KS Eshwarappa's Political Journey as he Resigns Karnataka Election 2023 : ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ ಹೇಳಿದ ಮಾತಿನ ಮಲ್ಲ! - Vistara News

ಕರ್ನಾಟಕ

Karnataka Election 2023 : ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ ಹೇಳಿದ ಮಾತಿನ ಮಲ್ಲ!

Karnataka Election 2023 : ಕೆಲವೊಮ್ಮೆ ಮಾತಿನಿಂದಲೇ ಹೆಚ್ಚು ಪ್ರಚಾರದಲ್ಲಿರುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಕೆ ಎಸ್‌ ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಸಾಗಿ ಬಂದ ರಾಜಕೀಯ ಜೀವನದ ಹೆಜ್ಜೆಗುರುತುಗಳು ಇಲ್ಲಿವೆ.

VISTARANEWS.COM


on

KS Eshwarappa's Political Journey as he Resigns
ಪ್ರಧಾನಿ ಮೋದಿಯವರೊಂದಿಗೆ ಕೆ.ಎಸ್‌. ಈಶ್ವರಪ್ಪ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮಸ್ವಾಮಿ ಹುಲಕೋಡು, ವಿಸ್ತಾರ ನ್ಯೂಸ್‌, ಬೆಂಗಳೂರು
ಪಕ್ಷದ ಸೂಚನೆಯಂತೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ರಾಜೀನಾಮೆ ನೀಡಿ, ಚುನಾವಣಾ ರಾಜಕಾರಣದಿಂದ ನಿವೃತ್ತಿಯ ಘೋಷಣೆ ಮಾಡುತ್ತಿದ್ದಂತೆಯೇ ಅವರ ʻಸ್ನೇಹಿತʼ ಕೆ.ಎಸ್‌ ಈಶ್ವರಪ್ಪಗೂ ಎದೆಯಲ್ಲಿ ಢವಢವ ಶುರುವಾಗಿತ್ತು. ʻಇದೊಂದು ಬಾರಿಗೆ ತಮಗೆ ಚುನಾವಣೆ ಎದುರಿಸಲು ಅವಕಾಶ ಮಾಡಿಕೊಟ್ಟರೆ ಸಾಕಪ್ಪಾ…ʼ ಎಂದು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಅವರಿಗೆ ಮುನ್ಸೂಚನೆಗಳನ್ನಂತೂ ನೀಡಿತ್ತು.

ಅವರಿಗಿದ್ದ ಅನುಮಾನಗಳು ಈಗ ನಿಜವಾಗಿದೆ! ಕೊನೆಯ ಬಾರಿ ಚುನಾವಣೆ ಎದುರಿಸಬೇಕೆಂಬ ಅವರ ಆಸೆ ಈಡೇರುತ್ತಿಲ್ಲ, ಅವರೇ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸುವಂತಹ ವಾತಾವರಣವನ್ನು ಅವರ ಪಕ್ಷವೇ ನಿರ್ಮಾಣ ಮಾಡಿದೆ. ಹೀಗಾಗಿ ಮರು ಮಾತನಾಡದೆ ಈಶ್ವರಪ್ಪ ಎದ್ದು ಹೊರಟಿದ್ದಾರೆ. ಈ ಹಂತದಲ್ಲಿಯೂ ಪಕ್ಷ ನಿಷ್ಠೆಯನ್ನು ಅವರು ಮರೆಯಲಿಲ್ಲ, ಅವರು ಪಕ್ಷದ ಸೂಚನೆಗೆ ಮರು ಮಾತನಾಡುತ್ತಿಲ್ಲ!

ಗಣಿ ನೆಲ ಬಳ್ಳಾರಿಯಲ್ಲಿ ಜನಿಸಿದ ಈಶ್ವರಪ್ಪ ಶಿವಮೊಗ್ಗದ ಬಿ.ಬಿ ರಸ್ತೆಯಲ್ಲಿ ಬೆಳೆದು ದೊಡ್ಡವರಾದವರು. ಬಿ.ಎಚ್‌.ರಸ್ತೆ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್‌, ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದವರು. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ ನಾಯಕತ್ವ ಗುಣ ಪ್ರದರ್ಶಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ವಿಶ್ವ ಹಿಂದೂ ಪರಿಷತ್‌ನ ಮುಖಂಡ ನರಸಿಂಹ ಮೂರ್ತಿ ಐಯ್ಯಂಗಾರ್ ಪ್ರೇರಣೆಯಿಂದ ಆರ್‌ಎಸ್‌ಎಸ್‌ ಸೇರಿದ್ದ ಅವರು ನಂತರ ಎಬಿವಿಪಿಯನ್ನು ಶಿವಮೊಗ್ಗದಲ್ಲಿ ಕಟ್ಟಿದ್ದರು. 1975ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಹೋರಾಟಕ್ಕೆ ಧುಮುಕಿ ಸೆರೆಮನೆ ವಾಸ ಸಹ ಅನುಭವಿಸಿದ್ದರು.

ರಾಜಕಾರಣದ ರಾಖಿ ಭಾಯ್‌!

ಕೆಜಿಎಫ್‌ ಸಿನಿಮಾದ ರಾಖಿಭಾಯ್‌ ಅಂತೆಯೇ ಈಶ್ವರಪ್ಪ ಕೂಡ ತಾಯಿಯ ಆಸೆಯಂತೆಯೇ ದೊಡ್ಡ ರಾಜಕೀಯ ನಾಯಕರಾಗಿ ಬೆಳೆದವರು. ಶಿವಮೊಗ್ಗದ ಭೂಪಾಳಂ ಅಡಿಕೆ ಮಂಡಿಯಲ್ಲಿ ಅಡಿಕೆ ಆರಿಸುವ ಕೆಲಸ ಮಾಡಿ ಅವರನ್ನು ತಾಯಿ ಬಸಮ್ಮ ಬೆಳೆಸಿದ್ದರು. ʻʻನೀನು ಓದಿ ಕಲಿತು ದೊಡ್ಡ ವ್ಯಕ್ತಿಯಾಗುʼʼ ಎಂದು ಅವರು ಸದಾ ಹೇಳುತ್ತಿದ್ದರಂತೆ. ಹೀಗಾಗಿಯೇ ಕಷ್ಟಪಟ್ಟು ಓದಿದ್ದರು. ಬಡತನದ ಕಷ್ಟ ಗೊತ್ತಿದ್ದ ಈಶ್ವರಪ್ಪ ವಿವಿಧ ಕಂಪನಿಯ ಚಾಕಲೇಟ್‌, ʻವಿವೇಕ್‌ ಸುಪಾರಿʼಗಳನ್ನು ಮಾರಿ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿದ್ದರು. ಜತೆ ಜತೆಗೆ ಬಿಜೆಪಿಯನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಗರ ಘಟಕದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಆಗಕೇ ಅವರ ಅಣ್ಣ ಗಂಗಾಧರ್‌ ಕೂಡ ಬಿಜೆಪಿಯಲ್ಲಿ ಹೆಸರು ಮಾಡಿದ್ದರು.

ಅಣ್ಣ ಬೇಡ ಎಂದಿದ್ದಕ್ಕೆ ತಮ್ಮನಿಗೊಲಿದ ಅದೃಷ್ಟ!

1989ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅವರ ಅಣ್ಣ ಗಂಗಾಧರ್‌ ಅವರನ್ನು ಪಕ್ಷದಿಂದ ಕಣಕ್ಕಿಳಿಸಲು ನಿರ್ಧಿಸಿತ್ತು. ಆದರೆ ಸೋಲು ಖಚಿತ ಎಂದುಕೊಂಡ ಅವರ ಅಣ್ಣ ಪಕ್ಷದ ಟಿಕೆಟ್‌ ಅನ್ನು ನಿರಾಕರಿಸಿದ್ದರು. ಮತ್ತೆ ಅಭ್ಯರ್ಥಿಯ ಹುಡುಕಾಟ ನಡೆಸಿದ ಪಕ್ಷದ ನಾಯಕರಿಗೆ ಕಣ್ಣಿಗೆ ಬಿದ್ದಿದ್ದೇ ಗಂಗಾಧರ್‌ ಅವರ ತಮ್ಮ ಕೆ.ಎಸ್‌. ಈಶ್ವರಪ್ಪ. ಅಣ್ಣ ಬೇಡ ಎಂದ ಟಿಕೆಟ್‌ ಅನ್ನು ಒಪ್ಪಿಕೊಂಡ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದರು. ಅವರಿಗೆ ಅದೃಷ್ಟ ಕೈಹಿಡಿದಿತ್ತು. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಕೆ.ಎಚ್‌ ಶ್ರೀನಿವಾಸ್‌ ಅವರನ್ನು ಸೋಲಿಸಿ, ವಿಧಾನಸಭೆ ಪ್ರವೇಶಿಸಿದ್ದರು. ಆ ನಂತರ ಅವರೆಂದೂ ಹಿಂದಿರುಗಿ ನೋಡಲೇ ಇಲ್ಲ. ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲನ್ನು ಮೇಲೇರುತ್ತಲೇ ಬಂದಿದ್ದರು.

ಪಕ್ಷ ಸೇವೆ, ಸಂಘ ಪರಿವಾರದ ಮೇಲಿನ ನಿಷ್ಠೆ, ನಾಯಕತ್ವ ಗುಣ, ಹೋರಾಟ ಮನೋಭಾವ, ಬಿರುಸು ನುಡಿ, ವಿವಾದ ಸೃಷ್ಟಿ ಹೀಗೆ ಹಲವಾರು ಕಾರಣಗಳಿದ ಕೆ.ಎಸ್‌ ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಲೇ ಬಂದವರು. ಬಿಜೆಪಿ ಕಷ್ಟದಲ್ಲಿದ್ದಾಗಲೆಲ್ಲ ನೇತೃತ್ವ ವಹಿಸಿಕೊಂಡವರು. ಜತೆಗಾರರಾಗಿದ್ದ ಯಡಿಯೂರಪ್ಪ ಬಿಜೆಪಿಯಿಂದ ಸಿಡಿದು ಹೊರ ಹೋದಾಗಲೂ ಇವರು ಕಮಲ ಕೈ ಬಿಡಲಿಲ್ಲ. ಪಕ್ಷದ ನಾಯಕತ್ವವನ್ನು ವಹಿಸಿಕೊಂಡು, ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.

