ಮಕ್ಕಳ ಕಥೆ: ಮನೆಗೆಲಸ ನೋಡಿಕೊಳ್ಳಲು ಮುಂದಾದ ಪತಿಯ ಗತಿ ಏನಾಯ್ತು? - Vistara News

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಮನೆಗೆಲಸ ನೋಡಿಕೊಳ್ಳಲು ಮುಂದಾದ ಪತಿಯ ಗತಿ ಏನಾಯ್ತು?

ನಾರ್ವೆ ದೇಶದ ಒಂದು ಹಳ್ಳಿ. ಹೆಂಡತಿ ಮನೆಗೆಲಸ ಸರಿಯಾಗಿ ಮಾಡುತ್ತಿಲ್ಲ ಎಂಬುದು ಗಂಡನ ದೂರು. ʼʼಹಾಗಾದ್ರೆ ನೀನೇ ಮಾಡ್ಕೋʼʼ ಎಂದಳು ಹೆಂಡತಿ. ಹಾಗೆ ಮನೆವಾಳ್ತೆ ನೋಡಿಕೊಳ್ಳಲು ಮುಂದಾದ ಗಂಡನ ಗತಿ ಏನಾಯ್ತು? ಈ ಮಕ್ಕಳ ಕಥೆ ಓದಿ ನೋಡಿ.

VISTARANEWS.COM


on

norway folk story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಕಥೆಯನ್ನು ಇಲ್ಲಿ ಕೇಳಿ:

ಹಲವಾರು ವರ್ಷಗಳ ಹಿಂದಿನ ಕಥೆಯಿದು. ನಾರ್ವೆ ದೇಶದ ಪರ್ವತದ ತಪ್ಪಲಿನಲ್ಲಿ ಒಂದೂರು. ಊರಂಚಿನ ಮನೆಯಲ್ಲಿ ಗಂಡ-ಹೆಂಡತಿ ತಮ್ಮ ಪುಟ್ಟ ಮಗುವಿನೊಂದಿಗೆ ವಾಸಿಸುತ್ತಿದ್ದರು. ಕೃಷಿ ಕೆಲಸವೇ ಅವರ ಕಸುಬಾಗಿತ್ತು. ಮನೆಯ ಸಮೀಪದಲ್ಲಿ ದೊಡ್ಡದೊಂದು ಹೊಲ, ಮನೆಯ ಸುತ್ತ ಒಂದಿಷ್ಟು ಕೋಳಿಗಳು, ಹಸು, ಬೆಕ್ಕು, ನಾಯಿಗಳನ್ನೆಲ್ಲಾ ಸಾಕಿಕೊಂಡಿದ್ದರು. ಮನೆ ಮತ್ತು ಮನೆಯ ಸುತ್ತಲ ಪ್ರಾಣಿಗಳನ್ನು ಹೆಂಡತಿ ನೋಡಿಕೊಂಡರೆ, ಗಂಡನದ್ದು ಹೊಲದ ಕೆಲಸ.

ಒಂದು ಸಂಜೆ ಹೊಲದ ಕೆಲಸದಿಂದ ಮರಳಿ ಮನೆಗೆ ಬಂದ ಪತಿ. ಬಂದವ ನೋಡುತ್ತಾನೆ- ಅಂಬೆಗಾಲಿಡ್ತಾ ಇದ್ದ ಮಗು, ಆಟಿಕೆಗಳನ್ನೆಲ್ಲಾ ಚೆಲ್ಲಿ ಹಾಕಿತ್ತು. ಸ್ವೆಟರ್‌ ನೇಯುವುದಕ್ಕೆ ಅಂತ ಇರಿಸಿಕೊಂಡಿದ್ದ ಉಣ್ಣೆಯ ಚೆಂಡಿನೊಂದಿಗೆ ಆಟವಾಡಿದ ಬೆಕ್ಕು ಅದನ್ನು ಮನೆಯೆಲ್ಲಾ ಉರುಳಾಡಿಸಿತ್ತು. ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ, ಮನೆಯೆಲ್ಲಾ ಕೊಳಕಾಗಿದೆ ಅಂತ ಅನಿಸಿತು ಆತನಿಗೆ. ʻಇದೇನಿದು, ಮನೆಯೋ… ಕಸದ ಗುಂಡಿಯೊ?ʼ ಎಂದು ಮುಖ ಕಿವುಚಿದ ಪತಿ.

ʻಮಗು, ಬೆಕ್ಕು- ಯಾವುದಕ್ಕೂ ಹೇಳಿದ್ದು ತಿಳಿಯುವುದಿಲ್ಲʼ ಎಂದಳು ಮಡದಿ ನಗುತ್ತಾ.

ʻನಿನಗಾದರೂ ತಿಳಿಯಬೇಡವೇ? ಇದೀಗ ಆನೆ ಹೊಕ್ಕ ಅಂಗಳದಂತೆ ಕಾಣುತ್ತಿದೆ ನಮ್ಮ ಮನೆʼ ಎಂದ ಪತಿ ಇನ್ನಷ್ಟು ಕೋಪದಿಂದ.

ʻಇದೊಳ್ಳೆ ಮಾತು ನಿಮ್ಮದು! ಮನೆಯೆಲ್ಲಾ ಚೆಲ್ಲಾಡಿಕೊಂಡಿರುವುದು ಇದೇ ಮೊದಲೇನಲ್ಲವಲ್ಲ. ಸ್ವಚ್ಛ ಮಾಡಿದರಾಯ್ತು ಬಿಡಿʼ ಎಂದಳು ಪತ್ನಿ.

ʻಅದೆಲ್ಲಾ ಆಗದು! ನಾನು ಮನೆಗೆ ಬರುವಷ್ಟರಲ್ಲಿ ಮನೆ ಸ್ವಚ್ಛವಾಗಿರಬೇಕು. ಬೆಳಗ್ಗೆ ಬೇಗ ಕೆಲಸಕ್ಕೆ ಹೋಗುವುದಿಲ್ಲವೇ ನಾನುʼ ಎಂದು ಸಿಡುಕಿದ ಪತಿ.

ʻನಿಮಗಿಂತ ಮೊದಲೇ ಎದ್ದು, ಕೋಳಿಗೂಡಿಗೆ ಹೋಗಿ, ನೀವು ಏಳುವಷ್ಟರಲ್ಲಿ ಬಿಸಿಯಾದ ಮೊಟ್ಟೆ ಮತ್ತು ಬ್ರೆಡ್‌ ತಯಾರು ಮಾಡುವುದು ಯಾರು?ʼ ಕೇಳಿದಳು ಪತ್ನಿ.

