ಬೆಂಗಳೂರು
Greenpeace India: ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ಬಳಸಿ: ಗ್ರೀನ್ಪೀಸ್
Greenpeace India: ಗ್ರೀನ್ಪೀಸ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ‘ಲೆಟ್ಸ್ ಮೂವ್ ಬೆಂಗಳೂರು’ ನಾಗರಿಕರ ಸಮಾವೇಶದಲ್ಲಿ ಶಕ್ತಿಯೋಜನೆ ಸಮರ್ಪಕ ಅನುಷ್ಠಾನ, ಬಸ್ ಸೌಕರ್ಯ, ಸಂಚಾರ ದಟ್ಟಣೆ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಬೆಂಗಳೂರು: ನಗರದ ಪ್ರೆಸ್ಕ್ಲಬ್ನಲ್ಲಿ ಗ್ರೀನ್ಪೀಸ್ ಇಂಡಿಯಾ (Greenpeace India) ವತಿಯಿಂದ ‘ಲೆಟ್ಸ್ ಮೂವ್ ಬೆಂಗಳೂರು’ ನಾಗರಿಕರ ಸಮಾವೇಶ ಆಯೋಜಿಸಲಾಗಿತ್ತು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ʻಮಹಿಳೆಯರಿಗೆ ಉಚಿತ ಬಸ್ ಪ್ರಯಾಣ’ ಯೋಜನೆಯ ಸಮರ್ಪಕ ಅನುಷ್ಠಾನ, ಬಸ್ ಸೌಕರ್ಯ, ಸಂಚಾರ ದಟ್ಟಣೆ ಸಮಸ್ಯೆ ಮತ್ತಿತರರ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆದಿದ್ದು, ಜತೆಗೆ ನಗರದಲ್ಲಿ ಜಾರಿಗೆ ತರಬಹುದಾದ ಪ್ರಾಯೋಗಿಕ ಪರಿಹಾರಗಳ ಕುರಿತು ನೀತಿನಿರೂಪಕರ ಗಮನ ಸೆಳೆಯಲಾಯಿತು.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್, ಸ್ಲಂ ನಿವಾಸಿಗಳ ಒಕ್ಕೂಟ, ಪವರ್ ದಿ ಪೆಡಲ್ ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರ ಸಮುದಾಯ, ಸಂಗಮ, ಕೌನ್ಸಿಲ್ ಫಾರ್ ಆಕ್ಟಿವ್ ಮೊಬಿಲಿಟಿ ಮತ್ತು ಸಿಟಿಜನ್ಸ್ ಫಾರ್ ಸ್ಯಾಂಕಿ ಸೇರಿ ಸಿವಿಲ್ ಸೊಸೈಟಿ ಗುಂಪುಗಳು, ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂದರ್ಭದಲ್ಲಿ ಗ್ರೀನ್ಪೀಸ್ ಇಂಡಿಯಾ ಜನರ ಪ್ರಣಾಳಿಕೆಯಲ್ಲಿ ಸಲ್ಲಿಸಿದ್ದ ಸಾರ್ವಜನಿಕರ ಸಂಚಾರ ಸಾರಿಗೆಗೆ ಸಂಬಂಧಿಸಿದ ಬೇಡಿಕೆಗಳು ಮತ್ತು ಸರ್ಕಾರವು ಈಡೇರಿಸಿರುವ ಭರವಸೆಗಳ ಕುರಿತು ಚರ್ಚಿಸಲು ಈ ನಾಗರಿಕ ಸಮಾವೇಶವನ್ನು ಆಯೋಜಿಸಲಾಗಿತ್ತು.
ನಾಗರಿಕರು ವೈಯಕ್ತಿಕ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ, ಸೈಕಲ್ ಸವಾರಿ ಮತ್ತು ವಾಕಿಂಗ್ನಂತಹ ಮೋಟಾರುರಹಿತ ಸಾರಿಗೆ (ಎನ್ಎಂಟಿ) ಗೆ ಆದ್ಯತೆ ನೀಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತಮ್ಮ ಕಚೇರಿಗಳಲ್ಲಿ ಹೈಬ್ರಿಡ್ ಮಾದರಿಯ ಕೆಲಸದ ವ್ಯವಸ್ಥೆಯನ್ನು ಅನುಸರಿಸುವಂತೆ ಪ್ಯಾನೆಲಿಸ್ಟ್ಗಳು ಸಾರ್ವಜನಿಕರಿಗೆ ಸೂಚಿಸಿದರು. ಜತೆಗೆ ಕೊನೆಯ ನಿಲ್ದಾಣದ ಸಂಪರ್ಕ ಒದಗಿಸುವುದು, ಬಿಎಂಟಿಸಿ ಬಸ್ಗಳ ಸಂಖ್ಯೆ ಹೆಚ್ಚಿಸುವುದು, ಪ್ರತ್ಯೇಕ ಬಸ್ ಲೇನ್ಗಳು ಮತ್ತು ನಗರದ ಹೊರವಲಯಕ್ಕೆ ಹೆಚ್ಚಿನ ಬಸ್ಗಳನ್ನು ಪರಿಚಯಿಸಲು ಸರ್ಕಾರವನ್ನು ಆಗ್ರಹಿಸಲಾಯಿತು.
ಇದನ್ನೂ ಓದಿ | Free Bus Pass: ಕೇವಲ 6 ತಿಂಗಳಲ್ಲಿ ಶ್ರಮಿಕ ವರ್ಗದ ಉಚಿತ ಬಸ್ ಪಾಸ್ ಯೋಜನೆಗೆ ತಿಲಾಂಜಲಿ
ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಳದ ಹೊರತಾಗಿಯೂ, ಬೆಂಗಳೂರಿನಲ್ಲಿ ಸಾರಿಗೆ ಸಂಚಾರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾರ್ವಜನಿಕ ಸಾರಿಗೆಯ ಪಾತ್ರವು ಸೀಮಿತವಾಗಿದೆ. ನಗರವು ಖಾಸಗಿ ವಾಹನಗಳ ಸಂಖ್ಯೆಯಲ್ಲಿ ನಗರದ ಸಾಮರ್ಥ್ಯವನ್ನೂ ಮೀರಿ ಬೆಳವಣಿಗೆಯನ್ನು ಕಂಡಿದೆ. ಇವುಗಳ ಸಂಖ್ಯೆ ಒಂದು ಕೋಟಿಯನ್ನೂ ದಾಟಿದ್ದು, ಇದು ಆಗಾಗ್ಗೆ ಸುದೀರ್ಘ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದೆ. ಮೂಲಸೌಕರ್ಯ ಹೂಡಿಕೆಯ ವಿಚಾರದಲ್ಲಿ ಸರ್ಕಾರದ ತಪ್ಪಿದ ಲೆಕ್ಕಾಚಾರವು ಈ ಬೆಳವಣಿಗೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಟೈನೇಬಲ್ ಟ್ರಾನ್ಸ್ಪೋರ್ಟೇಶನ್ ಲ್ಯಾಬ್ನ ಪ್ರೊಫೆಸರ್ ಆಶಿಶ್ ವರ್ಮಾ, “ಕಳೆದ 25 ವರ್ಷಗಳಲ್ಲಿ ಸರ್ಕಾರವು, ಫ್ಲೈಓವರ್ಗಳು ಮತ್ತು ಎಲಿವೇಟೆಡ್ ರಸ್ತೆಗಳಂತಹ ಕಾಂಕ್ರೀಟ್ ಆಧಾರಿತ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ ಮತ್ತು ಹೆಚ್ಚಿನ ಖಾಸಗಿ ವಾಹನಗಳ ಖರೀದಿಯನ್ನು ಉತ್ತೇಜಿಸುತ್ತಿದೆ. ಇವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಆದರೆ. ಸಂಚಾರ ದಟ್ಟಣೆಯ ಮೂಲ ಕಾರಣವನ್ನು ಪರಿಹರಿಸುವುದಿಲ್ಲ. ಇದಲ್ಲದೆ, ಈ ಯೋಜನೆಗಳಿಂದಾಗಿ ಸಾಮಾನ್ಯವಾಗಿ ಪರಿಸರ ನಾಶ, ಜನರ ಸ್ಥಳಾಂತರ ಮತ್ತು ಹಸಿರು ಸ್ಥಳಗಳ ನಾಶ ಉಂಟಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ಗ್ರೀನ್ಪೀಸ್ ಪ್ರಚಾರಕಿ ಅಮೃತಾ ನಾಯರ್ ಮಾತನಾಡಿ, ಕಾರು-ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆದ್ಯತೆಯ ಕುರಿತು ಕಳವಳ ವ್ಯಕ್ತಪಡಿಸಿದರು. ಇದು ಸಂಚಾರ ವ್ಯವಸ್ಥೆಯನ್ನು ಪ್ರತ್ಯೇಕಿಸುತ್ತದೆ ಮತ್ತು ಖಾಸಗಿ ಸಾರಿಗೆಯನ್ನು ಪಡೆಯಲು ಸಾಧ್ಯವಾಗದ ಜನರ ಗುಂಪುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಈ ಸಂಚಾರ ವ್ಯವಸ್ಥೆ ಪಡೆಯಲು ಸಾಧ್ಯವಾಗುವುದಿಲ್ಲ. ಸಮಗ್ರ ಮಹಾನಗರ ಯೋಜನೆಯಡಿ ಡಲ್ಟ್ (DULT) ಕಲ್ಪಿಸಿರುವ 11 ಬಸ್ ಆದ್ಯತಾ ಲೇನ್ಗಳ ಮರುಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗಾರ್ಮೆಂಟ್ಸ್ ಉದ್ಯೋಗಿ ಯಮುನಾ ಗಣೇಶ್ ಮಾತನಾಡಿ, ಶಕ್ತಿ ಯೋಜನೆಯು ಸಾಕಷ್ಟು ಮೆಚ್ಚುಗೆ ಪಡೆದಿದೆ. ಆದರೆ ನಗರದಲ್ಲಿ ಬಸ್ಗಳ ಕೊರತೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ. ಹೆಚ್ಚಿನ ಬಸ್ ಬಳಕೆದಾರರು ಮತ್ತು ಕಾರ್ಖಾನೆಗಳು ನಗರದ ಹೊರವಲಯದಲ್ಲಿದ್ದರೆ, ಬಿಎಂಟಿಸಿ ಬಸ್ ಸೇವೆಗಳು ನಗರ ಕೇಂದ್ರೀಕೃತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ನಾಗರಿಕ ಹಕ್ಕುಗಳ ಹೋರಾಟಗಾರ ಶ್ರೀನಿವಾಸ ಅಲವಿಲ್ಲಿ ಮಾತನಾಡಿ, ನಗರದ ಸುಮಾರು ಒಂದು ಕೋಟಿ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಬಿಎಂಟಿಸಿಯಲ್ಲಿರುವ 6700 ಬಸ್ಗಳ ಪಾಲು ಶೇ.1 ಕ್ಕಿಂತ ಕಡಿಮೆಯಿದೆ. ಇದು ಬಸ್ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳದ ಅಗತ್ಯವನ್ನು ಸೂಚಿಸುತ್ತದೆ. ಉತ್ತಮ ಬಸ್ ಸೇವೆ ಪಡೆಯಲು ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ 120 ಬಸ್ಗಳ ಅಗತ್ಯವಿದೆ. ಬಸ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಇದು ಸಕಾಲ ಎಂದು ಹೇಳಿದರು.