ಮಾತಿನಿಂದಲೇ ಸದಾ ಸುದ್ದಿ

ಯಡಿಯೂರಪ್ಪ ತಮ್ಮ ರಾಜಕೀಯ ನಡೆಗಳಿಂದಾಗಿ ರಾಜ್ಯದಲ್ಲಿ ಹೆಸರು ಮಾಡುತ್ತಿದ್ದರೆ, ಈಶ್ವರಪ್ಪ ತಮ್ಮ ಹರಿತವಾದ ನಾಲಿಗೆಯನ್ನು ಅಡ್ಡಾದಿಡ್ಡಿಯಾಗಿ ಹರಿಯ ಬಿಟ್ಟು ಸದಾ ಸುದ್ದಿಯಲ್ಲಿರುತ್ತಿದ್ದರು. ಸಚಿವರಾದಾಗಲೂ ಕೂಡ ತಮ್ಮ ಸ್ಥಾನದ ಘನತೆಯನ್ನು ಮರೆತು ಮತನಾಡಿದ್ದು ಹಲವಾರು ಬಾರಿ ವಿವಾದಕ್ಕೆ, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕಡಿ, ಬಡಿ, ಹೊಡಿ ಮಾತುಗಳಲ್ಲದೆ, ದ್ವೇಷ ಕಾರುವ ಮಾತುಗಳನ್ನು ಆಡುತ್ತಿದ್ದ ಈಶ್ವರಪ್ಪ ಇದರಿಂದ ಪಕ್ಷದ ನಾಯಕತ್ವಕ್ಕೂ ಹಲವಾರು ಬಾರಿ ಮುಜುಗರ ಉಂಟುಮಾಡಿದ್ದರು. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂಬಂತಹ ಮಾತುಗಳನ್ನು ಆಡಿಯೂ ಈಶ್ವರಪ್ಪ ಅರಗಿಸಿಕೊಳ್ಳಬಲ್ಲವರಾಗಿದ್ದರು!

ಸ್ನೇಹದ ಕಡಲಲ್ಲಿ…. ನೆನಪಿನ ದೋಣಿಯಲ್ಲಿ…
ಮಂಡ್ಯ ಮೂಲದ ಬಿ ಎಸ್‌ ಯಡಿಯೂರಪ್ಪ, ಬಳ್ಳಾರಿ ಮೂಲದ ಕೆ.ಎಸ್‌ ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ನೇಹಿತರಾಗಿ, ಬಿಜೆಪಿಯಲ್ಲಿ ನಾಯಕರಾಗಿ ಬೆಳೆದಿದ್ದೇ ರೋಚಕ ಕತೆ.
ಹೆಚ್ಚು ಕಡಿಮೆ ಇಬ್ಬರ ಕುಟುಂಬದ ಆರ್ಥಿಕ ಸ್ಥಿತಿಯೂ ಒಂದೇ ರೀತಿಯಾಗಿತ್ತು. ಸಂಘ ಪರಿವಾರದ ನಂಟಿನಿಂದಾಗಿ ಇಬ್ಬರಿಗೂ ದಾರಿ ಸ್ಪಷ್ಟವಾಗಿತ್ತು. ಇವರಿಬ್ಬರು ಒಂದೇ ಸ್ಕೂಟರ್‌ನಲ್ಲಿ ಸುತ್ತಾಡಿ ಪಕ್ಷವನ್ನು ಸಂಘಟಿಸುತ್ತಿದ್ದರು. ಶಿಕಾರಿಪುರದಲ್ಲಿ ಯಡಿಯೂರಪ್ಪ ರೈತರ ಸಮಸ್ಯೆ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬೆಳೆದರೆ, ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿ ರಾಜಕೀಯವಾಗಿ ಬೇರೂರಿದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಒಂದು ಕಾಲದಲ್ಲಿ ಜೊತೆಗೂಡಿ ಶಿವಮೊಗ್ಗದಲ್ಲಿ ವ್ಯಾಪಾರ ಕೂಡ ನಡೆಸಿದ್ದರು. ಇಬ್ಬರೂ ತಮ್ಮ ಪತ್ನಿಯರ ಹೆಸರಿನಲ್ಲಿ ಒಂದು ಕಂಪನಿಯನ್ನು ತೆರೆದಿದ್ದರು. ಜೆಎಎಂ ಎಂಬ ಸಿಮೆಂಟ್‌ ಪೈಪ್‌ ತಯಾರಿಸುವ ಕಾರ್ಖಾನೆಯನ್ನು 1994 ರಲ್ಲಿ ಆರಂಭಿಸಿದ್ದರು ಕೂಡ. ಹೀಗೆ ವ್ಯವಹಾರಿಕ ಜೋಡಿಗಳಾಗಿದ್ದ ಇವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದರು.
ಈ ಜೋಡಿಯ ಮೇಲೆ ಯಾರ ಕಣ್ಣು ಬಿದ್ದಿತ್ತೋ, ರಾಜಕೀಯವಾಗಿ ಮೇಲೇರುತ್ತಿದ್ದಂತೆಯೇ ಇವರಿಬ್ಬರ ನಡುವಿನ ಬಿರುಕೂ ಅಗಲವಾಗುತ್ತಾ ಬಂದಿತ್ತು. 2008ರ ಲೋಕ ಸಭಾ ಚುನಾವಣೆಯಲ್ಲಿ ಮಗ ಬಿ.ಎಸ್‌. ರಾಘವೇಂದ್ರ ಅವರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಮುಂದಾದಾಗ ಈಶ್ವರಪ್ಪ ಬಹಿರಂಗವಾಗಿಯೇ ವಿರೋಧಿಸಿದ್ದರು. ಇವರಿಬ್ಬರ ಸ್ನೇಹ ಹಳಸಿದ್ದು, ಆಗಲೇ ಎಲ್ಲರಿಗೂ ಗೊತ್ತಾಗಿದ್ದು.
ಮುಂದೆ ಹಲವಾರು ಬಾರಿ ಇವರಿಬ್ಬರೂ ಕಚ್ಚಾಡಿಕೊಂಡಿದ್ದಾರೆ. ಮಾತಿನ ಮೂಲಕ ತಿವಿದುಕೊಂಡಿದ್ದಾರೆ. ಯಡಿಯೂರಪ್ಪ ಲಿಂಗಾಯಿತರ ನಾಯಕರಾಗಿ ಗುರುತಿಸಿಕೊಂಡ ಹಾಗೇ ಈಶ್ವರಪ್ಪ ಕುರುಬರ ನಾಯಕರಾಗಿ ಬೆಳೆಯಬೇಕೆಂದು ರಾಯಣ್ಣ ಬ್ರಿಗೇಡ್‌ ಕಟ್ಟಿದ್ದರು. ಆದರೆ ಪಕ್ಷದ ವಿಷಯಕ್ಕೆ ಬಂದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೂ ಉಂಟು!
ಒಬ್ಬರು ಮುಖ್ಯಮಂತ್ರಿಯಾಗಿದ್ದರೆ… ಮತ್ತೊಬ್ಬರು ಉಪ ಮುಖ್ಯಮಂತ್ರಿಯಾಗಿದ್ದರು…ಈಗ ಒಂದೇ ಚುನಾವಣೆಯಲ್ಲಿ ಇವರಿಬ್ಬರೂ ಚುನಾವಣಾ ರಾಜಕೀಯದಿಂದ ನಿವೃತ್ತರಾಗುತ್ತಿದ್ದಾರೆ.

ಕಮಿಷನ್‌ ಆರೋಪ; ಸಚಿವ ಸ್ಥಾನಕ್ಕೆ ರಾಜೀನಾಮೆ

ಈಶ್ವರಪ್ಪ 2019ರಲ್ಲಿ ಯಡಿಯೂರಪ್ಪ ಸರ್ಕಾರ ರಚನೆಗೊಂಡಾಗ ಮತ್ತೆ ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅಧಿಕಾರ ನಡೆಸಲು ಬಿಡುತ್ತಿಲ್ಲ ಎಂದು ಯಡಿಯೂರಪ್ಪರ ಪುತ್ರ ವಿಜಯೇಂದ್ರರ ವಿರುದ್ಧ ಪಕ್ಷದ ವರಿಷ್ಠರಿಗೆ, ರಾಜ್ಯಪಾಲರಿಗೆ ದೂರು ನೀಡಿ ಸುದ್ದಿಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ತಮ್ಮ ಹಿರಿತನವನ್ನು ಮರೆತು ಅವರ ಸಚಿವ ಸಂಪುಟದಲ್ಲಿ ಮುಂದುವರಿದಿದ್ದರು.

ಸಚಿವರು ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದಾಗ ಸಚಿವ ಈಶ್ವರಪ್ಪರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಆಗಲೇ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಈಶ್ವರಪ್ಪರ ವಿರುದ್ಧ ಆರೋಪ ಮಾಡಿ, ದಾಖಲೆ ಒದಗಿಸಿದ್ದರು. ಆರೋಪ ತಳ್ಳಿ ಹಾಕಿದ್ದ ಈಶ್ವರಪ್ಪ ರಾಜೀನಾಮೆ ನೀಡಲಿಲ್ಲ. ಕಾಂಗ್ರೆಸ್‌ ಆಗ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ನಂತರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಇದರ ತನಿಖೆ ನಡೆದು ಈಶ್ವರಪ್ಪರ ಆರೋಪ ಮುಕ್ತರಾದರೂ ಮತ್ತೆ ಸಚಿವ ಸ್ಥಾನ ದೊರಕಿರಲಿಲ್ಲ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ, ಮುಖ್ಯಮಂತ್ರಿಗಳೊಂದಿಗೆ ಮುನಿಸಿಕೊಂಡಿದ್ದ ಈಶ್ವರಪ್ಪ ಒಂದು ರೀತಿಯಲ್ಲಿ ಮೂಲೆಗುಂಪಾಗಿದ್ದರು. ತಮ್ಮ ಮತ್ತು ಮಗ ಕಾಂತೇಶ್‌ ಅವರ ರಾಜಕೀಯ ಭವಿಷ್ಯದ ಕುರಿತು ಸದಾ ಚಿಂತಿಸುವಂತಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ನಿಂತು ಗೆದ್ದು, ಮುಂದೆ ಹೊಸ ಸರ್ಕಾರದಲ್ಲಿಯಾದರೂ ಮತ್ತೆ ಸಚಿವರಾಗುವ ಇರಾದೆ ಹೊಂದಿದ್ದರು.

ಶ್ರಮಜೀವಿಯಾಗಿದ್ದ ಈಶ್ವರಪ್ಪ ಅವರು ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಹಿಡಿದ ಕೆಲಸವನ್ನು ಮಾಡಿಯೆ ತೀರುವ ಛಲ ಮತ್ತು ಹೋರಾಟದ ಮನೋಭಾವದಿಂದಾಗಿ ಪಕ್ಷವನ್ನು ಬಹಳಷ್ಟು ಸಂದರ್ಭಗಳಲ್ಲಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಈಗ ಪಕ್ಷದ ನಿಲುವಿನಂತೆ ವಯಸ್ಸಿನ ಕಾರಣದಿಂದ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.

ಏನೇನು ಆಗಿದ್ದರು ಈಶ್ವರಪ್ಪ?