ʻಅಷ್ಟೆ ತಾನೇ! ಆದರೆ ಬಿಸಿಯಾದ ಬ್ರೆಡ್‌ ಜೊತೆಗೆ ತಾಜಾ ಬೆಣ್ಣೆ ಹಾಕಿಕೊಂಡು ತಿಂದು ಎಷ್ಟು ದಿನವಾಯ್ತು ನೆನಪಿದೆಯೇ?ʼ ಕೇಳಿದ ಪತಿ.

ʻಬೆಣ್ಣೆ ತಯಾರು ಮಾಡುವುದಕ್ಕೆ ಸಮಯ ಬೇಕು. ಅಷ್ಟು ಬೆಳಗಿಗೆ ಅದೆಲ್ಲಾ ಆಗುವುದಲ್ಲ. ಈಗ ಬಿಸಿ ಸೂಪಿಗೆ ಬೆಣ್ಣೆ ಉಂಟಲ್ಲ ನಿಮಗೆʼ ಎಂದಳು ಮಡದಿ.

ʻಅದೇನು ಕೆಲಸ ಮಾಡುತ್ತೀಯೋ ನೀನಂತೂ! ಇರುವುದೊಂದು ಮಗು, ಒಂದು ಬೆಕ್ಕು, ಒಂದು ನಾಯಿ, ಒಂದು ಹಸು, ಒಂದಿಷ್ಟು ಕೋಳಿಗಳು, ಒಂದು ಮನೆ- ಇದಿಷ್ಟು ನೋಡಿಕೊಳ್ಳುವುದಕ್ಕೆ ನಿನ್ನಿಂದಾಗದುʼ ಎಂದು ಮೂದಲಿಸಿದ ಗಂಡ.

ʻನಾಳೆಯಿಂದ ನೀವೇ ಮನೆವಾಳ್ತೆ ನೋಡಿ. ನಾನೇ ಹೊಲಕ್ಕೆ ಹೋಗುತ್ತೇನೆʼ ಎಂದು ನಗುತ್ತಾ ನುಡಿದಳು ಪತ್ನಿ. ʻಅಯ್ಯೊ! ಅದರಲ್ಲೇನಂತೆ? ಖಂಡಿತಾ ಮಾಡುತ್ತೇನೆ. ನನ್ನ ಕೆಲಸವನ್ನು ನೀನು ಮಾಡುʼ ಎಂದ ಪತಿ. ʻಸರಿ, ನನಗೂ ಒಂದಿಷ್ಟು ಬಿಡುವು ದೊರೆತ ಹಾಗಾಯ್ತುʼ ಎಂದು ನೆಮ್ಮದಿಯಿಂದ ಮಲಗಿದಳು ಪತ್ನಿ.

ಮರುದಿನ ಬೆಳಗಾಯ್ತು. ಕತ್ತಿಯೊಂದನ್ನು ಹಿಡಿದ ಪತ್ನಿ, ಗಂಡನ ಬದಲಿಗೆ ತಾನೇ ಹೊಲದತ್ತ ಸಾಗಿದಳು. ಮಡದಿ ಹೊರಗೆ ಹೋಗುತ್ತಿದ್ದಂತೆ, ಕೋಳಿಗೂಡಿಗೆ ಹೋಗಿ ಮೊಟ್ಟೆಗಳನ್ನು ತಂದು ಬೇಯುವುದಕ್ಕೆ ಇಟ್ಟ ಪತಿ. ʻಮೊದಲು ಮೊಸರು ಕಡೆದು ಬೆಣ್ಣೆ ತೆಗೆಯುತ್ತೇನೆ. ತೋರಿಸುತ್ತೇನೆ ಇವಳಿಗೆʼ ಎಂದುಕೊಂಡ ಪತಿ, ಕಡಗೋಲೊಂದನ್ನು ಮಡಿಕೆಗೆ ಸಿಕ್ಕಿಸಿ ಕಡೆಯಲು ಕೂತ. ಒಂದಿಷ್ಟು ಹೊತ್ತು ಮೊಸರು ಕಡೆಯುತ್ತಿದ್ದಂತೆಯೇ, ಅಂಗಳದಲ್ಲೇನೋ ಶಬ್ದವಾಗಿ ಕೋಳಿಗಳೆಲ್ಲಾ ಕೂಗಾಡುತ್ತಿದ್ದವು. ʻಅರೆರೆ! ಕೋಳಿಗೂಡಿನ ಬಾಗಿಲು ಮುಚ್ಚುವುದನ್ನೇ ಮರೆತೆʼ ಎನ್ನುತ್ತಾ ಹೊರಗೋಡಿದ ಆತ. ಕೋಳಿಗೂಡಿನೊಳಗೆ ಇವರ ನಾಯಿ ನುಗ್ಗಿ ಧಾಂದಲೆ ಎಬ್ಬಿಸುತ್ತಿತ್ತು. ʻಹಚ್‌, ಹಚ್‌… ಈ ಹಾಳು ನಾಯಿಗೆ ಬೇರೆ ಕೆಲಸವೇ ಇಲ್ಲʼ ಎಂದು ನಾಯಿಯನ್ನು ಓಡಿಸಿ, ಹೊರಗೆಲ್ಲಾ ಕುಣಿದು ಕುಪ್ಪಳಿಸುತ್ತಿದ್ದ ಕೋಳಿಗಳನ್ನು ಮತ್ತೆ ಗೂಡು ಸೇರಿಸುವಷ್ಟರಲ್ಲಿ ಸಾಕೋಸಾಕಾಯಿತು.

