ಅಂಕಣ
ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ
ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ನಾಡಿನ ಇಬ್ಬರು ರಸಋಷಿಗಳಾದ ಬೇಂದ್ರೆ ಹಾಗೂ ಕುವೆಂಪು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.
ಯುಗಾದಿ ಹಬ್ಬ: ಬೇಂದ್ರೆ ಮತ್ತು ಕುವೆಂಪು ತೋರಿಸಿದ ದರ್ಶನ
ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ್ ಪ್ರಥಮೇsಹನಿ |
ಶುಕ್ಲಪಕ್ಷೇ ಸಮಗ್ರೇ ತು ತದಾ ಸೂರ್ಯೋದಯೆ ಸತಿ
ಚೈತ್ರಮಾಸದ ಮೊದಲ ಹಗಲು ಬ್ರಹ್ಮ ಪ್ರಜಾಪತಿ ಜಗತ್ತನ್ನು ನಂತರ ಎಲ್ಲಾ ಜೀವಿಗಳನ್ನು ಸೃಷ್ಟಿಮಾಡಿದ. ಈ ದಿವಸದಿಂದಲೇ ಸಂವತ್ಸರದ ಗಣನೆ ಪ್ರಾರಂಭವಾಯಿತು.
ಭಾರತೀಯ ಹಬ್ಬಗಳ ಪೈಕಿ ಯುಗಾದಿ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ಹಳ್ಳಿಗಳಲ್ಲಿ ಯುಗಾದಿ ಬಂತೆಂದರೆ ಮೊದಲು ಗಮನ ಹರಿಸುವುದು ಪಂಚಾಂಗ ಶ್ರವಣಕ್ಕಾಗಿ. ಬರುವ ವರ್ಷ ಮಳೆ ಬೆಳೆ ಹೇಗೆ, ದೇವಮಾನದ ಕೊಳಗದಲ್ಲಿ ಈ ಸಾರೆ ಎಷ್ಟು ಮಳೆ ಬರಬಹುದು, ಯುಗಾದಿಪುರುಷ ಈ ವರ್ಷ ಯಾವ ವಾಹನದ ಮೇಲೆ ಕುಳಿತು, ಯಾವ ದಿಕ್ಕಿನತ್ತ ಮುಖ ಮಾಡಿ ಹೊರಟಿದ್ದಾನೆ, ಆತನ ಮುಖಭಾವವೇನು, ಅವ ಹೊರಟ ದಿಕ್ಕು ನಮ್ಮೂರಿಗಂತೂ ಇಲ್ಲ ತಾನೆ, ಎನ್ನುವ ಚರ್ಚೆ ಮಳೆ ಬಂದು ಬಿತ್ತನೆಯ ಕಾರ್ಯದವರೆಗೂ ನಡೆಯುತ್ತಿತ್ತು. ಬೇರೆ ಎಲ್ಲಾ ಹಬ್ಬಗಳೂ ಸಂಭ್ರಮದ ಹಬ್ಬವಾದರೆ ಯುಗಾದಿಯ ವಿಶಿಷ್ಟತೆಯಿರುವುದು ಭವಿಷ್ಯದ ಆಶಾಗೋಪುರದ ಮೇಲೆ. ಸುಮಾರು ಅದುತನಕವೂ ಕೇಳದೇ ಇದ್ದ ಕೋಗಿಲೆಯ ಕುಹೂ ಇದ್ದಕ್ಕಿದ್ದಂತೆ ಕೇಳತೊಡಗಿದಾಗ ಬಿರು ಬೇಸಿಗೆಯಲ್ಲಿಯೂ ಮನಸ್ಸಿನಲ್ಲಿ ಹರ್ಷ ಮೂಡುತ್ತದೆ. ಹೂವು ಅರಳಿದಾಗ ಬೇಂದ್ರೆ ಅಜ್ಜ ನೆನಪಾಗುತ್ತಾರೆ. ಅವರ ಯುಗ ಯುಗಾದಿ ಕಳೆದರೂ ಎನ್ನುವ ಕವನವನ್ನು ಕೇಳಿಯೇ ಬೆಳೆದವರು ನಾವೆಲ್ಲ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ
ಮುಂದಿನ ನಮ್ಮ ಬದುಕಿನಲ್ಲಿ ಸಿಗುವ ಆನಂದದೆಡೆಗೆ ಹೋಗುವ ಆಶಾವಾದವನ್ನು ಮೂಡಿಸಿಬಿಡುತ್ತದೆ. ಯುಗಾದಿಯ ದಿನ ಪಂಚಾಂಗದಲ್ಲಿ ಬರುವ ಮಳೆ ಬೆಳೆಗಳ ಭವಿಷ್ಯವನ್ನು ಕೇಳುವಾಗ ಆಗುವ ಆತಂಕವನ್ನೆಲ್ಲ ಸುಮ್ಮನೆ ಆಚೆ ದೂಡಿ ನಮ್ಮನ್ನು ಜೀವನ್ಮುಖಿಯಾಗಿ ಮಾಡುವ ಅಮೃತಸಿಂಚನ ಬೇಂದ್ರೆಯವರ ಈ ಕವನಕ್ಕಿದೆ. ಅವರ ಇನ್ನೊಂದು ಕವನ ʼಈ ಯುಗಾದಿʼ ಬದುಕಿನ ಪಕ್ವತೆಯನ್ನು ಸಾರುವ ಕವನ. ಅವರ ಎಪ್ಪತ್ತೈದನೆಯ ವಯಸ್ಸಿನಲ್ಲಿ ಬದುಕಿನಲ್ಲಿನ ಎಲ್ಲ ಏಳುಬೀಳುಗಳನ್ನು ನೋಡಿ ನೋವುಗಳ ಸಾಮ್ರಾಜ್ಯದ ಮೇಲೆ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡ ಹೊತ್ತು ಅದು. ಮಾನ ಸಮ್ಮಾನದ ಅಲೆಯಲ್ಲಿ ತೇಲಿ ಹೋಗದೇ,
“ಅವರವರಿಗೆ ಅವರ ಹಾದಿ I ನಿನಗೆ ನನಗೆ ಒಂದೆ ದಾದಿ I ಯುಗದ ಮಧ್ಯಬಿಂದು ಒಂದು IIʼ
ವೇದಾಂತವನ್ನಿಲ್ಲಿ ಅನಾವರಣಗೊಳಿಸುತ್ತಾರೆ. ಸಮಗ್ರ ಬ್ರಹ್ಮಾಂಡವೇ ಚಕ್ರದಂತೆ ತಿರುಗುತ್ತಿದೆ. ಅದರ ಯಾವುದೋ ಬಿಂದುವಿನಲ್ಲಿ ನಿಂತಿರುವ ನಾವುಗಳೆಲ್ಲರೂ ನಮ್ಮಿಂದಲೇ ಈ ಪ್ರಪಂಚ ಪ್ರಾರಂಭವಾಯಿತೆಂದುಕೊಳ್ಳುತ್ತೇವೆ. ಚಕ್ರದ ಪರಿಧಿಯ ಎಲ್ಲ ಬಿಂದುಗಳೂ ಆದಿ ಮತ್ತು ಅಂತ್ಯವೂ ಆಗಿರುತ್ತದೆ. ಯಾವ ಹಾದಿಯಲ್ಲಿಯೇ ಸಾಗಲಿ, ಕೊನೆಗೆ ತಲುವುವ ತಾಣ ಮಾತ್ರ ಒಂದೇ ಎನ್ನುವುದನ್ನು ಈ ಕವನದಲ್ಲಿ ಕವಿ ನಭವನ್ನು ದಿಟ್ಟಿಸಿ ಹೇಳುತ್ತಿದ್ದಾರೆ. ಬೇಂದ್ರೆಯವರ ಯುಗಾದಿ ಮತ್ತು ಈ ಯುಗಾದಿ ಎರಡೂ ಕವನಗಳಿಗೆ ಮುವತ್ತ್ನಾಲ್ಕು ವರ್ಷಗಳ ಅಂತರವಿದೆ. ಈ ಮಹಾನ್ ಕವಿಯ ಬದುಕಿನ ಕಥೆಗಳನ್ನೆಲ್ಲ ಕೇಳುವಾಗ ಅವರು ಅನುಭವಿಸಿದ ನೋವು, ಸಾಲಾಗಿ ಮಕ್ಕಳನ್ನು ಕಳೆದುಕೊಂಡ ದುಃಖ ಕಾವ್ಯವಾಗಿ “ನೀ ಹೀಂಗ ನೋಡಬೇಡ ನನ್ನ” ಎಂದು ಸ್ಫೋಟವಾಗಿ ಹೊರಬಂದಾಗಿನ ಸಂಗತಿ ಮೂಕರನ್ನಾಗಿಸುತ್ತದೆ; ಕ್ರೌಂಚಪಕ್ಷಿಯ ವಿರಹ ವಾಲ್ಮೀಕಿಯ ಬಾಯಲ್ಲಿ ಕಾವ್ಯವಾಗಿ ಹೊರಬಂದ ರೀತಿಯಂತೆ.
ಕೆರೆಮನೆ ಶಂಭು ಹೆಗಡೆಯವರು ನಿರ್ಯಾಣದ ರಾಮನಾಗಿ “ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು, ಮತ್ತಿನ್ನೇನು ಫಲವಿದೆ ನೀತಿಯೊಂದೆ ದೇವನೆನಿಸಿತು ಎನ್ನನು ಜಗದಲಿ” ಎಂದು ಅಭಿನಯಿಸುವಾಗ ರಾಮನ ಬದುಕಿನ ನೋವು ನಲಿವು ಎರಡರ ವಿಶ್ಲೇಷಣೆಯನ್ನು ಮಾಡುವ ಮತ್ತು ಈ ಅನುಭವಗಳನ್ನು ದಾಟಿ ತಲುಪುವ ಸ್ಥಿತಪ್ರಜ್ಞತೆಯ ಮನಸ್ಥಿತಿಯನ್ನು ವರ್ಣಿಸುತ್ತಿರುವಾಗ ಆ ಪಕ್ವತೆ ಬೇಂದ್ರೆಯವರಲ್ಲಿ ಕಾಣಬಹುದಾಗಿದೆ. ಈ ಪ್ರಪಂಚದಲ್ಲಿ ಜನಿಸಿರುವುದೆಲ್ಲವೂ ಎರಡು ಹಂತಗಳನ್ನು ಹೊಂದುತ್ತವೆ. ಒಂದನೆಯದು ಜೀವಿಸುವುದು. ಉಸಿರು ತುಂಬಿದಲ್ಲಿಂದ ಉಸಿರು ನಿಲ್ಲುವ ಕ್ಷಣದ ತನಕದ ಸವೆಸುವುದು. ಇನ್ನೊಂದು ಬದುಕುವುದು. ಬದುಕಿನಲ್ಲಿಯೂ ಜೀವವಿರುತ್ತದೆ. ಆದರೆ ಇಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗೆ ಕಟ್ಟಿಕೊಂಡ ಬದುಕಿನಿಂದ ನಾವೇನಾಗುತ್ತೇವೆ ಎನ್ನುವುದು ಲೋಕ ನಮ್ಮನ್ನು ಗುರುತಿಸುವ ಕ್ರಮದಿಂದಾಗಿ.
ಈಗ ಹುಟ್ಟುಹಬ್ಬವನ್ನು ಆಚರಿಸುವುದರಿಂದ ಕಳೆದ ಆಯುಷ್ಯದ ನೆನಪಾಗುತ್ತದೆ. ಮೊದಲು ಯುಗಾದಿಯೇ ವ್ಯಕ್ತಿಗತ ಆಯುಷ್ಯವನ್ನೂ ಅಳೆಯುವ ಮಾನವಾಗಿತ್ತು. ಸಮಷ್ಟಿಯ ಬದುಕಿನ ಸುಖ ದುಃಖಗಳ ಆತ್ಮಾವಲೋಕನದ ಕಾಲ ಈ ಯುಗಾದಿ. ಇಳೆ ತನ್ನೊಡಲು ಬರಿದಾಯಿತು ಎಂದು ಯಾವತ್ತಿಗೂ ಅಳಲುವುದಿಲ್ಲ. ತನ್ನನ್ನಾಶ್ರಯಿಸಿ ಬದುಕಿರುವ ಪ್ರಾಣಿಗಗಳನ್ನು ಹೇಗೆ ಪೋಷಿಸಬೇಕೆನ್ನುವುದರ ಅರಿವು ನಿಸರ್ಗಕ್ಕಿದೆ. ಶಿಶಿರ ಋತುವಿನ ಚಳಿಗೆ ಹೆದರಿ ಎಲೆಗಳನ್ನೆಲ್ಲ ಕಳೆದುಕೊಂಡು ಬೋಳಾಗಿ ನೀರವ ಮೌನದಲ್ಲಿರುವಾಗ ಇದ್ದಕ್ಕಿದ್ದಂತೆ ಯಾವುದೋ ಚೇತನ ಅದರೊಳಗೆ ರಸವನ್ನು ಉಕ್ಕಿಸಿಬಿಡುತ್ತದೆ. ತನ್ನದೇ ಎಲೆಯನ್ನು ಹಣ್ಣಾಯಿತೆಂದು ಉದುರಿಸಿಕೊಂಡು ಅದನ್ನೇ ಗೊಬ್ಬರವನ್ನಾಗಿಸಿ ಚಿಗುರಿಗೆ ಪೋಷಣೆಯಾಗುವಿಕೆಯೇ ಚಿರಂಜೀವತ್ವ. ಇದೊಂದು ಋತುಚಕ್ರವೂ ಹೌದು. ಎಳೆಯ ಚಿಗುರಿನಲ್ಲಿ ಮರಕ್ಕೆ ಉಸಿರಾಗುವ ಜವ್ವನದಲ್ಲಿ ಆಹಾರ ಕೊಡುವ ಎಲೆಗಳು ಸೂರ್ಯನ ಕಿರಣಗಳನ್ನು ಹೀರಿ ಹೂವನ್ನು ಕಾಂಡವನ್ನು ರಕ್ಷಿಸಿ ಹೂವರಳಿಸಿ ನಂತರ ಅವಧಿ ಮುಗಿಯುವಾಗ ನಿರ್ಭಾವುಕವಾಗಿ ಮಣ್ಣಾಗುವ ಕ್ರಿಯೆಯಿದೆಯಲ್ಲ, ಅದೇ ಯುಗಾದಿ ನಮಗೆ ಕಲಿಸಿಕೊಡುವ ಪಾಠ. ಹೂವಿನಿಂದ ಮೊಗ್ಗು, ಮೊಗ್ಗಿನಿಂದ ಫಲ, ಫಲದೊಳಗಿನ ಬೀಜ, ಬೀಜದೊಳಗಿನ ಮರವೆನ್ನುವ ಇಲ್ಲಿ ಆದಿ ಅಂತ್ಯಗಳಿಲ್ಲ. ಇದನ್ನೇ ಬೇಂದ್ರೆಯವರು “ಯುಗದ ಮಧ್ಯಬಿಂದು ಒಂದು” ಎಂದು ವರ್ಣಿಸಿರುವುದು.
