ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ

ಅಬ್ಬೆ ಎಂದರೆ ವಿಷಕಾರಿ ಜೇಡ. ಪ್ರಕೃತಿಯನ್ನೂ ಮಾನವ ಸಂಬಂಧಗಳನ್ನೂ ಮಾನವವ ಧನದಾಹವನ್ನೂ ಮುಖಾಮುಖಿಯಾಗಿಸುವ ಈ ಕೃತಿಯಲ್ಲಿ ಕಳೆದುಹೋದ ಮೌಲ್ಯಗಳ ಹುಡುಕಾಟವಿದೆ.

VISTARANEWS.COM


on

abbe novel shashidhar halady
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
narayana yaji
ನಾರಾಯಣ ಯಾಜಿ

| ನಾರಾಯಣ ಯಾಜಿ

ಶಶಿಧರ ಹಾಲಾಡಿಯವರು ಮೂಲತಃ ಪರಿಸರವನ್ನು ಪ್ರೀತಿಸುವ ಕವಿಹೃದಯವನ್ನು ಹೊಂದಿರುವವರು. ಅದೇ ರೀತಿ ಅವರು ಇತಿಹಾಸವನ್ನೂ ಸಹ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿಮರ್ಶಿಸುವಾಗ ಲಭ್ಯವಿರುವ ಕಥೆಗಳನ್ನು ಹೇಳದೇ ಕಾಲಗರ್ಭದಲ್ಲಿ ಇಣುಕಿ ಮಹತ್ವದ ಸಾಧನೆಯನ್ನು ಮಾಡಿಯೂ ಯಾರ ಕಣ್ಣಿಗೂ ಬೀಳದೇ ಅವಿತು ಹೋದವರ ಸಂಗತಿಗಳನ್ನು ಅಥವಾ ಮಹತ್ವದ ಹೋರಾಟಗಳನ್ನು ತಮ್ಮ ಅಂಕಣದಲ್ಲಿ ದಾಖಲಿಸಿದ್ದಾರೆ. ಅಂಕಣಕಾರ ಘಟನೆಯನ್ನು ದಾಖಲಿಸುವತ್ತಲೇ ತನ್ನ ಬರಹದ ಕಡೆಗೆ ಲಕ್ಷ್ಯ ವಹಿಸುತ್ತಾನೆ. ಆತನಿಗೆ ಬರೆಯುವದು ಮತ್ತು ಆ ಕಾರಣಕ್ಕಾಗಿ ಹೊಸ ಹೊಸ ಓದನ್ನು ರೂಢಿಸಿಕೊಳ್ಳುವದು ಅಭ್ಯಾಸವಾಗಿರುತ್ತದೆ. ಈ ಬರೆಯುವ ಕ್ರಿಯೆಯಲ್ಲಿ ಅವನಿಗೆ ಅರಿವಿಲ್ಲದಂತೆಯೇ ಕಥನ ಕಟ್ಟುವ ಒಂದು ಚೌಕಟ್ಟು ರೂಪುಗೊಂಡಿರುತ್ತದೆ. ಆ ಮಿತಿಯನ್ನು ಮೀರದೇ ವಿಷಯಗಳನ್ನು ಅಚ್ಚುಕಟ್ಟಾಗಿ ಹೇಳುವ ತವಕ ಅಂಕಣಕಾರನಿಗೆ ಯಾವಾಗಲೂ ಇರುತ್ತದೆ.

ಆದರೆ ಕಾದಂಬರಿಯಲ್ಲಿ ಹಾಗಲ್ಲ. ಈ ಬೇಲಿಯನ್ನು ಮುರಿಯಲು ಆತನಿಗೆ ಸ್ವಚ್ಛಂದ ಅವಕಾಶಗಳಿರುತ್ತವೆಯಾದರೂ ಅಭ್ಯಾಸಬಲದಿಂದ ವಿಷಯಗಳು ಒಂದು ಚೌಕಟ್ಟಿನೊಳಗೇ ವಿಹರಿಸಲು ತೊಡಗುತ್ತವೆ. ಅಂಕಣ ವಿಸ್ತ್ರತ ಸಾಹಿತ್ಯವಾಗುವದಿಲ್ಲ. ವಿಸ್ತ್ರತ ಸಾಹಿತ್ಯಕ್ಕೆ ಅದು ಬುನಾದಿಯನ್ನು ಹಾಕಿಕೊಡಬಹುದು. ಈ ಹಿನ್ನೆಲೆಯಲ್ಲಿ ಹಾಲಾಡಿಯವರ ಎರಡನೇ ಕಾದಂಬರಿ “ಅಬ್ಬೆ”ಯನ್ನು ಓದಿದರೆ ಇದು ಪರಿಸರವನ್ನು ಅಧರಿಸಿದ ಕಾದಂಬರಿಯಾದರೂ ಪರಿಸರದಲ್ಲಿಯೇ ಬದುಕುವ ಮನುಷ್ಯ, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೇಗೆ ಅಪಾಯವನ್ನು ತರಬಲ್ಲ ಎಂದು ಹೇಳಲು ಹೊರಟಿದ್ದಾರೆ. ಮನುಷ್ಯನ ಕ್ರೌರ್ಯ ಮತ್ತು ಹಿಂಸೆಯ ವಿಜೃಂಭಣೆ ಅನಾವರಣಗೊಳ್ಳಲು ಕಾರಣವೇ ಬೇಕಿಲ್ಲ. ಅಬ್ಬೆಯೆನ್ನುವುದು ಒಂದು ಪ್ರಕಾರದ ಜೇಡ. ತುಂಬಾ ವಿಷದ ಪ್ರಾಣಿ. ಅದು ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟೂ ಸಮಯವಿಲ್ಲದೇ ಕಚ್ಚಿಸಿಕೊಂಡ ವ್ಯಕ್ತಿ ಸಾಯುತ್ತಾನೆ ಎನ್ನುವ ನಂಬಿಕೆ ಇಂದಿಗೂ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಇಂತಹ ಜೇಡಕ್ಕೆ ಕೆಲವು ಕಡೆ ಅಬ್ಬೆ ಎನ್ನುತ್ತಾರೆ, ಇನ್ನು ಕೆಲವು ಕಡೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಹಾಗಂತ ಅದು ಕಚ್ಚಿರುವದನ್ನು ನೇರವಾಗಿ ಯಾರೂ ನೋಡಿಲ್ಲ. ಅಕಸ್ಮಾತ್ತಾಗಿ ಯಾರಾದರೂ ಸತ್ತರೂ ಹಾಗೇ ಸತ್ತವನ ಸುತ್ತಮುತ್ತ ಎಲ್ಲಿಯಾದರೂ ವಿಲಕ್ಷಣವಾದ ಜೇಡ ಕಾಣಿಸಿತು ಎಂದರೆ ಅದು ಅಬ್ಬೆ ಕಡಿದು ಆದ ಸಾವು ಎನ್ನುವುದನ್ನು ನಂಬುತ್ತಾರೆ. ಕಂಡ ಕಂಡ ಜೇಡಗಳ ಮಾರಣಹೋಮ ನಡೆಯುತ್ತದೆ.

