ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ

ಮದುವೆಯಾಗಿ ಒಂದು ವರ್ಷದೊಳಗೆ ಹುಟ್ಟಿದ ಮುದ್ದಾದ ಮಗುವಿಗೆ ಮಹಾಭಾರತದ ತನ್ನ ಪ್ರೀತಿಯ ಪಾತ್ರಗಳಲ್ಲಿ ಒಂದಾದ ಚಿತ್ರಲೇಖೆಯ ಹೆಸರಿಟ್ಟಿದ್ದಳು ಪ್ರತಿಭಾ. ಅಂಥ ಮುದ್ದಾದ ಮಗುವನ್ನು ತೊರೆದು ಹೋದದ್ದೇಕೆ?

VISTARANEWS.COM


on

short story nele deepa hiregutthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

:: ದೀಪಾ ಹಿರೇಗುತ್ತಿ

ದೂರದ ಮುಂಬೈನಲ್ಲಿದ್ದ ಪ್ರತಿಭಾ ಮತ್ತೂ ಯಾರಿಗೂ ಗೊತ್ತು ಮಾಡದೇ ಇನ್ನೂ ದೂರದ ದಿಲ್ಲಿಗೆ ಓಡಿಹೋಗಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಬೆಂಗಳೂರಿಗೆ ಬಂದಿದ್ದಾಳೆ ಎಂಬ ವಿಷಯ ಅವಳ ತವರಿನಲ್ಲಿ ಯಾರಿಗೂ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ. ಅಕಾಸ್ಮಾತ್ ಗೊತ್ತಾದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳುವ ಪ್ರಶ್ನೆಯೂ ಇರಲಿಲ್ಲ. ಗಂಡ, ಅತ್ತೆ ಮತ್ತು ಎರಡು ವರ್ಷದ ಮಗಳನ್ನು ಬಿಟ್ಟು ತನ್ನ ಸುಖದ ಹಾದಿ ತಾನು ನೋಡಿಕೊಂಡವಳ ಬಗ್ಗೆ ಇಡೀ ಕುಟುಂಬದ ವಲಯದಲ್ಲೇ ಒಂದು ನಮೂನೆಯ ತಿರಸ್ಕಾರದ ಭಾವ ಮಡುಗಟ್ಟಿತ್ತು. ಅದು ಆಗಾಗ್ಗೆ ಮಾತಿನಲ್ಲಿ ನುಸುಳಿ, ಕೆಲವೊಮ್ಮೆ ಹೆಚ್ಚೇ ಆಗಿ ಹೊರಚೆಲ್ಲಿ ತಾವೆಷ್ಟು ಸಾಚಾಗಳು, ಸಹನಾಮಯಿಗಳು ಎಂಬ ಕ್ಷಣಿಕ ಆತ್ಮತೃಪ್ತಿಯನ್ನು ಕುಟುಂಬದ ಕೆಲವು ಹೆಂಗಸರಿಗೆ ಕೊಟ್ಟು ಹೋಗುತ್ತಿದ್ದುದ್ದನ್ನು ಬಿಟ್ಟರೆ ಅವರೆಲ್ಲರ ಪಾಲಿಗೆ ಆಕೆ ಇದ್ದೂ ಸತ್ತಂತಾಗಿದ್ದಳು. ಅಸಲಿಗೆ ಪ್ರತಿಭಾಳ ಬಗ್ಗೆ ಯಾರಿಗೂ ಇತ್ತೀಚಿನ ಮಾಹಿತಿ ಇರಲೂ ಇಲ್ಲ. ಆದರೆ ಈ ಬಾರಿ ಅವಳ ತವರಿನ ದೊಡ್ಡ ಕುಟುಂಬದ ಒಂದೊಂದು ನರಹುಳುವಿಗೂ ಅವಳ ಬರುವಿಕೆಯ ಮಾಹಿತಿ ಇತ್ತು. ಅವಳ ಬರುವಿಕೆಯ ಬಗೆಗಿನ ಅಚ್ಚರಿಗಿಂತ ವಾಟ್ಸಾಪ್ ಗುಂಪಿನಲ್ಲಿ ಯಾವಾಗಲೂ ಗುಂಪಿಗೆ ಸೇರದ ಪದದಂತೆ ಇರುವ, ಒಂದೇ ಒಂದು ಸಂದೇಶವನ್ನೂ ಕಳಿಸದ ಚಿತ್ರಲೇಖಾ ಈ ಮಾಹಿತಿ ಒದಗಿಸಿದವಳು ಎನ್ನುವುದು ಇನ್ನಷ್ಟು ಸೋಜಿಗಕ್ಕೆ ಕಾರಣವಾಗಿತ್ತು.

“ಕ್ಷಮಿಸು ಎನ್ನಲಾರೆ. ಕ್ಷಮೆಗೆ ನಾನು ಅರ್ಹಳಲ್ಲ ಎಂಬುದು ನಿನಗೆ ಗೊತ್ತಿದೆ. ಇಷ್ಟು ದಿನ ಅನಿವಾರ್ಯವಾಗಿ ತಡೆದುಕೊಂಡಿದ್ದೆ. ಇವತ್ತು ಚಿತ್ರಲೇಖಾ ಎನ್ನುವ ಹೆಸರನ್ನು ಫೇಸ್‍ಬುಕ್‍ನಲ್ಲಿ ಹುಡುಕಿದೆ. ನಿನ್ನ ಡಿಪಿ ನಾನೇ ತೆಗೆಸಿದ್ದ ನಿನ್ನ ಕೆಂಪಂಗಿಯ ಫೋಟೋ ಎಂಬುದನ್ನು ನೋಡಿ ಖುಶಿಯಿಂದ ನನ್ನ ಹೃದಯದ ಬಡಿತ ನಿಂತೇ ಹೋದಂತಾಯಿತು. ಆ ಫೋಟೋ ನೀನು ಹಾಕಿಕೊಂಡಿರುವುದಕ್ಕೆ ಹುಚ್ಚು ಧೈರ್ಯದಿಂದ ಈ ಸಂದೇಶ ಕಳುಹಿಸುತ್ತಿದ್ದೇನೆ. ನಾನಿಟ್ಟ ಹೆಸರನ್ನು ಹಾಗೆಯೇ ಇಟ್ಟುಕೊಂಡಿರುವುದಕ್ಕೆ ಥ್ಯಾಂಕ್ಸ್. ನಿನ್ನನ್ನು ಎದುರಿಸುವ ಧೈರ್ಯವಿಲ್ಲದಿದ್ದರೂ ಒಂದೇ ಒಂದು ಸಲ ನಿನ್ನನ್ನು ನೋಡಿ ಹೋಗುವ ಆಸೆ. ನಾನು ಒಂದು ತಿಂಗಳ ಮಟ್ಟಿಗೆ ಬೆಂಗಳೂರಿನಲ್ಲಿ ಇರುತ್ತೇನೆ. ದಯವಿಟ್ಟು ಉತ್ತರಿಸು” ಎಂಬ ಸಂದೇಶವೊಂದು ಮಧು ಎಂಬ ಹೆಸರಿನ, ಪ್ರೊಫೈಲ್ ಚಿತ್ರ ಇಲ್ಲದ, ಮ್ಯುಚುವಲ್ ಫ್ರೆಂಡ್ಸ್ ಯಾರೂ ಇಲ್ಲದ ಹೊಸ ಫೇಸ್‍ಬುಕ್ ಅಕೌಂಟ್‍ನಿಂದ ತನ್ನ ಮೆಸೆಂಜರಿಗೆ ಬಂದಾಗ ಗೊಂದಲಕ್ಕೊಳಗಾದ ಚಿತ್ರಲೇಖಾ ಮರುಕ್ಷಣವೇ ಅದು ತನ್ನ ಹೆತ್ತ ತಾಯಿಯ ಸಂದೇಶ ಎಂಬುದು ಅರಿವಿಗೆ ಬಂದು ಕೋಪದಿಂದ ಉರಿಯುತ್ತಲೇ ಹಿಂದೆ ಮುಂದೆ ಯೋಚಿಸದೇ ಅದರ ಸ್ಕ್ರೀನ್‍ಶಾಟ್ ತೆಗೆದು ತನ್ನ ಫ್ಯಾಮಿಲಿ ಗುಂಪಿಗೆ ಹಾಕಿಬಿಟ್ಟಿದ್ದಳು. ದೊಡ್ಡಮ್ಮಂದಿರು, ಚಿಕ್ಕಮ್ಮ, ಮಾವಂದಿರು, ಅವರ ಮಕ್ಕಳು ಎಲ್ಲರೂ ಇದ್ದ ಆ ಗುಂಪಿನಿಂದ, ಮತ್ತೆ ಅವರವರ ಕಸಿನ್‍ಗಳಿಗೆ, ಅವರು ಮತ್ತೊಬ್ಬರಿಗೆ ಹೀಗೆ ಆ ಸ್ಕ್ರೀನ್‍ಶಾಟ್ ಪ್ರತಿಭಾಳ ಇದ್ದಬದ್ದ ಸಂಬಂಧಿಕರ ಮೊಬೈಲುಗಳೆಲ್ಲವಕ್ಕೂ ಹೋಲ್ಸೇಲಾಗಿ ತಲುಪಿ ಹೊಸ ಚರ್ಚೆಗೆ ಕಾರಣವಾಗಿತ್ತು. ಕಂಬಳಿಹುಳುವನ್ನು ನೋಡಿದರೆ ಹೇಗೆ ಮೈ ಮನಸ್ಸು ಮುರುಟಿದಂತಾಗುತ್ತದೆಯೋ ಅದೇ ರೀತಿ ನೆಂಟರಿಷ್ಟರೂ ತನ್ನ ಹೆಸರು ಕೇಳಿದರೆ ಮುಖ ಹಿಂಡುತ್ತಾರೆಂಬುದು ಪ್ರತಿಭಾಳಿಗೂ ಗೊತ್ತಿಲ್ಲದ ವಿಚಾರವೇನೂ ಆಗಿರಲಿಕ್ಕಿಲ್ಲ ಎಂಬುದನ್ನು ಊಹಿಸಬಹುದಾಗಿದ್ದರಿಂದ ಇಷ್ಟು ನಾಚಿಕೆ ಬಿಟ್ಟು ಮಗಳ ಮುಖ ನೋಡಬೇಕೆಂದು ಮೆಸೇಜ್ ಮಾಡಿದ ಅವಳ ಭಂಡ ಧೈರ್ಯದ ಬಗ್ಗೆಯೇ ಎಲ್ಲರೂ ಈಗ ಚರ್ಚಿಸುತ್ತಿದ್ದರು.

ಇವರೆಲ್ಲ ಹೀಗೆ ಯಾರೋ ತಮ್ಮ ಕೈಕಟ್ಟಿಹಾಕಿ, ಬೆನ್ನೊಳಗೆ ಹಿಮದ ತುಂಡು ಹಾಕಿದಂತೆ ಆಡುತ್ತಿರುವ ಹೊತ್ತಿನಲ್ಲಿಯೇ ಬೆಂಗಳೂರಿನ ಐಶಾರಾಮೀ ಹೋಟೆಲೊಂದರ ಈಜುಕೊಳದ ಪಕ್ಕದ ಈಸಿಚೇರಿನಲ್ಲಿ ಕೂತು ಲ್ಯಾಪ್‍ಟಾಪಿನಲ್ಲಿ ಚಿತ್ರಲೇಖಾಳ ಬಾಲ್ಯದ ಡಿಪಿಯನ್ನೂ ಅವಳು ನಾಲ್ಕು ವರ್ಷದ ಹಿಂದೆ ಪೋಸ್ಟ್ ಮಾಡಿದ್ದ ಅರ್ಧಮರ್ಧ ಕಾಣುವ ಮುಖದ ಫೋಟೋವನ್ನೂ ತದೇಕಚಿತ್ತದಿಂದ ನೋಡುತ್ತ ಕುಳಿತಿದ್ದ ಮಧುವಿನ ಕಣ್ಣೆದುರು ಪ್ರತಿಭಾ ಎಂಬ ಹೆಸರಿನ ತನ್ನ ಬದುಕು ಯಾವುದೋ ಅಪರಿಚಿತವೆನ್ನಿಸುವ ಹುಡುಗಿಯ ಬದುಕಿನಂತೆ, ಪೂರ್ವಜನ್ಮದ ನೆನಪಿನಂತೆ, ಚಲನಚಿತ್ರದ ದೃಶ್ಯಗಳಂತೆ ಹಾದು ಹೋಗುತ್ತಿತ್ತು.

ಹಾಗೆ ನೋಡಿದರೆ ಪ್ರತಿಭಾಳ ಕುಟುಂಬದ ಹಿನ್ನೆಲೆ ಭರ್ಜರಿಯಾದದ್ದೇ. ಪ್ರತಿಭಾಳ ಮುತ್ತಜ್ಜನ ಮೂಲ ಉತ್ತರ ಕರ್ನಾಟಕದ ಒಂದು ಸಂಸ್ಥಾನ. ಇರುವೆಗಳ ತಂಡದ ದಾಳಿಗೆ ಸಿಕ್ಕ ಮುಷ್ಠಿ ಸಕ್ಕರೆ ಕ್ಷಣಾರ್ಧದಲ್ಲಿ ಮಾಯವಾಗುವಂತೆ ದುರದೃಷ್ಟವಶಾತ್ ಹತ್ತಾರು ಕಾರಣಗಳಿಂದ ಅವರ ಆಸ್ತಿಯೆಲ್ಲ ಕರಗಿ ಜೀವನೋಪಾಯಕ್ಕಾಗಿ ಪ್ರತಿಭಾಳ ಅಜ್ಜ ಮಲೆನಾಡಿನ ಹಳ್ಳಿಯೊಂದರಲ್ಲಿ ಬಂದು ನೆಲೆಸಬೇಕಾದ ಪ್ರಸಂಗ ಬಂದೊದಗಿತ್ತು. ದೊಡ್ಡ ಕುಟುಂಬವನ್ನು ಸಾಕಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಹಾಸಿಗೆ ಯಾವಾಗಲೂ ಗಿಡ್ಡವೇ. ಒಂದು ಸಲ ತಲೆ ನೆಲದ ಮೇಲಾದರೆ ಇನ್ನೊಂದು ಸಲ ಕಾಲು. ಪ್ರತಿಭಾಳ ಅಪ್ಪ ಅಮ್ಮನಿಗೂ ಇಬ್ಬರು ಗಂಡುಮಕ್ಕಳು, ಐದು ಹೆಣ್ಣುಮಕ್ಕಳು. ಹೆಸರಿಗೆ ಸಂಸ್ಥಾನದ ಮನೆತನ, ತಿನ್ನಲು ಅನ್ನಕ್ಕೆ ತತ್ವಾರ. ಹೆಣ್ಣು ಮಕ್ಕಳಿಗೆ ಯೋಗ್ಯ ಗಂಡನ್ನು ಹುಡುಕುವ ಆಸೆ ಇದ್ದರೂ ಅದು ನನಸಾಗುವ ಪ್ರಶ್ನೆಯೇ ಇಲ್ಲ. ಗಂಡು ಸಿಕ್ಕಿದ್ದೇ ತಡ ಎನ್ನುವಂತೆ ಮದುವೆ ಮಾಡಿ ಹುಡುಗಿಯರನ್ನು ದಾಟಿಸುವುದೇ ಅಪ್ಪ ಅಣ್ಣ ತಮ್ಮಂದಿರ ಕೆಲಸವಾಗಿತ್ತು. ಮೂರನೇ ಮಗಳಾದ ಪ್ರತಿಭಾ ಮುಂಬಯಿಯಲ್ಲ್ಲಿ ನೆಲೆಸಿದ್ದ ದೂರದ ಸಂಬಂಧದ ನೆಂಟರ ಹುಡುಗನ ಹೆಂಡತಿಯಾದದ್ದು ಹಾಗೆ. ಪಿಯುಸಿ ಮುಗಿಸಿ ಡಿಗ್ರಿಗೆ ಹೋಗುವ ಆಸೆಯಿದ್ದರೂ ಬಡತನದಿಂದ ಓದಲಾಗದೇ ಮನೆಯಲ್ಲಿಯೇ ಇದ್ದ ಪ್ರತಿಭಾ ಮಾತಿನ ಮಲ್ಲಿ. ಕಲ್ಲನ್ನೂ ಮಾತಾಡಿಸುವವಳು, ವಟವಟಸುಬ್ಬಿ ಎಂದೆಲ್ಲ ಅವಳ ಅಡ್ಡ ಹೆಸರು. ‘ಪ್ರತಿಭಾಂದು ಮರದ ಬಾಯಿಯಾಗಿದ್ದರೆ ಯಾವತ್ತೋ ಒಡೆದು ಹೋಗುತ್ತಿತ್ತು’ ಎಂದು ಹತ್ತಿರದವರೆಲ್ಲ ತಮಾಷೆ ಮಾಡುವುದೇ ಮಾಡುವುದು. ಒಂದು ಹೊತ್ತು ಊಟವಿಲ್ಲದಿದ್ದರೂ ತೊಂದರೆಯಿಲ್ಲ ಅವಳಿಗೆ ಮಾತು ಬೇಕು. ಅವಳಿಗೆ ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಒಂದು ಅಂಕದ ಉತ್ತರಕ್ಕೆ ಆಸ್ಪದವೇ ಇಲ್ಲ. ಎಲ್ಲ ಹತ್ತು ಅಂಕಗಳ ದೀರ್ಘ ಉತ್ತರಗಳೇ! ಇಂತಹ ಚಿನಕುರಳಿಯಂತಹ ಹುಡುಗಿಗೆ ಭಾಷೆ ಬಾರದ ಹೊಸ ಊರೇ ಎಂದು ತಾಯಿ ಕಣ್ಣೀರು ಹಾಕಿದ್ದರು. ಆದರೆ ಮನೆಯಿಂದ ಬಲುದೂರ ಬಂದಿದ್ದರ ಬಗ್ಗೆ ಪ್ರತಿಭಾಳಿಗೆ ಬೇಸರವಿರಲಿಲ್ಲ, ಮನೆಯ ಜನರನ್ನು ಬಿಟ್ಟರೆ ಬೇರೆ ಮನುಷ್ಯರ ಮುಖವನ್ನು ನೋಡುವುದೇ ಅಪರೂಪವಾಗಿದ್ದ ಕಾಡಿನ ನಡುವಿನ ಮನೆಯಿಂದ ಮುಂಬಯಿಯ ಜನಾರಣ್ಯಕ್ಕೆ ಹೋಗುವುದು ಅವಳಿಗೆ ಖುಶಿಯೇ ಆಗಿತ್ತು. ಆದರೆ ಮದುವೆಯ ದಿನವೂ ಒಂದೂ ಮಾತಾಡದ ಗಂಡನ ಬಗ್ಗೆ ಅವಳಿಗೆ ಮುನಿಸಿತ್ತು. ಆ ಮುನಿಸು ಹತಾಶೆಯಾಗಿ ಬದಲಾದದ್ದು ಮುಂಬೈಗೆ ಬಂದ ಮೇಲೆ! ತನ್ನ ಅಣ್ಣನ ಹಾಗೆ ಬಹಳ ಶಾಂತ ಸ್ವಭಾವದವನಿರಬೇಕು, ತನ್ನಂತೆ ಅವನಿಗೂ ಸಂಕೋಚವಿರಬೇಕು ಎಂದುಕೊಂಡಿದ್ದ ಪ್ರತಿಭಾಗೆ ಗಂಡ ಕಿವುಡ ಮೂಕ ಎಂದು ಗೊತ್ತಾದ ಮೇಲೆ ಅವಳÀ ಕನಸಿನಲೋಕ ಇಸ್ಫೀಟಿನ ಎಲೆಗಳ ಮನೆಯಂತೆ ಕುಸಿದು ಬಿದ್ದಿತ್ತು! ಮಾಡುವುದಾದರೂ ಏನನ್ನು? ಹೇಳುವುದಾದರೂ ಯಾರಿಗೆ? ಹೇಗೋ ಕಷ್ಟಪಟ್ಟು ಟ್ರಂಕ್‍ಕಾಲ್ ಮಾಡಿ ಯಾರದೋ ಮನೆಗೆ ವಿಷಯ ತಿಳಿಸಿ ಅಪ್ಪ ಅಣ್ಣಂದಿರಿಗೆ ಹೇಳಲು ಹೇಳಿದ್ದಳು, ಪತ್ರವನ್ನೂ ಬರೆದು ಹಾಕಿದ್ದಳು. ನೂರಾರು ಮೈಲಿ ದೂರವಿರುವ ಅಪ್ಪ ಅಣ್ಣಂದಿರು ನೋಡಲೂ ಬರಲಿಲ್ಲ, ಕನಿಷ್ಠ ಒಂದು ಪತ್ರವನ್ನೂ ಹಾಕಲಿಲ್ಲ. ತನ್ನ ಬದುಕೇ ಒಂದು ಮೂಕಿಚಿತ್ರವಾಗಿ ಬಿಟ್ಟಿತಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಬಹು ಕಷ್ಟಪಟ್ಟಳಾಕೆ. ಹಿಂದಿನ ಕಾಲದಲ್ಲಿ ಕಣ್ಣು ಕಟ್ಟಿ ಹೆಣ್ಣುಮಕ್ಕಳನ್ನು ಕಾಡಿಗೆ ಬಿಡುತ್ತಿದ್ದ ಕಥೆ ಪ್ರತಿಭಾಳ ವಿಚಾರದಲ್ಲಿ ನಿಜವಾಗಿತ್ತು. ಆದರೆ ಅವಳು ಏನೂ ಮಾಡುವ ಹಾಗಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್

ಮೊದಲ ದಿನಗಳು ತಳಮಳ, ಅಳು, ಉಪವಾಸದಲ್ಲಿ ಕಳೆದರೂ ಕ್ರಮೇಣ ಕಾಲ ಕರುಣೆ ತೋರಿ ತಾನೇ ಮದ್ದಾಯಿತು. ಕಿವಿ ಕೇಳದಿದ್ದರೂ, ಬಾಯಿ ಬರದಿದ್ದರೂ ರವಿ ನೇಟುಪಾಟಾದ ದೇಹದ ಚೆಂದದ ಮುಖದ ಹುಡುಗ. ದಟ್ಟ ಹುಬ್ಬು ಜೇನುಗಣ್ಣು ನೇರ ಮೂಗು ತೆಳು ಮೀಸೆಯ ನಗು ಸೂಸುವ ಚೆಲುವ. ಇವಳು ಬಿಕ್ಕಳಿಸಿ ಅಳುವಾಗಲೆಲ್ಲ ಪಕ್ಕ ಕೂತು ಚಡಪಡಿಸುವ ಅವನ ಮೈಮನಸಿನ ಬಿಸುಪಿಗೆ ಇಪ್ಪತ್ತರ ಹುಡುಗಿ ಕರಗಿದಳು. ತಬ್ಬಿದ ಬಳ್ಳಿ ಹಬ್ಬಿಕೊಂಡು ಹೂ ಬಿಟ್ಟಿತು. ವರ್ಷದೊಳಗೇ ಹುಟ್ಟಿದ ಮುದ್ದಾದ ಹೆಣ್ಣುಮಗುವಿಗೆ ಮಹಾಭಾರತದಲ್ಲಿ ತನಗೆ ಇಷ್ಟವಾದ ಪಾತ್ರಗಳಲ್ಲೊಂದಾದ ಚಿತ್ರಲೇಖೆಯ ಹೆಸರಿಟ್ಟಿದ್ದಳು ಪ್ರತಿಭಾ. ಅಡೆತಡೆಗಳನ್ನು ಮೀರಿ ಬದುಕು ಹರಿಯುತ್ತಲಿತ್ತು. ನೀರಲ್ಲಿ ಮುಳುಗಿದ ವ್ಯಕ್ತಿ ಗಾಳಿಗಾಗಿ ಕಾತರಿಸುವಂತೆ ಹೊಟ್ಟೆಪಾಡೇ ದೊಡ್ಡದಾದಾಗ ಇತರ ಸಂಗತಿಗಳು ಹಿನ್ನೆಲೆಗೆ ಸರಿದವು. ಅತ್ತೆಯ ದುಡಿಮೆ ಮಗುವಿನ ಹಾಲುಪುಡಿಗೂ ಸಾಲದಾದಾಗ ಹೆರಿಗೆಯಾಗಿ ಆರು ತಿಂಗಳಾಗುತ್ತಿದ್ದಂತೆ ವಕೀಲರ ಕಛೇರಿಯೊಂದರಲ್ಲಿ ಸಹಾಯಕಿಯಾಗಿ ಸೇರಿಕೊಂಡಳು ಪ್ರತಿಭಾ. ಅತ್ತೆ ಹಪ್ಪಳ ಸಂಡಿಗೆ ಮಾಡಿ ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಆಗೆಲ್ಲ ಕಿವುಡ ಮೂಕರಿಗೆ ಶಾಲೆಗಳು ಹೆಚ್ಚಿಗೆ ಇರಲೂ ಇಲ್ಲ, ಜನರಿಗೆ ಅದರ ಮಹತ್ವ ಗೊತ್ತಿರಲೂ ಇಲ್ಲ. ಗೊತ್ತಿದ್ದರೂ ರವಿಯನ್ನು ಅಲ್ಲಿಗೆಲ್ಲ ಕಳಿಸುವ ಚೈತನ್ಯ ಇವರಿಗೆ ಇರಲೂ ಇಲ್ಲ. ಹಾಗಾಗಿ ತಮ್ಮ ಮಗನಿಗೆ ಮನೆಯಿಂದ ಹೊರಹೋಗಿ ಕೆಲಸ ಮಾಡಲು ಹೇಗೂ ಆಗುವುದಿಲ್ಲ ಎಂದು ಆಕೆ ರವಿಗೆ ಮನೆಯೊಳಗಿನ ಸಕಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಲು ಕಲಿಸಿಟ್ಟಿದ್ದರು. ಮುಂದೆ ಅದೃಷ್ಟವಿದ್ದರೆ ಮದುವೆ ಗಿದುವೆ ಆದರೆ ಹೆಂಡತಿ ಹೊರಗಡೆ ನಾಲ್ಕು ಕಾಸು ದುಡಿದರೆ ಇವನು ಈ ಕಡೆ ಮನೆ ನೋಡಿಕೊಳ್ಳಬಹುದಲ್ಲ ಎಂಬ ದೂರಾಲೋಚನೆಯ ಹೆಂಗಸಾಗಿದ್ದಳಾಕೆ. ಆದ ಕಾರಣ ಮನೆಯಲ್ಲಿ ಪ್ರತಿಭಾಗೆ ಮಗು ನೋಡಿಕೊಳ್ಳುವ ಕೆಲಸವೂ ಇರಲಿಲ್ಲ.

ಹಾಗಾಗಿ ಆಕೆ ಕೆಲಸದಿಂದ ಬಂದವಳೇ ಮನೆಯ ಪಕ್ಕದಲ್ಲಿ ಶಾರ್ಟ್‍ಹ್ಯಾಂಡ್ ಕಲಿಯಲು ಹೋಗುತ್ತಿದ್ದಳು. ಮೊದಲೇ ಚೆಲುವೆ, ಇದೀಗ ಕೆಲಸಕ್ಕೆ ಹೋಗಿ ನಾಲ್ಕು ಕಾಸು ದುಡಿವ ಆತ್ಮವಿಶ್ವಾಸದಿಂದಲೂ ಸರಳ ಅಲಂಕಾರದಿಂದಲೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಮೋಡದಿಂದ ಸುತ್ತುವರೆದಾಗ ಮಸುಕಾಗಿ ಕಾಣುವ ಚಂದ್ರ ನಿಚ್ಚಳ ಆಕಾಶದಲ್ಲಿ ವಿಶಿಷ್ಟವಾಗಿ ಕಾಣುವಂತೆ ಮಹಾನಗರದ ನಯನಾಜೂಕುಗಳನ್ನು ಕಲಿತು ಅದ್ವಿತೀಯವಾಗಿ ಕಾಣತೊಡಗಿದಳು. ಆಗತಾನೇ ಇಪ್ಪತ್ತೆರಡು ದಾಟಿದ ಹುಡುಗಿ ಮಗುವೊಂದರ ತಾಯಿ ಎಂದು ಆಣೆ ಮಾಡಿ ಹೇಳಿದರೂ ಯಾರೂ ನಂಬದ ಹಾಗಿದ್ದಳು. ಮೊದಲು ತನ್ನ ಪುಟ್ಟ ಹಳ್ಳಿಯಲ್ಲಿ, ನಂತರ ಮುಂಬಯಿಯ ಕೊಳಕು ಬೀದಿಯೊಂದರ ಇಕ್ಕಟ್ಟಾದ ಬಿಡಾರವೆಂಬ ಬಾವಿಯಲ್ಲಿ ಕಪ್ಪೆಯಂತೆ ಇದ್ದವಳಿಗೆ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ತನ್ನ ಕಛೇರಿಯ ಪಕ್ಕದ ಸಮುದ್ರದಂತೆ ಬದುಕು ದೊಡ್ಡದಾಗಿ ಕಂಡಿತ್ತು. ತನ್ನೊಳಗನ್ನು ಎಂದೂ ಮಾತಿನ ಮೂಲಕ ಸ್ಪರ್ಶಿಸಲಾಗದ, ಕೇಳುವ ಕಿವಿಯಾಗಿ ಸಾಂತ್ವನ ನೀಡಲಾಗದ ಗಂಡ, ಪೂರ್ತಿಯಾಗಿ ತಾನು ತನ್ನನ್ನೆಂದೂ ಅವನೆದುರು ತೆರೆದುಕೊಳ್ಳಲಾಗದ ವಾಸ್ತವ ಈಗೀಗ ಅವಳೆದುರು ಢಾಳಾಗಿ ಗೋಚರಿಸತೊಡಗಿತ್ತು. ಈ ವಾಸ್ತವದ ಬಿಸಿಲು ಸುಡಲಾರಂಭಿಸಿದ ಮೇಲೆ ಪ್ರತಿಭಾ ಒಂದೊಂದು ದಿನವನ್ನೂ ತಳಮಳದಿಂದ ಕಳೆಯಲಾರಂಭಿಸಿದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗವು…

ತಾನಿನ್ನೂ ಖರೀದಿಸಬೇಕೆಂದುಕೊಂಡಿದ್ದ ವಸ್ತುವನ್ನು ಕಳೆದುಕೊಂಡ ಹಾಗೆ, ನೆನಪು ಮೂಡುವ ಮುನ್ನವೇ ಮಾಸುವ ಹಾಗೆ ಭ್ರಮಿಸಿ ಯೋಚಿಸಿ ನರಳಿ ತನ್ನ ತಲೆಬುಡವಿಲ್ಲದ ಯೋಚನೆಗೆ ತಾನೇ ಕಂಗೆಟ್ಟಳು. ಯೋಚಿಸಿ ಯೋಚಿಸಿ ತಲೆ ಸಿಡಿದು ಹೋಗಬಹುದೆಂದು ಅನ್ನಿಸಿದ ಕ್ಷಣವೊಂದರಲ್ಲಿ ಈಗ ನಡೆಯುತ್ತಿರುವ ಹಾದಿಯನ್ನು ಬಿಟ್ಟು ಬೇರೆ ಹಾದಿಯೆಡೆ ಹೊರಳಿಕೊಳ್ಳಲೂಬಹುದು ಎಂಬ ಯೋಚನೆ ಹುಟ್ಟಿಕೊಂಡಿತ್ತು. ಆದರೆ ತನ್ನನ್ನು ಹೊರದೂಡಿ ಮರೆತ ಹಾದಿಗೆ ಮರಳಲು ಅವಳು ತಯಾರಿರಲಿಲ್ಲ. ಅದಾದ ಕೆಲ ವಾರಗಳ ನಂತರ ಬಾಸ್ ದೆಹಲಿಯಲ್ಲಿ ಹೊಸ ಕಛೇರಿಯೊಂದನ್ನು ತೆರೆಯುವ ಮಾತಾಡುತ್ತಿದ್ದಾಗ ಕೇಳಿಸಿಕೊಂಡ ಅವಳಲ್ಲಿ ಹೊಸ ಕನಸೊಂದು ಮೊಳಕೆಯೊಡೆದಿತ್ತು. ಸಾಧ್ಯವಾದರೆ ತನ್ನನ್ನು ಹೊಸ ಕಛೇರಿಗೆ ಕಳಿಸುವಂತೆ ಒಂದು ಕೋರಿಕೆಯನ್ನು ಬಾಸ್ ಕಿವಿಗೆ ಹಾಕಿಯೂ ಇಟ್ಟಿದ್ದಳು. ಕೈಕಾಲು ಮೂಡದ ಆ ಅಸ್ಪಷ್ಟ ಕನಸಿಗಾಗಿಯೇ ಅವಳು ಇನ್ನಿಲ್ಲದ ಶೃದ್ಧೆಯಿಂದ ಶಾರ್ಟ್‍ಹ್ಯಾಂಡ್ ಟೈಪಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಳು. ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೂ ಹೋಗಿ ತಕ್ಕಮಟ್ಟಿಗೆ ಮಾತಾಡುವುದನ್ನೂ ಕಲಿತಳು, ಹೇಗೂ ಮರಾಠಿ, ಹಿಂದಿ ರೂಢಿಯಾಗಿತ್ತು. ಯುದ್ಧವಿಲ್ಲದ ಕಾಲದಲ್ಲೂ ಸೈನಿಕನೊಬ್ಬ ಕತ್ತಿವರಸೆಯ ತನ್ನ ಕೌಶಲ್ಯವನ್ನು ಸದಾ ಹೆಚ್ಚಿಸಿಕೊಳ್ಳುವಂತೆ, ಬೆಂಕಿಯಲ್ಲಿ ಬೆಂದು ಕತ್ತರಿಸಿಕೊಂಡು ಬಡಿಯಲ್ಪಟ್ಟು ಆಭರಣವಾದ ಚಿನ್ನ ಕೊಳ್ಳುವವರಿಗಾಗಿ ಕಾಯುವಂತೆ ದೆಹಲಿಯ ಕಚೇರಿಯ ಸುದ್ದಿ ಮತ್ತೆ ಯಾವಾಗ ಬಾಸ್ ಎತ್ತುತ್ತಾರೆಂದು ಎದುರು ನೋಡತೊಡಗಿದಳು.

ಭೂತವನ್ನು ಹೊತ್ತುಕೊಂಡು ತಾನು ಉಜ್ವಲ ಭವಿಷ್ಯವನ್ನು ಪ್ರವೇಶಿಸಲಾಗದೆಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಮತ್ತು ಮುಂಬಯಿ ಬಿಡುವವರೆಗೆ ಅತೀತ ತನ್ನ ಬೆನ್ನು ಬಿಡುವುದಿಲ್ಲ ಎಂದೂ ಅರಿವಿತ್ತು. ಅಷ್ಟೇ, ತನ್ನ ಕಥೆಯಲ್ಲಿ ಅತ್ತೆ, ಗಂಡ, ಮಗಳು, ತವರಿನವರು ಎಂಬೆಲ್ಲ ಪಾತ್ರಗಳನ್ನು ಇಟ್ಟುಕೊಳ್ಳುವ ಯಾವ ಇರಾದೆಯೂ ಪ್ರತಿಭಾಗೆ ಇರಲಿಲ್ಲ. ಏಕೆಂದರೆ ಅವಳು ಕನಸಿದ್ದ ಬಯಸಿದ್ದ ಬದುಕು ಇವರು ಯಾರಿಗೂ ಸಂಬಂಧಿಸಿರಲಿಲ್ಲ. ಜತೆಗೆ ಮತ್ತೊಬ್ಬ ವಕೀಲರ ಕಚೇರಿಯ ಮೂಲಕ ಆಕೆ ತನ್ನ ಹೆಸರನ್ನು ಕಾನೂನುಬದ್ಧವಾಗಿ ಮಧು ಎಂದು ಬದಲಾಯಿಸಿಕೊಂಡು ಒಂದು ಪುಟ್ಟ ಸ್ಥಳೀಯ ಮರಾಠಿ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಜಾಹೀರಾತು ಕೊಟ್ಟು ಅದನ್ನು ಜೋಪಾನವಾಗಿ ಕಾದಿಟ್ಟುಕೊಂಡಿದ್ದಳು. ಟ್ರ್ಯಾಕಿನಲ್ಲಿ ಓಡಲು ಸಿದ್ಧವಾಗಿ ನಿಂತ ಓಟಗಾರ್ತಿ ‘ರೆಡಿ ಸ್ಟಾರ್ಟ್’ ಎಂಬ ಆದೇಶಕ್ಕಾಗಿ ಕಾಯುತ್ತಿರುವಂತೆ ಆತಂಕಭರಿತ ಉದ್ವೇಗದಲ್ಲಿ ಪ್ರತಿಭಾ ತನ್ನ ಮುಂದಿನ ಹೆಜ್ಜೆಗಾಗಿ ತಾನೇ ಕಾಯುತ್ತಿದ್ದಳು.

ದೀಪಾವಳಿಗೆ ಎರಡು ದಿನ ಮುಂಚಿನಿಂದಲೇ ಪ್ರತಿಭಾ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಳು. ಮನೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಾನನ್ನು ಟ್ಯಾಕ್ಸಿಯಲ್ಲಿ ತೆಗೆದುಕೊಂಡು ಬಂದಳು. ಗಂಡನಿಗೆ ಅತ್ತೆಗೆ ಮಗಳಿಗೆ ನಾಲ್ಕು ನಾಲ್ಕು ಜತೆ ಬಟ್ಟೆ ತಂದಳು. ಜತೆಗೆ ಬೆಡ್‍ಶೀಟು, ಟವೆಲ್ಲುಗಳನ್ನೂ ತಂದಿಟ್ಟಳು. ಕರೆಂಟು ನೀರಿನ ಬಿಲ್ಲುಗಳನ್ನು ಮುಂಚಿತವಾಗಿ ಹೋಗಿ ಕಟ್ಟಿ ಬಂದಳು. ಇವಳು ಇಷ್ಟೆಲ್ಲ ಮಾಡುತ್ತಿರುವಾಗ ಅತ್ತೆ ಒಂದೇ ಸಮನೆ ಒಟಗುಡುತ್ತಿದ್ದರು, “ದುಡಿವಾಗ ನಾಕು ಕಾಸು ಉಳಿಸದೇ ಹೀಗೆ ಖರ್ಚು ಮಾಡಿದರೆ ಮುಂದೇನು ಗತಿ?”
ಅವತ್ತು ದೀಪಾವಳಿಯ ದಿನ. ಅವಳೇ ಎಲ್ಲರಿಗೂ ಹಬ್ಬದಡಿಗೆ ಮಾಡಿ ಬಡಿಸಿದಳು. ಮಗಳಿಗೆ ಹೊಸ ಬಟ್ಟೆ ತೊಡಿಸಿ ಖುಶಿ ಪಟ್ಟಳು. ಹತ್ತಿರದ ಸ್ಟುಡಿಯೋಗೆ ಹೋಗಿ ಮಗಳ ಫೋಟೋ ತೆಗೆಸಿ ಸಂಜೆಯೇ ತೊಳೆದು ಕೊಡಲು ಹೇಳಿದಳು. ಎಲ್ಲರಿಗೂ ಊಟ ಬಡಿಸಿಯಾದ ಮೇಲೆ ಮಗುವನ್ನು ಕಾಲ ಮೇಲೆ ಹಾಕಿಕೊಂಡು ಮಲಗಿಸುತ್ತಿದ್ದಾಗ ಗಂಡನೂ ಬಂದು ಇವಳನ್ನು ತಬ್ಬಿ ಹಿಡಿದು ಹೆಗಲಿಗೊರಗಿದ. ಪ್ರತಿಭಾಳ ಕಣ್ಣಿಂದ ಎರಡು ಹನಿಗಳುರುಳಿದವು. ಒಂದು ಕ್ಷಣ “ಈ ಕ್ಷಣದಲ್ಲಿಯೇ ಇದ್ದು ಬಿಡಲೇ” ಯೋಚಿಸಿದಳು. ಆದರೆ ಅದು ಆಗುಹೋಗದ ಮಾತೆಂಬುದು ಅವಳಿಗೂ ಗೊತ್ತಿದ್ದ ಕಾರಣ ಗಂಟಲೊಳಗೆ ಕಟ್ಟಿ ಬಂದ ಸಂಕಟವನ್ನು ಸದ್ದಾಗದಂತೆ ನುಂಗಿ ಒಂದು ದೀರ್ಘ ಉಸಿರೆಳೆದುಕೊಂಡು ಮಗಳ ಜತೆ ಗಂಡನ ತೋಳನ್ನೂ ಮೃದುವಾಗಿ ತಟ್ಟತೊಡಗಿದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಬೆಳಿಗ್ಗೆ ಇವರು ಏಳುವ ವೇಳೆಗಾಗಲೇ ತಡರಾತ್ರಿ ಬಿಡುವ ದೆಹಲಿಯ ರೈಲು ಬಹುದೂರ ತಲುಪಿತ್ತು. ಹುಡುಕುವುದಾದರೂ ಎಲ್ಲಿ? ಪ್ರತಿಭಾ ಕೆಲಸಮಾಡುವ ಕಚೆರಿಯ ವಿಳಾಸ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಮನೆಯಲ್ಲಿದ್ದ ಮದುವೆಯ ಒಂದಿಷ್ಟು ಫೋಟೋಗಳೂ ನಾಪತ್ತೆಯಾಗಿದ್ದವು. ಅವಳ ಫೋಟೋ ಆಗಲೀ ಕಾಗದಪತ್ರವಾಗಲೀ ಬಟ್ಟೆಬರೆಯಾಗಲೀ ಯಾವುದೂ ಇರಲಿಲ್ಲ. ಊರಿಗೆ ಫೋನ್ ಮಾಡಿದರೆ ತನ್ನೆಲ್ಲ ಫೋಟೋಗಳನ್ನು, ಕ್ಯಾಮರಾದ ರೋಲ್ ಸಮೇತ, ಕಾಪಿ ಮಾಡಿಸಿಕೊಡುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾಳೆ ಎಂದರು. ಚಾಣಾಕ್ಷ ಕಳ್ಳ ತನ್ನ ಯಾವುದೇ ಸುಳಿವು ಬಿಡದೆ ಇರಲು ತೋರುವ ಎಚ್ಚರಿಕೆಯನ್ನು ಎಲ್ಲದರಲ್ಲೂ ತೋರಿಸಿದ್ದಳು. ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ನದಿ ಹುಚ್ಚೆದ್ದು ದಿಕ್ಕು ಬದಲಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋದಂತೆ, ಹಳೆಯ ಕಥೆಯ ಪಾತ್ರಗಳ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲದೇ ಬರೆಯುತ್ತಿದ್ದ ಕತೆಯನ್ನು ಅರ್ಧಕ್ಕೇ ನಿಲ್ಲಿಸಿ ಹಾಳೆಯನ್ನು ಮುದ್ದೆ ಮಾಡಿ ಕಸದ ಬುಟ್ಟಿಗೆ ಬಿಸಾಕಿ ಹೊಸ ಕತೆ ಶುರು ಮಾಡಿದ ಕತೆಗಾರನಂತೆ, ಅತ್ತೆ, ಗಂಡ, ಮಗಳು, ಮನೆ ಎಲ್ಲವನ್ನೂ ಬಿಟ್ಟು ಪ್ರತಿಭಾ ಮುಂಬೈನ ಬೋರಿವಿಲಿಯ ಚಾಳಿನಿಂದ ನಾಪತ್ತೆಯಾಗಿದ್ದಳು.
ಲ್ಯಾಪ್‍ಟಾಪ್ ಮುಚ್ಚಿ ಕುರ್ಚಿಗೊರಗಿದಳು ಮಧು. ತನ್ನ ಅತೀತವನ್ನು ಯಾರೊಬ್ಬರಿಗೂ ಹೇಳದೇ ಇಪ್ಪತ್ನಾಲ್ಕು ವರ್ಷಗಳಿಂದ ಎದೆಯೊಳಗೇ ಇಟ್ಟುಕೊಂಡಿದ್ದಾಳಾಕೆ. ಪ್ರತಿಭಾ ಎನ್ನುವ ಹಳ್ಳಿಯ ಹುಡುಗಿ ಅವಳಿಗೇ ಅಪರಿಚಿತೆಯಾಗಿ ಬಹಳ ಕಾಲವಾಗಿದೆ. ಚಿತ್ರಲೇಖಾ ಎಂಬ ಕಳೆದುಹೋದ ಮುದ್ರೆಯುಂಗುರದ ನೆನಪೊಂದು ಇಲ್ಲದೇ ಹೋಗಿದ್ದರೆ ಪ್ರತಿಭಾ ಕಳೆದೇ ಹೋಗುತ್ತಿದ್ದಳೇನೋ! ದೆಹಲಿಯಲ್ಲಿ ಒಂದು ನೆಲೆ ಕಂಡುಕೊಂಡ ಮೇಲೆ ಮುಂಬೈಗೆ ಹೋಗಿ ಮಗಳನ್ನು ಕರೆದುಕೊಂಡು ಬರಬೇಕೆಂದಿದ್ದವಳ ಬದುಕಿನ ನಾಟಕದಲ್ಲಿ ರಜತನೆಂಬ ಪಾತ್ರ ಆಕಸ್ಮಿಕವಾಗಿ ಆಗಮಿಸಿ ಎಲ್ಲ ಹಿಂದುಮುಂದಾಗಿ ಹೋಯಿತು. ಅವಳು ಮುಂಬೈ ವಕೀಲರ ದೆಹಲಿಯ ಹೊಸ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಂಜೆಕಾಲೇಜಿನಲ್ಲಿ ಡಿಗ್ರಿ ಮಾಡುವಾಗ ಸಿಕ್ಕವನವ. ಅವನೂ ಪಕ್ಕದ ಸಂಜೆಕಾಲೇಜಿನಲ್ಲಿ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ. ಉತ್ತರಪ್ರದೇಶದ ಸಂಪ್ರದಾಯಸ್ಥ ಕುಟುಂಬದ ಹುಡುಗನಿಗೂ ಮಹಾರಾಷ್ಟ್ರದಿಂದ ಮಲತಾಯಿಯ ಕಾಟ ತಾಳದೇ ಓಡಿಬಂದ ಹುಡುಗಿಯೆಂದು ಹೇಳಿಕೊಂಡ ಮಧುಗೂ ಪ್ರೀತಿ ಹುಟ್ಟಿ ಮದುವೆಯೂ ಆಯಿತು. ಹಾಗಾಗಿ ಪ್ರತಿಭಾಗೆ ಮಧುವಿನ ಪಾತ್ರದ ಬಣ್ಣ ಕಳಚಲಾಗಲೇ ಇಲ್ಲ. ಹಾಗಂತ ಆಕೆಗೆ ಪ್ರತಿಭಾ ಮಧುವಾದ ಬಗ್ಗೆ ಹೆಮ್ಮೆಯಿಲ್ಲವೆಂದಲ್ಲ. ಆದರೆ ಆ ಬಣ್ಣದ ಆಳದಲ್ಲೆಲ್ಲೋ ಉಸಿರಾಡಲಾಗದೇ ಒದ್ದಾಡುತ್ತಿರುವ ಪ್ರತಿಭಾಳ ಬಗ್ಗೆ ಮಧುವಿಗೆ ಮರುಕ ಹುಟ್ಟುವುದಿದೆ. ಆಗಾಗ್ಗೆ ಚಿತ್ರಲೇಖಾಳೆಡೆಗಿನ ತನ್ನ ಕರ್ತವ್ಯದ ವೈಫಲ್ಯದ ತಪ್ಪಿತಸ್ಥ ಭಾವನೆಯಿಂದ ಸುಧಾರಿಸಿಕೊಳ್ಳಲಾಗದಷ್ಟು ಒದ್ದಾಡಿಬಿಡುವ ಪ್ರತಿಭಾಳನ್ನು ಸಂತೈಸಲಾಗದೇ ಮಧು ಕೂಡ ಕೊರಗುತ್ತಾಳೆ.

ರಜತನ ಸಣ್ಣ ಸ್ಟಾರ್ಟ್ ಅಪ್ ಬೇಗನೇ ವರ್ಷಕ್ಕೆ ಹತ್ತಾರು ಕೋಟಿ ವ್ಯವಹಾರ ಮಾಡುವಂತಾಯಿತು. ಮಧುವಿನ ಕಾಲ್ಗುಣದಿಂದಲೇ ಎಲ್ಲ ಎಂದು ಗಂಡ, ಗಂಡನ ಕುಟುಂಬದವರೆಲ್ಲರ ಅಂಬೋಣ. ಆಕೆಯೂ ಕಂಪನಿಯ ನಿರ್ದೇಶಕರಲ್ಲೊಬ್ಬಳು. ಒಮ್ಮೆಯಾದರೂ ಮುಂಬೈಗೆ ಹೋಗಿ ಮಗಳನ್ನು ಹುಡುಕಬೇಕು ಏನಾದರೂ ಕಥೆ ಕಟ್ಟಿ ತಾನೇ ತಂದುಸಾಕಬೇಕು ಎಂದೆಲ್ಲ ಅಂದುಕೊಂಡಿದ್ದು ಅದೆಷ್ಟೋ ಸಲ. ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಒಂದು ಎನ್‍ಜಿಓ ಕೂಡ ಶುರು ಮಾಡಿದ್ದಳು. ಆದರೆ ಒಂದು ಹೆಜ್ಜೆ ಪಕ್ಕಕ್ಕಿಟ್ಟರೂ ಗುಟ್ಟು ರಟ್ಟಾಗಿ ತಾನೇ ಕಟ್ಟಿಕೊಂಡ ಗಾಜಿನ ಮನೆಯಲ್ಲಿ ಬೆತ್ತಲಾಗುವ ಭಯ. ಹಾಗಾಗಿ ಯಾವ ಸಾಮಾಜಿಕ ಜಾಲತಾಣದಲ್ಲೂ ಅವಳಿಲ್ಲ. ಅವಳ ಎನ್‍ಜಿಓಗೆ ಪ್ರಶಸ್ತಿ ಬಂದಾಗಲೂ ಅವಳು ವೇದಿಕೆಗೆ ಹೋಗಲಿಲ್ಲ. ಕೇಳಿದರೆ ತನ್ನ ಮಲ ತಂದೆತಾಯಿಗೆ ಗುರುತು ಸಿಕ್ಕುವುದೇ ಬೇಡ ಎಂದಿದ್ದಳು. ಬತ್ತಿದ ಕೆರೆಯಲ್ಲಿ ಹೊಂಡ ತೋಡಿ ಹನಿಹನಿಯಾಗಿ ಒಸರುವ ನೀರಿಗಾಗಿ ತಾಳ್ಮೆಯಿಂದ ಕಾದು ಕೊಡ ತುಂಬಿಸಿಕೊಳ್ಳಲು ಯತ್ನಿಸುವ ಬರಗಾಲದೂರಿನ ಹೆಣ್ಣುಗಳಂತೆ ತನ್ನ ಮಗಳನ್ನು ಹುಡುಕಿ ಕರೆದುಕೊಂಡು ಬರಲು ದಶಕದಶಕಗಳ ಕಾಲ ಮಾಡಿದ ಪ್ರಯತ್ನ ಒಂದೇ ಎರಡೇ! ಸ್ವಂತ ಅಪ್ಪ ಅಮ್ಮನಂತೆ ಪ್ರೀತಿಸುವ ಅತ್ತೆ ಮಾವನಿಗೆ ಆಘಾತವಾಗಬಾರದೆಂದು ಎಷ್ಟೋ ಸಲ ಹೆಜ್ಜೆ ಹಿಂದಿಟ್ಟಳು. ಈ ಎರಡು ದಶಕದಲ್ಲಿ ಅವರೂ ಕೃಷ್ಣನ ಪಾದ ಸೇರಿ ಆಯಿತು. ತಾನೆಂದರೆ ದೇವತೆ ಎಂದುಕೊಂಡಿರುವ ರಜತನಿಗೆ ಸತ್ಯ ಹೇಳಿಬಿಡಲೇ ಎಂದು ತವಕಿಸುವ ನಾಲಿಗೆಯನ್ನು ಸಂಭಾಳಿಸುತ್ತ ಕತ್ತಿಯಂಚಿನ ಮೇಲೆ ನಡೆಯುವವಳಂತೆ ನಡೆದಳು. ಒಳಗೊಳಗೇ ನವೆಯುತ್ತಾ ನವೆಯುತ್ತಾ ಮೇಲ್ಗಡೆ ಚೆಂದದ ಚಿತ್ರದಂತೆ ಕಂಡರೂ ಆಗಾಗ್ಗೆ ಒಳಗೆ ಬಣ್ಣ ಕಲಸಿ ರಾಡಿಯಾದ ಅಸ್ತವ್ಯಸ್ತ ಕ್ಯಾನ್‍ವಾಸ್ ಆಗಿಬಿಡುವ ತನ್ನ ಬದುಕನ್ನು ನೆನೆದು ಮಧು ಅದೆಷ್ಟು ನಿಟ್ಟುಸಿರಿಟ್ಟಿದ್ದಳೋ. ಎಲ್ಲವೂ ತಾನು ಬಯಸಿದಂತೆಯೇ ಆಗಿದ್ದ ಬದುಕಿನಲ್ಲಿ ಚಿತ್ರಲೇಖಾಳ ಮುಗ್ಧ ಮುಖ ಒಮ್ಮೊಮ್ಮೆ ಎದೆಯಲ್ಲಿ ಹರಿತವಾದ ಚೂರಿಯನ್ನಾಡಿಸಿದಂತೆ ನೋಯಿಸುವುದು. ಮತ್ತು ಆ ಒಮ್ಮೊಮ್ಮೆ ದಿನದಲ್ಲಿ ಒಮ್ಮೆಯಾದರೂ ಬರುವುದು. ಇವತ್ತು ನಾಳೆ ಎಂದು ದಿನದಿನವೂ ಮಗಳನ್ನು ಹುಡುಕಲು ಯೋಚಿಸುವುದು ಮತ್ತೆ ಹಿಂಜರಿಯುವುದು ಮಾಡುತ್ತ ಭರ್ತಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಕರ್ನಾಟಕಕ್ಕೆ ಕಾಲಿಟ್ಟಿದ್ದಾಳೆ ಪ್ರತಿಭಾ. ಅದೂ ನಾಲ್ಕು ವರ್ಷ ಶ್ವಾಸಕೋಶಕ್ಕೆ ಸಂಬಂಧಿಸಿದ ಅಪರೂಪದ ಖಾಯಿಲೆಯಿಂದ ನರಳಿ ಇನ್ನಿಲ್ಲವಾದ ರಜತನ ಹದಿಮೂರನೇ ದಿನದ ಕ್ರಿಯಾಕರ್ಮವನ್ನು ಗೋಕರ್ಣದಲ್ಲಿಯೇ ಮಾಡಿಬರುತ್ತೇನೆಂದು ಹಠ ಹಿಡಿದು ಹತ್ತೊಂಭತ್ತರ ಹರಯದ ತನ್ನ ಏಕೈಕ ಪುತ್ರನನ್ನು ಕರೆದುಕೊಂಡು ಬಂದಿದ್ದಾಳೆ.

ಝೋಮು ಹಿಡಿದ ಕಾಲನ್ನು ತುಸುವೇ ಎತ್ತಿದರೂ ಉಂಟಾಗುವ ಸಹಿಸಲಸಾಧ್ಯವಾದ ಸಂಕಟದ ಹಾಗೆ, ಸಿಡಿಯುವ ತಲೆನೋವಿಗೆ ಯಾವ ಸದ್ದೂ ಹಿತವೆನಿಸದ ಹಾಗೆ, ಆಘಾತಗೊಂಡ ಮನಸ್ಸಿಗೆ ಏನೂ ಬೇಡೆನಿಸುವ ಹಾಗೆ, ಜ್ವರ ಬಂದ ನಾಲಿಗೆಗೆ ಯಾವುದೂ ರುಚಿಸದ ಹಾಗೆ, ಸ್ಲೇಟಿನ ತುಂಬ ಗೀಚಿದ ಮಗು ಬರೆಯಲು ಜಾಗವಿಲ್ಲವೆಂದು ಅಳುವಂತೆ ಚಿತ್ರಲೇಖಾ ಮೊಬೈಲ್ ಹಿಡಿದುಕೊಂಡು ಎಂದಿಗಿಂತ ಹೆಚ್ಚು ಮಂಕಾಗಿ ಕುಳಿತಿದ್ದಳು.

ಪ್ರತಿಭಾ ಮನೆ ಬಿಟ್ಟುಹೋಗಿದ್ದು, ಬಿಟ್ಟುಹೋದ ಮೇಲೆ ಏನಾಯಿತೆಂಬ ಯಾವ ನೆನಪೂ ಚಿತ್ರಳಿಗಿಲ್ಲ. ಅವಳಿಗೆ ನೆನಪಿರುವುದು ಮನೆ ಮನಸ್ಸು ತುಂಬಿದ್ದ ಮೌನ, ಮೌನ ಮತ್ತು ಮೌನ. ಮೊದಲೇ ಮುಂಬೈ ಮಹಾನಗರ. ಅವರವರ ತಾಪತ್ರಯವೇ ಅವರವರಿಗೆ. ಚಿತ್ರಳನ್ನು ಅಜ್ಜಿ ಮೂರು ವರ್ಷ ಹಾಗೂ ಹೀಗೂ ನೋಡಿಕೊಂಡರು. ಸದಾ ಕಣ್ಣೊರೆಸಿಕೊಳ್ಳುತ್ತ ಕೆಲಸ ಮಾಡುತ್ತಲೇ ಇರುತ್ತಿದ್ದ ಅಜ್ಜಿ, ಶೂನ್ಯವನ್ನೇ ದಿಟ್ಟಿಸುತ್ತಿರುತ್ತಿದ್ದ ಅಪ್ಪ ಇವರ ಜತೆ ಮಾತು ತುಟ್ಟಿಯಾಗಿದ್ದ ಮನೆಯಲ್ಲಿ ಐದು ವರ್ಷವಾಗುವವರೆಗೆ ಬೆಳೆದ ಅವಳಿಗೆ ಮಾತಾಡಲು ಬಂದಿದ್ದೇ ಒಂದು ಸೋಜಿಗ. ಕಿವಿ ಕೇಳದ ಚಿತ್ರಳ ಅಪ್ಪ ರಸ್ತೆ ಅಪಘಾತವೊಂದರಲ್ಲಿ ತೀರಿಕೊಂಡದ್ದೇ ತಡ, ಅಜ್ಜಿ ಹಾಸಿಗೆ ಹಿಡಿದವರು ಮತ್ತೆ ಮೇಲೇಳಲಿಲ್ಲ. ಯಾರೋ ದೂರದ ಸಂಬಂಧಿಕರು ಬಂದು ಐದು ವರ್ಷದ ಹುಡುಗಿಯನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮನೆಯಲ್ಲಿ ಒಂಟಿಯಾಗಿದ್ದ ಚಿತ್ರಲೇಖಾ ಒಮ್ಮೆಲೇ ಸಿಕ್ಕಿದ ನಲವತ್ತೂ ಚಿಲ್ಲರೆ ಮಕ್ಕಳ ಸಾಂಗತ್ಯದಿಂದ ಮತ್ತಷ್ಟು ಚಿಪ್ಪಿನೊಳಗೆ ಸೇರಿಕೊಂಡಳು. ನೀರೇ ಇಳಿಯದ ಗಂಟಲಲ್ಲಿ ಗಟ್ಟಿ ಚಕ್ಕುಲಿಯನ್ನು ಒಮ್ಮೆಲೇ ತುರುಕಿದಂತೆ ಚಡಪಡಿಸಿಹೋದಳು. ಅಮ್ಮನ ನೆನಪು ಇಲ್ಲದೇ ಹೋದರೂ, ತಂದೆಯ ಜತೆ ಅಂತಹ ಬಾಂಧವ್ಯ ಇರದಿದ್ದರೂ, ಅಜ್ಜಿಯ ನೆನಪು ಅವಳನ್ನು ಆಗಾಗ ಕಾಡುತ್ತಿರುತ್ತದೆ. ದಢೂತಿ ದೇಹದ ಅಜ್ಜಿ ಅಕ್ಕಿ, ಕುಂಬಳಕಾಯಿ, ಸಾಬೂದಾನಾ ಮುಂತಾದವುಗಳ ಸಂಡಿಗೆಗೆ ತಯಾರಿ ಮಾಡಿಕೊಂಡು ತಮ್ಮ ಮನೆಯೆದುರಿನ ಪುಟ್ಟ ಜಾಗದಲ್ಲಿ ಒಣಗಿಸಲು ಆಗದೇ ತುಸು ದೂರದಲ್ಲಿದ್ದ ಮನೆಯೊಂದರ ಟೆರೆಸ್ ಮೇಲೆ ಒಣಹಾಕಿ ಅವನ್ನು ಕಾಪಾಡಿಕೊಳ್ಳಲು ಪಡಬಾರದ ಪರಿಪಾಟಲು ಪಡುತ್ತಿದ್ದ ದೃಶ್ಯ ಸ್ಪಷ್ಟವಾಗಿಯೇ ಅವಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಮನೆಯವರು ಊರಲ್ಲಿ ಇಲ್ಲದಾಗ ಗೇಟಿಗೆ ಬೀಗ ಹಾಕಿರುತ್ತಿತ್ತು. ಅಂತಹ ಸಂದರ್ಭದಲ್ಲೊಮ್ಮೆ ಇನ್ನೊಬ್ಬರ ಮನೆಯ ಟೆರೆಸ್ ಮೇಲೆ ಹೋಗಲು ಅನುಮತಿ ಕೇಳಿ ಅವರು ಚೆನ್ನಾಗಿ ಬೈದು ಅಜ್ಜಿ ಮನೆಗೆ ಬಂದು ಕಣ್ಣೀರು ಹಾಕುತ್ತ ಗೋಳಾಡಿದ ನೆನಪೂ ಅವಳಿಗೆ ಮರೆತು ಹೋಗಿಲ್ಲ. ಹಗಲೆಲ್ಲ ಮೂಲೆ ಸೇರಿಕೊಂಡಿದ್ದು ಸಂಜೆಯಾದ ಕೂಡಲೇ ಕಾಡುವ ಒಂಟಿತನದ, ಅಸಹಾಯಕತೆಯ ಅನಾಥಭಾವವಲ್ಲ ಚಿತ್ರಲೇಖೆಯನ್ನು ಕಾಡುತ್ತಿರುವುದು. ಅದು ಪ್ರತಿ ಉಚ್ವಾಸ ನಿಚ್ವಾಸದಲ್ಲೂ ಬೆರೆತು ಹೋದ ತಾನೆಲ್ಲೂ ಸೇರದವಳು, ಎಲ್ಲಿಯೂ ನೆಲೆಯಿಲ್ಲದವಳೆಂಬ ಪರಕೀಯತೆಯ ಭಾವನೆ, ಕಬ್ಬಿನ ಹಾಲಿನೊಳಗಿನ ಸಿಹಿಯಂತೆ ಹಾಗಲಕಾಯಿಯ ಕಹಿಯಂತೆ ಬೇರ್ಪಡಿಸಲಾಗದೇ ಬೆರೆತು ಹೋದದ್ದು. ಈ ಬೆಸೆದುಹೋದ ಪರಕೀಯತೆಯೆಂಬ ಕಲ್ಪನೆಯೇ ಎಷ್ಟು ಪರಸ್ಪರ ವಿರುದ್ಧವಾದುದೆಂದು ಯೋಚಿಸಿ ಕ್ಷೀಣವಾಗಿ ಆಕೆ ತನ್ನಷ್ಟಕ್ಕೆ ತಾನು ನಗುವುದೂ ಉಂಟು. ತನ್ನ ಬಾಲ್ಯದ ನೆನಪಿನ ಕೌದಿಯ ಒಂದೇ ಒಂದು ಎಳೆಯಾದರೂ ಖುಶಿಯದ್ದು ಯಾಕಿಲ್ಲ ಎಂದು ಅವಳು ಆಗಾಗ ಕೇಳಿಕೊಳ್ಳುವುದಿದೆ. ಕೌದಿಯ ತುಂಬ ಸಂಕಟದ ಒದ್ದೆ ಎಳೆಗಳೇ ತುಂಬಿ ಹೋಗಿರುವುದರಿಂದ ಹಳೆಯ ನೆನಪುಗಳು ಅವಳನ್ನು ಎಂದೂ ಬೆಚ್ಚಗಾಗಿಸಿಲ್ಲ. ಪ್ರತಿಭಾ ಅದು ಹೇಗೆ ಗಟ್ಟಿ ಮನಸ್ಸು ಮಾಡಿ ತನ್ನನ್ನು ಬಿಟ್ಟು ಹೋದಳೆಂಬುದು ಅವಳಿಗೆ ಇಂದಿಗೂ ಅರ್ಥವಾಗದ ಸಂಗತಿ. ತಾಯಿಯ ಕುರಿತ ಉಕ್ತಿಗಳೆಲ್ಲ ಅದೆಷ್ಟು ಅತಿಶಯೋಕ್ತಿಯ ಮಾತುಗಳೆಂದು ಅನ್ನಿಸಿ ಬುಲ್‍ಶಿಟ್ ಎಂದುಕೊಳ್ಳುವಳು. ಹಾಗಾಗಿ ತಾಯಿಯ ಬಗ್ಗೆ ಯೋಚಿಸುವಾಗಲೆಲ್ಲ ಪ್ರತಿಭಾ ಎಂದೇ ಯೋಚಿಸುತ್ತಾಳೆಯೇ ಹೊರತು ಅಮ್ಮ ಎಂದು ಎಂದಿಗೂ ಮನಸಲ್ಲೂ ಹೇಳಿಕೊಂಡಿಲ್ಲ ಆಕೆ.

ಪ್ರತಿಭಾಳ ಅಕ್ಕನ ಮದುವೆಯಾಗಿ ಹದಿನೈದು ವರ್ಷವಾದರೂ ಮಕ್ಕಳಿಲ್ಲದೇ ದತ್ತು ತೆಗೆದುಕೊಳ್ಳಲು ಮಗುವನ್ನು ಹುಡುಕುತ್ತಿದ್ದಾಗ ಯಾರೋ ಈ ಹುಡುಗಿಯ ನೆನಪು ಮಾಡಿದರು. ಇವರು ಹೌದಲ್ಲ ಎಷ್ಟೆಂದರೂ ತಮ್ಮದೇ ರಕ್ತ, ಅಮ್ಮ ಮಾಡಿದ ಹಲ್ಕಾ ಕೆಲಸಕ್ಕೆ ಮಗಳೇನು ಮಾಡಿಯಾಳು ಎಂದು ಮಾತಾಡಿಕೊಂಡು ಹೋಗಿ ಹುಡುಕಿ ಅನಾಥಾಶ್ರಮದಲ್ಲಿದ್ದ ಚಿತ್ರಲೇಖೆಯನ್ನು ಅದು ಹೇಗೋ ಪತ್ತೆ ಮಾಡಿ ಅವಳ ಮುಲ್ಕಿ ಪರೀಕ್ಷೆ ಮುಗಿಯುವ ವೇಳೆಗೆ ಕರೆದುಕೊಂಡು ಬಂದರು. ಅಲ್ಲಿಗೆ ಅನಾಥಾಶ್ರಮದಲ್ಲಿ ಅವಳಿದ್ದುದು ಏಳು ವರ್ಷ. ಚಿತ್ರ ಹೂ ಅನ್ನಲಿಲ್ಲ, ಉಹೂ ಅನ್ನಲಿಲ್ಲ. ಕಾಡಿನ ನಡುವಿನ ಕಿರುದಾರಿ ಕರೆದುಕೊಂಡು ಹೋದತ್ತ ಹೋಗುವುದು ಬೇರೆ ದಾರಿಯೇ ಇಲ್ಲದವರ ಹಣೆಬರಹವೆಂದು ಅವಳು ನಿರ್ಧರಿಸಿಯಾಗಿತ್ತು. ಅನಾಥಾಶ್ರಮ ಬಿಟ್ಟು ಹೋಗಲು ಅವಳಿಗೆ ಬೇಜಾರೂ ಆಗಲಿಲ್ಲ, ಖುಶಿಯೂ ಆಗಲಿಲ್ಲ. ಏನೇ ಆದರೂ ದೊಡ್ಡಮ್ಮ ದೊಡ್ಡಪ್ಪನನ್ನು ಅಪ್ಪ ಅಮ್ಮ ಎಂದು ಕರೆಯಲು ಅವಳಿಗೆ ಆಗಲೇ ಇಲ್ಲ. ಬೆಂಗಳೂರಿನಲ್ಲಿ ಸಣ್ಣದೊಂದು ದರ್ಶಿನಿ ನಡೆಸುತ್ತಿದ್ದ ದೊಡ್ಡಪ್ಪ ದೊಡ್ಡಮ್ಮ ಅಂತಹ ಸ್ಥಿತಿವಂತರೇನೂ ಅಲ್ಲ. ಆದರೂ ಸಮಾಜದಲ್ಲಿ, ಮನೆಯೊಳಗೆ ತನ್ನ ಅಸ್ತಿತ್ವವೇ ಇಲ್ಲವೆಂಬಂತೆ ಮೌನಕ್ಕೆ ಆತುಕೊಂಡು ಬದುಕುತ್ತಿದ್ದ ಆಕೆಯನ್ನು ಬದಲಾಯಿಸಲು ಅವರು ತಮ್ಮಿಂದಾದ ಪ್ರಯತ್ನ ಪಟ್ಟರು. ಹಗಲು ಮುಗಿದರೂ ಮುಗಿಯದಂತಹ ಇರುಳು ಶುರುವಾದರೂ ತಿಳಿಯದಂತಹ ಒಂದು ಗೊಂದಲದ ಮುಸ್ಸಂಜೆಯಲ್ಲಿ ಹಚ್ಚಿಟ್ಟ ತುಯ್ದಾಡುವ ದೀಪದಂತಹ ಹುಡುಗಿಯಾಗಿದ್ದಳು ಚಿತ್ರಲೇಖೆ.

ಆದರೆ ಅದೆಷ್ಟೇ ಅಂತರ್ಮುಖಿಯಾದರೂ ಮೊದಲಿನಿಂದಲೂ ಅವಳು ಬುದ್ಧಿವಂತೆ. ತರಗತಿಯಲ್ಲಿ ಯಾವಾಗಲೂ ಮೊದಲ ಮೂರು ಸ್ಥಾನದಲ್ಲಿಯೇ ಇರುತ್ತಿದ್ದ ಯಾರೊಂದಿಗೂ ಬೆರೆಯದ ಚಿತ್ರಲೇಖಾ ಗೊತ್ತಿದ್ದವರಿಗೆ ಪಾಪದ ಹುಡುಗಿಯಾಗಿಯೂ ಒಂದು ಅಂತರದಿಂದ ನೋಡುವವರಿಗೆ ಅಹಂಕಾರಿಯಾಗಿಯೂ ಕಾಣುತ್ತಿದ್ದಳು. ಆದರೆ ಅವೆಲ್ಲ ಅವಳ ಹೊರಗಿನ ರೂಪಗಳು ಮಾತ್ರ ಆಗಿದ್ದವು. ಅವಳೊಳಗನ್ನು ಹೊಕ್ಕು ನೋಡುವ ಶಕ್ತಿ ಯಾರಿಗಾದರೂ ಇದ್ದಿದ್ದರೆ, ಎಷ್ಟು ಹತ್ತಿರ ತಂದರೂ ವಿರುದ್ಧ ದಿಕ್ಕಿಗೆ ಸೆಳೆಯಲ್ಪಡುವ ಆಯಸ್ಕಾಂತದ ಸಜಾತೀಯ ಧ್ರುವಗಳಂತೆ ಅವಳೊಳಗಿನ ಅವಳದೇ ವ್ಯಕ್ತಿತ್ವದ ಚೂರುಗಳು ಅವಳು ಅದೆಷ್ಟೇ ಪ್ರಯತ್ನ ಪಟ್ಟರೂ ಒಂದಾಗದೇ ಬೇರೆಬೇರೆಯಾಗಿಯೇ ಇರುವುದನ್ನು ನೋಡಬಹುದಿತ್ತು.

ಬೆಂಗಳೂರಿನಲ್ಲಿಯೇ ಹೈಸ್ಕೂಲು ಸೇರಿ ಸರಕಾರಿ ಕೋಟಾದಲ್ಲಿಯೇ ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಹಿಡಿದು ಮೂರು ವರ್ಷವಾಗಿದೆ. ಆದರೂ ಅವಳ ಎದೆಯ ತುಂಬ ಕಹಿ ನೆನಪುಗಳ ಜಾತ್ರೆಯೇ. ಜಾತ್ರೆ ಎಂದೇನೂ ಹೇಳುವಂತಿಲ್ಲ, ಏಕೆಂದರೆ ಜಾತ್ರೆಯಂತೆ ಗಮ್ಮತ್ತಿನ ಕ್ಷಣಗಳು ಅವಳ ನೆನಪುಗಳಲ್ಲಿ ಇಲ್ಲ. ನೆನಪುಗಳ ಶವಯಾತ್ರೆ ಎಂದು ಕರೆದರೆ ಸರಿಯಾದೀತೇನೋ. ಸ್ನೇಹಿತರಾರೂ ಇಲ್ಲದ ಚಿತ್ರಲೇಖಾ ತನ್ನ ಅಂತರಂಗವನ್ನು ಎಂದೂ ಎಲ್ಲೂ ತೋಡಿಕೊಳ್ಳದ ಕಾರಣಕ್ಕೆ ಯಾವಾಗಲೂ ಭಾರವಾದ ಕಲ್ಲೊಂದನ್ನು ಹೊತ್ತುಕೊಂಡಂತೆ, ದೂರದ ಮ್ಯಾರಾಥಾನ್ ಮುಗಿಸಿ ಬಂದು ಸುಸ್ತಾದ ಹೊಸ ಓಟಗಾರ್ತಿಂತೆ ಇರುತ್ತಿದ್ದಳು.
ತಾನು ಶೇರ್ ಮಾಡಿದ ಸ್ಕ್ರೀನ್‍ಶಾಟ್‍ಗೆ ‘ಹೌ ಶೇಮ್‍ಲೆಸ್’ ಎಂದು ದೊಡ್ಡ ಮಾವನ ಎರಡನೇ ಮಗ ಹಾಕಿದ ಮೆಸೇಜಿಗೆ ಇಪ್ಪತ್ಮೂರು ಲೈಕ್ ಬಿದ್ದದ್ದನ್ನು ಮತ್ತು ಚಿಗುರು ಮೀಸೆಯೂ ಮೂಡದ ಕಸಿನ್‍ಗಳು ‘ಶೇಮ್ ಆನ್ ಹರ್’ ಎಂಬ ಮೆಸೆಜುಗಳನ್ನು ಎಗ್ಗಿಲ್ಲದೇ ಹಾಕುತ್ತಿರುವುದನ್ನು ನೋಡಿದ ಚಿತ್ರಾಳಿಗೆ ತಾನು ಸ್ಕ್ರೀನ್ ಶಾಟ್ ಹಾಕಿ ಸರಿಯಾದ ಕೆಲಸ ಮಾಡಿದೆನಾ ತಪ್ಪು ಮಾಡಿದೆನಾ ಎಂಬ ಗೊಂದಲ ಕಾಡತೊಡಗಿತು. ದೊಡ್ಡಪ್ಪ ದೊಡ್ಡಮ್ಮನಿಗೆ ಬೇಜಾರಾಗಬಹುದೆಂಬ ಕಾರಣಕ್ಕೆ ಅವಳು ಇನ್ನೂ ‘ಹೋಂ ಅವರ್ ಕೋಸಿ ನೆಸ್ಟ್’ ಎಂಬ ಹೆಸರಿನ ಆ ಫ್ಯಾಮಿಲಿ ವಾಟ್ಸಾಪ್ ಗುಂಪಿನಲ್ಲಿ ಇದ್ದಾಳೆ ಅಷ್ಟೇ. ಸ್ವಂತ ಮಕ್ಕಳಿದ್ದಿದ್ದರೆ ತನ್ನನ್ನೀಗ ಸಾಕಿದ ದೊಡ್ಡಮ್ಮನಿಗೆ ತಾನೆಲ್ಲಿದ್ದೇನೆ ಎಂಬ ವಿಷಯ ಅಮುಖ್ಯವೇ ಆಗಿರುತ್ತಿತ್ತು ಎಂಬುದು ಚಿತ್ರಳಿಗೆ ಚೆನ್ನಾಗಿ ಗೊತ್ತು. ಯಾವ ಮಾವ ದೊಡ್ಡಮ್ಮ ಚಿಕ್ಕಮ್ಮನಿಗೂ ಕೂಡ ತನ್ನ ಮುಖ ನೋಡಬೇಕೆಂದು ಅನ್ನಿಸಿರಲಿಲ್ಲ ಎಂಬ ವಾಸ್ತವ ಅವಳನ್ನು ಘಾಸಿಗೊಳಿಸುವುದೂ ಈಗ ಹಳೆಯದಾಗಿ ಅವಳಿಗೆ ನೋವಾಗುವುದಿಲ್ಲ. ಹತ್ತಿರ ಹತ್ತಿರ ಮೂವತ್ತು ಜನರಿರುವ ಈ ವಾಟ್ಸಾಪ್ ಗುಂಪಿನಲ್ಲಿ ತಾನೊಬ್ಬಳು ಇಲ್ಲದಿದ್ದರೆ ಹರಿವ ತೊರೆಯಲ್ಲಿ ಒಂದು ತರಗೆಲೆ ಕಡಿಮೆಯಾದರೆ ಆಗುವ ವ್ಯತ್ಯಾಸವೇ ಆಗುತ್ತಿತ್ತೆಂಬುದು ಅವಳಿಗೆ ಗೊತ್ತಿದೆ. ಹರಿವ ನದಿಗೂ ಸಾಗರ ಸೇರುವ ನಂಬಿಕೆಯಿದೆ, ತರಗೆಲೆಗೂ ಮಣ್ಣಲ್ಲಿ ಮಣ್ಣಾಗುವುದು ಗೊತ್ತಿದೆ ಅದೇ ರೀತಿ ತಾನು ಯಾರ ಮನಸ್ಸಿನಲ್ಲೂ ಇಲ್ಲ ಎಂಬ ಸತ್ಯವೂ ಅವಳಿಗೆ ತಿಳಿದಿದೆ. ‘ಕಿವುಡ ಮೂಕನಿಗೆ ತನ್ನನ್ನು ಕಟ್ಟಿದ್ದೀರಿ ತಾನು ಇಲ್ಲಿರುವುದಿಲ್ಲ ಕರೆದುಕೊಂಡು ಹೋಗಿ’ ಎಂದು ಪ್ರತಿಭಾ ಬರೆದ ಪತ್ರ ಓದಿ ತಾನೆಷ್ಟು ಅತ್ತು ಕರೆದರೂ ಗಂಡ, ಗಂಡುಮಕ್ಕಳು ಕ್ಯಾರೇ ಎನ್ನದೇ ಕವಡೆ ಕಿಮ್ಮತ್ತು ಕೊಡದೇ ಇದ್ದುದನ್ನೂ ಅಜ್ಜಿ ಒಮ್ಮೆ ಅಳುತ್ತ ಚಿತ್ರಾಳಿಗೆ ಹೇಳಿದ ಮೇಲಂತೂ ಯಾರಲ್ಲೂ ಅವಳಿಗೆ ವಾತ್ಸಲ್ಯ ಮೊಳೆಯಲಿಲ್ಲ.

ಆದರೆ ಈಗ ಈ ಕ್ಷಣ ತನ್ನ ಸ್ಕ್ರೀನ್‍ಶಾಟಿಗೆ ಇದ್ದಬಿದ್ದವರ ಪ್ರತಿಕ್ರಿಯೆ ನೋಡಿದ ಮೇಲೆ ತನ್ನ ಬದುಕಿನ ವೃತ್ತದ ಪರಿಧಿ, ವ್ಯಾಸ ಎಲ್ಲವೂ ತಾನೇ ಆಗಿದ್ದ ಚಿತ್ರಾ, ಈಗ ತಾನಿರುವುದಕ್ಕಿಂತ ಕಿರಿಯಳಾಗಿದ್ದ ಪ್ರತಿಭಾ ಎಂಬ ಅಸಹಾಯಕ ಹುಡುಗಿಯ ಬಗ್ಗೆ ಒಂದು ಕ್ಷಣ ಕರುಣೆಯಿಂದ ಯೋಚಿಸತೊಡಗಿದಳು. ಇಪ್ಪತ್ತು ವರ್ಷ ಜತೆ ಇದ್ದವರು ತಿಳಿಸಾರಿನಲ್ಲಿನ ಬೇವಿನೆಲೆಯನ್ನು ತೆಗೆದು ಬಿಸಾಕಿದಂತೆ ಮರೆತುಬಿಟ್ಟಾಗ ಅವಳಾದರೂ ಏನು ಮಾಡಬಹುದಿತ್ತು? ಅದೇನೇ ಇದ್ದರೂ ತನ್ನನ್ನು ಎತ್ತಿಕೊಂಡು ಹೋಗಲಿಲ್ಲ, ಹೋದವಳು ಮತ್ತೆ ಬರಲಿಲ್ಲ ಎಂಬುದು ನೆನಪಾಗಿ ಮತ್ತೆ ಮನಸ್ಸು ಬಿಗಿದುಕೊಳ್ಳಲಾರಂಭಿಸಿದರೂ ಈಗ ಬಂದಿದ್ದಾಳಲ್ಲ ಎಂದು ಅದೇ ಮನಸ್ಸು ಗಂಟುಗಳನ್ನು ಸಡಿಲಗೊಳಿಸತೊಡಗಿತು. ಆಘಾತದಿಂದ ಗೋಳಾಡಿ ಫೋನ್ ಮಾಡಿ ಪತ್ರ ಬರೆದು ತವರಿಂದ ಬರುವ ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಹುಡುಗಿಯ ನೆನಪಾಗಿ ಕರುಳು ಹಿಂಡಿದಂತಾಗಿ ನಡುಗುವ ಕೈಗಳಿಂದ ಮೆಸೆಂಜರ್ ತೆರೆದು ಲ್ಯಾಪ್‍ಟಾಪಿನ ಎ ಅಕ್ಷರದ ಮೇಲೆ ಎಡಗೈನ ಕಿರುಬೆರಳಿಟ್ಟಳು ಚಿತ್ರಲೇಖಾ. ತಕ್ಷಣ ಅರೆ ಎಂದು ಅಚ್ಚರಿಪಟ್ಟು ಉದ್ವೇಗದಿಂದ ಮೆಲ್ಲನೆ ಕಂಪಿಸಿದಳು. ಒಂದು ಕ್ಷಣ ಎದೆ ಬೆಚ್ಚಗಾಗಿ ಎಂದೂ ದಕ್ಕದ ಹೊಸ ಅನುಭವಕ್ಕೆ ತಾನೇ ಬೆರಗಾದಳು. ಮುಂದಿನ ಅಕ್ಷರ ಒತ್ತುವ ಮುನ್ನ ಮತ್ತೇನೋ ಯೋಚಿಸಿ ವಾಟ್ಸಾಪ್ ತೆರೆದು ತಾನು ಗುಂಪಲ್ಲಿ ಹಂಚಿದ್ದ ಸ್ಕ್ರೀನ್‍ಶಾಟ್ ಅನ್ನು ಸೆಲೆಕ್ಟ್ ಮಾಡಿ ಡಿಲೀಟ್ ಫಾರ್ ಎವ್ರಿಒನ್ ಒತ್ತಿಬಿಟ್ಟಳು.

                                                                                                                                                                      
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ.

VISTARANEWS.COM


on

valmiki dhavala dharini column
Koo

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

sage and poet valmiki

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

king dasharatha

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಹೊಸ ಪುಸ್ತಕ: ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲ. ಈ ಕೃತಿಯ ಪರಿಚಯ ಹಾಗೂ ಆಯ್ದ ಭಾಗ ಇಲ್ಲಿದೆ.