ಬೇಂದ್ರೆಯವರಿಗಿಂತ ಕುವೆಂಪು ಯುಗಾದಿಯನ್ನು ಗಮನಿಸುವ ಬಗೆ ಬೇರೆ ರೀತಿಯಲ್ಲಿ. ಕುವೆಂಪು ರಸಋಷಿ. ಬೇಂದ್ರೆ ಇಲ್ಲಿಂದ ಆಚೆಯ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ನಾನು ನೀನು ಆನು ತಾನುಗಳಲ್ಲವೂ ಒಂದಾಗುವ ಏಕತ್ರ ಸ್ಥಿತಿ ಅವರದ್ದು. ಆದರೆ ಕುವೆಂಪು ಈ ಲೋಕದಲ್ಲಿನ ಬದುಕನ್ನು ಸಂಭ್ರಮಿಸುತ್ತಾರೆ. ಈ ಲೋಕ ನಶ್ವರವೆಂದು ಅವರಿಗೆ ಗೊತ್ತಿದೆ. ಆದರೂ ಇರುವಷ್ಟು ಕಾಲ ಇಲ್ಲಿ ಬದುಕಬೇಕು, ಜೀವಿಸುವುದಲ್ಲ ಎನ್ನುತ್ತಾರೆ. ಅವರ ಕಾವ್ಯವೆಂದರೆ ಅದು ದರ್ಶನ. ರಾಮಾಯಣದಲ್ಲಿನ ಮಂಥರೆಗೆ ಹೊಸ ರೂಪವನ್ನು ತೋರಿದವರು ಅವರು. ರಚ್ಚೆಹಿಡಿದು ಅಳುತ್ತಿದ್ದ ರಾಮನಿಗೆ ಕನ್ನಡಿಯೊಳಗಿನ ಚಂದ್ರನನ್ನು ತೋರಿಸಿ ನಗಿಸಿದವಳು. ಆಗ ನಕ್ಕ ರಾಮ ನಂತರ ಅಳಲೇ ಇಲ್ಲ. ರಾಮನ ನಗುವಿನ ಹಿಂದೆ ಇರುವುದು ಮಂಥರೆಯೆನ್ನುವ ಹೊಸ ಹೊಳವು ರಾಮಾಯಣ ದರ್ಶದಲ್ಲಿದೆ. ಬದುಕಿನಲ್ಲಿನ ನಶ್ವರತೆಯ ಅರಿವಿದ್ದೂ ಅದನ್ನು ಶಾಶ್ವತವೆನ್ನುವ ರೀತಿಯಲ್ಲಿ ಅನುಭವಿಸಬೇಕು ಎಂದು ಕುವೆಂಪು ಸಾರಿದ್ದಾರೆ. ಅದು ಸಾಲ ಮಾಡಿಯಾದರೂ ತುಪ್ಪ ತಿನ್ನುವ ಕ್ರಿಯೆಯಲ್ಲ; ಮನಸ್ಸಿನ ಶುದ್ಧತೆಯಿಂದ ಸಂಕಲ್ಪ ಮಾಡಿ ದೊರೆತಿರುವುದನ್ನು ಅನುಭವಿಸುವುದು. ಕುಡಿಯುವ ನೀರಿಗೆ ಗಂಗೋದಕವೆನ್ನುತ್ತಾರೆ. ಪೂಜೆಯಲ್ಲಿಯೂ ಅಭಿಷೇಕ ಮಾಡುವಾಗ ಗಂಗಾ, ಯಮುನಾ, ಗೋದಾವರಿ, ಸರಸ್ವತಿಯನ್ನು ಆಹ್ವಾನಿಸಿದ ಹಾಗೆ. ನೀನು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದಂತೆ ಹಬ್ಬದ ದಿನ ನಾವು ಸ್ನಾನ ಮಾಡುವ ನೀರು ಅದು ಸುರಲೋಕದ ನದಿಯೇ ಆಗುತ್ತದೆ.
ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು
ಹೊಸ ಸಂವತ್ಸರ ಭೂಮಿಗೆ ಬಂದಾಗ ಮೈಮರೆಯಬೇಡ ಇದು ನಮಗೆ ದಕ್ಕಿರುವ ಭೋಗ ಎಂದು ಸಂತೋಷಪಡುವುದೇ ಬದುಕು. ಮನುಷ್ಯ ಬದುಬೇಕಾದರೆ ಹೃದಯವನ್ನು ತೆರೆದಿಡಬೇಕು. ಗೀತೆಯ ಘೋಷವೆನ್ನುವುದು ಅನೇಕ ಅರ್ಥಗಳನ್ನು ಕೊಡುತ್ತದೆ. ಅತಿಥಿಯೆಂದರೆ ಕರೆಯದೇ ಅಕಸ್ಮಾತಾಗಿ ಬರುವವನು, ಆತನನ್ನು ನೀನೆ ಕರೆ, ಕರ್ತವ್ಯವನ್ನು ಮಾಡು. ಫಲವಪೇಕ್ಷಿಸಬೇಡ ಎನ್ನುವುದಾಗಿದೆ. ಬರುವವ ಯಾರು ಎಂದು ಯೋಚಿಸದೇ ಹೃದಯವನ್ನು ಬಿಚ್ಚಿಡು. ನಿನ್ನ ನೀನು ಅರಿತುಕೊಂಡರೆ ಅದು ನಿನಗೆ ಅರ್ಥವಾದೀತು ಎನ್ನುತ್ತಾರೆ. ಸುರಲೋಕದ ಸಂಪತ್ತಿಗೆ ಶ್ರೀ ಎಂದು ಹೆಸರು. ಆ ಸಂಪತ್ತು ಬೇಕಾದರೆ ಇಲ್ಲಿ ಅನಿಕೇತರಾಗಬೇಕು. ರಸ ಸಿದ್ಧಿಯಾಗಬೇಕಾದರೆ ದೈವತ ಸಿದ್ಧಿ ಮತ್ತು ಮಾನುಷಿ ಸಿದ್ಧಿ ಎನ್ನುವ ಎರಡನ್ನೂ ಮೀರಬೇಕಾಗುತ್ತದೆ. ʼರಸೋ ವೈ ಸಃʼ ಎನ್ನುವುದು ಕುವೆಂಪು ಅವರ ಮೆಚ್ಚಿನ ವಿಷಯವೂ ಹೌದು.
ನಿಯತಿಕೃತ ನಿಯಮರಾಹಿತ್ಯ, ರಸಾನುಭವದ ಅಲೌಕಿಕತೆ, ಸಾಹಿತ್ಯದಲ್ಲಿ ಪ್ರತಿಮಾ, ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮೀಮಾಂಸೆ, ರಸೋ ವೈ ಸಃ ಎನ್ನುವ ಕುವೆಂಪು ಬರೆದ ಐದು ಪ್ರಬಂಧಗಳನ್ನು ಓದಿದರೆ ಅವರ ಪ್ರತಿಯೊಂದು ಶಬ್ದಕ್ಕೂ ಹೊಸ ಹೊಸ ಅರ್ಥ ಹೊರಹೊಮ್ಮುತ್ತದೆ. ನೂತನ ಸಾಹಸವೆನ್ನುವುದು ಬದುಕಿನಲ್ಲಿಯ ಸೃಜನಶೀಲತೆಯನ್ನು ತೋರಿಸುತ್ತದೆ. ಕಳೆದು ಹೋದ ಭೂತವನ್ನು ನೆನಪಿಸಿ ಕೊರಗಬಾರದು. ಭೂತವೆನ್ನುವುದು ಅನುಭವಕ್ಕಷ್ಟೇ ಸೀಮಿತವಾಗಿರಲಿ, ಭವಿಷ್ಯವೆನ್ನುವುದು ಸಂಭವ; ಹೀಗಾದರೆ ಹಾಗಾಗಬಹುದೆನ್ನುವ ಆಶಾವಾದ, ಈ ಎರಡರೆ ನಡುವೆ ಗತದ ಅನುಭವದ ನೆಲೆಯಲ್ಲಿ ಪಾಪ ಪುಣ್ಯವನ್ನು ನಮ್ಮಂತರಂಗದಲ್ಲಿ ಶೋಧಿಸಿ ನಾವೇ ಅದನ್ನು ಸುಟ್ಟುಬಿಡಬೇಕು. ನೀರು ತೊರೆಯಾಗಿ ಹರಿಯುವಾಗ ಕೊಳೆಯನ್ನೆಲ್ಲ ಕೊಚ್ಚಿ ಶುದ್ಧವಾಗುತ್ತಾ ಹೋಗುವಂತೆ ಅಪಮಾನವನ್ನು ಮರೆತುಬಿಡು, ಇದು ಹಾವು ಪೊರೆಯನ್ನು ಬಿಡುವಂತೆ ಅಲ್ಲ; ಅದು ಲೌಕಿಕ, “ವಾಸಾಸಿ ಜೀರ್ಣಾನಿ ಯಥಾ ವಿಹಾಯ” ಎನ್ನುವ ಗೀತೆಯ ಸೂಕ್ತದ ಆಶಯವಿದು. ಯಾವುದೂ ನಾನಲ್ಲ; ನನಗೆ ಯಾವುದೂ ಇಲ್ಲವೆನ್ನುವಾಗ, ಅವರಲ್ಲಿನ ರಾಮಕೃಷ್ಣಾಶ್ರಮದ ಪ್ರಭಾವವನ್ನು ಗಮನಿಸಬಹುದು. ನವ ವತ್ಸರದಲ್ಲಿ ನವ ಬಾಳನ್ನು ಬಾಳಬೇಕೆನ್ನುವ ಸತ್-ಚಿಂತನೆ ಇಲ್ಲಿದೆ.
ಅವರ ಕಾವ್ಯದಲ್ಲಿ ಮಾರ್ಗದ ನಡೆ ತೂಗಿ ತೊನೆದಾಡುತ್ತಿರುವಾಗ ತಾನು ನೆಲದ ಕವಿಯೆನ್ನುವುದನ್ನು ಅವರು ಮರೆಯುವುದಿಲ್ಲ. ದೇಸಿ ನುಡಿಗಟ್ಟನ್ನೂ ಅವರು ಇದೇ ಗೇಯತೆಯಲ್ಲಿ ತರಬಲ್ಲರು. ಅದನ್ನೇ ಇಲ್ಲಿ “ಉರಿಯಲಿ ಸತ್ಯದ ಊದಿನ ಕಡ್ಡಿ I ಚಿರ ಸೌಂದರ್ಯದ ಹಾಲ್ಮಡ್ಡಿ IIʼʼ ಎಂದಿದ್ದಾರೆ. ಊದಿನ ಕಡ್ಡಿ ಸರಳ ಭಕ್ತಿಯ ಪ್ರತೀಕವಾದರೆ ಹಾಲು ಮತ್ತು ಮಡ್ಡಿ ಜನಸಾಮಾನ್ಯರ ಅನ್ನ. ಬೇಂದ್ರೆಯವರೂ ಪ್ರಕೃತಿ ಹೊಸ ವರುಷಕೆ ಹೊಸ ಹರುಷವನ್ನು ತರುತ್ತದೆ ಎನ್ನುತ್ತಾ ಸಂಭ್ರಮಿಸುತ್ತಾರೆ. ಅವರು ತಮ್ಮನ್ನೇ ತೆರೆದಿಟ್ಟುಕೊಳ್ಳುತ್ತಾ ನಾನೇರುವ ಎತ್ತರಕ್ಕೆ ನೀನೇರು ಎನ್ನುವಂತೆ ಬೆಳೆಯುತ್ತಾ ಹೋಗುತ್ತಾರೆ. ಇನ್ನೇನು ಬೇಂದ್ರೆ ಕೈಗೆ ಸಿಕ್ಕಿದರೂ ಎನ್ನುವಾಗ ನಮಗೆ ದಕ್ಕದೇ ಹತ್ತಂಗುಲದಾಚೆ ಬೆಳೆಯುತ್ತಾರೆ. ಕುವೆಂಪುವಿನ ಸೆಲೆಯೂ ಹಾಗೇ ಆಳವನ್ನು ಹುಡುಕುವಾಗ ಅದರಾಚೆಯೇ ಇರುತ್ತಾರೆ. ಈ ಇಬ್ಬರನ್ನೂ ಅಳೆಯುವದೆಂದರೆ ಅದು ಬ್ರಹ್ಮ ಮತ್ತು ವಿಷ್ಣು ಶಿವಲಿಂಗವನ್ನು ಅಳೆದಂತೆ. ಪಾತಾಳದಾಚೆ, ಬ್ರಹ್ಮಾಂಡವನ್ನು ದಾಟಿ ಇಬ್ಬರೂ ನಿಲ್ಲುತ್ತಾರೆ.
ಜೀವನದಲ್ಲಿ ಅದಿಲ್ಲ ಇದಿಲ್ಲ ಎಂದು ಕೊರಗುವುದಲ್ಲ, ಮುಂದೆ “ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!” ಎಂದಿದೆ. ಮಾವು ರಸದ ಸಂಕೇತ, ಬೇವು ಆರೋಗ್ಯದ ಸಂಕೇತ, ಹಾಗಾಗಿ ಸುಖ ದುಃಖಗಳನ್ನೆಲ್ಲ ಮೆಟ್ಟಿ ನಿಲ್ಲುವವನೇ ಕಲಿ ಆತನೇ ಮಲ್ಲ ಎನ್ನುವ ಹೊಸಪಥವನ್ನು ತೋರಿಸುತ್ತಾರೆ. ಮರದಲ್ಲಿ ಹೋವು ತುಂಬಿದ ಕೂಡಲೇ ಜೇನು ಬರುವುದು ಸಹಜದ ಕ್ರಿಯೆ. ಅದನ್ನು ನೋಡಿ ಆನಂದಿಸುವ ಮನಸ್ಸು ನಮಗಿರಬೇಕು. “ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ” ಗಾಳಿ ಮಧುರವಾಗಿ ಬೀಸಲಿ, ನದಿಗಳೆಲ್ಲ ಮಧುರವಾಗಿ ಹರಿಯಲಿ ಎನ್ನುವ ಆರ್ಷೇಯದ ಆಶಯವಿಲ್ಲಿದೆ. ಭೂಮಿಯನ್ನು ಗಂಧವತಿ ಎನ್ನುತ್ತಾರೆ. ಈ ಗಂಧವತಿಯ ಎಲ್ಲವೂ ಮಧುಮಧುರವಾಗಿ ನಮ್ಮನ್ನು ಆಹ್ಲಾದಗೊಳಿಸಲಿ ಎನ್ನುವುದನ್ನು ಮುಂದಿನ ಸಾಲು “ಜೀವನವೆಂಬುದು ಹೂವಿನ ಬೀಡು; ಕವಿಯದೇ ಹೆಜ್ಜೇನಿನ ಬೀಡು” ವರ್ಣಿಸಲಾಗಿದೆ.
ಯುಗಾದಿಯ ನಂತರ ಬರುವ ಚೈತ್ರ ಮತ್ತು ವೈಶಾಖವನ್ನು ಮಧುಮಾಸವೆಂದು ಕರೆಯುತ್ತಾರೆ. ಪ್ರಕೃತಿ ಒಣದಾಗಿದ್ದರೂ ಹೂವು ನಳನಳಿಸುತ್ತದೆ. ಹೀಗೆ ನಮ್ಮ ನಡೆ ನುಡಿಗಳೆಲ್ಲವೂ ಮಧುರವಾಗಿದ್ದರೆ ಲೋಕ ನಮ್ಮನ್ನು ತಾನೇ ತಾನಾಗಿ ಮೆಚ್ಚಿಕೊಳ್ಳುತ್ತದೆ. ಕಾಳಿದಾಸನ ಖಂಡಕಾವ್ಯ ಋತುಸಂಹಾರದಲ್ಲಿ ವಸಂತಋತುವಿನ ಕುರಿತು ಸುಂದರವಾದ ವರ್ಣನೆಯಿದೆ. ಪ್ರಣಯಿಗಳ ಮನಸ್ಸನ್ನು ಸೆರೆಹಿಡಿಯಲು ಮಾಂದಳಿರ ಬಾಣದೊಡನೆ ವಸಂತ ಬರುತ್ತಾನೆ ಎನ್ನುವ ಮೂಲಕ ಮಧುಮಾಸವನ್ನು ವಿವರಿಸುತ್ತಾನೆ. ಸಂಹಾರವೆಂದರೆ ಜೋಡಿಸುವುದು, ಹೆಣೆಯುವುದು ಎನ್ನುವ ಅರ್ಥವಿದೆ. ಹಿಂದಿನ ಋತುವಿನಿಂದ ಮುಂದಿನ ಋತುವಿಗೆ ಹೆಣೆದುಕೊಳ್ಳುವುದು ಎನ್ನುವ ಅರ್ಥವನ್ನೂ ಕುವೆಂಪು ತೆರೆದಿರಿಸುತ್ತಾರೆ.
ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!
