ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು? - Vistara News

EXPLAINER

ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು?

ಭಾರತದಲ್ಲಿ ಈ ಕ್ಷಣ ಹುಟ್ಟುವ ನೂರು ಮಕ್ಕಳಲ್ಲಿ ಎಷ್ಟೆಷ್ಟು ಯಾವ ಯಾವ ರಾಜ್ಯದಲ್ಲಿ ಜನಿಸುತ್ತವೆ, ಮತ್ತು ಅದರಿಂದ ಭವಿಷ್ಯದಲ್ಲಿ ಉಂಟಾಗುವ ಸಾಮಾಜಿಕ- ರಾಜಕೀಯ- ಭೌಗೋಳಿಕ ಪರಿಣಾಮ ಏನೇನು? ಒಂದು ವಿವರವಾದ ನೋಟ ಇಲ್ಲಿದೆ.

VISTARANEWS.COM


on

population
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವಸಂಸ್ಥೆಯೇ ಲೆಕ್ಕಹಾಕಿ ಹೇಳಿರುವ ಪ್ರಕಾರ, 2023ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯ ದೇಶ ಎನಿಸಲಿದೆ. ಈ ವರ್ಷ ಭಾರತದ ಅಂದಾಜು ಜನಸಂಖ್ಯೆ 141.2 ಕೋಟಿ ಆಗಿದ್ದು, ಚೀನಾದಲ್ಲಿ ಅದು 142.6 ಕೋಟಿ ಇದೆ. ಅದಕ್ಕಿಂತ ಕುತೂಹಲಕಾರಿ ಸಂಗತಿ ಒಂದನ್ನು ನೋಡೋಣ. ಭಾರತದಲ್ಲಿ ಪ್ರಸ್ತುತ ವರ್ತಮಾನದಲ್ಲಿ ಹುಟ್ಟುತ್ತಿರುವ ಸರಾಸರಿ ನೂರು ಮಕ್ಕಳಲ್ಲಿ, ಯಾವ ರಾಜ್ಯದ ಮಕ್ಕಳ ಪಾಲು ಎಷ್ಟು ಎಂಬುದು ನಿಮಗೆ ಗೊತ್ತೆ?

india

ಪ್ರತಿ 2 ನಿಮಿಷಕ್ಕೆ 100 ಶಿಶುಗಳು!

ಗೊತ್ತಿಲ್ಲದಿದ್ದರೆ, ನಮ್ಮ ಆಧಾರ್‌ ಪ್ರಾಧಿಕಾರ ಒದಗಿಸಿರುವ ಅಂಕಿ ಅಂಶಗಳನ್ನು ನೋಡೋಣ. ಅದರ ಪ್ರಕಾರ, ದೇಶದಲ್ಲಿ ಇಂದು ಪ್ರತಿ 2 ನಿಮಿಷಕ್ಕೆ 100 ಮಕ್ಕಳು ಜನಿಸುತ್ತಿದ್ದಾರೆ. ಈ ನೂರು ಮಕ್ಕಳಲ್ಲಿ 34 ಮಕ್ಕಳು ಉತ್ತರಪ್ರದೇಶ ಹಾಗೂ ಬಿಹಾರ ಎರಡೇ ರಾಜ್ಯಗಳಲ್ಲಿ ಹುಟ್ಟುತ್ತಿವೆ! ಉತ್ತರದ ನಾಲ್ಕು ರಾಜ್ಯಗಳಲ್ಲಿ ಈ ನೂರ ಮಕ್ಕಳಲ್ಲಿ ಅರ್ಧ ಭಾಗ, ಅಂದರೆ 50 ಮಕ್ಕಳು ಜನಿಸುತ್ತಿವೆ!

ಪ್ರತೀ ರಾಜ್ಯಗಳ ವಿವರ ಹೀಗಿದೆ- ಉತ್ತರಪ್ರದೇಶ 22, ಬಿಹಾರ 12, ಮಧ್ಯಪ್ರದೇಶ 8, ರಾಜಸ್ಥಾನ 7, ಮಹಾರಾಷ್ಟ್ರ 7, ಪಶ್ಚಿಮ ಬಂಗಾಳ 5, ಗುಜರಾತ್‌ 5, ಕರ್ನಾಟಕ 4, ತಮಿಳುನಾಡು 4, ಆಂಧ್ರಪ್ರದೇಶ 3, ತೆಲಂಗಾಣ 3, ಒಡಿಶಾ 3, ಹರಿಯಾಣ ಪಂಜಾಬ್‌ ತಲಾ 2, ಇತರ ರಾಜ್ಯಗಳು ಒಂದು ಅಥವಾ ಒಂದಕ್ಕಿಂತಲೂ ಕಡಿಮೆ.

ಇದು ಏಕೆ ಹೀಗೆ ಎಂಬುದಕ್ಕೆ ಹೆಚ್ಚು ಕಾರಣಗಳನ್ನು ಹುಡುಕಬೇಕಿಲ್ಲ. ದಶಕಗಳಿಂದಲೂ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಭಕ್ತಿಯಿಂದ ಪಾಲಿಸುತ್ತ ಬಂದಿವೆ. ಇಲ್ಲಿ ಶೈಕ್ಷಣಿಕ ಅರಿವು ಕೂಡ ಹೆಚ್ಚು. ಉತ್ತರದ ರಾಜ್ಯಗಳು, ಮುಖ್ಯವಾಗಿ ʻಬಿಮಾರುʼ (ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ) ರಾಜ್ಯಗಳು ಕುಟುಂಬ ಕಲ್ಯಾಣವನ್ನೂ ಅಳವಡಿಸಿಕೊಂಡಿಲ್ಲ. ಇಲ್ಲಿ ಶಿಕ್ಷಣವೂ ಸಾಕಷ್ಟಿಲ್ಲ. ಸಾಕ್ಷರತೆ ಪ್ರಮಾಣ ಕಡಿಮೆ. ಹೀಗಾಗಿ ಸಂಸಾರ ದೊಡ್ಡದು, ಆದಾಯ ಕಡಿಮೆ, ಬಡತನ ಹೆಚ್ಚು. ಬಡತನ ಇನ್ನಷ್ಟು ಶೈಕ್ಷಣಿಕ ಹಿಂದುಳಿಯುವಿಕೆಗೂ ಮತ್ತಷ್ಟು ಮಕ್ಕಳಿಗೂ ಕಾರಣವಾಗುತ್ತದೆ.

ಹೀಗಾಗಿ ಇಂದು ಭಾರತ ಜನಸಂಖ್ಯೆಯ ವಿಷಯದಲ್ಲಿ ಅಸಮತೋಲಿತ ದೇಶ. ಪ್ರತಿ ಎರಡು ನಿಮಿಷದಲ್ಲಿ ಐವತ್ತು ಮಕ್ಕಳು ಉತ್ತರದ ನಾಲ್ಕು ರಾಜ್ಯಗಳಲ್ಲಿ, ಇನ್ನು ಐವತ್ತು ಮಕ್ಕಳು ಇತರ 24 ರಾಜ್ಯಗಳಲ್ಲಿ ಜನಿಸುತ್ತಾರೆ ಎಂದರೆ ಎಷ್ಟು ಅಸಮತೋಲಿತ ಬೆಳವಣಿಗೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಉದ್ಯೋಗಕ್ಕಾಗಿ ಭಾರಿ ವಲಸೆ

ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಭಾರತದಲ್ಲಿ ಬಡತನ ಹಾಗೂ ಉದ್ಯೋಗಕ್ಕಾಗಿ ವಲಸೆ ಹೇಗಿದೆ ಎಂಬುದನ್ನು ತಿಳಿಯಬೇಕು.