VISTARANEWS.COM


on

sunday read new book ramanenu devane
Koo

:: ಡಾ. ಕೆ.ಎಸ್‌. ಕಣ್ಣನ್‌

ಹೊಸ ಪುಸ್ತಕ: “ರಾಮನು (Sri Rama) ಮನುಷ್ಯನೋ ದೇವನೋ?” – ಎಂಬ ಪ್ರಶ್ನೆಗೆ ಉತ್ತರ ಕೊಡುವ ಕೃತಿ: “ರಾಮನೇನು ದೇವನೇ?” ತಾನು ಮನುಷ್ಯನೆಂದು ರಾಮನೇ ಹೇಳಿಕೊಂಡಿರುವುದುಂಟು; ರಾಮಾಯಣದ ಆರಂಭದಲ್ಲೂ, ನಾರದರನ್ನು ವಾಲ್ಮೀಕಿಗಳು ಕೇಳುವುದೂ ನಾನಾ ಗುಣಸಂಪನ್ನನಾದ ನರನ ಬಗ್ಗೆಯೇ; ಆಗ ನಾರದರು ಹೇಳುವುದೂ ಅಂತಹೊಬ್ಬ ಮನುಷ್ಯನ ಬಗ್ಗೆಯೇ.

ಆದರೂ, ನಮ್ಮ ಪರಂಪರೆಯಂತೂ ಸಾವಿರಾರು ವರ್ಷಗಳಿಂದ ರಾಮನನ್ನು ದೇವರೆಂದೇ ಪೂಜಿಸಿಕೊಂಡು ಬಂದಿದೆ. ಆತನ ಸುಗುಣ-ಸುರೂಪಗಳನ್ನೂ ಜೀವಿತ-ಸಂದೇಶಗಳನ್ನೂ ಸ್ಮರಿಸಿ ರೂಪಿಸಿ ಹಾಡಿ ಕೊಂಡಾಡಿ ವಿರಚಿತವಾದ ಕಾವ್ಯ-ನಾಟಕಗಳೆಷ್ಟು, ಚಿತ್ರ-ಶಿಲ್ಪಗಳೆಷ್ಟು, ಮಂದಿರ-ದೇವಾಲಯಗಳೆಷ್ಟು – ಲೆಕ್ಕವಿಡುವವರಾರು! “ಇಂತಹ ಭಾಷೆಯಲ್ಲಿ ಶ್ರೀರಾಮಚಂದ್ರನನ್ನು ಕುರಿತಾದ ಸ್ತುತಿಯಿಲ್ಲ”- ಎನ್ನಲಾಗುವ ಒಂದೇ ಒಂದು ಭಾರತೀಯಭಾಷೆಯಾದರೂ ಉಂಟೆ? ಹೀಗಿದ್ದರೂ, ಕೆಲ ಸಂಪ್ರದಾಯಸ್ಥರಿಗೂ ಒಮ್ಮೊಮ್ಮೆ ಸಂಶಯಗಳು ಮೂಡಿರುವುದುಂಟು. ಪಾಶ್ಚಾತ್ಯವಿಮರ್ಶಕರಂತೂ, “ರಾಮನನ್ನು ದೇವನೆಂದಿರುವ ಭಾಗಗಳೆಲ್ಲಾ ಪ್ರಕ್ಷಿಪ್ತವೇ ಆಗಿರಬೇಕು (ಎಂದರೆ, ಆಮೇಲೇ ಸೇರಿಸಿರುವಂತಹವಾಗಿರಬೇಕು)” – ಎಂಬುದಾಗಿಯೇ ತಮ್ಮ ತರ್ಕವನ್ನು ಆರಂಭಿಸುತ್ತಾರೆ. ಅಸೂಯಾಪ್ರೇರಿತವಾದ ದುರ್ಮದದಿಂದ, ಇತರಸಂಸ್ಕೃತಿಗಳನ್ನು ಹೀನಾಯಮಾಡುವ ಅವರ ಸಹಜಪ್ರವೃತ್ತಿಗಂತೂ ಸಾಕಷ್ಟೇ ನಿದರ್ಶನಗಳಿವೆ..

ಹಾಗಾದರೆ ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲವೆನ್ನಬಹುದು! ಈ ಕೃತಿಯನ್ನು ರಚಿಸಿದ ಪ್ರೊ. ಕೆ. ಎಸ್. ಕಣ್ಣನ್ ಅವರು ರಾಮಾಯಣದ ಎಲ್ಲ ಮುಖ್ಯಪ್ರಸಂಗಗಳನ್ನೂ ಕ್ರಮಬದ್ಧವಾಗಿ ಪರಿಶೀಲಿಸಿ ಇಲ್ಲಿ ವಿವರಿಸಿದ್ದಾರೆ. ವಾಲ್ಮೀಕಿರಾಮಾಯಣದ ಮೂಲವಾಕ್ಯಗಳನ್ನು ಅವಶ್ಯವಿರುವೆಡೆಯಲ್ಲೆಲ್ಲಾ ಇದಕ್ಕಾಗಿ ಉದ್ಧರಿಸಿದ್ದಾರೆ; ಸಾಮಾನ್ಯರಿಗೂ ಅರ್ಥವು ಸ್ಫುಟವಾಗಲೆಂದು ಅವುಗಳೆಲ್ಲದರ ಅನುವಾದ-ವಿವರಣೆಗಳನ್ನೂ ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ. ರಾಮಾಯಣದಿಂದ ಮಾತ್ರವಲ್ಲದೆ, ಇತರ ಹಲವು ಪ್ರಸಿದ್ಧಗ್ರಂಥಗಳಿಂದಲೂ ಸೇರಿದಂತೆ, ಸುಮಾರು 400ಕ್ಕೂ ಮೀರಿದ ಉದ್ಧೃತಿಗಳು ಈ ಕೃತಿಯಲ್ಲಿವೆ! ಅಷ್ಟೇ ಅಲ್ಲ, ಉಲ್ಲೇಖಗೊಂಡ ಸಮಸ್ತವಾಕ್ಯಗಳಿಗೂ ಆಕರ-ಅಧ್ಯಾಯ-ಶ್ಲೋಕಸಂಖ್ಯೆಗಳನ್ನು ಬಿಡದೇ ಸೂಚಿಸಲಾಗಿದೆ.

ಈ ಕೃತಿಯ ಲೇಖಕರಾದ ಪ್ರೊ. ಕೆ. ಎಸ್. ಕಣ್ಣನ್ ಅವರು ಮದ್ರಾಸಿನಲ್ಲಿಯ ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈಚೆಗಷ್ಟೆ ನಿವೃತ್ತರಾಗಿರುವವರು. ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಇವರು ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಈ ಕೃತಿಯ ಆಯ್ದ ಭಾಗ ಇಲ್ಲಿದೆ:

“ರಾಮಾಯಣಾಖ್ಯಂ ಮಧು”

ಸೀತೆಯ ಚರಿತ – ರಾಮನ ಅಯನ

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ, ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ಅಯನವೆಂದರೆ ಮಾರ್ಗ, ರಾಮನ ಅಯನವೇ ರಾಮಾಯಣ. ಸಂಧಿನಿಯಮದಿಂದಾಗಿ ʼಅಯನ’ದಲ್ಲಿಯ ʼನ’ಕಾರವು ʼಣ’ಕಾರವಾಗಿದೆ. ಅಯನವೆಂದರೆ ಮಾರ್ಗ, ಹೋಗುವಿಕೆ (ʼಅಯ ಗತʼ ಎಂದು ಧಾತು). ಅಷ್ಟನ್ನು ಮಾತ್ರ ಹೇಳುವುದು ರಾಮಾಯನ ಎನಿಸಿಕೊಳ್ಳುತ್ತದೆ. ಈ ರಾಮಾಯನವನ್ನು ಕುರಿತಾದ ಕಾವ್ಯ ಎನ್ನುವಲ್ಲಿ, ಆ ಕಾವ್ಯದ ಹೆಸರಾಗಿ ಬಂದಾಗ ನಕಾರವು ಣಕಾರವಾಗುತ್ತದೆ.

ರಾಮಾಯನವನ್ನು ಹೇಳುವ ಕಾವ್ಯದ ಹೆಸರು ರಾಮಾಯಣ. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿಯಿದು. ರಾಮನು ಹೋದ ದಾರಿಯು ನಮಗೆ ಆದರ್ಶ. ರಾವಣನು ಹಾಕಿದ ಹೆಜ್ಜೆ ಆದರ್ಶವಲ್ಲ. ಈ ಭಾವವನ್ನು ತಿಳಿಸುವ ಗಾದೆ ಮಾತೊಂದು ಸಂಸ್ಕೃತದಲ್ಲಿದೆ: “ರಾಮನ ಹಾಗೆ ವರ್ತಿಸಬೇಕು. ರಾವಣನ ಹಾಗಲ್ಲ”.

ಪ್ರಪಂಚದಲ್ಲಿ ರಾಮನೊಬ್ಬನೇ ಒಳ್ಳೆಯವ ಎಂದೇನೂ ಇಲ್ಲವಲ್ಲ? ರಾವಣನೊಬ್ಬನೇ ಕೆಟ್ಟವ ಎಂದು ಕೂಡ ಅಲ್ಲವಲ್ಲವೇ? ಎಂದೇ, ʼರಾಮ’ನಿಗೊಂದು ʼಆದಿ’, ʼರಾವಣ’ನಿಗೊಂದು ʼಆದಿ’ ಸೇರಿಸಿದರು. ʼಆದಿ’ ಎಂದರೆ ʼಮೊದಲಾದʼ. ಅಲ್ಲಿಗೆ ಗಾದೆಯ ಪೂರ್ಣರೂಪ “ರಾಮ ಮೊದಲಾದವರ ಹಾಗೆ ಇರತಕ್ಕದ್ದು, ರಾವಣ ಮೊದಲಾದವರಂತೆ ಇರತಕ್ಕದ್ದಲ್ಲ”. ಗಾದೆ ಹೀಗೆ: ʼರಾಮಾssದಿವದ್ ವರ್ತಿತವ್ಯಂ, ನ ರಾವಣಾssದಿವತ್ʼ.

ರಾವಣನು ಪುಲಸ್ತ್ಯ ವಂಶದವನು. ಎಂದೇ ರಾವಣನು ʼಪೌಲಸ್ತ್ಯʼನೆನಿಸುವನು. ರಜೋಗುಣಭರಿತನಾಗಿದ್ದು ಧರ್ಮವನ್ನೂ ಅಮರರನ್ನೂ ಲೆಕ್ಕಿಸೆನೆನ್ನುವ ಆ ಅಹಂಕಾರಿಯ ಮಾರಣವೇ ಈ ಕಾವ್ಯ ಎಂದೇ ವಾಲ್ಮೀಕಿಗಳು ರಾಮಾಯಣವನ್ನು “ಪೌಲಸ್ತ್ಯವಧ” ಎಂದೂ ಕರೆದಿದ್ದಾರೆ. ರಾಮನು ಒಳ್ಳೆಯವನಿರಬಹುದು, ಸೀತೆಯು ಒಳ್ಳೆಯವಳಲ್ಲವೆ? ವಾಲ್ಮೀಕಿ ಮಹರ್ಷಿಯು ಗಂಡಸಾದ್ದರಿಂದ ಗಂಡಸಾದ ರಾಮನನ್ನೇ ಹೊಗಳಿದ್ದಾನೋ ಏನೋ? ಎಂದು ಸಂಶಯಪಡಬೇಕಿಲ್ಲ. ವಾಲ್ಮೀಕಿಗಳೇ ಹೇಳುವಂತೆ “ಸೀತಾಯಾಃ ಚರಿತಂ ಮಹತ್”: ಸೀತೆಯ ನಡೆಯೂ ರಾಮನದಷ್ಟೇ ಹಿರಿದಾದುದೇ.

ರಾಮನ ಹೆಸರೇ ಮಧುರವಾದದ್ದು.
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋsಭ್ಯಭಾಷತ | (1.21.9)
ಋಷಯೋ ರಾಮ ರಾಮೇತಿ ಮಧುರಾಂ ವಾಚಮ್ ಅಬ್ರುವನ್ (1.73.21)

ಸೀತೆಯ ಹೆಸರೂ ಮಧುರವೇ.
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುಧ್ಯತೇ । (5.34.42)

ರಾಮನು ಇಳಿದು ಬಂದವನೇ? ಮೇಲಕ್ಕೆ ಏರಿದವನೇ? ಸಂಶಯವೂ ಬರುವುದುಂಟು. ರಾಮನನ್ನು ನಾವು ಆದರಿಸುತ್ತೇವೆ, ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನನ್ನು ದೇವರೆಂದೇ ಭಾವಿಸುತ್ತೇವೆ. ಆದರೆ, ಒಮ್ಮೊಮ್ಮೆ ಕೆಲವರಿಗೆ ಸ್ವಲ್ಪ ಸಂಶಯವೂ ಬರುವುದುಂಟು. ರಾಮನು ವಾಸ್ತವವಾಗಿ ದೇವನೇ? ಎಂದು. ಏಕೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೇ? ಮರೆಯಲ್ಲಿ ನಿಂತಲ್ಲವೇ ರಾಮನು ವಾಲಿಯನ್ನು ಕೊಂದದ್ದು? ಅದೇನು ದೊಡ್ಡ ಗುಣವೇ? ತನಗೆ ಯಾವ ದ್ರೋಹವನ್ನೂ ಮಾಡದಿದ್ದ ಸೀತೆಯನ್ನು, “ಅಘೋರಚಕ್ಷುಷ್ಕಳೂ ಅಪತಿಘ್ನಿಯೂ’ ಆದ ಕೈಹಿಡಿದ ಮಡದಿಯನ್ನು – ರಾಮನು ಪರಿತ್ಯಾಗ ಮಾಡಲಿಲ್ಲವೇ? ಅದರಲ್ಲಿ ದೋಷವಿಲ್ಲವೇ? ಎಂದು ʼಕೇಳುವವರುಂಟು’ ಎನ್ನುವುದಕ್ಕಿಂತ, ನಮಗೇ ಕೆಲವೊಮ್ಮೆ ಹಾಗೆನ್ನಿಸಲೂಬಹುದು.

ಕೃತಿ: ರಾಮನೇನು ದೇವನೇ?
ಪ್ರಕಾಶಕರು: ಶ್ರೀ ಭಾರತೀ ಪ್ರಕಾಶನ, ಬೆಂಗಳೂರು
ಪುಟ: 200, ಬೆಲೆ: ರೂ. 200.
ಪ್ರತಿಗಳಿಗೆ: 95915 42454

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

ಧವಳ ಧಾರಿಣಿ ಅಂಕಣ: ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

VISTARANEWS.COM


on

manthare ramayana dhavala dharini
Koo

ಮೋಹಪಾಶದ ಅಧಿಕಾರ ಯಾವತ್ತಿಗೂ ಸ್ಥಿರವಲ್ಲ

dhavala dharini by Narayana yaji

ಧವಳ ಧಾರಿಣಿ ಅಂಕಣ: ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠನ್ತಿ ಭಾಮಿನಿ
ಸ್ಥಾಪ್ಯಮಾನೇತು ಸರ್ವೇಷು ಸುಮಹಾನನಯೋ ಭವೇತ್ ৷৷ರಾ. ಅ.8.23৷৷

ಪ್ರಿಯ ಹೆಣ್ಣೇ, ರಾಜನ ಮಕ್ಕಳೆಲ್ಲರಿಗೂ ರಾಜ್ಯದಲ್ಲಿ ಬಾಧ್ಯತೆಯಿರುವುದಿಲ್ಲ. ಹಾಗೇ ಹುಟ್ಟಿದ ಮಕ್ಕಳೆಲ್ಲರಿಗೂ ಪಟ್ಟವನ್ನು ಗಟ್ಟಿದಲ್ಲಿ ಅದು ಸಂಪ್ರದಾಯಕ್ಕೂ ರಾಜನೀತಿಗೂ ವಿರುದ್ಧವಾಗುತ್ತದೆ. ಈರ್ಷ್ಯಾಸೂಯೆಗಳುಂಟಾಗಿ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ.

ಮಂಥರೆಯ ಈ ಮಾತು ರಾಜತ್ವವೆನ್ನುವುದು ಪಿತ್ರಾರ್ಜಿತವಾದ ಸಂಪತ್ತಲ್ಲ. ಅದನ್ನು ಮಕ್ಕಳಿಗೆಲ್ಲ ಸಮನಾಗಿ ಹಂಚುವ ವ್ಯವಹಾರವೂ ಅಲ್ಲ, ಅದು ಅರ್ಹರಿಗೆ ಮಾತ್ರ ಸಲ್ಲಬೇಕಾಗುತ್ತದೆ ಎನ್ನುವ ವೇದವಾಣಿಯನ್ನು ದೃಢೀಕರಿಸುತ್ತದೆ. ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

ವಾಲ್ಮೀಕಿಯ ಕಾವ್ಯದಲ್ಲಿ ಈಕೆಯ ಪೂರ್ವಾಪರಗಳ ಕುರಿತು ವಿವರಗಳೇನೂ ಸಿಗುವುದಿಲ್ಲ. ಈಕೆಯ ಪ್ರವೇಶದ ಹೊತ್ತಿಗೆ ಈಕೆಯ ಹೆಸರನ್ನು ವಾಲ್ಮೀಕಿ ಹೇಳುವುದಿಲ್ಲ. “ಜ್ಞಾತಿದಾಸಿ ಯತೋ ಜಾತಾ ಕೈಕೇಯ್ಯಾಸ್ತು ಸಹೋಷಿತಾ” (ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಕೈಕೇಯಿಯ ಜನನ ಕಾಲದಿಂದಲೇ ಅವಳೊಡನೆ ಇರುವ ಕುಟುಂಬದ ಆಳು) ಎಂದು ಅವಳ ಕುರಿತು ಹೇಳುತ್ತಾನೆ. ಯಾವ ಪಾತ್ರವನ್ನೂ ವಾಲ್ಮೀಕಿ ಕೀಳಾಗಿ ನೋಡುವುದಿಲ್ಲ. ಆದರೆ ಮಂಥರೆಯ ಪಾತ್ರವನ್ನು ಆತ ಅಷ್ಟು ಇಷ್ಟಪಟ್ಟಿಲ್ಲ, ಅದಕ್ಕೆ ಕಾವ್ಯದ ಕ್ರಮದಂತೆ ಪಾತ್ರದ ಪ್ರವೇಶದಲ್ಲಿ ಆತ ಜ್ಞಾತಿದಾಸಿ ಯತೋ ಜಾತಾ, ಎಂದು ಹೇಳಿರುವುದು. ಅಯೋಧ್ಯೆಯ ಜನಪದವನ್ನು ವಿವರಿಸುವಾಗ ಅಲ್ಲಿನ ಜನರ ಸದ್ಗುಣಗಳ ಕುರಿತು ವಿವರವಾಗಿ ಹೇಳಿದ್ದಾನೆ. ಅಲ್ಲಿನ ನಾರಿಯರನ್ನು ವರನಾರಿಯರು ಎಂದು ವರ್ಣಿಸಿದ್ದಾನೆ. ಅಂತಹ ಕೋಸಲಸೀಮೆಯಲ್ಲಿ ಮಂಥರೆಯಂತವಳು ಇರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿಸುವುದು ಕವಿಯ ಉದ್ದೇಶ. ರಾಮನ ಪಟ್ಟಾಭಿಷೇಕವನ್ನು ಎಲ್ಲರೂ ಸಂಭ್ರಮಿಸುವಾಗ, ಲೋಕಪ್ರಿಯವಾದ ಪಟ್ಟಾಭಿಷೇಕವನ್ನು ಹಾಳು ಮಾಡುವವರು ಪುಣ್ಯಸ್ಥಳವಾದ ಅಯೋಧ್ಯೆಯಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲವೆನ್ನುವ ಅರ್ಥವನ್ನೂ ಮಾಡಬಹುದು.

ಎರಡನೆಯ ಶ್ಲೋಕದಲ್ಲಿ ಆಕೆಯ ಹೆಸರು ಮಂಥರೆ ಎಂದು ಹೇಳಿರುವುದು ಕಾವ್ಯದ ಮುಂದುವರಿಕೆಗೆ ಸಹಾಯವಾಗಲಿ ಎಂದು. ಈ ನಡೆ ಬಹುಶಃ ನಂತರ ರಾಮಾಯಣವನ್ನು ಬರೆದ ಕವಿಗಳಿಗೆ ಅಷ್ಟು ಇಷ್ಟವಾಗಿಲ್ಲ. ಪದ್ಮಪುರಾಣ ಈಕೆಯನ್ನು “ಮಂಥರಾನಾಮ ಕಾರ್ಯಾರ್ಥಮಪ್ಸರಾ ಪ್ರೇಷಿತಾ ಸುರೈಃ – ದೇವತೆಗಳು ರಾವಣವಧೆಯ ಕಾರ್ಯವನ್ನು ಸುಗಮಗೊಳಿಸುವ ಕಾರಣಕ್ಕೆ ಅಪ್ಸರೆಯೊಬ್ಬಳನ್ನು ಭೂಲೋಕಕ್ಕೆ ಕಳುಹಿಸಿದರು ಎಂದು ವಿವರಿಸಿದೆ. ಆನಂದ ರಾಮಾಯಣವೂ ಆಕೆಯನ್ನು ಶಾಪಗ್ರಸ್ತ ಅಪ್ಸರೆ ಎನ್ನುತ್ತದೆ. ಕೆಲವು ಕಥೆಗಳಲ್ಲಿ ಆಕೆ ಅಶ್ವಪತಿಗೆ ಅರಣ್ಯದಲ್ಲಿ ಸಿಕ್ಕ ಅನಾಥ ಮಗು ಎಂದು ತಿಳಿಸುತ್ತದೆ. ಆಕೆಯ ಶರೀರವನ್ನು ಅದಾಗಲೇ ಇರುವೆಗಳು ಮುತ್ತಿದ್ದವು, ಆ ಕಾರಣದಿಂದ ಆಕೆ ಕುಬ್ಜೆಯಾಗಿ ಉಳಿದಳು. ಕುವೆಂಪು “ರಾಮಾಯಣ ದರ್ಶನಂ”ದಲ್ಲಿ ಮಂಥರೆಯ ಕುರಿತು ಅಶ್ವಪತಿ ಮಹಾರಾಜ “ತಂದನೂರಿಗವಳಂ ದಾರಿಯಲಿ ನಡೆವ ಮಾರಿಯಂ ಮನೆಗೆ ತರುವಂತೆ” ಎಂದು ವರ್ಣಿಸುತ್ತಾರೆ.

ತಾಯಿಯಿಲ್ಲದ ಕೈಕೇಯಿಯನ್ನು ಆಕೆ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೈಕೆಯೂ ಬಾಲ್ಯದಲ್ಲಿ ತಾಯಿಯಿಲ್ಲದೇ ಬೆಳೆದವಳು. ಆಕೆಗೆ ತಾಯಿಯ ಪ್ರೇಮವನ್ನು ಕೊಟ್ಟವಳು ಮಂಥರೆ. ಲೋಕವೆಲ್ಲವೂ ಆಕೆಯನ್ನು ಅನಿಷ್ಠೆ, ಗೂಬೆ, ಕುಬ್ಜೆ ಎಂದು ತಿರಸ್ಕರಿಸುತ್ತಿದ್ದರೆ ಆಕೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡಳು ಕೈಕೆ. ಈ ಆಶ್ರಯವೆನ್ನುವುದು ಅವಳ ಬದುಕಿಗೆ “ಮಳೆಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ, ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ” (ರಾ.ದ. ಕುವೆಂಪು) ದಶರಥನೊಡನೆ ಕೈಕೇಯಿಯ ವಿವಾಹವಾದ ಮೇಲೆ ಅವಳ ಸಂಗಡವೇ ಅಯೋಧ್ಯೆಗೆ ಬಂದವಳು. ಕೈಕೇಯಿಯ ಅಂತರಂಗದ ಗುಟ್ಟುಗಳು ಈಕೆಗೆ ಗೊತ್ತಿತ್ತು. ಬಾಲ್ಯದಿಂದಲೂ ಮಂಥರೆ ಆಕೆಯ ಲಾಲನೆ ಪಾಲನೆ ಮಾಡಿರುವುದರಿಂದ ತಾಯಿಯಿಲ್ಲದವಳಿಗೆ ಈಕೆಯ ಮೇಲೆ ವಿಶೇಷ ಮಮತೆ ಮೂಡಿತ್ತು ಎನಿಸುತ್ತದೆ. ವೃದ್ಧಪತಿಯನ್ನು ಸದಾ ತನ್ನ ವಶದಲ್ಲಿ ಇರಿಸಿಕೊಳ್ಳಲು ಕೈಕೇಯಿಗೆ ಸಲಹೆ ನೀಡಿದವಳೇ ಮಂಥರೆ. ಕೌಸಲ್ಯೆಯನ್ನು ಕಂಡರೆ ಆಕೆಗೆ ಆಗುತ್ತಲೇ ಇರಲಿಲ್ಲ.

ವಾಲ್ಮೀಕಿ ರಾಮಾಯಣದ ನಂತರ ನನ್ನನ್ನು ಬಹುವಾಗಿ ಕಾಡಿದುದು ಕುವೆಂಪು ಅವರ “ರಾಮಾಯಣ ದರ್ಶನಂ”. ಇಲ್ಲಿ ಪಾತ್ರಗಳು ರಸದಲ್ಲಿ ಮುಳುಗೇಳುತ್ತವೆ. “ಮಮತೆಯ ಸುಳಿ ಮಂಥರೆ” ಎನ್ನುತ್ತಾ ಕೈಕೆಯ ಕುರಿತು, ವಿಶೇಷವಾಗಿ ಭರತನ ಮೇಲಿರುವ ಆಕೆಯ ಪ್ರೇಮವನ್ನು ಓದಿದ ಮೇಲೆ ಆಕೆಯನ್ನು ಬೈಯ್ಯುವ ಮನಸ್ಸು ಯಾರಿಗೂ ಬರಲಾರದು. ರಾಮಾಯಣದ ನಡೆಯೆಲ್ಲವೂ ವಿಧಿಯ ಹಸ್ತದ ಸೂತ್ರಗಳು, ಮಂಥರೆ ಈ ರಾಮಾಯಣವೆನ್ನುವ ಮೊಸರನ್ನು ಕಡೆದು ನವನೀತವನ್ನು ಕೊಡುವ ಕಡೆಗೋಲು ಎನ್ನುವ ಭಾವವನ್ನು ಕುವೆಂಪುವಿನಂತೆ ವರ್ಣಿಸಲು ಮತ್ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಬೆಣ್ಣೆ ಕಡೆದುಕೊಟ್ಟ ಕಡೆಗೋಲನ್ನು ತೊಳೆದು ಒಣಗಿಸುವ ಹಾಗೇ ಮಂಥರೆಯ ಬದುಕಾಯಿತು. ಹೀಗೆ ನಿಟ್ಟಿಸಿರು ಬಿಡುವಾಗ ಕುವೆಂಪು ರಾಮಯಾಣದ ವಿಶೇಷವನ್ನು ಬಣ್ಣಿಸುವುದು ಹೀಗೆ.

ನೆಯ್ದಾಳುತಿದೆ ಜಗವನೊಂದತಿ ವಿರಾಣ್ ಮನಂ,
ಸೂಕ್ಷ್ಮಾತ್ಮಿಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?
ಮಥಿಸಿದುದು ದಶಸಿರನ ವಿಧಿ ಮಂಥರೆಯ ಮನದಿ

king dasharatha

ರಾಮಾಯಣದ ಅಂತಿಮ ಗುರಿಯಾಗಿರುವ ರಾವಣ ವಧೆಯೆನ್ನುವ ಹಾರುಗೋಲಿಗೆ ಚಿಮ್ಮುಹಲಗೆಯಾಗುವವಳು ಮಂಥರೆ ಎನ್ನುವದನ್ನು ಮಾರ್ಮಿಕವಾಗಿ ವರ್ಣಿಸಲಾಗಿದೆ. ದಶರಥನ ಕನಸಿನ ವಿಹಾರವನ್ನು ಭಂಗಗೊಳಿಸಿದವಳು ಇವಳು.

ಅಶ್ವಪತಿ ಮಹಾರಾಜ ಮತ್ತು ಜನಕ ಮಹಾರಾಜನಿಗೆ ಹೇಳಿ ಕಳುಹಿಸುವಷ್ಟು ಸಮಯವಿಲ್ಲದಿದ್ದರೂ ಬೇರೆ ಎಲ್ಲರಿಗೂ ಹೇಳಿಕೆ ಕಳುಹಿಸಿ ಅವರು ಬಂದು ಬಿಡಾರವನ್ನು ಹೂಡಿಯಾಗಿತ್ತು! ಸುಮಾರು ಒಂbತ್ತರಿಂದ ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯ ರಕ್ಷಣೆಯನ್ನು ಹೊತ್ತ ರಾಮ ಸಹಜವಾಗಿಯೇ ಜನಮಾನಸದಲ್ಲಿ ತನ್ನ ಪ್ರಭಾವವನ್ನು ಬೀರಿದ್ದ. ಅಯೋಧ್ಯೆಯಲ್ಲಿ ಮಾರನೆಯ ದಿನವೇ ಶ್ರೀರಾಮನಿಗೆ ಪಟ್ಟಾಭಿಷೇಕವೆನ್ನುವ ವಿಷಯವನ್ನು ಕೇಳಿದೊಡನೆ ಪ್ರಜೆಗಳ ಸಂಭ್ರಮ ಮೇರೆ ಮೀರಿತ್ತು. ಪರ್ವಕಾಲದಲ್ಲಿ ಉಕ್ಕಿಬರುವ ಸಮುದ್ರರಾಜನ ನಿನಾದದಂತೆ ಮೂಲೆ ಮೂಲೆಗಳಿಂದ ತಂಡ ತಂಡವಾಗಿ ಪ್ರಜಾಸಮೂಹ ಅಯೋಧ್ಯೆಯತ್ತ ಆಗಮಿಸುತ್ತಿದ್ದವರ ಸಂಭ್ರಮ ನಗರಿಯ ತುಂಬೆಲ್ಲ ಕೇಳಿಬರುತ್ತಿತ್ತು. ಯಕ್ಷಗಾನದ ಪಾರ್ತಿಸುಬ್ಬ ರಾಮಾಭಿಷೇಕದ ಕಾಲದ ಅಯೋಧ್ಯೆಯ ಸಂಭ್ರಮವನ್ನು ವಾರ್ದಿಕ ಷಟ್ಪದಿಯಲ್ಲಿ ವರ್ಣಿಸುವುದು ಹೀಗೆ:

ಕುಶನೆ ಕೇಳಿಂತಯೋಧ್ಯಾಪುರದ ಸಂಭ್ರಮವ
ವಶವಲ್ಲ ಹೇಳಿ ತುದಿಗಾಣಿಸುವಡರಿದೆಮೆಗೆ
ಪಸರಿಸಿತು ಮಂದಿ ಕುದುರೆಗಳ ಸಂದಣಿಯಿಂದ ನಾನಾರವಂಗಳಿಂದ I
ವಸುಧೆ ಹಿಗ್ಗಿದಳು ಕೆಂಧೂಳೆದ್ದು ನಭಗಳಂ
ಮುಸುಕಿ ದಿಗ್ಗಜ ಬೆದರೆ ಕೂರ್ಮನೆದೆಗೆಟ್ಟ ಫಣಿ
ಕುಸಿದ ಸುರರಾಕಾಶದಲ್ಲಿ ಜಯಜಯವೆಂದು ದೇವದುಂದುಭಿ ಮೊಳಗಿತು II

ಪಾರ್ತಿಸುಬ್ಬನ ರಾಮಾಯಣವಾಗಲಿ ಇನ್ನಿತರ ಕವಿಗಳ ಯಕ್ಷಗಾನ ಪ್ರಸಂಗಗಳು ಯಕ್ಷಗಾನ ವಲಯದಿಂದ ಆಚೆಗೆ ವಿದ್ವಾಂಸರ ದೃಷ್ಟಿಗೆ ಬೀಳದೇ ಇರುವದು ಕನ್ನಡ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ.

ಹೀಗೆ ಅಯೋಧ್ಯೆಗೆ ಅಯೋಧ್ಯೆಯೇ ಸಂಭ್ರಮಿಸುತ್ತಿರುವಾಗ ಆಕಸ್ಮಿಕವಾಗಿ ಉಪ್ಪರಿಗೆಯನ್ನು ಹತ್ತಿದ ದಾಸಿಯೋರ್ವಳು ಇದೇನು ಸಂಭ್ರಮ ಎಂದು ಚಕಿತಳಾಗಿ ಇನ್ನೊಬ್ಬ ದಾಸಿಯ ಹತ್ತಿರ ಕೇಳಿದಳು ಎಂದು ವಾಲ್ಮೀಕಿ ಇವಳ ಪಾತ್ರದ ಪ್ರವೇಶ ಮಾಡಿಸುತ್ತಾನೆ. ರಾಮಪಟ್ಟಾಭಿಷೇಕದ ವಿಷಯ ಯಾವಾಗ ಕಿವಿಗೆ ಬಿತ್ತೋ ತಕ್ಷಣ ಮಂಥರೆಗೆ ಆಗಬಾರದ್ದು ಆಗಿಹೋಯಿತೆನ್ನುವ ಸಂಕಟವುಂಟಾಯಿತು. ಉರುಳುತ್ತಲೇ ಕೈಲಾಸಶಿಖರಾಕಾರದ ಪ್ರಾಸಾದದಿಂದ ಕೆಳಗಿಳಿದು ಬಂದು ಕೈಕೇಯಿಯ ಅರಮನೆಗೆ ಹೋದವಳೇ, ಅವಳನ್ನು ಕರ್ಕಶ ಧ್ವನಿಯಿಂದ ಕೂಗಿ “ಮೂರ್ಖಳೆ, ಎದ್ದೇಳು, ಇನ್ನೂ ಮಲಗಿರುವೆ ಯಾಕೆ” ಎನ್ನುತ್ತಾ ಆಕೆಯನ್ನು ಬೈಯುತ್ತಾ ಎಬ್ಬಿಸುತ್ತಾಳೆ. ಆಗ ತಾನೇ ರಾತ್ರಿ ಮುಸುಕಿದ ಸಮಯ, ಕೈಕೆ ನಿದ್ರೆ ಮಾಡುತ್ತಿದ್ದಳು. ಆಕೆಯನ್ನು ಎಬ್ಬಿಸುವಾಗ “ಭಯವು ನಿನ್ನನ್ನು ಸುತ್ತುವರಿದು ನಿಂತಿದೆ” ಎನ್ನುವ ಕಾವ್ಯಮಯ ಭಾಷೆ ಈ ಭಾಗದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದರ್ಥದಲ್ಲಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಪಡುತ್ತಾ ತಾನು ರಾಜನ ಮುದ್ದಿನ ಮಡದಿ ಎನ್ನುವ ಆತ್ಮವಿಶ್ವಾಸದಲ್ಲಿ ಕೈಕೆ ಬೇರೇನನ್ನೂ ಯೋಚಿಸಿಲ್ಲ ಎನ್ನುವದು ಸ್ಪಷ್ಟ.