ಉಚಿತ ಬಸ್ಗಳ ಹೊರತಾಗಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಎಲ್ಲರಿಗೂ ಪ್ರವೇಶ ಸಿಗುವಂತೆ ಮಾಡುವುದು ಹೇಗೆ ಎಂದು ತಿಳಿಯಲು ಗ್ರೀನ್ಪೀಸ್ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಲ್ಲಿ ಒಂದು ಸರ್ವೇ ನಡೆಸಿತು. ಅದರ ಫಲಿತಾಂಶ ಹೀಗಿದೆ.
- ಸರ್ವೇಯಲ್ಲಿ ಪಾಲ್ಗೊಂಡಿದ್ದವರು- 162 ಜನ
- ಮಹಿಳೆಯರಿಗಾಗಿ ವಿಶೇಷ ಬಸ್ಗಳು ಬೇಕು – ಶೇ.15 (24 ಜನ)
- ಕೊನೆಯ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲು ಮಿನಿ ಬಸ್ಗಳನ್ನು ಒದಗಿಸಿ- ಶೇ.25 (40)
- ಪ್ರತ್ಯೇಕ ಬಸ್ ಲೇನ್ಗಳನ್ನು ಒದಗಿಸುವ ಹಾಗೂ ಹೆಚ್ಚು ಬಸ್ಗಳನ್ನು ಒದಗಿಸುವ ಮೂಲಕ ಬಸ್ಗಾಗಿ ಕಾಯುವ ಸಮಯವನ್ನು ಕಡಿಮೆಗೊಳಿಸಿ- ಶೇ.59 (98)
ಕರ್ನಾಟಕ
Karnataka Bandh : ಸೆ. 29ರ ಕರ್ನಾಟಕ ಬಂದ್ಗೆ ವಾಟಾಳ್ ಟೀಮ್ ರೆಡಿ; ಹಲವು ಸಂಘಟನೆ ಬಲ, ಏನಿರುತ್ತೆ? ಏನಿರಲ್ಲ?
Karnataka Bandh: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ, ಕೆಲವು ಬೆಂಬಲ ಕೊಡುವುದಿಲ್ಲ ಎಂದಿವೆ. ಹಾಗಿದ್ದರೆ ಏನಿರುತ್ತದೆ ಬಂದ್? ಇಲ್ಲಿದೆ ವಿವರ
ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ (Bangalore Bandh) ಯಶಸ್ಸಿನ ಬೆನ್ನಿಗೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ ಸೆಪ್ಟೆಂಬರ್ 29ರ ಕರ್ನಾಟಕ ಬಂದ್ಗೆ (Karnataka Bandh) ಭರದ ಸಿದ್ಧತೆಗಳು ನಡೆಯುತ್ತಿದೆ. ಸಂಘಟಕರು ನಾನಾ ಸಂಘಟನೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಆದರೆ, ಕೆಲವು ಸಂಘಟನೆಗಳು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ. ಈ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇನಾದರೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಈಗಲೇ ಬಂದ್ ಕರೆಯನ್ನು ಹಿಂದೆ ಪಡೆಯಲು ಸಿದ್ಧ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್ಗೆ ಸಾಥ್ ನೀಡುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಕಾವೇರಿ ವಿಚಾರಕ್ಕಾಗಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬುಧವಾರ ಜಂಟಿ ಪ್ರತಿಭಟನೆ ನಡೆಸಿದ ಪಕ್ಷಗಳು ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸಿದವು.
ವಾಟಾಳ್ ನಾಗರಾಜ್ ಅವರು ಬುಧವಾರ ಫಿಲಂ ಚೇಂಬರ್ ಜೊತೆ ಸಭೆ ನಡೆಸಿದರು. ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಚೇಂಬರ್ ಪ್ರಕಟಿಸಿತು.
ಹಾಗಿದ್ದರೆ ಕರ್ನಾಟಕ ಬಂದ್ಗೆ ಯಾರ್ಯಾರ ಬೆಂಬಲ ಇದೆ?
-ಓಲಾ,ಊಬರ್ ಯೂನಿಯನ್
-ಆದರ್ಶ ಆಟೋ ಚಾಲಕರ ಸಂಘ
-ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
-ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ವೇದಿಕೆ
-ಕರುನಾಡ ರೈತ ಸಂಘ
-ಕರವೇ ಶಿವರಾಮೇಗೌಡ ಬಣ
-ಕರವೇ ಪ್ರವೀಣ್ ಶೆಟ್ಟಿ ಬಣ
-ಲಾರಿ ಮಾಲೀಕರ ಸಂಘ
-ಕೈಗಾರಿಕೆಗಳ ಒಕ್ಕೂಟ
-ಪೀಣ್ಯ ಕೈಗಾರಿಕಾ ಸಂಘ
-ಹೋಟೆಲ್ ಮಾಲೀಕರ ಸಂಘ
ಯಾರ್ಯಾರ ಬೆಂಬಲ ಇಲ್ಲ?
-ಕರ್ನಾಟಕ ಚಾಲಕರ ಸಂಘ
-ಪೀಸ್ ಆಟೋ ಯೂನಿಯನ್
-ಕಬ್ಬು ಬೆಳೆಗಾರರ ಸಂಘ
50:50: ಇವರು ಇನ್ನೂ ತೀರ್ಮಾನ ಮಾಡಿಲ್ಲ?
-ಖಾಸಗಿ ಶಾಲಾ ಸಂಘಟನೆಗಳು
-ಏರ್ ಪೋರ್ಟ್ ಟ್ಯಾಕ್ಸಿ
–ಖಾಸಗಿ ಸಾರಿಗೆ ಸಂಘಟನೆ
ರಾಜ್ಯದಲ್ಲಿ ಬಂದ್ ದಿನ ಏನೆಲ್ಲ ಇರುತ್ತೆ. ಏನಿರುವುದಿಲ್ಲ?
ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಲಿವೆ ಎಂದು ಹೇಳಲಾಗಿದ್ದು, ರಾಜ್ಯ-ರಾಜ್ಯ ರಾಜಧಾನಿಯಲ್ಲಿ ಕೆಲ ಸೇವೆಗಳು ವ್ಯತ್ಯಯವಾಗಲಿವೆ
ಹಾಗಿದ್ದರೆ ಏನೆಲ್ಲ ಸೇವೆ ಇರುತ್ತದೆ?: -ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್, ಬೆಂಬಲ ನೀಡದ ಒಕ್ಕೂಟದ ಆಟೋ, ಟ್ಯಾಕ್ಸಿ
ಏನೆಲ್ಲ ಸೇವೆಗಳು ಇರುವುದಿಲ್ಲ?: ಹೋಟೆಲ್, ಸಿನಿಮಾ ಹಾಲ್, ಮಾಲ್, ಆಟೋ, ಕ್ಯಾಬ್, ಬೇಕರಿ, ಓಲಾ, ಊಬರ್
ಕುರುಬೂರು ಶಾಂತ ಕುಮಾರ್ ಟೀಮ್ ಬೆಂಬಲ ಇರುತ್ತಾ?
ಬೆಂಗಳೂರು ಬಂದ್ ಸಕ್ಸಸ್ ಖುಷಿಯಲ್ಲಿರೋ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಕುರುಬೂರು ಶಾಂತಕುಮಾರ್ ಮತ್ತು ಟೀಮ್ ಕರ್ನಾಟಕ ಬಂದ್ಗೆ ಬೆಂಬಲ ನೀಡಬೇಕಾ, ಬೇಡ್ವಾ ಅನ್ನೋದನ್ನ ಸಿಎಂ ಭೇಟಿ ಬಳಿಕ ನಿರ್ಧರಿಸುವುದಾಗಿ ತಿಳಿಸಿದೆ. ಸರ್ಕಾರದ ನಡೆ ನೋಡಿ ಮುಂದಿನ ತೀರ್ಮಾನ ಅನ್ನೋ ಮೂಲಕ ಸದ್ಯಕ್ಕೆ ಬೆಂಬಲ ಇಲ್ಲ ಅನ್ನೋ ಸುಳಿವು ನೀಡಿದೆ. ಬೆಂಗಳೂರು ಬಂದ್ಗೆ ವಾಟಾಳ್ ನಾಗರಾಜ್ ಟೀಮ್ ಬೆಂಬಲ ಕೊಟ್ಟಿರಲಿಲ್ಲ.
ಅಂದು ಏನೇನು ಘಟನಾವಳಿ ನಡೆಯಲಿದೆ?
ಯಾವ ಕಾರಣಕ್ಕೂ ಸೆಪ್ಟೆಂಬರ್ 29ರ ಬಂದ್ ವೇಳೆ ಸೆಕ್ಷನ್ 144 ಜಾರಿ ಮೂಲಕ ಪ್ರತಿಭಟನೆ ಹತ್ತಿಕ್ಕಬಾರದು ಎಂದು ಆಗ್ರಹಿಸಿರುವ ವಾಟಾಳ್ ನಾಗರಾಜ್ ಅವರು ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್ ಬಂದ್ ಮಾಡುವುದಕ್ಕೂ ಕರೆ ನೀಡಿದ್ದಾರೆ.
