ಕರ್ನಾಟಕ
Cylinder blast : ಡ್ರೈನೇಜ್ ಕಾಮಗಾರಿ ವೇಳೆ ಮನೆಯೊಳಗಿದ್ದ ಎರಡು ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ
ಮನೆಯ ಹೊರಗಡೆ ಡ್ರೈನೇಜ್ ಕಾಮಗಾರಿ ನಡೆಯುತ್ತಿದ್ದರೆ ಒಳಗೆ ಮನೆಯಲ್ಲಿ ಎರಡು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಇವುಗಳ ಮಧ್ಯೆ ಇರುವ ಕನೆಕ್ಷನ್ ಏನು?
ಬೆಂಗಳೂರು: ಮನೆಯೊಳಗಿದ್ದ ಎರಡು ಸಿಲಿಂಡರ್ಗಳು ಸ್ಫೋಟಗೊಂಡು (Cylinder blast) ಮನೆಗೆ ಹಾನಿಯಾಗಿದ್ದಲ್ಲದೆ, ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಎಚ್.ಎಸ್.ಆರ್ ಲೇಔಟ್ ಮದೀನಾ ಮಸೀದಿ ಬಳಿ ನಡೆದಿದೆ. ಈ ಘಟನೆಗೂ ಮನೆಯ ಹೊರಗಡೆ ನಡೆಯುತ್ತಿರುವ ಡ್ರೈನೇಜ್ ಕಾಮಗಾರಿಗೂ ಸಂಬಂಧವಿದೆ ಎನ್ನುವುದು ನಂತರ ಬಯಲಿಗೆ ಬಂತು.
ಜಮೀರ್ ಅಹಮದ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಸ್ಫೋಟ ನಡೆದಿದೆ. ಲೈಖಾ ಅಂಜುಮ್(45) ಮುಬಾಸಿರಾ (40) ಎಂಬ ಮಹಿಳೆಯರು ಮನೆಯ ಅಡುಗೆ ಕೋಣೆಗೆ ಅಡುಗೆ ಮಾಡಲೆಂದು ಹೋದಾಗ ಒಮ್ಮಿಂದೊಮ್ಮೆಗೇ ಸ್ಫೋಟ ಸಂಭವಿಸಿದೆ.
ಮನೆಯೊಳಗೆ ಇದ್ದ ಎರಡು ಅಡುಗೆ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಮನೆಯೊಳಗಿದ್ದ ಕೆಲ ವಸ್ತುಗಳು ಬೆಂಕಿಗಾಹುತಿಯಾಗಿವೆ. ಗಾಯಗೊಂಡ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೇಲ್ ಗ್ಯಾಸ್ ಪೈಪ್ಲೈನ್ಗೆ ಡ್ಯಾಮೇಜ್ ಆಗಿದ್ದೇ ಸಮಸ್ಯೆಯ ಮೂಲ
ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಮೀರ್ ಅಹಮದ್ ಅವರಿಗೆ ಸೇರಿದ ಮನೆಯ ಮುಂದೆ ಬಿಬಿಎಂಪಿಯಿಂದ ಡ್ರೈನೇಜ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ನಡೆಯುತ್ತಿದ್ದಾಗಲೇ ಒಮ್ಮಿಂದೊಮ್ಮೆಗೇ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.
ಡ್ರೈನೇಜ್ ಕಾಮಗಾರಿಯ ವೇಳೆ ಅದೇ ಜಾಗದಲ್ಲಿ ಅಳವಡಿಸಲಾಗಿರುವ ಗೇಲ್ ಗ್ಯಾಸ್ ಪೈಪ್ಲೈನ್ಗೆ ಹಾನಿಯಾದ ಹಿನ್ನೆಲೆಯಲ್ಲಿ ಮನೆಯೊಳಗೆ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಫೋಟ ಆಗಿದೆ.
ಗೇಲ್ ಗ್ಯಾಸ್ ಕಂಪನಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಈ ಭಾಗದಲ್ಲಿ ಗೇಲ್ ಪೈಪ್ ಲೈನ್ ಹಾದು ಹೋಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಎಲ್ಲೂ ಹಾಕಿಲ್ಲ. ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂದು ಬೋರ್ಡ್ ಸಹ ಅಳವಡಿಸಿಲ್ಲ.. ಕೆಲಸ ಮಾಡುವಾಗಲು ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಆಪಾದಿಸಲಾಗಿದೆ.
