Congress Crisis | ಅಧಿಕಾರ ಇದ್ದಾಗ ಮುಖಂಡರಿಗೆ ಕಾಂಗ್ರೆಸ್‌ ಅಂದರೆ ಭೂಷಣ, ಈಗ ಪಲಾಯನ! - Vistara News

EXPLAINER

Congress Crisis | ಅಧಿಕಾರ ಇದ್ದಾಗ ಮುಖಂಡರಿಗೆ ಕಾಂಗ್ರೆಸ್‌ ಅಂದರೆ ಭೂಷಣ, ಈಗ ಪಲಾಯನ!

ಹಲವು ಮುಖಂಡರು ಸರ್ವ ಅಧಿಕಾರ, ಹುದ್ದೆ ಅನುಭವಿಸಿ ಈಗ ಕಾಂಗ್ರೆಸ್‌ನಿಂದ ಹೊರ ನಡೆದಿದ್ದಾರೆ. ಬಿಕ್ಕಟ್ಟಿನ (Congress Crisis) ಈ ಸಂದರ್ಭದಲ್ಲಿ ಇವರೆಲ್ಲ ಪಕ್ಷಕ್ಕೆ ಬಲ ತುಂಬುವುದನ್ನು ಬಿಟ್ಟು ಪಲಾಯನ ಮಾಡುತ್ತಿರುವುದು ಎಷ್ಟು ಸರಿ ಎಂಬ ನಿಷ್ಠಾವಂತರ ಪ್ರಶ್ನೆ ಸಹಜ.

VISTARANEWS.COM


on

Congress Crisis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
nalin kumar kateel

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
Success has many fathers, failure is an orphan! ಈ ಮಾತು ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಬಹಳ ಸೂಕ್ತವಾಗಿ ಹೊಂದುತ್ತದೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಎಲ್ಲ ಅಧಿಕಾರಗಳನ್ನು, ಹುದ್ದೆಗಳನ್ನು, ಸೌಲಭ್ಯ, ಸವಲತ್ತುಗಳನ್ನು ಅನುಭವಿಸಿದ ಹಿರಿಯ ನಾಯಕರು ಈಗ ಪಕ್ಷವನ್ನು ಒಬ್ಬೊಬ್ಬರಾಗಿ ತೊರೆಯುತ್ತಿದ್ದಾರೆ. ಹೀಗೆ ತೊರೆದವರೆಲ್ಲ ಕಾಂಗ್ರೆಸ್ ನಾಯಕತ್ವವನ್ನು ತೆಗಳಿಯೇ ಹೊರಟಿದ್ದಾರೆ. ಇಷ್ಟು ವರ್ಷ ಕಾಲ ಪಕ್ಷದೊಂದಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು, ಪಕ್ಷ ಬಿಕ್ಕಟ್ಟು (Congress Crisis) ಎದುರಿಸುತ್ತಿರುವಾಗ ತಮ್ಮ ಸ್ವಹಿತಾಸಕ್ತಿಕ್ಕಾಗಿಯೋ, ಪ್ರತಿಷ್ಠೆಗಾಗಿಯೋ, ಆಮಿಷಕ್ಕಾಗಿಯೋ ತೊರೆಯುತ್ತಿರುವುದು ಸೋಜಿಗ!

ಕಾಂಗ್ರೆಸ್ ಪಕ್ಷವನ್ನು ತೊರೆದವವರೆನ್ನೆಲ್ಲ ಸುಮ್ಮನೆ ಒಮ್ಮೆ ಕಣ್ಣಾಡಿಸಿ. ಎಸ್ ಎಂ ಕೃಷ್ಣ, ಕ್ಯಾಪ್ಟನ್ ಅಮರೀಂದರ್ ಸಿಂಗ್, ಜ್ಯೋತಿರಾಧಿತ್ಯ ಸಿಂಧಿಯಾ, ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಅಶ್ವನಿ ಕುಮಾರ್, ಸುನೀಲ್ ಜಾಖಡ್, ಆರ್‌ಪಿಎನ್ ಸಿಂಗ್, ಕುಲ್ದೀಪ್ ಬಿಷ್ಣೋಯಿ, ಪಿ ಸಿ ಚಾಕೋ, ಜಿತಿನ್ ಪ್ರಸಾದ್ ಮುಂತಾದವರು. ಈ ಪಟ್ಟಿ ಇನ್ನೂ ಬೆಳೆಯುತ್ತಿದೆ!

ಹೀಗೆ ಪಕ್ಷ ಬಿಟ್ಟು ಹೋದವರ ಪೈಕಿ ಬಹುತೇಕರು ಬಿಜೆಪಿ ಪಕ್ಷವನ್ನೇ ಸೇರಿದ್ದಾರೆ. ಇನ್ನು ಕೆಲವರು ಸ್ವಂತ ಪಕ್ಷ ಸ್ಥಾಪಿಸಿ ಬಳಿಕ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಮತ್ತೊಂದಿಷ್ಟು ನಾಯಕರು ಬೇರೆ ಪಕ್ಷಗಳಿಗೆ ಶರಣಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಮಾಜವಾದ, ನೆಹರುವಾದ, ಜಾತ್ಯತೀತ ತತ್ವಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ನಾಯಕರೆಲ್ಲರೂ ಈಗ ಏಕ್ದಮ್ ಸೈದ್ಧಾಂತಿಕವಾಗಿ ಸ್ಥಳಾಂತರಗೊಂಡಿದ್ದಾರೆ! ಇರಲಿ, ಅದೆಲ್ಲ ವೈಯಕ್ತಿಕ ಸಂಗತಿಗಳು. ಯಾರಿಗೂ ಯಾವ ಸಿದ್ಧಾಂತವೂ ಬಹಿಷ್ಕೃತವಲ್ಲ. ಆದರೆ, ಇಷ್ಟು ದಿನ ತಮಗೊಂದು ಇಮೇಜ್ ನೀಡಿದ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿ, ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿ ಹೋಗುತ್ತಿರುವುದು ಈಗಿನ ಸಮಸ್ಯೆ.

ಹಿರಿಯ ನಾಯಕರು ಹಾಗೂ ತೀರಾ ಮಹತ್ವಾಕಾಂಕ್ಷಿ ನಾಯಕರೆಲ್ಲರೂ ಪಕ್ಷದೊಳಗೇ ತಾವು ಬಯಸಿದ ಹುದ್ದೆಯೋ, ಅಧಿಕಾರವೋ ಸಿಗದಿದ್ದಕ್ಕೆ ಹೋಗಿರುವುದು ರಹಸ್ಯವಲ್ಲ. ಬಿಡುವಾಗ ಥರೇಹವಾರಿಯಾಗಿ ಪಕ್ಷ ಹಾಗೂ ಪಕ್ಷದ ನಾಯಕತ್ವದ ವಿರುದ್ಧ ಆರೋಪ ಮಾಡಿದರೂ, ಇದುವೇ ಸತ್ಯ. ಹಾಗೆಯೇ, ಬಿಟ್ಟು ಹೋದ ನಾಯಕರಿಂದಲೂ ಪಕ್ಷಕ್ಕೆ ಲಾಭವಾಗಿದೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಆಜಾದ್‌ಗೆ ಪಿಎಂ ಹುದ್ದೆಯೊಂದೇ ಬಾಕಿ!
1970ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಮೂಲಕವೇ ಗುಲಾಂ ನಬಿ ಆಜಾದ್ ಅವರು ರಾಜಕಾರಣ ಆರಂಭಿಸಿದರು. ಮೊದಲಿಗೆ ಯುವ ಕಾಂಗ್ರೆಸ್ ನಾಯಕರಾಗಿ, ಆ ಮೇಲೆ ಜಮ್ಮು ಕಾಶ್ಮೀರದ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ದೇಶದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಇದಕ್ಕೆಲ್ಲ ಕಾಂಗ್ರೆಸ್ ವೇದಿಕೆಯಾಗಿದೆ. ಆಜಾದ್, ಜಮ್ಮು ಮತ್ತು ಕಾಶ್ಮೀರದವರಾದರೂ ಪಕ್ಷವು ಅವರಿಗೆ ಮಹಾರಾಷ್ಟ್ರದ ವಾಸಿಮ್‌ ಕ್ಷೇತದಿಂದ ಟಿಕೆಟ್ ನೀಡಿ ಗೆಲ್ಲಿಸಿತು. ಅಷ್ಟೇ ಅಲ್ಲ 1982ರಲ್ಲಿ ಸಚಿವರೂ ಆದರು. ಆ ನಂತರ ಅವರ ಲೋಕಸಭೆ ಇಲ್ಲವೇ ರಾಜ್ಯಸಭೆ ಮೂಲಕ ಸತತವಾಗಿ ಸಂಸತ್ ಪ್ರವೇಶಿಸಿದ್ದಾರೆ. ಮಧ್ಯೆ, ಕಾಂಗ್ರೆಸ್‌ನಿಂದಲೇ ಕಾಶ್ಮೀರ ಮುಖ್ಯಮಂತ್ರಿಯೂ ಆಗಿದ್ದಾರೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರೂ ಆಗಿದ್ದರು.

ಕಾಂಗ್ರೆಸ್‌ನಿಂದ ಅವರು ಯಾವೆಲ್ಲ ಖಾತೆಯ ಸಚಿವರಾಗಿದ್ದರು ಎನ್ನುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅವರು ಕೈಯಾಡಿಸದೇ ಇಲಾಖೆಗಳೇ ಇಲ್ಲ! ಕಾನೂನು, ನ್ಯಾಯ, ಕಂಪನಿ ಅಫೇರ್ಸ್, ವಾರ್ತಾ ಸಚಿವ, ಸಂಸದೀಯ ವ್ಯವಹಾರ, ಗೃಹ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ವಿಮಾನಯಾನ ಮತ್ತು ಪ್ರವಾಸೋದ್ಯಮ, ನಗರಾಭಿವೃದ್ಧಿ… ಹೀಗೆ ಪ್ರಧಾನಿ ಹುದ್ದೆಯೊಂದನ್ನು ಬಿಟ್ಟು ಎಲ್ಲ ಹುದ್ದೆಗಳನ್ನು ಅನುಭವಿಸಿದ್ದಾರೆ. ಕೊನೆಗೆ ಪಕ್ಷ ಅಧಿಕಾರ ಇಲ್ಲದಿದ್ದಾಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರೂ ಆಗಿದ್ದರು. ಇಷ್ಟೆಲ್ಲ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ತೊರೆದಿದ್ದು ಯಾಕೆ ಗೊತ್ತಾ? ರಾಜ್ಯಸಭೆಗೆ ಮತ್ತೆ ಸ್ಪರ್ಧಿಸಲು ಕಾಂಗ್ರೆಸ್ ನಾಯಕತ್ವ ಒಪ್ಪಿಗೆ ನೀಡದಿರುವುದು. ಅಂದಿನಿಂದಲೇ ನಾಯಕತ್ವದಲ್ಲಿ ಘನಘೋರ ತಪ್ಪುಗಳು ಕಾಣಲಾರಂಭಿಸಿದವು ಆಜಾದ್‌ಗೆ!

ಕೃತಘ್ನ ಅಶ್ವನಿ ಕುಮಾರ್
ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ‌ ಎಂಬ ದಾಖಲೆ ಅಶ್ವನಿ ಕುಮಾರ್ ಹೆಸರಿನಲ್ಲಿದೆ. ಇವರು ಪಂಜಾಬ್ ಮೂಲದವರು. ಯುಪಿಎ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಇಲಾಖೆಗಳ ನಿರ್ವಹಣೆ ಹೊತ್ತಿದ್ದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಅವರ ಅಭ್ಯುದಯಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಚಿವ ಸ್ಥಾನಗಳು ಮಾತ್ರವಲ್ಲದೇ ಅನೇಕ ನಿಯೋಗಳು, ಆಯೋಗಗಳು, ಸ್ಥಾಯಿ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಪಕ್ಷವು ಅವಕಾಶ ಕಲ್ಪಿಸಿತ್ತು. ಆದರೆ, ಅಶ್ವನಿ ಕುಮಾರ್ ಅವರಿಗೆ ಹೊರಹೋಗುವಾಗ ಇದಾವುದು ನೆನಪಿಗೆ ಬರಲೇ ಇಲ್ಲ.

‘ರಾಷ್ಟ್ರವಾದಿ’ ಕ್ಯಾ. ಅಮರೀಂದರ್ ಸಿಂಗ್
ರಾಜೀವ್ ಗಾಂಧಿಯ ಶಾಲಾ ಸ್ನೇಹಿತ ಮತ್ತು ಅವರಿಂದಾಗಿಯೇ ರಾಜಕಾರಣಕ್ಕೆ ಬಂದವರು ಕ್ಯಾ. ಅಮರೀಂದರ್ ಸಿಂಗ್. 1984ರಲ್ಲಿ ಕಾಂಗ್ರೆಸ್ ಮೂಲಕವೇ ಲೋಕಸಭೆ ಸದಸ್ಯರಾದರು. ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ವಿರೋಧಿಸಿ ಕಾಂಗ್ರೆಸ್ ತೊರೆದು ಅಕಾಲಿದಳ ಸೇರಿದರು. ಅಲ್ಲಿಂದಲೂ ಹೊರ ಬಂದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಫ್ಯಾಂಥಿಕ್) ಪಕ್ಷ ಸ್ಥಾಸಿದರು. 1998ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡಿದರು. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮೂರು ಅವಧಿಗೆ ಕೆಲಸ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದಲೇ ಪಂಜಾಬ್ ಸಿಎಂ ಆಗಿದ್ದರು ಎಂಬುದನ್ನು ಅವರೀಗ ಮರೆತಿರುವ ಹಾಗಿದೆ. ಇದರ ಮಧ್ಯೆಯೇ ಲೋಕಸಭೆಗೂ ಆಯ್ಕೆಯಾಗಿದ್ದರು. ಕಾಂಗ್ರೆಸ್ ಉನ್ನತ ಸಮಿತಿಯಲ್ಲೂ ಅವರಿದ್ದರು. ಆದರೆ ಕಳೆದ ಎಲೆಕ್ಷನ್ ಮುಂಚೆ, ಸಿಎಂ ಹುದ್ದೆ ಬಿಟ್ ಬಿಡಿ ಎಂದ ಕೂಡಲೇ ಅವರಿಗೆ ಎಲ್ಲವೂ ತಪ್ಪಾಗಿ ಕಾಣಲಾರಂಭಿಸಿತು. ಮೊನ್ನೆಯ ಚುನಾವಣೆ ಮುಂಚೆ ತಮ್ಮದೇ ಹೊಸ ಪಕ್ಷ ಸ್ಥಾಪಿಸಿ, ಎಲೆಕ್ಷನ್ ಬಳಿಕ ಬಿಜೆಪಿಯಲ್ಲಿ ವಿಲೀನ ಮಾಡಿದ್ದಾರೆ.