ಕೊನೆಯ ನುಡಿಗಳನ್ನು ಗಮನಿಸಿ. ಇಲ್ಲಿ ಯುಗಾದಿಗೂ ಕವಿಗೂ ಇರುವ ಸಂಬಂಧದಿಂದಾಗಿ ಯುಗಾದಿಯೇ ಧನ್ಯವಾಗಬೇಕು; ಯಾಕೆಂದರೆ ಅದಕ್ಕೆ ಕವಿಯೊಲ್ಮೆಯಿರುವುದರಿಂದ. ಕವಿಯೆಂದರೆ ಮೇಧಾವಿ, ಕ್ರಾಂತದರ್ಶನವುಳ್ಳವನು ಎನ್ನುವ ಅರ್ಥಗಳಿವೆ. ಅಕ್ಷರಗಳ ಕ್ರಮಬದ್ಧ ಜೋಡಣೆ ಶಬ್ದ. ಧ್ವನ್ಯಾರ್ಥವಾಗಿ ಗೇಯತೆಯನ್ನು ಕೊಟ್ಟರೆ ಅದು ಕಾವ್ಯ. ಈ ಶಕ್ತಿ ಬರುವುದು ಕವಿಯಿಂದ ಮಾತ್ರ ಸಾಧ್ಯ. ಹಾಗಾಗಿ ಕವಿಯ ಒಲುಮೆ ಇಲ್ಲದೇ ಯಾವುದಕ್ಕೂ ಅರ್ಥ ಸಿಗಲಾರದು.
ಕಾವ್ಯವೆನ್ನುವುದೇ ರಸಸೃಷ್ಟಿ. ರಸ ಸೃಷ್ಟಿಯಲ್ಲಿ “ತನ್ನಾಶಸ್ಯ ನಾಶಸ್ಯ”ವೆನ್ನುವ ಮಾತಿದೆ. ಕವಿ ಕಾವ್ಯದಲ್ಲಿ ಮುಳುಗಿ ಹೋಗಕೂಡದು. ಆದರೆ ಕಾವ್ಯ ಕವಿಯನ್ನು ಮರೆಯಿಸಿಬಿಡಬೇಕು. ಕಾವ್ಯವನ್ನು ಬರೆದ ಕವಿ ಮತ್ತು ಓದುಗನ “ಆವರಣ ಭಂಗವಾಗಬೇಕು”. ದ. ರಾ. ಬೇಂದ್ರೆ ಮತ್ತು ಕುವೆಂಪು ಇಬ್ಬರೂ ಇಂಥ ಸಾಧ್ಯತೆಯನ್ನು ಮೀರಿನಿಂತ ಕವಿಗಳು.
ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ಇಬ್ಬರು ರಸಋಷಿಗಳು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.
ಅಂಕಣ
ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳ ಮೇಲೆ ಆತನಿಗಿರುವ ಕಾಳಜಿಗಳಿಂದಾಗಿ. ರಾಮ ಕುಟುಂಬವತ್ಸಲ, ಸಮರ್ಥ ರಾಜ ಆಗಿರುವ ಜೊತೆಗೆ ಆತ ಆದರ್ಶ ಪುರುಷನೂ ಆಗಿದ್ದಾನೆ. ಇಂಥ ಪುರುಷೋತ್ತಮ ಸ್ವರೂಪಿಯ ಬಗ್ಗೆ ಒಂದು ವಿಶ್ಲೇಷಣೆ.
ಋಣದ ಅರಿವಿನಲ್ಲಿ ಹೊಣೆಗಾರಿಕೆ ನಿಭಾಯಿಸಿದ ಕರ್ತವ್ಯ ಪ್ರಜ್ಞೆ
ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ I
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಯಥಾ II
“ಶ್ರೀ ರಾಮನಾಮವೇ ಜಯರಾಮನಾಮವೇ ಜಯ ಜಯ ರಾಮನಾಮವೇ ನನ್ನ ಜೀವನವು. ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲವೇ ಇಲ್ಲ”
ವಾಲ್ಮೀಕಿ ರಾಮಾಯಣದ ಮೊದಲು ಬರುವ ರಾಮಾಯಣದ ಮಹಿಮೆಯಲ್ಲಿ ಬರುವ ಶ್ಲೋಕವಿದು. ರಾಮನೆನ್ನುವ ಶಬ್ದ ಒಂದು ಪ್ರಜ್ಞಾ ಪ್ರವಾಹವಾಗಿ ಯುಗ ಯುಗಗಳಿಂದ ಹರಿದು ಬಂದಿದೆ. ಈ ವಾಚಕಶಬ್ದ ಬದುಕಿಗೊಂದು ಸ್ಫೂರ್ತಿಯಾಗಿದೆ. ರಾಮನೆಂದಾಗ ಆತನನ್ನು ಕುಟುಂಬವತ್ಸಲನೆಂದೋ, ಸಮರ್ಥ ರಾಜನೆಂದೋ ಹೇಳುವುದರ ಜೊತೆಗೆ ಆತನು ಆದರ್ಶ ಪುರುಷನೂ ಆಗಿದ್ದಾನೆ. ಕನ್ನಡಿಗೂ ಆದರ್ಶವೆನ್ನುವ ಹೆಸರಿದೆ. ಆದರ್ಶವೆಂದರೆ ನಮ್ಮ ಮುಖಾವಲೋಕನವನ್ನು ಮಾಡಿಕೊಳ್ಳುವುದು.
ರಾಮ ಕಾಡಿಗೆ ಹೋಗುವಾಗ ತಂದೆಯಾದ ದಶರಥ ತನ್ನ ಸಂಗಡ ಒಂದು ಹೊತ್ತಿನ ಊಟವನ್ನಾದರೂ ಮಾಡಿ ಹೋಗು ಎಂದರೆ, ಯಾವಾಗ ಕೈಕೆಯಿ ನ್ಯಾಸವಾಗಿಟ್ಟ ವರಗಳನ್ನು ಪಡೆದುಕೊಂಡಳೋ, ಆ ಕ್ಷಣದಿಂದಲೇ ತಾನು ಈ ರಾಜ್ಯದಲ್ಲಿರುವುದು ಉಚಿತವಲ್ಲವೆಂದು ನಯವಾಗಿಯೇ ತಿರಸ್ಕರಿಸಿ ವನಕ್ಕೆ ಹೊರಟವನ ಮನಸ್ಸಿನಲ್ಲಿ ಇದ್ದಿರುವುದು ಕರ್ತವ್ಯದ ಕುರಿತು ನಿಷ್ಠೆಯೇ ಹೊರತು ಬೇರೇನೂ ಅಲ್ಲ. ಭರತನಿಗೆ ರಾಜ್ಯವನ್ನು ಕೊಡಬೇಕು ಮತ್ತು ನೀನು ಅರಣ್ಯಕ್ಕೆ ಹೋಗಬೇಕೆಂದು ಹೇಳಿದಾಗ ಆತ ಮೊದಲು ಆತಂಕಿತನಾಗಿದ್ದು ತನ್ನ ತಂದೆ ಆಘಾತದಿಂದ ಕುಳಿತಿರುವುದರ ಕುರಿತು. ಆ ಹೊತ್ತಿನಲ್ಲಿ ತನ್ನ ತಂದೆ ಕಳವಳಗೊಂಡು ತಲೆತಗ್ಗಿಸಿ ಮೌನವಾಗಿ ಕುಳಿತಿರುವ ಘಟನೆ ಆತನಿಗೆ ಎಲ್ಲವನ್ನೂ ಹೇಳಿತ್ತು. ರಾಮ ಕೈಕೆಯಿಗೆ “ಅಮ್ಮಾ ನೀನು ನನ್ನ ಸ್ವಭಾವವನ್ನು ಈ ಮೊದಲು ಕಂಡಿಲ್ಲವೇ. ನೀನು ಈ ಮಾತುಗಳನ್ನು ನನಗೇ ನೇರವಾಗಿ ಹೇಳಬಹುದಿತ್ತಲ್ಲ. ನಿನಗೆ ಅಧಿಕಾರವಿತ್ತಲ್ಲವೆ? ನೀನು ಈ ವಿಷಯದಲ್ಲಿ ರಾಜನಾಗಿರುವ ನನ್ನ ತಂದೆಯನ್ನು ನಿರ್ಬಂಧಿಸಿ ಕೇಳಬೇಕಾದ ಅವಶ್ಯಕತೆಯೇನಿತ್ತು” ಎನ್ನುತ್ತಾ ಮುಂದುವರೆದು “ನೂನಂ ಮಯಿ ಕೈಕಯಿ! ಕಿಞ್ಚಿದಾಶಂಸಸೇ ಗುಣಮ್”. ನಿಸ್ಸಂಶಯವಾಗಿ ಇಷ್ಟು ವರ್ಷ ನಿನ್ನ ಹತ್ತಿರ ಇದ್ದರೂ ನಿನ್ನಲ್ಲಿರುವ ಈ ಗುಣಗಳು ನನಗೆ ತಿಳಿಯದೇ ಹೋಯಿತು!” ಎನ್ನುವ ಮಾತುಗಳು ಬಹುಶಃ ಕೈಕೆಯ ಎದೆಯಲ್ಲಿಯೂ ನಡುಕ ಹುಟ್ಟಿಸಿರಲೂ ಸಾಕು.
ರಾಮನ ಬದುಕಿನ ಆದರ್ಶವೇನೆಂದರೆ ಆತನ ಕರ್ತವ್ಯ ಪರಾಯಣತೆ. ಹಿರಿಯ ಮಗನಾಗಿ ತಾನು ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನೂ ಆತ ಬಲ್ಲ. ಹಾಗಾಗಿ ಕೈಕೆಯಿಯ ಈ ಬೇಡಿಕೆಯನ್ನು ಅರಿತ ಮೇಲೆ ತನ್ನ ತಂದೆ ತಾಯಿಯ ಯೋಗಕ್ಷೇಮದ ಚಿಂತೆ ಅವನಿಗೆ ಸಹಜವಾಗಿಯೇ ಬಾಧಿಸಿದೆ. ಒಂದು ವೇಳೆ ಈ ತಾಯಿ ಮತ್ತು ಮಗ ಅವರನ್ನು ನಿರ್ಲಕ್ಷಿಸಿದರೆ ಎನ್ನುವ ಚಿಂತೆ ಆತನನ್ನು ಕಾಡಿದೆ. ಆಗ ಆತ ಕಠೋರವಾಗಿ ಕೈಕೆಯಿಗೆ ತನ್ನ ತಂದೆಯನ್ನು ನೋಡಿಕೊಳ್ಳಬೇಕಾದ ಆಕೆಯ ಕರ್ತವ್ಯದ ಕುರಿತು ಎಚ್ಚರಿಸುತ್ತಾನೆ. “ಭರತಃ ಪಾಲಯೇದ್ರಾಜ್ಯಂ ಶುಶ್ರೂಷೇಚ್ಚ ಪಿತುರ್ಯಥಾ৷ ತಥಾ ಭವತ್ಯಾ ಕರ್ತವ್ಯಂ ಸ ಹಿ ಧರ್ಮ ನಾತನಃ৷৷2.19.26৷৷ “ತನ್ನ ತಂದೆಯನ್ನು ಭರತ ಸರಿಯಾದ ಕ್ರಮದಲ್ಲಿ ಶುಶ್ರೂಷೆ ಮಾಡುವಂತೆ ನೋಡಿಕೊಳ್ಳಬೇಕಾದುದು ನಿನ್ನ ಹೊಣೆ. ಪಿತೃಶುಶ್ರೂಷೆಯೆನ್ನುವದಕ್ಕಿಂತ ಸನಾತನವಾದ ಧರ್ಮ ಮತ್ಯಾವುದೂ ಇಲ್ಲ” ಎನ್ನುವ ಮಾತುಗಳು ಬಲು ಮಹತ್ವದ್ದು.
ರಾಮ ಮಿತಭಾಷಿ, ಹೆಚ್ಚಿಗೆ ವಿವರಣೆ ಆತನಲ್ಲಿಲ್ಲ. ಅದನ್ನು ಮೀರಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆನ್ನುವ ಎಚ್ಚರಿಕೆ ಈ ಮಾತಿನಲ್ಲಿದೆ. ರಾಮನ ಬಾಯಲ್ಲಿ ವಾಲ್ಮೀಕಿ ಆಡಿಸುವ ಇಂತಹ ಮಾತುಗಳ ಮೂಲಕ ರಾಮನ ವ್ಯಕ್ತಿತ್ವವನ್ನು ಬೆಳೆಸುತ್ತಾ ಹೋಗುತ್ತಾರೆ. ವಿಶ್ವಾಮಿತ್ರರು “ಕರ್ತವ್ಯವೇ ನಿನ್ನ ಮುಂದಿನ ದೇವಪೂಜೆ. ಅದೇ ನಿನ್ನ ಧರ್ಮ” ಎಂದು ಉಪದೇಶಿಸಿರುವುದನ್ನು ಕಾಯಾ ವಾಚಾ ಮನಸಾ ಪಾಲಿಸುತ್ತಿರುವವ ಆತ. ಈ ಆದರ್ಶವೇ ಆತ ದೇವರಾಗಲು ಕಾರಣ.
ವಾಲ್ಮೀಕಿಯ ರಾಮ ಪ್ರಜೆಗಳಿಗೂ ಪ್ರೀತಿಪಾತ್ರನಾಗಿದ್ದ. ಅದರ ನಾಡಿಮಿಡಿತ ಅರಿತ ಧಶರಥ ಬಲು ದೀರ್ಘಕಾಲ ಈ ರಾಜ್ಯವನ್ನು ಆಳಿದ. ತನಗಿನ್ನು ಸಾಕು ಈ ಅಧಿಕಾರ, ಇನ್ನು ಮುಂದೆ ರಾಮನಿಗೆ ಪಟ್ಟಕಟ್ಟುವೆ ಎಂದು ನಿಶ್ಚಯಿಸುತ್ತಾನೆ. ಅಯೋಧ್ಯೆಯ ಜನಪದ ರಾಮನನ್ನು ಅಕ್ಕರೆಯಿಂದ ನೋಡುತ್ತಿದ್ದರು. ರಾಜಕುಟುಂಬದೊಡನೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ ಪ್ರಜೆಗಳು ಬಹುಕಾಲವರೆಗೆ ಮಕ್ಕಳಿಲ್ಲದ ಅರಮನೆಯಲ್ಲಿ ಜನಿಸಿದ ಮೊದಲ ಮಗನ ಕುರಿತು ಒಂದು ಭಾವನಾತ್ಮಕವಾದ ಪ್ರೀತಿಯನ್ನು ಹೊಂದಿರುತ್ತಾರೆ. ಈತ ತಮ್ಮನ್ನು ಮುಂದೆ ಆಳುವವ ಎನ್ನುವ ಒಂದು ಪ್ರಭಾವಳಿ ಆ ರಾಜಕುಮಾರನ ಮೇಲೆ ಬೆಳೆದಿರುತ್ತದೆ. ಭಾವನೆಯೆನ್ನುವುದು ಜಂಗಮ, ಅದು ಸ್ಥಾಯಿಯಾಗಬೇಕಾದರೆ ಸಮಾಜದ ಶೃತಿಗೆ ಸ್ಪಂದಿಸುವ ಶೃತಿ ನಿರಂತರವಾಗಿ ಮೀಟುತ್ತಲೇ ಇರಬೇಕಾಗುತ್ತದೆ.
