ಕರ್ನಾಟಕ
Cauvery Dispute: ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದರೆ, ಖರ್ಗೆ ಮೌನವಾಗಿದ್ದರು ಎಂದ ಎಚ್ಡಿಕೆ
Cauvery Dispute: ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ದೇವೇಗೌಡರು ಆಗ ರಾಜ್ಯದವರೇ ಆಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಲ್ಲಿ ಹೋಗಿದ್ದರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಮನಗರ: ದೇವೇಗೌಡರು ದಿಲ್ಲಿಯಲ್ಲಿ ಕಾವೇರಿ (Cauvery Dispute) ಬಗ್ಗೆ ಮಾತನಾಡುತ್ತಿದ್ದರೆ, ಕೆಲವರು ಮೈತ್ರಿ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ದೇವೇಗೌಡರು ಹೋಗಿರುವುದು ಕಾವೇರಿ ಬಗ್ಗೆ ಮಾತಾಡಲು ಅಲ್ಲ ಅಂತ ಮಂಡ್ಯದ ಮಹಾ ನಾಯಕರು ಒಬ್ಬರು ಹೇಳಿದ್ದಾರೆ. ಇವರೆಲ್ಲಾ ನಿನ್ನೆ ಮೊನ್ನೆ ಬಂದವರು. ದೇವೇಗೌಡರ ಕಮಿಟ್ಮೆಂಟ್ ಬಗ್ಗೆ ಇವರಿಗೇನು ಗೊತ್ತು? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ದೇವೇಗೌಡರು ಮಾತಾಡಿದ್ದು ಎಲ್ಲ ಗಮನಿಸಿದ್ದೀರಿ. ಆಗ ರಾಜ್ಯದವರೇ ಆಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಲ್ಲಿ ಹೋಗಿದ್ದರು? ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಏನಾಗಿದೆ? ತಮಿಳುನಾಡಿನವರು ಈ ವಿಚಾರ ಪ್ರಸ್ತಾಪ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಮಾತಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜಲ ಸಂಕಷ್ಟವನ್ನು ದೇವೇಗೌಡರು ಸದನದ ಮುಂದೆ ಇಟ್ಟರು. ಅವರು ಭಾಷಣ ಮಾತನಾಡುತ್ತಿದ್ದರೆ ತಮಿಳುನಾಡಿನ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರು. ಅವರನ್ನು ಎದುರಿಸಲು ಕೂತು ಮಾತನಾಡುತ್ತಿದ್ದ ದೇವೇಗೌಡರು ಎದ್ದು ನಿಂತರು. ಕೊನೆಪಕ್ಷ ತಮಿಳುನಾಡಿಗೆ ನೀರು ಹರಿಸುವ ಮುನ್ನ ಆ ದೃಶ್ಯವನ್ನಾದರೂ ಕಣ್ಮುಂದೆ ತಂದುಕೊಳ್ಳಬಹುದಿತ್ತಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.
ಇದನ್ನೂ ಓದಿ | Land Auditing : ಬೆಂಗಳೂರಲ್ಲಿ 75000 ಎಕರೆ ಸರ್ಕಾರಿ ಭೂ ಒತ್ತುವರಿ; ಲ್ಯಾಂಡ್ ಆಡಿಟಿಂಗ್ಗೆ ಸಿಎಂ ಸೂಚನೆ
ಪ್ರತಿನಿತ್ಯವೂ ಈ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯುತ್ತಿದೆ. ರಾಜ್ಯಸಭೆಯಲ್ಲಿ ದೇವೇಗೌಡರು ಏಕಾಂಗಿ ಹೋರಾಟ ಮಾಡಬೇಕು. ಅವರಿಗೆ ಬೆಂಬಲ ಕೊಡಲು ಯಾರೂ ಗತಿಯಿಲ್ಲ ಅಲ್ಲಿ. ನಿಮ್ಮವರೂ ಇದಾರಲ್ಲಾ ರಾಜ್ಯಸಭೆಯಲ್ಲಿ. ಯಾಕೆ ಮಾತಾಡ್ತಾ ಇಲ್ಲ ಎಂದು ಕುಟುಕಿದರು.