ಸುನೀಲ್ ಜಾಖಡ್ ಹೊಸ ಜ್ಞಾನೋದಯ
ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದವರು. ಆದರೆ, ತೀರಾ ಇತ್ತೀಚೆಗೆ ಇವರಿಗೆ ನ್ಯಾಷನಲೀಸಮ್ ಬಗ್ಗೆ ಜ್ಞಾನೋದಯವಾಗಿ ಬಿಜೆಪಿ ಸೇರಿದ್ದಾರೆ! ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಇವರನ್ನು, ಸಿಎಂ ಹುದ್ದೆಗೆ ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ಬಿಟ್ಟು ಹೊರಟು ಹೋದರು. ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದಲೇ ಪ್ರತಿಪಕ್ಷದ ನಾಯಕರಾಗಿದ್ದು. ಪಕ್ಷದಿಂದಲೇ ಶಾಸಕರಾಗಿ, ಸಂಸದರಾಗಿ ಅಧಿಕಾರವನ್ನು ಅನುಭವಿಸಿದ್ದಾರೆ.

ಕ್ಷೇತ್ರ ಗೆಲ್ಲಲಾಗದ ಕಪಿಲ್ ಸಿಬಲ್
ದೇಶದ ಅಗ್ರಮಾನ್ಯ ವಕೀಲರಾಗಿರುವ ಕಪಿಲ್ ಸಿಬಲ್ ಅವರಿಗೂ ಕಾಂಗ್ರೆಸ್‌ನಿಂದ ಬಹಳಷ್ಟು ದಕ್ಕಿದೆ. ಈಗಲೂ ನ್ಯಾಯಾಲಯಗಳಲ್ಲಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯಸಭೆಗೆ ಮತ್ತೆ ಆಯ್ಕೆ ಮಾಡಲು ನಿರಾಕರಿಸಿದ್ದೇ ತಡ ಕಾಂಗ್ರೆಸ್ ಬಿಟ್ಟು ಹೊರ ಬಂದರು. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾದರು. ಇಲ್ಲಿ ಅವರ ಸ್ವಹಿತಾಸಕ್ತಿ ಮತ್ತು ಅವಕಾಶತನವೇ ಎದ್ದು ಕಾಣುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಪಿಲ್ ಸಿಬಲ್ ಅವರು ಯಾವೆಲ್ಲ ಇಲಾಖೆಗೆ ಸಚಿವರು ಆಗಿದ್ದರು ನೋಡಿ- ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ, ಮಾನವ ಸಂಪನ್ಮೂಲ, ಸೈನ್ಸ್ ಮತ್ತು ಟೆಕ್ನಾಲಜಿ, ಅರ್ಥ್ ಸೈನ್ಸ್, ಕಾನೂನು ಮತ್ತು ನ್ಯಾಯ… ಹೀಗೆ ಹಲವಾರು ಇಲಾಖೆಗಳು. ಆಗೆಲ್ಲ ಕಾಂಗ್ರೆಸ್‌ ಕಪಿಲ್ ಸಿಬಲ್ ಅವರಿಗೆ ಆಪ್ತವಾಗಿತ್ತು. ಕಾಂಗ್ರೆಸ್‌ನಿಂದಲೇ ಇಷ್ಟೊಂದು ಹುದ್ದೆಗಳನ್ನು ಅಲಂಕರಿಸಿದರೂ ದಿಲ್ಲಿಯಲ್ಲಿ ತಮ್ಮ ಕ್ಷೇತ್ರವನ್ನು ಗೆಲ್ಲಲು ಆಗಲಿಲ್ಲ! ಇಂಥ ನಾಯಕರು ಕಾಂಗ್ರೆಸ್‌ಗೆ ಇನ್ನೆಷ್ಟು ಸಂಸದರನ್ನು ಗೆದ್ದು ತಂದಾರು?

ಹೀಗೆ ಕಾಂಗ್ರೆಸ್ ಬಿಟ್ಟು ಹೋದ ಹಿರಿಯರ ಪೈಕಿ ಬಹುತೇಕ ಎಲ್ಲವನ್ನೂ ಅನುಭವಿಸಿಯೇ ಹೋಗಿದ್ದಾರೆ. ಇದಕ್ಕೆ ನಮ್ಮ ರಾಜ್ಯದವರೇ ಆದ ಎಸ್ ಎಂ ಕೃಷ್ಣ ಕೂಡ ಹೊರತಲ್ಲ. ಕಾಂಗ್ರೆಸ್‌ನಿಂದಲೇ ರಾಜ್ಯದ ಮುಖ್ಯಮಂತ್ರಿಯಾದರು. ವಿದೇಶಾಂಗ ಸಚಿವರಾದರು, ಮಹಾರಾಷ್ಟ್ರದ ರಾಜ್ಯಪಾಲರಾದರು. ಆದರೆ ಕೊನೆಗೆ ಕಾಂಗ್ರೆಸ್ ನೀಡಿದ ಯಾವ ಅವಕಾಶ, ಗೌರವವನ್ನೂ ಗಣನೆಗೆ ತೆಗೆದುಕೊಳ್ಳದೇ ಬಿಜೆಪಿ ಸೇರಿ, ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಎಂದು ಷರಾ ಬರೆದರು. ಹಾಗಂತ ಬಿಜೆಪಿಯಲ್ಲಿ ಇವರಿಗೇನೂ ಉನ್ನತ ಹುದ್ದೆ ಈವರೆಗೆ ಸಿಕ್ಕಿಲ್ಲ!

ಇದೇ ರೀತಿಯಲ್ಲಿ ಆರ್‌ಪಿಎನ್ ಸಿಂಗ್, ಜತಿನ್ ಪ್ರಸಾದ್, ಪಿ ಸಿ ಚಾಕೋ ಸೇರಿದಂತೆ ಅನೇಕರು ಪಕ್ಷ ದ್ರೋಹ ಬಗೆದಿದ್ದಾರೆ, ಯಾವಾಗ ಪಕ್ಷಕ್ಕೆ ನಾಯಕರ ಅಗತ್ಯವಿತ್ತೋ ಆಗ ಪಕ್ಷವನ್ನು ನಡುನೀರಿನಲ್ಲಿ ಕೈ ಬಿಟ್ಟು ಹೊರ ನಡೆದಿದ್ದಾರೆ!

ಇವರೆಲ್ಲ ಅತಿ ಮಹತ್ವಾಕಾಂಕ್ಷಿಗಳು!
ಹಿರಿಯರು ಅಧಿಕಾರ ಅನುಭವಿಸಿ ಪಕ್ಷದಿಂದ ಹೊರ ಹೋಗಿದ್ದು ಅನ್ಯಾಯ ಎನ್ನಬಹುದು. ಆದರೆ, ಮಧ್ಯಪ್ರದೇಶದ ಜ್ಯೋತಿರಾಧಿತ್ಯ, ಗುಜರಾತ್‌ನ ಹಾರ್ದಿಕ್ ಪಟೇಲ್, ರಾಜಸ್ಥಾನದ ಸಚಿನ್ ಪೈಲಟ್(ಆಗಾಗ ಬಂಡಾಯ ಏಳುತ್ತಾರೆ) ಮುಂತಾದವರು ಕಾಂಗ್ರೆಸ್ ತೊರೆಯಲು ಕಾರಣ ಏನೆಂದು ಕೇಳಬಹುದು. ಇದಕ್ಕೆಲ್ಲ ಒಂದೇ ಉತ್ತರ- ಅತಿ ಮಹತ್ವಾಕಾಂಕ್ಷೆ! ವಯಸ್ಸಿನಲ್ಲಿ ಕಿರಿಯರಾಗಿರುವ ಈ ನಾಯಕರಿಗೆ ತಕ್ಷಣವೇ ಯಾವುದಾದರೂ ದೊಡ್ಡ ಹುದ್ದೆ ಬೇಕಾಗಿದೆ. ಕಮಲನಾಥ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗಲೇ ಸಿಎಂ ಆಗಬೇಕೆಂಬ ಮಹತ್ವಾಕಾಂಕ್ಷೆ ಸಿಂಧಿಯಾ ಅವರದ್ದು. ಅಂತಿಮವಾಗಿ ಅವರು ಪಕ್ಷವನ್ನೇ ಒಡೆದು ಬಿಜೆಪಿ ಸೇರಿದರು. ಇತ್ತ ಹಾರ್ದಿಕ್ ಕೂಡ ಮಹತ್ವಾಕಾಂಕ್ಷಿಯೇ. ಅವರಿಗೂ ಅವರದ್ದೇ ಸಮಸ್ಯೆಗಳಿವೆ. ಮತ್ತೊಂದೆಡೆ ಸಚಿನ್ ಪೈಲಟ್ ಅವರಿಗೂ ಅರ್ಜೆಂಟ್ ಆಗಿ ಮುಖ್ಯಮಂತ್ರಿಯಾಗಬೇಕಿದೆ. ಇನ್ನೂ ಹಲವರು ತಮ್ಮದೇ ಕೆಲವು ಕಾರಣಕ್ಕಾಗಿ ಪಕ್ಷ ತೊರೆದರೂ, ತಪ್ಪನ್ನೆಲ್ಲ ಪಕ್ಷ ಹಾಗೂ ನಾಯಕತ್ವದ ಮೇಲೆ ಹಾಕಿದ್ದಾರೆ!

ನಿಯತ್ತಿನ ಪ್ರಶ್ನೆ
2014 ಮತ್ತು 2019ರಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌ಗೆ ಈ ಎಲ್ಲ ನಾಯಕರು ಶಕ್ತಿ ತುಂಬಬೇಕಿತ್ತು. ಆ ಸಾಮರ್ಥ್ಯ ಕೆಲವರಿಗಾದರೂ ಇದೆ. ಆದರೆ, ಅವರು ಹಾಗೆ ಮಾಡಲಿಲ್ಲ. ಮುಳುಗುತ್ತಿರುವ ಹಡಗು ಎಂದು ಜಂಪ್ ಮಾಡಿ, ಬೆಳಗುತ್ತಿರುವ ಐಷಾರಾಮಿ ಬಿಜೆಪಿ ಹಡಗು ಸೇರಿದರು! ತಾಂತ್ರಿಕವಾಗಿ ಇದರಲ್ಲೇನೂ ತಪ್ಪಿಲ್ಲ. ಆದರೆ, ಹೋಗುವಾಗ ಪಕ್ಷದ ಬಗ್ಗೆ ಪುಂಖಾನುಪುಂಖ ಆರೋಪ ಮಾಡಿರುವ ಬಗ್ಗೆ ಪಕ್ಷದ ನಿಷ್ಠಾವಂತರು ಇವರ ನಿಯತ್ತಿನ ಪ್ರಶ್ನೆ ಎತ್ತುತ್ತಿರುವುದೂ ಸಹಜವಾಗಿಯೇ ಇದೆ.

ಇದನ್ನೂ ಓದಿ | Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್​ 17ಕ್ಕೆ; ಮತ ಎಣಿಕೆ 19ಕ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು (Most costly medicine) ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

VISTARANEWS.COM


on

By

Most costly medicine
Koo

ಜೈಪುರ: ಜನಪ್ರಿಯ ನಟ (actor), ಭಾರತ ತಂಡದ ಕ್ರಿಕೆಟಿಗ (cricketer), ವ್ಯಾಪಾರಿಗಳು (Vendor), ತರಕಾರಿ ಮಾರಾಟಗಾರರು ಮತ್ತು ಸಾಮಾನ್ಯ ಜನರು ಒಗ್ಗಟ್ಟಾಗಿ 22 ತಿಂಗಳ ಮಗುವೊಂದರ ಜೀವ ಉಳಿಸಲು ದುಬಾರಿ ಔಷಧ ಖರೀದಿಗಾಗಿ (Most costly medicine) ಹೊರಡಿರುವ ಹೃದಯಸ್ಪರ್ಶಿ ಕಥೆ ರಾಜಸ್ಥಾನದ (Rajasthan) ಜೈಪುರದಲ್ಲಿ (jaipur) ನಡೆದಿದೆ. ಈ ಔಷಧದ ಹಿನ್ನೆಲೆ ಕುತೂಹಲಕರವಾಗಿದೆ.

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾದರು.

ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನರೇಶ್ ಶರ್ಮಾ ಅವರ ಪುತ್ರ ಹೃದಯಾಂಶ್ ಶರ್ಮಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಝೋಲ್ಗೆನ್ಸ್ಮಾ (Zolgensma) ಎಂಬ ಜೀನ್ ಥೆರಪಿ ಇಂಜೆಕ್ಷನ್‌ನೊಂದಿಗಿನ ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದಾಗಿದೆ. ಇದರ ಬೆಲೆ 17.5 ಕೋಟಿ ರೂ.


ಚುಚ್ಚು ಮದ್ದು ನೀಡಲು ಗಡುವು

ಬಾಲಕ 20 ತಿಂಗಳ ಮಗುವಾಗಿದ್ದಾಗ ಫೆಬ್ರವರಿಯಲ್ಲಿ ರಾಜಸ್ಥಾನ ಪೊಲೀಸರು ಕಟ್ಟುನಿಟ್ಟಾದ ಗಡುವನ್ನು ಹೊಂದಿದ್ದ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಏಕೆಂದರೆ ಮಗುವಿಗೆ 2 ವರ್ಷ ವಯಸ್ಸಿನವರೆಗೆ ಮಾತ್ರ ಈ ಚುಚ್ಚುಮದ್ದನ್ನು ನೀಡಬಹುದು.

ನಟ, ಕ್ರಿಕೆಟಿಗನ ಬೆಂಬಲ

ಇವರ ಈ ಅಭಿಯಾನಕ್ಕೆ ಕ್ರಿಕೆಟಿಗ ದೀಪಕ್ ಚಾಹರ್ ಮತ್ತು ನಟ ಸೋನು ಸೂದ್ ಅವರೂ ಬೆಂಬಲ ನೀಡಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಮನವಿಗಳನ್ನು ಪೋಸ್ಟ್ ಮಾಡಿದರು ಮತ್ತು ಜೈಪುರದಾದ್ಯಂತ ಜನರಿಂದ ಹಣವನ್ನು ಸಂಗ್ರಹಿಸುವ ಚಾಲನೆ ನೀಡಲಾಯಿತು.

ಹಣ್ಣು, ತರಕಾರಿ ಮಾರಾಟಗಾರರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಂದ ಹಣದ ಸಹಾಯ ಪಡೆಯಲಾಯಿತು. ವಿವಿಧ ಎನ್‌ಜಿಒಗಳು ಮತ್ತು ಸಾಮಾಜಿಕ ಸಂಸ್ಥೆಗಳು ಪ್ರಚಾರಕ್ಕಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡಿದವು.


ಮೂರು ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

ರಾಜಸ್ಥಾನದಲ್ಲಿ ಈ ಪ್ರಮಾಣದಲ್ಲಿ ಕ್ರೌಡ್‌ಫಂಡಿಂಗ್ ನಡೆಯುತ್ತಿರುವುದು ಇದೇ ಮೊದಲು. ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 9 ಕೋಟಿ ರೂ. ಸಂಗ್ರಹವಾಗಿದ್ದು, ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಹೃದಯಾಂಶ್‌ಗೆ ಚುಚ್ಚುಮದ್ದನ್ನು ನೀಡಲಾಯಿತು. ಉಳಿದ ಮೊತ್ತವನ್ನು ಮೂರು ಕಂತುಗಳಲ್ಲಿ ಒಂದು ವರ್ಷದೊಳಗೆ ಆಸ್ಪತ್ರೆಗೆ ಜಮಾ ಮಾಡಬೇಕಿದೆ.

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂದರೇನು?

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ ಅಥವಾ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಎಂಬುದು ಒಂದು ಆನುವಂಶಿಕ ಅಸ್ವಸ್ಥತೆಯಾಗಿದೆ. ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ವ್ಯಕ್ತಿಯು ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಕೈಕಾಲುಗಳ ಚಲನೆ ಮತ್ತು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆಯು ಸರ್ವೈವಲ್ ಮೋಟಾರ್ ನ್ಯೂರಾನ್‌ಗಳು 1 ಎಂಬ ಜೀನ್‌ನ ನಷ್ಟದಿಂದ ಉಂಟಾಗುತ್ತದೆ. ಇದು ಪ್ರೋಟೀನ್ ತಯಾರಿಸಲು ಅಗತ್ಯವಾದ ಮಾಹಿತಿಯನ್ನು ಹೊಂದಿರುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೂ ಅಗತ್ಯವಾಗಿರುತ್ತದೆ. ಮಾನವ ಸಾಮಾನ್ಯವಾಗಿ ಹೆಚ್ಚುವರಿ ಜೀನ್ (SMN2) ಅನ್ನು ಹೊಂದಿರುತ್ತಾನೆ. ಆದರೆ ಅದು SMN1 ನಷ್ಟವನ್ನು ಭಾಗಶಃ ಸರಿದೂಗಿಸುತ್ತದೆ.

SMN1 ಗೆ ಹೋಲಿಸಿದರೆ SMN2 ಕೇವಲ ಒಂದು ಸಣ್ಣ ಪ್ರಮಾಣದ ಅಗತ್ಯ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ ಮತ್ತು ದೇಹದಲ್ಲಿನ ಅನೇಕ ಜೀವಕೋಶಗಳು ಮತ್ತು ಅಂಗಗಳು ಈ ಕಡಿಮೆ ಪೂರೈಕೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತೋರುತ್ತದೆಯಾದರೂ ಮೆದುಳಿನಿಂದ ಸ್ನಾಯುಗಳಿಗೆ ಸಂದೇಶಗಳನ್ನು ಕಳುಹಿಸುವ ಜವಾಬ್ದಾರಿಯುತ ಮೋಟಾರ್ ನ್ಯೂರಾನ್ ಗಳು ಕಡಿಮೆ ಮಟ್ಟದ SMNಗೆ ಸ್ಪಂದಿಸುವುದಿಲ್ಲ. ಹೀಗಾಗಿ ಇದು ಸ್ನಾಯು ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

17 ಕೋಟಿ ರೂ. ನ ದುಬಾರಿ ಔಷಧ

ಐಎಎನ್ ಎಸ್ ವರದಿ ಮಾಡಿದಂತೆ 17 ಕೋಟಿ ರೂ. ವೆಚ್ಚದ ವಿಶ್ವದ ಅತ್ಯಂತ ದುಬಾರಿ ಚುಚ್ಚುಮದ್ದನ್ನು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ಎರಡು ವರ್ಷದೊಳಗಿನ ಮಕ್ಕಳಿಗೆ ನೀಡಬೇಕು. ಈ ಔಷಧವನ್ನು ಕ್ರೌಡ್‌ಫಂಡಿಂಗ್ ಸಹಾಯದಿಂದ ಝೋಲ್ಗೆನ್ಸ್ಮಾ ಎಂಬ ಈ ಇಂಜೆಕ್ಷನ್ ಅನ್ನು ಯುಎಸ್ ನಿಂದ ಜೈಪುರಕ್ಕೆ ತರಲಾಯಿತು. ಈ ಔಷಧ ಪಡೆಯಲು ಹಲವಾರು ಭಾರತೀಯ ಕುಟುಂಬಗಳು ಪರದಾಡುತ್ತಿವೆ.

ಭಾರತದಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆ ಹೊಂದಿರುವ ಭಾರತೀಯರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಅಸ್ತಿತ್ವದಲ್ಲಿರುವ ಪ್ರಕಾರ 10,000 ಜೀವಂತವಾಗಿ ಜನಿಸಿದ ಶಿಶುಗಳಲ್ಲಿ 1ರಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಣಿಸಿಕೊಳ್ಳುತ್ತಿದೆ. ಒಂದು ಅಧ್ಯಯನದ ಪ್ರಕಾರ 38 ಭಾರತೀಯರಲ್ಲಿ ಒಬ್ಬರು ಬೆನ್ನುಮೂಳೆಯ ಸ್ನಾಯು ಕ್ಷೀಣತೆಗೆ ಒಳಗಾಗುತ್ತಾರೆ.

ಅತ್ಯಂತ ದುಬಾರಿ ಔಷಧ ಇದು

ಅಪರೂಪದ ಆನುವಂಶಿಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯೊಂದಿಗೆ ಜನಿಸಿದ ಶಿಶುಗಳು ಚಿಕಿತ್ಸೆಯಿಲ್ಲದೆ ಎರಡು ವರ್ಷ ಕೂಡ ಪೂರ್ಣಗೊಳಿಸುವುದಿಲ್ಲ. 1990ರ ದಶಕದವರೆಗೂ ಇದಕ್ಕೆ ಯಾವುದೇ ಚಿಕಿತ್ಸೆಗಳು ಇರಲಿಲ್ಲ. ಇದನ್ನು ತಡೆಗಟ್ಟಲು ಇತ್ತೀಚೆಗೆ ಪರವಾನಗಿ ಪಡೆದ ಎರಡು ಔಷಧಿಗಳಿವೆ. ಇದರಲ್ಲಿ ಒಂದು Zolgensma, ಯುಕೆಯಲ್ಲಿ ಶಿಶುಗಳಿಗೆ ಚಿಕಿತ್ಸೆ ನೀಡಲು ಇದು ಇತ್ತೀಚೆಗೆ ಅಷ್ಟೇ ಲಭ್ಯವಾಗುತ್ತಿದೆ. ಇದನ್ನು “ವಿಶ್ವದ ಅತ್ಯಂತ ದುಬಾರಿ ಔಷಧ” ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದರ ಒಂದು ಡೋಸ್ ಗೆ ಸುಮಾರು 1.79 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸ್ ಮೌಲ್ಯ 17 ಕೋಟಿ ರೂ. ಪಾವತಿಸಬೇಕು.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