ಸಿಎಂ ಮನೆಗೆ ಮುತ್ತಿಗೆ ಯತ್ನ, ವಾಟಾಳ್ ನಾಗರಾಜ್ ವಶಕ್ಕೆ
ಈ ನಡುವೆ ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಹೋರಾಟಗಾರರು ಮುಖ್ಯಮಂತ್ರಿಗಳ ನಿವಾಸಕ್ಕೆ ದಾಳಿ ಮಾಡಲು ಮುಂದಾದರು. ಅವರನ್ನು ತಡೆದು ವಶಕ್ಕೆ ಪಡೆಯಲಾಯಿತು. ಮುತ್ತಿಗೆಯನ್ನು ವಿಫಲಗೊಳಿಸಲಾಯಿತು.
ಕರ್ನಾಟಕ
Rowdism in Ramanagara : ರೋಡಲ್ಲೇ ರೌಡಿಸಂ; ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ ಬ್ಯಾಲೆಟ್ ಪೇಪರ್ ಲೂಟಿ
Rowdism in Ramanagara : ರಾಮನಗರದ ಒಂದು ಹಾಲು ಉತ್ಪಾದಕರ ಸಂಘಕ್ಕೆ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದ ರೌಡಿಗಳ ಗ್ಯಾಂಗ್ ಚುನಾವಣಾ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿ ಬ್ಯಾಲೆಟ್ ಪೇಪರ್ ಎತ್ತಿಕೊಂಡು ಹೋಗಿದೆ. ಆರೋಪಿಗಳನ್ನು ಗುರುತಿಸಲಾಗಿದೆ.
ಬೆಂಗಳೂರು: ಹಾಲು ಉತ್ಪಾದಕರ ಸಂಘದ (Milk Producers Union) ನಿರ್ದೇಶಕರ ಆಯ್ಕೆಗಾಗಿ (Election of directors) ಬಂದ ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ (Attack on Election officers) ಅವರ ಕೈಯಲ್ಲಿದ್ದ ಬ್ಯಾಲೆಟ್ ಪ್ಯಾಪರ್ (Ballet Paper), ಲ್ಯಾಪ್ಟಾಪ್, ಮೊಬೈಲ್ ಮತ್ತು ಇತರ ಸಾಮಗ್ರಿ ದರೋಡೆ ಮಾಡಿದ ಭಯಾನಕ ಘಟನೆಯೊಂದು ರಾಮನಗರ ಜಿಲ್ಲೆಯ (Ramanagara News) ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಇಲ್ಲಿನ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯುವುದಿತ್ತು. ಚುನಾವಣಾಧಿಕಾರಿ ಉಮೇಶ್ ಮತ್ತು ಉಷಾ ಅವರು ಹಾಲು ಉತ್ಪಾದಕರ ಸಂಘದತ್ತ ಹೋಗುವಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಮಾಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಗಡಿ-ಕುಣಿಗಲ್ ರಸ್ತೆಯಲ್ಲಿ ಈ ದಾಳಿ ನಡೆದಿದೆ.
ಹಾಡುಹಗಲೇ ಭಯಾನಕ ಕೃತ್ಯ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಆದರೆ, ಪಂಚಾಯಿತಿ ಅಧ್ಯಕ್ಷ ಬಲರಾಮ್ ಮತ್ತು ಇತರ ಚುನಾವಣೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರು. ಆದರೆ, ದಿನಾಂಕ ನಿಗದಿಯಾಗಿ ಎಲ್ಲ ವ್ಯವಸ್ಥೆಗಳೂ ನಡೆದಿದ್ದವು.
ಉಮೇಶ್ ಮತ್ತು ಉಷಾ ಎಂಬ ಇಬ್ಬರು ಚುನಾವಣಾ ಅಧಿಕಾರಿಗಳಾಗಿ ನಿಯುಕ್ತರಾಗಿದ್ದರು. ಬುಧವಾರ ಅವರು ಕಾರಿನಲ್ಲಿ ಹಾಲು ಉತ್ಪಾದಕರ ಸಂಘದತ್ತ ಸಾಗುತ್ತಿದ್ದಂತೆಯೇ ಪುಂಡರ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿತ್ತು. ಮಾರಕಾಸ್ತ್ರಗಳನ್ನು ತೋರಿಸಿ ಕಾರಿನಿಂದ ಇಳಿಸಿತು.
ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರನ್ನು ಕೆಳಗೆ ಇಳಿಸಿದ ದುಷ್ಟರು ಕಾರಿನಲ್ಲಿದ್ದ ಬ್ಯಾಲೆಟ್ ಪೇಪರ್ ಮತ್ತು ಲ್ಯಾಪ್ಟಾಪ್ಗಳನ್ನು ಕಿತ್ತುಕೊಂಡಿತು. ಉಮೇಶ್ ಅವರು ತಮ್ಮ ಕೈಯಿಂದ ಕಿತ್ತುಕೊಂಡ ಪೇಪರ್ಗಳನ್ನು ಕಸಿದುಕೊಳ್ಳಲು ಅವರನ್ನು ಬೆನ್ನಟ್ಟಿದರು. ಆದರೆ ದುಷ್ಕರ್ಮಿಗಳು ತಾವು ಬಂದಿದ್ದ ಸ್ಯಾಂಟ್ರೋ ಕಾರಿನಲ್ಲಿ ಕುಳಿತು ಪರಾರಿಯಾದರು. ಈ ಹಂತದಲ್ಲಿ ಕೆಲವರು ಕಾರನ್ನು ನಿಲ್ಲಿಸಲು ಯತ್ನಿಸಿದರು. ಆದರೆ, ದುಷ್ಕರ್ಮಿಗಳು ಅವರನ್ನು ತಳ್ಳಿ ಮುಂದಕ್ಕೆ ಸಾಗಿದರು. ಈ ಹಂತದಲ್ಲಿ ಕಾರಿನ ಮುಂಭಾಗದಲ್ಲಿದ್ದ ಉಷಾ ಅವರ ಮೇಲೆಯೇ ಕಾರು ನುಗ್ಗಿತ್ತು. ಕಾರು ಡಿಕ್ಕಿಯಾಗಿ ಮುಗ್ಗರಿಸಿ ಬಿದ್ದ ಅವರು ರಸ್ತೆಗೆ ಉರುಳಿದರು.
ಮಾಜಿ ಅಧ್ಯಕ್ಷ ಬಲರಾಮ್ ಮತ್ತು ಟೀಮ್, ಕಾರಿಗಾಗಿ ಶೋಧ
ಇದು ಮಾಜಿ ಅಧ್ಯಕ್ಷ ಬಲರಾಂ ಮತ್ತು ಅವನ ಸಹಚರರ ಕೃತ್ಯ ಎಂದು ಪೊಲೀಸರಿಗೆ ತಿಳಿದುಬಂದಿದೆ. ಸ್ಥಳೀಯರು ಕೂಡಾ ಇದನ್ನು ದೃಢೀಕರಿಸಿದ್ದಾರೆ.
ಹುಲ್ಲೇನಹಳ್ಳಿ ನಾಲ್ಕು ವ್ಯಕ್ತಿಗಳಿಂದ ಕೃತ್ಯ ನಡೆಸಿದೆ. ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೇಮಂತ್, ಸೀನು, ದಾಸೇಗೌಡ, ಮತ್ತೊಬ್ಬನಿಂದ ಈ ಕೃತ್ಯ ನಡೆದಿದೆ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳು ಮತ್ತು ಸ್ಯಾಂಟ್ರೋ ಕಾರು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಮಂಜು ಕುಮ್ಮಕ್ಕು ಆರೋಪ
ಈ ನಡುವೆ, ದರೋಡೆಗೆ ಜೆಡಿಎಸ್ ಮಾಜಿ ಶಾಸಕ ಎ ಮಂಜು ಕುಮ್ಮಕ್ಕು ನೀಡಿದ್ದಾರೆ. ಮಾಜಿ ಅಧ್ಯಕ್ಷ ಬಲರಾಮ್ ತನ್ನ ಸಹಚರರ ಮೂಲಕ ಈ ಕೃತ್ಯ ನಡೆಸಿದ್ದಾನೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
23 ವರ್ಷದ ಬಳಿಕ ಚುನಾವಣೆ ನಡೆಯುತ್ತಿತ್ತು!
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಾಕಾರ ಸಂಘದ ನಿರ್ದೇಶಕರ ಚುನಾವಣೆ 23 ವರ್ಷಗಳ ಬಳಿಕ ನಡೆಯುತ್ತಿದೆ. ಇಲ್ಲಿ ಚುನಾವಣೆ ನಡೆಯಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಬೆಂಬಲಿಗರ ತಂಡವು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕೃತ್ಯವನ್ನು ಎಸಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ
MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ
MP Muniswamy : ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮೇಲೆ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಲ್ಲದೆ, ಹಲ್ಲೆಗೆ ಮುಂದಾಗಲಾಗಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಅವರು ಕೋಲಾರ ಶಾಸಕ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಕೋಲಾರ ಶಾಸಕ ನಾರಾಯಣಸ್ವಾಮಿ (Kolar MLA Narayanaswamy) ಈಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Kolar Incharge Minister Byrathi Suresh), ಕೋಲಾರ ಎಸ್ಪಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಕೋಲಾರ ಸಂಸದ ಮುನಿಸ್ವಾಮಿ (Kolar MP Muniswamy) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಆರೋಪ ಪ್ರಕರಣ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ (MLC Chalavadi Narayanaswamy), ಕೇಶವ್ ಪ್ರಸಾದ್ ಸೇರಿದಂತೆ 30 ಮಂದಿ ನಿಯೋಗ ತೆರಳಿ ದೂರು ನೀಡಿದೆ.
ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ: ಕೋಲಾರ ಸಂಸದ ಮುನಿಸ್ವಾಮಿ
ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಅಧಿಕಾರ ಇದೆಯೋ, ವಿಪಕ್ಷಗಳಿಗೂ ಅಷ್ಟೇ ಹಕ್ಕು ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಅಂತ ಹೇಳಿದ್ದರು. ರೈತರ ಜಮೀನನ್ನು ಕಬಳಿಸುವ ಕೆಲಸ ಮಾಡಿದ್ದಾರೆ. ರೈತರ ವಿರುದ್ಧ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ರಾಜಕೀಯ ವೇದಿಕೆ ಮೇಲೂ ಭೂ ಕಳ್ಳರಿದ್ದಾರೆ ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದ್ದಾರೆ
ಎಸ್ಎನ್ ಸಿಟಿ ಅಂತ ಲೇಔಟ್ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ ಅಂತ ಹೇಳಿದೆ. ಆಗ ಕೋಲಾರ ಶಾಸಕ ನಾರಾಯಣಸ್ವಾಮಿ ಹಾಗೂ ಉಸ್ತುವಾರಿ ಸಚಿವರು ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದರು. ಹಾಗಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್ಪಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
ರೈತರ ಪರವಾಗಿ ಹೋರಾಟ ಮುಂದುವರಿಯಲಿದೆ
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಮನವಿ ಮಾಡಲಿದ್ದೇವೆ. ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ. ಎಷ್ಟೇ ಗದಾ ಪ್ರಹಾರ ಮಾಡಿದರೂ ನಮ್ಮ ರೈತರ ಪರವಾಗಿ ನನ್ನ ಹೋರಾಟ ನಡೆಯಲಿದೆ ಎಂದು ಸಂಸದ ಮುನಿಸ್ವಾಮಿ ಇದೇ ವೇಳೆ ಹೇಳಿದರು.
ಕರ್ನಾಟಕ
BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
BJP JDS alliance : ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ. ಅಲ್ಲದೆ, ಜಾತ್ಯತೀತತೆಯನ್ನು ನಾಶ ಮಾಡಿದ್ದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಎಲ್ಲೆಲ್ಲಿ ಸೆಕ್ಯುಲರಿಸಂ ಇತ್ತೋ ಅದನ್ನು ಕಾಂಗ್ರೆಸ್ನವರೇ ನಾಶ ಮಾಡಿದರು. ಅಧಿಕಾರಕ್ಕಾಗಿ ಏನನ್ನೆಲ್ಲ ಮಾಡಿದರು? ಫಾರೂಕ್ ಅಬ್ದುಲ್ಲ (Farooq Abdullah) ಅವರನ್ನು ಯಾವ ಸಿದ್ಧಾಂತ ಉಳಿಸುವುದಕ್ಕೆ ಅವರು ಸೋಲಿಸಿದರು? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD DeveGowda) ಇದನ್ನೆಲ್ಲ ನೋಡಿ, ನೋವು ಅನುಭವಿಸಿದ್ದಾರೆ. ಒಂದು ಸಮಾಜಕ್ಕೆ ಸಹಾಯ ಮಾಡಬೇಕು ಅಂತ ದೇವೇಗೌಡರು ಮಾಡಿದ ಹಾಗೆ ಯಾರೂ ಮಾಡಿಲ್ಲ. ಈಗಾಗಲೇ ಇಬ್ರಾಹಿಂ ಅವರಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಮುಸ್ಲಿಮರಿಗೆ ನಾನು ಗೌರವ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ, ನನಗೆ ವೋಟ್ ಹಾಕುತ್ತಿರಲಿಲ್ಲ. ನಾನು ಯಾರಿಗೂ ಅಗೌರವಯುತವಾಗಿ ನಡೆದುಕೊಂಡಿಲ್ಲ. ಇಬ್ರಾಹಿಂ ಜೊತೆ ಹಲವು ವಿಷಯ ಚರ್ಚೆ ಮಾಡಿದ್ದೇನೆ. ಇವತ್ತು ದೇಶಕ್ಕೆ ಅವಶ್ಯಕತೆ ಇರುವ ಬಗ್ಗೆ ಲೆಕ್ಕ ಹಾಕಿದ್ದೇವೆ. ಹಾಗಾಗಿ ಈ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಮಾಡಿ ಎಂದು ನಾವು ಕೇಳಿದ್ದೆವಾ?
ಈಗ ಬಿಜೆಪಿ ಬಿ ಟೀಂ ಅನ್ನೋದನ್ನು ದೇವೇಗೌಡರು ಪ್ರೂವ್ ಮಾಡಿದ್ದರು ಅಂತಿದ್ದಾರಲ್ಲ ಅವತ್ತು ದೇವೇಗೌಡರು ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಅಂದಿದ್ದರು. ಆಗ ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಸೇರಿರಲಿಲ್ಲ. ಆದರೆ, ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಮುಂದೆ ಬಂದಿದ್ದು ಯಾರು? ಅಂದು ನನಗೆ ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಅವರಿಂದ ಫೋನ್ ಬಂದಿತ್ತು. ಆಗ ನಾನು ಬಿಜೆಪಿ ಜತೆ ಸೇರಿದ್ದರೆ 5 ವರ್ಷದ ಆಡಳಿತ ನಮ್ಮದಾಗಿರುತ್ತಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಹಾಸನದಲ್ಲಿ ರಾಹುಲ್ ಗಾಂಧಿ ಕರೆದುಕೊಂಡು ಬಂದು ಭಾಷಣ ಮಾಡಿಸಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತತೆಯನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಅಂದು ನನ್ನ ಸರ್ಕಾರವನ್ನು ಬೀಳಿಸುವಾಗ 5 ಶಾಸಕರನ್ನು ಕರೆತಂದರೆ, ಅತ್ತ ಕಡೆಯಿಂದ ಮತ್ತೆ ಐವರನ್ನು ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದವರು ಯಾರು? ಜಾತ್ಯತೀತತೆ ಉಳಿಸುವ ಕಾಂಗ್ರೆಸ್ ಸರ್ಕಾರವನ್ನು ಇದೀಗ ನೋಡುತ್ತಿದ್ದೀರಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕಾವೇರಿ ತಟದಲ್ಲಿ ರೈತರ ಉಳಿವಿಗೆ ದೇವೇಗೌಡರೇ ಕಾರಣ
ನೀರಾವರಿ ಸಮಸ್ಯೆ ಬಗೆಹರಿಸಲು ದೇವೇಗೌಡರು ಹಳ್ಳಿ ಹಳ್ಳಿ ಸುತ್ತಿದ್ದಾರೆ. ನೀರಾವರಿಗೆ ದೇವೇಗೌಡರು ಮಾಡಿರುವುದನ್ನು ಯಾರೊಬ್ಬರೂ ಮಾಡಿಲ್ಲ. ಚರ್ಚೆ ಮಾಡುವ ಸಂಘಟನೆಗಳಿಗೆ ಒಂದು ಮಾತು ಹೇಳುತ್ತೇನೆ. ಕಾವೇರಿ ತಟದಲ್ಲಿ ರೈತರು ಉಳಿದಿರುವುದಕ್ಕೆ ದೇವೇಗೌಡರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು
ನಮ್ಮ ಪಕ್ಷ ಉಳಿಸಿಕೊಳ್ಳಲು ಕಾಲು ಹಿಡಿದುಕೊಂಡರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜನತಾದಳಕ್ಕೆ ಇನ್ನು ಆ ದುರ್ಗತಿ ಬಂದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕಾವೇರಿ ಬಗ್ಗೆ ಧ್ವನಿ ಎತ್ತಲಿಲ್ಲ? ಕಾವೇರಿ ವಿಚಾರವಾಗಿ ಯಾಕೆ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ? ಕೆಆರ್ಎಸ್ ನೀರಿನ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಈ ಸರ್ಕಾರ ಇಷ್ಟು ಕೇವಲವಾಗಿ ನಡೆದುಕೊಳ್ಳುತ್ತಿದೆ. ವಿಷಯವನ್ನು ಡೈವರ್ಟ್ ಮಾಡುತ್ತಿದೆ. ಪಕ್ಷದ ಬಗ್ಗೆ ಹೆಸರು ಕೆಡಿಸಲು ಹೊರಟಿದ್ದಾರೆ. ನನಗೇನೂ ಶಾಕ್ ಕೊಡುವ ವಿಷಯವಲ್ಲ ಇದು. ಈಗಾಗಲೇ ನನಗೆ ಸಾಕಷ್ಟು ಶಾಕ್ ಕೊಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಮೈನಾರಿಟಿಗೆ ತೊಂದರೆ ಮಾಡಲ್ಲ: ಎಚ್.ಡಿ. ದೇವೇಗೌಡ
ನಾನು ಇವತ್ತು ನೀರಾವರಿ ಮಂತ್ರಿಗಳ ಯಾವ ಮಾತಿಗೂ ಗಮನ ಕೊಡಲ್ಲ. ಬಾಂಗ್ಲಾದೇಶದ ನೀರಿನ ಸಮಸ್ಯೆ ಬಗೆಹರಿಸಿದ್ದೆ. ನಮ್ಮ ಮುಂದೆ ಇರೋದು ಮೈನಾರಿಟಿ ಮಾತು ಅಷ್ಟೇ. ನಾವು ಮೈನಾರಿಟಿ ಎಲ್ಲೇ ಇದ್ದರೂ ತೊಂದರೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ, ಮೈನಾರಿಟಿ ಮಾತ್ರ ಅಲ್ಲ ಇಡೀ ಕರ್ನಾಟಕದ ರಕ್ಷಣೆ ನಮ್ಮ ಗುರಿಯಾಗಿದೆ. ನಾಟ್ ಓನ್ಲಿ ಮೈನಾರಿಟಿ ಬ್ರದರ್, ಎಂಟೈರ್ ಕರ್ನಾಟಕ ರಕ್ಷಣೆ ಮಾಡುತ್ತೇವೆ ಎಂದು ಗುಡುಗಿದರು.
ಇದನ್ನೂ ಓದಿ: BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
ಕಾವೇರಿ ನೀರಿನ ವಿಷಯದಲ್ಲಿ ಈಗ ಬಂದಿರುವ ಆದೇಶವು ನನ್ನ ರಾಜ್ಯದ ಜನತೆಯ ಮರಣ ಶಾಸನವಾಗಿದೆ ಎಂದು ಎಚ್.ಡಿ. ದೇವೇಗೌಡ ಬೇಸರವನ್ನು ಹೊರಹಾಕಿದರು.
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ23 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ16 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ23 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್