ಸುಪ್ರೀಂ ಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡಿ ಎಂದು ಸೂಚನೆ ನೀಡಿದಾಕ್ಷಣ ರಾಜ್ಯ ಸರ್ಕಾರವು ತಡಮಾಡದೆ ಸುಪ್ರೀಂ ಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು. ಅದು ಬಿಟ್ಟು ತಮಿಳುನಾಡಿಗೆ ನೀರು ಬಿಡುವ ಆತುರ ಮಾಡಿದ್ದು ಯಾಕೆ? ಒಕ್ಕೂಟ ವ್ಯವಸ್ಥೆಯ ಬಗ್ಗೆಯೇ ಕನ್ನಡಿಗರಿಗೆ ಭ್ರಮನಿರಸನ ಆಗುತ್ತಿದೆ ಎಂದು ನಾವು ಅತ್ಯಂತ ಆಕ್ರೋಶದಿಂದಲೇ ಹೇಳಲೇಬೇಕು. ತಮಿಳುನಾಡು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಇಲ್ಲಿ ನಾವು ಅಣೆಕಟ್ಟು ಕಟ್ಟಿದ್ದೇವೆ. ನಮ್ಮ ಜನರ ಹಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದೇವೆ. ಕೇಂದ್ರ ಸರ್ಕಾರ ನಮಗೇನೂ ಇದಕ್ಕೆ ಹಣ ಕೊಟ್ಟಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕ್ತಾರಾ?
ಅಣೆಕಟ್ಟು ಇರುವುದು ನಮ್ಮಲ್ಲಿ, ಅದನ್ನು ಕಟ್ಟಿದ್ದು ನಾವು. 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂಡಿದ್ದೇವೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕಾ? ಎಂದು ಕಿಡಿಕಾರಿದ ಅವರು, ಅಂತಿಮವಾಗಿ ನಾವು ಕೂಡ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟು ವರ್ಷ ಈ ದಬ್ಬಾಳಿಕೆ ಸಹಿಸಲು ಸಾಧ್ಯ? ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕ್ತಾರಾ? ಹಾಕಲಿ ಬಿಡಿ. ಅರೆಸೇನಾ ಪಡೆಯನ್ನು ಕರೆಸುತ್ತಾರಾ? ಕರೆಸಲಿ ನೋಡೋಣ. ಹೀಗೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರೆ ಸಹಿಸಲು ಸಾಧ್ಯವೇ? ಇದು ಯಾವ ಸೀಮೆ ಒಕ್ಕೂಟದ ವ್ಯವಸ್ಥೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿ ಹೋರಾಟ ಮಾಡಲೇಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂಥ ಸಂದರ್ಭಗಳಲ್ಲಿ ಒಗ್ಗೂಡುತ್ತಾರೆ? ಹಾಗೆಯೇ ನಾವೂ ಒಗ್ಗೂಡಬೇಕು. ಆದರೆ, ರಾಜಕೀಯ ಅಂತ ನಾವಿಲ್ಲಿ ಹೊಡೆದಾಡಿಕೊಂಡು ಕೂತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಾನು ದೆಹಲಿಗೆ ಹೋದಾಗ ಈ ಬಗ್ಗೆ ಮಾತನಾಡುತ್ತೇನೆ. ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಕಾರಣಕ್ಕೆ ಇದರ ಬಗ್ಗೆ ಮಾತಾಡಲು ಹಿಂದೆಮುಂದೆ ನೋಡುವುದಿಲ್ಲ. ಮೈತ್ರಿ ಬಗ್ಗೆ ಮಾತಾಡುವ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಕೂಡ ಚರ್ಚೆ ನಡೆಸುತ್ತೇನೆ. ರಾಜ್ಯದ ಹಿತವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ಹಾಗೆಯೇ, ಬಿಜೆಪಿಯವರು ಧೈರ್ಯದಿಂದ ಮೋದಿ ಅವರ ಬಳಿ ಹೋಗಿ ಮಾತಾಡಲಿ. ನಾನೂ ಪ್ರಾಮಾಣಿಕವಾಗಿ ಸಲಹೆ ಕೊಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡಿತು
ಅಗಸ್ಟ್ 10ರಂದು ಕಾವೇರಿ ಜಲ ನಿಯಂತ್ರಣ ಸಭೆ, ಅಗಸ್ಟ್ 11ರಂದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಅತ್ತ ನೀರು ಬಿಡಲು ಕರ್ನಾಟಕಕ್ಕೆ ಪ್ರಾಧಿಕಾರ ಸೂಚನೆ ನೀಡಿದ ಮರುದಿನವೇ ತಮಿಳುನಾಡು ರಾಜ್ಯವು ತುರ್ತಾಗಿ ಸುಪ್ರೀಂ ಕೋರ್ಟ್ಗೆ ಹೋಗಬೇಕಿತ್ತು. ಹಾಗೆ ಮಾಡಲಿಲ್ಲ, ರಾಜ್ಯ ಸರ್ಕಾರ ವಿನಾಕಾರಣ ಕಾಲಹರಣ ಮಾಡಿತು ಎಂದು ಅವರು ನೇರ ಆರೋಪ ಮಾಡಿದರು.
