ ಅದು ಸದಭಿರುಚಿಯಿಂದ ಕೂಡಿದ್ದು, ಯಾರ ಮನಸ್ಸಿಗೂ ಘಾಸಿ ಮಾಡದೆ ಪ್ರತಿ ಮಾತಿಗೂ ಜನ ಮೆಚ್ಚುವ ರೀತಿ ಹೇಳಿಕೆಗಳನ್ನು ರೂಢಿಸಿಕೊಂಡಿರುವ ಕೃಷ್ಣ ರಂತಹ ನಾಯಕರು ಇಂದಿನ ರಾಜಕಾರಣಿಗಳಲ್ಲಿ ವಿರಳಾತಿ ವಿರಳ.

ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದಂತಹ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಜನರಿಗೆ ಒಂದು ಅಭಿಮಾನ ಹಾಗೂ ಕೀರ್ತಿಯೇ ಸರಿ. ಮಂಡ್ಯ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣಿಭೂತರಾದ ಶ್ರೀ ಎಸ್ ಸಿ ಮಲ್ಲಯ್ಯರವರ ಸುಪುತ್ರರಾದ ಕೃಷ್ಣ ರವರ ತಂದೆಯ ಪ್ರಭಾವದಿಂದಾಗಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಅಂದು ರಾಜ್ಯದ ಲೋಕೋಪಯೋಗಿ ಸಚಿವರಾಗಿ ಮುಖ್ಯಮಂತ್ರಿ ಪದವಿಯ ಸನಿಹದಲ್ಲಿದ್ದ ಎಚ್.ಕೆ. ವಿರಣ್ಣಗೌಡರವರನ್ನು ಮಣಿಸಿ ಶಾಸನಸಭೆ ಪ್ರವೇಶಿಸಿ ರಾಜ್ಯ ಹಾಗೂ ರಾಷ್ಟ್ರದ ಹಲವು ನಾಯಕರ ಸಂಪರ್ಕದಿಂದ ಯಶಸ್ವಿ ನಾಯಕರಾಗಿ ಮಂಡ್ಯ ಜಿಲ್ಲೆ ,ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಭಾರತಕ್ಕೆ ಬಂದ ನಂತರ ಅವರು 1962ರಲ್ಲಿ ಮದ್ದೂರು ವಿಧಾನಸಭಾ ಶಾಸಕರಾಗಿ ಸದನದಲ್ಲಿ ಮಂಡನೆಯಾಗಿದ್ದ ಪೂರಕ ಬಜೆಟ್ ಮೇಲೆ ಎಸ್.ಎಂ. ಕೃಷ್ಣ ಅವರು ಮಾಡಿದ ಭಾಷಣವು ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಅಭ್ಯರ್ಥಿಗಳ ಬದುಕು ಅತಂತ್ರವಾಗಿದ್ದರ ಬಗ್ಗೆ ಗಮನ ಸೆಳೆದಿದ್ದ ಕೃಷ್ಣ ಅವರು, ಇಂತಹ ಅಭ್ಯರ್ಥಿಗಳ ಕಾಯಂ ಮಾಡುವಂತೆ ಒತ್ತಾಯಿಸಿದರು. ಇದರ ಫಲವಾಗಿ ಸ್ಥಳೀಯ ಉಪನ್ಯಾಸಕರನ್ನು ಸರ್ಕಾರ ಕಾಯಂ ಮಾಡಿತು. ಈ ಮೂಲಕ ರಾಜ್ಯದ ಅದೆಷ್ಟೋ ಉಪನ್ಯಾಸಕ ಕುಟುಂಬಗಳಿಗೆ ಭದ್ರತೆ ದೊರೆಯಲು ತಮ್ಮ ಚೊಚ್ಚಲ ಭಾಷಣದಲ್ಲಿಯೇ ಕಾರಣರಾದರು.

1968ರಲ್ಲಿ ಅವರು ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದರು. ನಂತರ 1971ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ನಡುವೆ 1983ರಲ್ಲಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಅವರು ಕೈಗಾರಿಕೆಗಳ ಏಳ್ಗೆ ಬಗ್ಗೆ ಸಾಕಷ್ಟು ಶ್ರಮ ವಹಿಸಿದ್ದರು. ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಬಡಾವಣೆಗಳ ಸ್ಥಾಪನೆಗೆ ಮುಂದಾದರು. ಇದರ ಫಲವನ್ನು ಬಿಹಾರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ಪಡೆದುಕೊಂಡವು.

ಇದನ್ನೂ ಓದಿ: PM Modi: ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ; ಕನ್ನಡಿಗರಿಗಾಗಿ ಕನ್ನಡದಲ್ಲೇ ಟ್ವೀಟ್​

1999ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರ ಕಾಲಘಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಇಂದಿಗೂ ಜಾರಿಯಲ್ಲಿದ್ದು, ಅದು ಕೃಷ್ಣ ರವರ ದೂರದೃಷ್ಟಿಯ ಫಲವಾದದ್ದು. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿವೆ.

ಐಟಿ ಬಿಟಿ ಕ್ಷೇತ್ರಕ್ಕೆ ಅಗಾದವಾದ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರ ಬುನಾದಿಯಿಂದ ಜಾಗತಿಕ‌ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್‌ ವ್ಯಾಲಿ ಎಂದು ಹೆಸರು ಗಳಿಸಿ ಅಮೆರಿಕದ ಕ್ಯಾಲಿಪೋರ್ನಿಯ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೇ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲಭೂತ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವ ಭೂಪಟದಲಿ ಬೆಳಗಿಸಲು ಕೃಷ್ಣ ರವರ ಪಾತ್ರ ಅತ್ಯಂತ ಹಿರಿದಾದ್ದು.

ಎಸ್.ಎಂ. ಕೃಷ್ಣಾ ಅವರು 2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದಲ್ಲಿ ಭಾರತದ 72ನೇ ವಿದೇಶಾಂಗ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಪಾಕಿಸ್ತಾನ, ಚೀನಾ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ ದೇಶಗಳ ಜತೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಇದೆಲ್ಲದರ ಜತೆಗೆ ಅಮೆರಿಕದ ಆಗಿನ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಜತೆ ಸಹ ರಾಜತಾಂತ್ರಿಕ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಇದಲ್ಲದೆ, ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ.

ಇದನ್ನೂ ಓದಿ: Green Jobs : ಇಂಧನ, ತ್ಯಾಜ್ಯ ನಿರ್ವಹಣೆ, ಹಸಿರು ಮೂಲ ಸೌಕರ್ಯ ಉದ್ದಿಮೆಗಳಲ್ಲಿ ನೇಮಕಾತಿ ಚುರುಕು

ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದ ಎಸ್.ಎಂ. ಕೃಷ್ಣ ಅವರು, ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಬೇಕು ಎಂದು ಒತ್ತಾಯಿಸಿದ್ದರು. ಈ ಮೂಲಕ ಭಾರತ ಸಹ ಎಲ್ಲ ದೇಶಗಳಂತೆ ಸಮರ್ಥವಾದ ದೇಶ ಹಾಗೂ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದುಕೊಳ್ಳುವ ಎಲ್ಲ ಅರ್ಹತೆ ಇದೆ ಎಂದು ಪ್ರತಿಪಾದಿಸಿದ್ದರು. ಇನ್ನು ಶತ್ರು ದೇಶ ಎಂದೇ ಕರೆಯಲ್ಪಡುವ ಪಾಕಿಸ್ತಾನದ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್ಎಂಕೆ ಅವರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಇನ್ನು ಚೀನಾದ ಜತೆಯೂ ಉತ್ತಮ ಸಂಬಂಧ ಹೊಂದಲು ಆದ್ಯತೆಯ ಹೆಜ್ಜೆಯನ್ನಿಟ್ಟಿದ್ದರು.