ತಂದೆಯಿಂದಲೇ ಮಗಳ ಕೊಲೆ; ಮದುವೆಯಾದರೂ ತವರು ಮನೆಯಲ್ಲಿದ್ದು ಕಿರುಕುಳ ಕೊಡುತ್ತಿದ್ದಳೇ?
ಬೆಂಗಳೂರು: ನಗರದ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ನಲ್ಲಿ ತಂದೆಯೇ ಮಗಳನ್ನು ಹೊಡೆದು ಕೊಂದಿದ್ದಾನೆ. ರಮೇಶ್ (60) ಎಂಬಾತ ತನ್ನ ಮಗಳಾದ ಆಶಾ (32)ಳನ್ನು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಮಗಳಿಗೆ ಮದುವೆಯಾಗಿದ್ದರೂ ತವರಲ್ಲೇ ಬಂದು ಇದ್ದಳು. ಈ ವೇಳೆ ತಂದೆಯ ಜತೆ ಆಕೆಗೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಮೇಶ್ ಎಂಬವರ ಮಗಳಾದ ಆಶಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಅದರೆ, ಗಂಡನಿಂದ ದೂರವಾಗಿದ್ದ ಆಕೆ ತವರು ಮನೆಯಲ್ಲೇ ಬಂದು ಉಳಿದುಕೊಂಡಿದ್ದಳು.
ಈ ನಡುವೆ, ಆಕೆ ತಂದೆ ಮನೆಯಲ್ಲೇ ಕಾರುಬಾರು ಮಾಡಲು ಶುರು ಮಾಡಿದ್ದಳು. ಮನೆಯವರ ಮೇಲೆ ದಬ್ಬಾಳಿಕೆ ಮಾಡುತ್ತಾ ತಂದೆ, ತಾಯಿ, ತಂಗಿಗೆ ಕುರುಕುಳ ನೀಡುತ್ತಿದ್ದಳೆಂದು ಹೇಳಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಮನೆಯಲ್ಲಿ ಜಗಳವಾಗಿದೆ. ಹಿಂದಿನ ಸಿಟ್ಟೆಲ್ಲ ಇದ್ದಿದ್ದರಿಂದ ತಂದೆ ರಮೇಶ್ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ದೊಣ್ಣೆಯ ಹೊಡೆತಕ್ಕೆ ಆಶಾ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ತಂದೆ ರಮೇಶ್ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : Murder Case: ಮಾವನನ್ನೇ ಗುಂಡಿಕ್ಕಿ ಕೊಂದ ಸೊಸೆ; ಕೌಟುಂಬಿಕ ಕಲಹ ಕಾರಣವೇ?
ಕರ್ನಾಟಕ
Karnataka Election: ಜೆಡಿಎಸ್, ಬಿಜೆಪಿಯ ತಲಾ ಒಂದು ವಿಕೆಟ್ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ
ಅನೇಕ ವರ್ಷ ಕಾಂಗ್ರೆಸ್ನಲ್ಲಿದ್ದ ಗೋಪಾಲಕೃಷ್ಣ ಮತ್ತೆ ಅದೇ ಪಕ್ಷಕ್ಕೆ ತೆರಳಬಹುದು ಎನ್ನಲಾಗಿದ್ದು, ಎ.ಟಿ. ರಾಮಸ್ವಾಮಿ ಬಿಜೆಪಿ ಸೇರುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಒಬ್ಬರು ಬಿಜೆಪಿಗೆ, ಮತ್ತೊಬ್ಬರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಅರಕಲಗೂಡು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎ.ಟಿ. ರಾಮಸ್ವಾಮಿ ಬೆಂಗಳೂರಿನಲ್ಲಿ ವಿಧಾನಸಭೆ ಕಾರ್ಯದರ್ಶಿ ಮೂಲಕ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಟಿ. ರಾಮಸ್ವಾಮಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಂತೋಷದಿಂದ ರಾಜೀನಾಮೆ ನೀಡಿದ್ದೇನೆ. ಕಾರ್ಯದರ್ಶಿ ಗೆ ರಾಜೀನಾಮೆ ನೀಡಿದ್ದೇನೆ, ಸ್ಪೀಕರ್ ಬಂದ ಬಳಿಕ ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ನಾನು ಇಂದೇ ಶಾಸಕರ ಭವನದ ಕೊಠಡಿ ಬಿಟ್ಟು ಕೊಡುತ್ತಿದ್ದೇನೆ. ಜೆಡಿಎಸ್ ನಾಯಕರು ನನಗೆ ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ನಾನು ಅಧಿಕಾರ ಆಸೆ ಪಡೆದವನಲ್ಲ. ನಾನು ವಿರೋಧ ಪಕ್ಷದವರ ಜತೆ ಸಹ ಉತ್ತಮವಾಗಿದ್ದೇನೆ. ನಾನು ರಾಜಕೀಯ ವಿರೋಧಿಗಳಿಗೂ ಒಳ್ಳೆಯದಾಗ್ಲಿ ಎಂದು ಭಾವಿಸುತ್ತೇನೆ. ಜನ ಸೇವೆಗಾಗಿ ಅವಕಾಶ ಸಿಕ್ಕಿತ್ತು.
ಮುಂದೆ ಅವಕಾಶ ಸಿಕ್ರೆ ಜನರ ಸೇವೆಗೆ ಮುಡುಪಾಗಿ ಇಡುತ್ತಿದ್ದೇನೆ. ಕರ್ನಾಟಕದ ರಾಜಕಾರಣ ಕೆಟ್ಟು ಹೋಗಿದೆ. ಒಲೈಕೆ ರಾಜಕಾರಣ ಜಾಸ್ತಿ ಆಗಿದೆ. ವಿಧಾನ ಸಭೆ ಮತ್ತು ಪರಿಷತ್ ಹಣದ ಸಭೆ ಆಗದೇ ಜನರ ಸಭೆ ಆಗಲಿ. ಜನರ ಹಿತಾಸಕ್ತಿಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಜೆಡಿಎಸ್ ಬಿಡಲಿಲ್ಲ. ಎಂದೂ ಸಹ ಸಹ ಜೆಡಿಎಸ್ ಬಿಡಲಿಲ್ಲ. ಎಲ್ಲ ಪಕ್ಷಗಳಲ್ಲೂ ಲೋಪದೋಷಗಳಿವೆ. ಮನಿ ಪವರ್ ಮುಂದೆ ಬಲಿಪಶು ಆದೆ. ಅಕ್ರಮಗಳನ್ನ ಎತ್ತಿ ಹಿಡಿದಿದ್ದೆ ಶಾಪ ಎನ್ನುವುದಾದರೆ ಅದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ ಎಂದರು.
ಯಾವ ಪಕ್ಷ ಸೇರುತ್ತೇನೆ ಎನ್ನುವ ಕುರಿತು ರಾಮಸ್ವಾಮಿ ಸ್ಪಷ್ಟವಾಗಿ ತಿಳಿಸಿಲ್ಲ. ಅವರು ಬಿಜೆಪಿ ಅಭ್ಯರ್ಥಿಯಾಗಿ ಅರಕಲಗೂಡಿನಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.
ಗೋಪಾಲಕೃಷ್ಣ ರಾಜೀನಾಮೆ
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ತೆರಳಿ ರಾಜೀನಾಮೆ ನೀಡಿದ್ದಾರೆ. ವಯಸ್ಸಿನ ಕಾರಣಕ್ಕೆ ರಾಜಕೀಯ ನಿವೃತ್ತಿ ಪಡೆಯಲು ರಾಜೀನಾಮೆ ನೀಡುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.