  • ವಿದ್ಯಾರ್ಥಿ ದೆಸೆಯಲ್ಲೇ ಆರ್‌ಎಸ್‌ಎಸ್‌, ಎಬಿವಿಪಿ ಕಾರ್ಯಕರ್ತರಾಗ್ಗಿದ್ದರು.
  • 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ್ದರು.
  • ಬಿಜೆಪಿ ಶಿವಮೊಗ್ಗ ತಾಲೂಕು ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದರು. ಯಡಿಯೂರಪ್ಪರೊಂದಿಗೆ ರಾಜ್ಯ ಸುತ್ತುತ್ತಿದ್ದರು.
  • 1989ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಇದು ಅವರ ಜೀವನಕ್ಕೆ ಮಹತ್ವದ ತಿರುವು ನೀಡಿತು.
  • 1991ರಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು.
  • 1993ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು.
  • 1994ರಲ್ಲಿ 2ನೇ ಬಾರಿ ವಿಧಾನಸಭೆಗೆ ಆಯ್ಕೆಯಾದರು. ಪ್ರತಿಪಕ್ಷದ ನಾಯಕರೂ ಆಗಿದ್ದರು.
  • 1995ರಲ್ಲಿ 2ನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
  • 1999ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಇದಕ್ಕೆ ದಿವಂತ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪರ ರಾಜಕೀಯ ತಂತ್ರಗಾರಿಕೆ ಕಾರಣವಾಗಿತ್ತು.
  • 2000 (ಎನ್‌ಡಿಎ ಸರ್ಕಾರದ ಅವಧಿಯಲ್ಲಿ) ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
  • 2002 ರಲ್ಲಿ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
  • 2004ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
  • 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
  • 2008ರಲ್ಲಿ ವಿಧಾನಸಭೆಗೆ 4ನೇ ಬಾರಿ ಆಯ್ಕೆ, ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
  • 2010ರಲ್ಲಿ 3ನೇ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
  • 2012ರಲ್ಲಿ ಉಪಮುಖ್ಯಮಂತ್ರಿಯಾಗಿದ್ದರು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.
  • 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
  • 2014ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆ, ಪ್ರತಿಪಕ್ಷ ನಾಯಕನಾಗಿದ್ದರು.
  • 2018ರಲ್ಲಿ 5ನೇ ಬಾರಿ ವಿಧಾನಸಭೆ ಆಗಿ ಆಯ್ಕೆ, ಪಂಚಾಯತ್‌ ರಾಜ್‌ ಸಚಿವ.
  • 2023ರ ಏಪ್ರಿಲ್‌ 11ರಂದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ.

ಇದನ್ನೂ ಓದಿ : Karnataka Elections : ಈಶ್ವರಪ್ಪ, ಶೆಟ್ಟರ್‌ ಮಾತ್ರವಲ್ಲ ಇನ್ನೂ 20 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್‌ ಇಲ್ಲ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‌ಐಟಿಯ ವಿಶೇಷ ತಂಡ ರಚನೆ; ಶೀಘ್ರ ರೆಡ್‌ ಕಾರ್ನರ್ ನೋಟಿಸ್‌ ಜಾರಿ

Prajwal Revanna Case: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲ್ಯೂ ಕಾರ್ನರ್‌ ನೋಟಿಸ್ ನೀಡಲಾಗಿತ್ತು. ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ವಿದೇಶದಿಂದ ಪ್ರಜ್ವಲ್ ಅವರನ್ನು ಕರೆತರಲು ವಿಶೇಷ ತಂಡವನ್ನು ರಚಿಸಿದೆ. ಓರ್ವ ಎಸ್‌ಪಿ, ಮೂವರು ಇನ್ಸ್‌ಪೆಕ್ಟರ್ ಹಾಗೂ ಮೂವರು ಜನ ಸಬ್ ಇನ್ಸ್‌ಪೆಕ್ಟರ್ ಈ ತಂಡದಲ್ಲಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲ್ಯೂ ಕಾರ್ನರ್‌ ನೋಟಿಸ್ ನೀಡಲಾಗಿತ್ತು. ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ವಿದೇಶದಿಂದ ಪ್ರಜ್ವಲ್ ಅವರನ್ನು ಕರೆತರಲು ವಿಶೇಷ ತಂಡವನ್ನು ರಚಿಸಿದೆ.

ಓರ್ವ ಎಸ್‌ಪಿ, ಮೂವರು ಇನ್ಸ್‌ಪೆಕ್ಟರ್ ಹಾಗೂ ಮೂವರು ಜನ ಸಬ್ ಇನ್ಸ್‌ಪೆಕ್ಟರ್ ಒಳಗೊಂಡ ತಂಡವನ್ನು ರಚಿಸಲಾಗಿದೆ. ಯೂರೋಪ್ ಬಳಿ ಇರುವ ಹಂಗೇರಿ ತಲುಪಲಿರುವ ಕರ್ನಾಟಕ ಪೊಲೀಸರು ಅಲ್ಲಿ ಹುಡುಕಾಟ ನಡೆಸಲಿದ್ದಾರೆ. ಈಗಾಗಲೇ ಭಾರತ ಹಾಗೂ ಜರ್ಮನಿ ಬಳಿ ಮ್ಯೂಚುಯಲ್ ಲೀಗಲ್ ಅಸಿಸ್ಟೆಂಟ್ ಟ್ರೀಟಿ (MLAT) ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸಿಬಿಐ ಸಹಾಯದಿಂದ ಇಂಟರ್ ಪೋಲ್ ಅಧಿಕಾರಿಗಳ ಜತೆ ಸಹ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ಇರುವುದರಿಂದ ಅವರು ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಎಸ್ಐಟಿ ವಿಶೇಷ ತನಿಖಾ ದಳ ಮಾಹಿತಿ ಕಲೆ ಹಾಕಿದೆ. ಒಂದು ವೇಳೆ ಇಂಡಿಯನ್ ಎಂಬಸ್ಸಿ ಕಡೆಯಿಂದ ಜರ್ಮನಿ ಎಂಬಸ್ಸಿ ಜತೆಗೆ ಮಾತುಕತೆ ನಡೆದರೆ ಖಂಡಿತವಾಗಲೂ ಪ್ರಜ್ವಲ್ ರೇವಣ್ಣ ಎಸ್ಐಟಿ ತೆಕ್ಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಚಿಂತನೆ

ಈಗಾಗಲೇ ಪ್ರಜ್ವಲ್ ಪತ್ತೆಗೆ ಬ್ಲ್ಯೂ ಕಾರ್ನರ್‌ ನೋಟಿಸ್ ಹೊರಡಿಸಿದ ಅಧಿಕಾರಿಗಳು ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಚಿಂತನೆ ನಡೆಸಿದ್ದಾರೆ. ಇಂದು ಅಥವಾ ನಾಳೆ ರೆಡ್ ಕಾರ್ನರ್ ನೋಟಿಸ್ ಸರ್ವ್ ಮಾಡಲು ಸಿದ್ಧತೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಜತೆ ಚರ್ಚೆ ನಡೆಸಿ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಸರ್ವ್ ಮಾಡಲಾಗುತ್ತದೆ.

ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾದರೆ ಏನಾಗುತ್ತೆ?

ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಮನವಿ ಮಾಡಲು ಎಸ್‌ಐಟಿ ಚಿಂತನೆ ನಡೆಸಿದೆ. ಇದಕ್ಕೆ ಮೊದಲು ಸಿಬಿಐ ಸಂಸ್ಥೆಯು ಇಂಟರ್‌ಪೋಲ್‌ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೋಟಿಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ. ಹೀಗಾಗಿ ಪ್ರಜ್ವಲ್‌ ವಿರುದ್ಧ ಈ ಕ್ರಮಕ್ಕೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna case: ಪ್ರಜ್ವಲ್‌ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್‌ ಲಿಸ್ಟ್‌ನಲ್ಲಿ ಸಂಸದ!

ಬ್ಲ್ಯೂ ಕಾರ್ನರ್‌ ನೋಟಿಸ್‌ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆರೋಪಿ ಯಾವ ದೇಶದಲ್ಲಿ ಇದ್ದಾರೆ? ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನಗಳನ್ನು ಈ ಮೂಲಕ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಈ ನೋಟಿಸ್‌ ನೀಡಲಾಗಿದ್ದು, ಇದು ಸುಳಿವು ಪಡೆಯಲು ಮುಖ್ಯವಾಗಿದೆ. ಆದರೆ ಇದರಿಂದ ಪ್ರಜ್ವಲ್‌ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ.

Continue Reading

ದೇಶ

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

K.S. Rajanna:ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಜಣ್ಣ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ, ಮಾತನಾಡಿದರು.

ರಾಜಣ್ಣ ನಂತರ ಪಕ್ಕದಲ್ಲೇ ಕುಳಿತಿದ್ದ ಅಮಿತ್‌ ಅವರ ಜೊತೆಯೂ ಮಾತನಾಡಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ತಲೆಬಾಗಿ ನಮಸ್ಕರಿಸಿದರು.

VISTARANEWS.COM


on

K S Rajanna
Koo

ನವದೆಹಲಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಈ ಸಾಲಿನ ನಾಗರಿಕ ಪದ್ಮ ಪ್ರಶಸ್ತಿ(Padma Award)ಯನ್ನು ಪ್ರದಾನ ಮಾಡಿದರು. ಅಲ್ಲಿ ಪದ್ಮಶ್ರೀ ಪ್ರಶಸ್ತಿ(Padmashri Award) ಸ್ವೀಕರಿಸಲು ಬಂದಿದ್ದ ಈ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಅಲ್ಲಿದ್ದ ಗಣ್ಯರು ಭಾವುಕರಾದ್ದದ್ದು ನಿಜ. ಬಾಲ್ಯದಲ್ಲಿ ಪೋಲಿಯೋದಿಂದ ಎರಡೂ ಕೈ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಉದ್ಯಮಿಯಾಗಿ ಹಲವು ಅಂಗವಿಕಲರಿಗೆ ಉದ್ಯೋಗ ನೀಡಿ, ಪ್ಯಾರಾ-ಒಲಂಪಿಕ್ಸ್ ನಲ್ಲಿ ಪಾಲ್ಗೊಂಡು ದೇಶಕ್ಕೆ ಚಿನ್ನದ ಪದಕದ ಗರಿಯನ್ನೂ ತಂದಿದ್ದ ಈ ವ್ಯಕ್ತಿ ಬೇರೆ ಯಾರೂ ಅಲ್ಲ ಹೆಮ್ಮೆಯ ಕನ್ನಡಿಗ ಕೆ.ಎಸ್.ರಾಜಣ್ಣ(K.S. Rajanna)

ಗುರುವಾರ ನಡೆದ ಪದ್ಮ ಪ್ರಶಶ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಜಣ್ಣ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ, ಮಾತನಾಡಿದರು.

ರಾಜಣ್ಣ ನಂತರ ಪಕ್ಕದಲ್ಲೇ ಕುಳಿತಿದ್ದ ಅಮಿತ್‌ ಅವರ ಜೊತೆಯೂ ಮಾತನಾಡಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ತಲೆಬಾಗಿ ನಮಸ್ಕರಿಸಿದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ಹೊಡೆದು ಅವರನ್ನು ಅಭಿನಂದಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ನೋಡುಗರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಣ್ಣ ಹಿನ್ನೆಲೆ ಏನು?

ಕೇವಲ 11 ತಿಂಗಳ ಮಗುವಾಗಿದ್ದಾಗ ಮಹಾಮಾರಿ ಪೋಲಿಯೋದಿಂದ ತಮ್ಮ ಎರಡೂ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ರಾಜಣ್ಣ, ತಮ್ಮ ಕೊರತೆಗಳ ಬಗ್ಗೆ ಕುಗ್ಗದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದ ಅವರು ಉದ್ಯಮಿಯಾದರು. ತಮ್ಮ ರೀತಿಯೇ ಸಮಾಜದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರವ ಅನೇಕರಿಗೆ ಕೆಲಸ ನೀಡುವ ಮೂಲಕ ವಿಭಿನ್ನರಾಗಿ ನಿಂತವರು ರಾಜಣ್ಣ. 2002ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ರಾಜಣ್ಣ ಅವರು ಡಿಸ್ಕಸ್ ಥ್ರೋದಲ್ಲಿ ಚಿನ್ನ ಹಾಗೂ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು.

