Site icon Vistara News

Karnataka Weather : ಶುಷ್ಕ ವಾತಾವರಣಕ್ಕೆ ಸಾಥ್‌ ಕೊಡಲಿದೆ ಮಳೆ

Rain forecast with dry weather

ಬೆಂಗಳೂರು: ರಾಜ್ಯದಲ್ಲಿ ಒಣಹವೆಯೇ ಮೇಲುಗೈ (Dry Weather) ಸಾಧಿಸಲಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದಲ್ಲಿ ಒಣ (Karnataka Weather Forecast) ಹವೆ ಇರಲಿದೆ. ಈ ಮಧ್ಯೆ ಪ್ರತ್ಯೇಕ ಸ್ಥಳಗಳಲ್ಲಿ ಅಲ್ಲಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ.

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಬಿಸಿಲಿನ ತಾಪಮಾನ ಯಥಾಸ್ಥಿತಿಯಲ್ಲಿ ಇರಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬಿಸಿಲಿಗೆ ಉತ್ತರ ಕರ್ನಾಟಕ ತತ್ತರ

ಸೋಮವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಗರಿಷ್ಠ ಉಷ್ಣಾಂಶ 39.9 ಡಿ.ಸೆ ಬಾಗಲಕೋಟೆಯಲ್ಲಿ ಹಾಗೂ ಕನಿಷ್ಠ ಉಷ್ಣಾಂಶ 18.0 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿತ್ತು. ಕೋಲಾರದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 16.4 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಿನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 40.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ನಿಂದ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Drowned In Water : ತಂದೆ-ಮಗ ಸೇರಿ ಕರ್ನಾಟಕದಲ್ಲಿ ಒಂದೇ ದಿನ 12 ಮಂದಿ ಜಲ ಸಮಾಧಿ

ಬೇಸಿಗೆಯಲ್ಲಿ ಬೆವರಿನ ದುರ್ಗಂಧದಿಂದ ಪಾರಾಗಲು ಇಲ್ಲಿದೆ ಸುಲಭ ಉಪಾಯ

ನೀವು ಬೆವರಿನ ದುರ್ಗಂಧದಿಂದ ಸಮಸ್ಯೆ ಎದುರಿಸುತ್ತೀದ್ದೀರಾ? ಅಕ್ಕ-ಪಕ್ಕದವರು ಮುಖ ಕಿವುಚುತ್ತಿದ್ದಾರೆಯೇ? ಪ್ರೇಮಿ ಹತ್ತಿರ ಬರುತ್ತಿಲ್ಲವೇ ಮುಂತಾದ ಜಾಹೀರಾತುಗಳನ್ನು ನೋಡಿಯೇ ಇರುತ್ತೀರಿ. ಅದೇನು ಅಷ್ಟೆಲ್ಲ ದೊಡ್ಡ ಸಮಸ್ಯೆ ಎಂದು ಕೆಲವರಿಗೆ ಅನ್ನಿಸದಿರಬಹುದು. ಆದರೆ ಹಲವರ ಪಾಲಿಗೆ ಇದು ನಿಜಕ್ಕೂ ಕಿರಿಕಿರಿ. ಇದಕ್ಕಾಗಿ ಅತಿಯಾಗಿ ಸುಗಂಧ ಸುರಿದುಕೊಂಡರೆ- ಸ್ನಾನ ಮಾಡುವುದಿಲ್ಲವೇ ಎಂಬ ಕುಹಕ! ಅವುಗಳ ಮೊರೆ ಹೋಗದಿದ್ದರೆ… ಬೆವರಿನ ದುರ್ಗಂಧದಿಂದ ಕಷ್ಟ. ಇದಕ್ಕೆ (summer sweating problem) ಪರಿಹಾರವೇನು?
ಚಳಿಗಾಲದಲ್ಲಿ ನಡುಗುವಷ್ಟೇ ಸಹಜವಲ್ಲವೇ ಬೇಸಿಗೆಯಲ್ಲಿ ಬೆವರುವುದು? ಆದರೆ ಅದೇ ಅತಿಯಾದರೆ ಸಮಸ್ಯೆಗೆ ದಾರಿಯಾಗುತ್ತದೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟುವಟಿಕೆಯಿಂದಾಗಿ ಈ ಬೆವರಿನ ಸಮಸ್ಯೆ ಕೆಲವೊಮ್ಮೆ ನಮ್ಮ ಆತ್ಮವಿಶ್ವಾಸಕ್ಕೂ ಬಾಧೆ ತರುತ್ತದೆ. ಒಮ್ಮೊಮ್ಮೆ ಮುಜುಗರವನ್ನೂ ತರುತ್ತದೆ. ಕೆಲವು ಸರಳ ಬದಲಾವಣೆಗಳು ಮತ್ತು ಕ್ರಮಗಳಿಂದ ದೇಹದ ಬೆವರಿನ ವಾಸನೆಯ ಸಮಸ್ಯೆಯನ್ನು ತಹಬಂದಿಗೆ ತರಬಹುದು.

