ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ - Vistara News

ಅಂಕಣ

ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ನಾಡಿನ ಇಬ್ಬರು ರಸಋಷಿಗಳಾದ ಬೇಂದ್ರೆ ಹಾಗೂ ಕುವೆಂಪು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.

VISTARANEWS.COM


on

bendre and kuvempu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯುಗಾದಿ ಹಬ್ಬ: ಬೇಂದ್ರೆ ಮತ್ತು ಕುವೆಂಪು ತೋರಿಸಿದ ದರ್ಶನ

dhavala dharini

ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ್ ಪ್ರಥಮೇsಹನಿ |
ಶುಕ್ಲಪಕ್ಷೇ ಸಮಗ್ರೇ ತು ತದಾ ಸೂರ್ಯೋದಯೆ ಸತಿ

ಚೈತ್ರಮಾಸದ ಮೊದಲ ಹಗಲು ಬ್ರಹ್ಮ ಪ್ರಜಾಪತಿ ಜಗತ್ತನ್ನು ನಂತರ ಎಲ್ಲಾ ಜೀವಿಗಳನ್ನು ಸೃಷ್ಟಿಮಾಡಿದ. ಈ ದಿವಸದಿಂದಲೇ ಸಂವತ್ಸರದ ಗಣನೆ ಪ್ರಾರಂಭವಾಯಿತು.

ಭಾರತೀಯ ಹಬ್ಬಗಳ ಪೈಕಿ ಯುಗಾದಿ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ಹಳ್ಳಿಗಳಲ್ಲಿ ಯುಗಾದಿ ಬಂತೆಂದರೆ ಮೊದಲು ಗಮನ ಹರಿಸುವುದು ಪಂಚಾಂಗ ಶ್ರವಣಕ್ಕಾಗಿ. ಬರುವ ವರ್ಷ ಮಳೆ ಬೆಳೆ ಹೇಗೆ, ದೇವಮಾನದ ಕೊಳಗದಲ್ಲಿ ಈ ಸಾರೆ ಎಷ್ಟು ಮಳೆ ಬರಬಹುದು, ಯುಗಾದಿಪುರುಷ ಈ ವರ್ಷ ಯಾವ ವಾಹನದ ಮೇಲೆ ಕುಳಿತು, ಯಾವ ದಿಕ್ಕಿನತ್ತ ಮುಖ ಮಾಡಿ ಹೊರಟಿದ್ದಾನೆ, ಆತನ ಮುಖಭಾವವೇನು, ಅವ ಹೊರಟ ದಿಕ್ಕು ನಮ್ಮೂರಿಗಂತೂ ಇಲ್ಲ ತಾನೆ, ಎನ್ನುವ ಚರ್ಚೆ ಮಳೆ ಬಂದು ಬಿತ್ತನೆಯ ಕಾರ್ಯದವರೆಗೂ ನಡೆಯುತ್ತಿತ್ತು. ಬೇರೆ ಎಲ್ಲಾ ಹಬ್ಬಗಳೂ ಸಂಭ್ರಮದ ಹಬ್ಬವಾದರೆ ಯುಗಾದಿಯ ವಿಶಿಷ್ಟತೆಯಿರುವುದು ಭವಿಷ್ಯದ ಆಶಾಗೋಪುರದ ಮೇಲೆ. ಸುಮಾರು ಅದುತನಕವೂ ಕೇಳದೇ ಇದ್ದ ಕೋಗಿಲೆಯ ಕುಹೂ ಇದ್ದಕ್ಕಿದ್ದಂತೆ ಕೇಳತೊಡಗಿದಾಗ ಬಿರು ಬೇಸಿಗೆಯಲ್ಲಿಯೂ ಮನಸ್ಸಿನಲ್ಲಿ ಹರ್ಷ ಮೂಡುತ್ತದೆ. ಹೂವು ಅರಳಿದಾಗ ಬೇಂದ್ರೆ ಅಜ್ಜ ನೆನಪಾಗುತ್ತಾರೆ. ಅವರ ಯುಗ ಯುಗಾದಿ ಕಳೆದರೂ ಎನ್ನುವ ಕವನವನ್ನು ಕೇಳಿಯೇ ಬೆಳೆದವರು ನಾವೆಲ್ಲ.

ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಮುಂದಿನ ನಮ್ಮ ಬದುಕಿನಲ್ಲಿ ಸಿಗುವ ಆನಂದದೆಡೆಗೆ ಹೋಗುವ ಆಶಾವಾದವನ್ನು ಮೂಡಿಸಿಬಿಡುತ್ತದೆ. ಯುಗಾದಿಯ ದಿನ ಪಂಚಾಂಗದಲ್ಲಿ ಬರುವ ಮಳೆ ಬೆಳೆಗಳ ಭವಿಷ್ಯವನ್ನು ಕೇಳುವಾಗ ಆಗುವ ಆತಂಕವನ್ನೆಲ್ಲ ಸುಮ್ಮನೆ ಆಚೆ ದೂಡಿ ನಮ್ಮನ್ನು ಜೀವನ್ಮುಖಿಯಾಗಿ ಮಾಡುವ ಅಮೃತಸಿಂಚನ ಬೇಂದ್ರೆಯವರ ಈ ಕವನಕ್ಕಿದೆ. ಅವರ ಇನ್ನೊಂದು ಕವನ ʼಈ ಯುಗಾದಿʼ ಬದುಕಿನ ಪಕ್ವತೆಯನ್ನು ಸಾರುವ ಕವನ. ಅವರ ಎಪ್ಪತ್ತೈದನೆಯ ವಯಸ್ಸಿನಲ್ಲಿ ಬದುಕಿನಲ್ಲಿನ ಎಲ್ಲ ಏಳುಬೀಳುಗಳನ್ನು ನೋಡಿ ನೋವುಗಳ ಸಾಮ್ರಾಜ್ಯದ ಮೇಲೆ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡ ಹೊತ್ತು ಅದು. ಮಾನ ಸಮ್ಮಾನದ ಅಲೆಯಲ್ಲಿ ತೇಲಿ ಹೋಗದೇ,

“ಅವರವರಿಗೆ ಅವರ ಹಾದಿ I ನಿನಗೆ ನನಗೆ ಒಂದೆ ದಾದಿ I ಯುಗದ ಮಧ್ಯಬಿಂದು ಒಂದು IIʼ

ವೇದಾಂತವನ್ನಿಲ್ಲಿ ಅನಾವರಣಗೊಳಿಸುತ್ತಾರೆ. ಸಮಗ್ರ ಬ್ರಹ್ಮಾಂಡವೇ ಚಕ್ರದಂತೆ ತಿರುಗುತ್ತಿದೆ. ಅದರ ಯಾವುದೋ ಬಿಂದುವಿನಲ್ಲಿ ನಿಂತಿರುವ ನಾವುಗಳೆಲ್ಲರೂ ನಮ್ಮಿಂದಲೇ ಈ ಪ್ರಪಂಚ ಪ್ರಾರಂಭವಾಯಿತೆಂದುಕೊಳ್ಳುತ್ತೇವೆ. ಚಕ್ರದ ಪರಿಧಿಯ ಎಲ್ಲ ಬಿಂದುಗಳೂ ಆದಿ ಮತ್ತು ಅಂತ್ಯವೂ ಆಗಿರುತ್ತದೆ. ಯಾವ ಹಾದಿಯಲ್ಲಿಯೇ ಸಾಗಲಿ, ಕೊನೆಗೆ ತಲುವುವ ತಾಣ ಮಾತ್ರ ಒಂದೇ ಎನ್ನುವುದನ್ನು ಈ ಕವನದಲ್ಲಿ ಕವಿ ನಭವನ್ನು ದಿಟ್ಟಿಸಿ ಹೇಳುತ್ತಿದ್ದಾರೆ. ಬೇಂದ್ರೆಯವರ ಯುಗಾದಿ ಮತ್ತು ಈ ಯುಗಾದಿ ಎರಡೂ ಕವನಗಳಿಗೆ ಮುವತ್ತ್ನಾಲ್ಕು ವರ್ಷಗಳ ಅಂತರವಿದೆ. ಈ ಮಹಾನ್ ಕವಿಯ ಬದುಕಿನ ಕಥೆಗಳನ್ನೆಲ್ಲ ಕೇಳುವಾಗ ಅವರು ಅನುಭವಿಸಿದ ನೋವು, ಸಾಲಾಗಿ ಮಕ್ಕಳನ್ನು ಕಳೆದುಕೊಂಡ ದುಃಖ ಕಾವ್ಯವಾಗಿ “ನೀ ಹೀಂಗ ನೋಡಬೇಡ ನನ್ನ” ಎಂದು ಸ್ಫೋಟವಾಗಿ ಹೊರಬಂದಾಗಿನ ಸಂಗತಿ ಮೂಕರನ್ನಾಗಿಸುತ್ತದೆ; ಕ್ರೌಂಚಪಕ್ಷಿಯ ವಿರಹ ವಾಲ್ಮೀಕಿಯ ಬಾಯಲ್ಲಿ ಕಾವ್ಯವಾಗಿ ಹೊರಬಂದ ರೀತಿಯಂತೆ.

da ra bendre

ಕೆರೆಮನೆ ಶಂಭು ಹೆಗಡೆಯವರು ನಿರ್ಯಾಣದ ರಾಮನಾಗಿ “ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು, ಮತ್ತಿನ್ನೇನು ಫಲವಿದೆ ನೀತಿಯೊಂದೆ ದೇವನೆನಿಸಿತು ಎನ್ನನು ಜಗದಲಿ” ಎಂದು ಅಭಿನಯಿಸುವಾಗ ರಾಮನ ಬದುಕಿನ ನೋವು ನಲಿವು ಎರಡರ ವಿಶ್ಲೇಷಣೆಯನ್ನು ಮಾಡುವ ಮತ್ತು ಈ ಅನುಭವಗಳನ್ನು ದಾಟಿ ತಲುಪುವ ಸ್ಥಿತಪ್ರಜ್ಞತೆಯ ಮನಸ್ಥಿತಿಯನ್ನು ವರ್ಣಿಸುತ್ತಿರುವಾಗ ಆ ಪಕ್ವತೆ ಬೇಂದ್ರೆಯವರಲ್ಲಿ ಕಾಣಬಹುದಾಗಿದೆ. ಈ ಪ್ರಪಂಚದಲ್ಲಿ ಜನಿಸಿರುವುದೆಲ್ಲವೂ ಎರಡು ಹಂತಗಳನ್ನು ಹೊಂದುತ್ತವೆ. ಒಂದನೆಯದು ಜೀವಿಸುವುದು. ಉಸಿರು ತುಂಬಿದಲ್ಲಿಂದ ಉಸಿರು ನಿಲ್ಲುವ ಕ್ಷಣದ ತನಕದ ಸವೆಸುವುದು. ಇನ್ನೊಂದು ಬದುಕುವುದು. ಬದುಕಿನಲ್ಲಿಯೂ ಜೀವವಿರುತ್ತದೆ. ಆದರೆ ಇಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗೆ ಕಟ್ಟಿಕೊಂಡ ಬದುಕಿನಿಂದ ನಾವೇನಾಗುತ್ತೇವೆ ಎನ್ನುವುದು ಲೋಕ ನಮ್ಮನ್ನು ಗುರುತಿಸುವ ಕ್ರಮದಿಂದಾಗಿ.