ಇದನ್ನೂ ಓದಿ: CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

ಸಕ್ಕರೆ ಸವಿದಷ್ಟೇ ಖುಷಿಯಾಯ್ತು ಎಂದ ರಾಜಣ್ಣ

ಇನ್ನು ಪದ್ಮ ಪ್ರಶಸ್ತಿ ಪಡೆದಿರುವ ಬಗ್ಗೆ ರಾಜಣ್ಣ, ಮಂಡ್ಯ ಜಿಲ್ಲೆ ಮೂಲದವನಾದ ನನಗೆ ಈ ಪ್ರಶಸ್ತಿಯು ಸಕ್ಕರೆ ತಿಂದಂತೆ ಸಿಹಿ ಎನಿಸುತ್ತಿದೆ. ದೈಹಿಕ ನ್ಯೂನತೆ ಹೊಂದಿರುವ ವ್ಯಕ್ತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲ. ಈ ಪ್ರಶಸ್ತಿಯು ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ಸದಸ್ಯರಾಗಿ ಅಂಗವೈಕಲ್ಯವುಳ್ಳ ವ್ಯಕ್ತಿಯನ್ನು ನೇಮಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರೇರಣೆ ನೀಡಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

Continue Reading

ಕ್ರೈಂ

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

Viral News: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಲೇಟೆಸ್ಟ್‌ ಉದದಾಹರಣೆ ಈ ಘಟನೆ. ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಬಿ.ಟಿ.ಎಂ‌. ಲೇ ಔಟ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral News
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಬಿಡಿ ಹಗಲಿನಲ್ಲೇ ಮಹಿಳೆಯರು, ಯುವತಿಯರು, ಮಕ್ಕಳು ಓಡಾಡಲು ಭಯಪಡುವಂತಾಗಿದೆ. ಇದಕ್ಕೆ ಲೇಟೆಸ್ಟ್‌ ಉದದಾಹರಣೆ ಈ ಘಟನೆ. ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ರಸ್ತೆ ಬದಿಯಲ್ಲಿ ಸ್ಕೂಟಿ‌ ನಿಲ್ಲಿಸಿಕೊಂಡು ನಿಂತಿದ್ದ ಯುವತಿ ಬಳಿಗೆ ಬಂದ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರು ಹಿಂದಿಯಲ್ಲಿ ನಿಂದಿಸಿದ್ದಾರೆ. ಇದು ಬಿ.ಟಿ.ಎಂ‌. ಲೇ ಔಟ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ರಸ್ತೆಯ ಪಕ್ಕ ಸ್ಕೂಟಿ ನಿಲ್ಲಿಸಿ ಯುವತಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು, ʼʼಕುಡಿದ ನಶೆಯಲ್ಲಿ ರೋಡ್ ಶೋ ಮಾಡುತ್ತೀಯಾ?ʼʼ ಎಂದು ಬೈದಿದ್ದಾರೆ. ಯುವಕರ ಅವಾಚ್ಯ ನಿಂದನೆಯಿಂದ ಒಂದು ಕ್ಷಣ ಗಾಬರಿಗೊಳಗಾದ ಯುವತಿ ಬಳಿಕ ಅವರನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಪುಂಡರು ಅಶ್ಲೀಲ ಪದಗಳಿಂದ ಯುವತಿಯನ್ನು ಹಿಂದಿಯಲ್ಲಿ ನಿಂದಿಸಿದ್ದಾರೆ. ಹೀಗೆ ಯುವಕರು ಕೆಲಕಾಲ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆ ಅನುಚಿತವಾಗಿ ವರ್ತಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ನಡುಬೀದಿಯಲ್ಲಿ ಲೈಂಗಿಕ ಕಿರುಕುಳ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲೇ ಬಿಹಾರ ಮೂಲದ ದಂಪತಿಗೆ ಲೈಂಗಿಕ ಕಿರುಕುಳದ ಕರಾಳ ಅನುಭವ ಆಗಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ್ದಾರೆ. ನಗರದಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಸೇರ್ಪಡೆ. ರಾತ್ರಿ ಸಮಯದಲ್ಲಿ ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ಒಂದು ವಾರದ ಹಿಂದೆ 10:30ರ ಸುಮಾರಿಗೆ ನಡೆದ ಘಟನೆ ಇದು.

ಜತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ದಂಪತಿ ಬಿಹಾರ ಮೂಲದವರಾಗಿದ್ದು, ಈ ದಂಪತಿಗೆ ನಿನ್ನೆ ರಾತ್ರಿ ಕರಾಳ ಅನುಭವವಾಗಿದೆ. ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ. ಹೀಗಾಗಿ ಸದ್ಯ ಬೆಂಗಳೂರಿಗರು ಒಬ್ಬರೇ ಓಡಾಡಲು ಭಯಪಡುವಂತಾಗಿದೆ.

ಇದನ್ನೂ ಓದಿ: Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ

Continue Reading

ಕರ್ನಾಟಕ

Heavy Rain: ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಹಲವೆಡೆ ರಸ್ತೆಯಲ್ಲೇ ಹರಿದ ನೀರು, ಸಂಚಾರ ಅಸ್ತವ್ಯಸ್ತ

Heavy Rain: ಬೆಂಗಳೂರು ನಗರದಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದೆ. ಶುಕ್ರವಾರ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಜತೆಗೆ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ. ಆರ್‌.ಆರ್.ನಗರ, ಜ್ಞಾನ ಭಾರತಿ, ಏರ್‌ಪೋರ್ಟ್‌ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಕೆಲವೆಡೆ ಮರದ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದವು.