shashidhara halady
ಶಶಿಧರ ಹಾಲಾಡಿ

ಉತ್ತರ ಕನ್ನಡದ ಕೆಲವೆಡೆ ಮದ್ದು ಹಾಕುವದು ಎನ್ನುವ ನಂಬಿಕೆ ಇದೆ. ಇಲ್ಲಿನ ಹಳ್ಳಿಗಳಲ್ಲಿ ಯಾವುದಾದರೂ ಒಂದು ಮನೆಗೆ ಮದ್ದು ಹಾಕುವವರ ಮನೆ ಎನ್ನುವ ಅಭಿಶಾಪವಿರುತ್ತದೆ. ಗೊತ್ತಿಲ್ಲದೇ ಆ ಮನೆಗೆ ಹೋದ ಅಂತ ಇಟ್ಟುಕೊಳ್ಳಿ. ಆ ಮನೆಯ ಯಾವುದೋ ಹೆಂಗಸು ಆತನ ಊಟದಲ್ಲಿ ಸತ್ತ ಉಡದ್ದೋ ಅಥವಾ ಹಲ್ಲಿಯದ್ದೋ ಅಥವಾ ಅನಾಮಧೇಯ ಪ್ರಾಣಿಯದ್ದೋ ದೇಹದಿಂದ ತೆಗೆದ ವಿಷದ ಪುಡಿಯನ್ನು ತನ್ನ ಕೈ ಉಗುರಿನಲ್ಲಿಯೋ ಎಲ್ಲೋ ಬಚ್ಚಿಟ್ಟು ಚಿಟಿಕೆ ಉದುರಿಸಿಬಿಡುತ್ತಾಳಂತೆ. ಆ ಹೆಂಗಸು ಯಾರೆಂದು ಆ ಮನೆಯವರಿಗೂ ತಿಳಿದಿಲ್ಲದ ಗೂಢ ವಿಷಯ. ಅಲ್ಲಿ ಊಟ ಮಾಡಿದವನನ್ನು ನಿಶ್ಯಕ್ತಿ ಕಾಡಿ ದೈಹಿಕವಾಗಿ ಸೊರಗುತ್ತಾನೆ. ಡಾಕ್ಟರುಗಳಿಗೂ ಈ ವಿಷವನ್ನು ಕಂಡುಹಿಂಡಿಯಲಾಗುವುದಿಲ್ಲ. ಅದೇ ಊರಿನಲ್ಲಿ ಇಂತಹ ವಿಷವನ್ನು ವಾಂತಿ ಮಾಡಿ ತೆಗೆಯುವ ಮನೆಯಿರುತ್ತದೆ. ಆ ಮನೆಯವರು ವಾಂತಿ ಮಾಡಿಸಿದರೆ ಹಸಿರು ಬಣ್ಣದ ವಾಂತಿ ಬಂತೋ, ಅದು ಮದ್ದು ಹಾಕಿದುದರ ಪರಿಣಾಮ ಎನ್ನುವುದು ಖಾತ್ರಿಯಾಗುತ್ತದೆ. ಇದಕ್ಕೂ ಆಧಾರವಿಲ್ಲ. ಹೀಗೆ ತಳವಿಲ್ಲದ ಅನೇಕ ನಂಬಿಕೆಗಳು ಹಳ್ಳಿಗಳಲ್ಲಿವೆ. ಅಂತಹ ಕಥೆಗಳಲ್ಲಿ ಅಬ್ಬೆ ಜೇಡದ ಕಥೆಯೂ ಒಂದು.

