ತುಮಕೂರು ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮೂರು ಪಕ್ಷಗಳಿಗೂ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು - Vistara News

ಕರ್ನಾಟಕ

ತುಮಕೂರು ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮೂರು ಪಕ್ಷಗಳಿಗೂ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

ತುಮಕೂರು ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕಲ್ಪತರು ನಾಡಿನಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿ ತನ್ನ ಬಿಗಿ ಹಿಡಿತ ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಟ್ರ್ಯಾಕ್‌ಗೆ ಮರಳಲು ಹವಣಿಸುತ್ತಿವೆ. ಜಿಲ್ಲೆಯ ಕ್ಷೇತ್ರಗಳ ಸದ್ಯದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

VISTARANEWS.COM


on

Karnataka Election 2023 tumakuru district constituency wise election analysis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Karnataka Election 2023
tumakuru district constituency 
election analysis

ಹರಿಶ್ಚಂದ್ರ ನಾಯ್ಕ, ವಿಸ್ತಾರ ನ್ಯೂಸ್, ತುಮಕೂರು
ಬೆಂಗಳೂರು ಮತ್ತು ಬೆಳಗಾವಿಯನ್ನ ಹೊರತು ಪಡಿಸಿದರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಜಿಲ್ಲೆ ತುಮಕೂರು. ಹೀಗಾಗಿಯೇ ಪ್ರಮುಖ ಮೂರೂ ಪಕ್ಷಗಳು ತುಮಕೂರು ಜಿಲ್ಲೆಯ ಮೇಲೆ ಕಣ್ಣಿಟ್ಟಿವೆ. ಕಲ್ಪತರು ನಾಡು ಎಂದೇ ಕರೆಸಿಕೊಳ್ಳುವ ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. 1994ರ ವಿಧಾನಸಭಾ ಚುನಾವಣೆಯಲ್ಲಂತೂ ಬರೋಬ್ಬರಿ 9 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಮೂಲಕ ದೇವೇಗೌಡರು ಮುಖ್ಯಮಂತ್ರಿ ಪಟ್ಟಕ್ಕೇರುವಲ್ಲಿ ತುಮಕೂರು ಜಿಲ್ಲೆಯ ಮತದಾರರು ಪ್ರಮುಖ ಪಾತ್ರ ವಹಿಸಿದ್ದರು.

ಕಾಂಗ್ರೆಸ್ ಕೂಡ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿಕೊಂಡು ಬಂದಿತ್ತು. ಎರಡು ದಶಕಗಳ ಹಿಂದೆ ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದ್ದ ಪೈಪೋಟಿ ಈಗ ಬಿಜೆಪಿಯ ಸಂಘಟನೆಯ ಬಲದಿಂದಾಗಿ ತ್ರಿಕೋನ ಕಣವಾಗಿ ಬದಲಾಗಿದೆ. ಸದ್ಯದ ಬಲಾಬಲವನ್ನ ಗಮನಿಸುವುದಾದರೆ ಬಿಜೆಪಿ ಉಳಿದ ಎರಡೂ ಪ್ರಮುಖ ಪಕ್ಷಗಳಿಗಂತ ಹೆಚ್ಚು (ಉಪಚುನಾವಣೆ ಸೇರಿ ಒಟ್ಟು 5) ಸ್ಥಾನವನ್ನ ಹೊಂದಿದೆ. ಇದೇ ಹುಮ್ಮಸ್ಸಿನಲ್ಲಿ ಈ ಬಾರಿಯ (Karnataka Election 2023) ಈ ಬಾರಿಯ ಚುನಾವಣೆಯಲ್ಲಿಯೂ ಪ್ರಚಾರ ನಡೆಸುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಮೇಲಿನ ತಮ್ಮ ಹಿಡಿತವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿವೆ.

Karnataka Election 2023
tumakuru district constituency 
election analysis

ಬಂಡಾಯ ಮತ್ತು ಪಕ್ಷಾಂತರ: ತುಮಕೂರು ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸತತ ನಾಲ್ಕು ಬಾರಿ ಗುಬ್ಬಿ ಕ್ಷೇತ್ರದಿಂದ ವಿಧಾನಸಭಾ ಪ್ರವೇಶಿಸಿದ್ದ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ತೊರೆದು ಈ ಬಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಸಚಿವ ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್‌ಎಸ್‌ಎಸ್‌ ಕಟ್ಟಾಳು, ಮಾಜಿ ಶಾಸಕ ಕಿರಣ್ ಕುಮಾರ್ ತಮಗೆ ಟಿಕೆಟ್ ಸಿಗಲ್ಲಿಲಲ್ಲ ಎನ್ನುವುದು ಖಚಿತವಾಗುತ್ತಿದ್ದಂಥೆಯೇ ಕಾಂಗ್ರೆಸ್ ಸೇರ್ಪಡೆಗೊಂಡು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಈ ಬಾರಿಯ ಚುನಾವಣೆಯಲ್ಲಿ ಗಮನಸೆಳೆಯುತ್ತಿವೆ.

ತುಮಕೂರು ನಗರ: ಇಬ್ಬರ
ಜಗಳ ಮೂರನೇಯವನಿಗೆ ಲಾಭ?

ಶೈಕ್ಷಣಿಕ ನಗರಿ ಎಂದೇ ಹೆಸರಾಗಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಎರಡು ದಶಕಗಳ ಕಾಲ ಹಿಡಿತ ಸಾಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿಯಾಗಿ 1994ರಿಂದ 2008ರವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಜಿ.ಬಿ.ಜ್ಯೋತಿ ಗಣೇಶ್‌ ಸ್ಪರ್ಧಿಸಿದ್ದ ಪರಿಣಾಮ ಲಿಂಗಾಯತ ವೀರಶೈವ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿ ಗಣೇಶ್‌ ಇಬ್ಬರೂ ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ಜಯಗಳಿಸಿದ್ದರು.

2018ರ ಚುನಾವಣೆಯಲ್ಲಿ ಜಿ. ಬಿ. ಜ್ಯೋತಿ ಗಣೇಶ್‌ ಗೆಲ್ಲುವ ಮೂಲಕ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಗಿತ್ತು. ಈ ಬಾರಿ ಬಿಜೆಪಿ ಮತ್ತೆ ಹಾಲಿ ಶಾಸಕ ಜ್ಯೋತಿ ಗಣೇಶ್‌ಗೆ ಮಣೆ ಹಾಕಿದೆ. ಹೀಗಾಗಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ಕ್ಷೇತ್ರದಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಸೊಗಡು ಶಿವಣ್ಣ ಬಿಜೆಪಿಯನ್ನ ಸೋಲಿಸುವ ಪಣ ತೊಟ್ಟಿದ್ದಾರೆ. ಇದು ಬಿಜೆಪಿಗೆ ತಲೆನೋವು ತಂದಿಟ್ಟಿದೆ.

ಇತ್ತ ಕಾಂಗ್ರೆಸ್‌ ವಾಡಿಕೆಯಂತೆಯೇ ಮುಸ್ಲಿಮ್‌ ಅಭ್ಯರ್ಥಿಗೆ ಟಿಕೆಟ್‌ ನೀಡಿದ. ಕಳೆದ 40 ವರ್ಷಗಳಿಂದ ಮಾಜಿ ಶಾಸಕ ಷಫೀ ಅಹಮದ್‌ ಕುಟುಂಬಕ್ಕೆ ಕಾಂಗ್ರೆಸ್‌ 11 ಬಾರಿ ಟಿಕೆಟ್‌ ನೀಡಿತ್ತು. ಅದರಲ್ಲಿ ಮೂರು ಬಾರಿ ಕಾಂಗ್ರೆಸ್‌ ಗೆದ್ದಿತ್ತು. ಆದರೆ ಈ ಬಾರಿ ಕುಟುಂಬ ರಾಜಕಾರಣಕ್ಕೆ ಬ್ರೇಕ್‌ ಹಾಕಲಾಗಿದೆ. ಇಕ್ಬಾಲ್ ಅಹಮದ್ ಎಂಬ ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್‌ ಮಣೆಹಾಕಿದೆ. ತಮ್ಮ ಕುಟುಂಕ್ಕೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರಗೊಂಡು ಮಾಜಿ ಶಾಸಕ ಷಫೀ ಅಹಮದ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಇನ್ನು ಕಳೆದ ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಎನ್.ಗೋವಿಂದರಾಜು ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದಾರೆ. ಅನುಕಂಪದ ಆಧಾರದ ಮೇಲೆ ಚುನಾವಣೆಯನ್ನ ಎದುರಿಸಲು ಮುಂದಾಗಿರುವ ಅವರು ಎರಡು ಪಕ್ಷಗಳಲ್ಲಿನ ಅಸಮಾಧಾನದ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಆಡಿಯೋ ಮತ್ತು ವಿಡಿಯೋ ತುಣುಕುಗಳಿಂದ ಗೋವಿಂದರಾಜುಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಜಿ.ಬಿ.ಜ್ಯೋತಿ ಗಣೇಶ್ (ಬಿಜೆಪಿ): 60,421 – ಎನ್.ಗೋವಿಂದರಾಜು (ಜೆಡಿಎಸ್): 55, 128 -ಗೆಲುವಿನ ಅಂತರ: 5,293

ತುಮಕೂರು ಗ್ರಾಮಾಂತರ
ಮದಗಜಗಳ ಕಾಳಗದಲ್ಲಿ
ಗೆಲ್ಲುವವರು ಯಾರು?