ರಾಮನಲ್ಲಿಯೂ ಪ್ರಜೆಗಳ ಕುರಿತು ಅಷ್ಟೇ ವಾತ್ಸಲ್ಯವಿತ್ತು. ಅಯೋಧ್ಯೆಯ ಪ್ರಜೆಗಳ ವಿಶೇಷವೆಂದರೆ ರಾಜ ತಪ್ಪುಮಾಡಿದರೆ ಅದನ್ನು ನಿರ್ಭೀತಿಯಿಂದ ಹೇಳಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಸೂರ್ಯವಂಶದ ರಾಜಮನೆತನ ನಿರಂತರವಾಗಿ ಕೋಸಲದೇಶವನ್ನು ಆಳುತ್ತಾ ಬಂದಿದ್ದರೂ ಅವರು ನಿರಂಕುಶರಾಗಿರಲಿಲ್ಲ. ಅರಮನೆಯಿಂದ ತಪ್ಪುಗಳು ಘಟಿಸಿದಾಗ ನೇರವಾಗಿ ರಾಜನಿಗೇ ದೂರು ಕೊಡಬಹುದಾಗಿತ್ತು. ಮಾಂಧಾತನ ಮಗ ದಂಡಕ, ಇಕ್ಷ್ವಾಕುವಿನ ಮಗ ಶಶಾದ ಇವರೆಲ್ಲರೂ ತಪ್ಪು ಮಾಡಿದಾಗ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾಡಿಗೆ ಅಟ್ಟಿರುವುದನ್ನು ಗಮನಿಸಬಹುದಾಗಿದೆ. ಸಗರನ ಮಗ ‘ಅಸಮಞ್ಜ’ ಎನ್ನುವವ ಕ್ರೂರಿಯಾಗಿದ್ದ. ಆತ ಅಯೋಧ್ಯೆಯ ಚಿಕ್ಕಮಕ್ಕಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರು ಅಳುವುದನ್ನು ನೋಡಿ ವಿಕೃತಾನಂದವನ್ನು ಹೊಂದುತ್ತಿದ್ದ. ಈ ಕ್ರೌರ್ಯವನ್ನು ಸಹಿಸಲಾರದ ಅಯೋಧ್ಯೆಯ ಪ್ರಜೆಗಳು ಸಗರನಿಗೆ ದೂರು ಕೊಟ್ಟು ಅವನನ್ನು ಶಿಕ್ಷಿಸಲು ಹೇಳಿದಾಗ ತಡಮಾಡದೇ ದೊರೆ ಆತನನ್ನು ತ್ಯಜಿಸಿ ಅರಣ್ಯಕ್ಕೆ ಕಳುಹಿಸಿದ. ಈ ಪರಂಪರೆ ರಾಮನ ಕಾಲದಲ್ಲಿಯೂ ಇತ್ತು. ಸೀತೆ ರಾವಣನಲ್ಲಿ ಇದ್ದು ಬಂದಿರುವ ಕಾರಣದಿಂದ ಜನಸಾಮಾನ್ಯರು ನಗರಗಳಲ್ಲಿ, ಹಳ್ಳಿಗಳಲ್ಲಿ, ಓಣಿ ಓಣಿಗಳಲ್ಲಿ ಆಕೆಯ ಶೀಲದ ಕುರಿತು ಆಡಿಕೊಳ್ಳುತ್ತಿದ್ದರು. ರಾಮನ ಗೂಢಚಾರರಲ್ಲಿ ಓರ್ವನಾದ ಭದ್ರನೆನ್ನುವವ ತನ್ನ ಇತರ ಸಂಗಾತಿಗಳೊಡನೆ ಈ ಸಂಗತಿಯನ್ನು ರಾಮನಿಗೆ ತಿಳುಹಿದ. ನಂತರ ಇದೇ ವಿಷಯವನ್ನು ವಿಜಯ, ಮಧುಮತ್ತ, ಕಾಶ್ಯಪ, ಪಿಂಗಲ, ಕುಟಿ, ಸುರಾಜ, ಕಾಲಿಯ ದಂತವಕ್ತ್ರ ಮತ್ತು ಸುಮಾಗಧರೆನ್ನುವ ಇತರರೂ ರಾಮನಿಗೆ ಅರುಹುತ್ತಾರೆ. ಈ ಸಾರ್ವತ್ರಿಕ ಜನಪವಾದದ ಕಾರಣ ರಾಮ ಸೀತೆಯನ್ನು ತ್ಯಜಿಸಿದ. ಇಲ್ಲಿ ರಾಮ ಸೀತೆಯನ್ನು ಬಿಟ್ಟಿರುವುದನ್ನು ಸಮರ್ಥನೆಗೂ ಅಥವಾ ವಿರೋಧಕ್ಕೂ ಈ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ. ಆ ಕಾಲದಲ್ಲಿ ಅಯೋಧ್ಯೆಯ ಪ್ರಜೆಗಳಿಗೆ ರಾಜಮನೆತನವನ್ನೂ ಟೀಕಿಸುವಷ್ಟು ವಾಕ್-ಸ್ವಾತಂತ್ರ್ಯವಿತ್ತೆನ್ನುವುದನ್ನು ತಿಳಿಸಲಿಕ್ಕಷ್ಟೇ ಈ ಸಂಗತಿಯನ್ನು ಪ್ರಸ್ತಾಪಿಸಿರುವುದು.
ಇನ್ನೇನು ನಾಳೆ ರಾಮನ ಪಟ್ಟಾಭಿಷೇಕ, ತಮ್ಮ ದೊರೆಯಾಗಬೇಕಾಗಿದ್ದವ ತಮ್ಮ ವಿಶ್ವಾಸಕ್ಕೆ ಮತ್ತು ಒಲವಿಗೆ ಪಾತ್ರನಾದವ ಅರಣ್ಯಕ್ಕೆ ಹೋಗುತ್ತಿದ್ದಾನೆಂದು ತಿಳಿದಾಗ ಸಹಜವಾಗಿ ಅವರಲ್ಲಿ ಭಾವಾವೇಶದ ಕಟ್ಟೆ ಒಡೆಯಿತು. ರಾಮನಿಲ್ಲದ ಅಯೋಧ್ಯೆ ತಮಗೂ ಬೇಡವೆನ್ನುತ್ತಾ ಪ್ರಜೆಗಳು ರಾಮನನ್ನು ಅನುಸರಿಸಿ ಅರಣ್ಯಕ್ಕೆ ಬರುತ್ತೇವೆ ಎನ್ನುವ ಸಮೂಹ ಸನ್ನಿ ಪಟ್ಟಣದಲ್ಲಿ ಹರಡಿತು. ಅವರೆಲ್ಲರೂ ರಾಮನನ್ನು ನೋಡಬೇಕೆಂದು ಹಾತೊರೆಯುತ್ತಿದ್ದರಂತೆ. ವಾಲ್ಮೀಕಿ ಅವರ ಈ ಭಾವಾವೇಶವನ್ನು ವರ್ಣಿಸುವುದು ಹೀಗೆ:
ಸಂಯುಚ್ಛ ವಾಜಿನಾಂ ರಶ್ಮೀನ್ಸೂತ ಯಾಹಿ ಶನ್ಯೆಃ ಶನ್ಯೇಃ ৷
ಮುಖಂ ದ್ರಕ್ಷ್ಯಾಮ ರಾಮಸ್ಯ ದುರ್ದಶಂ ನೋ ಭವಿಷ್ಯತಿ ৷৷2.40-22৷৷
“ಸೂತ! ಕುದುರೆಗಳ ಕಡಿವಾಣವನ್ನು ಎಳೆದು ಬಿಗಿಯಾಗಿ ಹಿಡಿದುಕೊ. ಮೆಲ್ಲ ಮೆಲ್ಲಗೆ ಹೋಗು. ಶ್ರೀರಾಮನ ಮುಖವನ್ನು ನೋಡುತ್ತೇವೆ. ಮುಂದೆ ಬಹಳ ಕಾಲದವರೆಗೆ ಇವನ ಸುಂದರವಾದ ಮುಖಾರವಿಂದವು ನೋಡಲು ಲಭಿಸದು”. ರಾಮನಿಗೆ ಈ ದುಃಸ್ಥಿತಿಯನ್ನು ತಂದ ದಶರಥನನ್ನು ಕೈಕೆಯಿಯನ್ನು ಬಯ್ಯುತ್ತಿದ್ದರು. ಹೆಚ್ಚೇನು, ಆತನ ತಾಯಿಯಾದ ಕೌಸಲ್ಯೆಯನ್ನೂ ಸಹ ಇಂತಹ ಮಗನನ್ನು ಕಾಡಿಗೆ ಕಳುಹಿಸುವ ಮನಸ್ಸು ಆ ತಾಯಿಗೆ ಬಂತೆಂದರೆ ಅವಳ ಹೃದಯ ನಿಸ್ಸಂಶಯವಾಗಿ ಕಬ್ಬಿಣದ್ದೇ ಆಗಿರಬೇಕೆಂದು ದೂಷಿಸುತ್ತಿದ್ದರು. ಆದರೆ ರಾಮ ಮಾತ್ರ ನಿರ್ಲಿಪ್ತನಾಗಿ “ಯಾಹಿ ಸೂತ! ಶೀಘ್ರಂ ಯಾಹಿ- ಸೂತನೇ ಬೇಗ ಹೋಗು, ತಡಮಾಡಬೇಡ” ಎನ್ನುತ್ತಾ ರಥವನ್ನು ಹಾರಿಸಿಕೊಂಡು ಹೋದನಂತೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ
ದಶರಥ, ಕೌಸಲ್ಯೆ ಮತ್ತು ಸುಮಿತ್ರೆಯನ್ನು ಬಿಟ್ಟುಬರುವಾಗ ರಾಮ ಕಠಿಣಹೃದಯಿಯಾಗಿ ಕಾಣಿಸಿದರೂ ಅವನಿಗೆ ಅವರ ಸ್ಥಿತಿಯನ್ನು ನೆನೆದು ದುಃಖ ಒಳಗೊಳಗೇ ಇತ್ತು. ಅದನ್ನು ಹೊರಗೆ ತೋರಿಸಿಕೊಂಡಿಲ್ಲ. ಅವರು ತಮಸಾ ನದಿತೀರಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆಯಲು ನಿರ್ಧರಿಸುತ್ತಾರೆ. ರಾಮನ ರಥ ಎಷ್ಟೇ ವೇಗವಾಗಿ ಚಲಿಸಲಿ, ಅವನನ್ನು ಅನುಸರಿಸಿಕೊಂಡು ಅನೇಕ ಪ್ರಜಾವರ್ಗದವರೂ ಓಡುತ್ತಾ, ಕುದುರೆಯನ್ನೇರಿ, ಹೇಗೋ ಹೇಗೋ ಬಂದುಬಿಟ್ಟಿದ್ದರು. ಅವರೆಲ್ಲರೂ ರೋದಿಸುತ್ತಿದ್ದರು. ಆಗ ರಾಮನಿಗೆ ತನ್ನ ತಂದೆ, ತಾಯಿಯನ್ನು ನೆನೆದು ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಯೋಧ್ಯೆಯ ಪ್ರಜೆಗಳು ಸದ್ಗುಣ ಸಂಪನ್ನನಾದ ತಮ್ಮ ರಾಜನನ್ನು ಬಹಳವಾಗಿ ಪ್ರೀತಿಸುತ್ತಾರೆ. ಹಾಗಾಗಿ ತನಗೆ ತನ್ನ ತಮ್ಮಂದಿರಾದ ಭರತ ಮತ್ತು ಶತ್ರುಘ್ನರ ಕುರಿತು ಚಿಂತೆಯಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿರುವಾಗ ಅವನಿಗೆ ತನ್ನ ತಂದೆ ಮತ್ತು ತಾಯಿಯ ನೆನಪಾಗುತ್ತದೆ. “ಏನು ಮಾಡಲಿ ಹೇಳು, ನನಗೆ ನನ್ನ ತಂದೆ ಮತ್ತು ಯಶಸ್ವಿನಿಯಾದ ನನ್ನ ಅಮ್ಮ ಕೌಸಲ್ಯೆಯ ನೆನಪಾಗುತ್ತದೆ. ನಮ್ಮ ಅಗಲುವಿಕೆಯ ನೋವಿನಿಂದ ಅವರು ಬಾರಿ ಬಾರಿಗೂ ಅತ್ತೂ ಅತ್ತೂ ವಿರಹದ ವ್ಯಥೆಯಲ್ಲಿ ಕಣ್ಣು ಇಂಗಿ ಕುರುಡರಾಗಿಬಿಡುತ್ತಾರೇನೋ” ಎನ್ನುತ್ತಾ ಬಿಕ್ಕುತ್ತಾನೆ.
ಪಿತರಂ ಚಾನುಶೋಚಾಮಿ ಮಾತರಂ ಚ ಯಶಸ್ವಿನೀಮ್৷
ಅಪಿ ವಾನ್ಧೌ ಭವೇತಾಂ ತು ರುದನ್ತೌ ತಾವಭೀಕ್ಷ್ಣಶಃ৷৷2.46.6৷৷
ಕೌಸಲ್ಯೆಯನ್ನು ‘ಯಶಸ್ವಿನಿ’ ಎಂದು ಕರೆಯುತ್ತಾನೆ. ಆ ಮಹಾತಾಯಿಯ ಕುರಿತು ರಾಮನ ಭಾವನೆಗಳೆಲ್ಲವೂ ಇದೊಂದೇ ಮಾತುಗಳಲ್ಲಿ ವ್ಯಕ್ತವಾಗಿವೆ. ಅಯೋಧ್ಯೆಯ ಭಾಗ್ಯಲಕ್ಷ್ಮಿ ಆಕೆ ಎನ್ನುತ್ತಾನೆ, ಕೊನೆಗೆ ಭರತ ದಯಾಗುಣದಿಂದ ಕೂಡಿದವನಾಗಿರುವುದರಿಂದ ಅತ ತಂದೆ ಮತ್ತು ತಾಯಿಯಯರನ್ನು ಧರ್ಮಾರ್ಥಕಾಮಸಹಿತವಾದ ಮಾತುಗಳಿಂದ ಸಂತೈಸುತ್ತಾನೆಂದು ತನ್ನಲ್ಲೇ ತಾನು ಸಮಾಧಾನ ಮಾಡಿಕೊಳ್ಳುತ್ತಾನೆ. ಹೊರಗಡೆ ನಿಷ್ಕರುಣೆಯಿಂದ ಕಾಣುವ ರಾಮನಲ್ಲಿ ಒಳಗಡೆ ದಯಾರ್ದೃವಾದ ಹೃದಯವಿತ್ತು. ಇನ್ನು ಅವನಿಗೆ ಬಂದಿರುವ ಸಮಸ್ಯೆಯೆಂದರೆ ತನ್ನನ್ನು ಅನುಸರಿಸಿಕೊಂಡು ಬಂದ ಪ್ರಜೆಗಳ ವಿಷಯದಲ್ಲಿ ಏನು ಮಾಡಬೇಕೆನ್ನುವುದು. ಮುಂದಿನ ನಿರ್ಜನವಾದ ಅರಣ್ಯಪ್ರದೇಶದಲ್ಲಿ ರಾಕ್ಷಸರು ಮತ್ತು ಕ್ರೂರ ಮೃಗಗಳ ಕಾಟವಿದೆ. ಇಂತಹ ಸನ್ನಿವೇಶದಲ್ಲಿ ಅವರೆಲ್ಲರ ರಕ್ಷಣೆ ಸುಲಭವೂ ಅಲ್ಲ. ಅದೂ ಅಲ್ಲದೇ ಅಲ್ಲಿ ತಪಸ್ಸನ್ನಾಚರಿಸುತ್ತಿರುವ ಋಷಿಮುನಿಗಳ ತಪಸ್ಸು ಭಂಗವಾಗಿಬಿಡುವ ಅಪಾಯವುಂಟು. ಮೊದಲೇ ಕೈಕೆಯಿ, ಪ್ರಜೆಗಳಿಲ್ಲದ ರಾಜ್ಯವೆಂದರೆ ಅದು “ಸುರೆಯನ್ನೆಲ್ಲ ಕುಡಿದು ಬಿಸಾಡುವ ಸೋರೆ ಬುರುಡೆಯಂತೆ” ಅಂತಹ ರಾಜ್ಯ ತನಗೆ ಬೇಡವೆಂದು ಹೇಳಿಬಿಟ್ಟಿದ್ದಾಳೆ. ಇಲ್ಲಿ ರಾಮ ಹೇಳುವ ರಾಜನೀತಿ ಮಾರ್ಮಿಕವಾಗಿದೆ. “ರಾಜನಾದವನು ಪ್ರಜೆಗಳನ್ನು ದೈವಿಕವಾದ (ಪ್ರಕೃತಿಯ ವಿಕೋಪಗಳು), ಅಥವಾ ತಾವಾಗಿಯೇ ಉಂಟುಮಾಡಿಕೊಂಡ ಅಂದರೆ ರೋಗರುಜಿನಗಳಿಂದ ತೊಂದರೆಯಾಗದಂತೆ ಕಾಪಾಡಬೇಕು. ಅಂದರೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿದರೆ ಇವೆಲ್ಲವನ್ನೂ ತಡೆಯಬಹುದೆನ್ನುವುದು ಇಲ್ಲಿನ ಮರ್ಮ. ಮತ್ತೆ ಒಂದು ವೇಳೆ ರಾಜನಿಗೇ ತೊಂದರೆ ಉಂಟಾದರೆ ಅದನ್ನು ಪ್ರಜೆಗಳಿಗೆ ಹಂಚಬಾರದು, ತಾನೊಬ್ಬನೇ ಅನುಭವಿಸಬೇಕು” ಎನ್ನುವ ಈ ಮಾತುಗಳು ಆದರ್ಶ ರಾಜ ಹೇಗಿರಬೇಕೆನ್ನುವುದಕ್ಕೆ ಉದಾಹರಣೆಯಾಗಿದೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸುವರ್ಚಲೆ: ಮದುವೆ ಎನ್ನುವುದು ಕನ್ಯೆಯದೇ ಆಯ್ಕೆ
ಈ ಎಲ್ಲಾ ಕಾರಣನಳಿಗಾಗಿ ಬಿಟ್ಟೂ ಬಿಡದೇ ಬೆನ್ನುಹತ್ತಿದ ಅಯೋಧ್ಯೆಯ ಜನರ ಕಣ್ತಪ್ಪಿಸಿ ಕಾಡಿಗೆ ಹೋಗಬೇಕಾಗಿದೆ. ಇದೀಗ ಕಾಡಿನ ಅಂಚಿನಲ್ಲಿದ್ದಾನೆ. ದಶರಥ ಸುಮಂತ್ರನ ಹತ್ತಿರ ರಥವನ್ನು ಕಾಡಿನವರೆಗೆ ಬಿಟ್ಟುಬರಲು ತಿಳಿಸಿದ್ದಾನೆ. ತಮಸಾ ನದಿಯ ದಡದಲ್ಲಿ ಪುರಜನರೆಲ್ಲರೂ ಆಯಾಸದಿಂದ ನಿದ್ರೆ ಮಾಡುತ್ತಿದ್ದಾರೆ. ರಾಮನೊಟ್ಟಿಗೆ ತಾವೂ ಕಷ್ಟಗಳನ್ನು ಸಹಿಸಲು ಅವರೆಲ್ಲರೂ ಅಡವಿಗೆ ಬರಲು ಸಿದ್ಧರಾಗಿಯೇ ಬಂದಿದ್ದಾರೆ. ಅಯೋಧ್ಯೆಯ ಹಿತದ ಮತ್ತು ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ರಾಮ ಹೇಳಿದ ಮಾತುಗಳನ್ನು ಕೇಳಿದ ಕೂಡಲೇ ಇಂಗಿತಜ್ಞನಾದ ಲಕ್ಷ್ಮಣ ರಾಮನಿಗೆ “ಪ್ರಾಜ್ಞನೇ ನನಗೂ ಈ ವಿಚಾರ ಸರಿ ಎನಿಸುತ್ತಿದೆ. ಕೂಡಲೇ ರಥವನ್ನು ಹತ್ತು” ಎಂದು ಸುಮಂತ್ರನನ್ನು ಎಬ್ಬಿಸಿ ರಭಸದಿಂದ ಕೂಡಿದ ತಮಸಾ ನದಿಯ ಸುಳಿಗಳನ್ನು ತಪ್ಪಿಸಿ ನದಿಯನ್ನು ದಾಟಿದರು. ಹಾಗೇ ದಾಟಿದ ರಾಮ ಸುಮಂತ್ರನ ಹತ್ತಿರ “ರಥವನ್ನು ಉತ್ತರ ದಿಕ್ಕಿಗೆ ತೆಗೆದುಕೊಂಡು ಹೋಗಿ ಮತ್ತೆ ಆಚೇ ಈಚೇ ತಿರುಗಿಸಿ ನಾವು ಯಾವ ದಿಕ್ಕಿನ ಕಡೆ ಹೋದೆವೆಂದು ಭ್ರಾಂತಿಯುಂಟಾಗುವಂತೆ ಮಾಡಿಕೊಂಡು ಬಾ” ಎಂದು ಕಳಿಸಿ ಆತ ಹಾಗೇ ಮಾಡಿದ ಮೇಲೆ ರಥವನ್ನು ಕಾಡಿನೊಳಗೆ ತಿರುಗಿಸಿ ಒಳಹೊಕ್ಕನು. ಬೆಳಗಾದ ಮೇಲೆ ತಮಸಾನದಿ ತೀರದಲ್ಲಿ ಮಲಗಿರುವ ಪಟ್ಟಣಿಗರು ರಾಮನನ್ನು ಕಾಣಲಾರದೇ ಅವನಿಗಾಗಿ ಶೋಕಿಸುತ್ತಾ ತಮಸಾ ನದಿಯನ್ನು ದಾಟಿ ಅಲ್ಲಿ ರಥದ ಚಕ್ರದ ಗುರುತು ಅಳಿಸಿಹೋಗಿರುವುದನ್ನು ಕಂಡು ನಿರಾಸೆಗೊಂಡರಂತೆ. ರಾಮನಿಂದ ತಾವು ದೂರವಾಗುವುದಕ್ಕೆ ಕಾರಣವಾದ ತಮ್ಮ ನಿದ್ರೆಗೆ ಧಿಕ್ಕಾರವಿರಲಿ ಎನ್ನುತ್ತಾ ಅಳುತ್ತಾ ಪುನಃ ಅಯೋಧ್ಯೆಯೆಡೆಗೆ ಮರಳಿದರಂತೆ.