ಸೋಮವಾರದಂದು ಮುಂದಿನ 15 ದಿನ ನೆರೆರಾಜ್ಯಕ್ಕೆ ನಿತ್ಯವೂ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ ಕೂಡಲೇ ರಾಜ್ಯ ಸರ್ಕಾರ ಒಂದು ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕಿತ್ತು. ಮಧ್ಯರಾತ್ರಿ ಆದರೂ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಎಷ್ಟೋ ಸಂದರ್ಭದಲ್ಲಿ ಮಧ್ಯರಾತ್ರಿ ಸಮಯದಲ್ಲಿಯೂ ಸುಪ್ರೀಂ ಕೋರ್ಟ್ ಕಲಾಪ ನಡೆದಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಪೂರ್ಣ ವಿಫಲವಾಗಿದೆ. ಸರ್ಕಾರಕ್ಕೆ ಕಾನೂನು ತಜ್ಞರು ಸಲಹೆ ಕೊಡಲಿಲ್ಲವಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಗೌರಿ ಗಣೇಶ ಹಬ್ಬವನ್ನು ಜನರು ಆಚರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ನೆರೆರಾಜ್ಯದ ಒತ್ತಡಕ್ಕೆ ಮಣಿದು ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿಯಬೇಕಿತ್ತು ಎಂದರು.
ತಮಿಳುನಾಡು ಸುಪ್ರೀಂ ಕೋರ್ಟ್ ಮುಂದೆ ಹೋಗಿರುವುದರಿಂದ ಕೋರ್ಟ್ ಆದೇಶ ಬರುವವರೆಗೂ ಕಾಯಬೇಕಿತ್ತು. ಈಗ ನೀರು ಬಿಡಲು ತರಾತುರಿ ಏನಿದೆ? ಯಾಕೆ ಮೊದಲೇ ನೀರು ಬಿಡಬೇಕಿತ್ತು? ನಾನು ಸಿಎಂ ಆಗಿದ್ದಾಗ ಇಂಥ ಆದೇಶ ಬಂದಾಗ ರಿವ್ಯೂ ಪಿಟಿಷನ್ ಹಾಕಿದ್ದೆವು. ಅಂಥ ಅರ್ಜಿ ಸಲ್ಲಿಸುವುದಕ್ಕೆ ಇವರಿಗೆ ಏನಾಗಿತ್ತು? ಎಂದು ಖಾರವಾಗಿ ಹೇಳಿದರು.
ನಾವು ನೀರನ್ನು ಬಿಡದೇ ಇದ್ದರೆ, ಕೋರ್ಟ್ ನಲ್ಲಿ ನಮ್ಮ ವಿರುದ್ದ ಆದೇಶ ಬರಬಹುದು ಎಂದು ನಿನ್ನೆ ರಾತ್ರಿ ಯಿಂದಲೇ ತಮಿಳುನಾಡಿಗೆ ನೀರನ್ನು ಸರ್ಕಾರ ಹರಿಸುತ್ತಿದೆ. ಪ್ರಾಧಿಕಾರದ ಸೂಚನೆ ಬಂದ ಕೂಡಲೇ ವಿವೇಚನಾಹೀನರಾಗಿ ಜಲ ಸಂಪನ್ಮೂಲ ಸಚಿವರು ತರಾತುರಿಯಲ್ಲಿ ನೀರು ಹರಿಸುವ ನಿರ್ಧಾರ ಮಾಡಿರುವುದು ಸರಿಯಲ್ಲ. ಇಬ್ಬರು ನಮ್ಮ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಅವರು ದೂರಿದರು.
ಹಿಂದಿನ ಸರ್ಕಾರಗಳು ನೀರು ಬಿಟ್ಟಿಲ್ಲವೇ ಎಂದು ಸಚಿವರು ಕೇಳುತ್ತಿದ್ದಾರೆ. ಮಳೆಯ ಅಭಾವದಿಂದ ಕೃಷಿಗೆ ನೀರು ಕೊಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹಾಕಿರುವ ಬೆಳೆಗಳಿಗೆ ಬೆಂಕಿ ಇಡುವ ಸ್ಥಿತಿಗೆ ರೈತರು ಬಂದಿದ್ದಾರೆ. ಇದರ ಜತೆ ಜತೆಗೆ ನಮ್ಮ ರೈತರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸಭೆಗಳು ನಡೆದಾಗ ನಮ್ಮ ರಾಜ್ಯದ ಹಿರಿಯ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸದೇ ಲಘುವಾಗಿ ತೆಗೆದುಕೊಂಡಿದ್ದಾರೆ. ಅಲ್ಲಿ ನೋಡಿದರೆ ತಮಿಳುನಾಡಿನ ಹತ್ತು ಹದಿನೈದು ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುತ್