ಕರ್ನಾಟಕ
Triple Talaq : ವಿದೇಶದಲ್ಲೇ ಕುಳಿತು Whatsappನಲ್ಲಿ ತಲಾಕ್ ತಲಾಕ್ ತಲಾಕ್ ಎಂಬ ಭೂಪ, ಠಾಣೆ ಮೆಟ್ಟಿಲೇರಿದ ಪತ್ನಿ
Triple Talaq : ವಿದೇಶದಲ್ಲಿ ಕುಳಿತ ವ್ಯಕ್ತಿ ಹೆಂಡತಿ ಜತೆ ಜಗಳ ಮಾಡಿಕೊಂಡು ತ್ರಿವಳಿ ತಲಾಕ್ ಸಂದೇಶ ಕಳುಹಿಸಿದ್ದಾನೆ. ಆಕೆ ಅದನ್ನು ಹಿಡಿದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ.
ಸುಳ್ಯ: ದೇಶದಲ್ಲಿ ತ್ರಿವಳಿ ತಲಾಕ್ (Triple talaq) ಕಾನೂನುಬಾಹಿರ ಎಂದು ಘೋಷಣೆಯಾಗಿದ್ದರೂ ಕೆಲವು ಹಳೆ ಚಾಳಿಗಳು ಇನ್ನೂ ಮುಂದುವರಿದಿವೆ. ಇಲ್ಲೊಬ್ಬ ಭೂಪ ವಿದೇಶದಲ್ಲೇ ಕುಳಿತು ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ವಾಟ್ಸ್ ಆ್ಯಪ್ನಲ್ಲಿ (talaq through whatsapp) ಮೂರು ಬಾರಿ ತಲಾಕ್ ಅಂತ ಟೈಪ್ ಮಾಡಿ ಕಳುಹಿಸಿಕೊಟ್ಟು ನನಗೂ ನಿನಗೂ ಇನ್ನು ಸಂಬಂಧವಿಲ್ಲ ಎಂದಿದ್ದಾನೆ. ಆದರೆ ತಲಾಕ್ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದಿರುವ ಪತ್ನಿ ಇದಕ್ಕೆ ಜಗ್ಗದೆ ಈಗ ಪೊಲೀಸ್ ಠಾಣೆ ಮೆಟ್ಟಿಲು (wife Complaints to Police Station) ಹತ್ತಿದ್ದಾಳೆ.
ಅವನಿರುವುದು ವಿದೇಶದಲ್ಲಿ. ಅವಳಿರುವುದು ಸುಳ್ಯದಲ್ಲಿ. ಅಲ್ಲಿಂದಲೇ ವಾಟ್ಸ್ ಆ್ಯಪ್ ಮಾಡಿರುವ ಈ ಘಟನೆಗೆ ಸಂಬಂಧಿಸಿ ಸುಳ್ಯ ಜಯನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳ ರಾಜ್ಯದ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯಾ ಎಂಬಾಕೆಯನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಬ್ದುಲ್ ರಶೀದ್ 2 ವರ್ಷ ಹಿಂದೆ ಮಿಸ್ರಿಯಾ ಅವರನ್ನು ವಿದೇಶಕ್ಕೆ ಕರೆಸಿಕೊಂಡಿದ್ದ. ಆ ಬಳಿಕ 2 ನೇ ಮಗುವಿನ ಹೆರಿಗೆಗಾಗಿ ಸುಳ್ಯಕ್ಕೆ ಕರೆತಂದು ಪತ್ನಿಯ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದ.
ಆದರೆ ಕಳೆದ ಆರು ತಿಂಗಳಿನಿಂದ ಇವರ ಸಂಸಾರದಲ್ಲಿ ವಿರಸ ಉಂಟಾಗಿತ್ತು. ಈ ಬಗ್ಗೆ ಸಂಬಂಧಿಕರು, ಹಿರಿಯರು ಮಾತನಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಇದಕ್ಕೆ ಆಸ್ಪದ ನೀಡದ ಅಬ್ದುಲ್ ರಶೀದ್, ಪತ್ನಿಯ ಮೊಬೈಲ್ಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ನ ಸಂದೇಶ ಕಳುಹಿಸಿದ್ದಾನೆ. ಇದರಿಂದ ಮನನೊಂದ ಮಿಸ್ರಿಯಾ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Triple Talaq: ಆನ್ಲೈನ್ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ
ಏನಿದು ತ್ರಿವಳಿ ತಲಾಕ್, ಭಾರತದಲ್ಲಿ ಯಾಕೆ ಮಾನ್ಯತೆ ಇಲ್ಲ?
ತ್ರಿವಳಿ ತಲಾಖ್ ಎನ್ನುವುದು ಮುಸ್ಲಿಮರಲ್ಲಿ ಗಂಡ-ಹೆಂಡತಿಯ ವಿಚ್ಛೇದನದ ಒಂದು ರೂಪ. ಮುಸ್ಲಿಂ ಗಂಡ ತಲಾಕ್ (ವಿಚ್ಛೇದನದ ಅರೇಬಿಕ್ ಪದ) ಅನ್ನು ಮೂರು ಬಾರಿ ಉಚ್ಚರಿಸುವ ಮೂಲಕ ತನ್ನ ಹೆಂಡತಿಯನ್ನು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಬಹುದು. ಉಚ್ಚಾರಣೆಯು ಮೌಖಿಕ ಅಥವಾ ಲಿಖಿತ ಅಥವಾ ಇತ್ತೀಚಿನ ದಿನಗಳಲ್ಲಿ ದೂರವಾಣಿ, ಎಸ್ಎಂಎಸ್, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳಂತಹ ಎಲೆಕ್ಟ್ರಾನಿಕ್ ವಿಧಾನಗಳಿಂದಲೂ ತಲುಪಿಸಬಹುದು. ವಿಚ್ಛೇದನಕ್ಕೆ ಪುರುಷನು ಯಾವುದೇ ಕಾರಣವನ್ನು ಉಲ್ಲೇಖಿಸುವ ಅಗತ್ಯವಿರಲಿಲ್ಲ ಮತ್ತು ಘೋಷಣೆಯ ಸಮಯದಲ್ಲಿ ಹೆಂಡತಿ ಹಾಜರಿರಬೇಕಾಗಿಲ್ಲ. ಸ್ವಲ್ಪ ಸಮಯದ ನಂತರ, ಹೆಂಡತಿ ಗರ್ಭಿಣಿಯಾಗಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ, ವಿಚ್ಛೇದನವನ್ನು ಬದಲಾಯಿಸಲಾಗುವುದಿಲ್ಲ ಎನ್ನುವುದು ಅದರ ನಿಯಮವಾಗಿತ್ತು.
ಆದರೆ, ಭಾರತದಲ್ಲಿ ಈಗ ಇದನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರವು ರೂಪಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2017ನ್ನು ರೂಪಿಸಿ 2019ರ ಜುಲೈ 30ರಂದು ಸಂಸತ್ತಿನಲ್ಲಿ ಅದಕ್ಕೆ ಅಂಗೀಕಾರ ಪಡೆದಿದೆ. ಮಸೂದೆ ಪ್ರಕಾರ ತ್ವರಿತ ತ್ರಿವಳಿ ತಲಾಖ್ (ತಲಾಖ್-ಎ-ಬಿದ್ದತ್) ಮಾನ್ಯವಲ್ಲ. ಮಾತನಾಡುವ, ಲಿಖಿತ ಅಥವಾ ಇಮೇಲ್, ಎಸ್ಎಂಎಸ್ ಮತ್ತು ವಾಟ್ಸಾಪ್ ನಂತಹ ಎಲೆಕ್ಟ್ರಾನಿಕ್ ವಿಧಾನದಲ್ಲಿ ನೀಡಿದ ತಲಾಕ್ ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದೆ ಎನ್ನುತ್ತದೆ ಈ ಮಸೂದೆ. ಇದನ್ನು ಬಳಸಿ ತಲಾಕ್ ಹೇಳುವ ಗಂಡನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕರ್ನಾಟಕ
Dakshin Bharat Utsav: ಪ್ರವಾಸೋದ್ಯಮ ಉತ್ತೇಜನಕ್ಕೆ ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್.ಕೆ. ಪಾಟೀಲ್
Dakshin Bharat Utsav: ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ವಲಯ ಉತ್ಸುಕವಾಗಿದ್ದು, ಖಾಸಗಿ ವಲಯದ ಈ ಸ್ವಯಂ ಪ್ರೇರಿತ ಆಸಕ್ತಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ (Dakshin Bharat Utsav) 500 ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದು ಬರಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ನಗರದಲ್ಲಿ ಡಿಸೆಂಬರ್ 14 ರಿಂದ 16 ರವರೆಗೆ ‘ದಕ್ಷಿಣ ಭಾರತ್ ಉತ್ಸವ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾವೇಶ ಪೂರ್ವ (ಕರ್ಟನ್ ರೈಸರ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ರಕ್ಷಿಸಲು, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ತಿಳಿಸಿದರು.
ದತ್ತು ನೀಡುವ ಸ್ಮಾರಕಗಳು, ದೇವಾಲಯಗಳು, ಚರ್ಚ್ಗಳು, ಮಸೀದಿಗಳು ಮತ್ತು ಇತರ ಪಾರಂಪರಿಕ ಸ್ಥಳಗಳಾಗಿರಬಹುದು, ಅವುಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಈ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ | Sub Registrar Office: ಸಬ್ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ; ಸೆ.30ವರೆಗೆ ಮಾತ್ರ ಅನ್ವಯ
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಇದರ ಹಿಂದೆ ಲಾಭದ ಉದ್ದೇಶವಿಲ್ಲ, ಪ್ರವಾಸಿಗರ ಆಕರ್ಷಣೆ ಮತ್ತು ಆ ಮೂಲಕ ಜಗತ್ತಿಗೆ ಕರ್ನಾಟಕವನ್ನು ಪರಿಚಯಿಸುವ ಮಹತ್ವದ ಕಾರ್ಯ ಆಗಲಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ರಾಜ್ಯವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಯುನೆಸ್ಕೋ ಈ ವರ್ಷ ಗುರುತಿಸಿರುವ ನಾಲ್ಕನೇ ತಾಣವೆಂದರೆ ಹೊಯ್ಸಳರ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇಗುಲಗಳು. ಈ ಹಿಂದೆ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿತ್ತು ಎಂದ ಸಚಿವರು, ರಾಜ್ಯ ಸರ್ಕಾರದ ʼಶಕ್ತಿʼ ಯೋಜನೆ ಯಶಸ್ಸಿನ ಪರಿಣಾಮ ಪ್ರವಾಸಿ ಕೇಂದ್ರಗಳು ಮತ್ತು ದೇಗುಲಗಳಿಗೆ ಹೆಚ್ಚಿನ ಸಾರ್ವಜನಿಕರು ಭೇಟಿ ನೀಡುವಂತೆ ಆಗಿದೆ ಎಂದು ತಿಳಿಸಿದರು.
ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಮನೋಹರ ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ಸಮುದ್ರ ಸಾಗರ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಹೀಗೆ ವಿವಿಧ ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿದ್ದು, ಈ ಅಂಶಗಳು ರಾಜ್ಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ‘ದಕ್ಷಿಣ ಭಾರತ ಉತ್ಸವದ ಪರಿಕಲ್ಪನೆಯನ್ನು ಸ್ವಾಗತಿಸುವುದಾಗಿ ತಿಳಿಸಿ, ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ | Power Generation: ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
“ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರೋಣ.” ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಗೆ ಹೇಗೆ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಉಲ್ಲೇಖಿಸಿ ಅವರು ವಿವರಿಸಿದರು.
ಸ್ವಾಗತ ಭಾಷಣ ಮಾಡಿದ ಎಫ್ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಡಿಸೆಂಬರ್ 14 ರಿಂದ 16 ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿರುವ ‘ದಕ್ಷಿಣ ಭಾರತ ಉತ್ಸವ’ವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಈ ‘ಉತ್ಸವʼ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವೇದಿಕೆಯಾಗಿದೆ, ಹೀಗಾಗಿ ಇದರಿಂದ ರಾಜ್ಯಗಳಿಗೆ ಆದಾಯವನ್ನು ತರುವುದಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು ಎಂದರು.
ಈ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಕರ್ನಾಟಕವು ಅನೇಕ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಸ್ಮಾರಕಗಳಿಗೆ ಧಕ್ಕೆಯಾಗದಂತೆ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಬಹುದು ಎಂದ ಅವರು, ಕರ್ನಾಟಕ ರಾಜ್ಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು, 600 ಭಾರತದ ಪುರಾತತ್ವ ಸಮೀಕ್ಷೆ(ASI) ಸಂರಕ್ಷಿತ ಸ್ಮಾರಕಗಳು ಮತ್ತು 800 ರಾಜ್ಯ ಸಂರಕ್ಷಿತ ಸ್ಮಾರಕಗಳ ವೈಶಿಷ್ಟ್ಯತೆಯನ್ನು ಹೊಂದಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ ಎಂದರು.
ಇದನ್ನೂ ಓದಿ | Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
ಎಫ್ಕೆಸಿಸಿಐ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಜಿ.ಕೆ.ಶೆಟ್ಟಿ ಅವರು ಮಾತನಾಡಿ, ದಕ್ಷಿಣ ರಾಜ್ಯಗಳಲ್ಲಿ ‘ದಕ್ಷಿಣ ಭಾರತ ಉತ್ಸವವನ್ನು ಸರದಿಯ ಆಧಾರದ ಮೇಲೆ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಎಫ್ಕೆಸಿಸಿಐ ಸಕ್ರಿಯವಾಗಿ ಭಾಗವಹಿಸುತ್ತದೆ. ದಕ್ಷಿಣದ ರಾಜ್ಯಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ತರುತ್ತದೆ ಎಂದು ವಿವರಿಸಿದರು.
ರಾಜ್ಯದ ಹೊಯ್ಸಳರ ಮೂರು ದೇಗುಲಗಳು ಯೂನೆಸ್ಕೋದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೋಂಡಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಇದರಿಂದ ರಾಜ್ಯವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಹೀಗಾಗಿ 550 ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಡಿ ಇರಿಸಿದೆ
| ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವರು
ವಿಜಯನಗರ
Vijayanagara News: ಹಗರಿಬೊಮ್ಮನಹಳ್ಳಿಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಡಿಸಿ ದಿವಾಕರ್ ದಿಢೀರ್ ಭೇಟಿ
Vijayanagara News: ಹಗರಿಬೊಮ್ಮನಹಳ್ಳಿ ತಾಲೂಕಿನ ಆಸ್ಪತ್ರೆ, ಹಾಸ್ಟೆಲ್, ಶಾಲೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಹಗರಿಬೊಮ್ಮನಹಳ್ಳಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ಆಗಮಿಸುವ ರೋಗಿಗಳಿಗೆ (Patients) ಆಸನ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ (Infrastructure) ಒದಗಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಸಾರ್ವಜನಿಕರ ಆಸ್ಪತ್ರೆ, ವಿವಿಧ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಳಿಕ ಅವರು ಮಾತನಾಡಿದರು.
ಚಿಕಿತ್ಸೆ ಪಡೆಯಲು ಬರುವ ರೋಗಿಗಳು ನಿಲ್ಲದಂತೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಆಸ್ಪತ್ರೆ ಆವರಣದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಬೇಕಾದ ಅಗತ್ಯ ಸೌಕರ್ಯದ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
ಆಸ್ಪತ್ರೆಗೆ ಅವಶ್ಯವಿರುವ ಚಿಕಿತ್ಸಾ ಸಲಕರಣೆಗಳ ಮಾಹಿತಿ ಪಡೆದರು. ನಂತರ ರೋಗಿಗಳಿಗೆ ಆಸ್ಪತ್ರೆಯಿಂದಲೇ ಅಗತ್ಯ ಔಷಧಿ ನೀಡಬೇಕು, ರೋಗಿಗಳಿಂದಲೇ ತರಿಸಿಕೊಳ್ಳುವುದು ಕಂಡುಬಂದಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಈಗಾಗಲೇ ವೈದ್ಯರ ನೇಮಕಕ್ಕೆ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಅವರು ಭೂಮಿ, ಪಹಣಿ ಸೇರಿದಂತೆ ಇತರ ಸರ್ಕಾರಿ ಸೇವೆಗಳು ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ನಂತರ ಸರ್ಕಾರದ ಸೇವೆ ಪಡೆಯಲು ಬಂದಿದ್ದ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.
ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಹಾಗೂ ಊಟೋಪಚಾರದ ಬಗ್ಗೆ ಮಾಹಿತಿ ಪಡೆದರು.
ನಂತರ ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಗೆ ಭೇಟಿ ನೀಡಿ, ನಗರೋತ್ಥಾನ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ವರದಿ, ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಹೆಚ್ಚಿದ್ದು, ಸಂಬಂಧಪಟ್ಟ ಮಾಲೀಕರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗೋಶಾಲೆಗೆ ರವಾನಿಸಲು ಕ್ರಮಕೈಗೊಳ್ಳಲು ಡಿಸಿ ಸೂಚಿಸಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ನಂತರ ರಾಮನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಾಲಕಳೆದು ನಂತರ ಶಾಲೆಗೆ ಒದಗಿಸಬೇಕಾದ ಮೂಲ ಸೌಕರ್ಯದ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು.
ತುಮಕೂರು
Tumkur News: ಗುಬ್ಬಿಯಲ್ಲಿ ನೇಗಿಲು ಕಾವ್ಯ ಅಭಿಯಾನಕ್ಕೆ ಸಾಹಿತಿ ಸಂತೋಷ್ ಮಡೆನೂರು ಚಾಲನೆ
Tumkur News: ಗುಬ್ಬಿ ತಾಲೂಕಿನ ಸಾವಯವ ಕೃಷಿಕ ಮಹೇಶ್ ರವರ ಮಣ್ಣಿನ ಮನೆಯಲ್ಲಿ ಶುಕ್ರವಾರ ನೇಗಿಲು ಕಾವ್ಯ ಅಭಿಯಾನ ಕಾರ್ಯಕ್ರಮ ಜರುಗಿತು.
ಗುಬ್ಬಿ: ಕನ್ನಡ ಸಾಹಿತ್ಯವನ್ನು (Kannada Literature) ಶ್ರೀಮಂತಗೊಳಿಸುವ ಜತೆಗೆ ರೈತರಲ್ಲಿ (Farmers) ಹಾಗೂ ಜನಸಾಮಾನ್ಯರಲ್ಲಿ ಪರಿಸರ (Environment) ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಸ್ಯಯಜ್ಞ ತಂಡವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಾಹಿತಿ ಸಂತೋಷ್ ಮಡೆನೂರು ತಿಳಿಸಿದರು.
ತಾಲೂಕಿನ ಸಾವಯವ ಕೃಷಿಕ ಮಹೇಶ್ ಅವರ ಮಣ್ಣಿನ ಮನೆಯಲ್ಲಿ ಶುಕ್ರವಾರ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ ಹಾಗೂ ಪರಿಸರ ವಿನಾಶದ ಬಗ್ಗೆ ಜಾಗೃತಿ ಮೂಡಿಸಲು ಸಾಹಿತ್ಯ ರಚನೆಯ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. ಸಸ್ಯಯಜ್ಞ ತಂಡದ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ಜಾಗೃತಿ ಮೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುವುದನ್ನು ಅರಿತಿರುವ ನಾವು ನಿರಂತರವಾಗಿ ಜನರ ಒಡನಾಟದೊಂದಿಗೆ ಉತ್ತಮ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಉತ್ತಮ ಸಾಹಿತ್ಯ ರಚನೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೃಷಿಕ ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿತ್ತುವುದರಿಂದ ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪ್ರಸ್ತುತ ಸಂದರ್ಭದಲ್ಲಿ ಸಾವಯವ ಪದ್ಧತಿ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವುದು ರೈತರಿಗೆ ಅನಿವಾರ್ಯವಾಗಿದೆ ಎಂದರು.
ಬರಹಗಾರರು ಕನ್ನಡ ಸಾಹಿತ್ಯದ ಜತೆಯಲ್ಲಿಯೇ ಕೃಷಿ ಸಾಹಿತ್ಯ ರಚನೆಯತ್ತಲೂ ಗಮನ ಹರಿಸಿದರೆ ರೈತರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುವುದು ಎಂದರು .
ರೈತರು ಪ್ರಕೃತಿದತ್ತವಾಗಿ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಹಾಗೂ ಕೃಷಿಕ ಮಹೇಶ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಸ್ಯ ಯಜ್ಞ ತಂಡದ ಪ್ರಭುಸ್ವಾಮಿ, ರೈತರಾದ ಮೋಹನ್ ಕುಮಾರ್, ಶಿವನಂಜಪ್ಪ,ರಾಜಣ್ಣ,ಕಂಬಯ್ಯ, ಮಲ್ಲಿಕಾರ್ಜುನ, ಪರಶುರಾಮ್, ಹಾಗೂ ಹಲವಾರು ಗ್ರಾಮಸ್ಥರು ಹಾಜರಿದ್ದರು.
ಉತ್ತರ ಕನ್ನಡ
Uttara Kannada News: ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಡಿಸಿ ಗಂಗೂಬಾಯಿ ಮಾನಕರ್
Uttara Kannada News: ಕಾರವಾರ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರವಾರ: ಪ್ರಸಕ್ತ ಸಾಲಿನ ಕಬ್ಬು (Sugarcane) ಅರೆಯುವ ಹಂಗಾಮು ನವೆಂಬರ್ 1 ರಿಂದ 15ರ ವರೆಗೆ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ (Sugar Factory) ವತಿಯಿಂದ ಜಿಲ್ಲೆಯ ಕಬ್ಬು ಬೆಳೆಗಾರರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2022-23 ರಲ್ಲಿ 10,18,382 ಮೆ. ಟನ್ ಕಬ್ಬು ನುರಿಸಲಾಗಿದ್ದು, 1,19,478 ಮೆ.ಟನ್ ಸಕ್ಕರೆ ಉತ್ಪಾದಿಸುವುದರೊಂದಿಗೆ 11.97% ಶೇಕಡಾ ಇಳುವರಿ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 6,633 ಹೆಕ್ಟೇರ್ ಹೊಸ ಕಬ್ಬು ಹಾಗೂ 8,005 ಹೆಕ್ಟೇರ್ ಕುಳೆ ಕಬ್ಬು ಸೇರಿದಂತೆ ಒಟ್ಟು 14,638 ಹೆಕ್ಟೇರ್ನಲ್ಲಿ ಕಬ್ಬು ಬೆಳೆಯಲಾಗಿದೆ.
ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಹಳಿಯಾಳ ತಾಲೂಕಿನ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಇವರು ಪ್ರತಿ ಟನ್ ಗೆ ರೂ.3678 ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗಧಿಪಡಿಸಿದ್ದಾರೆ. ಜಿಲ್ಲೆಯ ಕಬ್ಬು ಬೆಳಗಾರರಿಂದ ಕಬ್ಬು ಖರೀದಿಸುವ ಸಂದರ್ಭದಲ್ಲಿ ಬೆಳಗಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪರಸ್ಪರ ಸಮನ್ವಯದಿಂದ ಕಬ್ಬು ಖರೀದಿಯ ಎಲ್ಲಾ ಪ್ರಕ್ರಿಯೆಯನ್ನು ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಅವರು ರೈತರು ಕಾರ್ಖಾನೆಗೆ ತರುವ ಕಬ್ಬನ್ನು ತೂಕ ಮಾಡುವಾಗ ಬೆಳಗಾರರು ಮತ್ತು ಕಾರ್ಖಾನೆಯ ನಡುವೆ ಗೊಂದಲಗಳು ಇದ್ದು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ತೂಕ ಮಾಡುವಂತೆ ಮತ್ತು ತೂಕದ ಪ್ರಮಾಣವನ್ನು ಬೆಳಗಾರರು ನೋಡಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಮುಂದಿನ ಅವಧಿಯ ವೇಳೆಗೆ ಕಾರ್ಖಾನೆಯ ಪ್ರವೇಶ ದ್ವಾರದಲ್ಲಿಯೇ ತೂಕ ಪರೀಕ್ಷಿಸಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಇತರೆ ಜಿಲ್ಲೆಯಲ್ಲಿ ಪ್ರತಿ ಟನ್ ಗೆ 772 ದರ ಇದ್ದು, ಜಿಲ್ಲೆಯಲ್ಲಿ 893 ರೂ. ದರ ಇದೆ ಎಂದು ಅಸಮದಾನ ವ್ಯಕ್ತಪಡಿಸಿ, ಹಿಂದಿನ ಆದೇಶದ ಪ್ರಕಾರ ದರ ಪಡೆಯುವಂತೆ ತಿಳಿಸಿದರು. ಈ ಕುರಿತಂತೆ ಕಾರ್ಖಾನೆಯ ಅಧಿಕಾರಿಗಳು ಪರಿಶೀಲಿಸಿ ದರ ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಖಾನೆಗೆ ತೆಗೆದುಕೊಂಡು ಬಂದ ಕಬ್ಬನ್ನು ಕೂಡಲೇ ತೂಕ ಮಾಡದೇ 2-3 ದಿನ ತಡವಾಗಿ ತೂಕ ಮಾಡುವುದರಿಂದ ಕಬ್ಬು ಒಣಗಿ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಪ್ಲಾಂಟೇಷನ್ ಸ್ಲಿಪ್ ಮತ್ತು ಆದ್ಯತಾ ಪಟ್ಟಿ ನೀಡಬೇಕು. ಪ್ರತಿದಿನ ರಿಕವರಿಯನ್ನು ಪಾರದರ್ಶಕವಾಗಿ ತೋರಿಸುವಂತೆ ರೈತರು ಆಗ್ರಹಿಸಿದರು. ಜಿಲ್ಲೆಯ ಕಬ್ಬು ಬೆಳಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಸಕ್ಕರೆ ಕಾರ್ಖಾನೆಯು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಉಳಿದಂತೆ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ 2016-17 ರಲ್ಲಿನ ಎಫ್.ಆರ್.ಪಿ ಮೇಲಿನ ಹೆಚ್ಚುವರಿ ಬಾಕಿ ಮೊತ್ತ ರೂ.305 ರೂಪಾಯಿಗಳನ್ನು ಬೆಳಗಾರರಿಗೆ ಪಾವತಿಸುವಂತೆ ತಿಳಿಸಿದರು. ಈ ಹಿಂದೆ ರೈತರ ಮೇಲೆ ಕಾರ್ಖಾನೆ ದಾಖಲಿಸಿರುವ ಪ್ರಕರಣಗಳ ವಿವರ ಪಡೆದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಇ.ಐ.ಡಿ.ಪ್ಯಾರಿ (ಇಂಡಿಯಾ) ಪ್ರೈ.ಲಿ ವ್ಯವಸ್ಥಾಪಕ ವೆಂಕಟರಾವ್, ಕಬ್ಬು ಬೆಳಗಾರರ ಮುಖಂಡರು ಮತ್ತು ರೈತ ಮುಖಂಡರು ಮತ್ತಿತರರು ಭಾಗವಹಿಸಿದ್ದರು.
-
ಪ್ರಮುಖ ಸುದ್ದಿ11 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ24 hours ago
Rupert Murdoch: ಫಾಕ್ಸ್ ಮತ್ತು ನ್ಯೂಸ್ ಕಾರ್ಪ್ ಅಧ್ಯಕ್ಷ ಹುದ್ದೆ ತೊರೆದ ‘ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ22 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ21 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಆರೋಗ್ಯ14 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!