ಅವುಗಳಿಗೆ ಬೈಯ್ಯುತ್ತಾ ಮನೆಯೊಳಗೆ ಬಂದರೆ, ಮೊಸರಿನ ಮಡಿಕೆಯನ್ನು ಉರುಳಿಸಿದ ಬೆಕ್ಕು, ನೆಲಕ್ಕೆ ಚೆಲ್ಲಿದ್ದನ್ನೆಲ್ಲಾ ನೆಕ್ಕುತ್ತಾ ಕುಳಿತಿತ್ತು. ʻದರಿದ್ರ ಬೆಕ್ಕೇ! ತೊಲಗಿಲ್ಲಿಂದʼ ಎಂದು ಕಿರುಚುತ್ತಾ ಕೈಗೆ ಸಿಕ್ಕಿದ್ದರಲ್ಲಿ ಬೆಕ್ಕಿಗೆ ಬಡಿದು, ಮಡಿಕೆಯನ್ನು ಎತ್ತಿಕೊಂಡರೆ ಕೆಳಗೆ ಇನ್ನೂ ಸ್ವಲ್ಪ ಮೊಸರು ಉಳಿದಿತ್ತು. ಅದನ್ನಾದರೂ ಕಡೆದು ಬೆಣ್ಣೆ ತೆಗೆದರಾಯ್ತು ಎಂದುಕೊಂಡ. ಆದರೆ ಈ ಎಲ್ಲಾ ಗದ್ದಲಗಳಿಂದಾಗಿ ತೊಟ್ಟಿಲಲ್ಲಿ ಮಲಗಿದ್ದ ಮಗು ಎದ್ದು ಅಳತೊಡಗಿತ್ತು. ಅದನ್ನೆತ್ತಿಕೊಂಡು ಸಮಾಧಾನ ಮಾಡುವಷ್ಟರಲ್ಲಿ, ಅಡುಗೆ ಮನೆಯಿಂದ ಏನೋ ಸೀದ ವಾಸನೆ ಮೂಗಿಗೆ ಬಡಿದಂತಾಯಿತು. ಹೋಗಿ ನೋಡಿದರೆ, ಬೇಯಲೆಂದು ಇಟ್ಟಿದ್ದ ಮೊಟ್ಟೆ ಕರೀ ಮಸಿಯಂತಾಗಿತ್ತು! ʻಛೇ! ಇವತ್ತು ಸೀದ ಮೊಟ್ಟೆಯನ್ನೇ ತಿನ್ನಬೇಕಲ್ಲʼ ಎಂದು ಬೇಸರವಾಯ್ತು ಆತನಿಗೆ. ಅಷ್ಟರಲ್ಲೇ ನೆನಪಾಗಿದ್ದು ಅಳುತ್ತಿರುವ ಮಗುವಿಗೆ ಹಾಲು ಕುಡಿಸಬೇಕು. ಆದರೆ ಬೆಳಗಿನಿಂದ ಹಸುವಿನ ಹಾಲೇ ಕರೆದಿಲ್ಲ. ಮಾತ್ರವಲ್ಲ, ಅದಕ್ಕೆ ಹುಲ್ಲು, ನೀರನ್ನೂ ಹಾಕಿಲ್ಲ ಎಂದು.

ಮಗುವನ್ನು ಪುನಃ ತೊಟ್ಟಿನಲ್ಲೇ ಮಲಗಿಸಲು ಹೋದರೆ ಅದು ಹಸಿವಾಗಿ ಕಿರುಚತೊಡಗಿತು. ಅದಕ್ಕೊಂದು ಆಟಿಕೆಯನ್ನು ಕೊಟ್ಟು ನೆಲದ ಮೇಲೆಯೇ ಬಿಟ್ಟು ಹಸುವಿನತ್ತ ತೆರಳಿದ ಪತಿ. ಅದಕ್ಕೆ ಹುಲ್ಲು ತಂದು ಹಾಕುವ ಸುಲಭ ಉಪಾಯ ಯಾವುದು ಅಂತ ಯೋಚಿಸಿದಾಗ ಆತನಿಗೆ ಕಂಡಿದ್ದು, ಅವರ ಮನೆಯ ಮಾಡಿನ ಮೇಲೆ ಬೆಳೆದ ಹುಲ್ಲು. ಅಂದಿನ ಕಾಲದಲ್ಲಿ ಆ ದೇಶದ ಪುಟ್ಟ ಮರದ ಮನೆಗಳ ಮಾಡು ಸಾಕಷ್ಟು ತಗ್ಗಾಗಿಯೇ ಇರ್ತಾ ಇತ್ತು. ಹಾಗಾಗಿ ಆ ಮಾಡಿಗೊಂದು ಅಗಲವಾದ ಹಲಗೆಯನ್ನು ಜಾರುಬಂಡೆಯಂತೆ ಸಾಚಿ, ಹಸುವನ್ನು ಅದರ ಮೇಲೆ ಹತ್ತಿಸುವ ಉಪಾಯ ಮಾಡಿದ. ಆದರೆ ಅದಕ್ಕೂ ಮೊದಲು ಹಸುವಿಗೆ ನೀರು ಕುಡಿಸಬೇಕಿತ್ತು. ಇನ್ನೀಗ ನೀರು ಸೇದುವುದಕ್ಕೆ ಬಾವಿಗೆ ಹೋದರೆ ಮೊಸರಿನ ಗಡಿಗೆಯನ್ನು ಮಗು ಉರುಳಿಸುತ್ತದೆ ಎಂದು ಲೆಕ್ಕಹಾಕಿದ ಆತ, ಆ ಗಡಿಗೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಿಂದಿಗೆಯೊಂದಿಗೆ ಬಾವಿಗೆ ತೆರಳಿದ. ಬಿಂದಿಗೆಯನ್ನು ಬಾವಿಗೆ ಬಿಟ್ಟು, ನೀರು ತುಂಬಿತೇ ಎಂದು ಬಗ್ಗಿ ನೋಡುವಷ್ಟರಲ್ಲಿ ಮಡಿಕೆಯಲ್ಲಿದ್ದ ಮೊಸರು ಇವನ ಮೇಲೆಯೇ ಸುರಿಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಚಿನ್ನದ ನಾಣ್ಯದ ಕಳ್ಳನಿಗೆ ಕತ್ತೆ ಬಾಲದ ಪರೀಕ್ಷೆ!