ಈಗ ಹುಟ್ಟುಹಬ್ಬವನ್ನು ಆಚರಿಸುವುದರಿಂದ ಕಳೆದ ಆಯುಷ್ಯದ ನೆನಪಾಗುತ್ತದೆ. ಮೊದಲು ಯುಗಾದಿಯೇ ವ್ಯಕ್ತಿಗತ ಆಯುಷ್ಯವನ್ನೂ ಅಳೆಯುವ ಮಾನವಾಗಿತ್ತು. ಸಮಷ್ಟಿಯ ಬದುಕಿನ ಸುಖ ದುಃಖಗಳ ಆತ್ಮಾವಲೋಕನದ ಕಾಲ ಈ ಯುಗಾದಿ. ಇಳೆ ತನ್ನೊಡಲು ಬರಿದಾಯಿತು ಎಂದು ಯಾವತ್ತಿಗೂ ಅಳಲುವುದಿಲ್ಲ. ತನ್ನನ್ನಾಶ್ರಯಿಸಿ ಬದುಕಿರುವ ಪ್ರಾಣಿಗಗಳನ್ನು ಹೇಗೆ ಪೋಷಿಸಬೇಕೆನ್ನುವುದರ ಅರಿವು ನಿಸರ್ಗಕ್ಕಿದೆ. ಶಿಶಿರ ಋತುವಿನ ಚಳಿಗೆ ಹೆದರಿ ಎಲೆಗಳನ್ನೆಲ್ಲ ಕಳೆದುಕೊಂಡು ಬೋಳಾಗಿ ನೀರವ ಮೌನದಲ್ಲಿರುವಾಗ ಇದ್ದಕ್ಕಿದ್ದಂತೆ ಯಾವುದೋ ಚೇತನ ಅದರೊಳಗೆ ರಸವನ್ನು ಉಕ್ಕಿಸಿಬಿಡುತ್ತದೆ. ತನ್ನದೇ ಎಲೆಯನ್ನು ಹಣ್ಣಾಯಿತೆಂದು ಉದುರಿಸಿಕೊಂಡು ಅದನ್ನೇ ಗೊಬ್ಬರವನ್ನಾಗಿಸಿ ಚಿಗುರಿಗೆ ಪೋಷಣೆಯಾಗುವಿಕೆಯೇ ಚಿರಂಜೀವತ್ವ. ಇದೊಂದು ಋತುಚಕ್ರವೂ ಹೌದು. ಎಳೆಯ ಚಿಗುರಿನಲ್ಲಿ ಮರಕ್ಕೆ ಉಸಿರಾಗುವ ಜವ್ವನದಲ್ಲಿ ಆಹಾರ ಕೊಡುವ ಎಲೆಗಳು ಸೂರ್ಯನ ಕಿರಣಗಳನ್ನು ಹೀರಿ ಹೂವನ್ನು ಕಾಂಡವನ್ನು ರಕ್ಷಿಸಿ ಹೂವರಳಿಸಿ ನಂತರ ಅವಧಿ ಮುಗಿಯುವಾಗ ನಿರ್ಭಾವುಕವಾಗಿ ಮಣ್ಣಾಗುವ ಕ್ರಿಯೆಯಿದೆಯಲ್ಲ, ಅದೇ ಯುಗಾದಿ ನಮಗೆ ಕಲಿಸಿಕೊಡುವ ಪಾಠ. ಹೂವಿನಿಂದ ಮೊಗ್ಗು, ಮೊಗ್ಗಿನಿಂದ ಫಲ, ಫಲದೊಳಗಿನ ಬೀಜ, ಬೀಜದೊಳಗಿನ ಮರವೆನ್ನುವ ಇಲ್ಲಿ ಆದಿ ಅಂತ್ಯಗಳಿಲ್ಲ. ಇದನ್ನೇ ಬೇಂದ್ರೆಯವರು “ಯುಗದ ಮಧ್ಯಬಿಂದು ಒಂದು” ಎಂದು ವರ್ಣಿಸಿರುವುದು.

ugadi fest

ಬೇಂದ್ರೆಯವರಿಗಿಂತ ಕುವೆಂಪು ಯುಗಾದಿಯನ್ನು ಗಮನಿಸುವ ಬಗೆ ಬೇರೆ ರೀತಿಯಲ್ಲಿ. ಕುವೆಂಪು ರಸಋಷಿ. ಬೇಂದ್ರೆ ಇಲ್ಲಿಂದ ಆಚೆಯ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ನಾನು ನೀನು ಆನು ತಾನುಗಳಲ್ಲವೂ ಒಂದಾಗುವ ಏಕತ್ರ ಸ್ಥಿತಿ ಅವರದ್ದು. ಆದರೆ ಕುವೆಂಪು ಈ ಲೋಕದಲ್ಲಿನ ಬದುಕನ್ನು ಸಂಭ್ರಮಿಸುತ್ತಾರೆ. ಈ ಲೋಕ ನಶ್ವರವೆಂದು ಅವರಿಗೆ ಗೊತ್ತಿದೆ. ಆದರೂ ಇರುವಷ್ಟು ಕಾಲ ಇಲ್ಲಿ ಬದುಕಬೇಕು, ಜೀವಿಸುವುದಲ್ಲ ಎನ್ನುತ್ತಾರೆ. ಅವರ ಕಾವ್ಯವೆಂದರೆ ಅದು ದರ್ಶನ. ರಾಮಾಯಣದಲ್ಲಿನ ಮಂಥರೆಗೆ ಹೊಸ ರೂಪವನ್ನು ತೋರಿದವರು ಅವರು. ರಚ್ಚೆಹಿಡಿದು ಅಳುತ್ತಿದ್ದ ರಾಮನಿಗೆ ಕನ್ನಡಿಯೊಳಗಿನ ಚಂದ್ರನನ್ನು ತೋರಿಸಿ ನಗಿಸಿದವಳು. ಆಗ ನಕ್ಕ ರಾಮ ನಂತರ ಅಳಲೇ ಇಲ್ಲ. ರಾಮನ ನಗುವಿನ ಹಿಂದೆ ಇರುವುದು ಮಂಥರೆಯೆನ್ನುವ ಹೊಸ ಹೊಳವು ರಾಮಾಯಣ ದರ್ಶದಲ್ಲಿದೆ. ಬದುಕಿನಲ್ಲಿನ ನಶ್ವರತೆಯ ಅರಿವಿದ್ದೂ ಅದನ್ನು ಶಾಶ್ವತವೆನ್ನುವ ರೀತಿಯಲ್ಲಿ ಅನುಭವಿಸಬೇಕು ಎಂದು ಕುವೆಂಪು ಸಾರಿದ್ದಾರೆ. ಅದು ಸಾಲ ಮಾಡಿಯಾದರೂ ತುಪ್ಪ ತಿನ್ನುವ ಕ್ರಿಯೆಯಲ್ಲ; ಮನಸ್ಸಿನ ಶುದ್ಧತೆಯಿಂದ ಸಂಕಲ್ಪ ಮಾಡಿ ದೊರೆತಿರುವುದನ್ನು ಅನುಭವಿಸುವುದು. ಕುಡಿಯುವ ನೀರಿಗೆ ಗಂಗೋದಕವೆನ್ನುತ್ತಾರೆ. ಪೂಜೆಯಲ್ಲಿಯೂ ಅಭಿಷೇಕ ಮಾಡುವಾಗ ಗಂಗಾ, ಯಮುನಾ, ಗೋದಾವರಿ, ಸರಸ್ವತಿಯನ್ನು ಆಹ್ವಾನಿಸಿದ ಹಾಗೆ. ನೀನು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದಂತೆ ಹಬ್ಬದ ದಿನ ನಾವು ಸ್ನಾನ ಮಾಡುವ ನೀರು ಅದು ಸುರಲೋಕದ ನದಿಯೇ ಆಗುತ್ತದೆ.

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು

ಹೊಸ ಸಂವತ್ಸರ ಭೂಮಿಗೆ ಬಂದಾಗ ಮೈಮರೆಯಬೇಡ ಇದು ನಮಗೆ ದಕ್ಕಿರುವ ಭೋಗ ಎಂದು ಸಂತೋಷಪಡುವುದೇ ಬದುಕು. ಮನುಷ್ಯ ಬದುಬೇಕಾದರೆ ಹೃದಯವನ್ನು ತೆರೆದಿಡಬೇಕು. ಗೀತೆಯ ಘೋಷವೆನ್ನುವುದು ಅನೇಕ ಅರ್ಥಗಳನ್ನು ಕೊಡುತ್ತದೆ. ಅತಿಥಿಯೆಂದರೆ ಕರೆಯದೇ ಅಕಸ್ಮಾತಾಗಿ ಬರುವವನು, ಆತನನ್ನು ನೀನೆ ಕರೆ, ಕರ್ತವ್ಯವನ್ನು ಮಾಡು. ಫಲವಪೇಕ್ಷಿಸಬೇಡ ಎನ್ನುವುದಾಗಿದೆ. ಬರುವವ ಯಾರು ಎಂದು ಯೋಚಿಸದೇ ಹೃದಯವನ್ನು ಬಿಚ್ಚಿಡು. ನಿನ್ನ ನೀನು ಅರಿತುಕೊಂಡರೆ ಅದು ನಿನಗೆ ಅರ್ಥವಾದೀತು ಎನ್ನುತ್ತಾರೆ. ಸುರಲೋಕದ ಸಂಪತ್ತಿಗೆ ಶ್ರೀ ಎಂದು ಹೆಸರು. ಆ ಸಂಪತ್ತು ಬೇಕಾದರೆ ಇಲ್ಲಿ ಅನಿಕೇತರಾಗಬೇಕು. ರಸ ಸಿದ್ಧಿಯಾಗಬೇಕಾದರೆ ದೈವತ ಸಿದ್ಧಿ ಮತ್ತು ಮಾನುಷಿ ಸಿದ್ಧಿ ಎನ್ನುವ ಎರಡನ್ನೂ ಮೀರಬೇಕಾಗುತ್ತದೆ. ʼರಸೋ ವೈ ಸಃʼ ಎನ್ನುವುದು ಕುವೆಂಪು ಅವರ ಮೆಚ್ಚಿನ ವಿಷಯವೂ ಹೌದು.

ನಿಯತಿಕೃತ ನಿಯಮರಾಹಿತ್ಯ, ರಸಾನುಭವದ ಅಲೌಕಿಕತೆ, ಸಾಹಿತ್ಯದಲ್ಲಿ ಪ್ರತಿಮಾ, ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮೀಮಾಂಸೆ, ರಸೋ ವೈ ಸಃ ಎನ್ನುವ ಕುವೆಂಪು ಬರೆದ ಐದು ಪ್ರಬಂಧಗಳನ್ನು ಓದಿದರೆ ಅವರ ಪ್ರತಿಯೊಂದು ಶಬ್ದಕ್ಕೂ ಹೊಸ ಹೊಸ ಅರ್ಥ ಹೊರಹೊಮ್ಮುತ್ತದೆ. ನೂತನ ಸಾಹಸವೆನ್ನುವುದು ಬದುಕಿನಲ್ಲಿಯ ಸೃಜನಶೀಲತೆಯನ್ನು ತೋರಿಸುತ್ತದೆ. ಕಳೆದು ಹೋದ ಭೂತವನ್ನು ನೆನಪಿಸಿ ಕೊರಗಬಾರದು. ಭೂತವೆನ್ನುವುದು ಅನುಭವಕ್ಕಷ್ಟೇ ಸೀಮಿತವಾಗಿರಲಿ, ಭವಿಷ್ಯವೆನ್ನುವುದು ಸಂಭವ; ಹೀಗಾದರೆ ಹಾಗಾಗಬಹುದೆನ್ನುವ ಆಶಾವಾದ, ಈ ಎರಡರೆ ನಡುವೆ ಗತದ ಅನುಭವದ ನೆಲೆಯಲ್ಲಿ ಪಾಪ ಪುಣ್ಯವನ್ನು ನಮ್ಮಂತರಂಗದಲ್ಲಿ ಶೋಧಿಸಿ ನಾವೇ ಅದನ್ನು ಸುಟ್ಟುಬಿಡಬೇಕು. ನೀರು ತೊರೆಯಾಗಿ ಹರಿಯುವಾಗ ಕೊಳೆಯನ್ನೆಲ್ಲ ಕೊಚ್ಚಿ ಶುದ್ಧವಾಗುತ್ತಾ ಹೋಗುವಂತೆ ಅಪಮಾನವನ್ನು ಮರೆತುಬಿಡು, ಇದು ಹಾವು ಪೊರೆಯನ್ನು ಬಿಡುವಂತೆ ಅಲ್ಲ; ಅದು ಲೌಕಿಕ, “ವಾಸಾಸಿ ಜೀರ್ಣಾನಿ ಯಥಾ ವಿಹಾಯ” ಎನ್ನುವ ಗೀತೆಯ ಸೂಕ್ತದ ಆಶಯವಿದು. ಯಾವುದೂ ನಾನಲ್ಲ; ನನಗೆ ಯಾವುದೂ ಇಲ್ಲವೆನ್ನುವಾಗ, ಅವರಲ್ಲಿನ ರಾಮಕೃಷ್ಣಾಶ್ರಮದ ಪ್ರಭಾವವನ್ನು ಗಮನಿಸಬಹುದು. ನವ ವತ್ಸರದಲ್ಲಿ ನವ ಬಾಳನ್ನು ಬಾಳಬೇಕೆನ್ನುವ ಸತ್-ಚಿಂತನೆ ಇಲ್ಲಿದೆ.

