Site icon Vistara News

karnataka Weather : ಬೆಂಗಳೂರು ಸೇರಿ ಹಲವೆಡೆ ಸುಡುತ್ತಿದೆ ಉರಿ ಬಿಸಿಲು; ಮತ್ಯಾವಾಗ ಮಳೆ

Karnataka Weather

ಬೆಂಗಳೂರು: ಸೋಮವಾರ ರಾಜ್ಯಾದ್ಯಂತ ಒಣ ಹವೆ (Dry Weather) ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41.8 ಡಿ.ಸೆ (Karnataka Weather Forecast) ದಾಖಲಾಗಿತ್ತು. ಮಂಗಳವಾರ ಸಂಜೆ ಬಾಗಲಕೋಟೆ, ಬಳ್ಳಾರಿ, ಬೀದರ್‌ ಹಾಗೂ ಹಾವೇರಿಯ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ (Rain News) ಮಳೆಯಾಗಲಿದೆ.

ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಜತೆಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಕೊಪ್ಪಳದಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿತ್ತು. ಉರಿಉರಿ ಬಿಸಿಲಿನ ಬದಲು ಕೂಲ್ ಕೂಲ್ ವಾತಾವರಣಕ್ಕೆ ಜನರು ಫಿದಾ ಆಗಿದ್ದಾರೆ. ಬಿರುಗಾಳಿಯೊಂದಿಗೆ ಸಣ್ಣ ಪ್ರಮಾಣದ ಮಳೆಗಳ‌ ಹನಿ ಶುರುವಾಗಿದೆ. ಜೋರಾದ ಗಾಳಿಯೊಂದಿಗೆ ಆಗಾಗ ಗುಡುಗು, ಮಿಂಚು ಅಬ್ಬರಿಸುತ್ತಿದೆ.

ಇನ್ನೂ ಮುಂದಿನ 48 ಗಂಟೆಯಲ್ಲಿ ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಏಪ್ರಿಲ್‌ 11ರಂದು ಬೀದರ್‌, ಕಲಬುರಗಿ, ವಿಜಯಪುರ, ಕೊಡಗು, ಮೈಸೂರು, ಮಂಡ್ಯದಲ್ಲಿ ಮಳೆಯಾಗಹುದು. ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಆಕಾಶವು ನಿರ್ಮಲವಾಗಿರಲಿದೆ. ಗರಿಷ್ಠ ಉಷ್ಣಾಂಶ 36 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಇದನ್ನೂ ಓದಿ: Protection From Heatwave: ಮತ್ತಷ್ಟು ದಿನ ಬಿಸಿಲ ತಾಪ; ಅಲ್ಲಿಯವರೆಗೆ ತಂಪಾಗಿರಲು ಹೀಗೆ ಮಾಡಿ

ಕರಾವಳಿಯಲ್ಲಿ ಬಿಸಿ ಗಾಳಿ

ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಮತ್ತು ಕೋಲಾರದಲ್ಲಿ ಬಿಸಿ ಗಾಳಿ ಬೀಸಲಿದೆ. ಗರಿಷ್ಠ ತಾಪಮಾನವು ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ, ಮೈಸೂರಲ್ಲಿ 2-4 ಡಿ.ಸೆ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಖಘಾತ ಆಗಲಿದೆ.

ಇದನ್ನೂ ಓದಿ: Ugadi 2024: ಯುಗಾದಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್‌ ಜಡೆ ಸಿಂಗಾರ-ಬಂಗಾರ

ಬೇಸಿಗೆ ಧಗೆಗೆ ನಿಂಬೆಹಣ್ಣಿನ ಪಾನಕಗಳ ಥರಹೇವಾರಿ ಐಡಿಯಾಗಳು ಇಲ್ಲಿವೆ!

ಬೇಸಿಗೆ ಬಂತೆಂದರೆ ಸಾಕು, ಧಗೆ ತಣಿಸಲು, ಆಗಾಗ ಆಗುವ ಬಾಯಾರಿಕೆಗೆ, ಸುಸ್ತಿನಿಂದ ಮುಕ್ತಿಗೆ ಹಲವು ಬಗೆಯ ಜ್ಯೂಸುಗಳು, ಪಾನಕಗಳ ಮೊರೆ ಹೋಗುವುದು ಸಾಮಾನ್ಯ. ಬಹಳ ಸುಲಭವಾಗಿ ಮಾಡಬಹುದಾದ, ಹಾಗೂ ಎಲ್ಲ ಕಡೆಯೂ ಸುಲಭವಾಗಿ ಸಿಗುವ ಜ್ಯೂಸ್‌ಗಳ ಪೈಕಿ ನಿಂಬೆಹಣ್ಣಿನ ಜ್ಯೂಸ್‌ ಮುಂಚೂಣಿಯಲ್ಲಿ ನಿಲ್ಲುತ್ತದೆ. ಜೊತೆಗೆ ಫಟಾಫಟ್‌ ರಿಪ್ರೆಶಿಂಗ್‌ ಅನುಭವವನ್ನೂ ನೀಡುವ, ದಣಿವನ್ನಾರಿಸುವ ಜ್ಯೂಸ್‌ಗಳ ಪೈಕಿ ಇದಕ್ಕೆ ಪ್ರಮುಖ ಸ್ಥಾನ. ಆದರೆ, ನಿತ್ಯವೂ ಲೆಮನೇಡ್‌ ಕುಡಿಯಲು ಬೋರಾಗುತ್ತದೆಯೇ? ನಿಂಬೆಹಣ್ಣಿಗೆ ಪುದಿನ ಸೇರಿಸಿ, ಅಥವಾ ಸೋಡಾ ಸೇರಿಸಿ, ಚಾಟ್‌ ಮಸಾಲಾ ಉದುರಿಸಿ, ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡಿ, ನಿಂಬೆಹಣ್ಣಿನ ಪಾನಕಕ್ಕೆ ಬೇರೆಯ ರುಚಿಯನ್ನು, ಘಮವನ್ನು ನೀಡಲು ಪ್ರಯತ್ನಿಸುವುದು ಸಹಜ. ಬನ್ನಿ, ಈ ಬೇಸಿಗೆಯಲ್ಲಿ ನಿಂಬೆಹಣ್ಣಿನ ಜ್ಯೂಸ್‌ ಮಾಡುವಾಗ ಯಾವೆಲ್ಲ ಮಸಾಲೆಗಳನ್ನು ಸೇರಿಸುವ ಮೂಲಕ ಬೇರೆಯದೇ ರಿಫ್ರೆಶಿಂಗ್‌ ರುಚಿ (summer drinks), ಘಮವನ್ನು ಪಡೆಯಬಹುದು ಎಂಬುದನ್ನು ನೋಡೋಣ.

ಚೆಕ್ಕೆ

ಪಲಾವು, ಬೇಕಿಂಗ್‌ ರೆಸಿಪಿಗಳಲ್ಲಿ ನೀವು ಚೆಕ್ಕೆಯನ್ನು ಸೇರಿಸಿರಬಹುದು. ಆದರೆ, ನಿಂಬೆಹಣ್ಣಿನ ಜ್ಯೂಸಿಗೆ ಸೇರಿಸಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಸೇರಿಸಿ ನೋಡಿ. ಚೆಕ್ಕೆ ಪುಡಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ಕೊಂಚವೇ ಉದುರಿಸಿ ನೋಡಿ. ಇದು ಒಂದು ಬಗೆಯ ಸಿಹಿಯಾದ ವಿಶೇಷವಾದ ರುಚಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ನೀಡುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.

ಶುಂಠಿ

ತಂಪಾದ ನಿಂಬೆಹಣ್ಣಿನ ಜ್ಯೂಸ್‌ ಜೊತೆ ಕೊಂಚ ಶುಂಠಿ ರಸ ಸೇರಿಸಿದರೆ, ಬೆಸಿಲಿನ ಧಗೆಗೆ ತಣ್ಣಗಿನ ಜ್ಯೂಸ್‌ನಿಂದ ಆಗಬಹುದಾದ ನೆಗಡಿಯ ಭಯವೇ ಇಲ್ಲ. ಶುಂಠಿಯ ಖಾರವಾದ ರುಚಿ, ನಿಂಬೆಹಣ್ಣಿನ ಜ್ಯೂಸ್‌ಗೆ ಎಷ್ಟು ಹೊಂದಿಕೆಯಾಗುತ್ತದೆ ಎಂದರೆ, ರಿಫ್ರೆಶಿಂಗ್‌ ಅನುಭವಕ್ಕೆ ಇನ್ನೂ ಹೆಚ್ಚಿನ ಕಿಕ್‌ ನೀಡುತ್ತದೆ.

ಏಲಕ್ಕಿ

ಏಲಕ್ಕಿಯನ್ನು ನಿಂಬೆಹಣ್ಣಿನ ಜ್ಯೂಸ್‌ಗೆ ಸೇರಿಸುತ್ತಾರಾ ಎಂದು ಆಶ್ಚರ್ಯಪಡಬೇಡಿ. ಒಮ್ಮೆ ಕುಟ್ಟಿ ಪುಟಿ ಮಾಡಿದ ಏಲಕ್ಕಿ ಪುಡಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ಸೇರಿಸಿ. ಇದೊಂದು ಅದ್ಭುತವಾದ ರುಚಿಯನ್ನೂ ಘಮವನ್ನೂ ನಿಮ್ಮ ಲೆಮನೇಡ್‌ಗೆ ನೀಡದಿದ್ದರೆ ಕೇಳಿ!

ಲವಂಗ

ಲವಂಗವನ್ನು ಜಜ್ಜಿ ನಿಂಬೆಹಣ್ಣಿನ ಪಾನಕಮಾಡುವ ಸಂದರ್ಭ ಹಾಖಿಟ್ಟು ಕೊಂಚ ಹೊತ್ತು ಬಿಟ್ಟು ಕುಡಿದಾಗ ಅದರ ಘಮ ಸರಿಯಾದ ಪ್ರಮಾಣದಲ್ಲಿ ಲೆಮನೇಡ್‌ ಜೊತೆಗೆ ಮಿಳಿತಗೊಂಡು ಅದ್ಭುತ ಘಮವನ್ನೂ ರುಚಿಯನ್ನೂ ಕೊಡುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ!

ಹಸಿ ಮೆಣಸು

ಹೌದು, ಹಸಿ ಮೆಣಸನ್ನು ಕತ್ತರಿಸಿ ಲೆಮನೇಡ್‌ ಮಾಡುವ ಸಂದರ್ಭ ಅದಕ್ಕೆ ಹಾಕಿ, ಸಕ್ಕರೆ ಹಾಕಿ ಕುಲುಕಿ, ಆಮೇಲೆ ಹಸಿಮೆಣಸನ್ನು ತೆಗೆದುಬಿಡಿ. ಹಸಿಮೆಣಸಿನ ಖಾರವಾದ ಘಮ ನಿಂಬೆಹಣ್ಣಿನ ಜೊತೆಗೆ ಸೇರಿಕೊಂಡು ಅದ್ಬುತವಾದ ರುಚಿಯನ್ನು ಕೊಡುತ್ತದೆ.

ಸೋಂಪು, ಜೀರಿಗೆ

ಜೀರಿಗೆ ಹಾಗೂ ಸೋಂಪನ್ನು ಕೊಂಚ ಜಜ್ಜಿಕೊಂಡು ನಿಂಬೆಹಣ್ಣಿನ ಜ್ಯೂಸ್‌ಗೆ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಇರಲು ಬಿಟ್ಟು ನಂತರ ಸೋಸಿಕೊಂಡು ಕುಡಿದರೆ ಅದ್ಭುತ ರುಚಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version