ತುಮಕೂರು ನಗರವನ್ನ ಸುತ್ತುವರೆದಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿಯಿದೆ. ಜೆಡಿಎಸ್‌ ಅಭ್ಯರ್ಥಿ, ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಮತ್ತು ಬಿಜೆಪಿಯ ಸುರೇಶ್ ಗೌಡ ನಡುವಿನ ಜಿದ್ದಾಜಿದ್ದಿಗೆ ಹೆಸರುವಾಸಿಯಾರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ.

2008ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಮಧುಗಿರಿಯಿಂದ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಎದುರು ಸೋಲು ಕಂಡಿದ್ದ ಅವರು, ನೇರವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕಾರಣ ಪ್ರವೇಶಿಸಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಮದಗಜಗಳ ಕಾಳಗ. ಸುರೇಶ್ ಗೌಡ ಎದುರು 2013ರ ಚುನಾವಣೆಯಲ್ಲಿ ಸೋತಿದ್ದ ಗೌರಿಶಂಕರ್, 2018ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು.

ಆದರೆ, ಚುನಾವಣೆ ವೇಳೆ ಗೌರಿಶಂಕರ್ ಜನರಿಗೆ ನಕಲಿ ವಿಮಾ ಬಾಂಡ್‌ಗಳನ್ನು ವಿತರಿಸಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ, ಅವರ ಶಾಸಕತ್ವವನ್ನು ಅಸಿಂಧುಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಇದರಿಂದ ಗೌರಿಶಂಕರ್ ರಾಜಕೀಯ ಜೀವನಕ್ಕೇ ಕುತ್ತು ಬರುವ ಸಾಧ್ಯತೆ ಇತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಗೌರಿಶಂಕರ್ 2023ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಆದೇಶ ನೀಡಿದೆ. ಇದರಿಂದ ಗೌರಿಶಂಕರ್ ಸ್ವಲ್ಪ ನಿರಾಳರಾಗಿದ್ದಾರೆ.

ಇನ್ನು ಇದೇ ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಶಾಸಕರಾಗಿರುವ ಬಿಜೆಪಿ ಸುರೇಶ್‌ ಗೌಡ ಕ್ಷೇತ್ರದ ತುಂಬಾ ಸಾಕಷ್ಟು ಓಡಾಟ ನಡೆಸಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಸುರೇಶ್‌ ಗೌಡ ಈ ಬಾರಿ ಗೆಲ್ಲಲೇಬೇಕು ಎಂದು ವಿವಿಧ ಕಸರತ್ತು ನಡೆಸಿದ್ದಾರೆ. ಸಮಾವೇಶಗಳ ಮೇಲೆ ಸಮಾವೇಶಗಳನ್ನ ಮಾಡುತ್ತಾ, ರಾಜ್ಯ, ರಾಷ್ಟ್ರೀಯ ನಾಯಕರ ಮೂಲಕ ಪ್ರಚಾರ ನಡೆಸುತ್ತಾ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.

ಹೈ ಕೋರ್ಟ್‌ ತೀರ್ಪಿನ ಬಳಿಕ ಕೊಂಚ ಹಿನ್ನಡೆ ಅನುಭವಿಸಿರುವ ಗೌರಿಶಂಕರ್‌ ಕೂಡ ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯಪಡೆ ಹೊಂದಿದ್ದಾರೆ. ಕೊರೊನಾ ಸಂದರ್ಭದ ಸೇವೆ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆಗೆ ಮುಂದಾಗಿದ್ದಾರೆ. ಈ ಮದಗಜಗಳ ಕಾಳಗದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಕಾದುನೋಡಬೇಕಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಡಿ.ಸಿ.ಗೌರಿಶಂಕರ್ (ಜೆಡಿಎಸ್): 82,740- ಸುರೇಶ್ ಗೌಡ (ಬಿಜೆಪಿ): 77, 100- ಗೆಲುವಿನ ಅಂತರ: 5,640

ಚಿಕ್ಕನಾಯಕನಹಳ್ಳಿ:
ತ್ರಿಕೋನ ಸ್ಪರ್ಧೆ

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಹಾಗೂ ಎಸ್ಸಿ, ಎಸ್ಟಿ ಮತಗಳೇ ಹೆಚ್ಚು ನಿರ್ಣಾಯಕ. ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನ ನೋಡುವುದಾದರೆ, ಎರಡು ಚುನಾವಣೆಗಳನ್ನ ಹೊರತುಪಡಿಸಿದರೆ, ಒಬ್ಬ ಅಭ್ಯರ್ಥಿ ನಿರಂತರವಾಗಿ ಎರಡು ಅವಧಿಗೆ ಗೆದ್ದ ಉದಾಹರಣೆ ಇಲ್ಲ. ಸಚಿವ ಮಾಧುಸ್ವಾಮಿ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಪಕ್ಷ ಯಾವುದು ಅನ್ನೋದಕ್ಕಿಂತ ಹೆಚ್ಚಾಗಿ ವ್ಯಕ್ತಿಯ ವರ್ಚಸ್ಸಿನ ಆಧಾರದ ಮೇಲೆ ರಾಜಕೀಯ ನಡೆಯಲಿದೆ.

ಜೆಡಿಎಸ್‌ ನಿಂದ ಸ್ಪರ್ಧಿಸಿರುವ ಸುರೇಶ್‌ ಬಾಬು ಕುರುಬ ಸಮುದಾಯಕ್ಕೆ ಸೇರಿದವರಾದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಧುಸ್ವಾಮಿ ಮತ್ತು ಕಿರಣ್‌ ಕುಮಾರ್‌ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೆ ಲಿಂಗಾಯತ ಸಮುದಾಯದ ಮಾಧುಸ್ವಾಮಿ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಲಿಂಗಾಯತರಷ್ಟೇ ಪ್ರಬಲರಾಗಿರುವ ಕುರುಬರು ಮತ್ತು ಮುಸ್ಲಿಮರು ಮಾಧುಸ್ವಾಮಿಗೆ ತಿರುಗೇಟು ನೀಡಲು ರೆಡಿಯಾಗಿದ್ದಾರೆ. ಇವೆಲ್ಲ ಈ ಬಾರಿಯ ಚುನಾವಣಾ ಕಣದಲ್ಲಿ ಪ್ರತಿಫಲನಗೊಳ್ಳಲಿವೆ ಎನ್ನಲಾಗುತ್ತಿದೆ.

ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕಿರಣ್ ಕುಮಾರ್ ಮೂಲತಃ ಬಿಜೆಪಿಯವರು. ಆರ್‌ಎಸ್‌ಎಸ್‌ ಕಟ್ಟಾಳು. ಬಿಜೆಪಿಯಿಂದಲೇ ಒಂದು ಬಾರಿ ಪಕ್ಕದ ಕಳ್ಳಂಬೆಳ್ಳ ಕ್ಷೇತ್ರದಿಂದ ಶಾಸಕರಾಗಿದ್ದವರು. ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿರಣ್ ಕುಮಾರ್, ತಮಗೆ ಟಿಕೆಟ್ ಸಿಗುವುದಿಲ್ಲ ಅನ್ನುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಮೂಲ ಬಿಜೆಪಿ ಕಾರ್ಯಕರ್ತರು ಕಿರಣ್ ಕುಮಾರ್‌ಗೆ ಬೆಂಬಲ ನೀಡುವ ಸಾಧ್ಯೆತೆಗಳಿವೆ. ಮಾಧುಸ್ವಾಮಿ ಮತ್ತು ಕಿರಣ್‌ಕುಮಾರ್‌ ನಡುವಿನ ಪೈಪೋಟಿ ಜೆಡಿಎಸ್‌ ಸುರೇಶ್ ಬಾಬುಗೆ ಲಾಭ ತಂದುಕೊಡುವ ಸಾಧ್ಯತೆಯೂ ಇದೆ.

ಕಳೆದ ಬಾರಿಯ ಫಲಿತಾಂಶ ಏನು?
ಜೆ.ಸಿ.ಮಾಧುಸ್ವಾಮಿ (ಬಿಜೆಪಿ) : 69,612 – ಸಿ.ಬಿ.ಸುರೇಶ್ ಬಾಬು (ಜೆಡಿಎಸ್): 59,335- ಗೆಲುವಿನ ಅಂತರ: 10,227

ತುರುವೇಕೆರೆ: ಬಿಜೆಪಿ
ಜೆಡಿಎಸ್‌ ನಡುವೆ ಪೈಪೋಟಿ

‌ತೆಂಗು ಮತ್ತು ಅಡಿಕೆ ಬೆಳೆಗಾರರೇ ಹೆಚ್ಚಿರುವ ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ. ಹೀಗಾಗಿ ಮೂರೂ ಪ್ರಮುಖ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಯನ್ನೇ ಕಣಕ್ಕಿಳಿಸಿವೆ. ಜೆಡಿಎಸ್‌ನಿಂದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತಿ ಪಡೆದಿರುವ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಕಣದಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕ ಮಸಾಲೆ ಜಯರಾಂ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ, ನೆಲಮಂಗಲ ಮೂಲದ ಬೆಮೆಲ್ ಕಾಂತರಾಜು ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಇದು ತಮ್ಮ ಕೊನೆಯ ಚುನಾವಣೆ ಎನ್ನುವ ಅನುಕಂಪದ ಅಸ್ತ್ರ ಪ್ರಯೋಗಿಸಿ ಮತದಾರರನ್ನ ಸೆಳೆಯುವ ಪ್ರಯತ್ನಸುತ್ತಿದ್ದಾರೆ.