VISTARANEWS.COM


on

Heavy Rain
Koo

ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದೆ. ಶುಕ್ರವಾರ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಜತೆಗೆ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ. ಆರ್‌.ಆರ್.ನಗರ, ಜ್ಞಾನ ಭಾರತಿ, ಏರ್‌ಪೋರ್ಟ್‌ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಕೆಲವೆಡೆ ಮರದ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದವು (Heavy Rain).

ರಸ್ತೆಯಲ್ಲಿ ಸಿಲುಕಿದ ವಾಹನಗಳು

ಬೆಂಗಳೂರಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ಮೈಸೂರು ರಸ್ತೆಯಲ್ಲಿ ವಾಹನ ಸವಾರರು ಸಿಲುಕಿ ಹಾಕಿಕೊಂಡಿದ್ದರು. ಆರ್‌.ಆರ್. ನಗರ ಆರ್ಚ್ ಬಳಿ ರಸ್ತೆಯಲ್ಲಿ ನೀರು ಉಕ್ಕಿ ಹರಿದು 25ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡು ಸವಾರರು ಪರದಾಡಿದರು. ರಸ್ತೆಯಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತುಕೊಂಡಿತ್ತು.

ಇನ್ನು ನಾಗರಭಾವಿ ಎನ್‌ಜಿಎಫ್‌ ಬಡಾವಣೆಯ 9ನೇ ಕ್ರಾಸ್‌ನಲ್ಲಿ ಬೆಸ್ಕಾಂ ಲೈಟ್ ಕಂಬ ಹಾಗೂ ಬೃಹತ್ ಮರವೊಂದು ಶೆಡ್ ಮನೆಯ ಮುಂದೆ ಬಿದ್ದಿದೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಚಾಮರಾಜಪೇಟೆಯಲ್ಲೂ ಮನೆಗಳಿಗೆ ನೀರು ನುಗ್ಗಿದೆ‌.‌ ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಿಂದ ಹರಿಯುವ ನೀರು ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ಕೆಂಗೇರಿ – 89 ಮಿ.ಮೀ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62ಮಿ.ಮೀ.
ನಾಯಂಡನಹಳ್ಳಿ – 61.5 ಮಿ.ಮೀ.
ಹೆಮ್ಮಿಗೆಪುರ – 61 ಮಿ.ಮೀ.
ಆರ್ ಆರ್ ನಗರ – 60 ಮಿ.ಮೀ.
ಮಾರುತಿ ಮಂದಿರ – 51.50 ಮಿ.ಮೀ.
ವಿದ್ಯಾಪೀಠ – 50 ಮಿ.ಮೀ.
ಉತ್ತರಹಳ್ಳಿ – 42 ಮಿ.ಮೀ.
ಹಂಪಿನಗರ – 39 ಮಿ.ಮೀ.
ಯಲಹಂಕ – 38.50 ಮಿ.ಮೀ.
ಜಕ್ಕೂರು – 38 ಮಿ.ಮೀ.
ಕೊಟ್ಟಿಗೆಪಾಳ್ಯ – 33 ಮಿ.ಮೀ.
ಕೊಡಿಗೆಹಳ್ಳಿ – 28.50 ಮಿ.ಮೀ.
ನಂದಿನಿ ಲೇಔಟ್ – 28 ಮಿ.ಮೀ.

ಇನ್ನೂ ಮೂರ್ನಾಲ್ಕು ದಿನಗಳ ಕಾಲ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ 40-50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ಕೋಲಾರದಲ್ಲೂ ಮಳೆಯು ಅಬ್ಬರಿಸಲಿದೆ. ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾದರೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾದರೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಇದನ್ನೂ ಓದಿ: Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ

Continue Reading
Advertisement
Narendra Modi
ದೇಶ46 seconds ago

Narendra Modi: ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ, ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ; ಪ್ರಧಾನಿ ಮೋದಿ ವಿಡಿಯೋ ವೈರಲ್

Prajwal Revanna Case
ಕರ್ನಾಟಕ5 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‌ಐಟಿಯ ವಿಶೇಷ ತಂಡ ರಚನೆ; ಶೀಘ್ರ ರೆಡ್‌ ಕಾರ್ನರ್ ನೋಟಿಸ್‌ ಜಾರಿ

K S Rajanna
ದೇಶ1 hour ago

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

Viral News
ಕ್ರೈಂ1 hour ago

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

CAA
ದೇಶ2 hours ago

CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

Heavy Rain
ಕರ್ನಾಟಕ2 hours ago

Heavy Rain: ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಹಲವೆಡೆ ರಸ್ತೆಯಲ್ಲೇ ಹರಿದ ನೀರು, ಸಂಚಾರ ಅಸ್ತವ್ಯಸ್ತ

Dharwad News
ಕ್ರೈಂ2 hours ago

Dharwad News: ರಥೋತ್ಸವ ವೇಳೆ ದುರಂತ; ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

cyber crime
ದೇಶ3 hours ago

Cyber crime: ದೇಶಾದ್ಯಂತ 28,000ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳು ಬ್ಲಾಕ್‌!

Murder Case
ಕ್ರೈಂ3 hours ago

Murder Case: ಕೊಡಗಿನಲ್ಲಿ ಬಾಲಕಿಯ ರುಂಡ ಕತ್ತರಿಸಿದ್ದ ಆರೋಪಿಯ ಬಂಧನ

karnataka Weather Forecast
ಮಳೆ4 hours ago

Karnataka Weather : ವಾರಾಂತ್ಯದಲ್ಲಿ ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ ಅಬ್ಬರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ20 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ22 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ23 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