ಅವರ ಕಾವ್ಯದಲ್ಲಿ ಮಾರ್ಗದ ನಡೆ ತೂಗಿ ತೊನೆದಾಡುತ್ತಿರುವಾಗ ತಾನು ನೆಲದ ಕವಿಯೆನ್ನುವುದನ್ನು ಅವರು ಮರೆಯುವುದಿಲ್ಲ. ದೇಸಿ ನುಡಿಗಟ್ಟನ್ನೂ ಅವರು ಇದೇ ಗೇಯತೆಯಲ್ಲಿ ತರಬಲ್ಲರು. ಅದನ್ನೇ ಇಲ್ಲಿ “ಉರಿಯಲಿ ಸತ್ಯದ ಊದಿನ ಕಡ್ಡಿ I ಚಿರ ಸೌಂದರ್ಯದ ಹಾಲ್ಮಡ್ಡಿ IIʼʼ ಎಂದಿದ್ದಾರೆ. ಊದಿನ ಕಡ್ಡಿ ಸರಳ ಭಕ್ತಿಯ ಪ್ರತೀಕವಾದರೆ ಹಾಲು ಮತ್ತು ಮಡ್ಡಿ ಜನಸಾಮಾನ್ಯರ ಅನ್ನ. ಬೇಂದ್ರೆಯವರೂ ಪ್ರಕೃತಿ ಹೊಸ ವರುಷಕೆ ಹೊಸ ಹರುಷವನ್ನು ತರುತ್ತದೆ ಎನ್ನುತ್ತಾ ಸಂಭ್ರಮಿಸುತ್ತಾರೆ. ಅವರು ತಮ್ಮನ್ನೇ ತೆರೆದಿಟ್ಟುಕೊಳ್ಳುತ್ತಾ ನಾನೇರುವ ಎತ್ತರಕ್ಕೆ ನೀನೇರು ಎನ್ನುವಂತೆ ಬೆಳೆಯುತ್ತಾ ಹೋಗುತ್ತಾರೆ. ಇನ್ನೇನು ಬೇಂದ್ರೆ ಕೈಗೆ ಸಿಕ್ಕಿದರೂ ಎನ್ನುವಾಗ ನಮಗೆ ದಕ್ಕದೇ ಹತ್ತಂಗುಲದಾಚೆ ಬೆಳೆಯುತ್ತಾರೆ. ಕುವೆಂಪುವಿನ ಸೆಲೆಯೂ ಹಾಗೇ ಆಳವನ್ನು ಹುಡುಕುವಾಗ ಅದರಾಚೆಯೇ ಇರುತ್ತಾರೆ. ಈ ಇಬ್ಬರನ್ನೂ ಅಳೆಯುವದೆಂದರೆ ಅದು ಬ್ರಹ್ಮ ಮತ್ತು ವಿಷ್ಣು ಶಿವಲಿಂಗವನ್ನು ಅಳೆದಂತೆ. ಪಾತಾಳದಾಚೆ, ಬ್ರಹ್ಮಾಂಡವನ್ನು ದಾಟಿ ಇಬ್ಬರೂ ನಿಲ್ಲುತ್ತಾರೆ.

ಜೀವನದಲ್ಲಿ ಅದಿಲ್ಲ ಇದಿಲ್ಲ ಎಂದು ಕೊರಗುವುದಲ್ಲ, ಮುಂದೆ “ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ!” ಎಂದಿದೆ. ಮಾವು ರಸದ ಸಂಕೇತ, ಬೇವು ಆರೋಗ್ಯದ ಸಂಕೇತ, ಹಾಗಾಗಿ ಸುಖ ದುಃಖಗಳನ್ನೆಲ್ಲ ಮೆಟ್ಟಿ ನಿಲ್ಲುವವನೇ ಕಲಿ ಆತನೇ ಮಲ್ಲ ಎನ್ನುವ ಹೊಸಪಥವನ್ನು ತೋರಿಸುತ್ತಾರೆ. ಮರದಲ್ಲಿ ಹೋವು ತುಂಬಿದ ಕೂಡಲೇ ಜೇನು ಬರುವುದು ಸಹಜದ ಕ್ರಿಯೆ. ಅದನ್ನು ನೋಡಿ ಆನಂದಿಸುವ ಮನಸ್ಸು ನಮಗಿರಬೇಕು. “ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ” ಗಾಳಿ ಮಧುರವಾಗಿ ಬೀಸಲಿ, ನದಿಗಳೆಲ್ಲ ಮಧುರವಾಗಿ ಹರಿಯಲಿ ಎನ್ನುವ ಆರ್ಷೇಯದ ಆಶಯವಿಲ್ಲಿದೆ. ಭೂಮಿಯನ್ನು ಗಂಧವತಿ ಎನ್ನುತ್ತಾರೆ. ಈ ಗಂಧವತಿಯ ಎಲ್ಲವೂ ಮಧುಮಧುರವಾಗಿ ನಮ್ಮನ್ನು ಆಹ್ಲಾದಗೊಳಿಸಲಿ ಎನ್ನುವುದನ್ನು ಮುಂದಿನ ಸಾಲು “ಜೀವನವೆಂಬುದು ಹೂವಿನ ಬೀಡು; ಕವಿಯದೇ ಹೆಜ್ಜೇನಿನ ಬೀಡು” ವರ್ಣಿಸಲಾಗಿದೆ.

ಯುಗಾದಿಯ ನಂತರ ಬರುವ ಚೈತ್ರ ಮತ್ತು ವೈಶಾಖವನ್ನು ಮಧುಮಾಸವೆಂದು ಕರೆಯುತ್ತಾರೆ. ಪ್ರಕೃತಿ ಒಣದಾಗಿದ್ದರೂ ಹೂವು ನಳನಳಿಸುತ್ತದೆ. ಹೀಗೆ ನಮ್ಮ ನಡೆ ನುಡಿಗಳೆಲ್ಲವೂ ಮಧುರವಾಗಿದ್ದರೆ ಲೋಕ ನಮ್ಮನ್ನು ತಾನೇ ತಾನಾಗಿ ಮೆಚ್ಚಿಕೊಳ್ಳುತ್ತದೆ. ಕಾಳಿದಾಸನ ಖಂಡಕಾವ್ಯ ಋತುಸಂಹಾರದಲ್ಲಿ ವಸಂತಋತುವಿನ ಕುರಿತು ಸುಂದರವಾದ ವರ್ಣನೆಯಿದೆ. ಪ್ರಣಯಿಗಳ ಮನಸ್ಸನ್ನು ಸೆರೆಹಿಡಿಯಲು ಮಾಂದಳಿರ ಬಾಣದೊಡನೆ ವಸಂತ ಬರುತ್ತಾನೆ ಎನ್ನುವ ಮೂಲಕ ಮಧುಮಾಸವನ್ನು ವಿವರಿಸುತ್ತಾನೆ. ಸಂಹಾರವೆಂದರೆ ಜೋಡಿಸುವುದು, ಹೆಣೆಯುವುದು ಎನ್ನುವ ಅರ್ಥವಿದೆ. ಹಿಂದಿನ ಋತುವಿನಿಂದ ಮುಂದಿನ ಋತುವಿಗೆ ಹೆಣೆದುಕೊಳ್ಳುವುದು ಎನ್ನುವ ಅರ್ಥವನ್ನೂ ಕುವೆಂಪು ತೆರೆದಿರಿಸುತ್ತಾರೆ.

kuvempu

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

ಕೊನೆಯ ನುಡಿಗಳನ್ನು ಗಮನಿಸಿ. ಇಲ್ಲಿ ಯುಗಾದಿಗೂ ಕವಿಗೂ ಇರುವ ಸಂಬಂಧದಿಂದಾಗಿ ಯುಗಾದಿಯೇ ಧನ್ಯವಾಗಬೇಕು; ಯಾಕೆಂದರೆ ಅದಕ್ಕೆ ಕವಿಯೊಲ್ಮೆಯಿರುವುದರಿಂದ. ಕವಿಯೆಂದರೆ ಮೇಧಾವಿ, ಕ್ರಾಂತದರ್ಶನವುಳ್ಳವನು ಎನ್ನುವ ಅರ್ಥಗಳಿವೆ. ಅಕ್ಷರಗಳ ಕ್ರಮಬದ್ಧ ಜೋಡಣೆ ಶಬ್ದ. ಧ್ವನ್ಯಾರ್ಥವಾಗಿ ಗೇಯತೆಯನ್ನು ಕೊಟ್ಟರೆ ಅದು ಕಾವ್ಯ. ಈ ಶಕ್ತಿ ಬರುವುದು ಕವಿಯಿಂದ ಮಾತ್ರ ಸಾಧ್ಯ. ಹಾಗಾಗಿ ಕವಿಯ ಒಲುಮೆ ಇಲ್ಲದೇ ಯಾವುದಕ್ಕೂ ಅರ್ಥ ಸಿಗಲಾರದು.

ಕಾವ್ಯವೆನ್ನುವುದೇ ರಸಸೃಷ್ಟಿ. ರಸ ಸೃಷ್ಟಿಯಲ್ಲಿ “ತನ್ನಾಶಸ್ಯ ನಾಶಸ್ಯ”ವೆನ್ನುವ ಮಾತಿದೆ. ಕವಿ ಕಾವ್ಯದಲ್ಲಿ ಮುಳುಗಿ ಹೋಗಕೂಡದು. ಆದರೆ ಕಾವ್ಯ ಕವಿಯನ್ನು ಮರೆಯಿಸಿಬಿಡಬೇಕು. ಕಾವ್ಯವನ್ನು ಬರೆದ ಕವಿ ಮತ್ತು ಓದುಗನ “ಆವರಣ ಭಂಗವಾಗಬೇಕು”. ದ. ರಾ. ಬೇಂದ್ರೆ ಮತ್ತು ಕುವೆಂಪು ಇಬ್ಬರೂ ಇಂಥ ಸಾಧ್ಯತೆಯನ್ನು ಮೀರಿನಿಂತ ಕವಿಗಳು.

ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ಇಬ್ಬರು ರಸಋಷಿಗಳು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

ನನ್ನ ದೇಶ ನನ್ನ ದನಿ ಅಂಕಣ: ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಇದು ಈಗ ಕನ್ನಡದಲ್ಲೂ ಲಭ್ಯವಿದೆ.

VISTARANEWS.COM


on

s jaishankar book the india way
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪರಂಪರೆಯನ್ನು, ನಮ್ಮ ಶಾಸ್ತ್ರಗ್ರಂಥಗಳನ್ನು, ನಮ್ಮ ಆರ್ಷ ಚಿಂತನೆಯನ್ನು ನಾವು ಮರೆತೇಬಿಟ್ಟಿದ್ದೇವೆ. ಸಾಮುದಾಯಿಕವಾಗಿ ಸೂಕ್ತವಾಗಿ ಗೌರವಿಸುವುದೂ ಹಿನ್ನೆಲೆಗೆ ಸರಿದಿದೆ. ಯಾರಾದರೂ ನೆನಪು ಮಾಡಿದರೂ, ಉಲ್ಲೇಖಿಸಿದರೂ “ಬಿಡ್ರೀ, obsolete – old – outdated ವಿಚಾರಗಳನ್ನು ಒದರಬೇಡ್ರೀ” ಎಂದು ಝಾಡಿಸುತ್ತೇವೆ. ಹೌದು. ನಮ್ಮ “ಆಧುನಿಕ” ಶಿಕ್ಷಣ ವ್ಯವಸ್ಥೆಯು, ಭಾರತೀಯರಾದ ನಮ್ಮ ಮನೋಭೂಮಿಕೆಯನ್ನು ರೂಪಿಸಿರುವುದೇ ಹಾಗೆ. ಯಾರಾದರೂ ಅಂತಾರಾಷ್ಟ್ರೀಯ ರಾಜಕೀಯದ ಬಗೆಗೆ, ವಿಶ್ವ ಮಾರುಕಟ್ಟೆಯ ಬಗೆಗೆ, ಭಾರತೀಯ ಅರ್ಥ ವ್ಯವಸ್ಥೆಯ ಬಗೆಗೆ ಮಾತನಾಡುವಾಗ, ಅಪ್ಪಿತಪ್ಪಿ ಯಾರಾದರೂ “ಚತುರ್ವಿಧ ಪುರುಷಾರ್ಥ”ಗಳನ್ನು ಉಲ್ಲೇಖಿಸಿದರೆ, ಧರ್ಮ – ಅರ್ಥ – ಕಾಮ – ಮೋಕ್ಷಗಳಿಗೆ ನಮ್ಮ ಪೂರ್ವಿಕರು ಸಮಾನ ಮಹತ್ತ್ವ ನೀಡಿದ್ದರು, ಎಂದರೆ ಸೇರಿದವರು ಗಹಗಹಿಸಿ ನಗಬಹುದು. ಮೂರ್ನಾಲ್ಕು ದಶಕಗಳ ಹಿಂದೆ ವಿಜೃಂಭಿಸುತ್ತಿದ್ದ ಸಮಾಜವಾದಿ ಹಿನ್ನೆಲೆಯ ಕೆಲವು ಸಂಪಾದಕರೋ ಪತ್ರಕರ್ತರೋ ಈಗ ಇದ್ದಿದ್ದರೆ, ಉಲ್ಲೇಖಿಸಿದವರು “Get lost” “Get out” ಎಂದು ಅನ್ನಿಸಿಕೊಳ್ಳಬೇಕಾಗಿತ್ತೋ ಏನೋ!

ಕಾಲ ಬದಲಾಗಿದೆ, ಬಿಡಿ. 2014ರ ಅನಂತರ ತುಂಬ ತುಂಬ ಬದಲಾಗುತ್ತಲೂ ಇದೆ.