ಬಿಜೆಪಿಯ ಮಸಾಲೆ ಜಯರಾಂ ತಾವು ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಸಜ್ಜನ ರಾಜಕಾರಣಿ ಅನ್ನುವ ಹಣೆಪಟ್ಟಿ ತಮಗೆ ನೆರವಾಗುತ್ತೆ ಅನ್ನೋ ಆಲೋಚನೆಯಲ್ಲಿದ್ದಾರೆ. ಇನ್ನು ಇವರಿಬ್ಬರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಕಾಂಗ್ರೆಸ್‌ನ ಬೆಮೆಲ್ ಕಾಂತರಾಜು ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸಿರೋ ಹುಮ್ಮಸ್ಸಿನಲ್ಲಿ ಕಾಂತರಾಜು ಕಾರ್ಯಪ್ರವೃತ್ತರಾಗಿದ್ದಾರೆ.

ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಚಾರವೂ ಕೂಡ ಚುನಾವಣೆ ಪ್ರಚಾರದ ಪ್ರಮುಖ ವಿಷಯವಾಗಿದೆ. ಸದ್ಯದ ಚಿತ್ರಣವನ್ನ ನೋಡಿದ್ರೆ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇರೋದು ಸ್ಪಷ್ಟವಾಗುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಮಸಾಲೆ ಜಯರಾಂ (ಬಿಜೆಪಿ): 60,710- ಎಂ.ಟಿ. ಕೃಷ್ಣಪ್ಪ (ಜೆಡಿಎಸ್): 58,661- ಗೆಲುವಿನ ಅಂತರ: 2,049

ತಿಪಟೂರು : ಇತಿಹಾಸ
ಬದಲಿಸಿಯಾರೇ ನಾಗೇಶ್‌?

ಕೊಬ್ಬರಿ ಬೆಳೆಗೆ ಹೆಸರುವಾಸಿಯಾಗಿರುವ ತಿಪಟೂರು ಪ್ರಜ್ಞಾವಂತ ಮತದಾರರನ್ನ ಹೊಂದಿರುವ ಕ್ಷೇತ್ರ. ಏಕೆಂದರೆ 1962ರಿಂದೀಚೆಗೆ ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿದ್ದವರು ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಉದಾಹರಣೆಯೇ ಇಲ್ಲ. 2018ರಲ್ಲಿ ಗೆಲುವು ಸಾಧಿಸಿ, ಹಾಲಿ ಸಚಿವರೂ ಆಗಿರುವ ಬಿ.ಸಿ.ನಾಗೇಶ್ ಈ ಸಂಪ್ರದಾಯವನ್ನ ಮುರಿಯುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ.

ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್ ಈ ಬಾರಿ ಮತ್ತೊಮ್ಮೆ ಬಿಜೆಪಿಯ ಹುರಿಯಾಳಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ, ಲಿಂಗಾಯತ ಸಮುದಾಯದ ಷಡಕ್ಷರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಕೆ.ಟಿ.ಶಾಂತಕುಮಾರ್, ಬಿಜೆಪಿ, ಕಾಂಗ್ರೆಸ್‌ನಲ್ಲಿ ಓಡಾಡಿ ಕೊನೆಗೆ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ಆದರೆ ಬಿ. ಸಿ. ನಾಗೇಶ್‌ಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ತಿಪಟೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಕಳೆದ ಚುನಾವಣೆಯಲ್ಲಿ ತಮ್ಮ ಸಮುದಾಯದ ಸರ್ವೋಚ್ಛ ನಾಯಕ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿ ಅನ್ನುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿ, ಬ್ರಾಹ್ಮಣ ಸಮುದಾಯದ ಬಿ. ಸಿ. ನಾಗೇಶ್‌ ಅವರನ್ನು ಈ ಸಮುದಾಯ ಬೆಂಬಲಿಸಿತ್ತು. ಆದರೆ ಈ ಬಾರಿ ಈ ಸಾಧ್ಯತೆ ಕಡಿಮೆ. ಯಾಕೆಂದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಷಡಕ್ಷರಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇದು ತಮ್ಮ ಕೊನೆಯ ಚುನಾವಣೆ ಎಂದೇ ಷಡಕ್ಷರಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಲಿಂಗಾಯತರು ತಮ್ಮ ಸಮುದಾಯದ ಷಡಕ್ಷರಿಯ ಕೈ ಹಿಡಿಯುವ ಸಾಧ್ಯತೆಯಿದೆ. ಜೆಡಿಎಸ್‌ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ಕೂಡ ಈ ಇಬ್ಬರು ಘಟಾನುಘಟಿಗಳಿಗೆ ಟಫ್ ಫೈಟ್ ಕೊಡುವ ಪ್ರಯತ್ನದಲ್ಲಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಸಿ.ನಾಗೇಶ್ (ಬಿಜೆಪಿ): 61,383- ಷಡಕ್ಷರಿ (ಕಾಂಗ್ರೆಸ್): 35,820- ಗೆಲುವಿನ ಅಂತರ: 25,563

ಕುಣಿಗಲ್‌: ಬಿಜೆಪಿ ಗೆಲುವಿನ
ಓಟಕ್ಕೆ ಕಾಂಗ್ರೆಸ್‌, ಜೆಡಿಎಸ್‌
ಅಡ್ಡಗಾಲು

ತುಮಕೂರು ಜಿಲ್ಲೆಗೆ ಸೇರಿರುವ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಣಿಗಲ್, ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಕಳೆದ ಮೂರೂ ಚುನಾವಣೆಗಳಲ್ಲಿ ಇಲ್ಲಿ ರನ್ನರ್ ಅಪ್ ಸ್ಥಾನದಲ್ಲಿದ್ದ ಬಿಜೆಪಿ, ಈ ಬಾರಿ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬಿಜೆಪಿ ಆಸೆಗೆ ತಣ್ಣೀರೆರಚುವ ಪ್ರಯತ್ನದಲ್ಲಿವೆ.

ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡಿದ್ದ, ರಾಜ್ಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಸತತ ನಾಲ್ಕನೇ ಬಾರಿಗೆ ಬಿಜೆಪಿ ಟಿಕೆಟ್ ಪಡೆದು ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್‌ಗೆ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ ಅವರಿಂದ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕೊನೆಯ ಪ್ರಯತ್ನ ಅನ್ನೋ ನೆಪದಲ್ಲಿ ಕೃಷ್ಣಕುಮಾರ್‌ಗೆ ಟಿಕೆಟ್ ಲಭಿಸಿದೆ.

ಕಾಂಗ್ರೆಸ್‌ನಿಂದ ಹಾಲಿ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ ಮತ್ತೆ ಅಭ್ಯರ್ಥಿಯಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಮಾಜಿ ಸಚಿವ ಡಿ. ನಾಗರಾಜಯ್ಯ ಪುತ್ರ, ಡಾ.ರವಿಬಾಬು ಕಣಕ್ಕಿಳಿದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಕಳೆದ ಮೂರು ಚುನಾವಣೆಗಳಲ್ಲಿ ಸಹೋದರರಾದ ಡಿ.ನಾಗರಾಜಯ್ಯ ಮತ್ತು ಡಿ.ಕೃಷ್ಣಕುಮಾರ್ ಕಣಕ್ಕಿಳಿಯುತ್ತಿದ್ದರು. ಇದರಿಂದ ಮತವಿಭಜನೆಯಾಗುತ್ತಿತ್ತು. ಎರಡು ಬಾರಿ ಕಾಂಗ್ರೆಸ್ ಇದರ ಲಾಭ ಪಡೆದಿತ್ತು. ಆದರೆ ಈ ಬಾರಿ ಬಿಜೆಪಿಯಿಂದ ಚಿಕ್ಕಪ್ಪ ಡಿ.ಕೃಷ್ಣಕುಮಾರ್ ಮತ್ತು ಜೆಡಿಎಸ್‌ನಿಂದ ಅವರ ಅಣ್ಣನ ಮಗ ಡಾ.ರವಿಬಾಬು ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಡಿ. ಕೃಷ್ಣಕುಮಾರ್‌ಗೆ ಮೂರು ಬಾರಿ ಸೋತಿರುವ ಅನುಕಂಪವಿದೆ. ಬಿಜೆಪಿಯಿಂದ ಬಂಡಾಯವೆದ್ದಿದ್ದ ರಾಜೇಶ್ ಗೌಡ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ. ಅಸಮಾಧಾನಗೊಂಡಿದ್ದ ಮುದ್ದಹನುಮೇಗೌಡ ಕೂಡ ಕೃಷ್ಣಕುಮಾರ್‌ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಶಾಸಕ ಬಿ. ಬಿ. ರಾಮಸ್ವಾಮಿಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದು ಪಕ್ಷಕ್ಕೆ ತಲೆನೋವು ತಂದಿದೆ. ಇತ್ತ ಜೆಡಿಎಸ್ ಗೆ ನಾಗರಾಜಯ್ಯ ಬದಲು ಅವರ ಪುತ್ರ ಕಣಕ್ಕಿಳಿದಿರುವುದರಿಂದ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಡಾ.ರಂಗನಾಥ್ (ಕಾಂಗ್ರೆಸ್) : 58, 697- ಡಿ.ನಾಗರಾಜಯ್ಯ (ಜೆಡಿಎಸ್): 53,097 -ಗೆಲುವಿನ ಅಂತರ: 5,600

ಗುಬ್ಬಿಯಲ್ಲೂ
ತ್ರಿಕೋನ ಸ್ಪರ್ಧೆ

ಗುಬ್ಬಿ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ನಂತರದ ಸ್ಥಾನದಲ್ಲಿ ಒಕ್ಕಲಿಗ, ಗೊಲ್ಲ, ತಿಗಳ ಸಮುದಾಯ ದವರಿದ್ದಾರೆ. ಈವರೆಗೂ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಯಾರೇ ಸ್ಪರ್ಧಿಸಿದರೂ ಪ್ರಬಲ ಸಮುದಾಯಗಳ ಜತೆಗೆ ಹಿಂದುಳಿದ, ಪರಿಶಿಷ್ಟರ ಮತಗಳನ್ನು ಪಡೆದುಕೊಂಡವರಿಗೆ ಗೆಲುವಿನ ಬಾಗಿಲು ತೆರೆಯಲಿದೆ.

ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಪಕ್ಷದಿಂದ ಉಚ್ಛಾಟನೆಯಾಗಿರುವ ಎಸ್‌.ಆರ್‌.ಶ್ರೀನಿವಾಸ್‌ ಅವರಿಂದಾಗಿ ಗುಬ್ಬಿ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಎಸ್.ಆರ್.ಶ್ರೀನಿವಾಸ್, ಬಳಿಕ ಹಿಂದಿರುಗಿ ನೋಡಿಲ್ಲ. 2008, 2013, 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಸತತ 4 ಗೆಲುವು ಕಂಡಿರುವ ಶ್ರೀನಿವಾಸ್‌, ಕಾಂಗ್ರೆಸ್‌ ಭದ್ರಕೋಟೆಯಂತಿದ್ದ ಗುಬ್ಬಿ ಕ್ಷೇತ್ರವನ್ನು ಜೆಡಿಎಸ್‌ ಅಭೇದ್ಯ ಕೋಟೆ ಮಾಡಿದ್ದರು. ಆದರೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಜೆಡಿಎಸ್‌ ಗೂಡು ತೊರೆದು ಕಾಂಗ್ರೆಸ್‌ ಸೇರಿ ಸ್ಪರ್ಧಿಸುತ್ತಿದ್ದಾರೆ.

ಸತತ ನಾಲ್ಕು ಬಾರಿಯ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಒಕ್ಕಲಿಗರು. ಇಲ್ಲಿಯವರೆಗೆ ಲಿಂಗಾಯತ ಸಮುದಾಯದ ಮುಖಂಡರು ಇವರಿಗೆ ಸರಿಯಾದ ಪೈಪೋಟಿ ನೀಡಿಲ್ಲ. 2004ರಲ್ಲಿ ಎಸ್.ಆರ್.ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಲಿಂಗಾಯತ ಸಮುದಾಯದ ಜೆಡಿಎಸ್‌ ಅಭ್ಯರ್ಥಿ ಜಿ.ಎಸ್‌.ಶಿವನಂಜಪ್ಪ ವಿರುದ್ಧವೇ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಈಗ 5ನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಬಿ.ಎಸ್‌. ನಾಗರಾಜು ಒಕ್ಕಲಿಗರು. ಬಿಜೆಪಿ ಪರ ಕಣಕ್ಕಿಳಿಯುತ್ತಿರುವ ದಿಲೀಪ್‌ ಕುಮಾರ್‌ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಇನ್ನು ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಹೊನ್ನಗಿರಿ ಗೌಡ ಕೈ ತೊರೆದು ಜೆಡಿಎಸ್‌ ಸೇರಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಬೆಟ್ಟಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಪ್ರಬಲ ಗೊಲ್ಲ ಸಮುದಾಯದ ಮುಖಂಡ ಬೆಟ್ಟಸ್ವಾಮಿ ಜೆಡಿಎಸ್‌ ಸೇರ್ಪಡೆಯಾಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾದ್ರೆ, ಜೆಡಿಎಸ್‌ಗೆ ಈ ಇಬ್ಬರು ನಾಯಕರ ಸೇರ್ಪಡೆಯಿಂದ ದೊಡ್ಡ ಬಲ ಬಂದಂತಾಗಿದೆ.

ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದ ದಿಲೀಪ್‌ ಕುಮಾರ್‌ ಗೆ ಈ ಬಾರಿ ಬಿಜೆಪಿ ಟಿಕೆಟ್‌ ನೀಡಲಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ದಿಲೀಪ್‌ ಕುಮಾರ್‌ 30 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ದಿಲೀಪ್‌ ಕುಮಾರ್‌ ಈ ಬಾರಿ ಗೆಲುವು ಸಾಧಿಸಬಹುದು ಅನ್ನುವುದು ಬಿಜೆಪಿ ಲೆಕ್ಕಚಾರ. ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಎಸ್.ಆರ್.ಶ್ರೀನಿವಾಸ್ (ಜೆಡಿಎಸ್)- 55572 ಜಿ.ಎನ್.ಬೆಟ್ಟಸ್ವಾಮಿ (ಬಿಜೆಪಿ)- 46491 ಗೆಲುವಿನ ಅಂತರ- 9081

ಇದನ್ನೂ ಓದಿ: ಹಾಸನ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಏಳು ಸುತ್ತಿನ ಕೋಟೆ ಭೇದಿಸುವವರು ಯಾರು?

ಕೊರಟಗೆರೆ : ತ್ರಿಕೋನ
ಸ್ಪರ್ಧೆಯಿಂದ ಕುತೂಹಲ

ತುಮಕೂರು ಜಿಲ್ಲೆಯಲ್ಲೇ ಅತೀ ಚಿಕ್ಕ ತಾಲ್ಲೂಕು ಕೊರಟಗೆರೆ. ಆದರೆ ಇದು ಮೊದಲಿನಿಂದಲೂ ವಿಧಾನಸಭಾ ಕ್ಷೇತ್ರವಾಗಿಯೇ ಉಳಿದುಕೊಂಡು ಬಂದಿದೆ. ಎರಡು ಬಾರಿ ಕ್ಷೇತ್ರವನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಿದ್ದು, ಇಲ್ಲಿಂದ ಆಯ್ಕೆ ಆಗಿದ್ದ ಇಬ್ಬರು ಸಚಿವರಾಗಿದ್ದರು. ಕ್ಷೇತ್ರ ಚಿಕ್ಕದಾದರೂ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ.

ಕೊರಟಗೆರೆ ಸದ್ಯ ಎಸ್‌ಸಿ ಮೀಸಲು ಕ್ಷೇತ್ರ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಎಸ್‌ಸಿ ಮತಗಳಲ್ಲಿ ಮಾದಿಗ ಸಮುದಾಯದ ಮತಗಳೇ ಅಧಿಕ. ನಂತರದ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ಕಾಂಗ್ರೆಸ್‌ ನಿಂದ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ, ಡಾ.ಜಿ.ಪರಮೇಶ್ವರ ಛಲವಾದಿ ಸಮುದಾಯಕ್ಕೆ ಸೇರಿದವರು. ಇನ್ನು ಜೆಡಿಎಸ್‌ ನ ಅಭ್ಯರ್ಥಿ ಪಿ. ಆರ್‌. ಸುಧಾಕರ್‌ಲಾಲ್‌ ಲಂಬಾಣಿ ಸಮುದಾಯದವರು. ಬಿಜೆಪಿಯಿಂದ ಕಣಕ್ಕಿಳಿದಿರುವ ಅನಿಲ್‌ ಕುಮಾರ್‌ ಪ್ರಬಲ ಮಾದಿಗ ಸಮುದಾಯದವರು. ಹೀಗಾಗಿ ಈ ಬಾರಿ ಮಾದಿಗರು ಅನಿಲ್ ಕುಮಾರ್‌ಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ಮಾದಿಗ ಸಮುದಾಯದ ಅನಿಲ್‌ ಕುಮಾರ್‌ ಒಕ್ಕಲಿಗ, ಲಿಂಗಾಯತ ಮತ ಬ್ಯಾಂಕ್‌ನ ಲಾಭವನ್ನೂ ಪಡೆದು ಕಾಂಗ್ರೆಸ್‌- ಜೆಡಿಎಸ್‌ಗೆ ಟಕ್ಕರ್‌ ಕೊಡುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಎರಡು ಬಾರಿ ಕಾಂಗ್ರೆಸ್- ಜೆಡಿಎಸ್ ನಡುವೆ ಮಾತ್ರ ಇದ್ದ ಜಿದ್ದಾಜಿದ್ದಿ ಈ ಬಾರಿ ಅನಿಲ್ ಕುಮಾರ್ ಎಂಟ್ರಿಯಿಂದ ತ್ರಿಕೋನ ಕದನವಾಗಿ ಬದಲಾಗಿದೆ.