ʻಇವತ್ತು ಎದ್ದ ಘಳಿಗೆಯೇ ಸರಿಯಿಲ್ಲʼ ಎಂದು ತನಗೆ ತಾನೇ ಬೈಯ್ದುಕೊಳ್ಳುತ್ತಾ, ನೀರು ಸೇದಿಕೊಂಡು ಬಂದು ಹಸುವಿಗೆ ಕುಡಿಸಿದ. ಹಾಗೆಯೇ ಮಾಡಿಗೆ ಸಾಚಿದ್ದ ಜಾರುಬಂಡೆಯಂಥ ಹಲಗೆಯ ಮೇಲೆ ಹಸುವನ್ನು ಹತ್ತಿಸಿದ. ಹಸಿದಿದ್ದ ಹಸು, ಹೆಚ್ಚು ಯೋಚಿಸದೆ ಹುಲ್ಲು ಕಂಡಲ್ಲಿ ಹೋಯಿತು. ಒಂದೊಮ್ಮೆ ಹಸು ಬಿದ್ದುಬಿಟ್ಟರೆ…? ಎಂಬ ಯೋಚನೆ ಆತನಿಗೆ ಬರುತ್ತಿದ್ದಂತೆಯೇ, ಅದರ ಹೊಟ್ಟೆಗೊಂದು ಬಾವಿಯ ಹಗ್ಗವನ್ನು ಬಿಗಿದು, ಆ ಹಗ್ಗವನ್ನು ಹೊಗೆ ಉಗುಳಲೆಂದು ಇರಿಸಿದ್ದ ಚಿಮಣಿಯ ಒಳಗೆ ಬಿಟ್ಟ. ಮನೆಯೊಳಗೆ ಹೋದವನೇ ಆ ಹಗ್ಗದ ಇನ್ನೊಂದು ತುದಿಯನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅಷ್ಟರಲ್ಲಾಗಲೇ ನಡು ಮಧ್ಯಾಹ್ನವಾಗಿತ್ತು. ತಾನಿನ್ನೂ ಸೀದ ಮೊಟ್ಟೆಯನ್ನು ತಿಂದಿಲ್ಲ, ಮಗುವಿಗೆ ಹಾಲೂ ಕುಡಿಸಿಲ್ಲ. ಜೊತೆಗೆ ಮಧ್ಯಾಹ್ನಕ್ಕೆ ಬ್ರೆಡ್‌ ಸಿದ್ಧವಾಗಬೇಕು ಎಂದು ಗಡಿಬಿಡಿಯಿಂದ ಮನೆಯೆಲ್ಲಾ ಓಡಾಡುತ್ತಾ ಕೆಲಸ ಮಾಡತೊಡಗಿದ. ಈ ಗಡಿಬಿಡಿಯಲ್ಲಿ ಕಾಲಿಗೆ ಕಟ್ಟಿಕೊಂಡಿದ್ದ ಹಗ್ಗ ಯಾವುದೋ ಕುರ್ಚಿಗೆ ತಾಗಿ ಜಗ್ಗಿದಂತಾಯ್ತು. ಆ ಹಗ್ಗದ ಇನ್ನೊಂದು ತುದಿಯಲ್ಲಿ ಹುಲ್ಲು ಮೇಯುತ್ತಿದ್ದ ಪಾಪದ ಹಸುವೂ ಜಗ್ಗಿದಂತಾಗಿ ಆಯ ತಪ್ಪಿತು- ಆದರೆ ಕೆಳಗೆ ಬೀಳದೆ ಗಾಳಿಯಲ್ಲಿ ನೇತಾಡತೊಡಗಿತು. ಹಸುವಿನ ಭಾರಕ್ಕೆ ನೇರವಾಗಿ ಚಿಮಣಿಯತ್ತ ಜಗ್ಗಿದ ಪತಿಯೂ ಗಾಳಿಯಲ್ಲಿ ತಲೆ ಕೆಳಗಾಗಿ ನೇತಾಡತೊಡಗಿದ. ಮಗುವಿಗಂತೂ ಈ ದೃಶ್ಯ ಕಂಡು ಖುಷಿಯೋ ಖುಷಿ! ಇದೇ ಹೊತ್ತಿನಲ್ಲಿ ಬಿಸಿಲಲ್ಲಿ ದುಡಿದು ದಣಿದು ಊಟಕ್ಕೆಂದು ಮಡದಿ ಮನೆಗೆ ಬಂದಳು.

ಮನೆ ಚಿಮಣಿಗೆ ಸಿಕ್ಕಿ ಹಸು ನೇತಾಡುತ್ತಾ ಬೊಬ್ಬೆ ಹಾಕುವುದನ್ನು ಕಂಡು, ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ಹಸುವಿನ ಹಗ್ಗ ಕತ್ತರಿಸಿದಳು. ಆ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿದ್ದ ಪಾಪದ ಪತಿರಾಯ ಮೇಲಿಂದ ಜರಿದು ಬಿದ್ದ. ಒಳಗಿನಿಂದ ಕೇಳಿಬಂದ ಬೊಬ್ಬೆಗೆ ಹೆದರಿ ಕಂಗಾಲಾದ ಮಡದಿ ಓಡೋಡುತ್ತಾ ಒಳಗೆ ಬಂದರೆ- ಮೊಸರು ಮೆತ್ತಿಕೊಂಡು ಮಗುಚಿ ಬಿದ್ದಿದ್ದ ಪತಿ! ಅವನನ್ನೆಬ್ಬಿಸಿ ಉಪಚರಿಸಿದಳು. ಪ್ರತಿ ದಿನ ಇಷ್ಟೊಂದು ಕೆಲಸಗಳನ್ನು ತನ್ನ ಪತ್ನಿಯೊಬ್ಬಳೇ ಮಾಡುವಾಗ, ಅವೆಲ್ಲಾ ಇಷ್ಟೊಂದು ಕಷ್ಟವೆಂದು ಅನಿಸಿರಲೇ ಇಲ್ಲವಲ್ಲ ಎಂದು ಪತಿಗೆ ಸೋಜಿಗವಾಯ್ತು. ʻದಿನವೂ ಇವನ್ನೆಲ್ಲಾ ಹೇಗೆ ಸುಧಾರಿಸುತ್ತೀಯೋ ನೀನು! ಈ ಹಾಳು ಮನೆಗೆಲಸ ನನ್ನಿಂದಂತೂ ಸಾಧ್ಯವಿಲ್ಲʼ ಎಂದು ದುಗುಡದಿಂದ ಹೇಳಿದ ಪತಿ.

ʻಯಾವುದು ಅಗತ್ಯವೋ ಅದನ್ನು ಮೊದಲು ಮಾಡುತ್ತೇನೆ ನಾನು. ಈಗ ಎಲ್ಲರೂ ಹಸಿದಿದ್ದೇವೆ. ಮೊದಲು ಅಡುಗೆ ಆಗಬೇಕುʼ ಎನ್ನುತ್ತಾ ಒಳಗೆ ನಡೆದಳು ಆಕೆ. ಅಂದಿನಿಂದ ಯಾರೂ ಇನ್ನೊಬ್ಬರ ಕೆಲಸದ ಬಗ್ಗೆ ಕೇವಲವಾಗಿ ಮಾತಾಡಲಿಲ್ಲ.

