Ganesh Chaturthi 2022 | ಗಣೇಶ ಚತುರ್ಥಿ ನಿಮಿತ್ತ ಗಣಪತಿ ಸ್ವರೂಪದ ತಾತ್ತ್ವಿಕಾವಲೋಕನ  - Vistara News

ಗಣೇಶ ಚತುರ್ಥಿ

Ganesh Chaturthi 2022 | ಗಣೇಶ ಚತುರ್ಥಿ ನಿಮಿತ್ತ ಗಣಪತಿ ಸ್ವರೂಪದ ತಾತ್ತ್ವಿಕಾವಲೋಕನ 

ಸರ್ವ ವಂದಿತ ಗಣಪತಿಯ ಸ್ವರೂಪದ ತಾತ್ತ್ವಿಕಾವಲೋಕನ ಇಲ್ಲಿದೆ. ಗಣೇಶ ಚತುರ್ಥಿಯ (Ganesh Chaturthi 2022) ಸಂದರ್ಭದಲ್ಲಿ ವಿಶೇಷ ಲೇಖನ ಇದು. ವಿನಾಯಕ ಪೂಜಿಸುವ ಮೊದಲು ಈ ಲೇಖನ ಓದಿಕೊಳ್ಳಿ.

VISTARANEWS.COM


on

Ganesh Chaturthi 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ. ಕೆ. ಎಸ್. ಕಣ್ಣನ್
“ವಂದಿಸುವುದಾದಿಯಲಿ ಗಣನಾಥನ” ಎಂದೇ ಆರಂಭವಾಗುತ್ತದೆ, ಪುರಂದರದಾಸರ ಪ್ರಸಿದ್ಧ ಕೀರ್ತನೆ. “ಆದೌ ಪೂಜ್ಯೋ ವಿನಾಯಕಃ” ಎಂಬ ಪ್ರಾಚೀನೋಕ್ತಿಯ ಕನ್ನಡಾವತಾರವೇ ಇದು.

ಧರ್ಮಜನಂತೆಯೋ ರಾವಣನಂತೆಯೋ?

Ganesh Chaturthi 2022
ಡಾ. ಕೆ. ಎಸ್. ಕಣ್ಣನ್

ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು “ಭಯಕೃದ್ ಭಯನಾಶನಃ” ಎಂದು ಚಿತ್ರಿಸಲಾಗಿದೆ. ಎಂದರೆ ಆತನೇ ಭಯಕಾರಿ, ಭಯಹಾರಿ. ಹಾಗೆಯೇ ನಮ್ಮ ಗಣೇಶನೂ ವಿಘ್ನಕಾರಿಯೂ ವಿಘ್ನಪರಿ ಹಾರಿಯೂ. 

ಧರ್ಮಜ-ರಾವಣ – ಎಂಬೀ ಇಬ್ಬರ ಉದಾಹರಣ-ಪ್ರತ್ಯುದಾಹರಣಗಳನ್ನಲ್ಲಿ ದಾಸರಿತ್ತಿದ್ದಾರೆ. ದೊಡ್ಡ ತಪಸ್ಸೇ ಮಾಡಿ ಸಂಪಾದಿಸಿಕೊಂಡಿದ್ದ ವರಗಳನ್ನು ಕಳೆದುಕೊಂಡ, ರಾವಣ – ಗಣಪತಿಗೆ ಪೂಜೆ ಸಲ್ಲಿಸದಿದ್ದುದರಿಂದ. ಆದರೆ ಹರಿಯಿತ್ತ ಸೂಚನೆಯಂತೆ ಧರ್ಮರಾಯನು ಗಣನಾಥನಿಗೆ ಮೊದಲು ವಂದಿಸಿದನಾಗಿ, ಆತನ ಕಾರ್ಯ ನಿರ್ವಿಘ್ನವಾಗಿ ನೆರವೇರಿತು: ಯುದ್ಧಜಯ, ರಾಜ್ಯಪ್ರಾಪ್ತಿಗಳಾದವು.

ಸುರರಿಗೆ ವಂದ್ಯ, ಶಿವನಿಗೂ ವಂದ್ಯ!

ರಾವಣನೊಬ್ಬ ಅಸುರ, ಧರ್ಮಜನು ಮಾನವ. ಅವರಿಗೆ ಮಾತ್ರ ವಂದನೀಯನೆಂದಲ್ಲ. ಬ್ರಹ್ಮ-ವಿಷ್ಣುಗಳೂ ಪುಟ್ಟಗಣಪನಿಗೆ ವಂದಿಸುವರು! ಅವರಿರಲಿ, ಅವನ ಸಾಕ್ಷಾತ್ ಅಪ್ಪ-ಅಮ್ಮಂದಿರೇ ವಂದಿಸಿ ಕಾರ್ಯಾರಂಭ ಮಾಡಿದ್ದುಂಟು! ಯಾವಾಗ? 

ಬಲಿಯನ್ನು ತಗ್ಗಿಸಹೊರಟಾಗ ವಿಷ್ಣು; ಜಗತ್‍ಸೃಷ್ಟಿಮಾಡಲಿದ್ದ ಬ್ರಹ್ಮ; ಧರೆ ಹೊರಲೆಂದು ಹೊರಟಿದ್ದ ಶೇಷ; ತ್ರಿಪುರಸಂಹಾರ-ಸಂರಂಭದಲ್ಲಿದ್ದ ರುದ್ರ; ಮಹಿಷಾಸುರನನ್ನು ಮರ್ದಿಸಲಿದ್ದ ದುರ್ಗೆ; ಸಿದ್ಧಿಗಾಗಿ ಉಪಕ್ರಮಿಸುತ್ತಿದ್ದ ಸಿದ್ಧರು; ಹಾಗೂ ಜಗಜ್ಜಯದ ಕಾಮನೆಯ ಮನ್ಮಥ!