ಇಲ್ಲಿನ ನಾಯಕ ಶಿವರಾಂ ಕರಾವಳಿಯಿಂದ ಕಲ್ಕೆರೆ ಎನ್ನುವ ಬಯಲುಸೀಮೆಯ ಕಡೆ ಹೊಸತಾಗಿ ಬ್ಯಾಂಕಿನ ನೌಕರಿಗೆ ಹೋಗುತ್ತಾನೆ. ಸುಮಾರು 1980ರ ದಶಕದಲ್ಲಿ ಲೇಖಕರು ಬ್ಯಾಂಕಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲದಲ್ಲಿ ನಡೆದಿರಬಹುದಾಗಿರುವ ಘಟನೆಗಳನ್ನು ಆಧರಿಸಿದ ಸಂಗತಿಗಳು ಇಲ್ಲಿವೆ. ಕಲ್ಕೆರೆ ಮಲೆನಾಡಿನಂತೆ ಅಲ್ಲವೇ ಅಲ್ಲ, ಹಾಗಂತ ಬಯಲುಸೀಮೆಯೂ ಅಲ್ಲ. ಶಿವರಾಂನಿಗೆ ಕುತೂಹಲಕ್ಕೆ ಕಾರಣವಾಗುವದು ಉದ್ಯೋಗಕ್ಕೆ ಸೇರುವ ದಿವಸ ಬಸ್ಸಿನಲ್ಲಿ ಬರುವಾಗಲೇ ನೋಡಿದ “ಗರುಡನಗಿರಿ ರಕ್ಷಿತಾರಣ್ಯ” ಎನ್ನುವ ಬ್ರಿಟಿಷರ ಕಾಲದ ಮಸುಕು ಮಸುಕಾಗಿದ್ದ ಬೋರ್ಡ್. ಈಗೊಂದಿನ್ನೂರು ವರ್ಷಗಳಲ್ಲಿ ದಟ್ಟಕಾಡಿನ ಪ್ರದೇಶವೊಂದು ಹೇಗೆ ಮನುಷ್ಯನ ದಾಳಿಗೆ ಸಿಕ್ಕು ಬೋಳಾಗಿಹೋಗಿದೆ ಎನ್ನುವದರ ಕುರುಹನ್ನು ಪ್ರಾರಂಭದಲ್ಲಿಯೇ ತೋರಿಸಿಬಿಡುತ್ತಾರೆ.

ಬ್ಯಾಂಕಿನ ಲೋಕವೆನ್ನುವದು ಹೊರಗಿನಿಂದ ಅಂದವಾಗಿ ಕಾಣಿಸುತ್ತದೆ. ಆದರೆ ಅಲ್ಲಿ ಹಣದ ವ್ಯವಹಾರವಿರುವ ಕಡೆ ಅನೇಕ ದುರ್ಬಲ ಮನಸ್ಸುಗಳನ್ನು ಚಂಚಲಚಿತ್ತರನ್ನಾಗಿಸಿ ದುರ್ಬಳಕೆಗೆ ಪ್ರೇರೇಪಿಸುವ ಅನೇಕ ಘಟನೆಗಳು ಆಗುತ್ತಲೇ ಇರುತ್ತವೆ. ಹಣದ ಒಂದು ಗುಣವೆಂದರೆ ಅದು ಯಾರನ್ನೂ ನಂಬಲು ಆಸ್ಪದ ಮಾಡಿಕೊಡುವದಿಲ್ಲ. ಎಲ್ಲರನ್ನೂ ಸಂಶಯದಿಂದಲೇ ನೋಡುವ ಸ್ವಭಾವ ಹಾಗೂ ತಮ್ಮ ತಪ್ಪನ್ನು ಇನ್ನೊಬ್ಬರ ತಲೆಗೆ ತಣ್ಣಗೆ ದಾಟಿಸಿ ಅವರನ್ನು ಹೊಂಡಕ್ಕೆ ಹಾಕಿ ತಾವು ಸಂಭಾವಿತರಂತೆ ಇದ್ದುಬಿಡುವ ಅನೇಕ ವ್ಯಕ್ತಿಗಳು ಅಲ್ಲಿ ಸಿಗುತ್ತಾರೆ. ಕಲ್ಕೆರೆಗೆ ಬಂದ ಶಿವರಾಮನಿಗೆ ಮ್ಯಾನೇಜರನ ಅಸಹನೆಯ ಸ್ವಾಗತ, ಸಿಬ್ಬಂದಿಗಳೆಲ್ಲರ ಹಿತಮಿತವಾದ ಮಾತುಗಳು ಅಧೈರ್ಯವನ್ನು ಹುಟ್ಟಿಸಿಬಿಟ್ಟಿದೆ. ಆದರೂ ಉದ್ಯೋಗವೆನ್ನುವದು ಅನಿವಾರ್ಯವಾದ ಕಾರಣ ಸಹಿಸಿಕೊಂಡು ಇರಬೇಕಾಗಿದೆ. ಇಡೀ ಬ್ಯಾಂಕೇ ತನ್ನ ತಲೆಯ ಮೇಲೇ ಇದೆಯೇನೋ ಎಂದು ಸದಾ ಒದ್ದಾಡುತ್ತಾ ಉಳಿದವರ ಮೇಲೆ ಸಿಡುಕುವ ಮ್ಯಾನೇಜರ್ ಕೈ, ಬಾಯಿ, ದೇಹ ಎಲ್ಲವೂ ಸಡಿಲವಾಗಿರುವ ವ್ಯಕ್ತಿ, ಕ್ಯಾಷಿಯರ್, ಮತ್ತೋರ್ವ ಕ್ಲರ್ಕ್ ಹಾಗೂ ಅರೆಕಾಲಿಕ ಸಿಬ್ಬಂದಿಗಳು ಈ ಎಲ್ಲರೂ ಕಥಾನಾಯಕ ಶಿವರಾಮನಿಗೆ ಒಗಟಾಗಿಯೇ ತೋರುತ್ತಾರೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