ಇದನ್ನೂ ಓದಿ: ಮಕ್ಕಳ ಕಥೆ: ಯೂಕಿಯ ಸಮಯಪ್ರಜ್ಞೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ : ಒಂಟೆ ಮತ್ತು ಜೀಬ್ರಾದ ಗೆಳೆತನ

ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು. ಯಾಕೆ ಗೊತ್ತೇ? ಹಾಗಾದರೆ ಈ ಕಥೆಯನ್ನು ಓದಿ.

VISTARANEWS.COM


on

Zebra and camel
Koo


ಮರುಭೂಮಿಯಿಂದ ಸ್ವಲ್ಪ ದೂರದಲ್ಲಿ ಹಸುರಾದ ಹುಲ್ಲುಗಾವಲಿತ್ತು. ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಜೀಬ್ರಾವೊಂದು ವಾಸಿಸುತ್ತಿತ್ತು. ಅದಕ್ಕೆ ಪಕ್ಕದ ಮರುಭೂಮಿಯಲ್ಲಿ ವಾಸಿಸುವ ಒಂಟೆಯೊಂದು ಸ್ನೇಹಿತನಾಗಿತ್ತು. ಇಬ್ಬರೂ ಬಾಲ್ಯದಲ್ಲೇ ಭೇಟಿಯಾಗಿ ಆಡುತ್ತಾ ಬೆಳೆದಿದ್ದರಿಂದ ಆತ್ಮೀಯ ಗೆಳೆಯರಾಗಿದ್ದವು. ವಾರದಲ್ಲಿ ನಾಲ್ಕಾರು ಬಾರಿ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದವು. ತಂತಮ್ಮ ಅನುಭವಕ್ಕೆ ಬಂದ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದವು.

ಜೀಬ್ರಾಗೆ ತನ್ನ ಬಗ್ಗೆ ಬಹಳ ಹೆಮ್ಮೆಯಿತ್ತು. ಚಂದದ ಕಪ್ಪು-ಬಿಳಿ ಪಟ್ಟೆಯ ಕೋಟು ತನ್ನ ಮೈಮೇಲಿದೆ. ಒಂಟೆಯಂತೆ ಕೊಳಕಾದ ಮಣ್ಣು ಬಣ್ಣದ ಮೈಯಲ್ಲ ತನ್ನದು; ದೇಹದ ಆಕೃತಿ ತೀಡಿದಂತೆ ಶಿಸ್ತಾಗಿದೆ, ವಿಚಿತ್ರವಾದ ಡುಬ್ಬ ಬೆನ್ನಿಲ್ಲ ತನಗೆ; ಮೈಯ ಚರ್ಮ ಮಿರಿಮಿರಿ ಮಿಂಚುತ್ತಿದೆ, ಕೂದಲು ತುಂಬಿಕೊಂಡಿಲ್ಲ. ಭಯವಾಗುವಷ್ಟು ಉದ್ದನೆಯ ರೆಪ್ಪೆಯಿಲ್ಲದೆ, ಸುಂದರ ಕಣ್ಣುಗಳಿವೆ ಎಂದೆಲ್ಲಾ ಒಳಗೊಳಗೇ ಜಂಬವಿತ್ತು. ʻಮಣ್ಣಲ್ಲಿ, ಮರಳಲ್ಲಿ ಆಡೋಣ ಬಾʼ ಎಂದು ಒಂಟೆ ಹಲವಾರು ಬಾರಿ ಜೀಬ್ರಾವನ್ನು ಕರೆದಿತ್ತು. ʻಅಯ್ಯೋ, ಇಲ್ಲಪ್ಪ. ನಾ ಬರಲ್ಲ. ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು.

ಆ ವರ್ಷ ಆ ಪ್ರಾಂತ್ಯಕ್ಕೆಲ್ಲಾ ಬರಗಾಲ ಬಂತು. ಹುಲ್ಲುಗಾವಲಿನಲ್ಲಿ ದೂರ ದೂರದವರೆಗೆ ಎಲ್ಲೂ ನೀರು ದೊರೆಯದೆ ಪರದಾಡುವ ಸ್ಥಿತಿ ಉಂಟಾಯಿತು. ಹುಲ್ಲುಗಾವಲಿನ ಉಳಿದೆಲ್ಲಾ ಪ್ರಾಣಿಗಳಂತೆಯೇ ಜೀಬ್ರಾ ಸಹ ಕಂಗಾಲಾಯಿತು. ಒಂಟೆಯ ಜೊತೆಗಿನ ಭೇಟಿಯಲ್ಲಿ ತನ್ನ ಆತಂಕವನ್ನು ಹಂಚಿಕೊಂಡಿತು. ʻನೀರಿಲ್ಲದಿದ್ದರೆ ಬದುಕೋದು ಹೇಗೆ? ಇಲ್ಲಿಂದ ತುಂಬಾ ದೂರ ನಡೆದ ಮೇಲೆ ಸ್ವಲ್ಪ ನೀರಿರೊ ಕೆರೆ ಇದೆಯಂತೆ. ಏನು ಮಾಡೋದು ಗೊತ್ತಾಗ್ತಿಲ್ಲʼ ಎಂದು ದುಗುಡದಿಂದ ಹೇಳಿತು.

ಆದರೆ ಒಂಟೆ ನಿರಾತಂಕವಾಗಿತ್ತು. ಬರಗಾಲದಿಂದ ಉಂಟಾಗುವ ಕಷ್ಟಗಳ ಬಗ್ಗೆ ಅದರ ಮುಖದಲ್ಲಿ ಯಾವ ಬೇಸರವೂ ಇರಲಿಲ್ಲ. ʻನಮಗೇ ನೀರಿಲ್ಲ ಅಂದಮೇಲೆ, ಮರುಭೂಮಿಯಲ್ಲಿ ನಿಮಗಿನ್ನೂ ಕಷ್ಟತಾನೆ?ʼ ಕೇಳಿತು ಜೀಬ್ರಾ. ʻಮಳೆಯಿಲ್ಲದ್ದು, ನೀರಿಲ್ಲದಿರುವುದು ನಮಗೆ ಮಾಮೂಲಿ. ಅದಕ್ಕೆ ಆತಂಕವೆಲ್ಲಾ ಇಲ್ಲʼ ಎಂದಿತು ನಗುತ್ತಾ. ಜೀಬ್ರಾ ಮುಖದಲ್ಲಿ ಚಿಂತೆಯ ಗೆರೆಗಳು ಹೋಗಲಿಲ್ಲ.

ʻಮರುಭೂಮಿಯಲ್ಲಿ ನೀರುಣಿಸುವ ಒಯಸಿಸ್‌ಗಳಿವೆ. ನಾವು ನೀರು ಬೇಕೆನಿಸಿದಾಗ ಅಲ್ಲಿಗೆ ಹೋಗುತ್ತೇವೆ. ನಿನ್ನನ್ನೂ ಬೇಕಿದ್ದರೆ ಕರೆದೊಯ್ಯುತ್ತೇನೆʼ ಎಂದಿತು ಒಂಟೆ. ಆದರೆ ಆ ಸುಡುಬಿಸಿಯಾದ ಮರಳಿನಲ್ಲಿ ನಡೆಯುವುದು ಹೇಗೆ? ಮರಳು ಗಾಳಿ ಬೀಸಿದರೆ ಅದನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಜೀಬ್ರಾಗೆ.

ʻನಮ್ಮ ದೇಹ ಜೀಬ್ರಾಗಳಂತೆ ತಿದ್ದಿ-ತೀಡಿದಂತಿಲ್ಲ, ನಿಜ. ಆದರೆ ಬಿಸಿ ಮರಳಿನಲ್ಲಿ ನಡೆಯಲು ಅನುಕೂಲವಾಗುವ ಹಾಗಿದೆ. ಬೆನ್ನಿನ ಮೇಲಿರುವ ಡುಬ್ಬಿನಿಂದಲೇ ತಿಂಗಳುಗಟ್ಟಲೆ ನಾವು ನೀರು ಕುಡಿಯದೆಯೂ ಬದುಕಿರುವುದು. ನಮ್ಮ ಚರ್ಮ, ಕಣ್ಣು ರೆಪ್ಪೆಗಳೆಲ್ಲಾ ಮರಳು ಗಾಳಿಯನ್ನು ತಡೆಯುವುದಕ್ಕೆಂದೇ ಹೀಗಿವೆ. ಮರಳುಗಾಡಿನಲ್ಲಿ ಬದುಕುವುದಕ್ಕೆ ನಮ್ಮಂತೆ ಇದ್ದರೆ ಮಾತ್ರವೇ ಸಾಧ್ಯʼ ಎಂದಿತು ಒಂಟೆ. ಜೀಬ್ರಾಗೆ ತನ್ನ ತಪ್ಪಿನ ಅರಿವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ʻಮರಳುಗಾಡಿನಲ್ಲಿ ಹಗಲಿಗೆ ಬಿಸಿ ಇದ್ದಂತೆಯೇ ರಾತ್ರಿ ತಂಪಾಗುತ್ತದೆ. ರಾತ್ರಿಯ ವೇಳೆ ನಿನ್ನನ್ನು ಒಯಸಿಸ್‌ ಬಳಿಗೆ ಕರೆದೊಯ್ಯುತ್ತೇನೆ. ಬೇಕಷ್ಟು ನೀರು ಕುಡಿದು, ದೂರದ ನೀರಿರುವ ಕೆರೆಯತ್ತ ಹೊರಡು. ಬರಗಾಲ ಕಳೆದ ಮೇಲೆ ಮರಳಿ ಬಾʼ ಎಂದಿತು ಒಂಟೆ. ಮಿತ್ರನ ಒಳ್ಳೆಯತನಕ್ಕೆ ಸಂತೋಷಪಟ್ಟ ಜೀಬ್ರಾ, ಒಂಟೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

monkey story
Koo

ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಊರಂಚಿನಲ್ಲಿ ಆತನಿಗೊಂದು ಸುಂದರವಾದ ತೋಟವಿತ್ತು. (kIds Corner) ಹಲವು ರೀತಿಯ ಫಲಭರಿತ ಮರಗಳು, ನಾನಾ ಬಣ್ಣದ ಹೂವಿನ ಗಿಡಗಳನ್ನೆಲ್ಲಾ ಆತ ಅಲ್ಲಿ ಬೆಳೆಸಿದ್ದ. ಆ ತೋಟದ ಮೇಲೆ ಆತನಿಗೆ ಬಹಳ ಪ್ರೀತಿಯೂ ಇತ್ತು. ಆ ತೋಟ ಸಾಕಷ್ಟು ವಿಸ್ತಾರವಾಗಿ ಇದ್ದಿದ್ದರಿಂದ ಅದನ್ನು ನೋಡಿಕೊಳ್ಳುವುದಕ್ಕೆ ಮಾಲಿಯೊಬ್ಬನನ್ನು ನೇಮಿಸಿಕೊಂಡ. ಆ ಮಾಲಿಯೂ ತನ್ನ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದ.

ಬೇಸಿಗೆ ಶುರುವಾಯಿತು. ನೆತ್ತಿ ಸುಡುವಂಥ ಬಿಸಿಲಿನಿಂದಾಗಿ ಶ್ರೀಮಂತನ ತೋಟದ ಗಿಡಗಳೆಲ್ಲಾ ಬಸವಳಿದು ಹೋಗುತ್ತಿದ್ದವು. ಹಾಗಾಗಿ ಪ್ರತೀದಿನ ಬಾವಿಯಿಂದ ನೀರೆತ್ತಿಕೊಂಡು ಎಲ್ಲಾ ಗಿಡಗಳಿಗೂ ನೀರುಣಿಸಬೇಕಾಗುತ್ತಿತ್ತು. ಆಗ ಮಾತ್ರವೇ ಬಾಡದಂತೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಈ ಕೆಲಸಕ್ಕೆ ಮಾಲಿಗೇನೂ ಬೇಸರವಿರಲಿಲ್ಲ. ಅವನಿಗೆ ಬೇಸರವಿದ್ದಿದ್ದು ಒಂದೇ ಕಾರಣಕ್ಕೆ. ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ.

ಒಮ್ಮೆ ಆತನ ಊರಿನ ಜಾತ್ರೆ ಬಂತು. ತನ್ನ ಕುಟುಂಬವನ್ನೆಲ್ಲಾ ಆ ಜಾತ್ರೆಗೆ ಕರೆದೊಯ್ಯಬೇಕು. ತಾನೂ ಅಲ್ಲೆಲ್ಲಾ ಅಡ್ಡಾಡಬೇಕು ಎಂಬ ಆಸೆ ಆತನಿಗಿತ್ತು. ಆದರೆ ಎಷ್ಟೇ ಕೇಳಿದರೂ ಸಾಹುಕಾರ ರಜೆ ಕೊಡುವುದಿಲ್ಲ ಎಂಬುದು ಆತನಿಗೆ ಖಾತ್ರಿಯಾಗಿತ್ತು. ಹಾಗೆಂದು ತಾನು ಮರಳಿ ಬರುವಷ್ಟರಲ್ಲಿ ಎರಡು ದಿನಗಳಾಗುತ್ತವೆ, ಅಷ್ಟರಲ್ಲಿ ಗಿಡಗಳೆಲ್ಲಾ ಬಾಡಿ ಹೋಗುತ್ತವೆ ಎಂಬುದೂ ಆತನಿಗೆ ತಿಳಿದಿತ್ತು. ಸಮೀಪದ ಕಾಡಿನಲ್ಲಿ ಯಾರಿಂದಲಾದರೂ ತನಗೆ ನೆರವು ದೊರೆಯಬಹುದೇ ಎಂದು ಯೋಚಿಸಿದ. ಆತನಿಗೆ ಉಪಾಯವೊಂದು ಹೊಳೆಯಿತು.

ಪಕ್ಕದ ಕಾಡಿನಲ್ಲಿ ದೊಡ್ಡ ಹಿಂಡು ಮಂಗಗಳು ವಾಸವಾಗಿದ್ದವು. ಆ ಮಂಗಗಳ ರಾಜನನ್ನು ಮಾಲಿ ಭೇಟಿ ಮಾಡಿದ. ಅಪರೂಪಕ್ಕೊಮ್ಮೆ ತಮ್ಮ ಹಿಂಡು ಆ ತೋಟಕ್ಕೆ ಭೇಟಿ ನೀಡಿದಾಗ, ಹೆದರಿಸಿ ಓಡಿಸುತ್ತಿದ್ದ ಈ ಮಾಲಿ ಈಗ ತನ್ನನ್ನೇಕೆ ನೋಡಲು ಬಂದಿದ್ದಾನೆ ಎಂದು ಮಂಗರಾಜನಿಗೆ ಕುತೂಹಲವಾಯಿತು. ವಿಷಯವೇನು ಎಂದು ಮಾಲಿಯನ್ನು ವಿಚಾರಿಸಿದ.

ʻಮಂಗರಾಜ, ನನಗೆ ಎರಡು ದಿನಗಳ ಮಟ್ಟಿಗೆ ನಮ್ಮೂರಿಗೆ ಹೋಗಬೇಕು. ನನಗೆ ನಮ್ಮ ಸಾಹುಕಾರರು ರಜೆ ಕೊಡುತ್ತಿಲ್ಲ. ಹಾಗಾಗಿ ನೀವೆಲ್ಲಾ ಸೇರಿ ನನಗೊಂದು ಉಪಕಾರ ಮಾಡಬೇಕುʼ ಎಂದು ಮಾಲಿ ವಿನಂತಿಸಿದ.
ʻಉಪಕಾರವೇ! ನಮಗೆಲ್ಲಾ ಮಾಲಿ ಕೆಲಸ ಮಾಡಲು ಬರುವುದಿಲ್ಲʼ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮಂಗರಾಜ.

ʻಅಯ್ಯೋ! ತುಂಬಾ ಕಷ್ಟದ ಕೆಲಸವಲ್ಲ. ತೋಟದ ಬಾವಿಯಿಂದ ನೀರೆತ್ತಿ ಎಲ್ಲಾ ಗಿಡಗಳಿಗೂ ಹಾಕಬೇಕು, ಅಷ್ಟೆ. ಗಿಡ ಹಸಿರಾಗಿದ್ದರೆ ನಾನು ರಜೆಯ ಮೇಲೆ ಹೋದರೂ ನಮ್ಮ ಸಾಹುಕಾರರು ಬಯ್ಯುವುದಿಲ್ಲ. ಇದೊಂದು ಉಪಕಾರ ಮಾಡಿʼ ಎಂದು ಕೇಳಿದ ಮಾಲಿ. ಮಂಗಗಳು ಒಪ್ಪಿಕೊಂಡವು. ಈತ ನೆಮ್ಮದಿಯಿಂದ ಸಂಸಾರ ಸಮೇತ ಜಾತ್ರೆಗೆ ಹೋದ.

ಮಾರನೇದಿನ ಮಂಗಗಳ ಹಿಂಡು ತೋಟಕ್ಕೆ ಬಂದಿಳಿಯಿತು. ಒಂದೆರಡು ಮಂಗಗಳು ಬಾವಿಯಿಂದ ನೀರೆತ್ತುವ ಕೆಲಸವನ್ನು ಶುರು ಹಚ್ಚಿದವು. ಉಳಿದವು ಗಿಡಗಳಿಗೆ ನೀರು ಹಾಕುವ ಕೆಲಸ ವಹಿಸಿಕೊಂಡವು. ಆದರೆ ಅವುಗಳಿಗೊಂದು ಗಂಭೀರವಾದ ಸಮಸ್ಯೆ ಎದುರಾಯಿತು. ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ತಮ್ಮ ರಾಜನನ್ನು ಕೇಳಿದವು. ʻಅಯ್ಯೋ! ಈ ವಿಷಯವನ್ನು ಮಾಲಿಯ ಬಳಿ ಕೇಳಲೇ ಇಲ್ಲವಲ್ಲ. ನನ್ನ ಪ್ರಜೆಗಳಿಗೆ ರಾಜನಾಗಿ ಏನಾದರೂ ಉತ್ತರ ಹೇಳಬೇಕುʼ ಎಂದು ಯೋಚಿಸಿದ ಮಂಗರಾಜ, ಗಿಡಗಳ ಬೇರು ಎಷ್ಟು ದೊಡ್ಡದಿದೆಯೋ ಅಷ್ಟು ಹೆಚ್ಚು ನೀರು ಹಾಕಿ ಎಂದು ಸೂಚಿಸಿತು.