ನಾನಾ ನಾಮಗಳ ಗಣೇಶ

ಅಪ್ಪ-ಅಮ್ಮಂದಿರೇ ವಂದಿಸುವರೆಂದರೆ ಸಾಮಾನ್ಯನೇ ಗಣಪ? ಈತನ ಹಲವು ಹೆಸರುಗಳನ್ನು ನೋಡಿದೆವು. ಇನ್ನೂ ಉಂಟು: ಅಮರಕೋಶವು ಪಟ್ಟಿಮಾಡುವುದು ಎಂಟು: ವಿನಾಯಕ, ವಿಘ್ನರಾಜ, ದ್ವೈಮಾತುರ, ಗಣಾಧಿಪ, ಏಕದಂತ, ಹೇರಂಬ, ಲಂಬೋದರ, ಗಜಾನನ ಒಂದೊಂದು ಹೆಸರೂ ಸಾರ್ಥಕವೇ: ಡೊಳ್ಳುಹೊಟ್ಟೆಯವನಾದ್ದರಿಂದ “ಲಂಬೋದರ”. ಆನೆಯ ಮುಖದವ “ಗಜಾನನ”. ಒಂದೇ ದಂತದವನೇ “ಏಕದಂತ”. ಈ ಮೂರೂ ಆತನ ರೂಪವನ್ನು ಹೇಳುವುವು. (ಗೌರಿ-ಗಂಗೆಯರೆಂಬ) ಇಬ್ಬರು ಅಮ್ಮಂದಿರಿಂದ ಬೆಳೆದವನು “ದ್ವೈಮಾತುರ”. ಗಣದೇವತೆಗಳಿಗೆ ಒಡೆಯನಾದ್ದರಿಂದ “ಗಣಾಧಿಪ”.

ವಿಶಿಷ್ಟನಾಯಕನಾದ್ದರಿಂದ “ವಿನಾಯಕ”. ಈ ಮೂರು ಅವನ ಸ್ಥಾನವನ್ನು ತಿಳಿಸುತ್ತವೆ. ವಿಘ್ನಗಳನ್ನು ಒಡ್ಡಲೂ ಕೆಡವಲೂ ಸಮರ್ಥನಾದವನು “ವಿಘ್ನರಾಜ”. ಯುದ್ಧದಲ್ಲಿ ಮಹಾಪರಾಕ್ರಮಿಯಾದ್ದರಿಂದ “ಹೇರಂಬ”. ಇವೆರಡು ಅವರ ಸಾಮರ್ಥ್ಯವನ್ನು ತಿಳಿಸುತ್ತದೆ. ಇವಲ್ಲದೆ, ಗಣೇಶ-ಸಹಸ್ರನಾಮವೇ ಉಂಟು. ನಾನಾನಾಮಗಳಿಂದ ಆತನ ಬಗ್ಗೆ ನಾನಾನೋಟಗಳು ಲಭ್ಯ.

Ganesh Chaturthi 2022

ಪಲವಿಧ-ಫಲದ

ನಾನಾದೇವತೆಗಳ ಶಕ್ತಿಗಳೂ ಗಣೇಶನಲ್ಲಿ ಸೇರಿವೆ: ಶಿವನು ಆತನಿಗೆ ಅರ್ಧೇಂದುವನ್ನು ಕೊಟ್ಟ; ಬ್ರಹ್ಮನು ಮೇಖಲೆಯನ್ನು(=ಡಾಬು); ಸೂರ್ಯನು ಚಿಂತಾಮಣಿಯನ್ನು; ವರುಣನು ಪಾಶವನ್ನು; ವಿಷ್ಣುವು ಶಂಖವನ್ನು; ಇಂದ್ರನು ವಜ್ರವನ್ನು; ಹಾಗೂ ಯಮನು ದಂಡವನ್ನು ಕೊಟ್ಟುದನ್ನು ದೇವೀಪುರಾಣವು ಹೇಳಿದೆ.

ಇಷ್ಟೊಂದು ದೇವತಾಶಕ್ತಿಗಳಿಂದ ರಾರಾಜಿಸುವವನ ಬಗ್ಗೆ ಇಷ್ಟೊಂದು ಆದರಾರಾಧನಗಳು ಮೂಡಿಬರುವುದರಲ್ಲಿ ಆಶ್ಚರ್ಯವೇನು?

ಆರೋಗ್ಯಕ್ಕಾಗಿ ಸೂರ್ಯನನ್ನು ವಂದಿಸು; ಸಿರಿಗಾಗಿ ಅಗ್ನಿಯನ್ನೂ, ಜ್ಞಾನಕ್ಕಾಗಿ ಈಶ್ವರನನ್ನೂ, ಮೋಕ್ಷಕ್ಕಾಗಿ ಜನಾರ್ದನನನ್ನೂ, ರಕ್ಷೆಗಾಗಿ ದುರ್ಗೆಯನ್ನೂ, ಎಟುಕಲಾರದ್ದಕ್ಕಾಗಿ ಭೈರವನನ್ನೂ, ವಿದ್ಯೆಗಾಗಿ ಸರಸ್ವತಿಯನ್ನೂ, ಐಶ್ವರ್ಯವೃದ್ಧಿಗಾಗಿ ಲಕ್ಷ್ಮಿಯನ್ನೂ, ಸೌಭಾಗ್ಯಕ್ಕಾಗಿ ಪಾರ್ವತಿಯನ್ನೂ, ಮಂಗಲಕ್ಕಾಗಿ ಇಂದ್ರಾಣಿಯನ್ನೂ, ಸಂತಾನಕ್ಕಾಗಿ ಸ್ಕಂದನನ್ನೂ ವಂದಿಸು; ಇವೆಲ್ಲಕ್ಕಾಗಿ ಗಣಪತಿಯನ್ನು! – ಎನ್ನುತ್ತದೆ, ಲೌಗಾಕ್ಷಿಸ್ಮೃತಿ. 

ಹೀಗೆ ಗಣೇಶೋಪಾಸನೆಯಿಂದ ದೊರೆಯದ ಫಲವಿಲ್ಲ! ಎಲ್ಲವನ್ನೂ ಕೊಡುವವನನ್ನು ಆದರಿಸದವರಾರು? 

ಎಲ್ಲ ಮಾರ್ಗದವರಿಗೂ ಪ್ರಥಮವಂದ್ಯ

ತ್ರಿಪುರಸಂಹಾರಸಮಯದಲ್ಲಿ ಶಿವನೇ ಹೇಳುವಂತೆ, ಕೆಲಸವು ಲೌಕಿಕವಾಗಿರಲಿ, ವೈದಿಕವಾಗಿರಲಿ, ಎಲ್ಲರಿಗೂ ಪ್ರಥಮಪೂಜನೀಯನೆಂದರೆ ಗಣೇಶನೇ.

ಶೈವ-ವೈಷ್ಣವ-ಶಾಕ್ತ-ಸೌರ-ವೈನಾಯಕ-ಸ್ಕಾಂದ ಎಂಬಿವು ಭಕ್ತಿಮಾರ್ಗದ ಷಡ್‍ದರ್ಶನಗಳು.  ಆದಿತ್ಯ-ಅಂಬಿಕೆ-ವಿಷ್ಣು-ಗಣನಾಥ-ಮಹೇಶ್ವರ – ಎಂಬ ಐದು ದೇವತೆಗಳಲ್ಲಿ ಒಂದನ್ನು ಪ್ರಧಾನದೇವತೆಯಾಗಿಯೂ ಉಳಿದವನ್ನು ತದಂಗಭೂತವಾಗಿಯೂ ಪಂಚಾಯತನ ಪೂಜಾಕಲ್ಪದಲ್ಲಿ ಉಪಾಸಿಸುವರು. ಅದರಲ್ಲಿ ಗಣಪತಿಯನ್ನೇ ಪ್ರಧಾನದೇವತೆಯಾಗಿ ಪೂಜಿಸುವ ಕಲ್ಪವೂ ಪ್ರಚುರವೇ.

ದೇಶ ವಿದೇಶ ವ್ಯಾಪಿ ವಂದಿತ

ಪುರಂದರದಾಸರ ಪ್ರಸಿದ್ಧಪದದಿಂದ ದಕ್ಷಿಣಭಾರತದಲ್ಲಿ ಆತನಿಗಿರುವ ಆದರವು ತಿಳಿಯುವುದು. ಉತ್ತರದಲ್ಲಿ ಉತ್ತಮವಾದ ಪ್ರಸಿದ್ಧಿಹೊಂದಿರುವುದೆಂದರೆ “ಗಾಯಿಏ ಗನಪತಿ ಜಗವಂದನ” ಎಂಬ ತುಲಸೀದಾಸರ ಹಾಡು. ಇಲ್ಲಿಯ ದಾಸರಂತೆಯೇ ಅಲ್ಲಿಯ ದಾಸರ ಬಣ್ಣನೆಯೂ : “ಮೋದಕಪ್ರಿಯ ಮುದ-ಮಂಗಲ-ದಾತಾ ವಿದ್ಯಾವಾರಿಧಿ ಬುದ್ಧಿವಿಧಾತಾ”.

ಮಹಾರಾಷ್ಟ್ರವೊಂದೆಡೆಯಲ್ಲೇ ಸಂತ ಜ್ಞಾನೇಶ್ವರ, ಸಂತ ತುಕಾರಾಮ, ನಾಮದೇವ, ರಾಮದಾಸ, ಮುಂತಾದವರು ಗಣೇಶನನ್ನು ಸ್ತುತಿಸಿದ್ದಾರೆ. ಕಾಶ್ಮೀರದ ರಾಜಧಾನಿಯಾದ ಶ್ರೀನಗರದಲ್ಲೂ ಗಣೇಶನಿಗೆ ಪೂಜೆ ಸಲ್ಲುತ್ತದೆ – ಅಲ್ಲಿಯ ಹರಪರ್ವತವೆಂಬ ಬೆಟ್ಟದ ಬಳಿ. ಬಳಿಯ ತಮಿಳುನಾಡಿನ ಪಿಳ್ಳೈ ಅಥವಾ ಪಿಳ್ಳೈಯಾರ್ ಈತನನ್ನೇ ನಿರ್ದೇಶಿಸುವುದೆನ್ನುವರು. ಅತ್ತ ವಾಯವ್ಯದ ಆಫಘಾನಿಸ್ಥಾನದಲ್ಲಿ ಸಹ ಗಣೇಶನ ವಿಗ್ರಹಗಳು ದೊರೆತಿವೆ. ಉತ್ತರ/ಪೂರ್ವಗಳ ನೇಪಾಳ, ಟಿಬೆಟ್ಟು, ಬಾಂಗ್ಲಾದೇಶ, ಬರ್ಮಾಗಳಲ್ಲದೆ, ದಕ್ಷಿಣ/ಪೂರ್ವಗಳ ಶ್ರೀಲಂಕಾ, ಥಾಯ್‍ಲ್ಯಾಂಡ್, ಇಂಡೋನೇಶಿಯಾ, ಮಲೇಶಿಯಾ, ಮಾರಿಷಸ್‍ಗಳಲ್ಲೂ ಗಣೇಶ ಪೂಜಿತ. ಥಾಯ್‍ಲ್ಯಾಂಡಿನ ಸಿಲ್ವಕಾರ್ನ್ ವಿಶ್ವವಿದ್ಯಾಲಯದ ಕಲಾವಿಭಾಗದ (ಸೀಲ್) ಮುದ್ರಿಕೆಯಲ್ಲಿಇಂದೂ ಗಣೇಶನಿದ್ದಾನೆ.

ಬೌದ್ಧರಿಗೂ ವಂದ್ಯ ಗಣಪ: ಎಂದೇ ಟಿಬೆಟ್-ಚೀನಾ-ಜಪಾನ್‍ಗಳಲ್ಲೂ ನಾಮಾಂತರ-ರೂಪಾಂತರಗಳಿಂದ ಆತ ಮೆರೆದಿದ್ದಾನೆ. ಗಣೇಶಪ್ರತಿಷ್ಠಾಪನವೂ ಪೂಜೆಯೂ ಜೈನಗ್ರಂಥಗಳಲ್ಲೂ ದೊರೆಯುವುದಾಗಿ, ಅವರಿಗೂ ಪೂಜ್ಯನೇ. 

ಕಲೆಗಳಲ್ಲಿ ಶಿಲ್ಪಗಳಲ್ಲಿ ಕ್ರಿಸ್ತಶಕದಾದಿಯಿಂದಲೂ ದೊರೆಯುತ್ತಾನೆ ಗಣೇಶ. ಶ್ರೀಲಂಕಾದಲ್ಲಿ ಕ್ರಿಸ್ತಪೂರ್ವಕಾಲದಿಂದಲೂ ಲಭ್ಯ. ಗಣಪನ ಮೊಟ್ಟಮೊದಲ ಶಿಲ್ಪವು ದೊರೆತಿರುವುದು ಕಾಬೂಲ್‍ನಲ್ಲಿ! “ಗಣಪನಿಲ್ಲದ ಗ್ರಾಮವಿಲ್ಲ” ಎಂಬ ಮಾತೇ ಇದೆ. ಇಡೀ ಭಾರತದಲ್ಲಿ ಗಣಪತಿಗಿರುವಷ್ಟು ಆಲಯಗಳು ಮತ್ತಾವ ದೇವತೆಗುಂಟು? 

Ganesh Chaturthi 2022

ಕಾಲವ್ಯಾಪಿ

ಋಗ್ವೇದದಲ್ಲೇ “ಗಣಪತಿ”ಯೆಂಬ ಉಲ್ಲೇಖವಿದೆ. “ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮ್… “. ಆದರಿದು ಗಣೇಶನನ್ನೇ ಕುರಿತಾಗಿ ಇದೆಯೇ ಇಲ್ಲವೇ – ಎಂದು ಹೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ಅಲ್ಲಿಯ ಎಷ್ಟೋ ನಾಮಪದಗಳು ವಿಶೇಷಣಗಳ ಪರಿಯಲ್ಲೇ ಇರತಕ್ಕವು. ಇಂದ್ರನನ್ನೋ ಬೃಹಸ್ಪತಿಯನ್ನೋ ಸ್ತುತಿಸುವ ಅಂತಹ ಮಂತ್ರಗಳು ಶತಮಾನಗಳಿಂದಲೇ ಗಣೇಶಪೂಜೆಯಲ್ಲಿ ಪಾತ್ರಕಂಡಿವೆ.

ವೇದಗಳ ಸಂಹಿತಾಭಾಗ-ಬ್ರಾಹ್ಮಣಭಾಗಗಳಲ್ಲಿ ಗಣಪತಿ-ವಕ್ರತುಂಡ-ದಂತಿ – ಎಂಬ ಪದಗಳೇ ಬಂದಿವೆ. ಶುಕ್ಲಯಜುರ್ವೇದ ವಾಜಸನೇಯಿಸಂಹಿತೆಯಲ್ಲಿ “ಗಣಾನಾಂ ತ್ವಾ ಗಣಪತಿಂ” ಎನ್ನುವಂತೆಯೇ “ಪ್ರಿಯಾಣಾಂ ತ್ವಾ ಪ್ರಿಯಪತಿಂ”, “ನಿಧೀನಾಂ ತ್ವಾ ನಿಧಿಪತಿಂ” – ಎಂಬ ಉಕ್ತಿಗಳಿವೆ. ಅತಿಪ್ರಾಚೀನವಾದ ಸಾಹಿತ್ಯವಾದ್ದರಿಂದ ವ್ಯಾಖ್ಯಾಕಾರರ ನಿರೂಪಣೆಗಳಲ್ಲಿ ಭೇದಗಳಿವೆ. 

ಮಾನವಗೃಹ್ಯಸೂತ್ರ (ಕ್ರಿ.ಪೂ. ೭ನೇ ಶತಮಾನ) ಹಾಗೂ ಯಾಜ್ಞವಲ್ಕ್ಯಸ್ಮೃತಿ (೧ನೇ ಶತಮಾನ)ಗಳಲ್ಲಿಯೂ ನಾಲ್ಕು ವಿನಾಯಕರ ಉಲ್ಲೇಖವಿದೆ: ಈ ವಿನಾಯಕರು ವಿಘ್ನಕಾರಿಗಳು. ವಿಜ್ಞಾನೇಶ್ವರನ ಮಿತಾಕ್ಷರಾ ಗ್ರಂಥವು (೧೨ನೇ ಶತಮಾನ) ಆರು ಮಂದಿಯನ್ನು ಹೇಳುತ್ತದೆ. ವಿಷ್ಣುಧರ್ಮೋತ್ತರಪುರಾಣವೂ ನಾಲ್ಕುಮಂದಿ ವಿನಾಯಕರನ್ನು ಉಲ್ಲೇಖಿಸುತ್ತದೆ.

ಮಹಾಭಾರತದಲ್ಲಿ ವ್ಯಾಸರಿಗೆ ಗಣೇಶನೇ ಲೇಖಕನಾದುದನ್ನು ನಿರೂಪಿಸಿದೆ: ಲೇಖಕೋ ಭಾರತಸ್ಯಾಸ್ಯ ಭವ ತ್ವಂ ಗಣನಾಯಕ! ಗಣೇಶನನ್ನು ಕುರಿತಾದ ಹತ್ತುಹಲವು ವಿಷಯಗಳು ಪುರಾಣ-ತಂತ್ರ-ಆಗಮಗಳಲ್ಲೂ ದೊರೆಯುವುವು.

ತಾತ್ತ್ವಿಕದೃಷ್ಟಿ : ಯೋಗಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ ಅನೇಕ ಗಹನಸತ್ಯಗಳು ಗೋಚರವಾಗುತ್ತವೆ – ಪಳಗಿದ ಯೋಗಿಗಳ ವಿವರಣೆಗಳು ದೊರೆತಲ್ಲಿ. ಅಂತಹ ಎರಡುಮೂರು ವಿವರಣೆಗಳನ್ನು ಮುಂದಿಡಲು ಇಲ್ಲಿ ಯತ್ನಿಸಿದೆ.

ಮಣ್ಣಿನ ಗಣಪ

ಮೊದಲನೆಯದಾಗಿ ಪಾರ್ವತಿಯ ದೇಹದ ಮಲದಿಂದ ಗಣೇಶನ ಸೃಷ್ಟಿಯಾಯಿತೆನ್ನುವ ಮಾತು. ಪಾರ್ವತಿಯು ಪ್ರಕೃತಿಮಾತೆ. ಪ್ರಕೃತಿಯೆಂದರೆ ಕೇವಲ ಹೊರಗೆ ಕಾಣುವ ಸೃಷ್ಟಿಯೆಂದುಕೊಳ್ಳಬಾರದು. ಸಾಂಖ್ಯ-ವೇದಾಂತಗಳಲ್ಲಿ ಪ್ರಕೃತಿಯೆಂಬುದು ೨೪ ತತ್ತ್ವಗಳಿಂದಾದುದೆಂಬ ಪಾರಿಭಾಷಿಕವಿವರಣೆಯಿದೆ. ಅವುಗಳಲ್ಲೊಂದು ಕ್ರಮವಿದೆ: ಸೂಕ್ಷ್ಮದಿಂದ ಆರಂಭ; ಸ್ಥೂಲದತ್ತ ಸಾಗುವ ಬೆಳವಣಿಗೆ. ಸ್ಥೂಲತಮವೆನಿಸುವುದು ಪೃಥ್ವೀತತ್ತ್ವ. ಪಂಚಭೂತಗಳೆನ್ನುವಾಗ ಹಿಂದಿನವು ಕ್ರಮಶಃ ಜಲ-ತೇಜಸ್-ವಾಯು-ಆಕಾಶಗಳು. 

ಯೋಗಶಾಸ್ತ್ರವು ಹೇಳುವಂತೆ ಷಟ್ಚಕ್ರಗಳಲ್ಲಿ ಮೊದಲನೆಯದಾದ ಮೂಲಾಧಾರವು ಪೃಥ್ವೀತತ್ತ್ವದ ಸ್ಥಾನ. “ಮಹೀಂ ಮೂಲಾಧಾರೇ” ಎನ್ನುವುದಲ್ಲವೇ, ಸೌಂದರ್ಯಲಹರಿ? ಗಣೇಶನನ್ನು ಕುರಿತಾದ ಗೇಯಸಾಹಿತ್ಯವೂ “ವಾತಾಪಿಗಣಪತಿಂ ಭಜೇ… ಮೂಲಾಧಾರಕ್ಷೇತ್ರಸ್ಥಿತಮ್” ಎಂದೇ ಹೇಳುತ್ತದೆ. ಎಂದೇ ಗಣಪತಿಯನ್ನು ಮೂಲಾಧಾರದ ಪ್ರತೀಕವಾದ ಮಣ್ಣಿನಿಂದಲೇ ಮಾಡುವುದು. ಅಲ್ಲಿ ಮನಸ್ಸು ಲಯಿಸಿದಾಗ ಗಜಮುಖವೇ ಗೋಚರವಾಗುತ್ತದೆ. ಮನೋಲಯದ ಪ್ರಕಾರವನ್ನು ಶಂಕರಭಗವತ್ಪಾದರ ಯೋಗತಾರಾವಳಿಯು ತಿಳಿಸಿಕೊಡುತ್ತದೆ.

ಹೊರನೋಟ-ಒಳನೋಟ

ಹೊರಗಡೆ ಗೋಚರವಾಗುವುದನ್ನು ಹೋಲುವ ವಸ್ತುವಿನ ದರ್ಶನವು ಯೋಗಾನುಭವದಲ್ಲೂ ಅಂತರಂಗದಲ್ಲಿ ಆಗಬಹುದು. ಅವೆರಡಕ್ಕೂ ಕಿಂಚಿತ್ತಾಗಿ ಸಾಮ್ಯವೂ ಇರಬಹುದು. ಹಾಗೆಂದು ಪೂರ್ಣಸಾಮ್ಯವೆಂದು ಭ್ರಮಿಸಬಾರದು. ಉದಾಹರಣೆಗೆ ಹೇಳುವುದಾದರೆ, ಯೋಗಶಾಸ್ತ್ರ-ತಂತ್ರಶಾಸ್ತ್ರಗಳಲ್ಲಿ ಕುಂಡಲಿನೀ ಸರ್ಪವನ್ನು ಕುರಿತು ಹೇಳಿದೆ; ಹಾಗೆಂದು, ನಾವು ಹೊರಗೆ ಕಾಣುವ ಸರ್ಪಗಳ ಸ್ವಭಾವಗಳೆಲ್ಲವೂ ಅಲ್ಲೂ ಇರುವುವೆಂದುಕೊಂಡುಬಿಡಲಾಗದು. ಅನ್ವಯವು ಆಂಶಿಕವಷ್ಟೆ?

ಆನೆಯ ಸೊಂಡಿಲು ಸೌಕರ್ಯಾನುಸಾರಿಯಾಗಿ ತಿರುಗುವುದು ನಮಗೆ ಗೊತ್ತೇ ಇದೆ – ಉದಾಹರಣೆಗೆ ಆಹಾರ ಮುಂತಾದುವಕ್ಕಾಗಿ. ಆದರೆ ಗಣಪತಿಯ ಉಪಾಸನೆಯಲ್ಲಿಯ ಸೊಂಡಿಲಿನ ಇರವಿಗೆ ವಾಮಾವರ್ತ-ದಕ್ಷಿಣಾವರ್ತಗಳೆಂಬ ಲೆಕ್ಕವುಂಟು. ಎಡಮುರಿ-ಬಲಮುರಿಗಳೆಂದರೆ ಅವೇ. ಹಾಗಿರುವ ಗಣಪತಿಗಳ ಉಪಾಸನೆಯು ಕ್ರಮವಾಗಿ ಭೋಗಪ್ರದವೂ ಯೋಗಪ್ರದವೂ ಆಗುವುದು.

ಕದಿಯದ ಇಲಿ

ಗುಜ್ಜಾನೆ ಗಣಪನ ಡೊಳ್ಳು ಹೊಟ್ಟೆಯನ್ನು ಕಾಣುತ್ತಲೇ  ಸ್ವಲ್ಪ ನಗು ಬರುವಂತಾಗಬಹುದು. (ಗಣಪನು ಹಾಸ್ಯಕ್ಕೆ ಅಧಿದೇವತೆಯೇ). ಇನ್ನು ಆ ಠೊಣಪನ  ವಾಹನ ಈ ಪುಟ್ಟ ಇಲಿಯೆಂದರೆ ಇನ್ನೂ ಹಾಸ್ಯವಾಗಿಯೇ ತೋರಬಹುದು. ಏನಿದರ ಮರ್ಮ?

ಶಬ್ದಾರ್ಥಗಳ ಸರಿಯಾದ ಜ್ಞಾನ, ಪುರಾಣಪರಿಚಯ, ಹಾಗೂ ಯೋಗಶಾಸ್ತ್ರದ ದೃಷ್ಟಿ – ಇವೆಲ್ಲ ಮೇಳೈಸಿದಾಗ ತತ್ತ್ವವು ಗೋಚರವಾಗಲು ಅನುಕೂಲಿಸುವುದು. ಇಲಿಗೆ ಮೂಷಕ/ಮೂಷಿಕ ಎನ್ನುವರಲ್ಲವೇ? (ಎರಡು ಪದಗಳೂ ಸರಿಯಾದವೇ). ಈ ಪದಗಳು ಬಂದಿರುವುದು “ಮುಷ್” ಎಂಬ ಧಾತುವಿನಿಂದ. ಅದರರ್ಥ “ಕದಿಯುವುದು”. “ಮುಷ ಸ್ತೇಯೇ” ಎಂಬುದಾಗಿ ಧಾತುಪಾಠ.

ನಾವು ಕಷ್ಟಪಟ್ಟು ಸಂಪಾದಿಸುವ ಯೋಗಶಕ್ತಿಗಳನ್ನು “ಕದಿಯುವ” ದುಷ್ಟಶಕ್ತಿಯೇ ಇಲ್ಲಿಯ ಈ ಮೂಷಕ. ಇದೊಂದು ಆಸುರೀ ಶಕ್ತಿ. ಅದು ಕದಿಯುವುದು ಏನನ್ನು, ಏಕೆ ಮತ್ತು ಹೇಗೆ ? – ಎಂಬ ಪ್ರಶ್ನೆಗಳು ಬರುತ್ತವೆ. ಅವಕ್ಕೆ ಉತ್ತರ ಸಾಮಾನ್ಯರ ಅರಿವಿಗೆ ಗೋಚರವಾಗದು. ಅಯಸ್ಕಾಂತಕ್ಕೆ ಬೆಂಕಿಯ ತೀವ್ರ ಶಾಖ ತಗುಲಿದರೆ ಅದರ ಅಯಸ್ಕಾಂತತ್ವ ನಾಶವಾಗುವುದು – ಎಂಬುದರ ಏಕೆ-ಹೇಗೆಗಳು ಭೌತವಿಜ್ಞಾನಿಗಷ್ಟೆ ಗೋಚರವಲ್ಲವೇ?  ಅಂತೆಯೇ ಇಲ್ಲಿಯೂ: ಯಾವ ಶಕ್ತಿಯು ಯಾವುದಕ್ಕೆ ಪೋಷಕ, ಯಾವುದಕ್ಕೆ ಮಾರಕ? – ಎಂಬುದರ ತಿಳಿವಳಿಕೆ ಯೋಗಿಮಾತ್ರಗೋಚರವಾದುದು.

ಇದರ ಹಿಂದಿರುವ ಕಥೆಯೂ ಮಾರ್ಮಿಕವಾಗಿದೆ. ಕ್ರೌಂಚನೆಂಬ ಗಂಧರ್ವನು ದೇವಸಭೆಯಲ್ಲಿ ವಾಮದೇವನೆಂಬ ಋಷಿಗೆ ಮಾಡಿದ ಅಪಚಾರದಿಂದಾಗಿ ಶಾಪವೊದಗಿ, ಅದರ ಪರಿಣಾಮವಾಗಿ ಮೂಷಕಾಸುರನಾಗಿ ಹುಟ್ಟಿದ. ಪ್ರಸಂಗತಃ ಗಣೇಶನೊಡನೆಯೇ ಸೆಣಸಹೊರಟ.  ಕೊನೆಗೆ ಸೋತು ಶರಣಾದ.  ವಾಹನಸೇವೆಯನ್ನು ಗಣೇಶನಿಗೆ ಮಾಡಿ ತಾನು ಧನ್ಯನಾಗುವ ವರವನ್ನು ಗಣೇಶನಿಂದಲೇ ಪಡೆದುಕೊಂಡ. ಗಣಪನ ಅನುಗ್ರಹವಿದ್ದವರಿಗೆ ಆತನಿಂದ ತೊಂದರೆಯಾಗದು: ಅರ್ಥಾತ್, ಯೋಗದ ಪ್ರಗತಿ ಕುಂಠಿತವಾಗದು.

ಜಲಾಶಯದಲ್ಲಿ ವಿಸರ್ಜನ
ಇನ್ನು ಗಣಪತಿಯನ್ನು ಜಲಾಶಯದಲ್ಲಿ ವಿಸರ್ಜಿಸುವ ಕ್ರಮವಿದೆಯಲ್ಲವೇ?. ಇದು ಬಂದುದೇಕೆಂದರಿಯಬೇಕಲ್ಲವೇ? ಯೋಗಶಾಸ್ತ್ರದಲ್ಲಿ ತತ್ತ್ವಲಯವೆಂಬ ಕ್ರಮವೊಂದಿದೆ. ಅದರಂತೆ ಭೂ-ತತ್ತ್ವವನ್ನು ಅದಕ್ಕೆ ಹಿಂದಿನದಾದ ಜಲ-ತತ್ತ್ವದಲ್ಲೂ, ಅದನ್ನು ಅದರ ಹಿಂದಿನ ತೇಜಸ್ಸಿನಲ್ಲೂ – ಹೀಗೇ ಹಿಂದುಹಿಂದಿನ ತತ್ತ್ವಗಳಲ್ಲಿ ಲಯಗೊಳಿಸುತ್ತಾ ಹೋಗಬೇಕು. ಅದರ ಒಂದು ಪ್ರತೀಕವಾಗಿಯೇ ‘ಮಣ್ಣಿನ’ ಗಣೇಶನನ್ನು ಜಲದಲ್ಲಿ ವಿಸರ್ಜಿಸುವುದು. ಇದರ ಮರ್ಮವಿದು: ಒಳಗೆ ಘಟಿಸುವ ಕ್ರಿಯೆಗೆ ಹೊರಗಣ ಕ್ರಿಯೆಯೊಂದನ್ನು ಪ್ರತಿಫಲಕವಾಗಿಯೂ ಪೋಷಕವಾಗಿಯೂ ಇಟ್ಟುಕೊಳ್ಳುವುದೂ ಒಂದು ತಂತ್ರ. ಹೀಗೆ ಮಾಡುವುದು ಅಂತರಂಗದ ಪ್ರಗತಿಗೆ ಪುಷ್ಟಿಕೊಡುತ್ತದೆ. ಈ ತತ್ತ್ವವನ್ನು ಶ್ರೀರಂಗಮಹಾಗುರುಗಳು ಅನುಭವದೊಡನೆ ತಿಳಿಸಿಕೊಟ್ಟಿರುವರು.  

ಉಪಸಂಹಾರ

ಹೀಗೆಯೇ ಇಲ್ಲಿಯ ಹಲವು ವಿಷಯಗಳು ಸೂಕ್ಷ್ಮವಾದವು. ಕೆಲವನ್ನಷ್ಟೇ ಇಲ್ಲಿ ಸೂಚಿಸಿದೆ. ಅವನ್ನು ಯೋಗಿಗಳ ಮಾರ್ಗದರ್ಶನದಲ್ಲಿ ಅರಿಯಬೇಕೇ ವಿನಾ, ಕೇವಲ ಚತುರತೆಯಿಂದಷ್ಟರಿಂದಲೇ ಉತ್ತರ ಹುಡುಕುವುದು ಫಲಕಾರಿಯಾಗದು.

ಹೀಗೆ ಗಣೇಶನ ರೂಪ- ಸ್ವರೂಪಗಳು ತಾತ್ತ್ವಿಕವಾದುವೆಂಬುದನ್ನು ಮನಗಾಣಬೇಕಾಗಿದೆ. ತತ್ತ್ವವರಿತು ಮಾಡುವ ಧಾರ್ಮಿಕಕ್ರಿಯೆಗಳಿಗೇ ಪೂರ್ಣಫಲ. ಯಾಂತ್ರಿಕವಾಗಿ ಮಾಡಿದರೆ ಅದು ದೊರಕೀತೇ?. ನಾವು ಮಾಡುವ ಕಾರ್ಯಗಳು ಹೀಗೆ ಹೆಚ್ಚುಹೆಚ್ಚು ಸಫಲವಾಗುವಂತೆ ಯತ್ನಿಸುವಂತೆ ಗಣಪ ಪ್ರಚೋದಿಸಲಿ!

ತನ್ನೋ ದಂತಿಃ ಪ್ರಚೋದಯಾತ್ !

ಲೇಖಕರು: ಪೀಠ-ಪ್ರಾಧ್ಯಾಪಕರು ಐ.ಐ.ಟಿ. ಮದ್ರಾಸ್ , ಆಧ್ಯಾತ್ಮಿಕ ಚಿಂತಕರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ| Ganesh Chaturthi 2022 | ಗಣಪತಿಗೆ ಇಷ್ಟವಾದ ಮೋದಕ, ಲಡ್ಡು, ಕಜ್ಜಾಯ ಮಾಡುವುದು ಹೀಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು

Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

VISTARANEWS.COM


on

By

nishal tej
ಮೃತ ಬಾಲಕ ನಿಶಾಲ್‌ ತೇಜ್
Koo

ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.

ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್‌ ತೇಜ್‌ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು

ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.

ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್‌ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

By

Food Poisoning
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
Koo

ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.

ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಗಣೇಶ ಚತುರ್ಥಿ

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.

VISTARANEWS.COM


on

By

Ganesh Chaturthi Vehicular traffic on this route to be restricted tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ

ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ

1) ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್‌ ಮನೆ ಜಂಕ್ಷನ್‌, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

  1. ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್‌ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  2. ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  3. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್‌ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.

ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್

‌ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್‌ ಆಗಲಿದೆ.
-ಕೆನ್ಸಿಂಗ್‌ಟನ್‌ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ‌ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ

Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

VISTARANEWS.COM


on

Ganesh visarjan
Koo

ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ‌ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ‌ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.

ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ

  1. ದಿಣ್ಣೂರು ಮುಖ್ಯರಸ್ತೆ
  2. ಆರ್.ಟಿ ನಗರ ಮುಖ್ಯರಸ್ತೆ.
  3. ಸಿಬಿಐ ಮುಖ್ಯರಸ್ತೆ.

ಮಾರ್ಗ ಬದಲಾವಣೆ ವಿವರಗಳು

1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್‌ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್‌-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.

    3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್‌ ಭೈರಸಂದ್ರ ಕಡೆಗೆ:

    ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

      ಮೇಕ್ರಿ ಸರ್ಕಲ್‌- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್‌ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:

      ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್‌ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್‌ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.

      6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:

      ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್‌ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್‌ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.

        Continue Reading
        Advertisement
        IPL 2024
        ಪ್ರಮುಖ ಸುದ್ದಿ3 hours ago

        IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

        car catches fire
        ಕ್ರೈಂ4 hours ago

        Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

        jay Shah
        ಪ್ರಮುಖ ಸುದ್ದಿ5 hours ago

        Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

        ಬೆಂಗಳೂರು5 hours ago

        Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

        ಬೆಂಗಳೂರು5 hours ago

        LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

        IPL 2024
        ಕ್ರಿಕೆಟ್5 hours ago

        IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

        Devarajegowda
        ಕರ್ನಾಟಕ7 hours ago

        ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್;‌ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

        Murder Case
        ಕರ್ನಾಟಕ7 hours ago

        Murder Case: ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ; ಬಾಲಕಿಯ ಅಪಹರಿಸಿ ಕತ್ತು ಕೊಯ್ದ ಕಿರಾತಕರು

        Richard Hansen
        ಕರ್ನಾಟಕ7 hours ago

        Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

        Legislative Council Election
        ಕರ್ನಾಟಕ8 hours ago

        ವಿಧಾನ ಪರಿಷತ್ ಚುನಾವಣೆ; 5 ಕ್ಷೇತ್ರ ಬಿಜೆಪಿಗೆ, 1 ಕ್ಷೇತ್ರ ಜೆಡಿಎಸ್‌ಗೆ; ಕಮಲ ಪಾಳಯದ ಪಟ್ಟಿ ಇಲ್ಲಿದೆ

        Sharmitha Gowda in bikini
        ಕಿರುತೆರೆ7 months ago

        Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

        Kannada Serials
        ಕಿರುತೆರೆ7 months ago

        Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

        Bigg Boss- Saregamapa 20 average TRP
        ಕಿರುತೆರೆ7 months ago

        Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

        galipata neetu
        ಕಿರುತೆರೆ5 months ago

        Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

        Kannada Serials
        ಕಿರುತೆರೆ8 months ago

        Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

        Kannada Serials
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

        Bigg Boss' dominates TRP; Sita Rama fell to the sixth position
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

        geetha serial Dhanush gowda engagement
        ಕಿರುತೆರೆ5 months ago

        Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

        varun
        ಕಿರುತೆರೆ6 months ago

        Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

        Kannada Serials
        ಕಿರುತೆರೆ8 months ago

        Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

        Bengaluru News
        ಬೆಂಗಳೂರು13 hours ago

        Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

        Dina Bhavishya
        ಭವಿಷ್ಯ23 hours ago

        Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

        Physical Abuse The public prosecutor called the client woman to the lodge
        ಕ್ರೈಂ2 days ago

        Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

        murder case kalaburagi
        ಕಲಬುರಗಿ2 days ago

        Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

        Rain Effect In karnataka
        ಮಳೆ2 days ago

        Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

        Dina Bhavishya
        ಭವಿಷ್ಯ2 days ago

        Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

        Prajwal Revanna case Revanna bail plea to be heard on Monday Advocate Nagesh argument was as follows
        ಕ್ರೈಂ2 days ago

        Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

        Prajwal Revanna Case Hasanambe is going to destroy this government HD Kumaraswamy curse
        ರಾಜಕೀಯ2 days ago

        Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

        Prajwal Revanna Case DK Shivakumar alleged mastermind in 25000 pen drive allotment
        ಹಾಸನ2 days ago

        Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

        SSLC Result 2024 what is the reason for most of the students fail in SSLC
        ಕರ್ನಾಟಕ3 days ago

        SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

        ಟ್ರೆಂಡಿಂಗ್‌