ಇಲ್ಲಿ ರಾಮನ ಪ್ರಜ್ಞೆಯ ದೂರದೃಷ್ಟಿಯನ್ನು ಕಾಣಬಹುದಾಗಿದೆ. ಹಾಗಂತ ರಾಮ ತನ್ನ ಈ ಕಾರ್ಯಕ್ಕಾಗಿ ಸಂತಸ ಪಟ್ಟಿಲ್ಲ. ಅಯೋಧ್ಯೆಯ ಪ್ರಜಾಸಮೂಹದ ರಾಜನಿಷ್ಟೆಯನ್ನು ಕಂಡು ಒಳಗೋಳಗೇ ಹೆಮ್ಮೆಪಟ್ಟಿದ್ದ. ಅಂತಹ ನಿಸ್ಪೃಹ ಪ್ರಜೆಗಳನ್ನು ವಂಚಿಸಿ ತಾನು ಅರಣ್ಯಕ್ಕೆ ಬರಬೇಕಾಯಿತೆಂದು ಅವನಿಗೆ ದುಃಖ ಉಮ್ಮಳಿಸಿಬಂತು ಎಂದು ವಾಲ್ಮೀಕಿ ವರ್ಣಿಸುತ್ತಾರೆ. ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳಮೇಲೆ ಆತನಿಗಿರುವ ಇಂತಹ ಕಾಳಜಿಗಳಿಂದಾಗಿ.
ಕಾವ್ಯವೆಂಬ ಟೊಂಗೆಯ ಮೇಲೆ ಕುಳಿತು ರಾಮ ರಾಮ ಎಂದು ಸುಮಧುರವಾಗಿ ಕೂಗುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ
ಅಂಕಣ
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
ರಾಜ ಮಾರ್ಗ ಅಂಕಣ: ಇಲ್ಲಿರುವ ಒಂದೊಂದು ಯಶೋಗಾಥೆಯೂ ಸಾಧನೆಯಿಂದ ಅದ್ದಿ ತೆಗೆದದ್ದು. ಎಂಥೆಂಥ ಕಷ್ಟದ ಸನ್ನಿವೇಶಗಳಲ್ಲಿದ್ದರೂ ಸಾಧನೆ ಮಾಡಿದವರ ಕಥೆಗಳಿವು. ನಮಗೂ ಇವು ಸ್ಪೂರ್ತಿಯಾಗಲಿ.
ಪ್ರೀತಿಯ ವಿದ್ಯಾರ್ಥಿಗಳೇ,
ರ್ಯಾಂಕ್ ಪಡೆದವರಿಗೆ ಹತ್ತು ತಲೆ, ಹತ್ತು ಮೆದುಳು ಖಂಡಿತವಾಗಿ ಇರುವುದಿಲ್ಲ! ದಿನಕ್ಕೆ 48 ಘಂಟೆಗಳೂ ಇರುವುದಿಲ್ಲ! ಅವರು ನಿಮ್ಮ, ನಮ್ಮ ಹಾಗೆ ಸಾಮಾನ್ಯ ವಿದ್ಯಾರ್ಥಿಗಳು. ಆದರೆ ಅವರು ಬೇಗನೇ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ. ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳನ್ನು ಚೆನ್ನಾಗಿ ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಪರೀಕ್ಷಾ ಕೊಠಡಿಯ ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳಿಗೆ ಟು ದ ಪಾಯಿಂಟ್ ಉತ್ತರ ಬರೆಯುತ್ತಾರೆ. ಬರೆದಾದ ನಂತರ ತುಂಬಾನೇ ಜಾಗರೂಕತೆಯಿಂದ ಉತ್ತರವನ್ನು ಚೆಕ್ ಮಾಡುತ್ತಾರೆ. ಪರೀಕ್ಷಾ ಕೊಠಡಿಯಲ್ಲಿ ತುಂಬಾ ಚೆನ್ನಾಗಿ ಸಮಯ ನಿರ್ವಹಣೆ ಮಾಡುತ್ತಾರೆ. ತುಂಬಾ ಅದ್ಭುತವಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಅಷ್ಟೇ!
ಇದು ನಿಮ್ಮಿಂದಲೂ ಸಾಧ್ಯ ಇದೆ ಅಂದರೆ ನೀವು ನನ್ನ ಮುಂದಿನ ವರ್ಷಗಳ ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ ಯಶೋಗಾಥೆಗಳಾಗಿ ಸ್ಥಾನ ಪಡೆಯುತ್ತೀರಿ.
ಇನ್ನಷ್ಟು ಯಶೋಗಾಥೆಗಳು ನಿಮ್ಮ ಮುಂದೆ…..
11) ಅವರೆಲ್ಲ ನೃತ್ಯ, ಸಂಗೀತ, ನಾಟಕ ಎಲ್ಲದರಲ್ಲೂ ಇದ್ದರು.. ಕಲಿಕೆಯಲ್ಲೂ!
ಕಳೆದ ವರ್ಷ ಮೂಡಬಿದ್ರೆಯ ಆಳ್ವಾಸ್ ಪ್ರೌಢಶಾಲೆಯಿಂದ ಐದು ವಿದ್ಯಾರ್ಥಿಗಳು 625/625 ಅಂಕ ಪಡೆದರು. ಅವರೆಲ್ಲರೂ ಇಡೀ ವರ್ಷ ನೃತ್ಯ, ಸಂಗೀತ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ವಿಭಾಗಗಳಲ್ಲಿ ಸಕ್ರಿಯರಾಗಿ ಇದ್ದವರು. ಕ್ರೀಡೆಯಲ್ಲಿಯೂ ಸಾಧನೆ ಮಾಡಿದ್ದರು. ಅದ್ಯಾವುದೂ ಅವರಿಗೆ ಅಂಕ ಪಡೆಯಲು ಹಿನ್ನಡೆ ಆಗಲಿಲ್ಲ!
12) ಅಮ್ಮನ ಹೆಣ ಡಿಕ್ಕಿಯಲ್ಲಿತ್ತು, ಅಪ್ಪ ಕಾರಿನಲ್ಲಿ ಸುತ್ತಾಡಿಸುತ್ತಿದ್ದ!
ಶಿವಮೊಗ್ಗದ ಒಬ್ಬ ಅದ್ಭುತ ಹುಡುಗಿ 625/625 ಅಂಕಗಳನ್ನು ಪಡೆದು ಭಾರಿ ದೊಡ್ಡ ಸಾಧನೆ ಮಾಡಿದ್ದಳು. ದೊಡ್ಡ ಸಾಧನೆ ಏನೆಂದರೆ ಅವಳ ಜೀವನದಲ್ಲಿ ಆ ವರ್ಷ ದುರಂತ ಒಂದು ನಡೆದು ಹೋಗಿತ್ತು. ಅವಳ ಅಪ್ಪ ಆ ಊರಿನ ಬಹಳ ದೊಡ್ಡ ಸರ್ಜನ್ ಆಗಿದ್ದವನು ತನ್ನ ಹೆಂಡತಿಯನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದನು. ಹೆಂಡತಿಯ ಹೆಣವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಹಾಸ್ಟೆಲಿನಿಂದ ಮಗಳನ್ನು ಕರೆದುಕೊಂಡು ಇಡೀ ರಾತ್ರಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಡಿಕ್ಕಿಯಲ್ಲಿ ಅಮ್ಮನ ಹೆಣ ಇರುವುದು ಮಗಳಿಗೆ ಗೊತ್ತೇ ಇರಲಿಲ್ಲ! ಬೆಳಿಗ್ಗೆ ಅಪ್ಪ ಅರೆಸ್ಟ್ ಆಗಿದ್ದಾನೆ!
ಅಮ್ಮನ ಹೆಣವನ್ನು ಅಂಗಳದಲ್ಲಿ ಇಟ್ಟುಕೊಂಡು ಇಡೀ ಕುಟುಂಬ ಕಣ್ಣೀರು ಹಾಕಿತ್ತು. ಹುಡುಗಿ ಚೇತರಿಸಿಕೊಳ್ಳಲು ಮೂರು ದಿನಗಳು ಬೇಕಾದವು. ಮುಂದೆ ಅಜ್ಜಿಯ ಪ್ರೀತಿ ಪಡೆದ ಆ ಹುಡುಗಿ ಅಮ್ಮನ ಫೋಟೋವನ್ನು ದೇವರ ಫೋಟೋದ ಪಕ್ಕ ಇಟ್ಟುಕೊಂಡು ನಮಸ್ಕಾರ ಮಾಡಿ ಓದಲು ಆರಂಭ ಮಾಡಿದ್ದಳು. ಆಕೆಗೂ 625/625 ಅಂಕ ಬಂತು! ನಾನು ನೋಡಿದ್ದ ಅತೀ ದೊಡ್ಡ ಮಿರಾಕಲ್ ಅದು!
13) ಅವನಿಗೆ ಕಣ್ಣೇ ಕಾಣುತ್ತಿರಲಿಲ್ಲ! ಆದರೆ ರಾಜ್ಯಕ್ಕೆ 10ನೇ ರ್ಯಾಂಕ್!
ಇನ್ನೊಬ್ಬ ಮಿರಾಕಲ್ ನಿಮಗೆ ಪರಿಚಯ ಮಾಡಬೇಕು. ಆತ ನನ್ನ ಟಿವಿ ಕಾರ್ಯಕ್ರಮಕ್ಕೆ ಸಂದರ್ಶನಕ್ಕೆ ಬಂದಿದ್ದ. 615/625 ಅಂಕಗಳು. ರಾಜ್ಯಕ್ಕೆ ಹತ್ತನೇ ರ್ಯಾಂಕ್. ಆಶ್ಚರ್ಯ ಅಂದರೆ ಅವನಿಗೆ ಎರಡೂ ಕಣ್ಣು ಕಾಣುತ್ತಲೇ ಇರಲಿಲ್ಲ. ಆತ ಹುಟ್ಟು ಕುರುಡ. ಆತನ ತಂಗಿ ಕೂಡ ಕುರುಡಿ. ಅಮ್ಮ ಆ ಇಬ್ಬರು ಮಕ್ಕಳನ್ನು ಬಹಳ ಕಷ್ಟದಲ್ಲಿ ಬೆಳೆಸಿದವರು. ಆಗ ಡಾಕ್ಟರ್ ಮೋಹನ್ ಆಳ್ವ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದರು.
ಅವನು ಹೇಳುವ ಪ್ರಕಾರ ಆತನಿಗೆ ಬೋರ್ಡ್ ಕಾಣಿಸುತ್ತಿರಲಿಲ್ಲ. ಅವನು ಮೊದಲ ಬೆಂಚಿನಲ್ಲಿ ಕೂತು ಪಾಠವನ್ನು ಕೇಳುತ್ತ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಆಗಲೇ ಅವನು ಟೇಪ್ ರೆಕಾರ್ಡರ್ ಬಳಸಿಕೊಂಡು ಅವನು ಅಧ್ಯಾಪಕರ ಪಾಠವನ್ನು ಪೂರ್ತಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ. ಹಾಸ್ಟೆಲ್ ರೂಮಿಗೆ ಹೋಗಿ ಆ ಪಾಠವನ್ನು ಮತ್ತೆ ಮತ್ತೆ ಕೇಳುತ್ತಾ ಲಾಪ್ಟಾಪ್ ನಲ್ಲಿ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಸತತ ಸಾಧನೆಯ ಮೂಲಕ ಅವನು ರಾಜ್ಯಕ್ಕೆ ಹತ್ತನೇ ರ್ಯಾಂಕ್ ಪಡೆದಿದ್ದಾನೆ!