ಬೇರು ಎಷ್ಟು ದೊಡ್ಡದಿದೆ ಎಂದು ನೋಡುವುದು ಹೇಗೆ ಎಂದು ಮಂಗಗಳು ತಂತಮ್ಮಲ್ಲೇ ಚರ್ಚಿಸಿದವು. ʻಕಿತ್ತು ನೋಡೋಣʼ ಎಂದು ಒಂದು ಮಂಗ. ಎಲ್ಲರಿಗೂ ಸರಿ ಎನಿಸಿತು. ಒಂದಿಷ್ಟು ಮಂಗಗಳು ಕೀಳುವ ಕಾರ್ಯ ವಹಿಸಿಕೊಂಡರೆ, ಇನ್ನಷ್ಟು ನೀರು ಹಾಕುವ ಹಾಗೂ ಮತ್ತಷ್ಟು ಪುನಃ ನೆಡುವ ಕೆಲಸ ವಹಿಸಿಕೊಂಡವು. ಕೆಲವೇ ನಿಮಿಷಗಳಲ್ಲಿ ಇಡೀ ತೋಟ ಬುಡಮೇಲಾಯಿತು. ಒಂದು ಗಿಡವನ್ನು ಇನ್ನೊಂದು ಗಿಡದ ಪಕ್ಕ ಹಿಡಿದು ಬೇರಿನ ಉದ್ದ ನೋಡುವುದು, ನೀರಲ್ಲಿ ತೇಲಿಸುವುದು ಮಾಡುತ್ತಾ, ಇಡೀ ತೋಟವನ್ನು ಕೆಸರು ಗದ್ದೆಯನ್ನಾಗಿ ಮಾಡಿದವು. ಬಾವಿಯ ನೀರೆಲ್ಲಾ ಖರ್ಚಾಗುತ್ತಾ ಬಂದಂತೆ ಇವರ ಕೆಲಸವೂ ಪೂರ್ಣಗೊಂಡಿತು. ಮಾಲಿ ಒಪ್ಪಿಸಿದ್ದ ಕೆಲಸವನ್ನು ಮಾಡಿ ಮುಗಿಸಿದ ತೃಪ್ತಿಯಿಂದ ಎಲ್ಲವೂ ಕಾಡಿನತ್ತ ತೆರಳಿದವು.

ಇದನ್ನೂ ಓದಿ : ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸಾಹುಕಾರ ತೋಟದ ವೀಕ್ಷಣೆಗೆ ಬಂದ. ನೋಡಿದರೆ… ಇಡೀ ತೋಟ ಆನೆ ಹೊಕ್ಕಂತಿತ್ತು. ಕೆಂಡಾಮಂಡಲವಾದ ಶ್ರೀಮಂತ ಎಲ್ಲಿ ಹುಡುಕಿದರೂ ಮಾಲಿ ಮಾತ್ರ ಕಾಣಲಿಲ್ಲ. ಜಾತ್ರೆ ಮುಗಿಸಿದ ಮಾಲಿ ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಮರಳಿ ಬಂದ. ಆತನಿಗಾಗಿಯೇ ಕಾಯುತ್ತ ಕುಳಿತಿದ್ದ ಸಾಹುಕಾರ. ತೋಟದ ಸ್ಥಿತಿ ಕಂಡು ಮಾಲಿಯ ಕಣ್ಣಲ್ಲೂ ನೀರು ಬಂತು. ಜಾತ್ರೆಗೆ ಹೋಗಬೇಕಿದ್ದರಿಂದ ತಾನು ಮಾಡಿ ಹೋಗಿದ್ದ ಬದಲಿ ವ್ಯವಸ್ಥೆಯ ಬಗ್ಗೆ ಸಾಹುಕಾರನಲ್ಲಿ ಹೇಳಿದ ಮಾಲಿ ಕ್ಷಮೆ ಕೋರಿದ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ತಾನೆ ಲಾಭ!

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಕುದುರೆ ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ. ಯಾಕೆ ಗೊತ್ತೇ? ಕಥೆ ಓದಿ.

VISTARANEWS.COM


on

Horse riding
Koo

ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್‌ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.

ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.

ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.

ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.

ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.

ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

leopard
Koo

ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್‌ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್‌ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.

ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್‌ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.

ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.

ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್‌ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್‌ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್‌ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.

ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.

ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.

ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.

Continue Reading
Advertisement
Prajwal Revanna Case Kumaraswamy demands DK Shivakumar dismissal behind pen drive conspiracy
ರಾಜಕೀಯ13 mins ago

Prajwal Revanna Case: ಪೆನ್‌ಡ್ರೈವ್‌ ಸಂಚಿನ ಹಿಂದಿರುವ ಡಿ.ಕೆ. ಶಿವಕುಮಾರ್‌ ವಜಾಗೆ ಕುಮಾರಸ್ವಾಮಿ ಆಗ್ರಹ

T20 World Cup 2024
ಕ್ರೀಡೆ25 mins ago

T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

Theft Case In Bengaluru
ಬೆಂಗಳೂರು28 mins ago

Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!

Sunita Williams
ತಂತ್ರಜ್ಞಾನ36 mins ago

Sunita Williams: ಸುನೀತಾ ವಿಲಿಯಮ್ಸ್‌ ಮೂರನೇ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ; ಹೊಸ ದಿನಾಂಕ ಶೀಘ್ರ ಘೋಷಣೆ

Money Guide
ಮನಿ ಗೈಡ್43 mins ago

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌ ಮತ್ತು ಸುಕನ್ಯಾ ಸಮೃದ್ಧಿ; ಇವುಗಳ ಪ್ರಯೋಜನ ಏನೇನು?

Prajwal Revanna Case HD Revanna gets bail today court asked if there was a chance Hearing adjourned till tomorrow
ಕ್ರೈಂ45 mins ago

Prajwal Revanna Case: ಎಚ್‌.ಡಿ. ರೇವಣ್ಣಗೆ ಇಂದು ಸಿಗದ ಜಾಮೀನು; ಅವಕಾಶ ಇದೆಯೇ ಎಂದು ಕೋರ್ಟ್‌ ಪ್ರಶ್ನೆ; ನಾಳೆಗೆ ವಿಚಾರಣೆ ಮುಂದೂಡಿಕೆ

Rahul Gandhi
ದೇಶ49 mins ago

Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

5 Day Work in Banks
ವಾಣಿಜ್ಯ1 hour ago

5 Days Work in Banks: ಬ್ಯಾಂಕ್‌ಗಳು ವಾರದಲ್ಲಿ ಐದೇ ದಿನ ಓಪನ್‌ ಇರಲಿವೆ; ಪರ್ಯಾಯ ವ್ಯವಸ್ಥೆಗೆ ಸಜ್ಜಾಗಿ

Theft Case In Bengaluru
ಬೆಂಗಳೂರು1 hour ago

Theft Case : ತಂದೆ ಬೈದಿದ್ದಕ್ಕೆ ಮನೆ ಬಿಟ್ಟು ಆಟೋ ಹತ್ತಿದ ಯುವಕ; 100 ಗ್ರಾಂ ಚಿನ್ನ ಕಸಿದು ಚಾಲಕ ಎಸ್ಕೇಪ್

Salman Khan
ಸಿನಿಮಾ2 hours ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ19 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ19 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ19 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