ಶುಚಿತ್ವದತ್ತ ಗಮನ ಕೊಡಿ

ಬೇಸಿಗೆಯ ದಿನಗಳಲ್ಲಿ ದೇಹದ ವೈಯಕ್ತಿಕ ಶುಚಿತ್ವದತ್ತ ಗಮನ ನೀಡುವುದು ಮುಖ್ಯ. ದಿನಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬೆಚ್ಚಗಿನ ನೀರು ಅಥವಾ ತಣ್ಣೀರಿನಿಂದ ಸ್ನಾನ ಮಾಡುವುದು ಅಗತ್ಯ. ಕುತ್ತಿಗೆ ಕೆಳಗೆ, ಕಂಕುಳು ಮುಂತಾದ ಬೆವರು ಹೆಚ್ಚು ಸ್ರವಿಸುವ ಭಾಗಗಳ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಲೇಬೇಕು. ತಿಳಿಬಣ್ಣದ ಹತ್ತಿಯ ವಸ್ತ್ರಗಳು ಆರಾಮದಾಯಕ. ಇವು ಬೆವರನ್ನೂ ಹೀರಿಕೊಳ್ಳುತ್ತವೆ. ಬೆವರಾದ ವಸ್ತ್ರಗಳನ್ನು ತೊಳೆಯದೇ ಮತ್ತೆ ಧರಿಸುವಂತಿಲ್ಲ. ದಿನವಿಡೀ ಶೂ ಹಾಕುವುದು ಅನಿವಾರ್ಯ ಎಂದಾದರೆ, ಎರಡು ಜೊತೆ ಶೂ ಇರಿಸಿಕೊಳ್ಳಲು ಯತ್ನಿಸಿ. ಇಂದು ಧರಿಸಿದ ಜೊತೆಯನ್ನು ನಾಳೆಯಿಡೀ ಒಣಗಿ, ಗಾಳಿಯಾಡುವುದಕ್ಕೆ ಬಿಡಿ. ಇಷ್ಟಾದರೂ ಕಾಲು ವಾಸನೆ ಬರುತ್ತಿದೆ ಎಂದಾದರೆ, ದಿನಕ್ಕೆ ಒಂದೆರಡು ಬಾರಿ ಸಾಕ್ಸ್‌ ಬದಲಿಸಿ.

ಡಿಯೊಡರೆಂಟ್

ಇದೀಗಾಗಲೇ ಬಹಳಷ್ಟು ಜನರಿಂದ ಬಳಕೆಯಲ್ಲಿದೆ. ಆದರೆ ಇದು ಕೇವಲ ಬೆವರಿನ ದುರ್ಗಂಧ ಬಡಿಯದಂತೆ ತಡೆಯುತ್ತದಷ್ಟೇ. ಒಂದೊಮ್ಮೆ ವಿಪರೀತ ಬೆವರುತ್ತಿದ್ದೀರಿ ಎಂದಾದರೆ ಬೆವರು ಶಮನ ಮಾಡುವ Antiperspirant ಗಳನ್ನೂ ಬಳಸಬಹುದು. ಅಲ್ಯುಮಿನಿಯಂ ಹೊಂದಿರುವ ಈ ವಸ್ತುಗಳನ್ನು ಕಂಕುಳು ಮತ್ತಿತರ ಭಾಗಗಳಲ್ಲಿ ಲೇಪಿಸಿದಾಗ, ಬೆವರಿನ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತವೆ. ಮಾತ್ರವಲ್ಲ, ಹೆಚ್ಚಿನ ಬೆವರು ಸ್ರವಿಸುವುದನ್ನು ತಡೆಯುತ್ತವೆ. ಕೆಲವು Antiperspirant ಗಳಲ್ಲಿ ಡಿಯೋಡರೆಂಟ್‌ ಸಹ ಸೇರಿಕೊಂಡಿದ್ದು, ಬೆವರಿನ ಅತಿಯಾದ ದುರ್ಗಂಧ ಇದ್ದವರಿಗೆ ಸೂಕ್ತವಾಗಬಹುದು.

ಆಹಾರವೂ ಮುಖ್ಯ

ಕೆಲವು ಆಹಾರಗಳು ನಮ್ಮ ತನುಗಂಧವನ್ನು ಬದಲಿಸಬಲ್ಲವು. ಅತಿಯಾದ ಸಕ್ಕರೆ, ಕೊಬ್ಬು, ಮಸಾಲೆಭರಿತ ಅಹಾರಗಳು ಬೆವರು ಸ್ರವಿಸುವುದನ್ನು ಹೆಚ್ಚಿಸುತ್ತವೆ ಮತ್ತು ಅಸಹನೀಯ ದುರ್ಗಂಧವನ್ನೂ ಬೆವರಿಗೆ ಸೇರಿಸುತ್ತವೆ. ಮುಖ್ಯವಾಗಿ ದೇಹದ ಚಯಾಪಚಯ ಕ್ರಿಯೆಗೆ ಸೂಕ್ತವಾಗಿರುವಂಥ ಆಹಾರ ಸೇವಿಸುವುದು ಮುಖ್ಯ. ಅಂದರೆ ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಶರೀರ ಹಗುರವಾದಂತೆನಿಸಿ, ಬೆವರುವ ಪ್ರಮಾಣವೂ ಕಡಿಮೆಯಾಗುತ್ತದೆ. ಇವೆಲ್ಲವುಗಳ ಜೊತೆಗೆ ಕುಡಿಯುವ ನೀರಿನ ಪ್ರಮಾಣ ಮಹತ್ವದ್ದು. ದಿನಕ್ಕೆ ಹತ್ತು ಗ್ಲಾಸ್‌ ನೀರು ಕುಡಿಯಲೇಬೇಕು. ಇದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಬೆವರಿನ ಸಮಸ್ಯೆ ನಿರ್ವಹಣೆಗೆ ನೆರವಾಗುತ್ತದೆ.

ನೈಸರ್ಗಿಕ ಉಪಾಯಗಳು

ಯಾವುದೇ ರಾಸಾಯನಿಕ ಬೇಡ ಎನ್ನುವವರಿಗೆ ಅಥವಾ ಡಿಯೊನಂಥ ವಸ್ತುಗಳಿಂದ ಅಲರ್ಜಿಯಾಗುತ್ತದೆ ಎನ್ನುವವರಿಗೆ ಕೆಲವು ಸರಳ ನೈಸರ್ಗಿಕ ಉಪಾಯಗಳೂ ಪ್ರಯತ್ನಕ್ಕೆ ಲಭ್ಯವಿವೆ. ಉದಾ, ಬೇಕಿಂಗ್‌ ಸೋಡಾ- ನೀರಿನಲ್ಲಿ ಬೇಕಿಂಗ್‌ ಸೋಡಾ ಬೆರೆಸಿ ಪೇಸ್ಟ್‌ನಂತೆ ಮಾಡಿ, ಸ್ನಾನಕ್ಕೆ ಹೋಗುವ ಮುನ್ನ ಇದನ್ನು ಕಂಕುಳಿಗೆ ಹಚ್ಚಿ ಕೆಲವು ನಿಮಿಷ ಬಿಡಿ. ನಂತರ ಹದವಾದ ನೀರಿನಿಂದ ಸ್ನಾನ ಮಾಡಿ. ಇದರಿಂದ ಕಂಕುಳಲ್ಲಿ ಬೆಳೆಯುವ ಬೆವರಿನ ಬ್ಯಾಕ್ಟೀರಿಯಾ ಪ್ರಮಾಣವನ್ನು ಕಡಿಮೆ ಮಾಡಬಹುದು.

ಇವೂ ಪರಿಣಾಮಕಾರಿ

ಆಪಲ್‌ ಸಿಡರ್‌ ವಿನೇಗರ್‌ಗೆ ಅಷ್ಟೇ ಪ್ರಮಾಣದಲ್ಲಿ ನೀರು ಬೆರೆಸಿ, ಹತ್ತಿಯಲ್ಲಿ ಅದ್ದಿ ಕಂಕುಳಿಗೆ ಇಟ್ಟುಕೊಳ್ಳಿ. ಇದು ಆ ಭಾಗದ ಚರ್ಮದ ಪಿಎಚ್‌ ಸಮತೋಲನಕ್ಕೆ ತಂದು, ಬೆವರು ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತವೆ. ಇನ್ನೊಂದು ಉಪಾಯವೆಂದರೆ, ನಾಲ್ಕಾರು ಹನಿ ನಿಂಬೆರಸವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ, ಅದನ್ನೂ ಕಂಕುಳಿಗೆ ಇರಿಸಿಕೊಳ್ಳಬಹುದು. ಇದಲ್ಲದೆ, ತೆಂಗಿನ ಎಣ್ಣೆಗೆ ಕೆಲವು ಹನಿ ಟೀಟ್ರೀ ಎಣ್ಣೆಯನ್ನು ಬೆರೆಸಿ, ಕಂಕುಳಿಗೆ ಹಚ್ಚಿ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣದಿಂದಾಗಿ ಬೆವರಿಗೆ ದುರ್ಗಂಧ ತಡೆಯುವಲ್ಲಿ ನೆರವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version