ಹಳ್ಳಿಯಾದುದರಿಂದ ಎಲ್ಲರೂ ಅವರವರ ಸಂಸಾರವನ್ನು ಎಲ್ಲಿಯೋ ಬಿಟ್ಟು ಇಲ್ಲಿ ಅಂಕೆ ತಪ್ಪಿ ರಾತ್ರಿ ಹೊತ್ತು ಕಳೆಯಲು ರೂಢಿಸಿಕೊಂಡ ಚಟಗಳು; ಇವೆಲ್ಲವುಗಳಿಂದ ಪಾರಾಗುವ ಚಿಂತೆಯ ಜೊತೆಗೆ ಅನನುಭವಿಯನ್ನು ಶಾಖೆಗೆ ಹಾಕಿದ್ದಾರೆಂದು ಸಿಡುಕುವ ಮ್ಯಾನೇಜರ್ ಮತ್ತೊಂದು ಕಡೆ. ಈ ಎಲ್ಲದರ ಜೊತೆಗೆ ಏಗುತ್ತಿರುವಾಗಲೇ ಕುಪ್ಪೂರು ತಿಮ್ಮಪ್ಪನ ನಿಗೂಢ ಸಾವಾಗುತ್ತದೆ. ಅದನ್ನು ಸರಳವಾಗಿ ಆತ್ಮಹತ್ಯೆಯೆಂದು ಮುಚ್ಚಿಹಾಕುವ ವ್ಯವಸ್ಥೆಗಳೆಲ್ಲಾ ಸಲೀಸಾಗಿ ಮೂಡಿಬಂದಿದೆ. ತಿಮ್ಮಪ್ಪನ ಸಾವಿನೊಂದಿಗೆ ಊರಿನ ಫಾಸಲೆಯಲ್ಲಿ ಮರಗಳನ್ನು ಕಡಿದು ಕಳ್ಳಸಾಗಾಟ ಮಾಡುವ ಮತ್ತು ಅದಕ್ಕೆ ಇಡೀ ಊರಿಗೆ ಊರೇ ಇಂತಹ ಕೆಲಸ ಒಂದು ಅಪರಾಧವೆಂದು ಗ್ರಹಿಸದ ವ್ಯವಸ್ಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿರುವಂತೆ ಪರಿಸರದ ಜೊತೆ ಬೆಳೆದ ನಾಯಕನಿಗೆ ಅಚ್ಚರಿಯ ಜೊತೆಗೆ ಅದನ್ನು ತಡೆಯಬೇಕೆನ್ನುವ ಹಂಬಲವೂ ಜಾಸ್ತಿಯಾಗುತ್ತಾ ಹೋಗುತ್ತದೆ. ಇದೇ ಹೊತ್ತಿನಲ್ಲಿ ಅದೇ ಕುಪ್ಪೂರು ತಿಮ್ಮಪ್ಪನ ಮಗನ ಮದುವೆಯಲ್ಲಿ ಪಾರ್ಟಿ ಮುಗಿಸಿ ಹೋಗುವಾಗ ಧರ್ಮ ಎನ್ನುವವನ ಅಸಹಜ ಸಾವನ್ನು “ಅಬ್ಬೆ ಕಚ್ಚಿ ಆತ ಸತ್ತʼʼ ಎನ್ನುವ ತೀರ್ಮಾನಕ್ಕೆ ಬಂದಾಗ ಶಿವರಾಮನಿಗೆ ಅಬ್ಬೆ ಎನ್ನುವ ಜೇಡದ ಕುರಿತು ಮೊದಲ ಸುದ್ದಿ ತಿಳಿಯುತ್ತದೆ.