ಹಿಂದೊಮ್ಮೆ ವಾಜಪೇಯಿ ಅವರು ಹೇಳಿದ್ದರು, ನಾವು ಇತಿಹಾಸ ಬದಲಿಸಬಹುದು, ಆದರೆ, ಭೂಗೋಳವನ್ನು (Geography) ಬದಲಿಸಲಾರೆವು ಎಂದು. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳಂತಹ ಮಗ್ಗುಲ ಮುಳ್ಳುಗಳು ಆ ಉದ್ಗಾರಕ್ಕೆ ಕಾರಣವಾಗಿದ್ದವು. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, of course, ಜಡತ್ವವನ್ನು ಮೈಕೊಡವಿಕೊಂಡು ಎದ್ದರೆ ಅಸಾಧ್ಯವೂ ಸಾಧ್ಯವಾದೀತು.

ರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅರ್ಥ ಮಾಡಿಕೊಳ್ಳಲು ನಾವು ಸಾಮಾನು ಸರಂಜಾಮು ಸಾಗಿಸುವ ಹಡಗುಗಳನ್ನು, ಕಾರ್ಗೋ (cargo) ವಿಮಾನಗಳನ್ನು, ಗೂಡ್ಸ್ ಗಾಡಿಗಳನ್ನು, ದೊಡ್ಡ ದೊಡ್ಡ ಹೆದ್ದಾರಿಗಳನ್ನು ಒಂದಿಷ್ಟು ವಿಚಕ್ಷಣೆಯಿಂದ ನೋಡಬೇಕು. ತೈಲ ಸಾಗಣೆಯ ಹಡಗುಗಳನ್ನೂ, ಕಲ್ಲಿದ್ದಲು ಸಾಗಿಸುವ ರೈಲು ಗಾಡಿಗಳನ್ನೂ ಗಮನಿಸಬೇಕು. ಆಗ ಮನುಕುಲದ ಎಂಟು ಶತಕೋಟಿ ಮಾನವಜೀವಿಗಳ ಅಗತ್ಯಗಳನ್ನು ಪೂರೈಸುವ ವಿಶಾಲ ಅರ್ಥವ್ಯವಸ್ಥೆಯ ಸ್ಥೂಲ ನೋಟ ದೊರೆಯುತ್ತದೆ. ಈ ವ್ಯವಸ್ಥೆ ನಮ್ಮ ನರಮಂಡಲದಂತೆ. ಅರೆಕ್ಷಣವೂ ಸಹ ಈ ವ್ಯವಸ್ಥೆಯಿಲ್ಲದೆ ಮನುಷ್ಯ ಬದುಕಲಾರ. ಇತಿಹಾಸದ ಹಿನ್ನೋಟದಲ್ಲಿ ಸಾವಿರಾರು ವರ್ಷಗಳ ಹಿಂದೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತದ್ದೇ ಸಿಂಹಪಾಲು. ಅಂದಿನ ಸಿಲ್ಕ್ ರೂಟ್, ಸಾರ್ಥಗಳು, ಯೂರೋಪಿನಲ್ಲಿಯೂ ಹೆಸರು ಮಾಡಿದ್ದ ನಮ್ಮ ಸಿದ್ಧವಸ್ತುಗಳು, ಬಟ್ಟೆಗಳು ಎಲ್ಲವೂ ಜಗತ್ತಿನ ಆರ್ಥಿಕತೆಯ ಬಹು-ಆಯಾಮಗಳನ್ನು ನೆನಪಿಸುತ್ತವೆ. ಭಾರತ ಇದ್ದುದೇ ಹಾಗೆ. ಅಧ್ಯಾತ್ಮ – ಅರ್ಥ ವ್ಯವಸ್ಥೆ ಎರಡರಲ್ಲಿಯೂ ನಾವು ಔನ್ನತ್ಯ ಸಾಧಿಸಿದ್ದೆವು. ಶತ್ರುಗಳನ್ನು – ಪಾಶವೀ ರಿಲಿಜನ್ನುಗಳನ್ನು ಅರ್ಥ ಮಾಡಿಕೊಳ್ಳದೇ, ಶತಶತಮಾನಗಳ ಕಾಲ ಗುಲಾಮರಾಗಿಬಿಟ್ಟೆವು, ದರಿದ್ರರಾಗಿಬಿಟ್ಟೆವು, ಕಿಂಕರ್ತವ್ಯಮೂಢರಾಗಿಬಿಟ್ಟೆವು.

ಅರ್ಥ ವ್ಯವಸ್ಥೆ ಅಷ್ಟೇ ಅಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಸಂಬಂಧಗಳು ತೀರಾ ತೀರಾ ಸಂಕೀರ್ಣ. ಅಂತಾರಾಷ್ಟ್ರೀಯ ಸ್ತರದಲ್ಲಿ ಕಳೆದ ನೂರು ವರ್ಷಗಳ ಭಾರತದ ಇತಿಹಾಸವನ್ನು ಗಮನಿಸಿದರೆ, ನಾವು ಉಳಿದಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ, ಬ್ರಿಟಿಷರ ಪ್ರೀತಿಪಾತ್ರ ಪಕ್ಷವು ಅಧಿಕಾರದಲ್ಲಿದ್ದಾಗ, ಸಂಸತ್ತಿನಲ್ಲಿ ಅಕ್ಷರಶಃ ನೂರಾರು ಜನ ಸಂಸತ್ ಸದಸ್ಯರು CIA – KGB ಸಂಸ್ಥೆಗಳ Pay Rollನಲ್ಲಿದ್ದರಂತೆ. ಅವರಿಗೆ regular ಆಗಿ ವಿದೇಶೀ ಹಣ ಬರುತ್ತಿತ್ತು. ಕೆಲವು ವರ್ಷಗಳ ಹಿಂದೆ, ಈ ಗೂಢಚಾರೀ ಸಂಸ್ಥೆಗಳ ದಾಖಲೆಗಳು ಬಯಲಾದಾಗ (De-classification) ವಿಷಯ ತಿಳಿದ ನಾವೆಲ್ಲಾ ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು.

ಬಹಳ ವರ್ಷಗಳ ಕಾಲ ನಮ್ಮ ದೇಶದ ವಿದೇಶಾಂಗ ಮಂತ್ರಿಗಳು ಅಕ್ಷರಶಃ ಜೋಕರ್‌ಗಳಾಗಿಬಿಟ್ಟಿದ್ದರು. ತೈಲ ರಾಷ್ಟ್ರಗಳ ಮುಂದೆಹೋಗಿ, ಹಲ್ಲು ಗಿಂಜುತ್ತಿದ್ದರು, ಕರೆಯದಿದ್ದರೂ ಹೋಗಿ ಥೂ ಎನ್ನಿಸಿಕೊಂಡು ಬರುತ್ತಿದ್ದರು. ಅವರೆಲ್ಲಾ ಅಮೆರಿಕಾ ಇಲ್ಲವೇ ಸೋವಿಯತ್ ಒಕ್ಕೂಟದ ಆಜ್ಞಾನುವರ್ತಿಯಾಗಿರುವುದೇ ವಿದೇಶಾಂಗ ನೀತಿ ಎಂದುಕೊಂಡುಬಿಟ್ಟಿದ್ದರು. ಎರಡೂ ಶಕ್ತಿಕೇಂದ್ರದವರಿಂದ ಭಾರತ ಒದೆ ತಿಂದಿದ್ದೇ ಹೆಚ್ಚು. ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೂ, ಲೇಖಕರೂ, ಚಿಂತಕರೂ ಆಗಿದ್ದ ಆರ್.ಎನ್.ಕುಲಕರ್ಣಿಯವರು ವಿಷಾದದಿಂದ “ನಮ್ಮ ದೇಶಕ್ಕೆ ವಿದೇಶಾಂಗ ನೀತಿ ಎಂಬುದೇ ಇಲ್ಲ” ಎಂದಿದ್ದರು. ಹಲವಾರು ದೇಶಗಳಲ್ಲಿ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ, ಕಟು-ಸತ್ಯಗಳನ್ನು ಕಂಡಿದ್ದ ಅವರಿಗೆ ಅಂದಿನ ಗೊಂದಲದ ವಿದೇಶಾಂಗ ನೀತಿ (?) ಭ್ರಮನಿರಸನ ಉಂಟುಮಾಡಿತ್ತು.

ಮೋದಿ ಸರ್ಕಾರದ ಪ್ರಥಮ ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅನಂತರ ಉತ್ತರಾಧಿಕಾರಿ ಯಾರು ಎಂಬುದು ದೇಶಕ್ಕೆ ಚಿಂತೆಯ ಸಂಗತಿಯಾಗಿತ್ತು. ರಾಜಕಾರಣಿಗಳನ್ನು ಮಾತ್ರವೇ ವಿದೇಶಾಂಗ ಮಂತ್ರಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದವರಿಗೆ IFS ಅಧಿಕಾರಿಯೊಬ್ಬರು ಅತಿ-ಮಹತ್ತ್ವದ ಆ ಸ್ಥಾನಕ್ಕೆ ಆಯ್ಕೆ ಆಗಬಹುದು, ಎಂದು ಬಹಳ ಜನ ಪತ್ರಕರ್ತರೇ ಊಹಿಸಿರಲಿಲ್ಲ. ಇನ್ನು ಬಹುಪಾಲು ಕಾಂಗ್ರೆಸ್ ಆಡಳಿತದಲ್ಲಿಯೇ ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಜೈಶಂಕರ್ ಅಂತಹವರು, ಬೇರೆಯೇ ಕಾರ್ಯಶೈಲಿಯ ಮೋದಿ ತಂಡದಲ್ಲಿ, ಸುಷ್ಮಾ ಅವರಿಗೆ ಸಮರ್ಥ ಉತ್ತರಾಧಿಕಾರಿಯಾಗಿ ಯಶಸ್ಸು ಪಡೆಯಬಲ್ಲರೇ ಎಂಬ ಸಂದೇಹ ಇದ್ದುದೂ ನಿಜವೇ.

S jaishankar

ಯುದ್ಧಗಳು, ಅಂಟುರೋಗಗಳು, ಬದಲಾಗುವ ದೇಶ-ದೇಶಗಳ ನಡುವಿನ ಸಂಬಂಧಗಳು, ಔಷಧಿ – ಶಸ್ತ್ರಾಸ್ತ್ರಗಳನ್ನು ತಯಾರಿಸುವವರ ಕಟ್-ಥ್ರೋಟ್ ರಾಜಕೀಯಗಳ ನಡುವೆ ದೇಶವೊಂದರ ಪ್ರಧಾನಮಂತ್ರಿ – ವಿದೇಶಾಂಗ ಮಂತ್ರಿಗಳ ಪಾತ್ರ ಯಾವಾಗಲೂ ಕಷ್ಟತಮವಾದುದೇ, ಸಂಕೀರ್ಣವಾದುದೇ. ತುಂಬ ಯೋಚಿಸಿ ಇಟ್ಟ ಹೆಜ್ಜೆಯೂ ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತದೆ. ಭೂಕಂಪಕ್ಕೆ ತುತ್ತಾದ ಟರ್ಕಿ ದೇಶಕ್ಕೆ ತ್ವರಿತ ಸಹಾಯ ಹಸ್ತ ಚಾಚಿದ ಮತ್ತು ತುರ್ತು ಅಗತ್ಯಗಳನ್ನು ಪೂರೈಸಿದ ಭಾರತಕ್ಕೆ, ಕೆಲವೇ ದಿನಗಳಲ್ಲಿ ಆ ಜಿಹಾದೀ ಟರ್ಕಿ ದೇಶವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ದ್ರೋಹ ಬಗೆಯಿತು. ಮಾಲ್ಡೀವ್ಸ್ ನಂತಹ ಜಿರಳೆ ಗಾತ್ರದ ದೇಶವು ಭಾರತಕ್ಕೆ ಸೆಡ್ಡು ಹೊಡೆಯುತ್ತದೆ, ಸವಾಲು ಹಾಕುತ್ತದೆ, ಅವಮಾನ ಮಾಡುತ್ತದೆ. ಇಂತಹ ನೂರೆಂಟು ಅಪಸವ್ಯಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇರುವಂತಹುವೇ! ಈ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆಯನ್ನು ನಿಭಾಯಿಸುವುದು ಸರಳವೂ ಅಲ್ಲ, ಸುಲಭವೂ ಅಲ್ಲ.

ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಅಮೆರಿಕದಂತಹ ದೇಶದ ಸ್ಥಾನಮಾನದ ಬಗೆಗೆ, ನಮ್ಮ ದೇಶದ ಕಾರ್ಯತಂತ್ರ ಸಂಸ್ಕೃತಿಯ ಬಗೆಗೆ, ಭಾರತದ ಮೇಲಿರುವ ಗತಕಾಲದ ಭಾರದ ಬಗೆಗೆ, ಜಾಗತಿಕ ಮಟ್ಟದಲ್ಲಿ ತಡವಾಗಿಯಾದರೂ ದೊರೆತಿರುವ – ದೊರೆಯುತ್ತಿರುವ ಅವಕಾಶಗಳ ಬಗೆಗೆ, ಅಂತಾರಾಷ್ಟ್ರೀಯ ಶಕ್ತಿಗಳ ಹೊಸ ಸಮೀಕರಣದ ಬಗೆಗೆ, ತುಂಬಾ ಮೌಲಿಕವಾದ ಬರೆಹವನ್ನು ನೀಡಿದ್ದಾರೆ. ಈ ಅಂತಾರಾಷ್ಟ್ರೀಯ ಸಂಗತಿಗಳ ಜಗತ್ತೇ ಹೀಗೆ, ದೇಶದೊಳಗಿನ ರಾಜಕಾರಣದ ಒಳಹೂರಣವನ್ನು ಬಗೆದು – ತೆಗೆದು ಬರೆದಂತೆ ಅಲ್ಲವೇ ಅಲ್ಲ. ಪ್ರತಿಯೊಂದು ಸಾಲಿಗೂ ಪ್ರತಿಯೊಂದು ಸಂಗತಿಗೂ, ಬಹು-ಆಯಾಮದ ಮುಖಗಳಿರುತ್ತವೆ, ಅಷ್ಟೇ ಅಲ್ಲ, ವೈಫಲ್ಯದ ವಿಸಂಗತಿಗಳೂ ಇರುತ್ತವೆ. ಏನೇ ನಿರ್ಧಾರ ತೆಗೆದುಕೊಂಡರೂ, ಅನಂತರ ಹೇಗೆ ವಿಶ್ಲೇಷಿಸಿದರೂ ಪ್ರತಿಯೊಂದಕ್ಕೂ ಕೊಂಕು ತೆಗೆಯುವ ಟೀಕಾಕಾರರೂ ಇರುತ್ತಾರೆ.

ವಿದೇಶಾಂಗ ವ್ಯವಹಾರ ಇರುವುದೇ ಹಾಗೆ.

ಜೈಶಂಕರ್ ತಮ್ಮ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಪಡೆದಂತೆಯೇ, ಈ ಕೃತಿ ರಚನೆಯಲ್ಲಿಯೂ ಔನ್ನತ್ಯ ಸಾಧಿಸಿದ್ದಾರೆ. ವಿಶೇಷವೆಂದರೆ ಕ್ಲಿಷ್ಟವೂ ಸಂಕೀರ್ಣವೂ, ಮುಖ್ಯವಾಗಿ ತುಂಬಾ ತಾಂತ್ರಿಕವೂ ಆದ ಇಂತಹ ಕೃತಿಗಳನ್ನು ಸಮರ್ಪಕವಾಗಿ ಕನ್ನಡಕ್ಕೆ ಭಾಷಾಂತರಿಸುವುದು ಬಹಳ ದೊಡ್ಡ ಸವಾಲಿನ ಕೆಲಸ. ಸಾಮಾನ್ಯ ಅನುವಾದವನ್ನು ಮೀರಿದ, ಇಂತಹ ರಾಜತಾಂತ್ರಿಕ ಮತ್ತು ವಿದೇಶಾಂಗ ಮಗ್ಗುಲುಗಳ ಗ್ರಂಥವೊಂದನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ತುಂಬಾ ಚೆನ್ನಾಗಿ ಕನ್ನಡಕ್ಕೆ ತಂದಿದ್ದಾರೆ. ಮೂಲ ಇಂಗ್ಲಿಷ್ ಮತ್ತು ಕನ್ನಡಾನುವಾದದ ಎರಡೂ ಪಠ್ಯಗಳನ್ನು ಜೊತೆಜೊತೆಯಲ್ಲಿಯೇ ನೋಡಿದಾಗ, ಗಮನಿಸಿದಾಗ, ಹೋಲಿಸಿದಾಗ ಜಯಪ್ರಕಾಶರ ಶ್ರಮ ಎಂತಹುದು ಎಂಬುದು ತಿಳಿಯುತ್ತದೆ. ನಿಜಕ್ಕೂ JP ಅಭಿನಂದನೀಯರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

“…..ನಾವು ದೇಶಗಳ ಗಡಿ ಮತ್ತು ಸಾಂಪ್ರದಾಯಿಕ ಮಾದರಿಯ ರಾಜಕಾರಣದ ಆಚೆಗೆ ಕೂಡ ಮಾತನಾಡುತ್ತಿದ್ದೇವೆ. ಅಧಿಕಾರವನ್ನು ವ್ಯಾಖ್ಯಾನಿಸುತ್ತಿದ್ದ ಸಂಗತಿಗಳಾಗಲೀ, ರಾಷ್ಟ್ರೀಯ ನಿಲುವನ್ನು ನಿರ್ಧರಿಸುತ್ತಿದ್ದ ಸಂಗತಿಗಳಾಗಲೀ, ಈಗ ಹಿಂದಿನಂತೆಯೇ ಉಳಿದಿಲ್ಲ. ಅವುಗಳ ಜಾಗದಲ್ಲಿ ತಂತ್ರಜ್ಞಾನ, ಸಂಪರ್ಕ ಸೌಲಭ್ಯ ಮತ್ತು ವಾಣಿಜ್ಯ ವಹಿವಾಟುಗಳು ಮುನ್ನೆಲೆಗೆ ಬಂದಿವೆ. ನಿರ್ಬಂಧಿತವೂ ಅಂತರವಲಂಬಿತವೂ ಆಗಿರುವ ಸದ್ಯದ ಜಗತ್ತಿನಲ್ಲಿ ನಮಗೆ ಎದುರಾಗುವ ಸ್ಪರ್ಧೆಯನ್ನು ನಾವು ಹೆಚ್ಚು ಜಾಣ್ಮೆಯಿಂದ ಎದುರಿಸಬೇಕು. ಬಹುಧ್ರುವೀಯ ವ್ಯವಸ್ಥೆಯು ದುರ್ಬಲವಾಗುತ್ತಿದ್ದಂತೆಯೇ, ಜಾಗತಿಕ ಒಳಿತು ಎನ್ನುವುದು ಕೂಡ ಹೆಚ್ಚು ವಿವಾದಾಸ್ಪದವಾಗಿದೆ. ಒಂದು “ಆರ್ಕ್ಟಿಕ್ ಪ್ಯಾಸೇಜ್”ಅನ್ನು ತೆರೆಯುವ ಮೂಲಕ ಹವಾಮಾನ ಬದಲಾವಣೆಯಂತಹ ವಿಚಾರ ಕೂಡ ಜಾಗತಿಕ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಷ್ಟೇ ಅಲ್ಲ, ಎಲ್ಲರ ನಿರೀಕ್ಷೆಯನ್ನು ಮೀರಿ ಕರೋನಾ ಸಾಂಕ್ರಾಮಿಕ ಕೂಡ ಇಲ್ಲಿ “ವೈಲ್ಡ್ ಕಾರ್ಡ್” ಆಗಿ ಹೊರಹೊಮ್ಮಿದೆ. ಚುಟುಕಾಗಿ ಹೇಳುವುದಾದರೆ, ಬದಲಾವಣೆಗಳು ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಅಭೂತಪೂರ್ವವಾಗಿ ಸಂಭವಿಸುತ್ತಿವೆ……” (“ಭಾರತ ಪಥ” ಪುಟ ೧೧೮).

20ನೆಯ ಶತಮಾನದ ಪರಿಪ್ರೇಕ್ಷ್ಯದಲ್ಲಿ, ವಿದೇಶಾಂಗ – ಆರ್ಥಿಕ – ಅಂತಾರಾಷ್ಟ್ರೀಯ ಆಯಾಮಗಳ ಭಾರತೇತಿಹಾಸದ ಒಂದು ಮಹತ್ತ್ವದ ಚಿತ್ರ ನೀಡುವಲ್ಲಿ ಜೈಶಂಕರ್ ಯಶಸ್ವಿಯಾಗಿದ್ದಾರೆ ಮತ್ತು ಒಂದು ರೀತಿಯಲ್ಲಿ ಇತಿಹಾಸಕಾರರೂ ಆಗಿಬಿಟ್ಟಿದ್ದಾರೆ.

“ಭಾರತ ಪಥ” ನಾವೆಲ್ಲ ಗಮನಿಸಲೇಬೇಕಾದ ಕೃತಿಗಳಲ್ಲೊಂದು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

Continue Reading

ಅಂಕಣ

ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ರಾಜಮಾರ್ಗ ಅಂಕಣ: ಈ ವರ್ಷವೂ ಬಲಿಷ್ಠ ಆಟಗಾರರನ್ನು ಹೊಂದಿರುವ ಆ ತಂಡದ ಆಟಗಾರರು ತಮ್ಮ ಚಾಂಪಿಯನ್ ಆಟವನ್ನು ಶೋಕೇಸ್ ಮಾಡಲು ಪದೇ ಪದೇ ಸೋಲುತ್ತಿರುವುದು ಅದರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣ ಆಗಿದೆ.

VISTARANEWS.COM


on

RCB team 2024
Koo

ಪಾಯಿಂಟ್ಸ್ ಟೇಬಲಿನಲ್ಲಿ ಕೊನೆಯ ಸ್ಥಾನದಲ್ಲಿ RCB !

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: RCB ಟೀಮ್ ಸೋತರೆ ಬೇಜಾರಿಲ್ಲ. ಆದರೆ ಈ ರೀತಿ ಸೋಲಬಾರದು!

ಈ ಬಾರಿ RCB ಮಹಿಳಾ ತಂಡ ʼಮಹಿಳಾ ಪ್ರೀಮಿಯರ್ ಲೀಗ್’ ಟ್ರೋಫಿ ಗೆದ್ದ ನಂತರ ನಮ್ಮ RCB ತಂಡದ ಬಗ್ಗೆ ಒಂದಿಷ್ಟು ಭರವಸೆ ಮೂಡಿದ್ದು ಸುಳ್ಳಲ್ಲ. RCB ತಂಡ ಸಾಮಾನ್ಯವಾದ ತಂಡ ಅಲ್ಲವೇ ಅಲ್ಲ. ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅದು! 16 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡ ಆದರೂ ಆ ತಂಡಕ್ಕೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶ ಮಾಡಿದ ತಂಡ ಎಂಬ ಹೆಗ್ಗಳಿಕೆ ಬೇರೆ ಅವರಿಗಿದೆ.

ಆದರೆ ಈ ಬಾರಿ ಏನಾಗಿದೆ ನಮ್ಮ ತಂಡಕ್ಕೆ?

ಈ ವರ್ಷವೂ ಬಲಿಷ್ಠ ಆಟಗಾರರನ್ನು ಹೊಂದಿರುವ ಆ ತಂಡದ ಆಟಗಾರರು ತಮ್ಮ ಚಾಂಪಿಯನ್ ಆಟವನ್ನು ಶೋಕೇಸ್ ಮಾಡಲು ಪದೇ ಪದೇ ಸೋಲುತ್ತಿರುವುದು ಅದರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣ ಆಗಿದೆ. ಸೋಮವಾರದ ಹೈದರಾಬಾದ್ ವಿರುದ್ಧದ ಪಂದ್ಯವು ಮುಗಿದಾಗ RCB ತಂಡವು ಕೇವಲ 2 ಅಂಕ ಗಳಿಸಿ ಪಾಯಿಂಟ್ಸ್ ಟೇಬಲಿನಲ್ಲಿ ಕೊನೆಯ ಸ್ಥಾನ ಪಡೆದಿರುವುದನ್ನು ನೋಡುವುದು ಆ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಆಗಬಹುದು. ಏಳು ಪಂದ್ಯಗಳಲ್ಲಿ ಆ ತಂಡವು ಗೆದ್ದಿರುವುದು ಕೇವಲ ಒಂದೇ ಪಂದ್ಯ.

ಹೆಚ್ಚಿನ ಪಂದ್ಯಗಳನ್ನು ಅವರು ದೊಡ್ಡ ಮಾರ್ಜಿನಿನಲ್ಲಿ ಫೈಟ್ ಕೊಡದೆ ಸೋತಿರುವುದನ್ನು ನೋಡುವಾಗ ನಿಜವಾಗಿಯೂ ದುಃಖ ಆಗುತ್ತದೆ. ಇಡೀ ತಂಡದ ಆತ್ಮವಿಶ್ವಾಸ ಪಾತಾಳಕ್ಕೆ ಕುಸಿದು ಹೋಗಿರುವುದು ಮೈದಾನದಲ್ಲಿ ಆಟಗಾರರ ಬಾಡಿ ಲ್ಯಾಂಗ್ವೇಜ್ ನೋಡಿದರೆ ಗೊತ್ತಾಗುತ್ತದೆ. ಇಡೀ ತಂಡವು ಒಂದು ತಂಡವಾಗಿ
ಆಡುವುದರಲ್ಲಿ ಪದೇ ಪದೇ ಎಡವುತ್ತಿದೆ. ಪ್ಲೇ ಆಫ್ ಸುತ್ತಿಗೆ RCB ಇನ್ನು ಪ್ರವೇಶ ಪಡೆಯಬೇಕಾದರೆ ಭಾರೀ ದೊಡ್ಡ ಮಿರಾಕಲ್ ನಡೆಯಬೇಕು ಎಂಬಲ್ಲಿಗೆ RCB ಅಭಿಮಾನಿಗಳು ‘ಈ ಬಾರಿ ಕಪ್ ನಂದೇ ‘ ಎಂದು ಹೇಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಅನ್ನಿಸುತ್ತದೆ.