14) ಅವಳಿಗೆ ಅಪ್ಪ ಇಲ್ಲ. ಅಮ್ಮನ ಮಾನಸಿಕ ಆರೋಗ್ಯವೇ ಸರಿ ಇಲ್ಲ
ಉಡುಪಿಯ ಕೋಟಾ ವಿವೇಕ ಪದವಿಪೂರ್ವ ಕಾಲೇಜಿನ ಒಬ್ಬಳು ಹುಡುಗಿ 623/625 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಳು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದಳು. ಅವಳಿಗೆ ಅಪ್ಪ ಇಲ್ಲ. ಅಮ್ಮ ಹಲವು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕುತ್ತಿದ್ದಾರೆ. ಸಣ್ಣ ಒಂದು ಬಾಡಿಗೆ ಮನೆ ಅವರದ್ದು. ಅವಳ ಅಮ್ಮ ಜೀವನದಲ್ಲಿ ಹೆಚ್ಚು ನೋವನ್ನು ತೆಗೆದುಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನನಗೆ ಆ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು. ಅವರ ಮನೆಯವರಿಗೆ ಅಧ್ಯಾಪಕರು ಬಿಟ್ಟರೆ ಬೇರೆ ಯಾರೂ ಸಪೋರ್ಟ್ ಇಲ್ಲ. ಆದರೂ ಆ ಹುಡುಗಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾಳೆ!
15) ಅವಳಿಗೆ ಒಂದು ವಾಕ್ಯ ಮಾತನಾಡಲು ಎರಡು ನಿಮಿಷ ಬೇಕು.. ಆದರೆ,
ಇನ್ನೊಬ್ಬ ಹುಡುಗಿ ಅಂಕೋಲಾ ತಾಲೂಕಿನವಳು. ಅತ್ಯಂತ ಸುಂದರವಾದ ಹುಡುಗಿ. ಪ್ರೈಮರಿ ಶಾಲೆಯ ಶಿಕ್ಷಕಿಯ ಮಗಳು. 616/625 ಅಂಕ ಪಡೆದ ಅವಳು ರಾಜ್ಯಕ್ಕೇ ಒಂಬತ್ತನೇ ರಾಂಕ್. ಆಶ್ಚರ್ಯ ಅಂದರೆ ಅವಳಿಗೆ ಎರಡೂ ಕಿವಿಗಳು ಕೇಳುವುದಿಲ್ಲ! ತುಂಬಾ ಉಗ್ಗುವಿಕೆ ಇರುವ ಕಾರಣ ಮಾತು ತುಂಬಾ ನಿಧಾನ! ಒಂದು ವಾಕ್ಯ ಪೂರ್ತಿ ಮಾಡಲು ಅವಳು ಕನಿಷ್ಠ ಒಂದೆರಡು ನಿಮಿಷ ತೆಗೆದುಕೊಳ್ಳುತ್ತಾಳೆ! ಆದರೆ ಸಮಸ್ಯೆ ಇರುವುದು ಕಿವಿಯದ್ದು. ಅವಳ ಅಮ್ಮ ಹೇಳುವ ಪ್ರಕಾರ ಅವಳಿಗೆ 10% ಮಾತ್ರ ಕಿವಿ ಕೇಳುತ್ತದೆ. ಸ್ಪೆಷಲ್ ಇಯರ್ ಫೋನ್ ಹಾಕಿದಾಗ 20-30% ಮಾತ್ರ ಕೇಳುತ್ತದೆ! ಅದಕ್ಕಾಗಿ ಅವಳು ಮುಂದಿನ ಬೆಂಚಿನಲ್ಲಿ ಕುಳಿತು ಮೊಬೈಲಿನಲ್ಲಿ ಶಿಕ್ಷಕರು ಮಾಡಿದ ಪಾಠ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಮನೆಗೆ ಹೋಗಿ ಆ ಪಾಠವನ್ನು ಹಲವಾರು ಬಾರಿ ಕೇಳಿ ನೋಟ್ಸ್ ಮಾಡುತ್ತಾಳೆ. ಮುದ್ದಾದ ಅಕ್ಷರ ಅವಳದ್ದು. ಆ ಹುಡುಗಿಯನ್ನು ಕೂಡ ನಾನು ಮಿರಾಕಲ್ ಎಂದು ಕರೆಯುತ್ತೇನೆ!
16) ಕುರಿ ಮೇಯಿಸುತ್ತಿದ್ದ ಹುಡುಗ ಶಾಲೆ ಆರಂಭಿಸಿದ್ದೇ ಮೂರನೇ ಕ್ಲಾಸಿಂದ!
ಇನ್ನೊಬ್ಬ ಹುಡುಗ ಬಯಲು ಸೀಮೆಯವನು. ಅವನ ಅಪ್ಪ ಅಮ್ಮ ಇಬ್ಬರೂ ಅನಕ್ಷರಸ್ಥರು. ಅವನೂ ಒಂಬತ್ತು ವರ್ಷಗಳವರೆಗೆ ಕುರಿಗಳನ್ನು ಮೇಯಿಸಿಕೊಂಡು ಇದ್ದವನು. ಮುಂದೆ ಯಾರೋ ಅವನನ್ನು ಶಾಲೆಗೆ ಕರೆದುಕೊಂಡು ಮೂರನೇ ತರಗತಿಗೆ ಸೇರಿಸುತ್ತಾರೆ. ಅದು ಸರಕಾರಿ ಶಾಲೆ, ಕನ್ನಡ ಮಾಧ್ಯಮ. ಆದರೆ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಕಲಿಯುವ ಸಾಮರ್ಥ್ಯವು ಹೆಚ್ಚಾಯಿತು. ಅಧ್ಯಾಪಕರ ಪ್ರೋತ್ಸಾಹ ದೊರೆಯಿತು. ಆ ಹುಡುಗನು 618/625 ಅಂಕ ತೆಗೆದುಕೊಂಡ ವರದಿ ಬಂದಿದೆ!
17) ಕನಿಷ್ಠ ಪರೀಕ್ಷೆ ಬರೆಯಲೂ ಅವನಿಗೆ ಕೈಗಳೇ ಇರಲಿಲ್ಲ!
ಕರಾವಳಿ ಜಿಲ್ಲೆಯ ಒಬ್ಬ ಹುಡುಗನಿಗೆ ಎರಡೂ ಕೈಗಳು ಇಲ್ಲದೆ ಹೋದಾಗ ಅವನು ತನ್ನ ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಎಸೆಸೆಲ್ಸಿ ಪರೀಕ್ಷೆಗೆ ಬರೆದು ಉತ್ತಮ ಅಂಕ ಪಡೆದಿದ್ದ. ಎಲ್ಲ ಪತ್ರಿಕೆಗಳಲ್ಲಿಯು ಅದು ಮುಖಪುಟ ನ್ಯೂಸ್ ಆಗಿತ್ತು. ಸ್ವತಃ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆತನ ಮನೆಗೆ ಬಂದು ಆತನನ್ನು ಅಭಿನಂದನೆ ಮಾಡಿ ಹೋಗಿದ್ದರು.
ಭರತವಾಕ್ಯ – ನನ್ನ ಹತ್ತಿರ ಈ ರೀತಿಯ ನೂರಾರು ಯಶೋಗಾಥೆಗಳು ಇವೆ. ನನ್ನ ತರಬೇತಿ ಕಾರ್ಯಕ್ರಮದಲ್ಲಿ ನನಗೆ ಪ್ರತೀ ಊರಲ್ಲಿಯೂ ಇಂತಹ ಪ್ರತಿಭೆಗಳು ದೊರೆಯುತ್ತವೆ. ಅವರಿಗೆಲ್ಲ ನಮ್ಮದೊಂದು ಸೆಲ್ಯೂಟ್ ಇರಲಿ. ಮುಂದಿನ ವರ್ಷದ ನನ್ನ ತರಬೇತಿಯಲ್ಲಿ ನಿಮ್ಮ ಸಾಧನೆಯೂ ಒಂದು ಅದ್ಭುತ ಯಶೋಗಾಥೆಯಾಗಿ ಸ್ಥಾನವನ್ನು ಪಡೆಯಲಿ!
(ಮುಂದುವರಿಯುವುದು)
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
- 5. ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
ಅಂಕಣ
ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಮುಂದೆ, ಅವರ ಹೆತ್ತವರ ಮುಂದೆ ಕೆಲವೊಂದು ಯಶೋಗಾಥೆಗಳನ್ನು ತೆರೆದಿಟ್ಟಿದ್ದಾರೆ ಲೇಖಕರು. ನಿಮ್ಮ ಮಗ/ಮಗಳೂ ಈ ಪಟ್ಟಿ ಸೇರಲು ಎಲ್ಲ ಅವಕಾಶಗಳಿವೆ.
ನಾವು ಸಣ್ಣವರಿದ್ದಾಗ ಎಸ್ಸೆಸ್ಸೆಲ್ಸಿ, ಪಿಯುಸಿಗಳ ರ್ಯಾಂಕ್ ಘೋಷಣೆ ಆದಾಗ ಅವರನ್ನು ಬೆರಗು ಕಣ್ಣುಗಳಿಂದ ನೋಡುವುದೇ ಒಂದು ಸಂಭ್ರಮ! ಆಗೆಲ್ಲ ದೂರದರ್ಶನದಲ್ಲಿ ಅಂತಹ ಒಂದೆರಡು ಮಕ್ಕಳ ಸಂದರ್ಶನಗಳು ಪ್ರಸಾರ ಆಗುತ್ತಿದ್ದವು. ಮರುದಿನದ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಫೋಟೊಸ್, ಅವರ ಹೆತ್ತವರು ಸಿಹಿ ತಿನಿಸುವ ಭಾವಚಿತ್ರಗಳು ನಮಗಂತೂ ಭಾರೀ ಕ್ರೇಜ್ ಹುಟ್ಟಿಸುತ್ತಿದ್ದವು! ಆಗ ಎಸ್ಸೆಸ್ಸೆಲ್ಸಿ, ಪಿಯುಸಿ ಬೋರ್ಡಿನವರು ಕೇವಲ ಹತ್ತು ರ್ಯಾಂಕ್ ಕೊಡುತ್ತಿದ್ದರು ಮತ್ತು ಅವುಗಳಲ್ಲಿ ಸಿಂಹಪಾಲು ರ್ಯಾಂಕ್ಗಳನ್ನು ಬೆಂಗಳೂರಿನ ಎರಡು ಪ್ರತಿಷ್ಠಿತವಾದ ಕಾಲೇಜುಗಳು ಬಾಚಿಕೊಳ್ಳುತ್ತಿದ್ದವು!
ರ್ಯಾಂಕ್ ಪಡೆದವರು ರಾತ್ರಿ ಹಗಲಾಗುವ ಹೊತ್ತಿಗೆ ಸೆಲೆಬ್ರಿಟಿ ಆಗುತ್ತಿದ್ದರು!
ಯಾರಾದ್ರೂ ಒಬ್ಬ ರ್ಯಾಂಕ್ ಪಡೆದನು/ ಪಡೆದಳು ಎಂದಾದರೆ ಅವರು ರಾತ್ರಿ ಹಗಲು ಆಗುವುದರೊಳಗೆ ಸೆಲೆಬ್ರಿಟಿ ಆಗಿ ಬಿಡುತ್ತಿದ್ದರು! ಅದರಲ್ಲಿ ಕೂಡ ಎಸೆಸೆಲ್ಸಿ ರ್ಯಾಂಕ್ ಪಡೆಯುವವರು ಎಲ್ಲರೂ ಆಂಗ್ಲ ಮಾಧ್ಯಮದ ಮಕ್ಕಳೇ ಆಗಿರುತ್ತಿದ್ದರು! ಈ ಅಪವಾದವನ್ನು ನಿವಾರಣೆ ಮಾಡಲು ಬೋರ್ಡು ಇಂಗ್ಲಿಷ್ ಮಾಧ್ಯಮಕ್ಕೆ ಹತ್ತು, ಕನ್ನಡ ಮಾಧ್ಯಮಕ್ಕೆ ಹತ್ತು.. ಹೀಗೆ ಇಪ್ಪತ್ತು ರ್ಯಾಂಕ್ಗಳನ್ನು ನೀಡಲು ಆರಂಭ ಮಾಡಿತು. ಮುಂದೆ ಕನ್ನಡ ಮಾಧ್ಯಮಕ್ಕೆ 20 ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 20 ಹೀಗೆ ರ್ಯಾಂಕ್ ಕೊಡಲು ಆರಂಭ ಮಾಡಿತು. ಆಗೆಲ್ಲ ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಆರಂಭ ಮಾಡಿದರು. ಆಗೆಲ್ಲ ರ್ಯಾಂಕ್ ಪಡೆಯಲು ಅಡ್ಡ ದಾರಿಗಳು ಆರಂಭವಾದವು ಎನ್ನುವ ಕೂಗಿನ ನಡುವೆ ಕೂಡ ಮಕ್ಕಳ ಪ್ರತಿಭೆಗಳ ಬಗ್ಗೆ ಇರುವ ನಮ್ಮ ಉತ್ಕಟ ಅಭಿಮಾನ ಕಡಿಮೆ ಆಗಲೇ ಇಲ್ಲ. ಅದು ಕಡಿಮೆ ಆಗುವ ಕ್ರೇಜ್ ಅಲ್ಲವೇ ಅಲ್ಲ!
ಮುಂದೊಂದು ದಿನ ಎಸೆಸೆಲ್ಸಿ, ಪಿಯುಸಿ ರ್ಯಾಂಕ್ಗಳು ರದ್ದಾದವು!
ಈ ರ್ಯಾಂಕ್ ಪಡೆಯುವ ರೇಸಲ್ಲಿ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಾ ಇದೆ ಮತ್ತು ಶಾಲೆಗಳು ಅಡ್ಡ ದಾರಿಯನ್ನು ಹಿಡಿಯುತ್ತಾ ಇವೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡೂ ಬೋರ್ಡ್ಗಳು ರ್ಯಾಂಕ್ ಪದ್ಧತಿ ಕೈಬಿಟ್ಟವು. ಆದರೆ ಶಾಲೆಗಳು ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ, ತಾಲೂಕಿಗೆ ಪ್ರಥಮ…….ಹೀಗೆಲ್ಲ ಘೋಷಿಸಿಕೊಳ್ಳುವುದನ್ನು ಬಿಡಲೇ ಇಲ್ಲ! ನಮ್ಮ ಶಾಲೆಗಳಿಗೆ ಅವರ ಮಕ್ಕಳ ಪ್ರತಿಭೆಗಳಿಗಿಂತ ತಮ್ಮ ಶಾಲೆಗಳನ್ನು ಮಾರ್ಕೆಟ್ ಮಾಡೋದೇ ಆದ್ಯತೆ ಆಗಿತ್ತು ಅನ್ನುವುದನ್ನು ಒಪ್ಪಲೇ ಬೇಕು. ಏನಿದ್ದರೂ ರ್ಯಾಂಕ್ ಪಡೆಯುವುದು ಕೂಡ ಒಂದು ಅನನ್ಯ ಪ್ರತಿಭೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.
2016ರಲ್ಲಿ ಭದ್ರಾವತಿಯ ರಂಜನ್ ಧೂಳೆಬ್ಬಿಸಿದ!
ಆ ವರ್ಷ ಎಸೆಸೆಲ್ಸಿ ಫಲಿತಾಂಶ ಘೋಷಣೆ ಆದಾಗ ಇಡೀ ರಾಜ್ಯಕ್ಕೇ ಒಂದು ಶಾಕ್ ಕಾದಿತ್ತು! ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆಗಿದ್ದ ರಂಜನ್ ಎಸ್ಸೆಸೆಲ್ಸಿ ಬೋರ್ಡಿನ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕ ಪಡೆದಿದ್ದ! ಆಗ ನಾನು ಸ್ಪಂದನ ಟಿವಿ ಸ್ಟುಡಿಯೋದಿಂದ ಅವನ ಜೊತೆಗೆ ಲೈವಲ್ಲಿ ಕಾಲ್ ಮಾಡಿ ಮಾತಾಡಿದ್ದೆ! ಮರುದಿನ ಕರ್ನಾಟಕದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಂಜನ್ ಫೋಟೊ ವಿಜೃಂಭಿಸಿತ್ತು! ಅವನನ್ನು ಮುಖ್ಯಮಂತ್ರಿಗಳು ಬೆಂಗಳೂರಿಗೆ ಕರೆಸಿ ಸನ್ಮಾನ ಮಾಡಿದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿ! ಸಾಕಷ್ಟು ಕುಹಕಿಗಳು ಅದು ಹೇಗೆ ಸಾಧ್ಯ? ಎಂದು ಪ್ರಶ್ನೆಗಳನ್ನು ಮಾಡಿದ್ದರು.