ಅಬ್ಬೆ ಕಚ್ಚಿದರೆ ತಕ್ಷಣವೇ ಸಾವು ಬರುತ್ತದೆ; ಆದರೆ ಯಾರೂ ಪ್ರತ್ಯಕ್ಷವಾಗಿ ಅಬ್ಬೆ ಕಡಿಯುವದನ್ನು ನೋಡಿರುವದಿಲ್ಲ. ಅಲ್ಲಿದ್ದ ಅಮಾಯಕ ಜೇಡಗಳನ್ನು ಈ ಕಾರಣಕ್ಕಾಗಿ ಕೊಂದು ಹಾಕಲಾಗುತ್ತದೆ. ಅದೇ ರೀತಿ ಕಲ್ಕೆರೆಯ ಪರಿಸರವನ್ನೂ ಸಹ ಅವರಿಗರಿವಿಲ್ಲದೇ ನಾಶ ಮಾಡುವತ್ತ ಕೇವಲ ಊರಿನ ಜನ ಮಾತ್ರವಲ್ಲ. ಅಲ್ಲಿಗೆ ಆ ಕಾರಣಕ್ಕಾಗಿಯೇ ಬರುವ ಬಳ್ಳಾರಿಯ ಕಡೆಯ ಕೆಂಚಪ್ಪನಂತಹವರಿಗೆ ಚಿಪ್ಪುಹಂದಿಯನ್ನು ಹಿಡಿದು ಮಾರಿ ಹಣ ಮಾಡುವ ಧಾವಂತ. ಅನಕ್ಷರಸ್ಥನಾದ ಆತನ ಹತ್ತಿರ ಬ್ಯಾಂಕಿನ ಸಿಬ್ಬಂದಿಗಳಿಗಿಂತಲೂ ಜಾಸ್ತಿ ಹಣವಿದೆ. ಪರಿಸರ ನಾಶಕ್ಕೆ ತೊಡಗಿದವರಿಗೆ ತಾವು ಚಿನ್ನದ ಕೋಳಿಯ ಕತ್ತನ್ನು ಕೊಯ್ಯುತ್ತೇವೆನ್ನುವ ಅರಿವಿಲ್ಲ. ಬ್ಯಾಂಕಿನವರೆಲ್ಲ ಬಿಡುವಿನ ಸಮಯದಲ್ಲಿ ಇಸ್ಪೀಟು ಅದೂ ಇದೂ ಅಂತ ಕಾಲಕ್ಷೇಪ ಮಾಡುತ್ತಿದ್ದರೆ ಶಿವರಾಮ ಪಡ್ಡೆ ಹುಡುಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾ ಇರುವುದು ಮ್ಯಾನೇಜರನ ಅಸಹನೆಗೆ ಕಾರಣ. ಇದೇ ಹೊತ್ತಿಗೆ ಅಲ್ಲಿನ ಕಾಲೇಜೊಂದಕ್ಕೆ ಪ್ರಿನ್ಸಿಪಾಲ್ ಆಗಿ ಬರುವ ಡಾ. ಕಲ್ಲೂರಾಯರು ಸಹ ಕರಾವಳಿ ಕಡೆಯವರೇ. ಜೀವಶಾಸ್ತ್ರ, ಸಸ್ಯಶಾಸ್ತ್ರವೆಲ್ಲವನ್ನೂ ಓದಿಕೊಂಡಿದ್ದಾರೆ. ಅವರೂ ಸಹ ಈ ಅಬ್ಬೆ ಕಚ್ಚಿದರೆ ಸಾಯುವದು ಎನ್ನುವದು ಕೇವಲ ಭ್ರಮೆ ಎನ್ನುತ್ತಾರೆ. ಹುಡುಗರೊಂದಿಗೆ ಹಿರೇಕಲ್ಲು ಗುಡ್ಡ ಗರುಡನಗಿರಿಯ ಬೆಟ್ಟಕ್ಕೆ ಚಾರಣ ಹೋಗುವ ಅವರು ಅಲ್ಲಿನ ಸಸ್ಯಗಳ ವೈವಿಧ್ಯಗಳನ್ನು ನೋಡಿ ಅಪೂರ್ವ ಸಸ್ಯ ಸಂಪತ್ತು ನಾಶವಾಗುವ ಕುರಿತು ಖೇದ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

ಬ್ಯಾಂಕಿನ ನೀರಸ ಬದುಕು, ಊರವರ ಹಣ ಮಾಡುವ ಮತ್ತು ವಿದ್ಯಾವಂತರಾದವರೆಲ್ಲ ಊರು ಬಿಡುವವರ ನಡುವೆ ಅರಣ್ಯ ಬರಿದಾಗಿದೆ. ಮೊದಲು ಕೇವಲ ಗರುಡನಗಿರಿ ಬೆಟ್ಟ ನಾಶವಾಗಿ ಹೋಗಿದೆ. ಈಗ ಹಿರೇಕಲ್ಲು ಗುಡ್ಡದಲ್ಲಿನ ಪ್ರಾಣಿಗಳ ಸಹಿತ ಅರಣ್ಯನಾಶವಾಗಲು ಹೆಚ್ಚಿನ ಸಮಯವಿಲ್ಲ ಎನ್ನುವ ಅರಿವಾಗುತ್ತ ಇದ್ದಕ್ಕಿದ್ದಂತೆ ಪರಿಸರದ ಹುಡುಕಾಟದ ತೇಜಸ್ವಿಯವರ ಕಾದಂಬರಿಯನ್ನು ನೆನಪಿಸುವ ಜಾಡಿನಲ್ಲಿ ಸಾಗುತ್ತದೆ. ಕಲ್ಲೂರಾಯರಿಗೆ ಇಲ್ಲಿನ ಸಸ್ಯ ವೈವಿದ್ಯತೆಯನ್ನು ಹೊರಜಗತ್ತಿಗೆ ತಿಳಿಸುವುದು ಮುಖ್ಯ. ಹಣಕ್ಕಾಗಿ ಹೌದಾದರೂ ಅರೆಕಾಲಿಕ ಉದ್ಯೋಗದಲ್ಲಿರುವ ಅವರಿಗೆ ಹಣವನ್ನು ಹೇಗೋ ಹೇಗೋ ಗಳಿಸುವ ಹುಚ್ಚಿಲ್ಲ. ಕಾಣದ ಅಬ್ಬೆಗಿಂತ ಪಕ್ಕದಲ್ಲಿರುವ ಜನರ ಅಸೂಯೆಯ ವಿಷವೇ ಹೆಚ್ಚಿನ ಅಪಾಯಕಾರಿ ಎನ್ನುವ ಮಾತುಗಳು ಶಿವರಾಮನನ್ನು ಎಚ್ಚರಿಸುತ್ತಿರುತ್ತವೆ. ಅಸೂಯೆ ದ್ವೇಷವೆನ್ನುವುದು ಹೆಣ್ಣಿನ ರೂಪದಲ್ಲಿ ಶಿವರಾಮನ ಮೇಲೆ ಮ್ಯಾನೇಜರ್ ಮಸಲತ್ತು ಮಾಡಿಸುವದು ಈ ಹೊತ್ತಿನಲ್ಲಿ ಬ್ಯಾಂಕಿನ ಯೂನಿಯನ್ನಿನ ಪ್ರತಿನಿಧಿಯಾದ ಕ್ಯಾಷಿಯರ್ ಸಹಾಯಕ್ಕೆ ಬಂದು ಅದನ್ನು ತಪ್ಪಿಸುವ ಘಟನೆಗಳು ಚೆನ್ನಾಗಿ ಬಂದಿವೆ. ಪರಿಸರದ ಹುಡುಕಾಟದಲ್ಲಿ ಇನ್ನೇನು ಬಿಜಿಎಲ್ ಸ್ವಾಮಿಯವರ ಹಸಿರು ಹೊನ್ನು ಅಥವಾ ತೇಜಸ್ವಿಯವರ ಕರ್ವಾಲೋ ತರಹದ ಹುಡುಕಾಟ ಪ್ರಾರಂಭವಾಗುತ್ತದೆ ಎನ್ನುವಾಗ ಮತ್ತೆ ಬ್ಯಾಂಕಿನ ಸಮಸ್ಯೆಗಳಲ್ಲಿ ಸಿಕ್ಕು ಅದರಿಂದ ಪಾರಾಗಲು ಒದ್ದಾಡುವ ನಾಯಕನ ಸುತ್ತಲೇ ಕಥೆ ಸುತ್ತುತ್ತದೆ. ಇದು ಕಾದಂಬರಿಯ ಮಿತಿಯೂ ಹೌದು.

