Site icon Vistara News

Karnataka Weather : ಬೆಂಗಳೂರಲ್ಲಿ ಹೀಗೆ ಬಂದು ಹಾಗೆ ಹೋದ; ಕೊಡಗಿನಲ್ಲಿ ಚುರುಕಾದ ಪುನರ್ವಸು ಮಳೆ

karnataka weather Forecast

ಬೆಂಗಳೂರು/ಕೊಡಗು: ರಾಜ್ಯಾದ್ಯಂತ ಮುಂಗಾರು (Karnataka Weather Forecast) ದುರ್ಬಲಗೊಂಡಿದೆ. ಕರ್ನಾಟಕ ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣವಾಗಿದ್ದರೆ, ಒಳನಾಡಿನಲ್ಲಿ ದುರ್ಬಲವಾಗಿತ್ತು. ಶುಕ್ರವಾರ ಸಂಜೆ ವೇಳೆಗೆ ಬೆಂಗಳೂರಲ್ಲಿ ಮಳೆಯು (Rain News) ಹೀಗೆ ಬಂದು ಹಾಗೆ ಹೋಯಿತು.

ಮುಂಜಾನೆಯಿಂದಲೂ ತಲೆಬಿಸಿ ಮಾಡಿದ ಬಿಸಿಲು ಮಧ್ಯಾಹ್ನವಾಗುತ್ತಿದ್ದಂತೆ ಸೂರ್ಯ ಮರೆಯಾಗಿದ್ದ. ಇತ್ತ ಸಂಜೆ ಆಗುತ್ತಿದ್ದಂತೆ ದಿಢೀರ್‌ ಸುರಿದ ಮಳೆಯು 10 ನಿಮಿಷಕ್ಕೆ ಮಾಯವಾಗಿತ್ತು. ಮೆಜೆಸ್ಟಿಕ್‌, ಕಬ್ಬನ್‌ ಪಾರ್ಕ್‌, ಶಿವಾಜಿನಗರ, ವಿಧಾನಸೌಧ, ಬಾಳೇಕುಂದ್ರಿ ಸರ್ಕಲ್‌ ಸುತ್ತಮುತ್ತ ಮಳೆ ಸುರಿದಿದೆ. ಏಕಾಏಕಿ ಮಳೆ ಬಂದ ಕಾರಣಕ್ಕೆ ವಾಹನ ಸವಾರರು ಅರ್ಧಂಬರ್ಧ ಒದ್ದೆಯಾದರು.

ಕೊಡಗಿನಲ್ಲಿ ಚುರುಕು ಪಡೆದುಕೊಂಡ ಪುನರ್ವಸು ಮಳೆ

ಮಲೆನಾಡಿನ ಕೊಡಗು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ವರ್ಷಧಾರೆ ಶುಕ್ರವಾರ ಸಕ್ರಿಯಗೊಂಡಿತ್ತು. ಕೊಡಗಿನಲ್ಲಿ ಪುನರ್ವಸು ಮಳೆ ಚುರುಕು ಪಡೆದುಕೊಂಡಿತ್ತು. ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದ. ಮಡಿಕೇರಿ‌‌ ಸೇರಿದಂತೆ ಹಲವೆಡೆ ಉತ್ತಮ‌ ಮಳೆಯಾಗಿತ್ತು.

ಇದನ್ನೂ ಓದಿ: Murder Case : ಖಾಸಗಿ ಕ್ಷಣಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರೇಯಸಿಯ ಮಗುವನ್ನೇ ಕೊಂದ ಪಾಪಿ

ವಾರಾಂತ್ಯದಲ್ಲಿ ಇಲ್ಲೆಲ್ಲ ಮಳೆ ಸಾಧ್ಯತೆ

ವಾರಾಂತ್ಯದಲ್ಲಿ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಸೇರಿದಂತೆ ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಹಲವೆಡೆ ಗಾಳಿ (30-40 ಕಿ.ಮೀ) ಜತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ವಿಜಯನಗರದಲ್ಲಿ ನಿರಂತರ ಗಾಳಿ (40-50 ಕಿ.ಮೀ) ಜತೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆದರೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ.

ಕುಂದಾಪುರದಲ್ಲಿ ಅತಿ ಹೆಚ್ಚು ಮಳೆ ದಾಖಲು

ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಮತ್ತು ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ಅತಿ ಹೆಚ್ಚು ಮಳೆ ಪ್ರಮಾಣ ಉಡುಪಿಯ ಕುಂದಾಪುರದಲ್ಲಿ 8 ಸೆಂ.ಮೀ ದಾಖಲಾಗಿದೆ. ಕೋಟ, ಸಿದ್ದಾಪುರದಲ್ಲಿ ತಲಾ 5 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ 4, ಮಂಕಿ, ಹೊನ್ನಾವರ, ಆಗುಂಬೆ , ಕಮ್ಮರಡಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.

ಗೇರ್ಸೊಪ್ಪ, ಕಾರವಾರ, ಪಣಂಬೂರು, ನಿಪ್ಪಾಣಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಶಿರಾಲಿ ಪಿಟಿಒ, ಮಂಗಳೂರು, ಕೋಟೆ ರಾಕ್, ಕಾರ್ಕಳ, ಕದ್ರಾ, ಉಡುಪಿ, ಲೋಂಡಾ, ನಾರಾಯಣಪುರ, ಸಂಕೇಶ್ವರ, ಹುಕ್ಕೇರಿ ಹಾಗೂ ಸೇಡಬಾಳ, ಅರಕಲಗೂಡು, ಕೊಪ್ಪ, ಕೊಟ್ಟಿಗೆಹಾರ, ಶೃಂಗೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version