ಈ ಕಾಯಿಲೆಗೆ ಲಭ್ಯವಿರುವ ಇನ್ನೊಂದು ಔಷಧ ಸ್ಪಿನ್ರಾಜಾ (ಜೆನೆರಿಕ್ ಹೆಸರು ನುಸಿನೆರ್ಸೆನ್) ಇದು SMN2 ಜೀನ್ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸಲು ಸಹಾಯ ಮಾಡುವ ಡಿಎನ್‌ಎಯ ಒಂದು ಸಣ್ಣ ಭಾಗವಾಗಿದೆ. ಇದನ್ನು ನೇರವಾಗಿ ಬೆನ್ನುಮೂಳೆಯ ನಿರ್ಧಿಷ್ಟ ಭಾಗಕ್ಕೆ ಚುಚ್ಚಬೇಕಾಗುತ್ತದೆ. ಇದನ್ನು ನಿಯಮಿತವಾಗಿ ವರ್ಷದಲ್ಲಿ ಆರು ಬಾರಿ ಮಾಡಬೇಕು. ಚಿಕಿತ್ಸೆಯ ಮೊದಲ ವರ್ಷದಲ್ಲಿ ಆರು ಚುಚ್ಚುಮದ್ದುಗಳು ಪ್ರತಿ ಇಂಜೆಕ್ಷನ್‌ಗೆ 75,000 ಡಾಲರ್ ಪಾವತಿಸಬೇಕಾಗುತ್ತದೆ.

2021 ರಿಂದ ಲಭ್ಯವಿರುವ Zolgensma ಮಾನವನ SMN1 ಜೀನ್ ನ ನಕಲು ಮಾಡಲು ಸಹಾಯ ಮಾಡುತ್ತದೆ. SMN1 ಜೀನ್ ಅನ್ನು ರಕ್ತಪ್ರವಾಹಕ್ಕೆ ಚುಚ್ಚಿದಾಗ ಇದು ವ್ಯಕ್ತಿಗೆ ಅಗತ್ಯವಿರುವ ಹೆಚ್ಚಿನ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ನಿರ್ವಹಣೆಗೆ ಸುಲಭ ಮತ್ತು ಕಡಿಮೆ ಅಡ್ಡ ಪರಿಣಾಮ ಉಂಟು ಮಾಡುವ Zolgensmaನ ಕೇವಲ ಒಂದು ಡೋಸ್ ಸಾಕಾಗುತ್ತದೆ.

ಭಾರತಕ್ಕೆ ಈ ಔಷಧ ತರಿಸಲು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ತೆರಿಗೆ ಇಲ್ಲದೇ ಇಲ್ಲಿ ಈ ಔಷಧೀಯ ದರ ಸುಮಾರು 17 ಕೋಟಿ ರೂ. ಆಗುತ್ತದೆ!

ನೊವಾರ್ಟಿಸ್ ವೆಬ್‌ಸೈಟ್‌ನ ಪ್ರಕಾರ, ಈ ಔಷಧವನ್ನು 45 ದೇಶಗಳಲ್ಲಿ ಅನುಮೋದಿಸಲಾಗಿದೆ. 2 500 ಕ್ಕೂ ಹೆಚ್ಚು ರೋಗಿಗಳು ಜಾಗತಿಕವಾಗಿ ಇದರ ಚಿಕಿತ್ಸೆ ಪಡೆಯುತ್ತಾರೆ. ಕಂಪೆನಿಯು 36 ದೇಶಗಳಲ್ಲಿ ಸುಮಾರು 300 ಮಕ್ಕಳಿಗೆ ಇದರ ಥೆರಪಿಯನ್ನು ಉಚಿತವಾಗಿ ನೀಡಿದೆ.

Continue Reading

EXPLAINER

CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

CAA: ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ. ಅಷ್ಟಕ್ಕೂ ಸಿಎಎ ಎಂದರೇನು? ಕೇಂದ್ರದ ಪ್ರಮಾಣಪತ್ರಗಳಲ್ಲಿ ಏನಿರುತ್ತದೆ? ಇಲ್ಲಿದೆ ಮಾಹಿತಿ.

VISTARANEWS.COM


on

CAA
Koo

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ (Indian Citizenship) ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ ಎಂದು ತಿಳಿದುಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಯಾವ ದಾಖಲೆ ಕೊಡುವುದು ಕಡ್ಡಾಯ?

ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆಯಲು ವಲಸಿಗರು ಕೇಂದ್ರ ಸರ್ಕಾರಕ್ಕೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅದರ ದಾಖಲೆ, ಗುರುತಿನ ಚೀಟಿ ಅಥವಾ ದಾಖಲೆ, ವಾಹನ ಚಾಲನಾ ಪರವಾನಗಿ ಸೇರಿ ಯಾವುದೇ ಪರವಾನಗಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರವು ಭಾರತದ ಪೌರತ್ವ ಪಡೆಯಲಿದ್ದಾರೆ.

ಭಾರತದ ಮುಸ್ಲಿಮರಿಗೆ ತೊಂದರೆ ಇಲ್ಲ

ಸಿಎಎ ಜಾರಿಯು ಭಾರತದ ಮುಸ್ಲಿಮರ ಪೌರತ್ವದ ಮೇಲೆ ಪರಿಣಾಮ ಬೀರಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಕಾನೂನಿಗೆ ಭಾರತದಲ್ಲಿರುವ 18 ಕೋಟಿ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ತಮ್ಮ ಹಿಂದೂ ಸಹವರ್ತಿಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೂ ಮೊದಲು, ಸಿಎಎ ಎಂದರೆ, ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸುವುದು ಎಂಬ ವದಂತಿ ಹಬ್ಬಿಸಲಾಗಿತ್ತು.

ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಈ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಇದನ್ನೂ ಓದಿ: CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Continue Reading

ಕರ್ನಾಟಕ

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 (Climate Plan) ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021 ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

VISTARANEWS.COM


on

By

Climate Plan
Koo

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Continue Reading

ರಾಜಕೀಯ

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

POK Explainer in Kannada: ಕಾಶ್ಮೀರದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ (Pakistan Occupied Kashmir) ನಿರಂತರ ಚರ್ಚೆಯಲ್ಲಿರುವ ಪ್ರದೇಶ. ಸುಮಾರು 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಿಒಕೆ ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶದ ಆಡಳಿತವನ್ನು ಪಾಕಿಸ್ತಾನ ಸರ್ಕಾರ ನಿಯಂತ್ರಿಸುತ್ತಿರುವುದು. ಆದರೂ ಇಲ್ಲಿನ ಕುರಿತು ತಿಳಿದುಕೊಳ್ಳಬೇಕಾದ ಹಲವಾರು ಪ್ರಮುಖ ಅಂಶಗಳಿವೆ. ಪಿಒಕೆ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

VISTARANEWS.COM


on

By

POK Explainer in Kannada
Koo

ಪಾಕಿಸ್ತಾನವು (pakistan) 1947ರಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ (POK Explainer in Kannada) ಕಾಶ್ಮೀರದ (kashmir) ಭಾಗಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan Occupied Kashmir) ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ಪಿಒಕೆಯನ್ನು (POK) ಎರಡು ಭಾಗಗಳಾಗಿ ವಿಂಗಡಿಸಿದೆ. ಒಂದು ಆಜಾದ್ ಕಾಶ್ಮೀರ (Azad Kashmir) ಹಾಗೂ ಮತ್ತೊಂದು ಗಿಲ್ಗಿಟ್-ಬಾಲ್ಟಿಸ್ತಾನ್ (Gilgit-Baltistan). ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನಸಂಖ್ಯೆ 2020ರಲ್ಲಿ ಸುಮಾರು 52 ಲಕ್ಷ ಇತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಈಗ ದಂಗೆ ಭುಗಿಲೆದ್ದಿದೆ. ಅಲ್ಲಿಯ ಜನ, ಭಾರತದ ಜತೆ ವೀಲೀನವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಅನಂತರ ಈಗ ಭಾರತೀಯ ಜನರು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


ಪಿಒಕೆ ಎಂದರೇನು?

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಣಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ.

1. ಪಿಒಕೆಯನ್ನು ಆಡಳಿತಾತ್ಮಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನು ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್- ಬಾಲ್ಟಿಸ್ತಾನ್ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದಲ್ಲಿ ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ವನ್ನು ಆಜಾದ್ ಕಾಶ್ಮೀರ ಎಂದೂ ಕರೆಯುತ್ತಾರೆ.

2. ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯಸ್ಥರು ಅಧ್ಯಕ್ಷರಾಗಿದ್ದರೆ, ಪ್ರಧಾನಮಂತ್ರಿಗಳು ಮಂತ್ರಿಗಳ ಮಂಡಳಿಯಿಂದ ಬೆಂಬಲಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

3. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತನ್ನ ಸ್ವ-ಆಡಳಿತ ಅಸೆಂಬ್ಲಿ ಎಂದು ಹೇಳಿಕೊಂಡಿದೆ. ಆದರೆ ವಾಸ್ತವವೆಂದರೆ ಅದು ಪಾಕಿಸ್ತಾನದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

4. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲ ಕಾಶ್ಮೀರದ ಒಂದು ಭಾಗವಾಗಿದೆ. ಇದರ ಗಡಿಗಳು ಪಾಕಿಸ್ತಾನದ ಪಂಜಾಬ್ ಪ್ರದೇಶ, ವಾಯವ್ಯ, ಅಫ್ಘಾನಿಸ್ತಾನದ ವಖಾನ್ ಕಾರಿಡಾರ್, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ಭಾರತದ ಕಾಶ್ಮೀರದ ಪೂರ್ವಕ್ಕೆ ಸ್ಪರ್ಶಿಸುತ್ತವೆ.

5. ಗಿಲ್ಗಿಟ್- ಬಾಲ್ಟಿಸ್ತಾನ್‌ವನ್ನು ತೆಗೆದುಹಾಕಿದರೆ, ಆಜಾದ್ ಕಾಶ್ಮೀರದ ಪ್ರದೇಶವು 13,300 ಚದರ ಕಿಲೋಮೀಟರ್‌ಗಳಷ್ಟು ಅಂದರೆ ಸರಿಸುಮಾರು ಭಾರತದ ಕಾಶ್ಮೀರದ ಸುಮಾರು 3 ಪಟ್ಟು ವಿಶಾಲವಾಗಿದೆ ಮತ್ತು ಅದರ ಜನಸಂಖ್ಯೆಯು ಸುಮಾರು 52 ಲಕ್ಷ.

6. ಆಜಾದ್ ಕಾಶ್ಮೀರದ ರಾಜಧಾನಿ ಮುಜಫರಾಬಾದ್. ಇದು 10 ಜಿಲ್ಲೆಗಳು, 33 ತೆಹಸಿಲ್‌ಗಳು ಮತ್ತು 182 ಫೆಡರಲ್ ಕೌನ್ಸಿಲ್‌ಗಳನ್ನು ಹೊಂದಿದೆ.

7. ಪಾಕ್ ಆಕ್ರಮಿತ ಕಾಶ್ಮೀರದ ದಕ್ಷಿಣ ಭಾಗದಲ್ಲಿ 8 ಜಿಲ್ಲೆಗಳಿವೆ. ಮಿರ್ ಪುರ್, ಭಿಂಬರ್, ಕೋಟ್ಲಿ, ಮುಜಫರಾಬಾದ್, ಬಾಗ್, ನೀಲಂ, ರಾವಲಕೋಟ್ ಮತ್ತು ಸುಧಾನೋತಿ.

8. ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ-ಗಿಲ್ಗಿಟ್, ಶಕ್ಸ್‌ಗಾಮ್ ಕಣಿವೆ, ರಕ್ಸಾಮ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಹಸ್ತಾಂತರಿಸಿತು. ಈ ಪ್ರದೇಶವನ್ನು ಸೆಡೆಡ್ ಪ್ರದೇಶ ಅಥವಾ ಟ್ರಾನ್ಸ್-ಕಾರಕೋರಂ ಟ್ರ್ಯಾಕ್ಟ್ ಎಂದು ಕರೆಯಲಾಗುತ್ತದೆ.

9. ಪಿಒಕೆಯ ಜನರು ಮುಖ್ಯವಾಗಿ ಕೃಷಿ ಮಾಡುತ್ತಾರೆ. ಅವರ ಮುಖ್ಯ ಆದಾಯದ ಮೂಲಗಳು ಜೋಳ, ಗೋಧಿ, ಅರಣ್ಯ ಮತ್ತು ಜಾನುವಾರುಗಳು.

10. ಈ ಪ್ರದೇಶದಲ್ಲಿ ಕಡಿಮೆ ದರ್ಜೆಯ ಕಲ್ಲಿದ್ದಲು ನಿಕ್ಷೇಪಗಳಿವೆ, ಸೀಮೆಸುಣ್ಣದ ನಿಕ್ಷೇಪಗಳು, ಬಾಕ್ಸೈಟ್ ನಿಕ್ಷೇಪಗಳು ಕಂಡುಬರುತ್ತವೆ. ಕೆತ್ತಿದ ಮರದ ವಸ್ತುಗಳು, ಜವಳಿ ಮತ್ತು ಕಾರ್ಪೆಟ್‌ಗಳ ತಯಾರಿಕೆಯು ಈ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕೈಗಾರಿಕೆಗಳ ಮುಖ್ಯ ಉತ್ಪನ್ನಗಳಾಗಿವೆ.

11. ಈ ಪ್ರದೇಶದಲ್ಲಿನ ಕೃಷಿ ಉತ್ಪನ್ನಗಳಲ್ಲಿ ಅಣಬೆ, ಜೇನು, ವಾಲ್ನಟ್, ಸೇಬು, ಚೆರ್ರಿ, ಔಷಧೀಯ ಗಿಡಮೂಲಿಕೆ ಮತ್ತು ಸಸ್ಯಗಳು, ರಾಳ, ಮೇಪಲ್ ಮರಗಳು ಸೇರಿವೆ.

12. ಈ ಪ್ರದೇಶದಲ್ಲಿ ಶಾಲೆಗಳು ಮತ್ತು ಕಾಲೇಜುಗಳ ಕೊರತೆಯಿದೆ. ಆದರೆ ಈ ಪ್ರದೇಶವು ಶೇ. 72ರಷ್ಟು ಸಾಕ್ಷರತೆಯನ್ನು ಹೊಂದಿದೆ.

13. ಪಾಷ್ಟೋ, ಉರ್ದು, ಕಾಶ್ಮೀರಿ ಮತ್ತು ಪಂಜಾಬಿಯಂತಹ ಭಾಷೆಗಳನ್ನು ಇಲ್ಲಿನ ಜನರು ಪ್ರಮುಖವಾಗಿ ಮಾತನಾಡುತ್ತಾರೆ.