ಹಿರೇಕಲ್ಲು ಗುಡ್ಡವೆನ್ನುವದು ಭೂವೈವಿಧ್ಯದ ಪಳೆಯುಳಿಕೆ ಎನ್ನುವುದನ್ನು ತಿಳಿಸುವಲ್ಲಿ ಕಾದಂಬರಿ ಯಶಸ್ವಿಯಾದರೂ ಏಕಕಾಲದಲ್ಲಿ ಕಥೆ, ಉದ್ಯೋಗ ಮತ್ತು ಒಂದು ಕಾಲದ ರಕ್ಷಿತಾರಣ್ಯವಾದ ಗರುಡನಗಿರಿಯ ಮಸುಕಾದ ಬೋರ್ಡು, ಪಾಳು ಬಂಗಲೆ, ಎಲ್ಲಿಂದಲೋ ಬರುವ ಸಂನ್ಯಾಸಿಗಳು, ಮುಕುಂದೂರು ಸ್ವಾಮಿಗಳು, ಅಮಾಯಕನಾಗಿ ನಟಿಸುವ ಕೆಂಚಪ್ಪ ಈ ನಡುವೆ ಪೂಜಾರಿಯು ಸಾಲಮೇಳ ಹೇಗೆ ದಿಕ್ಕು ತಪ್ಪಿತೆನ್ನುವುದನ್ನು ವಿವರಿಸುವ ರೀತಿ ಇವುಗಳ ದೊಡ್ಡ ಬೀಸಿನಲ್ಲಿ ಕಥೆ ಸಾಗುತ್ತಾ ಹೋಗುತ್ತದೆ. ಊರಿನಲ್ಲಿ ತನಗಿಂತ ಶಿವರಾಮ ಜನಪ್ರಿಯನಾಗುವುದನ್ನು ಸಹಿಸದ ಮ್ಯಾನೇಜರ್ ಆತನ ಪ್ರೊಬೇಷನರಿಯನ್ನು ಮುಂದುವರಿಸಲು ಶಿಫಾರಸು ಮಾಡುತ್ತಾನೆ. ಆ ಚಿಂತೆ ಶಿವರಾಮನನ್ನು ತೀವ್ರವಾಗಿ ಕಾಡುವಂತೆ ಅನಿಸಿದರೂ ಅಬ್ಬೆ ಕಚ್ಚುವದು ಎನ್ನುವದು ಕೇವಲ ಭ್ರಮೆ ಎನ್ನುವದನ್ನು ಮೊದಲೇ ಸಾರುತ್ತಾ ಹೋಗುವುದರಿಂದ ಕಥೆ ಬ್ಯಾಂಕಿನಲ್ಲಿ ಇರುವ ವಿಷವ್ಯೂಹದಲ್ಲಿ ಸಿಲುಕಿಸುತ್ತದೆ. ಹೃದಯಾಘಾತದಿಂದ ಆದ ಸಾವನ್ನು ಅಬ್ಬೆಯ ತಲೆಗೆ ಕಟ್ಟುವುದನ್ನು ವಿವರಿಸುತ್ತಾ ಪ್ರಯತ್ನ ಪೂರ್ವಕವಾಗಿ ಓದುಗರನ್ನು ಕಥೆಯ ಬಂಧಕ್ಕೆ ತಂದು ಕೂರಿಸುತ್ತಾರೆ. ಒಂದು ಕಾಲಕ್ಕೆ ಸಮೃದ್ಧ ಮಳೆಯ ಪ್ರದೇಶವಾಗಿದ್ದ ಕಲ್ಕೆರೆಯಂತಹ ಪ್ರದೇಶ ಇಂದು ಮಳೆಯ ನೆರಳಿನ (Rain Shade) ಪ್ರದೇಶವಾಗಿ ಬದಲಾಗಿರುವದರ ಸೂಕ್ಷ್ಮತೆಯನ್ನು ವಿವರಿಸುತ್ತಾ ಹೋಗುವಾಗ ಮೂಲತಃ ಪ್ರಕೃತಿಯನ್ನು ಪ್ರೀತಿಸುವ ಹಾಲಾಡಿಯವರ ಸಾತ್ವಿಕ ನೋವು ಎದ್ದು ಕಾಣಿಸುತ್ತದೆ. ಓದುಗ ಇಲ್ಲಿ ಕಥಾನಾಯಕನೊಂದಿಗೆ ತಾನೂ ಮಿಳಿತವಾಗುತ್ತಾನೆ. ಊರಿನಲ್ಲಿ ಮರಗಳೊಟ್ಟಿಗೆ ಚಿನ್ನದ ನಿಧಿಯೂ ಇರುವ ವಿಷಯಗಳೆಲ್ಲವೂ ಬಂದು ಹಳ್ಳಿಯ ವ್ಯವಸ್ಥೆಯಲ್ಲಿ ಇವೆಲ್ಲ ಮಾಮೂಲು ಎಂದು ಅಷ್ಟೇ ವೇಗವಾಗಿ ಅವೆಲ್ಲವೂ ಮುಚ್ಚಿಹೋಗಿಬಿಡುತ್ತವೆ. ಇದು ಕಲ್ಕೆರೆಯಲ್ಲಿ ವಿದ್ಯುತ್ ಇದ್ದೂ ಇಲ್ಲದಂತಿರುವ ವಿವರಣೆಗೆ ಪೂರಕವಾಗುತ್ತದೆ. ಕಾರಣವಿಲ್ಲದೇ ಮ್ಯಾನೇಜರ್ ಇವರನ್ನು ದ್ವೇಷಿಸುವುದಕ್ಕೆ ನರಸಿಂಹಯ್ಯನವರ ಬಾಯಿಯಿಂದ ಜನ್ಮಾಂತರದ ಸಂಚಿತ ಕರ್ಮದ ಸಮಾಧಾನವಿಲ್ಲದೇ ಇದ್ದಿದ್ದರೆ ಒಳ್ಳೆಯದಿತ್ತು. ಕೆಲವೊಮ್ಮೆ ಕೆಲವು ಜನರ Maladaptive behavior (ಅಸಮರ್ಪಕ ನಿರ್ವಹಣೆ) ಇಂತಹುದಕ್ಕೆಲ್ಲಾ ಕಾರಣವಾಗುತ್ತದೆ. ನಾಗರ ಹಾವನ್ನೂ, ಅಮಾಯಕ ಜೇಡವನ್ನೂ ಕಂಡಕಂಡಲ್ಲಿ ಜಜ್ಜಿ ಕೊಲ್ಲುವ ವಿಷಯಗಳೆಲ್ಲವೂ ಇಲ್ಲಿ ಸಾಂಕೇತಿಕವಾಗಿ ಬಂದಿರುವದರಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹೇಳದೇ ಹಾಗೇ ಬಿಡುವದು ಒಳ್ಳೆಯದು.

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ಗರುಡನಗಿರಿ ರಕ್ಷಿತಾರಣ್ಯವಾಗಿರುವದು ಬರಡುಗಿರಿ ರಕ್ಷಿತಾರಣ್ಯವಾಗಿ ಬದಲಾಗಿರುವ ವರದಿ ಪತ್ರಿಕೆಗಳಲ್ಲಿ ಬಂದಿರುವದು ಕಥೆಗೆ ಕೊಡುವ ಬಹುಮುಖ್ಯ ತಿರುವು. ಶಿವರಾಮ ಊರಿನವರ ಯಾರ ಸಂಗಡವೂ ವಿರೋಧ ಕಟ್ಟಿಕೊಳ್ಳದೇ ಅವರೆಲ್ಲರಿಗೂ ತಮ್ಮ ತಪ್ಪುಗಳನ್ನು ಅರಿಯಲು ಸಹಾಯ ಮಾಡಿರುವುದು, ಊರಲ್ಲಿ ಧನಾತ್ಮಕ ಗುಣಗಳುಳ್ಳವರು ತುಂಬಾ ಜನರಿದ್ದಾರೆ. ಕೆಲವೊಂದಿಷ್ಟು ಪುಂಡರು ತಮ್ಮ ಸ್ವಾರ್ಥಕ್ಕೋಸ್ಕರ ಮಾಡುವ ಆಟದಲ್ಲಿ ಇವರ ಮೌನ ಹೇಗೆ ಸಹಕಾರಿಯಾಗುತ್ತದೆ ಎನ್ನುವದನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ತನ್ನದಲ್ಲದ ಊರಿನಲ್ಲಿ ಶಿವರಾಮನಿಗೆ ಯಾವ ಬಂಧನವೂ ಇಲ್ಲ; ಆದರೂ ದೂರದ ಅಂಡಮಾನಿಗೆ ವರ್ಗವನ್ನು ಮ್ಯಾನೇಜರ್ ಮಾಡಿಸಿದಾಗ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲು ಯತ್ನಿಸುತ್ತಾನೆ. ಈತನಿಗೆ ತೊಂದರೆ ಕೊಟ್ಟ ಮ್ಯಾನೇಜರ್ ಸಹ ದೂರದ ಕಲ್ಕತ್ತಾಕ್ಕೆ ವರ್ಗವಾಗುವ ಕ್ರಿಯೆಯಲ್ಲಿ Karma hits back ಎನ್ನುವುದು ನೆನಪಿಗೆ ಬರುತ್ತದೆ. ಬೋಳಾದ ಕಾಡಿಗಿಂತ ಜೀವ ವೈವಿಧ್ಯತೆಯಿಂದ ತುಂಬಿರುವ ಅಂಡಮಾನ್ ದ್ವೀಪವನ್ನು ನಾಯಕ ಸಮಾಧಾನದಿಂದಲೇ ಸ್ವೀಕರಿಸುವದು ಒಂದು ಆಶಾವಾದದ ಸೂಚನೆಯೂ ಹೌದು.

ಅಬ್ಬೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷಕ್ಕೆ ಕಾರಣವಾಗುವದಿಲ್ಲ. ಆದರೆ ಮಾನವನ ಅಜ್ಞಾನವೆನ್ನುವುದು ಅವನಿಗೆ ಅರಿಯದೇ ವಿನಾಶಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ. ಸಮಸ್ಯೆಯನ್ನು ಎದುರಿಸಲು ತಾನೊಬ್ಬ ಏನು ಮಾಡಬಲ್ಲೆ ಎನ್ನುವುದಕ್ಕಿಂತ ಯಾರಾದರೂ ಒಬ್ಬರು ಪ್ರಾರಂಬಿಸುವುದು ಒಳ್ಳೆಯದು; ನಂತರ ಅದು ಹೇಗೋ ಮುಂದುವರಿಯುವುದು ಎನ್ನುವುದನ್ನು ಶಿವರಾಮ ಕಲ್ಕೆರೆಯಿಂದ ಹೊರಡುವ ಸಮಯಕ್ಕೆ ಅರಣ್ಯ ಇಲಾಖೆಯವರು ಗರುಡನಗಿರಿಗೆ ಬೇಲಿ ಹಾಕಲು ಬರುವುದನ್ನು ನೋಡಿ ಸಮಾಧಾನ ಪಡುತ್ತಾನೆ.

ಈ ಕಾದಂಬರಿಯಲ್ಲಿ ಪಾತ್ರಗಳ ಸಂಘರ್ಷ ಅಥವಾ ಮುಖಾಮುಖಿಯಿಲ್ಲ. ಆದರೆ ಪ್ರಸ್ತುತ ಸಮಾಜದಲ್ಲಿ ಕಾಡುವ ಸಮಸ್ಯೆಗಳತ್ತ ಗಮನ ಸೆಳೆಯುವ ತುಡಿತವಿದೆ. ಜೀವವೈವಿಧ್ಯದ ವಿವರಗಳಿರುವ ವಸ್ತುಗಳ ಕೊರತೆಯಿರುವ ವರ್ತಮಾನದಲ್ಲಿ ಶಶಿಧರ ಹಾಲಾಡಿಯವರು ಆ ಕುರಿತು ಹೇಳುವ ಮನಸ್ಸು ಮಾಡಿದ್ದಾರೆ. ಎಲ್ಲಿಯೂ ನೀರಸ ಅಂತ ಅನಿಸುವದಿಲ್ಲ. ಹಣದ ಹಿಂದೆ ಸಾಗುವ ಆಧುನಿಕ ವರ್ತಮಾನದ ಪ್ರತಿನಿಧಿಯಾಗಿ ಬ್ಯಾಂಕು ಇದ್ದರೆ; ಕೊನೆಗೆ ಬರುವ ಅರಣ್ಯ ಅಧಿಕಾರಿಗಳು ಬೇಲಿ ಹಾಕಲು ಬಂದು ಕಳೆದು ಹೋದ ಮಾನವನ್ನು ಪುನರುಜ್ಜೀವನಗೊಳಿಸುವ ಸಂಕೇತವಾಗಿ ಆಶಾವಾದದ ಮುಕ್ತಾಯವನ್ನು ಕೊಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಬೆಂಗಳೂರು

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Music Festival: ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Music Festival
Koo

ಬೆಂಗಳೂರು: ಸಪ್ತಕ ಸಂಸ್ಥೆಯ 19ನೇ ವಾರ್ಷಿಕ ಸಂಗೀತ ಉತ್ಸವದ ನಿಮಿತ್ತ ಮೇ 12ರಂದು ಸಂಜೆ 5.30ಕ್ಕೆ ಸಂಗೀತ ಸಂಭ್ರಮ 552ನೇ ಕಾರ್ಯಕ್ರಮವನ್ನು (Music Festival) ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕರಾದ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿ ಆಫ್‌ ಮ್ಯೂಸಿಕ್‌ ಪ್ರಾಯೋಕತ್ವದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಿಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ.

ಕೋಲ್ಕೊತಾ ಗಾಯಕಿ ವಿದುಷಿ ರುಚಿರಾ ಪಾಂಡಾ, ಬೆಂಗಳೂರಿನ ತಬಲಾ ವಾದಕ ಪಂ. ರಾಜೇಂದ್ರ ನಾಕೋಡ, ಹಾರ್ಮೋನಿಯಂ ವಾದಕ ಪಂ. ವ್ಯಾಸಮೂರ್ತಿ ಕಟ್ಟಿ, ಮುಂಬಯಿಯ ತಬಲಾ ಸೋಲೋ ಕಲಾವಿದ ಪಂ. ಯೋಗೀಶ ಸಂಸಿ, ಪುಣೆಯ ಹಾರ್ಮೋನಿಯಮ್ ಲೆಹರಾ ಕಲಾವಿದರಾದ ತನ್ಮಯ ದೇವಚಕೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Continue Reading

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading
Advertisement
karnataka weather Forecast
ಮಳೆ15 mins ago

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Food Tips Kannada
ಆಹಾರ/ಅಡುಗೆ45 mins ago

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

Narendra Modi
ದೇಶ2 hours ago

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Dina Bhavishya
ಭವಿಷ್ಯ2 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

IPL 2024
ಪ್ರಮುಖ ಸುದ್ದಿ7 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ7 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ7 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ7 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ8 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ12 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ12 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ12 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ13 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ13 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ20 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