ಕೋರ್ ವಿಷಯಗಳಲ್ಲಿ ಓಕೆ, ಆದರೆ ಭಾಷೆಗಳಲ್ಲಿ ಹೇಗೆ ಪೂರ್ತಿ ಅಂಕ ಕೊಡುತ್ತಾರೆ? ಎಂದೆಲ್ಲ ಕೇಳಿದಾಗ ಎಸ್ಸೆಸೆಲ್ಸಿ ಬೋರ್ಡ್ ಅವನ ಆರೂ ವಿಷಯಗಳ ಉತ್ತರ ಪತ್ರಿಕೆಗಳನ್ನು ತನ್ನ ಜಾಲತಾಣದಲ್ಲಿ ಪಬ್ಲಿಷ್ ಮಾಡಿತ್ತು! ಅವನ ಉತ್ತರ ಪತ್ರಿಕೆಯಲ್ಲಿ ಒಂದು ಅಂಕ ಕೂಡ ಕಟ್ ಮಾಡುವ ಅವಕಾಶವೇ ಇರಲಿಲ್ಲ! ಅನಿಲ್ ಕುಂಬ್ಳೆ ಹತ್ತಕ್ಕೆ ಹತ್ತು ವಿಕೆಟ್ ಪಡೆದಂತೆ ಇತ್ತು ರಂಜನ್ ಯಶೋಗಾಥೆ!
ಮುಂದೆ ಅದೇ ಬೆಂಚ್ ಮಾರ್ಕ್ ಆಯ್ತು!
ಮುಂದೆ ಎಸೆಸೆಲ್ಸಿ ಬೋರ್ಡ್ ರ್ಯಾಂಕ್ ಘೋಷಣೆ ಮಾಡಲಿ ಅಥವಾ ಬಿಡಲಿ ಮುಂದಿನ ವರ್ಷಗಳಲ್ಲಿ 625/625 ಅಂಕ ಪಡೆಯುವುದೇ ಒಂದು ಸಂಪ್ರದಾಯ ಆಗಿ ಹೋಯಿತು! ಮುಂದಿನ ವರ್ಷ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೇ ಸಾಧನೆ ರಿಪೀಟ್ ಮಾಡಿದರು. 2021ರಲ್ಲಿ 157 ವಿದ್ಯಾರ್ಥಿಗಳು, 2022ರಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಸ್ಕೋರ್ ಪಡೆದಿದ್ದಾರೆ. ಇದು ಮೊದಲ ಫಲಿತಾಂಶ ಘೋಷಣೆ ಆದಾಗ ಪಡೆದ ಸಂಖ್ಯೆ ಆಗಿದೆ (ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಪಡೆದು ಈ ಸಾಧನೆ ಮಾಡಿದವರ ಸಂಖ್ಯೆ ಅಷ್ಟೇ ಇದೆ!). ಈಗ ನಮ್ಮ ಸುತ್ತಮುತ್ತಲಿನ ಶಾಲೆಯ ಮಕ್ಕಳೂ ಈ ಸಾಧನೆ ಮಾಡುವುದನ್ನು ನೋಡುವಾಗ ಮಕ್ಕಳ ಪ್ರತಿಭೆಗೆ ನಾವು ಸೆಲ್ಯೂಟ್ ಹೊಡೆಯದೆ ಇರಲು ಸಾಧ್ಯವೇ ಇಲ್ಲ!
ಕೊರೊನಾದ ವರ್ಷದಲ್ಲಿ ಸಾವಿರಾರು ಮಂದಿ ಫುಲ್ ಮಾರ್ಕ್ಸ್ ಪಡೆದರು!
ಒಂದು ವರ್ಷ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಎಲ್ಲ ಪ್ರಶ್ನೆಗಳನ್ನು MCQ ಕೊಟ್ಟು ಬೋರ್ಡು ಪ್ರಯೋಗಾತ್ಮಕವಾಗಿ ಪರೀಕ್ಷೆ ಮಾಡಿತು. ಆ ವರ್ಷ ಪರೀಕ್ಷೆಯನ್ನು ಬರೆದ ಎಲ್ಲ ಮಕ್ಕಳೂ (ತಾಂತ್ರಿಕ ಕಾರಣಕ್ಕೆ ಒಬ್ಬನನ್ನು ಬಿಟ್ಟು) ಪಾಸಾದರು! ಅದಕ್ಕಿಂತ ಹೆಚ್ಚಾಗಿ ಆ ವರ್ಷ ಸಾವಿರಾರು ಮಕ್ಕಳು 625/625 ಅಂಕ ಪಡೆದರು ಮತ್ತು ಕೊರೊನಾಕ್ಕೆ ಥ್ಯಾಂಕ್ಸ್ ಹೇಳಿದರು!
ಇಂತಹ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ನಾನು ಟಿವಿಯಲ್ಲಿ ಸಂದರ್ಶನ ಮಾಡಿದ್ದು ಅವರಲ್ಲಿ ಕೆಲವರ ಮನೆಗಳಿಗೂ ಹೋಗಿದ್ದೇನೆ. ಅಂತಹವರ ಕೆಲವು ಯಶೋಗಾಥೆಗಳು ನಿಮ್ಮ ಮುಂದೆ……..
(ಕೆಲವರ ಹೆಸರು ನನಗೆ ಮರೆತುಹೋಗಿದೆ. ಇನ್ನೂ ಕೆಲವರ ಹೆಸರನ್ನು ಉದ್ದೇಶಪೂರ್ವಕ ಬಿಟ್ಟಿದ್ದೇನೆ)
ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು..
1) ರಾಯಚೂರಿನ ಕೃಷಿ ಕಾರ್ಮಿಕನ ಮಗಳು 625/625 ಅಂಕಗಳನ್ನು ಪಡೆದಳು. ಆಕೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವಳು!
2) ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರಂಕ್ ಹೊರುವ ಹಮಾಲಿಯ ಮಗ 625/625 ಅಂಕ ಪಡೆದಿದ್ದ. ಅವನೂ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ಹುಡುಗ. ಯಾವ ಟ್ಯೂಷನ್ ಕ್ಲಾಸ್ ಕೂಡ ಹೋದವನು ಅಲ್ಲ!
3) ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಅತ್ಯುತ್ತಮ ಶ್ರೇಣಿ ಪಡೆದಿದ್ದ ಹುಡುಗಿಯ ಮನೆಯಲ್ಲಿ ಕರೆಂಟ್ ಇರಲಿಲ್ಲ! ಆಕೆ ಕೂಡ ಕನ್ನಡ ಮಾಧ್ಯಮದ ಸರಕಾರಿ ಶಾಲೆಯ ಹುಡುಗಿ!
4) ನಾನು ಭೇಟಿ ಮಾಡಿದ ಶಿರಸಿಯ ಮುಸ್ಲಿಂ ಕುಟುಂಬದ ಹುಡುಗಿ ಕೂಡ 625/625 ಅಂಕ ಪಡೆದಿದ್ದಳು. ಆಕೆಯ ಅಪ್ಪ ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಆಗಿದ್ದರು. ಆಕೆ ಸರಕಾರಿ ಶಾಲೆಯ ಹುಡುಗಿ!
5) ಕುಮಟಾದ ಒಬ್ಬ ಟೆಂಪೋ ಚಾಲಕನ ಮಗಳು ಹಠ ಹಿಡಿದು ಓದಿ 625/625 ಅಂಕ ಪಡೆದು ಲೆಜೆಂಡ್ ಆಗಿದ್ದಳು. ಆಕೆ ಕೂಡ ಟ್ಯೂಶನ್ ಕ್ಲಾಸಿಗೆ ಹೋದವಳು ಅಲ್ಲ!
6) ದಕ್ಷಿಣ ಕನ್ನಡದ ಸುಬ್ರಹ್ಮಣ್ಯದ ಸಮೀಪದ ಒಬ್ಬ ಹುಡುಗ ಪ್ರತೀ ದಿನವೂ 4-5 ಕಿಲೋಮೀಟರ್ ಬೈಸಿಕಲ್ ತುಳಿದು ಶಾಲೆಗೆ ಬರುತ್ತಿದ್ದ ಮತ್ತು ಮನೆಯಿಂದ ಟಿಫಿನ್ ಬಾಕ್ಸ್ ತೆಗೆದುಕೊಂಡು ಬಂದು ಮಧ್ಯಾಹ್ನದ ಊಟ ಮಾಡುತ್ತಿದ್ದ! ಆತನು ಕೂಡ 625/625 ಅಂಕ ಪಡೆದು ಸ್ಟಾರ್ ಆಗಿದ್ದ!
7) ಮೂಡಬಿದ್ರೆಯ ಒಬ್ಬ ವಿದ್ಯಾರ್ಥಿ ಔಟ್ ಆಫ್ ಮಾರ್ಕ್ಸ್ ತೆಗೆದುಕೊಂಡಿದ್ದ. ಆತನು ಎಂಟನೇ ತರಗತಿಯಿಂದ ಕೂಡ ಪ್ರತೀ ಪರೀಕ್ಷೆಯಲ್ಲಿ ಒಂದು ಮಾರ್ಕ್ ಕಡಿಮೆ ತೆಗೆದುಕೊಂಡದ್ದೇ ಇಲ್ಲ ಎಂದು ಅವನ ಪ್ರಿನ್ಸಿಪಾಲ್ ನನಗೆ ಹೇಳಿದ್ದರು!
8) ಶಿವಮೊಗ್ಗದ ಒಬ್ಬ ಹುಡುಗ ಪರೀಕ್ಷೆ ಮುಗಿಸಿ ಬಂದವನೇ ತನಗೆ ಫುಲ್ ಮಾರ್ಕ್ ಎಂದು ಘೋಷಣೆ ಮಾಡಿದ್ದ. ಆತನು ಪ್ರತಿಭಾವಂತ ಆಗಿದ್ದರೂ ಆತನ ಮಾತು ಯಾರೂ ನಂಬಲಿಲ್ಲ! ರಿಸಲ್ಟ್ ಹಿಂದಿನ ದಿನವೇ 5 ಕಿಲೋ ಸ್ವೀಟ್ ತಂದು ಇಟ್ಟುಕೊಂಡಿದ್ದನು. ಅವನಿಗೂ ರಿಸಲ್ಟ್ ಬಂದಾಗ 625 ಅಂಕ ಬಂದಿತ್ತು!
9) ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಸುದ್ದಿ ಆದನು. ಅದಕ್ಕೆ ಕಾರಣ ಅವನು ಪ್ರತೀ ದಿನವೂ (ಎಸೆಸೆಲ್ಸಿ ವರ್ಷವೂ ಸೇರಿದಂತೆ) ತನ್ನ ಅಪ್ಪನ ಜೊತೆ ಬೋಟಲ್ಲಿ ಹೋಗಿ ಫಿಶಿಂಗ್ ಮಾಡುತ್ತಿದ್ದ! ಬೆಳಿಗ್ಗೆ ಎರಡು ಘಂಟೆ ಮತ್ತು ಸಂಜೆ ಒಂದು ಘಂಟೆ! ಅದೂ ಸರಕಾರಿ ಶಾಲೆಯ ಹಿನ್ನೆಲೆಯ ಹುಡುಗ!
10) ಮತ್ತೊಬ್ಬಳು ನಮ್ಮೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿಗೆ ಹೋಗಿ ಒಂದು ಖಾಸಗಿ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಇಡೀ ರಾತ್ರಿ ಜರ್ನಿ ಮಾಡಿಬಂದು ಪರೀಕ್ಷೆ ಬರೆದಿದ್ದಳು. ಆಕೆ ಪಡೆದ ಅಂಕಗಳು 623/625!
(ಮುಂದುವರಿಯುವುದು)
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
ಅಂಕಣ
ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಹೊಸ ಹೊಳಪಿನಿಂದ ನಳನಳಿಸುವುದೇ ಈಗ ಪ್ರಕೃತಿಯ ನಿಯಮ!
ಈ ಅಂಕಣವನ್ನು ಇಲ್ಲಿ ಕೇಳಿ:
ʻಬಂದಿತಿದಿಗೋ ಬೇಸಿಗೆ, ಸಂದ ಸಮಯದ ಕೊರಗ ಕಳೆಯುತ ಮಂದಿಯೆಲ್ಲರ ಲೇಸಿಗೆʼ ಎಂಬ ಬೇಸಿಗೆಯ ತಂಪನ್ನು ವರ್ಣಿಸುವ ಕವಿವಾಣಿಯನ್ನು ಕೇಳಿದವರು, ಈಗಾಗಲೇ ಸೂರ್ಯ ಝಳಪಿಸುತ್ತಿರುವ ತಾಪದ ಮೊನೆಯನ್ನು ತೋರಿಸಿ ಹುಬ್ಬು ಗಂಟಿಕ್ಕಿದರೆ ತಪ್ಪಲ್ಲ. ಬೇಸಿಗೆ ಎನ್ನುತ್ತಿದ್ದಂತೆ ಬಿಸಿಲು, ಬೇಗೆ, ಬವಣೆ, ಬೆವರು, ಬಾಯಾರಿಕೆ, ಬಳಲಿಕೆ, ಬರ ಮುಂತಾದ ʻಬʼರ-ಪೂರವನ್ನೇ ಹರಿಸಬಹುದು. ಆದರೆ ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಚೈತ್ರಮಾಸ, ಮಧುಮಾಸ, ಶೃಂಗಾರಮಾಸ ಮುಂತಾದ ಹೆಸರುಗಳೆಲ್ಲಾ ಈ ಚತುರ ವಸಂತನ ಸಹವರ್ತಿಗಳದ್ದೇ. ಅರವಿಂದ, ಅಶೋಕ, ಚೂತ, ನವಮಲ್ಲಿಕೆ ಮತ್ತು ನೀಲೋತ್ಪಲಗಳೆಂಬ ಅನಂಗನ ಬಾಣ ಪಂಚಕಗಳು ಪರಿಣಾಮ ಬೀರುವುದಕ್ಕೆ ವಸಂತ ಆಗಮಿಸಲೇ ಬೇಕು- ಎಂಬಲ್ಲಿಗೆ ಪ್ರಕೃತಿಯ ಮೇಲೆ ಆತನ ಪ್ರಭಾವವೇನು ಎಂಬುದು ಸ್ಫುಟವಾಗುತ್ತದೆ.
ಈ ಬಾರಿ ಎಂದಿನಂತೆ ಇಲ್ಲದಿದ್ದರೂ, ಸಾಮಾನ್ಯವಾಗಿ ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹಾಗೆಂದೇ ಈಗ ಸುಲಿಯುವ ತುಟಿಗಳು, ಒಡೆಯುವ ಹಿಮ್ಮಡಿಗಳು, ಬಿರಿಯುವ ಕೈಕಾಲುಗಳೆಲ್ಲಾ ಮಾರ್ಪಾಡಾಗಿ, ಪ್ರಕೃತಿಯ ನಿಯಮದಂತೆ ಹೊಸ ಹೊಳಪಿನಿಂದ ನಳನಳಿಸುತ್ತವೆ. ಉದುರಿ ಬೋಳಾಗಿ ಬೋಳುಗಳಚಿ ನಿಂತಿದ್ದ ಭೂಮಿಯೂ ಹಸಿರುಡುವ ಹೊತ್ತು. ಹಸಿರೆಂದರೇನು ಒಂದೇ ಬಣ್ಣವೇ? ಎಳೆ ಹಸಿರು, ತಿಳಿ ಹಸಿರು, ಗಿಳಿ ಹಸಿರು, ಸುಳಿ ಹಸಿರು, ಪಾಚಿ ಹಸಿರು, ಪಚ್ಚೆ ಹಸಿರು, ಅಚ್ಚ ಹಸಿರು, ಹಳದಿ ಮಿಶ್ರಿತ ನಿಂಬೆ ಹಸಿರು, ನೀಲಿ ಮಿಶ್ರಿತ ವೈಢೂರ್ಯದ ಹಸಿರು- ಒಂದೇ ವರ್ಣದಲ್ಲಿ ಎಷ್ಟೊಂದು ಛಾಯೆಗಳು! ಈ ಪರಿಯ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಬಲು ಉದಾರಿ.