2016ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕೇರಳ, ವಲಸಿಗರ ಜನಸಂಖ್ಯೆಯಲ್ಲಿ ಹೆಚ್ಚಿನ ಹೆಚ್ಚಳ ಆಗಿದೆ. ಭಾರತದಲ್ಲಿ 45.36 ಕೋಟಿ ವಲಸಿಗರು ನಾನಾ ಕಾರಣಗಳಿಗಾಗಿ ವಲಸೆ ಹೋಗುತ್ತಾರೆ. ಭಾರತದ 121.03 ಕೋಟಿ ಜನಸಂಖ್ಯೆಯಲ್ಲಿ ವಲಸಿಗರು ಶೇ.37.8ರಷ್ಟಿದ್ದಾರೆ. 2006- 2016ರ ನಡುವೆ ಭಾರತದಲ್ಲಿ ಒಟ್ಟು ವಲಸಿಗರ ಸಂಖ್ಯೆ 44.35 ಪ್ರತಿಶತದಷ್ಟು ಹೆಚ್ಚಾಯಿತು. ತಮಿಳುನಾಡಿನ ವಲಸಿಗ ಜನಸಂಖ್ಯೆ 2011ರಲ್ಲಿ 3.13 ಕೋಟಿಗೆ (98 ಶೇಕಡಾ ಏರಿಕೆ) ಏರಿದೆ. ವಲಸಿಗರೇ ರಾಜ್ಯದ ಜನಸಂಖ್ಯೆಯ ಶೇಕಡಾ 43.4ರಷ್ಟಿದ್ದಾರೆ. ಕೇರಳದ ವಲಸೆ ಜನಸಂಖ್ಯೆ ಶೇಕಡಾ 77ರಷ್ಟು ಹೆಚ್ಚಾಗಿದೆ. ಜನಸಂಖ್ಯೆಯ ಸುಮಾರು 49 ಪ್ರತಿಶತ ಜನರು ಇಲ್ಲಿ ವಲಸಿಗರು.

ಕರ್ನಾಟಕವೂ ತನ್ನ ವಲಸೆ ಜನಸಂಖ್ಯೆಯಲ್ಲಿ 50 ಪ್ರತಿಶತ ಹೆಚ್ಚಳವನ್ನು ತೋರಿಸಿದೆ. 1.66 ಕೋಟಿಯಿಂದ 2.50 ಕೋಟಿಗೆ ಏರಿದೆ. ವಲಸಿಗ ಜನಸಂಖ್ಯೆಯಲ್ಲಿ ಶೇಕಡಾ 40ರಷ್ಟು ಏರಿಕೆಯಾಗಿದೆ. ಆಂಧ್ರಪ್ರದೇಶದ ಅಂಕಿಅಂಶವೂ ಹೀಗೇ ಇದೆ.

ಇದನ್ನೂ ಓದಿ | ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

ಇವರು ಎಲ್ಲಿಂದ ಬಂದರು? ಎಲ್ಲರೂ ಬಂದುದು ಉತ್ತರದ ರಾಜ್ಯಗಳಿಂದ. ಇದರಲ್ಲಿ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಜನರ ಪಾಲೂ ಸಾಕಷ್ಟಿದೆ. ಇಲ್ಲಿನ ಹವಾಮಾನ, ಶಿಕ್ಷಣ ಮಟ್ಟ, ಉದ್ಯೋಗದ ಲಭ್ಯತೆ, ಜೀವನದ ಸುರಕ್ಷತೆ, ಅಪರಾಧ ಪ್ರಮಾಣ ಕಡಿಮೆಯಾಗಿರುವಿಕೆ ಇತ್ಯಾದಿ ಅಂಶಗಳು ಇವರನ್ನು ಆಕರ್ಷಿಸಿವೆ. ಮುಂದೆಯೂ ಆಕರ್ಷಿಸಲಿವೆ.

ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಬಿಹಾರದವರಾಗಿರುವುದನ್ನು ಕಾಣಬಹುದು. ಕಾರ್ಪೊರೇಟ್‌ ವಲಯದಲ್ಲೂ ಉತ್ತರ ಭಾರತದ ಮಂದಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಬಂದು ನೆಲೆಸಿದ್ದಾರೆ. ಅನೇಕ ಸಲ ಇವರು, ʻಕನ್ನಡ ಮಾತಾಡುವುದಿಲ್ಲ, ಏನೀಗ?ʼ ಎಂದು ಕೇಳಿ ಕನ್ನಡಿಗರ ಸಿಟ್ಟಿಗೆ ಗುರಿಯಾಗಿರುವುದನ್ನೂ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೇ ವಲಯ ಹಾಗೂ ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತರದವರೇ ತುಂಬಿಕೊಳ್ಳಲಿದ್ದಾರೆ, ಈಗಾಗಲೇ ಅರ್ಧಕ್ಕೂ ಅಧಿಕ ಮಂದಿ ತುಂಬಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇರಲಿದ್ದಾರೆ. ಯಾಕೆಂದರೆ ಇವು ಕೇಂದ್ರ ಸರ್ಕಾರದ ಆಡಳಿತವಿರುವ ವಲಯಗಳು.

ಇದರಿಂದ ಆಗಲಿರುವ ಇನ್ನೂ ಒಂದು ಅಪಾಯ ಎಂದರೆ, ರಾಜಕೀಯ ಪ್ರಾತಿನಿಧ್ಯ ನಮಗೆ ಕಡಿಮೆಯಾಗಲಿದೆ. ಅದು ಹೇಗೆ?

ರಾಜಕೀಯದಲ್ಲೂ ಬಲಹೀನ ದಕ್ಷಿಣ

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಗಮನಾರ್ಹವಾದ ಒಂದು ಅಭಿಪ್ರಾಯವನ್ನು ತಿಳಿಸಿತ್ತು. ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿದಂತೆ, ಲೋಕಸಭಾ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದೆ. ಇದು ಅನ್ಯಾಯ ಎಂದಿತ್ತು. 1962ರಿಂದ ಲೋಕಸಭೆಯಲ್ಲಿ ಸಿಕ್ಕಿರುವ ಪ್ರಾತಿನಿಧ್ಯದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ. ಯಾಕೆಂದರೆ ಕಾಲಕಾಲಕ್ಕೆ ತಕ್ಕಂತೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಾಗುತ್ತದೆ. 1962ರ ಚುನಾವಣೆಯವರೆಗೂ ತಮಿಳುನಾಡಿನಲ್ಲಿ 41 ಲೋಕಸಭೆ ಕ್ಷೇತ್ರಗಳಿದ್ದವು. 1962ರಲ್ಲಿ ಅದನ್ನು 39ಕ್ಕೆ ಇಳಿಸಲಾಯಿತು. ಯಾಕೆಂದರೆ ಜನಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಲಾಗಿತ್ತು. ಇದು ಅನ್ಯಾಯ ಹಾಗೂ ನಿಷ್ಕಾರಣ. ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬಹುಮಾನ ನೀಡಬೇಕಾಗಿತ್ತು. ಆದರೆ ಶಿಕ್ಷೆ ನೀಡಲಾಗಿದೆ. ಯಾವ ರಾಜ್ಯಗಳು ಕೇಂದ್ರದ ಯೋಜನೆ ಜಾರಿಗೆ ವಿಫಲವಾಗಿವೆಯೋ ಅವುಗಳಿಗೆ ಬಹುಮಾನ, ಅಂದರೆ ಹೆಚ್ಚು ಎಂಪಿ ಸೀಟ್ ಪ್ರಾತಿನಿಧ್ಯ ನೀಡಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್‌ ಮಾಡಬಹುದಾ?

81ನೇ ವಿಧಿ ಏನು ಹೇಳುತ್ತದೆ?

ಸಂವಿಧಾನದ 81ನೇ ವಿಧಿ ಹೇಳುವ ಪ್ರಕಾರ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೂ ತನ್ನ ಜನಸಂಖ್ಯೆಗೆ ಅನುಗುಣವಾಗಿ, ಲೋಕಸಭೆಯಲ್ಲಿ ಸಮಾನ ರೀತಿಯ ಪ್ರಾತಿನಿಧ್ಯವನ್ನು ಹೊಂದಬೇಕು ಎಂದು ಸಾರುತ್ತದೆ. ಲೋಕಸಭಾ ಕ್ಷೇತ್ರಗಳ ಸರಾಸರಿ ಜನಸಂಖ್ಯಾ ಪ್ರಮಾಣವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲು ಸರಕಾರ ಕ್ಷೇತ್ರ ಮರುವಿಂಗಡಣೆಯನ್ನು ನಡೆಸುತ್ತದೆ. ಇದನ್ನು ಸಂವಿಧಾನದಲ್ಲಿ ಹೇಳಿದಂತೆ ಯಥಾವತ್ ಮರುವಿಂಗಡಣೆ ನಡೆಸುವುದಾದರೆ, ಇಂದು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದಿಲ್ಲಿಗಳು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಬೇಕು. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳು ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳುತ್ತವೆ.

ಕ್ಷೇತ್ರ ಮರುವಿಂಗಡಣೆಗಳು

ಇದುವರೆಗೂ ನಾಲ್ಕು ಕ್ಷೇತ್ರ ಮರುವಿಂಗಡಣೆಗಳು ನಡೆದಿವೆ- 1952, 1963, 1973 ಹಾಗೂ 2002. ಹತ್ತು ವರ್ಷಕ್ಕೊಮ್ಮೆ ಮರುವಿಂಗಡಣೆ ನಡೆಯಬೇಕು. ಸದ್ಯ ಕ್ಷೇತ್ರ ಮರುವಿಂಗಡಣೆಯ ಸ್ವರೂಪಕ್ಕೆ ಕಡಿವಾಣ ಹಾಕಿರುವುದು 1976ರಲ್ಲಿ ತರಲಾದ ಸಂವಿಧಾನದ 42ನೇ ತಿದ್ದುಪಡಿ ಹಾಗೂ 2001ರಲ್ಲಿ ತರಲಾದ 84ನೇ ತಿದ್ದುಪಡಿಗಳು. 42ನೇ ತಿದ್ದುಪಡಿಯ ಪ್ರಕಾರ, ಮುಂದಿನ 25 ವರ್ಷಗಳಿಗೆ(2001) ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡಿರಬೇಕು. ಕುಟುಂಬ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ರಾಜ್ಯಗಳಿಗೆ ಎಚ್ಚರಿಕೆಯಾಗಿ ಈ ನಿಯಮ ರೂಪಿಸಲಾಯಿತು. 2001ರಲ್ಲಿ ಸಂಸತ್ತು 84ನೇ ತಿದ್ದುಪಡಿಯನ್ನು ತಂದಿತು. ಅದರ ಪ್ರಕಾರ, ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ 2026ರವರೆಗೂ 2001ರ ಜನಗಣತಿಯ ಆಧಾರದಲ್ಲೇ ಇರಲಿದೆ; ಅಂದರೆ ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಕ್ಷೇತ್ರಗಳ ಬೌಂಡರಿಗಳು ವ್ಯತ್ಯಾಸವಾಗಬಹುದು. ಹೀಗಿದ್ದರೂ ಎಂಪಿ ಸೀಟುಗಳ ಸಂಖ್ಯೆಯನ್ನು ಕಡಿಮೆ- ಹೆಚ್ಚು ಮಾಡಲು ಸರಕಾರ ಮುಂದಾಗಿಲ್ಲ. ಕಡಿಮೆ ಜನಸಂಖ್ಯೆಯ ರಾಜ್ಯಗಳು ಪ್ರಾತಿನಿಧ್ಯದಲ್ಲಿ ಅನ್ಯಾಯಕ್ಕೊಳಗಾಗಬಹುದು ಎಂಬುದು ಈ ನಡೆಯ ಹಿಂದಿನ ಆತಂಕ.

ಇದನ್ನೂ ಓದಿ: ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

ಪ್ರಾತಿನಿಧ್ಯದಲ್ಲಿ ಏರುಪೇರು

ಕ್ಷೇತ್ರ ಮರುವಿಂಗಡಣೆಯಲ್ಲಿ ಉಂಟಾಗಿರುವ ಈ ನನೆಗುದಿಯಿಂದ ಉಂಟಾಗಿರುವ ನೈಜ ಸಮಸ್ಯೆ ಎಂದರೆ, ಪ್ರಾತಿನಿಧ್ಯದಲ್ಲಿ ಆಗಿರುವ ಏರುಪೇರು. 1977ರಿಂದಲೂ ನಮ್ಮಲ್ಲಿ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಂಪಿಗಳ ಸಂಖ್ಯೆಯಿಲ್ಲ. 1951-52ರಲ್ಲಿ ಒಬ್ಬ ಎಂಪಿ ಎಷ್ಟು ಜನರನ್ನು ಪ್ರತಿನಿಧಿಸುತ್ತಿದ್ದನೋ, ಇಂದು ಅದಕ್ಕಿಂತ ನಾಲ್ಕು ಪಟ್ಟು ಜನರನ್ನು ಪ್ರತಿನಿಧಿಸುತ್ತಿದ್ದಾನೆ. ಭಾರತದಲ್ಲೇ ಹೀಗೆ ಒಬ್ಬ ಎಂಪಿ ಅತ್ಯಧಿಕ ಜನರನ್ನು ಪ್ರತಿನಿಧಿಸುತ್ತಿರುವುದು. ಜಾಗತಿಕ ಸರಾಸರಿ ಒಬ್ಬ ಎಂಪಿಗೆ 1.45 ಲಕ್ಷ ಜನ. ಆದರೆ ಭಾರತದಲ್ಲಿ ಇದು ಸರಾಸರಿ 15 ಲಕ್ಷದಷ್ಟಿದೆ. ಆದರೆ ಇದನ್ನು ಸರಿ ಮಾಡಲೆಂದು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆಗೆ ಮುಂದಾದರೆ, ಕುಟುಂಬ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಿ, ದೇಶಕ್ಕೆ ಹೆಚ್ಚಿನ ತಲಾ ಜಿಡಿಪಿ ಕೊಡಮಾಡುತ್ತಿರುವ ದಕ್ಷಿಣ ಭಾರತದ ನಾಲ್ಕಾರು ರಾಜ್ಯಗಳಿಗೆ ತುಂಬಾ ಅನ್ಯಾಯವಾಗುತ್ತದೆ; ಪ್ರತಿಯೊಂದು ರಾಜ್ಯವೂ ಏಳೆಂಟು ಸಂಸದರನ್ನು ಕಳೆದುಕೊಳ್ಳುತ್ತದೆ. ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತದೆ. ಇದೇ ವೇಳೆಗೆ, ಜನಸಂಖ್ಯೆಯನ್ನು ತಹಬಂದಿಗೆ ತರದೆ, ಜನಸಂಖ್ಯೆಯ ಜೊತೆಗೆ ಬಡತನ ಹೆಚ್ಚಿಸಿ ತಲಾದಾಯ ಕುಸಿದ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸಂಸದರು, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ.

ಸಂಸತ್ ಸದಸ್ಯರ ಪ್ರಮಾಣ

ರಾಜ್ಯ ಪ್ರಮಾಣ (ಶೇ.)
ಉತ್ತರಪ್ರದೇಶ 15.2
ಮಹಾರಾಷ್ಟ್ರ 9.1
ಪಶ್ಚಿಮ ಬಂಗಾಳ 8.0
ಬಿಹಾರ 7.6
ತಮಿಳುನಾಡು7.4
ಕರ್ನಾಟಕ5.3
ಮಧ್ಯಪ್ರದೇಶ 5.3
ಗುಜರಾತ್ 4.9

ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು

ರಾಜ್ಯ   ಎಷ್ಟಿದೆ?ಎಷ್ಟಿರಬೇಕು?
ಉತ್ತರಪ್ರದೇಶ 80     93
ಬಿಹಾರ 40    44
ರಾಜಸ್ಥಾನ25  31
ಮಧ್ಯಪ್ರದೇಶ 29       33
ಹರಿಯಾಣ10 12
ಜಾರ್ಖಂಡ್ 14      14
ಮಹಾರಾಷ್ಟ್ರ 48 51
ಗುಜರಾತ್ 26  27
ಕರ್ನಾಟಕ 28  26
ಪಶ್ಚಿಮ ಬಂಗಾಳ 42    40
ಕೇರಳ 20     15
ಆಂಧ್ರಪ್ರದೇಶ, ತೆಲಂಗಾಣ 42   37
ತಮಿಳುನಾಡು 39     29
ದಿಲ್ಲಿ7 9

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು (Most costly medicine) ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

VISTARANEWS.COM


on

By

Most costly medicine
Koo

ಜೈಪುರ: ಜನಪ್ರಿಯ ನಟ (actor), ಭಾರತ ತಂಡದ ಕ್ರಿಕೆಟಿಗ (cricketer), ವ್ಯಾಪಾರಿಗಳು (Vendor), ತರಕಾರಿ ಮಾರಾಟಗಾರರು ಮತ್ತು ಸಾಮಾನ್ಯ ಜನರು ಒಗ್ಗಟ್ಟಾಗಿ 22 ತಿಂಗಳ ಮಗುವೊಂದರ ಜೀವ ಉಳಿಸಲು ದುಬಾರಿ ಔಷಧ ಖರೀದಿಗಾಗಿ (Most costly medicine) ಹೊರಡಿರುವ ಹೃದಯಸ್ಪರ್ಶಿ ಕಥೆ ರಾಜಸ್ಥಾನದ (Rajasthan) ಜೈಪುರದಲ್ಲಿ (jaipur) ನಡೆದಿದೆ. ಈ ಔಷಧದ ಹಿನ್ನೆಲೆ ಕುತೂಹಲಕರವಾಗಿದೆ.

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾದರು.

ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನರೇಶ್ ಶರ್ಮಾ ಅವರ ಪುತ್ರ ಹೃದಯಾಂಶ್ ಶರ್ಮಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಝೋಲ್ಗೆನ್ಸ್ಮಾ (Zolgensma) ಎಂಬ ಜೀನ್ ಥೆರಪಿ ಇಂಜೆಕ್ಷನ್‌ನೊಂದಿಗಿನ ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದಾಗಿದೆ. ಇದರ ಬೆಲೆ 17.5 ಕೋಟಿ ರೂ.


ಚುಚ್ಚು ಮದ್ದು ನೀಡಲು ಗಡುವು

ಬಾಲಕ 20 ತಿಂಗಳ ಮಗುವಾಗಿದ್ದಾಗ ಫೆಬ್ರವರಿಯಲ್ಲಿ ರಾಜಸ್ಥಾನ ಪೊಲೀಸರು ಕಟ್ಟುನಿಟ್ಟಾದ ಗಡುವನ್ನು ಹೊಂದಿದ್ದ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಏಕೆಂದರೆ ಮಗುವಿಗೆ 2 ವರ್ಷ ವಯಸ್ಸಿನವರೆಗೆ ಮಾತ್ರ ಈ ಚುಚ್ಚುಮದ್ದನ್ನು ನೀಡಬಹುದು.

ನಟ, ಕ್ರಿಕೆಟಿಗನ ಬೆಂಬಲ

ಇವರ ಈ ಅಭಿಯಾನಕ್ಕೆ ಕ್ರಿಕೆಟಿಗ ದೀಪಕ್ ಚಾಹರ್ ಮತ್ತು ನಟ ಸೋನು ಸೂದ್ ಅವರೂ ಬೆಂಬಲ ನೀಡಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಮನವಿಗಳನ್ನು ಪೋಸ್ಟ್ ಮಾಡಿದರು ಮತ್ತು ಜೈಪುರದಾದ್ಯಂತ ಜನರಿಂದ ಹಣವನ್ನು ಸಂಗ್ರಹಿಸುವ ಚಾಲನೆ ನೀಡಲಾಯಿತು.

ಹಣ್ಣು, ತರಕಾರಿ ಮಾರಾಟಗಾರರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಂದ ಹಣದ ಸಹಾಯ ಪಡೆಯಲಾಯಿತು. ವಿವಿಧ ಎನ್‌ಜಿಒಗಳು ಮತ್ತು ಸಾಮಾಜಿಕ ಸಂಸ್ಥೆಗಳು ಪ್ರಚಾರಕ್ಕಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡಿದವು.


ಮೂರು ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

ರಾಜಸ್ಥಾನದಲ್ಲಿ ಈ ಪ್ರಮಾಣದಲ್ಲಿ ಕ್ರೌಡ್‌ಫಂಡಿಂಗ್ ನಡೆಯುತ್ತಿರುವುದು ಇದೇ ಮೊದಲು. ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 9 ಕೋಟಿ ರೂ. ಸಂಗ್ರಹವಾಗಿದ್ದು, ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಹೃದಯಾಂಶ್‌ಗೆ ಚುಚ್ಚುಮದ್ದನ್ನು ನೀಡಲಾಯಿತು. ಉಳಿದ ಮೊತ್ತವನ್ನು ಮೂರು ಕಂತುಗಳಲ್ಲಿ ಒಂದು ವರ್ಷದೊಳಗೆ ಆಸ್ಪತ್ರೆಗೆ ಜಮಾ ಮಾಡಬೇಕಿದೆ.

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂದರೇನು?

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ ಅಥವಾ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಎಂಬುದು ಒಂದು ಆನುವಂಶಿಕ ಅಸ್ವಸ್ಥತೆಯಾಗಿದೆ. ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ವ್ಯಕ್ತಿಯು ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಕೈಕಾಲುಗಳ ಚಲನೆ ಮತ್ತು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆಯು ಸರ್ವೈವಲ್ ಮೋಟಾರ್ ನ್ಯೂರಾನ್‌ಗಳು 1 ಎಂಬ ಜೀನ್‌ನ ನಷ್ಟದಿಂದ ಉಂಟಾಗುತ್ತದೆ. ಇದು ಪ್ರೋಟೀನ್ ತಯಾರಿಸಲು ಅಗತ್ಯವಾದ ಮಾಹಿತಿಯನ್ನು ಹೊಂದಿರುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೂ ಅಗತ್ಯವಾಗಿರುತ್ತದೆ. ಮಾನವ ಸಾಮಾನ್ಯವಾಗಿ ಹೆಚ್ಚುವರಿ ಜೀನ್ (SMN2) ಅನ್ನು ಹೊಂದಿರುತ್ತಾನೆ. ಆದರೆ ಅದು SMN1 ನಷ್ಟವನ್ನು ಭಾಗಶಃ ಸರಿದೂಗಿಸುತ್ತದೆ.

SMN1 ಗೆ ಹೋಲಿಸಿದರೆ SMN2 ಕೇವಲ ಒಂದು ಸಣ್ಣ ಪ್ರಮಾಣದ ಅಗತ್ಯ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ ಮತ್ತು ದೇಹದಲ್ಲಿನ ಅನೇಕ ಜೀವಕೋಶಗಳು ಮತ್ತು ಅಂಗಗಳು ಈ ಕಡಿಮೆ ಪೂರೈಕೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತೋರುತ್ತದೆಯಾದರೂ ಮೆದುಳಿನಿಂದ ಸ್ನಾಯುಗಳಿಗೆ ಸಂದೇಶಗಳನ್ನು ಕಳುಹಿಸುವ ಜವಾಬ್ದಾರಿಯುತ ಮೋಟಾರ್ ನ್ಯೂರಾನ್ ಗಳು ಕಡಿಮೆ ಮಟ್ಟದ SMNಗೆ ಸ್ಪಂದಿಸುವುದಿಲ್ಲ. ಹೀಗಾಗಿ ಇದು ಸ್ನಾಯು ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

17 ಕೋಟಿ ರೂ. ನ ದುಬಾರಿ ಔಷಧ

ಐಎಎನ್ ಎಸ್ ವರದಿ ಮಾಡಿದಂತೆ 17 ಕೋಟಿ ರೂ. ವೆಚ್ಚದ ವಿಶ್ವದ ಅತ್ಯಂತ ದುಬಾರಿ ಚುಚ್ಚುಮದ್ದನ್ನು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ಎರಡು ವರ್ಷದೊಳಗಿನ ಮಕ್ಕಳಿಗೆ ನೀಡಬೇಕು. ಈ ಔಷಧವನ್ನು ಕ್ರೌಡ್‌ಫಂಡಿಂಗ್ ಸಹಾಯದಿಂದ ಝೋಲ್ಗೆನ್ಸ್ಮಾ ಎಂಬ ಈ ಇಂಜೆಕ್ಷನ್ ಅನ್ನು ಯುಎಸ್ ನಿಂದ ಜೈಪುರಕ್ಕೆ ತರಲಾಯಿತು. ಈ ಔಷಧ ಪಡೆಯಲು ಹಲವಾರು ಭಾರತೀಯ ಕುಟುಂಬಗಳು ಪರದಾಡುತ್ತಿವೆ.

ಭಾರತದಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆ ಹೊಂದಿರುವ ಭಾರತೀಯರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಅಸ್ತಿತ್ವದಲ್ಲಿರುವ ಪ್ರಕಾರ 10,000 ಜೀವಂತವಾಗಿ ಜನಿಸಿದ ಶಿಶುಗಳಲ್ಲಿ 1ರಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಣಿಸಿಕೊಳ್ಳುತ್ತಿದೆ. ಒಂದು ಅಧ್ಯಯನದ ಪ್ರಕಾರ 38 ಭಾರತೀಯರಲ್ಲಿ ಒಬ್ಬರು ಬೆನ್ನುಮೂಳೆಯ ಸ್ನಾಯು ಕ್ಷೀಣತೆಗೆ ಒಳಗಾಗುತ್ತಾರೆ.

ಅತ್ಯಂತ ದುಬಾರಿ ಔಷಧ ಇದು

ಅಪರೂಪದ ಆನುವಂಶಿಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯೊಂದಿಗೆ ಜನಿಸಿದ ಶಿಶುಗಳು ಚಿಕಿತ್ಸೆಯಿಲ್ಲದೆ ಎರಡು ವರ್ಷ ಕೂಡ ಪೂರ್ಣಗೊಳಿಸುವುದಿಲ್ಲ. 1990ರ ದಶಕದವರೆಗೂ ಇದಕ್ಕೆ ಯಾವುದೇ ಚಿಕಿತ್ಸೆಗಳು ಇರಲಿಲ್ಲ. ಇದನ್ನು ತಡೆಗಟ್ಟಲು ಇತ್ತೀಚೆಗೆ ಪರವಾನಗಿ ಪಡೆದ ಎರಡು ಔಷಧಿಗಳಿವೆ. ಇದರಲ್ಲಿ ಒಂದು Zolgensma, ಯುಕೆಯಲ್ಲಿ ಶಿಶುಗಳಿಗೆ ಚಿಕಿತ್ಸೆ ನೀಡಲು ಇದು ಇತ್ತೀಚೆಗೆ ಅಷ್ಟೇ ಲಭ್ಯವಾಗುತ್ತಿದೆ. ಇದನ್ನು “ವಿಶ್ವದ ಅತ್ಯಂತ ದುಬಾರಿ ಔಷಧ” ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದರ ಒಂದು ಡೋಸ್ ಗೆ ಸುಮಾರು 1.79 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸ್ ಮೌಲ್ಯ 17 ಕೋಟಿ ರೂ. ಪಾವತಿಸಬೇಕು.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

ಈ ಕಾಯಿಲೆಗೆ ಲಭ್ಯವಿರುವ ಇನ್ನೊಂದು ಔಷಧ ಸ್ಪಿನ್ರಾಜಾ (ಜೆನೆರಿಕ್ ಹೆಸರು ನುಸಿನೆರ್ಸೆನ್) ಇದು SMN2 ಜೀನ್ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸಲು ಸಹಾಯ ಮಾಡುವ ಡಿಎನ್‌ಎಯ ಒಂದು ಸಣ್ಣ ಭಾಗವಾಗಿದೆ. ಇದನ್ನು ನೇರವಾಗಿ ಬೆನ್ನುಮೂಳೆಯ ನಿರ್ಧಿಷ್ಟ ಭಾಗಕ್ಕೆ ಚುಚ್ಚಬೇಕಾಗುತ್ತದೆ. ಇದನ್ನು ನಿಯಮಿತವಾಗಿ ವರ್ಷದಲ್ಲಿ ಆರು ಬಾರಿ ಮಾಡಬೇಕು. ಚಿಕಿತ್ಸೆಯ ಮೊದಲ ವರ್ಷದಲ್ಲಿ ಆರು ಚುಚ್ಚುಮದ್ದುಗಳು ಪ್ರತಿ ಇಂಜೆಕ್ಷನ್‌ಗೆ 75,000 ಡಾಲರ್ ಪಾವತಿಸಬೇಕಾಗುತ್ತದೆ.

2021 ರಿಂದ ಲಭ್ಯವಿರುವ Zolgensma ಮಾನವನ SMN1 ಜೀನ್ ನ ನಕಲು ಮಾಡಲು ಸಹಾಯ ಮಾಡುತ್ತದೆ. SMN1 ಜೀನ್ ಅನ್ನು ರಕ್ತಪ್ರವಾಹಕ್ಕೆ ಚುಚ್ಚಿದಾಗ ಇದು ವ್ಯಕ್ತಿಗೆ ಅಗತ್ಯವಿರುವ ಹೆಚ್ಚಿನ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ನಿರ್ವಹಣೆಗೆ ಸುಲಭ ಮತ್ತು ಕಡಿಮೆ ಅಡ್ಡ ಪರಿಣಾಮ ಉಂಟು ಮಾಡುವ Zolgensmaನ ಕೇವಲ ಒಂದು ಡೋಸ್ ಸಾಕಾಗುತ್ತದೆ.

ಭಾರತಕ್ಕೆ ಈ ಔಷಧ ತರಿಸಲು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ತೆರಿಗೆ ಇಲ್ಲದೇ ಇಲ್ಲಿ ಈ ಔಷಧೀಯ ದರ ಸುಮಾರು 17 ಕೋಟಿ ರೂ. ಆಗುತ್ತದೆ!

ನೊವಾರ್ಟಿಸ್ ವೆಬ್‌ಸೈಟ್‌ನ ಪ್ರಕಾರ, ಈ ಔಷಧವನ್ನು 45 ದೇಶಗಳಲ್ಲಿ ಅನುಮೋದಿಸಲಾಗಿದೆ. 2 500 ಕ್ಕೂ ಹೆಚ್ಚು ರೋಗಿಗಳು ಜಾಗತಿಕವಾಗಿ ಇದರ ಚಿಕಿತ್ಸೆ ಪಡೆಯುತ್ತಾರೆ. ಕಂಪೆನಿಯು 36 ದೇಶಗಳಲ್ಲಿ ಸುಮಾರು 300 ಮಕ್ಕಳಿಗೆ ಇದರ ಥೆರಪಿಯನ್ನು ಉಚಿತವಾಗಿ ನೀಡಿದೆ.

Continue Reading

EXPLAINER

CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

CAA: ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ. ಅಷ್ಟಕ್ಕೂ ಸಿಎಎ ಎಂದರೇನು? ಕೇಂದ್ರದ ಪ್ರಮಾಣಪತ್ರಗಳಲ್ಲಿ ಏನಿರುತ್ತದೆ? ಇಲ್ಲಿದೆ ಮಾಹಿತಿ.

VISTARANEWS.COM


on

CAA
Koo

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ (Indian Citizenship) ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ ಎಂದು ತಿಳಿದುಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಯಾವ ದಾಖಲೆ ಕೊಡುವುದು ಕಡ್ಡಾಯ?

ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆಯಲು ವಲಸಿಗರು ಕೇಂದ್ರ ಸರ್ಕಾರಕ್ಕೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅದರ ದಾಖಲೆ, ಗುರುತಿನ ಚೀಟಿ ಅಥವಾ ದಾಖಲೆ, ವಾಹನ ಚಾಲನಾ ಪರವಾನಗಿ ಸೇರಿ ಯಾವುದೇ ಪರವಾನಗಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರವು ಭಾರತದ ಪೌರತ್ವ ಪಡೆಯಲಿದ್ದಾರೆ.

ಭಾರತದ ಮುಸ್ಲಿಮರಿಗೆ ತೊಂದರೆ ಇಲ್ಲ

ಸಿಎಎ ಜಾರಿಯು ಭಾರತದ ಮುಸ್ಲಿಮರ ಪೌರತ್ವದ ಮೇಲೆ ಪರಿಣಾಮ ಬೀರಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಕಾನೂನಿಗೆ ಭಾರತದಲ್ಲಿರುವ 18 ಕೋಟಿ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ತಮ್ಮ ಹಿಂದೂ ಸಹವರ್ತಿಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೂ ಮೊದಲು, ಸಿಎಎ ಎಂದರೆ, ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸುವುದು ಎಂಬ ವದಂತಿ ಹಬ್ಬಿಸಲಾಗಿತ್ತು.

ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಈ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಇದನ್ನೂ ಓದಿ: CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Continue Reading

ಕರ್ನಾಟಕ

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 (Climate Plan) ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021 ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

VISTARANEWS.COM


on

By

Climate Plan
Koo

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Continue Reading

ರಾಜಕೀಯ

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

POK Explainer in Kannada: ಕಾಶ್ಮೀರದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ (Pakistan Occupied Kashmir) ನಿರಂತರ ಚರ್ಚೆಯಲ್ಲಿರುವ ಪ್ರದೇಶ. ಸುಮಾರು 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಿಒಕೆ ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶದ ಆಡಳಿತವನ್ನು ಪಾಕಿಸ್ತಾನ ಸರ್ಕಾರ ನಿಯಂತ್ರಿಸುತ್ತಿರುವುದು. ಆದರೂ ಇಲ್ಲಿನ ಕುರಿತು ತಿಳಿದುಕೊಳ್ಳಬೇಕಾದ ಹಲವಾರು ಪ್ರಮುಖ ಅಂಶಗಳಿವೆ. ಪಿಒಕೆ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

VISTARANEWS.COM


on

By

POK Explainer in Kannada
Koo

ಪಾಕಿಸ್ತಾನವು (pakistan) 1947ರಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ (POK Explainer in Kannada) ಕಾಶ್ಮೀರದ (kashmir) ಭಾಗಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan Occupied Kashmir) ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ಪಿಒಕೆಯನ್ನು (POK) ಎರಡು ಭಾಗಗಳಾಗಿ ವಿಂಗಡಿಸಿದೆ. ಒಂದು ಆಜಾದ್ ಕಾಶ್ಮೀರ (Azad Kashmir) ಹಾಗೂ ಮತ್ತೊಂದು ಗಿಲ್ಗಿಟ್-ಬಾಲ್ಟಿಸ್ತಾನ್ (Gilgit-Baltistan). ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನಸಂಖ್ಯೆ 2020ರಲ್ಲಿ ಸುಮಾರು 52 ಲಕ್ಷ ಇತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಈಗ ದಂಗೆ ಭುಗಿಲೆದ್ದಿದೆ. ಅಲ್ಲಿಯ ಜನ, ಭಾರತದ ಜತೆ ವೀಲೀನವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಅನಂತರ ಈಗ ಭಾರತೀಯ ಜನರು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


ಪಿಒಕೆ ಎಂದರೇನು?

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಣಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ.

1. ಪಿಒಕೆಯನ್ನು ಆಡಳಿತಾತ್ಮಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನು ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್- ಬಾಲ್ಟಿಸ್ತಾನ್ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದಲ್ಲಿ ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ವನ್ನು ಆಜಾದ್ ಕಾಶ್ಮೀರ ಎಂದೂ ಕರೆಯುತ್ತಾರೆ.

2. ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯಸ್ಥರು ಅಧ್ಯಕ್ಷರಾಗಿದ್ದರೆ, ಪ್ರಧಾನಮಂತ್ರಿಗಳು ಮಂತ್ರಿಗಳ ಮಂಡಳಿಯಿಂದ ಬೆಂಬಲಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

3. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತನ್ನ ಸ್ವ-ಆಡಳಿತ ಅಸೆಂಬ್ಲಿ ಎಂದು ಹೇಳಿಕೊಂಡಿದೆ. ಆದರೆ ವಾಸ್ತವವೆಂದರೆ ಅದು ಪಾಕಿಸ್ತಾನದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

4. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲ ಕಾಶ್ಮೀರದ ಒಂದು ಭಾಗವಾಗಿದೆ. ಇದರ ಗಡಿಗಳು ಪಾಕಿಸ್ತಾನದ ಪಂಜಾಬ್ ಪ್ರದೇಶ, ವಾಯವ್ಯ, ಅಫ್ಘಾನಿಸ್ತಾನದ ವಖಾನ್ ಕಾರಿಡಾರ್, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ಭಾರತದ ಕಾಶ್ಮೀರದ ಪೂರ್ವಕ್ಕೆ ಸ್ಪರ್ಶಿಸುತ್ತವೆ.

5. ಗಿಲ್ಗಿಟ್- ಬಾಲ್ಟಿಸ್ತಾನ್‌ವನ್ನು ತೆಗೆದುಹಾಕಿದರೆ, ಆಜಾದ್ ಕಾಶ್ಮೀರದ ಪ್ರದೇಶವು 13,300 ಚದರ ಕಿಲೋಮೀಟರ್‌ಗಳಷ್ಟು ಅಂದರೆ ಸರಿಸುಮಾರು ಭಾರತದ ಕಾಶ್ಮೀರದ ಸುಮಾರು 3 ಪಟ್ಟು ವಿಶಾಲವಾಗಿದೆ ಮತ್ತು ಅದರ ಜನಸಂಖ್ಯೆಯು ಸುಮಾರು 52 ಲಕ್ಷ.

6. ಆಜಾದ್ ಕಾಶ್ಮೀರದ ರಾಜಧಾನಿ ಮುಜಫರಾಬಾದ್. ಇದು 10 ಜಿಲ್ಲೆಗಳು, 33 ತೆಹಸಿಲ್‌ಗಳು ಮತ್ತು 182 ಫೆಡರಲ್ ಕೌನ್ಸಿಲ್‌ಗಳನ್ನು ಹೊಂದಿದೆ.

7. ಪಾಕ್ ಆಕ್ರಮಿತ ಕಾಶ್ಮೀರದ ದಕ್ಷಿಣ ಭಾಗದಲ್ಲಿ 8 ಜಿಲ್ಲೆಗಳಿವೆ. ಮಿರ್ ಪುರ್, ಭಿಂಬರ್, ಕೋಟ್ಲಿ, ಮುಜಫರಾಬಾದ್, ಬಾಗ್, ನೀಲಂ, ರಾವಲಕೋಟ್ ಮತ್ತು ಸುಧಾನೋತಿ.

8. ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ-ಗಿಲ್ಗಿಟ್, ಶಕ್ಸ್‌ಗಾಮ್ ಕಣಿವೆ, ರಕ್ಸಾಮ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಹಸ್ತಾಂತರಿಸಿತು. ಈ ಪ್ರದೇಶವನ್ನು ಸೆಡೆಡ್ ಪ್ರದೇಶ ಅಥವಾ ಟ್ರಾನ್ಸ್-ಕಾರಕೋರಂ ಟ್ರ್ಯಾಕ್ಟ್ ಎಂದು ಕರೆಯಲಾಗುತ್ತದೆ.

9. ಪಿಒಕೆಯ ಜನರು ಮುಖ್ಯವಾಗಿ ಕೃಷಿ ಮಾಡುತ್ತಾರೆ. ಅವರ ಮುಖ್ಯ ಆದಾಯದ ಮೂಲಗಳು ಜೋಳ, ಗೋಧಿ, ಅರಣ್ಯ ಮತ್ತು ಜಾನುವಾರುಗಳು.

10. ಈ ಪ್ರದೇಶದಲ್ಲಿ ಕಡಿಮೆ ದರ್ಜೆಯ ಕಲ್ಲಿದ್ದಲು ನಿಕ್ಷೇಪಗಳಿವೆ, ಸೀಮೆಸುಣ್ಣದ ನಿಕ್ಷೇಪಗಳು, ಬಾಕ್ಸೈಟ್ ನಿಕ್ಷೇಪಗಳು ಕಂಡುಬರುತ್ತವೆ. ಕೆತ್ತಿದ ಮರದ ವಸ್ತುಗಳು, ಜವಳಿ ಮತ್ತು ಕಾರ್ಪೆಟ್‌ಗಳ ತಯಾರಿಕೆಯು ಈ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕೈಗಾರಿಕೆಗಳ ಮುಖ್ಯ ಉತ್ಪನ್ನಗಳಾಗಿವೆ.

11. ಈ ಪ್ರದೇಶದಲ್ಲಿನ ಕೃಷಿ ಉತ್ಪನ್ನಗಳಲ್ಲಿ ಅಣಬೆ, ಜೇನು, ವಾಲ್ನಟ್, ಸೇಬು, ಚೆರ್ರಿ, ಔಷಧೀಯ ಗಿಡಮೂಲಿಕೆ ಮತ್ತು ಸಸ್ಯಗಳು, ರಾಳ, ಮೇಪಲ್ ಮರಗಳು ಸೇರಿವೆ.

12. ಈ ಪ್ರದೇಶದಲ್ಲಿ ಶಾಲೆಗಳು ಮತ್ತು ಕಾಲೇಜುಗಳ ಕೊರತೆಯಿದೆ. ಆದರೆ ಈ ಪ್ರದೇಶವು ಶೇ. 72ರಷ್ಟು ಸಾಕ್ಷರತೆಯನ್ನು ಹೊಂದಿದೆ.

13. ಪಾಷ್ಟೋ, ಉರ್ದು, ಕಾಶ್ಮೀರಿ ಮತ್ತು ಪಂಜಾಬಿಯಂತಹ ಭಾಷೆಗಳನ್ನು ಇಲ್ಲಿನ ಜನರು ಪ್ರಮುಖವಾಗಿ ಮಾತನಾಡುತ್ತಾರೆ.

14. ಪಾಕ್ ಆಕ್ರಮಿತ ಕಾಶ್ಮೀರ ತನ್ನದೇ ಆದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಹ ಹೊಂದಿದೆ.


ವಿವಾದದ ಮೂಲ ಏನು?

1947ರಲ್ಲಿ ಪಾಕಿಸ್ತಾನದ ಪಷ್ಟೂನ್ ಬುಡಕಟ್ಟು ಜನಾಂಗದವರು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇವರಿಗೆ ಪಾಕ್‌ ಸೇನೆಯ ಕುಮ್ಮಕ್ಕು ಇತ್ತು. ಆಗ ಈ ನಿರ್ಣಾಯಕ ಪರಿಸ್ಥಿತಿಯನ್ನು ನಿಭಾಯಿಸಲು ಆ ಕಾಲದ ಆಡಳಿತಗಾರ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಭಾರತ ಸರ್ಕಾರದಿಂದ ಮಿಲಿಟರಿ ಸಹಾಯವನ್ನು ಕೋರಿದರು ಮತ್ತು ಅಂದಿನ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರು 26 ಅಕ್ಟೋಬರ್ 1947ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಮೂರು ವಿಷಯಗಳು ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನಗಳು ಭಾರತಕ್ಕೆ ಹಸ್ತಾಂತರಿಸಲಾಯಿತು. ಈ ವಿಷಯಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರವು ತನ್ನ ಎಲ್ಲಾ ನಿರ್ಧಾರಗಳಿಗೆ ಮುಕ್ತವಾಗಿತ್ತು.

ಒಪ್ಪಂದದ ಈ ಸೇರ್ಪಡೆಯ ಆಧಾರದ ಮೇಲೆ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಮತ್ತೊಂದೆಡೆ ಪಾಕಿಸ್ತಾನ ಇದನ್ನು ಒಪ್ಪುವುದಿಲ್ಲ.

ಪಾಕಿಸ್ತಾನದ ವಾದ ಏನು?

ಕಾಶ್ಮೀರದ ಮೇಲಿನ ಪಾಕಿಸ್ತಾನದ ಹಕ್ಕು 1993ರ ಘೋಷಣೆಯನ್ನು ಆಧರಿಸಿದೆ. ಈ ಘೋಷಣೆಯ ಪ್ರಕಾರ ಪಾಕಿಸ್ತಾನ ಸರ್ಕಾರದ ಆಡಳಿತವನ್ನು ಸ್ಥಾಪಿಸಬೇಕಾದ 5 ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವೂ ಸೇರಿದೆ. ಆದರೆ ಪಾಕಿಸ್ತಾನದ ಈ ಹೇಳಿಕೆಯನ್ನು ಭಾರತ ಎಂದಿಗೂ ಒಪ್ಪಲಿಲ್ಲ.

ಎರಡು ಭಾಗಗಳಾಗಿ ವಿಂಗಡಣೆ

ಭಾರತ ಮತ್ತು ಪಾಕಿಸ್ತಾನದ ನಡುವಿನ 1947ರ ಯುದ್ಧದ ಅನಂತರ ಕಾಶ್ಮೀರ ಆಡಳಿತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಭಾರತದಿಂದ ಬೇರ್ಪಟ್ಟ ಕಾಶ್ಮೀರದ ಭಾಗವು ಜಮ್ಮು ಮತ್ತು ಕಾಶ್ಮೀರದ ಉಪಖಂಡವಾಯಿತು ಮತ್ತು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಿಂದ ಸಮೀಪದಲ್ಲಿದ್ದ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಯಿತು.

ಆಜಾದ್ ಕಾಶ್ಮೀರ

ಭಾರತದ ಕಾಶ್ಮೀರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿದೆ. 2011ರ ಹೊತ್ತಿಗೆ, ಆಜಾದ್ ಕಾಶ್ಮೀರದ ಜಿಡಿಪಿ 3.2 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಐತಿಹಾಸಿಕವಾಗಿ ಆಜಾದ್ ಕಾಶ್ಮೀರದ ಆರ್ಥಿಕತೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಕಡಿಮೆ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಗೋಧಿ, ಬಾರ್ಲಿ, ಕಾರ್ನ್ (ಮೆಕ್ಕೆಜೋಳ) ಮಾವು, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತದೆ.

ದಕ್ಷಿಣ ಜಿಲ್ಲೆಗಳಲ್ಲಿ, ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ ಅನೇಕ ಪುರುಷರನ್ನು ನೇಮಿಸಿಕೊಳ್ಳಲಾಗಿದೆ. ಇತರ ಸ್ಥಳೀಯರು ಯುರೋಪ್ ಅಥವಾ ಮಧ್ಯಪ್ರಾಚ್ಯದ ದೇಶಗಳಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅವರು ಕಾರ್ಮಿಕ-ಆಧಾರಿತ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

ಉತ್ತರ ಪ್ರದೇಶ

ಗಿಲ್ಗಿಟ್ ಪ್ರದೇಶವನ್ನು ಕಾಶ್ಮೀರದ ಮಹಾರಾಜರು ಬ್ರಿಟಿಷ್ ಸರ್ಕಾರಕ್ಕೆ ಗುತ್ತಿಗೆ ನೀಡಿದರು. ಬಾಲ್ಟಿಸ್ತಾನ್ 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ಪಶ್ಚಿಮ ಲಡಾಖ್ ಪ್ರಾಂತ್ಯದ ಪ್ರದೇಶವಾಗಿತ್ತು. ಈ ಪ್ರದೇಶವು ವಿವಾದಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಭಾಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅತ್ಯಂತ ಕಳಪೆ ಸ್ಥಿತಿಯಲ್ಲಿದೆ. ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಹೊಂದಿದೆ. ಆದರೆ ಈ ಪ್ರದೇಶವನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಭಿವೃದ್ಧಿಪಡಿಸಿಲ್ಲ. ಆದ್ದರಿಂದ ಈ ಪ್ರದೇಶದ ಬಡ ಜನರನ್ನು ಭಯೋತ್ಪಾದಕರಂತೆ ತರಬೇತಿ ನೀಡಲು ಮತ್ತು ಭಾರತವನ್ನು ಅಸ್ಥಿರಗೊಳಿಸಲು ಬಳಸಿಕೊಳ್ಳುತ್ತಿದೆ.

Continue Reading
Advertisement
illegal hunting chikkamagaluru
ಕ್ರೈಂ2 mins ago

Illegal hunting: ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?

Cannes 2024 Aishwarya Rai turns lady in black in Falguni
ಸಿನಿಮಾ9 mins ago

Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟ ​ಐಶ್ವರ್ಯಾ ರೈ!

These foods are really what our body needs in summer
ಆರೋಗ್ಯ32 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ42 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ44 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ56 mins ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ1 hour ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ4 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ19 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