2013ರ ಚುನಾವಣೆ ವೇಳೆ ಸಿಎಂ ರೇಸ್‌ನಲ್ಲಿದ್ದ ಜಿ. ಪರಮೇಶ್ವರ್‌ಗೆ ಕ್ಷೇತ್ರದ ಮತದಾರರು ಶಾಕ್ ಕೊಟ್ಟಿದ್ದರು. ಪರಮೇಶ್ವರ್ ಸೋಲುಣ್ಣುವ ಮೂಲಕ ಸಿಎಂ ಸ್ಥಾನ ಕೈತಪ್ಪಿತ್ತು. ಆದರೆ ಈ ಬಾರಿ ಮತ್ತೆ ಡಾ.ಜಿ.ಪರಮೇಶ್ವರ್ ಸದ್ದಿಲ್ಲದೇ ಸಿಎಂ ರೇಸ್‌ನಲ್ಲಿದ್ದಾರೆ. ಹಿಂದೆ ಈ ಅವಕಾಶ ಕೈತಪ್ಪಿದ್ದರ ಬಗ್ಗೆ ಮತ್ತು ಮುಂದಿನ ಬಾರಿ ಸಿಎಂ ಆಗುವ ಆಸೆಯ ಬಗ್ಗೆ ಪರಂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಡುವಿನ ಜಟಾಪಟಿಯಿಂದ ಪರಮೇಶ್ವರ್ ಅವರಿಗೆ ಅದೃಷ್ಟ ಒಲಿದರೆ ಅಚ್ಚರಿಯಿಲ್ಲ ಎಂಬ ಲೆಕ್ಕಾಚಾರದ ಮಾತು ಕೂಡ ಕ್ಷೇತ್ರದಲ್ಲಿ ಓಡಾಡುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣಾಗಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಡಾ.ಜಿ.ಪರಮೇಶ್ವರ್ (ಕಾಂಗ್ರೆಸ್): 81,598 – ಪಿ.ಆರ್.ಸುಧಾಕರ್ ಲಾಲ್ (ಜೆಡಿಎಸ್): 73,979 – ಗೆಲುವಿನ ಅಂತರ: 7,619

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ.

ಮಧುಗಿರಿ: ಮೂರು
ಪಕ್ಷಗಳ ನಡುವೆ
ಹಣಾಹಣಿ

ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟವನ್ನು ಹೊಂದಿರುವ ಮಧುಗಿರಿ ಕ್ಷೇತ್ರದಲ್ಲಿ ಒಕ್ಕಲಿಗ, ಎಸ್ಟಿ, ಎಸ್ಸಿ ಸಮುದಾಯಗಳ ಮತಗಳೇ ನಿರ್ಣಾಯಕ. ಈ ಕ್ಷೇತ್ರದಲ್ಲಿ ರಾಜವರ್ಧನ್ ಮತ್ತು ಡಾ.ಜಿ.ಪರಮೇಶ್ವರ್ ಸತತವಾಗಿ ಎರಡು ಬಾರಿ ಶಾಸಕರಾಗಿ, ಸಚಿವರಾಗಿರುವುದನ್ನು ಹೊರತುಪಡಿಸಿದರೆ, ಉಳಿದ ಯಾರೊಬ್ಬರೂ ಇಲ್ಲಿ ಎರಡನೇ ಅವಧಿಗೆ ಗೆದ್ದು ಬಂದಿಲ್ಲ. ಜತೆಗೆ ಸಚಿವರೂ ಆಗಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜನತಾ ಪರಿವಾರದ ಅಭ್ಯರ್ಥಿಗಳ ನಡುವೆ ಪ್ರತಿ ಚುನಾವಣೆಯಲ್ಲೂ ಜಿದ್ದಾಜಿದ್ದಿ ನಡೆಯುತ್ತಾ ಬಂದಿದೆ.

ಭಾರತೀಯ ಜನತಾ ಪಕ್ಷ ಈ ಕ್ಷೇತ್ರದಲ್ಲಿ ಇದುವರೆಗೂ ಖಾತೆಯನ್ನೇ ತೆರೆದಿಲ್ಲ. ಆದರೆ ಈ ಬಾರಿ ನಿವೃತ್ತ ಕೆಎಎಸ್ ಅಧಿಕಾರಿಯನ್ನ ಕಣಕ್ಕಿಳಿಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸವಾಲೊಡ್ಡಲು ಸಜ್ಜಾಗಿದೆ. ಜೆಡಿಎಸ್‌ ನಿಂದ ಸ್ಪರ್ಧಿಸಿರುವ ಎಂ.ವಿ.ವೀರಭದ್ರಯ್ಯ ಒಕ್ಕಲಿಗ ಸಮುದಾಯದವರಾದರೆ, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹಾಗೂ ಬಿ.ಜೆ.ಪಿಯ ಎಲ್.ಸಿ.ನಾಗರಾಜು ಇಬ್ಬರು ಕೂಡ ನಾಯಕ ಸಮುದಾಯಕ್ಕೆ ಸೇರಿದವರು.

ಇದುವರೆಗೂ ಕೆ.ಎನ್.ರಾಜಣ್ಣ ಮತ್ತು ವೀರಭದ್ರಯ್ಯ ನಡುವೆ ನೇರಾನೇರ ಪೈಪೋಟಿಯಿತ್ತು. ಅದರೊಟ್ಟಿಗೆ ಈಗ ಬಿಜೆಪಿ ಎಲ್.ಸಿ.ನಾಗರಾಜುಗೆ ಟಿಕೆಟ್ ಕೊಟ್ಟಿರುವುದರಿಂದ ಮೂರೂ ಪಕ್ಷಗಳ ನಡುವೆ ಹಣಾಹಣಿ ನಡೆಯಲಿದೆ.
ಹಾಲಿ ಶಾಸಕ ವೀರಭದ್ರಯ್ಯ ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿದೆ. ಜೊತೆಗೆ ಹೆಚ್ಚಿನ ಜನಸಂಪರ್ಕವಿಲ್ಲದಿರುವುದು, ಹಿಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ತೊಡಕಾಗುವ ಸಾಧ್ಯತೆಯಿದೆ. ಆದರೂ ಒಕ್ಕಲಿಗ ಮತಗಳು ತನ್ನ ಕೈಹಿಡಿಯುತ್ತವೆ ಎಂದು ಅವರು ನಂಬಿದ್ದಾರೆ.

ಇನ್ನು ದೇವೇಗೌಡರ ಸಾವನ್ನ ಬಯಸಿ ಮಾತನಾಡಿದ್ದ ವಿಚಾರ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣಗೆ ಮುಳುವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಮಾಡಿದ್ದ ದೊಡ್ಡಗೌಡರು ರಾಜಣ್ಣ ವಿರುದ್ಧ ಭಾವನಾತ್ಮಕ ಬಾಣವನ್ನ ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನ ಸೋಲಿಸಿ ನನ್ನ ಕಣ್ಣಲ್ಲಿ ನೀರು ತರಿಸಿದವರ ಕಣ್ಣಲ್ಲಿ ನೀರು ಬರಿಸಿದಾಗ ಮಾತ್ರ ನನಗೆ ಸಮಾಧಾನ ಎನ್ನುವ ಮೂಲಕ ರಾಜಣ್ಣನನ್ನ ಸೋಲಿಸಿ ಎಂಬ ಸಂದೇಶವನ್ನ ಒಕ್ಕಲಿಗ ಸಮಾಜಕ್ಕೆ ನೀಡಿದ್ದಾರೆ. ಇದರಿಂದ ಒಕ್ಕಲಿಗ ಮತಗಳು ಸಾರಾಸಗಾಟಾಗಿ ವೀರಭದ್ರಯ್ಯನವರಿಗೆ ವರ್ಗಾವಣೆಯಾದಲ್ಲಿ ಅದು ರಾಜಣ್ಣನವರಿಗೆ ಮುಳುವಾಗುವ ಸಾಧ್ಯತೆಯಿದೆ.

ಆದರೂ ತಾನು ಮಾಡಿರುವ ಅಭಿವೃದ್ಧಿ ಹಾಗೂ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ದಲಿತ ಮತ್ತು ಹಿಂದುಳಿದ ವರ್ಗದ ಮತಗಳು ತನ್ನನ್ನು ಗೆಲುವಿನ ದಡ ಸೇರಿಸುತ್ತವೆ ಎಂಬ ನಂಬಿಕೆ ರಾಜಣ್ಣ ಅವರದು. ಬಿಜೆಪಿಯ ಎಲ್.ಸಿ.ನಾಗರಾಜುರವರು ಸಾಕಷ್ಟು ಹಣ ಖರ್ಚು ಮಾಡುತ್ತಾ ಚುನಾವಣೆಗೆ ಧುಮುಕಿದ್ದಾರೆ. ಅವರು ಎಷ್ಟು ಎಸ್‌ಟಿ ಓಟುಗಳನ್ನು ಪಡೆಯುತ್ತಾರೋ ಅಷ್ಟು ರಾಜಣ್ಣನವರಿಗೆ ಡ್ಯಾಮೇಜ್ ಆಗಬಹುದು. ಆದರೆ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಚುನಾವಣೆಯಲ್ಲಿ ಮುಖ್ಯವಾಗಿ ಚರ್ಚೆಯಾಗುವ ಸಂಭವವಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಎಂ.ವಿ.ವೀರಭದ್ರಯ್ಯ (ಜೆಡಿಎಸ್) : 88,521- ಕೆ.ಎನ್.ರಾಜಣ್ಣ (ಕಾಂಗ್ರೆಸ್): 69,947 -ಗೆಲುವಿನ ಅಂತರ: 18,574

ಶಿರಾ: ಮದಲೂರು
ಕೆರೆಯ ಸುತ್ತವೇ
ರಾಜಕೀಯ

ಹಲವು ಕ್ಷೇತ್ರಗಳಲ್ಲಿ ಜಾತಿ, ಧರ್ಮ, ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆದರೆ, ಶಿರಾದಲ್ಲಿ ನೀರಾವರಿಯ ಹೆಸರಲ್ಲಿ ರಾಜಕಾರಣ ನಡೆಯುತ್ತಾ ಬಂದಿದೆ. ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವುದು ಹಲವು ವರ್ಷಗಳಿಂದ ಚುನಾವಣೆಯ ಪ್ರಮುಖ ವಿಚಾರವಾಗಿದೆ. ಈ ಕೆರೆಗೆ ನೀರು ಬಂದರೆ ಹತ್ತಾರು ಹಳ್ಳಿಗಳ ರೈತರಿಗೆ ಅನುಕೂಲವಾಗುತ್ತದೆ. ಹೀಗಾಗಿ ಇದರ ಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರ ಗಿರಕಿ ಹೊಡೆಯುತ್ತಿರುತ್ತದೆ.

ಉಳಿದಂತೆ ಕ್ಷೇತ್ರದಲ್ಲಿರುವ ಯಾವ ಸಮಸ್ಯೆಯ ಬಗೆಗೂ ಯಾರೂ ತಲೆಕೆಡಿಸಿಕೊಳ್ಳದಿರುವುದು ವಿಚಿತ್ರವಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮತಗಳು ಹೆಚ್ಚಾಗಿವೆ. ಒಕ್ಕಲಿಗರು 49 ಸಾವಿರ, ಕಾಡುಗೊಲ್ಲರು 26 ಸಾವಿರ, ಮುಸ್ಲಿಂ 30 ಸಾವಿರ, ಕುರುಬರು 13 ಸಾವಿರ, ನಾಯಕ 13 ಸಾವಿರ ಹಾಗೂ ಬಲಿಜ ಸಮುದಾಯದ 7 ಸಾವಿರ ಮತಗಳಿವೆ. ಒಕ್ಕಲಿಗ, ಕಾಡುಗೊಲ್ಲ ಮತ್ತು ಮುಸ್ಲಿಂ ಸಮುದಾಯ ಮತಗಳೇ ಇಲ್ಲಿ ನಿರ್ಣಾಯಕ ಎನಿಸಿವೆ.

ಈ ಬಾರಿ ಶಿರಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ, ಟಿ.ಬಿ.ಜಯಚಂದ್ರ ಕಣಕ್ಕಿಳಿದಿದ್ದರೆ, ಬಿಜೆಪಿ ಹಾಲಿ ಶಾಸಕ ಡಾ.ರಾಜೇಶ್‌ ಗೌಡಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಉಗ್ರೇಶ್ ಎಂಬುವವರನ್ನ ಕಣಕ್ಕಿಳಿಸಿದೆ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ಟಿ.ಬಿ ಜಯಚಂದ್ರ ಹಿರಿಯ ರಾಜಕಾರಣಿ. 6 ಬಾರಿ ವಿಧಾನ ಸಭೆ ಪ್ರವೇಶಿಸಿರುವ ಜಯಚಂದ್ರ, ಈ ಬಾರಿ ಕೊನೆಯ ಚುನಾವಣೆ ಎಂದು ಮತದಾರರ ಮುಂದೆ ಪ್ರಚಾರ ಶುರು ಮಾಡಿದ್ದಾರೆ. ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ವಿಚಾರಗಳು- ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ಜಯಚಂದ್ರ ಪ್ರಚಾರ ನಡೆಸುತ್ತಿದ್ದಾರೆ.

ಜೆಡಿಎಸ್‌ನ ಶಾಸಕ ದಿ.ಸತ್ಯನಾರಾಯಣ್‌ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭೆಗೆ 2020ರಲ್ಲಿ ಉಪಚುನಾವಣೆ ನಡೆದಿತ್ತು. ಮೊದಲ ಬಾರಿಗೆ ಚುನಾವಣೆ ಎದುರಿಸಿದ ಡಾ.ರಾಜೇಶ್‌ ಗೌಡ ಗೆಲುವು ಸಾಧಿಸಿದ್ದರು. ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಉಪ ಚುನಾವಣೆಯಲ್ಲಿ ಮದಲೂರು ಕೆರೆ ನೀರು ಹರಿಸುವುದು, ಕಾಡುಗೊಲ್ಲರ ಮೀಸಲಾತಿ ವಿಚಾರ ಹಾಗೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಬಿಜೆಪಿ ಗೆಲುವಿಗೆ ಸಹಕಾರಿಯಾಗಿತ್ತು. ಅಂದು ಇಡೀ ಸರ್ಕಾರದ ನೆರವಿನಿಂದ ಗೆಲುವು ಸಾಧಿಸಿದ್ದ ರಾಜೇಶ್‌ ಗೌಡ ಇದೀಗ ಒಬ್ಬಂಟಿಯಾಗಿ ಚುನಾವಣೆ ಎದುರಿಸಬೇಕಾಗಿದೆ. ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಿದ್ದೇವೆ. ಅಭಿವೃದ್ಧಿ ಕೆಲಸ ಮಾಡಿದ್ದೇವೆ ಅಂತ ಡಾ.ರಾಜೇಶ್‌ ಗೌಡ ಪ್ರಚಾರ ಪ್ರಾರಂಭಿಸಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಕಟ್ಟಾ ಕಾರ್ಯಕರ್ತರ ಪಡೆಯನ್ನ ಹೊಂದಿರುವ ಜೆಡಿಎಸ್‌ ಹಲವು ಬಾರಿ ಗೆಲುವು ಸಾಧಿಸಿದೆ. ಇದೀಗ ಒಕ್ಕಲಿಗ ಸಮುದಾಯದ ಉಗ್ರೇಶ್‌ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಉಗ್ರೇಶ್‌ ಮತ ಕೇಳುತ್ತಿದ್ದಾರೆ. ಒಟ್ಟಾರೆ ಬಿಜೆಪಿಯ ಡಾಕ್ಟರ್, ಕಾಂಗ್ರೆಸ್‌ ವಕೀಲರಿಗೆ ಜೆಡಿಎಸ್‌ನ ರೈತನ ಮಗನ ಸವಾಲು ಹಾಕುತ್ತಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಸತ್ಯನಾರಾಯಣ (ಜೆಡಿಎಸ್): 74,338 – ಟಿ.ಬಿ.ಜಯಚಂದ್ರ (ಕಾಂಗ್ರೆಸ್): 63,973 – ಗೆಲುವಿನ ಅಂತರ: 10,365

ಪಾವಗಡ : ಕಾಂಗ್ರೆಸ್‌
ಜೆಡಿಎಸ್‌ ನಡುವೆ
ಜಿದ್ದಾಜಿದ್ದಿ

ಆಂಧ್ರಪ್ರದೇಶ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಪಾವಗಡ ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡಿದ್ದರೂ, ಆಡಳಿತಾತ್ಮಕವಾಗಿ ತುಮಕೂರು ಜಿಲ್ಲೆಗೆ ಸೇರಿದೆ. ಆದರೆ, ಲೋಕಸಭಾ ಕ್ಷೇತ್ರ ಮಾತ್ರ ಚಿತ್ರದುರ್ಗವಾಗಿದೆ.

ಪಾವಗಡ ಕ್ಷೇತ್ರ ಇದುವರೆಗೂ ಒಟ್ಟು 13 ಚುನಾವಣೆಗಳನ್ನ ಎದುರಿಸದ್ದು, ಏಳು ಸಲ ಕಾಂಗ್ರೆಸ್‌, ಎರಡು ಸಲ ಪಕ್ಷೇತರ, ಎರಡು ಸಲ ಜೆಡಿಎಸ್‌, ಒಂದು ಸಲ ಜನತಾ ಪಕ್ಷ ಮತ್ತು ಒಂದು ಸಲ ಜನತಾ ದಳ ಜಯ ಗಳಿಸಿವೆ. ಇಲ್ಲಿ ನಡೆದಿರುವ ಯಾವ ಚುನಾವಣೆಯಲ್ಲಿಯೂ ಸತತ ಎರಡನೇ ಬಾರಿ ಯಾರೂ ಆಯ್ಕೆಯಾಗಿಲ್ಲ.

ಎಸ್ಸಿ ಮೀಸಲು ಕ್ಷೇತ್ರವಾಗಿರೋ ಪಾವಗಡ ಕ್ಷೇತ್ರದಲ್ಲಿ ಬರೋಬ್ಬರಿ 72,000 ಎಸ್ಸಿ ಮತದಾರರಿದ್ದಾರೆ. ಇನ್ನು 53,000 ಎಸ್ಟಿ ವರ್ಗಕ್ಕೆ ಸೇರಿದ ಮತದಾರರು ಇದ್ರೆ, 38 ಸಾವಿರ ಗೊಲ್ಲ ಸಮುದಾಯದ ಮತಗಳು, 31 ಸಾವಿರ ಒಕ್ಕಲಿಗರು ಹಾಗೂ 6,397 ಇತರೆ ವರ್ಗಕ್ಕೆ ಸೇರಿದ ಮತದಾರರಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಗೊಲ್ಲ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ.

ಇಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿಯಿದೆ. ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿಯಲ್ಲಿದೆ. ಪಕ್ಷವು ಕೃಷ್ಣ ನಾಯಕ್‌ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ನಿಂದ ಬೋವಿ ಸಮಯದಾಯಕ್ಕೆ ಸೇರಿದ ಎಚ್.ವಿ ವೆಂಕಟೇಶ್‌ ಸ್ಪರ್ಧಿಸಿದ್ದಾರೆ. ಹಾಲಿ ಶಾಸಕ ವೆಂಕಟರಮಣಪ್ಪ ಪುತ್ರರಾಗಿರುವ ಎಚ್.ವಿ.ವೆಂಕಟೇಶ್‌ ಅಪ್ಪನ ಅಭಿವೃದ್ಧಿ ಕೆಲಸ ಹಾಗೂ ರಾಜಕೀಯ ತಂತ್ರಗಾರಿಕೆಯ ಆಧಾರದಲ್ಲಿ ಗೆಲುವಿನ ದಡ ಮುಟ್ಟುವ ತವಕದಲ್ಲಿದ್ದಾರೆ.

ಇನ್ನು ಜೆಡಿಎಸ್‌ ನಿಂದ ಸ್ಪರ್ಧಿಸಿರುವ ಕೆ.ಎಂ.ತಿಮ್ಮರಾಯಪ್ಪ ಈಗಾಗಲೇ ಎರಡು ಸಲ ಶಾಸಕರಾಗಿದ್ದಾರೆ. ಎಸ್ಸಿ ಸಮುದಾಯದವರಾಗಿರುವ ತಿಮ್ಮರಾಯಪ್ಪ, ಎಸ್‌ಸಿ, ಎಸ್ಟಿ ಮತಗಳ ಜೊತೆಗೆ ಜೆಡಿಎಸ್‌ನ ಮತಬ್ಯಾಂಕ್ ಒಕ್ಕಲಿಗ ಮತಗಳನ್ನ ಪಡೆದು ಗೆಲ್ಲುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ವೆಂಕಟರಮಣಪ್ಪ (ಕಾಂಗ್ರೆಸ್): 72, 974- ತಿಮ್ಮರಾಯಪ್ಪ (ಜೆಡಿಎಸ್) : 72, 565 – ಗೆಲುವಿನ ಅಂತರ: 409

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕೈ ಮತ್ತು ಕಮಲದ ನಡುವೆ ನೇರ ಪೈಪೋಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ ಈಗಾಗಲೇ ರೇವಣ್ಣ ಎಸ್‌ಐಟಿ ವಶದದಲ್ಲಿದ್ದಾರೆ. ಪ್ರಜ್ವಲ್‌ ಬಂಧನಕ್ಕೆ ಅಧಿಕಾರಿಗಳು ಹೊಂಚು ಹಾಕಿದ್ದಾರೆ. ಇತ್ತ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಹೆಸರೂ ಕೇಳಿ ಬಂದಿದ್ದು, ಅವರಿಗೂ ಸಂಕಷ್ಟ ಎದುರಾಗಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ(Hassan Pen Drive Case)ದಲ್ಲಿ ದಿನಕ್ಕೊಂಡು ಬೆಳವಣಿಗೆ ನಡೆಯುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಜ್ವಲ್‌ ತಂದೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಕರಣದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಹೆಸರೂ ಕೇಳಿ ಬಂದಿದ್ದು, ಅವರಿಗೂ ಸಂಕಷ್ಟ ಎದುರಾಗಲಿದೆ.

ಎರಡು ಕೇಸ್‌ನಲ್ಲಿ ಸಂತ್ರಸ್ತೆಯರು ಭವಾನಿ ರೇವಣ್ಣ ಅವರ ಹೆಸರು ಉಲ್ಲೇಖಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಮತ್ತು ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಕೇಳಿ ಬಂದಿದೆ. ಅದರಲ್ಲಿಯೂ ಅಪಹರಣ ಕೇಸ್‌ನಲ್ಲಿ ನೇರವಾಗಿ ಭವಾನಿ ರೇವಣ್ಣ ಅವರ ವಿರುದ್ಧ ಆರೋಪ ಮಾಡಲಾಗಿದೆ. ಭವಾನಿ ರೇವಣ್ಣ ಕರೆದರು ಎಂದು ಹೇಳಿಯೇ ಅಪಹರಣ ಮಾಡಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಿಡ್ನಾಪ್ ಕೇಸ್‌ನಲ್ಲಿ ಭವಾನಿ ರೇವಣ್ಣ ಅವರಿಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.

ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸುತ್ತಿರುವ ಎಸ್‌ಐಟಿ ಈಗಾಗಲೇ ಭವಾನಿ ರೇವಣ್ಣ ಅವರಿಗೆ ನೋಟಿಸ್‌ ನೀಡಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಅವರ ವಿರುದ್ಧ ಸಾಕ್ಷಿ ಕಂಡು ಬಂದರೆ ಅವರೂ ಕಾನೂನಿನ ಕೈಗೆ ಸಿಲುಕಿಕೊಳ್ಳಲಿದ್ದಾರೆ. ಸದ್ಯ ಭವಾನಿ ರೇವಣ್ಣ ಅವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣಗಾಗಿ ತೀವ್ರ ಹುಡುಕಾಟ

ಇತ್ತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣ ಅವರಿಗಾಗಿ ಎಸ್‌ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ. ಬ್ಲೂ ಕಾರ್ನರ್ ನೋಟಿಸ್ ಜತೆಗೆ ರೆಡ್ ಕಾರ್ನರ್ ನೋಟಿಸ್‌ ಹೊರಡಿಸಲು ಸಿಬಿಐಗೆ ಎಸ್‌ಐಟಿ ಮನವಿ ಸಲ್ಲಿಸಿದೆ. ಪ್ರಜ್ವಲ್ ರೇವಣ್ಣ ಬಳಿ ಇರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಸಹ ವಜಾಗೊಳಿಸಲು ಆಗ್ರಹಿಸಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್‌ನಿಂದ ಕೊನೆಯ ಬಾರಿ ಯಾವ ದೇಶಕ್ಕೆ ಟಿಕೇಟ್ ಬುಕ್ ಅಗಿದೆ ಎಂಬ ಮಾಹಿತಿಯನ್ನೂ ಎಸ್‌ಐಟಿ ಕಲೆ ಹಾಕುತ್ತಿದೆ. ಕೊನೆಯ ಬಾರಿ ಯಾವ ಏರ್‌ಪೋರ್ಟ್‌ ತಲುಪಿದ್ದಾರೆ ಎನ್ನುವ ಮಾಹಿತಿ ನೀಡಲು ರೆಡ್ ಕಾರ್ನರ್ ನೊಟೀಸ್ ನೀಡಿ ಮನವಿ ಮಾಡಿದೆ.

ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿಲು ಎಲ್ಲ ರೀತಿಯಿಂದಲೂ ಎಸ್‌ಐಟಿ ಪ್ರಯತ್ನ ಪಡುತ್ತಿದೆ. ಪ್ರಜ್ವಲ್ ರೇವಣ್ಣ ಅವರು ಆಪ್ತರ ಜತೆ ಸಂಪರ್ಕದಲ್ಲಿರುವ ಹಿನ್ನೆಲೆಯಲ್ಲಿ ಆಪ್ತರು ಹಾಗೂ ಕುಟುಂಬದ ಸದಸ್ಯರ ಮೇಲೆಯೂ ನಿಗಾವಹಿಸಲಾಗಿದೆ. ರಾಜ್ಯದಲ್ಲಿ ಎರಡನೇ ಹಂತ ಮುಗಿದ ನಂತರ ಪ್ರಜ್ವಲ್‌ ಎಸ್‌ಐಟಿ ಮುಂದೆ ಶರಣಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಅದಾಗ್ಯೂ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಮೇಲೆ ನಿಗಾ ವಹಿಸಿದ್ದಾರೆ. ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.

Continue Reading

ಕರ್ನಾಟಕ

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧನದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿಚಾರಣೆಯನ್ನು ಎಸ್‌ಐಟಿ ತೀವ್ರಗೊಳಿಸಿದೆ. ಈ ಮಧ್ಯೆ ಇಂದು (ಮೇ 6) ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಬೇಲ್‌ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ ಬಂಧನದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿಚಾರಣೆಯನ್ನು ಎಸ್‌ಐಟಿ ತೀವ್ರಗೊಳಿಸಿದೆ. ಈ ಮಧ್ಯೆ ಇಂದು (ಮೇ 6) ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದರಿಂದ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ಕೂಡ ಜಾಮೀನು ದೊರೆಯು ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನ ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವುದು ಅನಿವಾರ್ಯವಾಗಲಿದೆ.

ಭಾನುವಾರ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆ ವೇಳೆ ರೇವಣ್ಣ ಅವರನ್ನು ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು. ಹೀಗಾಗಿ ತನಿಖಾ ಭಾಗವಾಗಿ ನಾಲ್ಕು ದಿನಗಳ ಕಾಲ ರೇವಣ್ಣ ಎಸ್‌ಐಟಿ ವಶದಲ್ಲಿ ಇರಲಿದ್ದಾರೆ.

ಇಂದು ರೇವಣ್ಣ ಪರ ವಕೀಲರು ಬೇಲ್ ಅರ್ಜಿ ಸಲ್ಲಿಸಿದರೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಸ್ಟಡಿಯಲ್ಲಿರುವ ಅವರಿಗೆ ಹಿನ್ನೆಲೆ ಜಾಮೀನು ಕೊಟ್ಟರೆ ತನಿಖೆಗೆ ಹಿನ್ನೆಡೆಯಾಗಬಹುದು ಎಂದು ಎಸ್‌ಐಟಿ ವಾದ ಮಂಡಿಸಲಿದೆ. ಇದೇ ಕಾರಣಕ್ಕೆ ರೇವಣ್ಣ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಸ್ಟಡಿ ಅವಧಿ ನಂತರವೇ ಜಾಮೀನು ಭಾಗ್ಯ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಒತ್ತಡದಲ್ಲಿರುವ ರೇವಣ್ಣ

ಇನ್ನು ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸುಸ್ತಾಗಿರುವಂತೆ ಅವರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಎಸ್ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸಲಿಲ್ಲ. ಇಂದು ಬೆಳಗ್ಗೆ ಮತ್ತೆ ಪ್ರಕರಣದ ಬಗ್ಗೆ ಪ್ರಶ್ನಿಸಲಿದ್ದಾರೆ.