ಅಶ್ವಪತಿ ಮಹಾರಾಜ ವೃದ್ಧನಾದ ದಶರಥನಿಗೆ ಕೈಕೆಯನ್ನು ಕೊಡುವಾಗ ಅವಳ ಮನೋಭಾವನೆಯನ್ನು ಕೇಳಲೇ ಇಲ್ಲ. ಹಾಗಂತ ಇವಳು ಆ ಕುರಿತು ಬೇಸರವನ್ನೇನೂ ಮಾಡಲೂ ಇಲ್ಲ. ಚಕ್ರವರ್ತಿಯ ಕೈಹಿಡಿದ ಆಕೆಗೆ ಏನೂ ತಿಳಿಯದ ಮುಗ್ಧಳೇನೂ ಆಗಿರಲಿಲ್ಲವೆನ್ನುವದಕ್ಕೆ ಅವಳು ಧಶರಥನ ಸಂಗಡ ಶಂಬರನೊಡನೆ ನಡೆದ ಯುದ್ಧದಲ್ಲಿ ಭಾಗವಹಿಸಿದ ಘಟನೆಯನ್ನು ನೆನಪಿಸಬಹುದು. ಅವಳನ್ನು ಭರತ “ಆತ್ಮ ಕಾಮಾ ಸದಾ ಚಂಡಿ” ಎನ್ನುವ ಮೂಲಕವಾಗಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಮತ್ತು ಹಟಸ್ವಭಾವದವಳು ಎನ್ನುವುದಾಗಿ ವರ್ಣಿಸುತ್ತಾನೆ. ಅಶ್ವಪತಿ ಮತ್ತು ದಶರಥನ ನಡುವೆ ರಾಜ್ಯದ ಉತ್ತರಾಧಿಕಾರಿಯಾಗಿ ಕೈಕೇಯಿಯ ಸಂತಾನಕ್ಕೆ ನೀಡುವ ವಿಷಯ ದಶರಥ, ಸುಮಂತ್ರ ಮತ್ತು ಅಶ್ವಪತಿಗೆ ಬಿಟ್ಟರೆ ಮತ್ತೆ ಯಾರಿಗೂ ತಿಳಿದಿಲ್ಲ. ಅರಸನಿಗೆ ತಾನು ಬೇಕಾದವಳು ಎನ್ನುವ ಜಂಬ ಸಹಜವಾಗಿ ಕೈಕೇಯಿಯಲ್ಲಿದ್ದ ಕಾರಣ ಆಕೆ ಇನ್ನಿತರ ರಾಣಿಯರ ಮತ್ತು ಅರಮನೆಯಲ್ಲಿ ಅಧಿಕಾರವನ್ನು ಚಲಾಯಿಸುತ್ತಿದ್ದಳು. ಆಕೆಯ ಗಿಣಿಗಳು ಕೌಸಲ್ಯೆಯ ದಾಸಿಯರೇನಾದರು ಬಂದರೆ ಅವರನ್ನು ಕಚ್ಚು ಎಂದು ಹೇಳುತ್ತಿದ್ದವಂತೆ. ಬಹುಶಃ ಇದು ಕೈಕೇಯಿ ಹೇಳಿಕೊಟ್ಟ ಪಾಠವಾಗಿರಲಿಕ್ಕಿಲ್ಲ. ಮಂಥರೆ ಕಲಿಸಿದ್ದಾಗಿರಬಹುದು. ಅಶ್ವಮೇಧ, ಪುತ್ರಕಾಮೇಷ್ಠಿ ಯಾಗಗಳಲ್ಲಿ ಪ್ರಧಾನಳಾಗಿ ಕೌಸಲ್ಯೆ ಕುಳಿತಾಗಲೂ ಕೈಕೆ ಅದಕ್ಕೆ ಪ್ರತಿರೋಧವನ್ನು ಹೇಳಲಿಲ್ಲವೆನ್ನುವುದು ಸ್ವಭಾವತಃ ಆಕೆಯಲ್ಲಿ ಸಂಶಯ ಸ್ವಭಾವವಿರಲಿಲ್ಲ ಎನ್ನುವುದನ್ನು ತಿಳಿಸುತ್ತದೆ.

king dasharatha

ಭರತನಿಗಿಂತಲೂ ರಾಮನನ್ನು ಹೆಚ್ಚಿಗೆ ಹಚ್ಚಿಕೊಂಡ ಕೈಕೇಯಿಗೆ ಮಂಥರೆ “ಅನಿಷ್ಟಳೇ, ರಾಜ ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತಿಲ್ಲ” ಮುಂತಾದ ಸಾವಿರ ಬಗೆಯಲ್ಲಿ ಚಾಡಿ ಹೇಳಿದರೂ ಆಕೆ ರಾಮನ ಪಟ್ಟಾಭಿಷೇಕದ ವಿಷಯವನ್ನು ಕೇಳಿ ಸಂತೋಷವನ್ನೇ ವ್ಯಕ್ತಪಡಿಸುತ್ತಾಳೆ. ಭರತ ಇಲ್ಲದಿದ್ದಾಗ ರಾಮನಿಗೆ ಪಟ್ಟಕಟ್ಟುವುದು ಒಂದು ಸಂಚು, ಮುಂದೆ ರಾಮ ಭರತನನ್ನು ಕೊಲ್ಲಿಸಬಹುದು ಎಂದಾಗಲೂ ಆಕೆಯ ಮನಸ್ಸನ್ನು ತಿರುಗಿಸಲಾಗಿಲ್ಲ. ರಾಜ್ಯ ಭರತನ ಸಂತತಿಗೂ ಸಿಗದ ಕಾರಣವನ್ನು ಇಲ್ಲಿ ಪ್ರಾರಂಭದಲ್ಲಿಯೇ ನೀಡಲಾಗಿದೆ. ಅದನ್ನು ಎತ್ತಿ ಹಿಡಿಯುತ್ತಾ ದಶರಥ ಭರತನಿಲ್ಲದ ವೇಳೆಯಲ್ಲಿ ರಾಮನಿಗೆ ಪಟ್ಟಾಭಿಷೇಕಕ್ಕೆ ಏರ್ಪಾಡು ಮಾಡಿರುವುದು ಒಂದು ಸಂಚು ಎನ್ನುವುದನ್ನು ಸಂದರ್ಭಕ್ಕನುಗುಣವಾಗಿ ಕಥೆಯನ್ನು ಕಟ್ಟಿ ಹೇಳಿದವಳೇ ಕೊನೆಯ ಅಸ್ತ್ರವಾಗಿ “ನೀನು ಕೌಸಲ್ಯೆಯ ದಾಸಿಯಾಗುವೆ, ಭರತನ ಪ್ರಾಣ ಈ ಎಲ್ಲಾ ಕಾರಣಗಳಿಂದ ಅಪಾಯದಲ್ಲಿದೆ” ಎನ್ನುವ ಮಾತುಗಳು ಆಕೆಯನ್ನು ತಿರುಗಿಸುತ್ತವೆ.

ಪ್ರಪಂಚದ ಎಲ್ಲಾ ಹೆಣ್ಣುಜೀವಿಗಳು ತನಗೆ ಬರುವ ಎಂತಹ ಕಷ್ಟಗಳನ್ನಾದರೂ ಸಹಿಸಿಕೊಳ್ಳುತ್ತವೆ. ಆದರೆ ತನ್ನ ಮಕ್ಕಳಿಗೆ ಅಪಾಯ ಬಂತೆಂದರೆ ಆಕೆ ಸಮಗ್ರ ಜಗತ್ತನ್ನೇ ಎದುರಿಸಲೂ ಹಿಂದೆಮುಂದೆ ನೋಡುವದಿಲ್ಲ. ಮಂಥರೆ ದುರ್ಬೋಧಿಸಿದಂತೆಲ್ಲ ಕೈಕೆ ಬದಲಾಗುವದು ಕ್ರಿಯೆಗೆ ಒಂದು ಸಹಜ ಪ್ರತಿಕ್ರಿಯೆಯಷ್ಟೆ. ಈಗ ಮಂಥರೆಯೇ ಅವಳಿಗೆ ವರಗಳ ಕುರಿತು ಜ್ಞಾಪಿಸಿ ಕೋಪಾಗಾರಕ್ಕೆ ಹೋಗಲು ಸಲಹೆ ನೀಡುವದು. ಇಲ್ಲಿಂದ ಮುಂದೆ ಕೈಕೆ ರಣಚಂಡಿಯಾಗಿ ಬದಲಾಗುವದನ್ನು ನೋಡಬಹುದು. ಈ ರೀತಿಯ ಸ್ವಭಾವವನ್ನು ಗ್ರೀಕ್ ನಾಟಕಗಳಲ್ಲಿ ಬರುವ Character of Hamartia (ದುರಂತದೋಷ) ಅಂದರೆ ಸೌಮ್ಯವಾಗಿರುವ ಪಾತ್ರ ತಕ್ಷಣ ಋಣಾತ್ಮಕವಾಗಿ ಬದಲಾಗಿ ಸಂಪೂರ್ಣ ದುರಂತಕ್ಕೆ ಕಾರಣವಾಗುವುದು. ಮಂಥರೆಯ ದುರ್ಬೀಜ ಚನ್ನಾಗಿಯೇ ಕೆಲಸ ಮಾಡಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣದಲ್ಲಿ ಮಂಥರೆಯ ಪಾತ್ರವನ್ನು ಓರ್ವ ವಿಷಬೀಜವೆಂದು ಸುಲಭಕ್ಕೆ ಹೇಳಿಬಿಡಬಹುದು. ಅಥವಾ ಇವಕ್ಕೆಲ್ಲ ಕಾರಣ ಆಕೆ ಶಾಪಗ್ರಸ್ತಳಾಗಿರುವುದು ಎನ್ನುವ ಸಮಾಧಾನವನ್ನು ಪಟ್ಟುಕೊಳ್ಳಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಪಂಚವೇ ಆಕೆಯನ್ನು ಕುಬ್ಜೆ, ಅನಿಷ್ಟೆ ಎಂದು ಹೀಗೆಳೆವಾಗ ಮರುಭೂಮಿಯಲ್ಲಿ ಸಿಕ್ಕ ನೀರಿನಂತೆ ಕೈಕೇಯಿಯ ಲಾಲನೆ ಪಾಲನೆಯಲ್ಲಿ ಆಕೆ ತನ್ನ ನೋವನ್ನು ಮರೆತವಳು. ಅಶ್ವಪತಿ ಕೈಕೇಯಿಯ ತಾಯಿಯನ್ನು ಕೈಕೆ ಕೈಗೂಸಾಗಿರುವಾಗಲೇ ಕಾಡಿಗೆ ಅಟ್ಟಿದ್ದ. ಅದಕ್ಕೆ ಕಾರಣ ಅರಸನಿಗೆ ಪ್ರಾಣಿ ಪಕ್ಷಿಗಳ ಭಾಷೆ ಅರ್ಥವಾಗುತ್ತಿತ್ತು. ಅದನ್ನು ತನಗೆ ಹೇಳಲೇ ಬೇಕೆನ್ನುವ ಹಟಹಿಡಿದ ಕಾರಣಕ್ಕೆ ಆಕೆಯನ್ನು ಹಸಿ ಬಾಣಂತಿಯಾಗಿರುವಾಗಲೇ ಕಾಡಿನಲ್ಲಿ ಬಿಟ್ಟಿದ್ದ. ತಾಯಿಯಿಲ್ಲದ ತಬ್ಬಲಿಗೆ ತಾಯಿಯಾದವಳು ಮಂಥರೆ. ಅವಳ ಪಾಲಿಗೆ ಕೈಕೆಗೆ ಏನಾದರೂ ಆಯಿತೆಂದರೆ ಸಹಿಸಲಾರದ ಸಂಗತಿ. ತನ್ನ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ಅಜ್ಜಿಯಂದಿರಿಗೆ ಮಮತೆ ಹೆಚ್ಚಿರುತ್ತದೆ. ಈ ಕಾರಣದಿಂದ ಭರತನ ಏಳಿಗೆಯನ್ನು ಬಯಸಿದರೆ ಅದು ಸಹಜವೂ ಹೌದು. ರಾಮನ ಮೇಲಿನ ಹುಚ್ಚು ಮಮತೆಯ ಕಾರಣಕ್ಕೆ ಆತನಿಗೆ ಶತಾಯು ಗತಾಯು ಪಟ್ಟಗಟ್ಟಬೇಕೆನ್ನುವುದು ದಶರಥನ ಇಚ್ಚೆಯಾದರೆ, ಕೈಕೆಯಿಯ ಸಂತಾನವೇ ಪಟ್ಟವೇರಬೇಕೆನ್ನುವ ಮೋಹ ಮಂಥರೆಯಲ್ಲಿದೆ. ಹೀಗೆ ಲೋಕದ ಒಳಿತಿಗಲ್ಲ, ತಮಗೆ ಬೇಕಾದವರು ಪಟ್ಟವೇರಲಿ ಎನ್ನುವ ಸ್ವಾರ್ಥ ಇಲ್ಲಿ ಕೆಲಸ ಮಾಡಿದೆ.

ರಾಜತ್ವವೆನ್ನುವುದು ವಿಷ್ಣುವಿನ ಪ್ರತಿನಿಧಿಯಾಗಿ ಇರುವ ಸ್ಥಾನ. ರಾಮನಂತಹ ಪರಿಪೂರ್ಣ ವ್ಯಕ್ತಿ ಇಂಥಹ ಮನಸ್ಥಿತಿಯಲ್ಲಿ ಪಟ್ಟವನ್ನೇರಿದರೆ ಅದು ಒಂದು ದೋಷವೇ. ಕಾವ್ಯದ ಪ್ರಾರಂಭದಲ್ಲಿ ನಾರದರ ಹತ್ತಿರ ವಾಲ್ಮೀಕಿ ಕೇಳಿಕೊಂಡಂತೆ ಹದಿನಾರು ಗುಣ ಸಂಪನ್ನನಾದ ರಾಮ ದಶರಥನ ಇಚ್ಛೆಯಂತೆ ಪಟ್ಟಕ್ಕೆ ಏರಿದ್ದರೆ ಅದೊಂದು ದೋಷವಾಗಿಬಿಡುತ್ತಿತ್ತು. ಅಧಿಕಾರವೆನ್ನುವುದು ಭೋಗವಲ್ಲ, ಹೊಣೆಗಾರಿಕೆಯಾಗಿ ನೋಡಬೇಕು. ಮಾನುಶಃ ಲೀಲೆಯಲ್ಲಿ ಗುಣವಂತನಾದ ವ್ಯಕ್ತಿಯ ಕುರಿತು ರಾಮಾಯಣವನ್ನು ರಚಿಸಲಾಗಿದೆ. ಗುಲಗಂಜಿಯಷ್ಟು ದೋಷವಿದ್ದರೂ ಕವಿ ವಾಲ್ಮೀಕಿ ತನ್ನ ಮನಸ್ಸಿನಲ್ಲಿ ಪಡಿಮೂಡಿದಾಕೃತಿಗೆ ತಾನೇ ಮುಗ್ಧನಾಗಲಾರ.

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ;

ಅಡಿಗರು ಕಡೆದ ಪಾತ್ರದ ನೆನಪನ್ನು ಇಲ್ಲಿ ಮಾಡಿಕೊಳ್ಳಬೇಕು.

ಅಂತರಂಗದ ಅರಸಿ ಕೋಪಾಗಾರವನ್ನು ಸೇರಿದರೆ ದಶರಥ ಮಹಾರಾಜ ತನ್ನ ಕಾರ್ಯ ಈಡೇರಿತೆಂದು ಸಂತೋಷದ ಅತಿರೇಕಕ್ಕೆ ಹೋಗಿದ್ದ. ಮದವೇರಿದ ಆತ ಅದನ್ನು ಇಳಿಸಿಕೊಳ್ಳುವ ಬಯಕೆಯ ಸಲುವಾಗಿ ಹೊರಟಿದ್ದ.

ವಿವರ ಮುಂದಿನ ಸಂಚಿಕೆಯಲ್ಲಿ…..

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

Continue Reading
Advertisement
Amanatullah Khan
ದೇಶ18 mins ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ38 mins ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ58 mins ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ1 hour ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ1 hour ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ2 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ2 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Man death in tiger attack in Nittur village
ಕೊಡಗು2 hours ago

Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

Surapura Assembly Constituency By election BJP candidate Raju Gowda filed nomination
ಯಾದಗಿರಿ2 hours ago

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

Preity Zinta
ಕ್ರೀಡೆ3 hours ago

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