ಈಗ ನಾವು ಪಾಸ್‌ಪೋರ್ಟ್ ಅನ್ನು ಬಹಳ ಸುಲಭವಾಗಿ ಹಾಗೂ ಸರಳವಾಗಿ ಪಡೆದುಕೊಂಡು ಬಿಡುತ್ತೇವೆ. ಆದರೆ, ಆಗ ಪಾಸ್‌ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಅಷ್ಟು ಸರಳವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆಗಳಿದ್ದವು. ಇವುಗಳನ್ನು ಪೂರೈಸುವಷ್ಟರಲ್ಲಿ ಜನರು ಹೈರಾಣಾಗಿಬಿಡುತ್ತಿದ್ದರು. ಈ ಸಮಸ್ಯೆ ಎಸ್ಎಂಕೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಪಾಸ್‌ಪೋರ್ಟ್ ನೀತಿಯನ್ನು ಸರಳೀಕರಣಗೊಳಿಸಲು ಮುಂದಾದರು. ಜತೆಗೆ ಆಧುನೀಕರಣಗೊಳಿಸಿದರು. ಹೀಗಾಗಿ ದೇಶದ ವಿವಿಧ ಕಡೆ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಇನ್ನು ಪಾಸ್‌ಪೋರ್ಟ್ ನೀಡಿಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಮೂಲಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಿದರು. ಇದು ಕೋಟ್ಯಂತರ ಭಾರತೀಯರಿಗೆ ಅನುಕೂಲವಾಯಿತು. ಸಕಾಲದಲ್ಲಿ ಅಗತ್ಯವಿದ್ದವರು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳುವಂತಾಯಿತು. ಇದರ ಸಂಪೂರ್ಣ ಕೀರ್ತಿ ಎಸ್‌ಎಂಕೆ ಅವರಿಗೆ ಸಲ್ಲಬೇಕು.

ಇನ್ನು ಈ ವಿಷಯವಾಗಿ ಕೃಷ್ಣ ಅವರ ಬಗ್ಗೆ ಹೇಳಲೇಬೇಕು. ಅವರ ಕಾರ್ಯತತ್ಪರತೆ ಬಗ್ಗೆ ತಿಳಿಸಲೇಬೇಕು. 2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭವಾಗಿತ್ತು. ಇದರಿಂದ ಅಲ್ಲಿದ್ದ ಸರಿಸುಮಾರು 18 ಸಾವಿರ ಭಾರತೀಯರ ಜೀವ-ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಗ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಎಸ್ಎಂಕೆ ಮಹತ್ವದ ಪಾತ್ರವನ್ನು ವಹಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದುಕೊಂಡು ಸುರಕ್ಷತೆಗೆ ಬಹಳವೇ ಆದ್ಯತೆಯನ್ನು ನೀಡಿದ್ದರು.

ಇನ್ನು ಎಸ್.ಎಂ.ಕೃಷ್ಣ ಅವರು 2004ರಿಂದ 2008 ರವರೆಗೆ ದೇಶದ ಗೌರವಯುತ ಸಾಂವಿಧಾನಿಕ ಹುದ್ದೆಯನ್ನೂ ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡರು. ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ಅವರು 4 ವರ್ಷ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

ಹೀಗೆ ಎಸ್ಎಂಕೆ ಅವರ ಸೇವೆ ಈ ಇಡೀ ದೇಶಕ್ಕೆ ಬಹಳ ದೊಡ್ಡದಿದೆ. ಇಂಥ ಸಂದರ್ಭದಲ್ಲಿ ಅವರು ರಾಷ್ಟ್ರದ ಎರಡನೇ ಅತ್ಯುನ್ನತ ಗೌರವವಾಗಿರುವ ಪದ್ಮವಿಭೂಷಣಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇದು ಇಡೀ ಮಂಡ್ಯಕ್ಕೆ ಹಾಗೂ ಇಂಡಿಯಾಕ್ಕೆ ಸಂದ ಗೌರವ ಎಂದು ಹೇಳಲು ಬಯಸುತ್ತೇನೆ.

Exit mobile version