ಆಟಗಾರರ ಘನಘೋರ ವೈಫಲ್ಯ

ವಿರಾಟ್ ಕೊಹ್ಲಿ ಬಿಟ್ಟರೆ ಬೇರೆ ಯಾವ ಆಟಗಾರರ ಬ್ಯಾಟ್ ಸಿಡಿಯುತ್ತಿಲ್ಲ. ಇಡೀ ತಂಡದ ಒತ್ತಡ ವಿರಾಟ್ ಮೇಲೆ ಬಿದ್ದ ಕಾರಣ ಅವರ ಆಕ್ರಮಣಶೀಲತೆ ಕಡಿಮೆ ಆಗುತ್ತಾ ಇದೆ. ನಾಯಕ ಫ್ಲಾಪ್ ಡುಪ್ಲೇಸಿಸ್ ಅಲ್ಲೊಂದು, ಇಲ್ಲೊಂದು ಇನ್ನಿಂಗ್ಸ್ ಬಿಟ್ಟರೆ ಸ್ಥಿರ ಪ್ರದರ್ಶನ ಇಲ್ಲ. ರಜತ್ ಪಾಟಿದಾರ್ ಮತ್ತು ಭಾರೀ ಹೋರಾಟದ ಹಿನ್ನೆಲೆ ಇರುವ ಮ್ಯಾಕ್ಸ್ವೆಲ್ ಸತತವಾಗಿ ಸೋಲುತ್ತಿರುವುದು RCB ತಂಡದ ಸೋಲಿಗೆ ಮುನ್ನುಡಿ ಬರೆದಿದೆ ಎಂದು ಖಚಿತವಾಗಿ ಹೇಳಬಹುದು. ವಿಶೇಷವಾಗಿ ಮ್ಯಾಕ್ಸ್ವೆಲ್ ಅಂತಹ ಆಟಗಾರ ಒಂದು ಪಂದ್ಯದಲ್ಲಿಯೂ ಆಡುತ್ತಿಲ್ಲ ಅನ್ನುವುದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಸ್ಲಾಗ್ ಓವರಗಳಲ್ಲಿ ದಿನೇಶ್ ಕಾರ್ತಿಕ್ ಸಿಡಿದು ನಿಲ್ಲುತ್ತಿದ್ದಾರೆ. ಆದರೆ ಅವರ ಎಲ್ಲ ಹೋರಾಟಗಳು ವ್ಯರ್ಥ ಆಗುತ್ತಿವೆ. ರೀಸ್ ಟಾಪ್ಲಿ, ಕ್ಯಾಮರೂನ್ ಗ್ರೀನ್ ಮೊದಲಾದ ವಿದೇಶೀ ಆಟಗಾರರು ಅವರ ಕೀರ್ತಿಗೆ ಸರಿಯಾಗಿ ಆಡುತ್ತಿಲ್ಲ.

ಫಾಫ್‌ ನಾಯಕತ್ವ ಫ್ಲಾಫ್ ಆಗ್ತಾ ಇದೆ

RCB ಕಪ್ತಾನ ಫಾಫ್‌ ನಾಯಕತ್ವ, ಅವರ ತಂತ್ರಗಾರಿಕೆ, ಫೀಲ್ಡಿಂಗ್ ಬದಲಾವಣೆಗಳು ಗೆಲುವು ತಂದುಕೊಡುತ್ತಿಲ್ಲ. ವೇಗದ ಮತ್ತು ಸ್ಪಿನ್ ಬೌಲರಗಳು ಎಲ್ಲರೂ ಸಾಲು ಸಾಲಾಗಿ ಹೊಡೆಸಿಕೊಳ್ಳುವಾಗ ಯಾವ ಕ್ಯಾಪ್ಟನ್ ಆದರೂ ಏನು ಮಾಡಲು ಸಾಧ್ಯ ಹೇಳಿ? ಮುಂಬೈ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲರಗಳು ದಯನೀಯವಾಗಿ ವಿಫಲವಾದ ದೃಶ್ಯ ನಮ್ಮ ಕಣ್ಣ ಮುಂದಿವೆ. ಹಿಂದೆ RCB ಮಾಡಿದ್ದ ಬ್ಯಾಟಿಂಗ್ ದಾಖಲೆಯನ್ನು ಅದೇ ತಂಡದ ವಿರುದ್ಧ ಹೈದರಾಬಾದ್ ಮುರಿದು 287 ರನ್ನುಗಳ ಪರ್ವತವನ್ನು ಏರಿದಾಗ RCB ಅಭಿಮಾನಿಗಳ ಎದೆ ಒಡೆದೇ ಹೋಗಿದೆ.

ಪಂಜಾಬ್ ಬಿಟ್ಟು ಬೇರೆಲ್ಲ ಟೀಮ್ ವಿರುದ್ಧ RCB ಸೋಲನ್ನೇ ಕಂಡ ಕಳಪೆ ದಾಖಲೆ ಈ ಬಾರಿಯದ್ದು. ಇನ್ನು ಬಾಕಿ ಉಳಿದ ಎಲ್ಲ ಪಂದ್ಯಗಳನ್ನು ಗೆದ್ದು ಅವರು ಎದ್ದುಬರಲಿ ಎನ್ನುವುದು ಭಾರೀ ದೊಡ್ಡ ಆಶಾವಾದ ಆಗಬಹುದು.

ಅದೃಷ್ಟವೂ ಅವರ ಜೊತೆಗೆ ಇಲ್ಲ

ತಂಡದ ಆಟಗಾರರ ಆಯ್ಕೆಯಲ್ಲಿ ಟೀಮ್ ಮ್ಯಾನೇಜಮೆಂಟ್ ಎಡವಿದೆ ಎನ್ನುವುದು ಸ್ಪಷ್ಟ. ತಂಡದಿಂದ ಬೇರ್ಪಟ್ಟು ಬೇರೆ ತಂಡಕ್ಕೆ ಹೋದ ಆಟಗಾರರು ಅಲ್ಲಿ ಶೈನ್ ಆಗ್ತಾ ಇದ್ದಾರೆ. T20 ಪಂದ್ಯಗಳಲ್ಲಿ ಇರಲೆಬೇಕಾದ ಆಕ್ರಮಣಶೀಲತೆ ಮತ್ತು ವೃತ್ತಿಪರತೆ ಎರಡೂ ಅಲ್ಲಿ ಮಿಸ್ ಆಗಿದೆ.

RCB ಕಪ್ ಗೆಲ್ಲಲಿ ಎಂದು 17 ವರ್ಷಗಳಿಂದ ಕಾದು ಕೂತಿರುವ ಅವರ ಅಭಿಮಾನಿಗಳು ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕೋ ದೇವರೇ ಬಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Continue Reading

ಅಂಕಣ

ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

ರಾಜಮಾರ್ಗ ಅಂಕಣ: ಕನ್ನಡದ ವರಕವಿ ಬೇಂದ್ರೆಯವರ ‘ನಾಕು ತಂತಿ’ಗೆ ಜ್ಞಾನಪೀಠ ಪ್ರಶಸ್ತಿ ದೊರಕಿ (1974) ಈ ವರ್ಷಕ್ಕೆ 50 ವರ್ಷ ತುಂಬುತ್ತಿದೆ. ಆ ನೆಪದಲ್ಲಿ ಆದರೂ ಅವರನ್ನು ದೊಡ್ಡದಾಗಿ ಸ್ಮರಿಸುವ ಕೆಲಸವನ್ನು ಸಾಹಿತ್ಯಿಕ ಸಂಸ್ಥೆಗಳು ಮಾಡಬೇಕು.

VISTARANEWS.COM


on

da ra bendre
Koo

ಸ್ವಾಭಿಮಾನಿ ಕವಿ ಸಾರ್ಥಕವಾಗಿ ಬದುಕಿದ ರೀತಿ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ತಮ್ಮ ಅಂಬಿಕಾತನಯ ದತ್ತ ಎಂಬ ಕಾವ್ಯನಾಮದಿಂದ ಬರೆದ ಅಷ್ಟೂ ಸಾಲುಗಳು ಅವರಿಗೆ ಭಾರೀ ದೊಡ್ಡ ಕೀರ್ತಿಯನ್ನು ತಂದಿತ್ತವು. ಮರಾಠಿ ಮತ್ತು ಕನ್ನಡದ ಭಾಷೆಯಲ್ಲಿ ಅವರು ಮಾಡಿದ ಕಾವ್ಯ ಪ್ರಯೋಗಗಳು ಅದ್ಭುತವೇ ಆಗಿವೆ. ಸಾಹಿತ್ಯದ ವೇದಿಕೆಗಳಲ್ಲಿ “ನಾನು ಯಾವ ವಿಷಯದಲ್ಲಿ ಮಾತಾಡಲಿ?” ಎಂದು ಕೇಳಿ ನಂತರ ಅವರು ಅದೇ ವಿಷಯದಲ್ಲಿ ಮಾತಾಡುತ್ತಿದ್ದರು.

ಕಾವ್ಯ ನಿರೂಪಣೆಯಲ್ಲಿ ಅವರಿಗೆ ಅವರೇ ಸಮ.

ಅವರು ಬರೆದ ಅಷ್ಟೂ ಭಾವಗೀತೆಗಳು ಶಕ್ತಿಶಾಲಿ ಬೆಳಕಿನ ಬೀಜಗಳು. ಅವುಗಳನ್ನು ಅವರೇ ಸಾಹಿತ್ಯದ ವೇದಿಕೆಗಳಲ್ಲಿ ಓದಿ ಹೇಳುವಾಗ ಅವರ ನಿರೂಪಣಾ ಕೌಶಲಕ್ಕೆ ಸಭೆ ಬೆರಗಾಗಿತ್ತಿತ್ತು. ಅವರ ಈ ಭಾವಗೀತೆಗಳ ಸಾಲುಗಳನ್ನು ಅವರ ಶೈಲಿಯಲ್ಲಿ ಕೇಳುತ್ತಾ ಹೋದಂತೆ ಜನರು ಮೈಮರೆಯುತ್ತಿದ್ದರು.

1) ಹಕ್ಕಿ ಹಾರುತಿದೆ ನೋಡಿದಿರಾ

2) ಇಳಿದು ಬಾ ತಾಯಿ ಇಳಿದು ಬಾ

3) ಭೃಂಗದ ಬೆನ್ನೇರಿ ಬಂತು

4) ಯುಗಾಯುಗಾದಿ ಕಳೆದರೂ

5) ನೀ ಹೀಂಗ ನೋಡಬ್ಯಾಡ ನನ್ನ

6) ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ.

7) ಬಂಗಾರದಲೆಯ ಮೇಲೆ.

8) ಮುಗಿಲ ಮಾರಿಗೆ ರಾಗರತಿಯಾ.

9) ಅಂತರಂಗದಾ ಮೃದಂಗ.

10) ಇನ್ನೂ ಯಾಕ ಬರಲಿಲ್ಲಾಂವ ಹುಬ್ಬಳ್ಳಿಯಾಂವ.

11) ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ.

ಮೊದಲಾದ ಹಾಡುಗಳನ್ನು ಅವರೇ ವೇದಿಕೆಯಲ್ಲಿ ಹಾಡುವಾಗ ಅವರ ಇಡೀ ದೇಹವು ಸ್ಪಂದಿಸುತ್ತಿದ್ದ ರೀತಿ, ಅವರ ಸ್ವರ ವೈವಿಧ್ಯ, ಅವರ ನಾದ ಸಾಮರ್ಥ್ಯ, ಅವರ ಮುಖದ ಭಾವನೆಗಳು, ಅವರ ಕೂದಲು ಗಾಳಿಗೆ ಹಾರುವ ರೀತಿ….ಇವುಗಳು ಅನುಪಮ ಆಗಿದ್ದವು. ಆ ಶಕ್ತಿ ಪಡೆದ ಕನ್ನಡದ ಅಪರೂಪದ ವರ ಕವಿ ಎಂದರೆ ಬೇಂದ್ರೆ ಮತ್ತು ಬೇಂದ್ರೆ ಮಾತ್ರ.