ಚೈತ್ರ ಮಾಸದ ಮೊದಲ ದಿನವಾದ ಯುಗಾದಿ ಬರುವಷ್ಟರಲ್ಲಿ, ವ್ಯಾಯಾಮದ ಉತ್ಸಾಹಿಗಳಿಗೆ ಬೆಳಗ್ಗೆ ಏಳಲಾರದೆ ಮುದುರಿ ಮಲಗುವ ತಾಪತ್ರಯವಿಲ್ಲ. ಹಗಲು ನಿಧಾನವಾಗಿ ದೀರ್ಘವಾಗುವತ್ತ ಸಾಗುವುದರಿಂದ, ಮುಂಜಾನೆ ನಿರುಮ್ಮಳವಾಗಿ ಎದ್ದು ಬೆವರು ಹರಿಸಬಹುದು. (ವೈಶಾಖ ಬರುವಷ್ಟರಲ್ಲಿ ಶಾಖ ಹೆಚ್ಚಿ, ಬೆವರು ಹರಿಸುವ ಕಷ್ಟವೂ ಇಲ್ಲ, ತಾನಾಗಿ ಹರಿಯುತ್ತಿರುತ್ತದೆ!) ಚಾರಣ, ಪ್ರಯಾಣ ಇತ್ಯಾದಿಗಳಿಗೆ ಹೇಳಿ ಮಾಡಿಸಿದ ಕಾಲವಿದು. ಎಷ್ಟೋ ದೇಶಗಳಲ್ಲಿ ಸ್ಪ್ರಿಂಗ್ ಡ್ರೈವ್ ಅತ್ಯಂತ ಜನಪ್ರಿಯ. ಕಾರಣ, ಎಷ್ಟೋ ದೂರದವರೆಗೆ ಸಾಲಾಗಿ ಹೂ ಬಿಟ್ಟು ನಿಂತ ಮರಗಳ ನಡುವೆ ಜುಮ್ಮನೆ ಡ್ರೈವ್ ಮಾಡುವ ಸುಖ- ಸುಮ್ಮನೆ ಹೇಳುವುದಲ್ಲ, ಮಾಡಿಯೇ ಅರಿಯಬೇಕು. ಯುರೋಪ್ನ ಹಲವಾರು ದೇಶಗಳಿಗೆ ಹೂ ಬಿಡುವ ಕಾಲವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಪ್ರಯಾಣಿಸುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಫ್ರಾನ್ಸ್ ದೇಶದ ಘಮಘಮಿಸುವ ಲಾವೆಂಡರ್ ಹೂವುಗಳು ಮತ್ತು ಸೂರ್ಯಕಾಂತಿಗಳು, ಜರ್ಮನಿಯ ಚೆರ್ರಿ ಹೂಗಳ ಚಪ್ಪರ, ಇಟಲಿಯ ಮನ ಸೆಳೆಯುವ ಆರ್ಕಿಡ್ಗಳು, ಹಾಲೆಂಡ್ನ ಟುಲಿಪ್ಗಳ ವರ್ಣಲೋಕ, ಬ್ರಿಟನ್ನ ಬ್ಲೂಬೆಲ್ಗಳು, ಸ್ಪೇನ್ನಲ್ಲಿ ಹಿಮ ಹೊತ್ತಂತೆ ಕಾಣುವ ಬಾದಾಮಿ ಮರಗಳ ಬಿಳಿ ಹೂವುಗಳು- ಹೇಳುತ್ತಾ ಹೋದಷ್ಟಕ್ಕೂ ಮುಗಿಯುವುದೇ ಇಲ್ಲ ಹೂವುಗಳ ವೈಭವ.
ಯಾವುದೋ ದೇಶಗಳ ಮಾತೇಕೆ? ಅಗ್ದಿ ನಮ್ಮ ಕನ್ನಡದ ಕವಿ ಹರಿಹರನ ಪುಷ್ಟರಗಳೆಯಲ್ಲಿ ಪರಿಮಳಿಸುವ ಹೂವುಗಳೇನು ಕಡಿಮೆಯೇ? ಬೆಳ್ಳಂಬೆಳಗ್ಗೆ ಶಿವನನ್ನು ಪೂಜಿಸಲು ಹೊರಡುವ ಭಕ್ತನೊಬ್ಬ, ಹೂದೋಟಕ್ಕೆ ಹೋಗಿ, ಹೂವುಗಳನ್ನು ಕೊಯ್ದು, ಕಟ್ಟಿ ದೇವರಿಗೆ ಅರ್ಚಿಸುವ ವರ್ಣನೆಯನ್ನು ಹೊತ್ತ ರಗಳೆಯಿದು. ಇಡೀ ಕಾವ್ಯದುದ್ದಕ್ಕೂ ಶಿವನ ಭಕ್ತಿಯೇ ಪ್ರಧಾನವಾಗಿದ್ದರೂ, ಇಡೀ ಪ್ರಕ್ರಿಯೆಯ ನಿರೂಪಣೆ ಸುಂದರವಾಗಿದೆ, ಪುಷ್ಪಮಯವಾಗಿದೆ. ಶಿವನಿಗೆ ಸೇವಂತಿಗೆಯ ಅರಲ ಪನ್ನೀರಿನಿಂದ ಮುಖ ತೊಳೆಸುವ ಆ ಭಕ್ತ, ಪರಾಗದಿಂದ ವಿಭೂತಿಯ ತಿಲಕವನ್ನಿಕ್ಕಿ, ಜಟೆಯಲ್ಲಿರುವ ಸೋಮ ಮತ್ತು ಸುರನದಿಯರಿಗೆ ತೊಂದರೆಯಾಗದಂತೆ ಕೇತಕಿ, ಇರುವಂತಿ ಮತ್ತು ಸೇವಂತಿಯನ್ನು ಮುಡಿಸಿ, ಮರುಗ ಮತ್ತು ಸಂಪಿಗೆಗಳನ್ನೇ ಗಜ ಹಾಗೂ ಹುಲಿ ಚರ್ಮವಾಗಿ ಉಡಿಸುತ್ತಾನೆ ಎಂಬಂತೆ ನಾನಾ ರೀತಿಯ ವಿವರಗಳು ಶಿವ-ಭಕ್ತ-ಹೂವುಗಳ ಸುತ್ತ ಇಡೀ ಕಾವ್ಯದಲ್ಲಿ ಹರಡಿಕೊಂಡಿವೆ.
ವಸಂತ ಎಂದರೆ ಸಂತಸ ಮಾತ್ರವೇ? ಈ ಹೂವು, ಹಣ್ಣು, ಹಸಿರು, ಚಿಗುರು ಮುಂತಾದವೆಲ್ಲ ಯಾಕಿಷ್ಟು ಮುಖ್ಯವೆನಿಸುತ್ತವೆ ನಮಗೆ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಹೊಸವರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಇನ್ನೂ ಎಷ್ಟೊಂದು ಹೇಳುವುದಕ್ಕೆ ಇದೆಯಲ್ಲ. ಕೆಲವರಿಗೆ ಕೋಗಿಲೆ, ದುಂಬಿಗಳು ನೆನಪಾದರೆ, ಹಲವರು ಮಾವಿನ ಹಣ್ಣನ್ನೇ ಧೇನಿಸಬಹುದು. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಪಂಪ. ʻನೀನೇ ಭುವನಕ್ಕಾರಾಧ್ಯನೈ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ಮಾವಿನ ಮರವನ್ನು ಕೊಂಡಾಡುತ್ತಾ, ಬನವಾಸಿಯಲ್ಲಿ ಮರಿದುಂಬಿಯಾಗಿ, ಕೋಗಿಲೆಯಾಗಿ ಹುಟ್ಟಲು ಹಂಬಲಿಸುತ್ತಾನೆ. ಇಂಥ ಘನಕವಿಯಿಂದ ಹಿಡಿದು, ʻಮಧುಮಾಸ ಬಂದಿಹುದು/ ಮಧುಕರಿಗಳೇ ಬನ್ನಿʼ ಎನ್ನುವ ಕುವೆಂಪು ಅವರು, ʻಬಾ ಭೃಂಗವೇ ಬಾ, ವಿರಾಗಿಯಂದದಿ ಭ್ರಮಿಸುವೆ ನೀನೇಕೆ?/ ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ?ʼ ಎಂಬ ಬೇಂದ್ರೆಯವರು, ʻಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ/ ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರʼ ಎನ್ನುವ ಕೆ. ಎಸ್. ನರಸಿಂಹಸ್ವಾಮಿಗಳರವರೆಗೆ ಮಾವು, ದುಂಬಿ, ಕೋಗಿಲೆಗಳ ಬಗ್ಗೆ ಸೃಷ್ಟಿಯಾದ ಕವಿಸಮಯಗಳಿಗೆ ಲೆಕ್ಕವೇ ಇಲ್ಲ.
ನಿಸರ್ಗದೊಂದಿಗೆ ನಿಕಟವಾಗಿ ಬೆರೆತು ಬದುಕುತ್ತಿದ್ದ ಹಿಂದಿನವರ ರೀತಿ-ನೀತಿಗಳನ್ನು ಹಳೆಗನ್ನಡ ಕಾವ್ಯ ಪರಂಪರೆಯಲ್ಲೂ ಕಾಣಬಹುದು. ಸೀತೆಯನ್ನು ಅರಸುತ್ತಾ ಹೋಗುವ ರಾಮ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿದೆ. ʻಕಂಡಿರೇ ಚೆನ್ನಮಲ್ಲಿಕಾರ್ಜುನನʼ ಎನ್ನುವ ಅಕ್ಕನೂ ಪ್ರಕೃತಿಯೊಂದಿಗೆ ಸಂವಾದಿಸುವುದನ್ನು ವಚನಗಳಲ್ಲಿ ಕಾಣಬಹುದು. ನಾಡೊಂದು ಸುಭಿಕ್ಷವಾಗುವುದು ಹೇಗೆ ಎನ್ನುವುದನ್ನು, ʻಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳುʼ ಎಂದು ವರ್ಣಿಸುತ್ತಾನೆ ನಂಜುಂಡ ಕವಿ.
ಇದನ್ನೂ ಓದಿ: ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?
ನಿಸರ್ಗದೊಂದಿಗಿನ ಅನುಸಂಧಾನ ಹೀಗಾದರೆ, ವಸಂತನ ಬಗ್ಗೆ ಹರಿದು ಬಂದ ಕವಿಸಾಲುಗಳಿಗೆ ತುದಿ-ಮೊದಲು ಉಂಟೇ? ʻಪಸರಿಸಿತು ಮಧುಮಾಸ ತಾವರೆ/ ಎಸಳ ದೋಣಿಯ ಮೇಲೆ ಹಾಯ್ದವು/ ಕುಸುಮ ರಸದ ಉಬ್ಬರ ತೆರೆಯನು ಕೂಡ ದುಂಬಿಗಳುʼ ಎಂದು ರಸವನ್ನೇ ಹರಿಸುತ್ತಾನೆ ರೂಪಕಗಳ ರಾಜ ಕುಮಾರವ್ಯಾಸ. ಶೃಂಗಾರ ರಸವೆಂಬುದು ವಸಂತನೊಂದಿಗೆ ಸ್ಥಾಯಿ ಎನ್ನುವಷ್ಟು ನಿಕಟವಾದ್ದರಿಂದ, ʻಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ/ ಮಧುಕರ ನಿಕರ ಕರಂಬಿತ ಕೋಕಿಲ ಕೂಜಿತ ಕುಂಜ ಕುಟೀರೆʼ (ಸ್ಥೂಲವಾಗಿ ಹೇಳುವುದಾದರೆ, ಪ್ರಕೃತಿಯಲ್ಲಿ ಅರಳಿ ನಿಂತ ಹೂಗಿಡ ಬಳ್ಳಿಗಳ ಕುಸುಮಗಳ ಸುಗಂಧವನ್ನು ಕೋಮಲವಾದ ಮರುತ ಹೊತ್ತು ತರುತ್ತಿದ್ದಾನೆ. ಕುಟೀರದ ಸುತ್ತೆಲ್ಲ ದುಂಬಿಗಳು ಝೇಂಕರಿಸುತ್ತಿವೆ) ಎನ್ನುವ ಜಯದೇವ ಕವಿಯ ವರ್ಣನೆಯಿಂದ, ಕೃಷ್ಣ-ಗೋಪಿಕೆಯರ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ಹೊಸಗನ್ನಡದ ಹಾದಿಗಳೂ ವಸಂತನಿಂದ ಸಿಂಗಾರಗೊಂಡಂಥವೇ. ಬಿಎಂಶ್ರೀ ಅವರ ʻವಸಂತ ಬಂದ, ಋತುಗಳ ರಾಜ ತಾ ಬಂದʼ ಎನ್ನುವ ಸಾಲುಗಳಿಂದ ಮೊದಲ್ಗೊಂಡರೆ, ʻಗಿಡದಿಂದುದುರುವ ಎಲೆಗಳಿಗೂ ಮುದ, ಚಿಗುರುವಾಗಲೂ ಒಂದೇ ಹದ/ ನೆಲದ ಒಡಲಿನೊಳಗೇನು ನಡೆವುದೋ, ಎಲ್ಲಿ ಕುಳಿತಿಹನೋ ಕಲಾವಿದ!ʼ ಎಂಬ ಅಚ್ಚರಿ ಚನ್ನವೀರ ಕಣವಿಯವರದ್ದಾದರೆ, ʻಋತು ವಸಂತ ಬಂದನಿದೋ, ಉಲ್ಲಾಸವ ತಂದನಿದೋ/ ಬತ್ತಿದೆದೆಗೆ ಭರವಸೆಗಳ ಹೊಸ ಬಾವುಟವೇರಿಸಿ/ ಹಳೆಗಾಡಿಗೆ ಹೊಸ ಕುದುರೆಯ ಹೊಸಗಾಲಿಯ ಜೋಡಿಸಿʼ ಎಂದು ಸಂಭ್ರಮ ಪಲ್ಲವಿಸುವ ಬಗೆಯನ್ನು ಜಿ.ಎಸ್.ಶಿವರುದ್ರಪ್ಪನವರು ವರ್ಣಿಸುತ್ತಾರೆ. ಇದಿಷ್ಟೇ ಅಲ್ಲ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು- ಹೀಗೆ ವಸಂತನ ಸೌಂದರ್ಯಕ್ಕೆ ಸೋಲದ ಕವಿಗಳೇ ಇಲ್ಲ.
ಇಷ್ಟೆಲ್ಲಾ ಬೆಡಗಿನೊಂದಿಗೆ ಇದೀಗ ಬಂದಿರುವ ವಸಂತನೇನೂ ನಿಲ್ಲುವವನಲ್ಲ, ಉಳಿದೆಲ್ಲರಂತೆಯೇ ಅವನೂ ಋತುಚಕ್ರದೊಂದಿಗೆ ಉರುಳುವವನೇ. ಇಂದು ಚೆಲುವಾಗಿ ಹಬ್ಬಿನಿಂತ ವಲ್ಲರಿ ಮುಂದೊಮ್ಮೆ ಎಲೆ ಉದುರಿಸಲೇಬೇಕು, ಒಣಗಲೇಬೇಕು, ಮತ್ತೆ ಚಿಗುರಲೇಬೇಕು. ಹಳತೆಲ್ಲ ಮಾಗಿ, ಹೋಗಿ, ಹೊಸದಕ್ಕೆ ಹಾದಿ ಬಿಡುವ ಈ ನೈಸರ್ಗಿಕ ಕ್ರಿಯೆಯನ್ನು ಸಹಜವಾಗಿ ಒಪ್ಪಿಕೊಂಡವರು ಮಾತ್ರವೇ ಕಾಲಪ್ರವಾಹದಲ್ಲಿ ದಡ ಸೇರಲು ಸಾಧ್ಯ. ಹಾಗಾಗಿ ಕಾಲಕ್ಕೆ ತಕ್ಕಂತೆ ಮಾಗಲಿ, ಸಾಗಲಿ ನಮ್ಮೆಲ್ಲರ ಜೀವನಚಕ್ರ.
ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!