ರೇವಣ್ಣ ಬಂಧನವಾಗಿ 24 ಗಂಟೆ ಕಳೆದರೂ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿಲ್ಲ. ಯಾವಾಗಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೇವಣ್ಣ ಸದ್ಯ ಒಬ್ಬಂಟಿಯಾಗಿದ್ದಾರೆ. ಶನಿವಾರ ಬಂಧನವಾದಾಗಿನಿಂದ ಸರಿಯಾಗಿ ನಿದ್ದೆ ಮಾಡದೇ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳ ಮಹಜರು

ಇಂದು (ಮೇ 6) ಸ್ಥಳ ಮಹಜರಿಗೆ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಇದೇ ವೇಳೆ ಸಂತ್ರಸ್ತೆಯನ್ನು ಅಕ್ರಮವಾಗಿ ಕೂಡಿಟ್ಟಿ ಸ್ಥಳ ತೋಟದ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್‌ ಆರಂಭಿಸಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Continue Reading

ಕರ್ನಾಟಕ

Dr.Nagareddy Patil: ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ (79) ನಿಧನ ಹೊಂದಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು. ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಡಾ.ನಾಗರೆಡ್ಡಿ ಪಾಟೀಲ್‌ ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದರು.

VISTARANEWS.COM


on

Dr.Nagareddy Patil
Koo

ಕಲಬುರಗಿ: ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ (79) ನಿಧನ ಹೊಂದಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಅವರು ಹೃದಯಾಘಾತದಿಂದ ನಿಧನರಾದರು. ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಎನಿಸಿಕೊಂಡಿರುವ ಡಾ.ನಾಗರೆಡ್ಡಿ ಪಾಟೀಲ್‌ (Dr.Nagareddy Patil) ಎರಡು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದರು.

ನಾಗರೆಡ್ಡಿ ಅವರ ಪುತ್ರ ಶಿವಶರಣರೆಡ್ಡಿ ಪಾಟೀಲ್‌ ಸದ್ಯ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾಗರೆಡ್ಡಿ ಅವರು ಸಹೋದರ ಮತ್ತು ಸಹೋದರಿಯರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಇಂದು (ಮೇ 6) ಅಪರಾಹ್ನ 3.30ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೋನಿ ಪಕ್ಕದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

1983-85ರ ಅವಧಿಯಲ್ಲಿ ಬಿಜೆಪಿ ಶಾಸಕರಾಗಿದ್ದ ಡಾ.ನಾಗರೆಡ್ಡಿ ಬಳಿಕ ಜನತಾದಳ ಸೇಪರ್ಡೆಯಾಗಿದ್ದರು. ಬಳಿಕ ಕಾಂಗ್ರೆಸ್‌ ಸೇರಿದ್ದ ಅವರು ಸುಮಾರು ಎರಡು ದಶಕಗಳಿಂದ ಕಾಂಗ್ರೆಸನಲ್ಲೇ ಇದ್ದರು.

ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ವಾರದ ಹಿಂದೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದರು.

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು. 

ಇದನ್ನೂ ಓದಿ: A Devendra Gowda: ಎಂ. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ ನಿಧನ

Continue Reading

ಕರ್ನಾಟಕ

Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಹೆಲ್ಪ್‌ಲೈನ್‌ ತೆರೆದಿದೆ. ಸಂತ್ರಸ್ತೆಯರಿಗೆ ಕಾನೂನು ನೆರವು ಮತ್ತು ರಕ್ಷಣೆ ನೀಡಲು ಈ ಕ್ರಮ ಕೈಗೊಳ್ಳಲಾಗಿದ್ದು, ಹಲವು ಕರೆಗಳು ಬರುತ್ತಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಇದೀಗ ಹೆಲ್ಪ್‌ಲೈನ್‌ ನಂಬರ್‌ಗೆ ಕೆಲವು ಸಂತ್ರಸ್ತೆಯರು ನೇರ ಕರೆ ಮಾಡಿದರೆ, ಇನ್ನು ಕೆಲವರು ಸಂತ್ರಸ್ತೆಯರ ಪರವಾಗಿ ಮಾತನಾಡುತ್ತಿದ್ದಾರೆ. ಬರುತ್ತಿರುವ ಎಲ್ಲ ಕರೆಗಳನ್ನು ಸ್ವೀಕರಿಸಿ ಎಸ್‌ಐಟಿ ಅಧಿಕಾರಿಗಳ ತಂಡ ವಿವರಗಳನ್ನು ಕಲೆ ಹಾಕುತ್ತಿದೆ. ಸಂತ್ರಸ್ತೆಯರ ವಿಳಾಸ ಸಂಗ್ರಹಿಸಲಾಗುತ್ತದೆ. ಬಳಿಕ ಎಸ್‌ಐಟಿ ತಂಡ ಅವರನ್ನು ನೇರವಾಗಿ ಭೇಟಿಯಾಗಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಈಗಾಗಲೇ ಶಾಸಕ, ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಬಂಧನವಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಸಂತ್ರಸ್ತೆಯರು ಇರುವುದರಿಂದ ಅವರಿಗೆ ಕಾನೂನು ನೆರವು ಮತ್ತು ರಕ್ಷಣೆ ನೀಡಲು ಎಸ್‌ಐಟಿ (ವಿಶೇಷ ತನಿಖಾ ತಂಡ) ಹೆಲ್ಪ್‌ಲೈನ್‌ (Help Line) ತೆರೆದಿದೆ. ಇದೀಗ ಈ ಹೆಲ್ಪ್‌ಲೈನ್‌ ನಂಬರ್‌ಗೆ ಹಲವು ಕರೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ಕೇಸ್‌ ಸಂಬಂಧ ಈಗಾಗಲೇ ಎಸ್‌ಐಟಿ ಸಂತ್ರಸ್ತೆಯನ್ನು ಸಂಪರ್ಕಿಸಲು ಮುಂದಾಗಿದೆ. ಒಂಭತ್ತು ಮಂದಿ ಸಂತ್ರಸ್ತೆಯರನ್ನ ಸಂಪರ್ಕಿಸಿ ಮಾಹಿತಿ ಕಲೆ ಹಾಕಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಹೆಲ್ಪ್‌ಲೈನ್‌ ಅನ್ನೂ ತೆರೆಯಲಾಗಿದೆ. ಇದೀಗ ಹೆಲ್ಪ್‌ಲೈನ್‌ ನಂಬರ್‌ಗೆ ಕೆಲವು ಸಂತ್ರಸ್ತೆಯರು ನೇರ ಕರೆ ಮಾಡಿದರೆ, ಇನ್ನು ಕೆಲವರು ಸಂತ್ರಸ್ತೆಯರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರುತ್ತಿರುವ ಎಲ್ಲ ಕರೆಗಳನ್ನು ಸ್ವೀಕರಿಸಿ ಎಸ್‌ಐಟಿ ಅಧಿಕಾರಿಗಳ ತಂಡ ವಿವರಗಳನ್ನು ಕಲೆ ಹಾಕುತ್ತಿದೆ. ಸಂತ್ರಸ್ತೆಯರ ವಿಳಾಸ ಸಂಗ್ರಹಿಸಲಾಗುತ್ತದೆ. ಬಳಿಕ ಎಸ್‌ಐಟಿ ತಂಡ ಅವರನ್ನು ನೇರವಾಗಿ ಭೇಟಿಯಾಗಲಿದೆ. ಬರುತ್ತಿರುವ ಕಾಲ್‌ಗಳ ಪೈಕಿ ಯಾವುದು ಹುಸಿ ಕರೆ, ಯಾವುದು ನಿಜವಾದ ಕರೆ ಎನ್ನುವುದನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅದಿಕಾರಿಗಳು ವಿವರಿಸಿದ್ದಾರೆ.

ಹೆಲ್ಪ್‌ಲೈನ್‌ ನಂಬರ್‌ ಇದು

ತನಿಖೆ ವೇಳೆ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ಗೊತ್ತಾಗಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಹೆಲ್ಪ್‌ಲೈನ್‌ ನಂ. 6360938947ಕ್ಕೆ ಕರೆ ಮಾಡಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ಎಸ್‌ಐಟಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿತ್ತು.

ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ

ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.

ಅಶ್ಲೀಲ ವಿಡಿಯೊಗಳನ್ನು ಹಂಚಿಕೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆ್ಯಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿಡಿಯೋ ಹಂಚಿಕೆ ಸಂತ್ರಸ್ತ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದೆ.

ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿ ನಾಚಿಕೆ, ಹಿಂಜರಿಕೆ, ಅವಮಾನ ಪಡಬೇಕೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು. ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಈ ವಿಚಾರದಲ್ಲಿ ಎಸ್‌ಐಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರ್‌, ವೈದ್ಯರು ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್‌ಐಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ಸಿಐಡಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ | Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

Continue Reading
Advertisement
amethi unrest
ದೇಶ14 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ54 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ56 mins ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್1 hour ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ2 hours ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್2 hours ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Terrorist Attack
ದೇಶ2 hours ago

Terrorist attack: ʼಮಗನ ಬರ್ತ್‌ ಡೇ ಪಾರ್ಟಿಗೆ ಪ್ಲ್ಯಾನ್‌ ಮಾಡಿದ್ದ, ಆದರೆ ಈಗ…ʼ ಕಣ್ಣೀರಿಟ್ಟ ಹುತಾತ್ಮ ಯೋಧನ ಕುಟುಂಬ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ15 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ17 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