14. ಪಾಕ್ ಆಕ್ರಮಿತ ಕಾಶ್ಮೀರ ತನ್ನದೇ ಆದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಹ ಹೊಂದಿದೆ.


ವಿವಾದದ ಮೂಲ ಏನು?

1947ರಲ್ಲಿ ಪಾಕಿಸ್ತಾನದ ಪಷ್ಟೂನ್ ಬುಡಕಟ್ಟು ಜನಾಂಗದವರು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇವರಿಗೆ ಪಾಕ್‌ ಸೇನೆಯ ಕುಮ್ಮಕ್ಕು ಇತ್ತು. ಆಗ ಈ ನಿರ್ಣಾಯಕ ಪರಿಸ್ಥಿತಿಯನ್ನು ನಿಭಾಯಿಸಲು ಆ ಕಾಲದ ಆಡಳಿತಗಾರ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಭಾರತ ಸರ್ಕಾರದಿಂದ ಮಿಲಿಟರಿ ಸಹಾಯವನ್ನು ಕೋರಿದರು ಮತ್ತು ಅಂದಿನ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರು 26 ಅಕ್ಟೋಬರ್ 1947ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಮೂರು ವಿಷಯಗಳು ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನಗಳು ಭಾರತಕ್ಕೆ ಹಸ್ತಾಂತರಿಸಲಾಯಿತು. ಈ ವಿಷಯಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರವು ತನ್ನ ಎಲ್ಲಾ ನಿರ್ಧಾರಗಳಿಗೆ ಮುಕ್ತವಾಗಿತ್ತು.

ಒಪ್ಪಂದದ ಈ ಸೇರ್ಪಡೆಯ ಆಧಾರದ ಮೇಲೆ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಮತ್ತೊಂದೆಡೆ ಪಾಕಿಸ್ತಾನ ಇದನ್ನು ಒಪ್ಪುವುದಿಲ್ಲ.

ಪಾಕಿಸ್ತಾನದ ವಾದ ಏನು?

ಕಾಶ್ಮೀರದ ಮೇಲಿನ ಪಾಕಿಸ್ತಾನದ ಹಕ್ಕು 1993ರ ಘೋಷಣೆಯನ್ನು ಆಧರಿಸಿದೆ. ಈ ಘೋಷಣೆಯ ಪ್ರಕಾರ ಪಾಕಿಸ್ತಾನ ಸರ್ಕಾರದ ಆಡಳಿತವನ್ನು ಸ್ಥಾಪಿಸಬೇಕಾದ 5 ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವೂ ಸೇರಿದೆ. ಆದರೆ ಪಾಕಿಸ್ತಾನದ ಈ ಹೇಳಿಕೆಯನ್ನು ಭಾರತ ಎಂದಿಗೂ ಒಪ್ಪಲಿಲ್ಲ.

ಎರಡು ಭಾಗಗಳಾಗಿ ವಿಂಗಡಣೆ

ಭಾರತ ಮತ್ತು ಪಾಕಿಸ್ತಾನದ ನಡುವಿನ 1947ರ ಯುದ್ಧದ ಅನಂತರ ಕಾಶ್ಮೀರ ಆಡಳಿತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಭಾರತದಿಂದ ಬೇರ್ಪಟ್ಟ ಕಾಶ್ಮೀರದ ಭಾಗವು ಜಮ್ಮು ಮತ್ತು ಕಾಶ್ಮೀರದ ಉಪಖಂಡವಾಯಿತು ಮತ್ತು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಿಂದ ಸಮೀಪದಲ್ಲಿದ್ದ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಯಿತು.

ಆಜಾದ್ ಕಾಶ್ಮೀರ

ಭಾರತದ ಕಾಶ್ಮೀರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿದೆ. 2011ರ ಹೊತ್ತಿಗೆ, ಆಜಾದ್ ಕಾಶ್ಮೀರದ ಜಿಡಿಪಿ 3.2 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಐತಿಹಾಸಿಕವಾಗಿ ಆಜಾದ್ ಕಾಶ್ಮೀರದ ಆರ್ಥಿಕತೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಕಡಿಮೆ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಗೋಧಿ, ಬಾರ್ಲಿ, ಕಾರ್ನ್ (ಮೆಕ್ಕೆಜೋಳ) ಮಾವು, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತದೆ.

ದಕ್ಷಿಣ ಜಿಲ್ಲೆಗಳಲ್ಲಿ, ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ ಅನೇಕ ಪುರುಷರನ್ನು ನೇಮಿಸಿಕೊಳ್ಳಲಾಗಿದೆ. ಇತರ ಸ್ಥಳೀಯರು ಯುರೋಪ್ ಅಥವಾ ಮಧ್ಯಪ್ರಾಚ್ಯದ ದೇಶಗಳಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅವರು ಕಾರ್ಮಿಕ-ಆಧಾರಿತ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

ಉತ್ತರ ಪ್ರದೇಶ

ಗಿಲ್ಗಿಟ್ ಪ್ರದೇಶವನ್ನು ಕಾಶ್ಮೀರದ ಮಹಾರಾಜರು ಬ್ರಿಟಿಷ್ ಸರ್ಕಾರಕ್ಕೆ ಗುತ್ತಿಗೆ ನೀಡಿದರು. ಬಾಲ್ಟಿಸ್ತಾನ್ 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ಪಶ್ಚಿಮ ಲಡಾಖ್ ಪ್ರಾಂತ್ಯದ ಪ್ರದೇಶವಾಗಿತ್ತು. ಈ ಪ್ರದೇಶವು ವಿವಾದಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಭಾಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅತ್ಯಂತ ಕಳಪೆ ಸ್ಥಿತಿಯಲ್ಲಿದೆ. ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಹೊಂದಿದೆ. ಆದರೆ ಈ ಪ್ರದೇಶವನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಭಿವೃದ್ಧಿಪಡಿಸಿಲ್ಲ. ಆದ್ದರಿಂದ ಈ ಪ್ರದೇಶದ ಬಡ ಜನರನ್ನು ಭಯೋತ್ಪಾದಕರಂತೆ ತರಬೇತಿ ನೀಡಲು ಮತ್ತು ಭಾರತವನ್ನು ಅಸ್ಥಿರಗೊಳಿಸಲು ಬಳಸಿಕೊಳ್ಳುತ್ತಿದೆ.

Continue Reading
Advertisement
Canne Film Festival 2024
ಪ್ರಮುಖ ಸುದ್ದಿ3 mins ago

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

Konkani Book Release
ಕಲೆ/ಸಾಹಿತ್ಯ8 mins ago

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

MLC Meeting
ರಾಜಕೀಯ16 mins ago

MLC Election: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ; ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಗೆಲುವಿಗೆ ರಣತಂತ್ರ

Arvind Kejriwal
ದೇಶ21 mins ago

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

HD Revanna case Hearing in Holenarasipura sexual assault case adjourned to Monday
ಹಾಸನ57 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Kanguva Film Suriya-Bobby Deol's war scene with 10,000 people
ಕಾಲಿವುಡ್60 mins ago

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

karnataka weather Forecast
ಮಳೆ1 hour ago

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Narendra Modi
ದೇಶ1 hour ago

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

SubAir facility
ಕ್ರೀಡೆ1 hour ago

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