ಆದರೆ ಅವರು ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಕನ್ಪರ್ಮ್ ಮಾಡಿಕೊಂಡೇ ರಾಜೀನಾಮೆ ನೀಡಿದ್ದಾರೆ. ಹಿಂದಿನ ಎಲೆಕ್ಷನ್ ನಲ್ಲಿ ಟಿಕೆಟ್ ನಿಂದ ವಂಚಿತ ಆಗಿದ್ದ ಗೋಪಾಲಕೃಷ್ಣ, ಜನಾರ್ದನ ರೆಡ್ಡಿ, ಶ್ರೀರಾಮುಲು ಪ್ರಭಾವದಿಂದ ಕೂಡ್ಲಿಗಿಯಿಂದ ಸ್ಪರ್ಧಿಸಿದ್ದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Elections : ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ನಾಳೆ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ಗೆ ಸೇರ್ಪಡೆ
ಕರ್ನಾಟಕ
Hiriyur News: ಕಾಂಗ್ರೆಸ್ ಸೇರಿದ ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್; ಬಿಜೆಪಿಗೆ ಆಘಾತ
Hiriyur News: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ನಗರ ಸಭೆಯ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಅವರನ್ನು ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ಹಿರಿಯೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಗರಸಭೆಯ (city council) ಮಾಜಿ ಅಧ್ಯಕ್ಷ ಹಾಗೂ ಭೋವಿ ಸಮಾಜದ ನಾಯಕ ಟಿ. ಚಂದ್ರಶೇಖರ್ ಬಿಜೆಪಿಗೆ ಸದ್ದಿಲ್ಲದೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಟಿ. ಚಂದ್ರಶೇಖರ್, ಎಸ್ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ತಿಮ್ಮಭೋವಿ, ರಂಗಸ್ವಾಮಿ ಸೇರಿದಂತೆ ಮತ್ತಿತರರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ಟಿ. ಚಂದ್ರಶೇಖರ್ ಅವರು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ನಂತರ ನಗರಸಭಾ ಅಧ್ಯಕ್ಷರಾಗಿದ್ದರು. ಬಳಿಕ ನಡೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಶಾಸಕಿ ಕೆ. ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರ ಜತೆಗಿದ್ದ ಚಂದ್ರಶೇಖರ್ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಗುರುವಾರ (ಮಾ.30) ರಾತ್ರಿ ಮಾಜಿ ಸಚಿವ ಡಿ. ಸುಧಾಕರ್ ಅವರು ತಮ್ಮ ಮನೆಯಲ್ಲಿಯೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಅವರು ಬಿಜೆಪಿ ತೊರೆದಿರುವುದರಿಂದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ವಿಶ್ಲೇಷಣೆ ಸಹ ಈ ವೇಳೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭೋವಿ ಸಮಾಜದ ಮತಗಳು ಹೆಚ್ಚು ಬಂದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ಮಾಜಿ ಸಚಿವ ಡಿ. ಸುಧಾಕರ್, ಚಂದ್ರಶೇಖರ್ ಅವರು ಕಾಂಗ್ರೆಸ್ನ ತತ್ತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜನ ವಿರೋಧಿ ಆಡಳಿತ ಕೊನೆಗೊಂಡಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರೋಗ್ಯ
Shivamogga News: ವಿನ್ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ
Shivamogga News: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶದಲ್ಲಿ ಜೀವ ರಕ್ಷಕ ತರಬೇತಿ, ಕಿರು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ವಿನ್ಲೈಫ್ ಟ್ರಸ್ಟ್ (WinLife Trust) ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ಏ.2 ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ, “ಈ ಸಮಾವೇಶದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ @360 ಈ ವಿಷಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರು ನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಸುದ್ದಿಗೋಷ್ಠಿಯಲ್ಲಿ ವಿನ್ಲೈಫ್ ನಿರ್ದೇಶಕರಾದ ಡಾ.ಶಂಕರ್, ಡಾ.ವಿಜಯ ಕುಮಾರ್, ರೆಹಮತ್ ಹಾಗೂ ಬದ್ರಿನಾಥ್ ಉಪಸ್ಥಿತರಿದ್ದರು.
ಉತ್ತರ ಕನ್ನಡ
Karnataka Elections : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್ವೈ ಗೋಪಾಲಕೃಷ್ಣ; ಕಾಂಗ್ರೆಸ್ ಸೇರಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ!
ಕೂಡ್ಲಿ ಬಿಜೆಪಿ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹಾಗಿದ್ದರೆ ಮೊಳಕಾಲ್ಮುರು ಕ್ಷೇತ್ರದಿಂದ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುತ್ತಾರಾ?
ಶಿರಸಿ/ವಿಜಯನಗರ: ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ (Karnataka Elections) ರಾಜೀನಾಮೆ ನೀಡಿದ್ದು, ಅದರ ಬೆನ್ನಿಗೇ ರಾಜಕೀಯ ನಿವೃತ್ತಿಯ ಘೋಷಣೆಯನ್ನು ಮಾಡಿದ್ದಾರೆ. ತಾನು ಯಾವುದೇ ಪಕ್ಷ ಸೇರುವುದಿಲ್ಲ, ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದರು.
ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯ ಅವರ ನಿವಾಸದಲ್ಲಿ ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಸೇರುವ ಮತ್ತು ಮೊಳಕಾಲ್ಮುರು ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆದರು. ಮಾತ್ರವಲ್ಲ, ತಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದರು.
ವಿಸ್ತಾರ ನ್ಯೂಸ್ನೊಂದಿಗೆ ಮಾತನಾಡಿದ ಅವರು, ನಾನು ಯಾವ ಪಕ್ಷವನ್ನೂ ಸೇರೊಲ್ಲ, ರಾಜಕೀಯದಿಂದಲೇ ದೂರವಿರುತ್ತೇನೆ ಎಂದು ಹೇಳಿದರು. ಆದರೆ ಈ ಬಾರಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಅವರು ಸೂಚ್ಯವಾಗಿ ಹೇಳಿದ್ದಾರೆ.
ʻʻನನಗೆ ವಯಸ್ಸಾಗಿದೆ. ಕ್ಷೇತ್ರದ ಜನರು ಬೇರೆಯವರಿಗೆ ನೀಡಿ ಎನ್ನುತ್ತಿದ್ದಾರೆ. ಜೊತೆಗೆ ಮಕ್ಕಳು ನಮಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ.ʼʼ ಎಂದು ಎನ್.ವೈ ಗೋಪಾಲಕೃಷ್ಣ ಹೇಳಿದರು.
ಮಂತ್ರಿ ಸ್ಥಾನ ನೀಡದ ಬಗ್ಗೆ ಬೇಸರ
ಆರು ಬಾರಿ ಗೆಲುವು ಸಾಧಿಸಿದರೂ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಬಗ್ಗೆ ಎನ್ವೈ ಗೋಪಾಲಕೃಷ್ಣ ಅವರಿಗೆ ಬೇಸರ ಇರುವುದು ಸ್ಪಷ್ಟವಾಗಿದೆ. ʻʻನಾಲ್ಕು ಬಾರಿ ಗೆದ್ದವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಆದರೆ ನಾನು ಆರು ಬಾರಿ ಶಾಸಕನಾದರೂ ಮಂತ್ರಿ ಸ್ಥಾನ ನೀಡಿಲ್ಲ. ಬಿಜೆಪಿಯೂ ನೀಡಿಲ್ಲ. ಕಾಂಗ್ರೆಸ್ ಸಹ ನೀಡಿಲ್ಲ. ಇದಕ್ಕೆ ಅಸಮಧಾನವಿದೆʼʼ ಎಮದು ಹೇಳಿದರು.
ʻʻನನಗೆ ಈಗ 73 ವರ್ಷ. ವಯಸ್ಸಾದ ಕಾರಣಕ್ಕೆ, ಆರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೂ ಸೇರೋದಿಲ್ಲ. ಅದಕ್ಕೆ ರಾಜಕೀಯದಿಂದ ದೂರವಿರುತ್ತೇನೆ. ರಾಜಕೀಯ ನಿವೃತ್ತಿ ಪಡೆಯಲೆಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಿದ್ದರೆ ಅವರು ಕರೆಯುವುದು, ಇವರು ಕರೆಯುವ ಗೊಂದಲ ಉಂಟಾಗುತ್ತದೆ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದೆಲ್ಲ ಸುದ್ದಿಯಾಗಿದೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲʼʼ ಎಂದಿದ್ದಾರೆ.
ಹಾಗಿದ್ದರೆ ಮುಂದಿನ ಕಥೆ ಏನು?
ಇದುವರೆಗಿನ ಮಾಹಿತಿ ಪ್ರಕಾರ ಎನ್ವೈ ಗೋಪಾಲಕೃಷ್ಣ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಸ್ವತಃ ಗೋಪಾಲಕೃಷ್ಣ ಅವರೇ ಬೇರೆ ಪಕ್ಷ ಸೇರುವ, ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸಿರುವುದರಿಂದ ಮುಂದೇನು ಎಂಬ ಕುತೂಹಲ ಮೂಡಿದೆ. ಒಂದು ಸಾಧ್ಯತೆಯ ಪ್ರಕಾರ, ಎನ್.ವೈ. ಗೋಪಾಲಕೃಷ್ಣ ಅವರ ಪುತ್ರ ಮೊಳಕಾಲ್ಮುರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅದಕ್ಕಾಗಿಯೇ ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟ.
ಆರು ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿದ್ದರು
ಎನ್. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ : Karnataka Elections : ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್ಗೆ
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