ತೀವ್ರ ಬಡತನದಲ್ಲಿಯೂ ಸ್ವಾಭಿಮಾನದ ಪರಾಕಾಷ್ಠೆ

ವರಕವಿಗೆ ದೈವದತ್ತವಾಗಿ ಬಂದದ್ದು ಬಡತನ ಮತ್ತು ದಾರಿದ್ರ್ಯ ಮಾತ್ರ. ಮೇಷ್ಟ್ರು ಆಗಿ ನಿವೃತ್ತಿ ಆದ ಅವರಿಗೆ ಬಹುಕಾಲ ನಿವೃತ್ತಿ ವೇತನ ಬರುತ್ತಿರಲಿಲ್ಲ. ಮಕ್ಕಳಿಗೂ ಉದ್ಯೋಗ ದೊರೆತಿರಲಿಲ್ಲ. ಆಗಾಗ ಅನಾರೋಗ್ಯ ಬೇರೆ ಕಾಡುತ್ತಿತ್ತು. ಆಗ ಅವರು ವೇದಿಕೆಯಲ್ಲಿ ‘ನಾನು ಬಡವಿ ಆತ ಬಡವ, ಒಲವೇ ನಮ್ಮ ಬದುಕು’ ಎಂದು ಹಾಡಿ ಜನರನ್ನು ನಗಿಸುತ್ತಿದ್ದರು. ಅವರ ನಗುವಿನ ಹಿಂದೆ ಇರುವ ನೋವು ಯಾರಿಗೂ ಅರ್ಥ ಆಗುತ್ತಿರಲಿಲ್ಲ. ಬೇಂದ್ರೆಯವರಿಗೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದು ಇಷ್ಟ ಆಗುತ್ತಿರಲಿಲ್ಲ. ಅವರು ತನ್ನ ಬಡತನದ ಬಗ್ಗೆ ಯಾರಲ್ಲಿಯೂ ಹೇಳಿಕೊಂಡವರು ಅಲ್ಲ. ಕೋಟು ಹಾಕದೆ ಮನೆಯಿಂದ ಹೊರಟಿದ್ದು ಕೂಡ ಇಲ್ಲ!

bendre and kuvempu

ಸರಕಾರ ನೀಡಿದ ಮಾಸಾಶನ ನಿರಾಕರಿಸಿದ್ದರು ಬೇಂದ್ರೆ.

ರಾಜ್ಯ ಸರಕಾರ ಅವರಿಗೆ 1966ರಲ್ಲಿ 250 ರೂಪಾಯಿಗಳ ಮಾಸಾಶನ ಘೋಷಣೆ ಮಾಡಿತ್ತು. ಬೇಂದ್ರೆ “ನಾನು ಅರ್ಜಿ ಹಾಕಿಲ್ಲ. ನನಗೇಕೆ ಮಾಸಾಶನ? ನೀವು ನನ್ನ ಬಾಯಿ ಮುಚ್ಚಿಸಲು ಮಾಸಾಶನ ಕೊಡುತ್ತಾ ಇದ್ದೀರಿ. ನನಗದು ಬೇಡವೇ ಬೇಡ” ಎಂದು ಸರಕಾರಕ್ಕೆ ಪತ್ರ ಬರೆದರು. ಅವರ ಆರ್ಥಿಕ ಪರಿಸ್ಥಿತಿಯು ತುಂಬಾ ಬಿಗಡಾಯಿಸುತ್ತಿತ್ತು. ಇದನ್ನು ತಿಳಿದ ಕವಿ ಡಾಕ್ಟರ್ ವಿ ಕೃ ಗೋಕಾಕ್ ಅವರು ಬೇಂದ್ರೆಯವರ ನಿವಾಸಕ್ಕೆ ಬಂದು ಅವರ ಮನಸನ್ನು ಒಲಿಸಿದ ನಂತರ ಒಪ್ಪಿಗೆ ಪತ್ರ ಬರೆದು ಗೋಕಾಕರ ಕೈಯ್ಯಲ್ಲಿ ಇಟ್ಟರು. ಗೋಕಾಕರು “ಬೇಂದ್ರೆಯವರೇ. ನಿಮಗೆ ದುಡ್ಡಿನ ತುರ್ತು ಇದೆ. ಮತ್ತೆ ಯಾಕೆ ಮಾಸಾಶನವನ್ನು ಬೇಡಾ ಅಂತೀರಿ?” ಎಂದಾಗ ಬೇಂದ್ರೆಯವರು ಕಣ್ಣೀರು ಸುರಿಸಿ ಗೋಕಾಕರನ್ನು ಅಪ್ಪಿ ಹಿಡಿದು ಬೀಳ್ಕೊಟ್ಟರು.

ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವ ಸಂಗತಿಯನ್ನೂ ಬೇಂದ್ರೆಯವರು ಆಚರಣೆ ಮಾಡಿದ ಉದಾಹರಣೆ ಸಿಗುವುದಿಲ್ಲ.

ಮಗನ ಕೈಯ್ಯಲ್ಲಿ ಪತ್ರ ಬರೆಸಿಕೊಂಡರು ಮಹಾ ಕವಿ

1981 ಅಕ್ಟೋಬರ್ ತಿಂಗಳಲ್ಲಿ ಆರೋಗ್ಯ ತುಂಬಾನೇ ಕೆಟ್ಟು ಬೇಂದ್ರೆಯವರು ಮುಂಬಯಿಯ ಹರಿಕಿಶನ್ ದಾಸ್ ಆಸ್ಪತ್ರೆಗೆ ಸೇರಿದ್ದರು. ಆಗಲೂ ಮಗ ವಾಮನ ಬೇಂದ್ರೆಯನ್ನು ಕರೆದು “ನಾನು ಇಲ್ಲಿರುವುದನ್ನು ಯಾರಿಗೂ ಹೇಳಬೇಡ. ನನ್ನನ್ನು ತುಂಬ ಜನ ನೋಡಲು ಬರುವುದು, ನನ್ನ ಸಹಾಯಕ್ಕೆ ಬರುವುದು ನನಗೆ ಬೇಕಿಲ್ಲ” ಎಂದಿದ್ದರು. ಅವರು ಮಗನನ್ನು ಹತ್ತಿರ ಕೂರಿಸಿಕೊಂಡು “ವಾಮನ, ನಾನಿನ್ನು ತೆರಳುವ ಕಾಲ ಬಂದಿದೆ. ನೀನು, ಮನೆಯವರು ಯಾರೂ ಅಳುವುದು ಬೇಡ. ನಾನು ಹೇಳಿದಂತೆ ಖಾಲಿ ಕಾಗದದಲ್ಲಿ ಬರೆದು ಸಹಿ ಹಾಕಿಕೊಡು” ಎಂದರು. ಮಗ ಒಪ್ಪಿ ಬರೆದು ಸಹಿ ಹಾಕಿ ಕೊಟ್ಟ ನಂತರವೇ ಅವರ ಪ್ರಾಣಪಕ್ಷಿ ಹೊರಟು ಹೋಯಿತು.

ಆ ಪತ್ರದಲ್ಲಿ ಏನಿತ್ತು?

ನಾನು ಸತ್ತ ನಂತರ ನನ್ನ ಹೆಸರಲ್ಲಿ ಯಾರಿಗೂ ಹಣ ಸಂಗ್ರಹ ಮಾಡಲು ಬಿಡಬೇಡ. ನೀನು ಯಾರಿಂದಲೂ ಧನಸಹಾಯ ಪಡೆಯಬೇಡ. ನನ್ನ ಮಾಸಾಶನ ಮತ್ತು ನಿನ್ನ ದುಡ್ಡಿನಿಂದ ನಮ್ಮ ಮನೆಯಲ್ಲಿ ನಿತ್ಯ ಸಾಹಿತ್ಯದ ಕಾರ್ಯ ನಡೆಯುವಂತೆ ನೋಡಿಕೊ!

ಇದು ಅವರ ಕೊನೆಯ ಮಾತು ಆಗಿತ್ತು. ಅಂತಹ ಸ್ವಾಭಿಮಾನಿ ಕವಿ 85 ವರ್ಷ ತೀವ್ರವಾದ ಬಡತನದಲ್ಲಿ ಬದುಕಿ ಕನ್ನಡವನ್ನು ಶ್ರೀಮಂತಗೊಳಿಸಿದರು ಅನ್ನುವಾಗ ಯಾವ ಕನ್ನಡಿಗನ ಎದೆ ಉಬ್ಬುವುದಿಲ್ಲ ಹೇಳಿ?

‘ನಾಕು ತಂತಿ’ಗೆ ಜ್ಞಾನಪೀಠ ಪ್ರಶಸ್ತಿ ದೊರಕಿ (1974) ಈ ವರ್ಷಕ್ಕೆ 50 ವರ್ಷ ತುಂಬುತ್ತಿದೆ. ಆ ನೆಪದಲ್ಲಿ ಆದರೂ ಅವರನ್ನು ದೊಡ್ಡದಾಗಿ ಸ್ಮರಿಸುವ ಕೆಲಸವನ್ನು ಸಾಹಿತ್ಯಿಕ ಸಂಸ್ಥೆಗಳು ಮಾಡಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪ್ರತಿಭೆಗಳು ಹಾವುಗಳ ಹಾಗೆ, ಯಾವುದೋ ಹುತ್ತದಲ್ಲಿ ಅಡಗಿರುತ್ತವೆ!

Continue Reading

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಹೊಸ ಪುಸ್ತಕ: ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲ. ಈ ಕೃತಿಯ ಪರಿಚಯ ಹಾಗೂ ಆಯ್ದ ಭಾಗ ಇಲ್ಲಿದೆ.

VISTARANEWS.COM


on

sunday read new book ramanenu devane
Koo

:: ಡಾ. ಕೆ.ಎಸ್‌. ಕಣ್ಣನ್‌

ಹೊಸ ಪುಸ್ತಕ: “ರಾಮನು (Sri Rama) ಮನುಷ್ಯನೋ ದೇವನೋ?” – ಎಂಬ ಪ್ರಶ್ನೆಗೆ ಉತ್ತರ ಕೊಡುವ ಕೃತಿ: “ರಾಮನೇನು ದೇವನೇ?” ತಾನು ಮನುಷ್ಯನೆಂದು ರಾಮನೇ ಹೇಳಿಕೊಂಡಿರುವುದುಂಟು; ರಾಮಾಯಣದ ಆರಂಭದಲ್ಲೂ, ನಾರದರನ್ನು ವಾಲ್ಮೀಕಿಗಳು ಕೇಳುವುದೂ ನಾನಾ ಗುಣಸಂಪನ್ನನಾದ ನರನ ಬಗ್ಗೆಯೇ; ಆಗ ನಾರದರು ಹೇಳುವುದೂ ಅಂತಹೊಬ್ಬ ಮನುಷ್ಯನ ಬಗ್ಗೆಯೇ.

ಆದರೂ, ನಮ್ಮ ಪರಂಪರೆಯಂತೂ ಸಾವಿರಾರು ವರ್ಷಗಳಿಂದ ರಾಮನನ್ನು ದೇವರೆಂದೇ ಪೂಜಿಸಿಕೊಂಡು ಬಂದಿದೆ. ಆತನ ಸುಗುಣ-ಸುರೂಪಗಳನ್ನೂ ಜೀವಿತ-ಸಂದೇಶಗಳನ್ನೂ ಸ್ಮರಿಸಿ ರೂಪಿಸಿ ಹಾಡಿ ಕೊಂಡಾಡಿ ವಿರಚಿತವಾದ ಕಾವ್ಯ-ನಾಟಕಗಳೆಷ್ಟು, ಚಿತ್ರ-ಶಿಲ್ಪಗಳೆಷ್ಟು, ಮಂದಿರ-ದೇವಾಲಯಗಳೆಷ್ಟು – ಲೆಕ್ಕವಿಡುವವರಾರು! “ಇಂತಹ ಭಾಷೆಯಲ್ಲಿ ಶ್ರೀರಾಮಚಂದ್ರನನ್ನು ಕುರಿತಾದ ಸ್ತುತಿಯಿಲ್ಲ”- ಎನ್ನಲಾಗುವ ಒಂದೇ ಒಂದು ಭಾರತೀಯಭಾಷೆಯಾದರೂ ಉಂಟೆ? ಹೀಗಿದ್ದರೂ, ಕೆಲ ಸಂಪ್ರದಾಯಸ್ಥರಿಗೂ ಒಮ್ಮೊಮ್ಮೆ ಸಂಶಯಗಳು ಮೂಡಿರುವುದುಂಟು. ಪಾಶ್ಚಾತ್ಯವಿಮರ್ಶಕರಂತೂ, “ರಾಮನನ್ನು ದೇವನೆಂದಿರುವ ಭಾಗಗಳೆಲ್ಲಾ ಪ್ರಕ್ಷಿಪ್ತವೇ ಆಗಿರಬೇಕು (ಎಂದರೆ, ಆಮೇಲೇ ಸೇರಿಸಿರುವಂತಹವಾಗಿರಬೇಕು)” – ಎಂಬುದಾಗಿಯೇ ತಮ್ಮ ತರ್ಕವನ್ನು ಆರಂಭಿಸುತ್ತಾರೆ. ಅಸೂಯಾಪ್ರೇರಿತವಾದ ದುರ್ಮದದಿಂದ, ಇತರಸಂಸ್ಕೃತಿಗಳನ್ನು ಹೀನಾಯಮಾಡುವ ಅವರ ಸಹಜಪ್ರವೃತ್ತಿಗಂತೂ ಸಾಕಷ್ಟೇ ನಿದರ್ಶನಗಳಿವೆ..

ಹಾಗಾದರೆ ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲವೆನ್ನಬಹುದು! ಈ ಕೃತಿಯನ್ನು ರಚಿಸಿದ ಪ್ರೊ. ಕೆ. ಎಸ್. ಕಣ್ಣನ್ ಅವರು ರಾಮಾಯಣದ ಎಲ್ಲ ಮುಖ್ಯಪ್ರಸಂಗಗಳನ್ನೂ ಕ್ರಮಬದ್ಧವಾಗಿ ಪರಿಶೀಲಿಸಿ ಇಲ್ಲಿ ವಿವರಿಸಿದ್ದಾರೆ. ವಾಲ್ಮೀಕಿರಾಮಾಯಣದ ಮೂಲವಾಕ್ಯಗಳನ್ನು ಅವಶ್ಯವಿರುವೆಡೆಯಲ್ಲೆಲ್ಲಾ ಇದಕ್ಕಾಗಿ ಉದ್ಧರಿಸಿದ್ದಾರೆ; ಸಾಮಾನ್ಯರಿಗೂ ಅರ್ಥವು ಸ್ಫುಟವಾಗಲೆಂದು ಅವುಗಳೆಲ್ಲದರ ಅನುವಾದ-ವಿವರಣೆಗಳನ್ನೂ ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ. ರಾಮಾಯಣದಿಂದ ಮಾತ್ರವಲ್ಲದೆ, ಇತರ ಹಲವು ಪ್ರಸಿದ್ಧಗ್ರಂಥಗಳಿಂದಲೂ ಸೇರಿದಂತೆ, ಸುಮಾರು 400ಕ್ಕೂ ಮೀರಿದ ಉದ್ಧೃತಿಗಳು ಈ ಕೃತಿಯಲ್ಲಿವೆ! ಅಷ್ಟೇ ಅಲ್ಲ, ಉಲ್ಲೇಖಗೊಂಡ ಸಮಸ್ತವಾಕ್ಯಗಳಿಗೂ ಆಕರ-ಅಧ್ಯಾಯ-ಶ್ಲೋಕಸಂಖ್ಯೆಗಳನ್ನು ಬಿಡದೇ ಸೂಚಿಸಲಾಗಿದೆ.

ಈ ಕೃತಿಯ ಲೇಖಕರಾದ ಪ್ರೊ. ಕೆ. ಎಸ್. ಕಣ್ಣನ್ ಅವರು ಮದ್ರಾಸಿನಲ್ಲಿಯ ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈಚೆಗಷ್ಟೆ ನಿವೃತ್ತರಾಗಿರುವವರು. ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಇವರು ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಈ ಕೃತಿಯ ಆಯ್ದ ಭಾಗ ಇಲ್ಲಿದೆ:

“ರಾಮಾಯಣಾಖ್ಯಂ ಮಧು”

ಸೀತೆಯ ಚರಿತ – ರಾಮನ ಅಯನ

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ, ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ಅಯನವೆಂದರೆ ಮಾರ್ಗ, ರಾಮನ ಅಯನವೇ ರಾಮಾಯಣ. ಸಂಧಿನಿಯಮದಿಂದಾಗಿ ʼಅಯನ’ದಲ್ಲಿಯ ʼನ’ಕಾರವು ʼಣ’ಕಾರವಾಗಿದೆ. ಅಯನವೆಂದರೆ ಮಾರ್ಗ, ಹೋಗುವಿಕೆ (ʼಅಯ ಗತʼ ಎಂದು ಧಾತು). ಅಷ್ಟನ್ನು ಮಾತ್ರ ಹೇಳುವುದು ರಾಮಾಯನ ಎನಿಸಿಕೊಳ್ಳುತ್ತದೆ. ಈ ರಾಮಾಯನವನ್ನು ಕುರಿತಾದ ಕಾವ್ಯ ಎನ್ನುವಲ್ಲಿ, ಆ ಕಾವ್ಯದ ಹೆಸರಾಗಿ ಬಂದಾಗ ನಕಾರವು ಣಕಾರವಾಗುತ್ತದೆ.

ರಾಮಾಯನವನ್ನು ಹೇಳುವ ಕಾವ್ಯದ ಹೆಸರು ರಾಮಾಯಣ. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿಯಿದು. ರಾಮನು ಹೋದ ದಾರಿಯು ನಮಗೆ ಆದರ್ಶ. ರಾವಣನು ಹಾಕಿದ ಹೆಜ್ಜೆ ಆದರ್ಶವಲ್ಲ. ಈ ಭಾವವನ್ನು ತಿಳಿಸುವ ಗಾದೆ ಮಾತೊಂದು ಸಂಸ್ಕೃತದಲ್ಲಿದೆ: “ರಾಮನ ಹಾಗೆ ವರ್ತಿಸಬೇಕು. ರಾವಣನ ಹಾಗಲ್ಲ”.

ಪ್ರಪಂಚದಲ್ಲಿ ರಾಮನೊಬ್ಬನೇ ಒಳ್ಳೆಯವ ಎಂದೇನೂ ಇಲ್ಲವಲ್ಲ? ರಾವಣನೊಬ್ಬನೇ ಕೆಟ್ಟವ ಎಂದು ಕೂಡ ಅಲ್ಲವಲ್ಲವೇ? ಎಂದೇ, ʼರಾಮ’ನಿಗೊಂದು ʼಆದಿ’, ʼರಾವಣ’ನಿಗೊಂದು ʼಆದಿ’ ಸೇರಿಸಿದರು. ʼಆದಿ’ ಎಂದರೆ ʼಮೊದಲಾದʼ. ಅಲ್ಲಿಗೆ ಗಾದೆಯ ಪೂರ್ಣರೂಪ “ರಾಮ ಮೊದಲಾದವರ ಹಾಗೆ ಇರತಕ್ಕದ್ದು, ರಾವಣ ಮೊದಲಾದವರಂತೆ ಇರತಕ್ಕದ್ದಲ್ಲ”. ಗಾದೆ ಹೀಗೆ: ʼರಾಮಾssದಿವದ್ ವರ್ತಿತವ್ಯಂ, ನ ರಾವಣಾssದಿವತ್ʼ.

ರಾವಣನು ಪುಲಸ್ತ್ಯ ವಂಶದವನು. ಎಂದೇ ರಾವಣನು ʼಪೌಲಸ್ತ್ಯʼನೆನಿಸುವನು. ರಜೋಗುಣಭರಿತನಾಗಿದ್ದು ಧರ್ಮವನ್ನೂ ಅಮರರನ್ನೂ ಲೆಕ್ಕಿಸೆನೆನ್ನುವ ಆ ಅಹಂಕಾರಿಯ ಮಾರಣವೇ ಈ ಕಾವ್ಯ ಎಂದೇ ವಾಲ್ಮೀಕಿಗಳು ರಾಮಾಯಣವನ್ನು “ಪೌಲಸ್ತ್ಯವಧ” ಎಂದೂ ಕರೆದಿದ್ದಾರೆ. ರಾಮನು ಒಳ್ಳೆಯವನಿರಬಹುದು, ಸೀತೆಯು ಒಳ್ಳೆಯವಳಲ್ಲವೆ? ವಾಲ್ಮೀಕಿ ಮಹರ್ಷಿಯು ಗಂಡಸಾದ್ದರಿಂದ ಗಂಡಸಾದ ರಾಮನನ್ನೇ ಹೊಗಳಿದ್ದಾನೋ ಏನೋ? ಎಂದು ಸಂಶಯಪಡಬೇಕಿಲ್ಲ. ವಾಲ್ಮೀಕಿಗಳೇ ಹೇಳುವಂತೆ “ಸೀತಾಯಾಃ ಚರಿತಂ ಮಹತ್”: ಸೀತೆಯ ನಡೆಯೂ ರಾಮನದಷ್ಟೇ ಹಿರಿದಾದುದೇ.

ರಾಮನ ಹೆಸರೇ ಮಧುರವಾದದ್ದು.
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋsಭ್ಯಭಾಷತ | (1.21.9)
ಋಷಯೋ ರಾಮ ರಾಮೇತಿ ಮಧುರಾಂ ವಾಚಮ್ ಅಬ್ರುವನ್ (1.73.21)

ಸೀತೆಯ ಹೆಸರೂ ಮಧುರವೇ.
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುಧ್ಯತೇ । (5.34.42)

ರಾಮನು ಇಳಿದು ಬಂದವನೇ? ಮೇಲಕ್ಕೆ ಏರಿದವನೇ? ಸಂಶಯವೂ ಬರುವುದುಂಟು. ರಾಮನನ್ನು ನಾವು ಆದರಿಸುತ್ತೇವೆ, ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನನ್ನು ದೇವರೆಂದೇ ಭಾವಿಸುತ್ತೇವೆ. ಆದರೆ, ಒಮ್ಮೊಮ್ಮೆ ಕೆಲವರಿಗೆ ಸ್ವಲ್ಪ ಸಂಶಯವೂ ಬರುವುದುಂಟು. ರಾಮನು ವಾಸ್ತವವಾಗಿ ದೇವನೇ? ಎಂದು. ಏಕೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೇ? ಮರೆಯಲ್ಲಿ ನಿಂತಲ್ಲವೇ ರಾಮನು ವಾಲಿಯನ್ನು ಕೊಂದದ್ದು? ಅದೇನು ದೊಡ್ಡ ಗುಣವೇ? ತನಗೆ ಯಾವ ದ್ರೋಹವನ್ನೂ ಮಾಡದಿದ್ದ ಸೀತೆಯನ್ನು, “ಅಘೋರಚಕ್ಷುಷ್ಕಳೂ ಅಪತಿಘ್ನಿಯೂ’ ಆದ ಕೈಹಿಡಿದ ಮಡದಿಯನ್ನು – ರಾಮನು ಪರಿತ್ಯಾಗ ಮಾಡಲಿಲ್ಲವೇ? ಅದರಲ್ಲಿ ದೋಷವಿಲ್ಲವೇ? ಎಂದು ʼಕೇಳುವವರುಂಟು’ ಎನ್ನುವುದಕ್ಕಿಂತ, ನಮಗೇ ಕೆಲವೊಮ್ಮೆ ಹಾಗೆನ್ನಿಸಲೂಬಹುದು.

ಕೃತಿ: ರಾಮನೇನು ದೇವನೇ?
ಪ್ರಕಾಶಕರು: ಶ್ರೀ ಭಾರತೀ ಪ್ರಕಾಶನ, ಬೆಂಗಳೂರು
ಪುಟ: 200, ಬೆಲೆ: ರೂ. 200.
ಪ್ರತಿಗಳಿಗೆ: 95915 42454

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
IPL 2024
ಪ್ರಮುಖ ಸುದ್ದಿ8 mins ago

IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

Money Guide
ಮನಿ-ಗೈಡ್9 mins ago

Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Lok Sabha Election 2024 Sanganna Karadi resigns from primary membership of BJP
Lok Sabha Election 202415 mins ago

Lok Sabha Election 2024: ಸಂಸತ್‌ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಗಣ್ಣ ಕರಡಿ ರಾಜೀನಾಮೆ; ನಾಳೆ ಕಾಂಗ್ರೆಸ್‌ ಸೇರ್ಪಡೆ?

BJP and JDS leaders Meeting in shira, Support Govinda Karajola for all round development of Chitradurga says Umesh Karajola
ತುಮಕೂರು15 mins ago

Lok Sabha Election 2024: ಚಿತ್ರದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರಜೋಳಗೆ ಬೆಂಬಲಿಸಲು ಮನವಿ

S S Patil as the new president of Afazalpur Taluk Bar Association
ಕಲಬುರಗಿ18 mins ago

Kalaburagi News: ಅಫಜಲಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಎಸ್.ಪಾಟೀಲ್‌

union Minister Pralhad joshi statement in hubli
ಹುಬ್ಬಳ್ಳಿ20 mins ago

Lok Sabha Election 2024: ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಹಿರಿಯಣ್ಣ ಆಗಲಿದೆ: ಪ್ರಲ್ಹಾದ್‌ ಜೋಶಿ

Hardik Pandya
ಕ್ರೀಡೆ39 mins ago

Hardik Pandya : ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ; ಏನಿದು ಕೇಸ್​?

DK Shivakumar attack on HD Kumaraswamy
ಕರ್ನಾಟಕ52 mins ago

DK Shivakumar: ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನೂ ಕೊಡುತ್ತೇನೆ: ಡಿ.ಕೆ. ಶಿವಕುಮಾರ್

2nd PUC Exam
ಕರ್ನಾಟಕ1 hour ago

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಏ.18ರವರೆಗೆ ಅವಕಾಶ

Lok Sabha Election
ದೇಶ1 hour ago

Lok Sabah Election : ಹೇಮಮಾಲಿನಿಗೆ ಅವಹೇಳನ; ಕಾಂಗ್ರೆಸ್​ ನಾಯಕ ಸುರ್ಜೇವಾಲಾಗೆ 48 ಗಂಟೆ ನಿಷೇಧ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ15 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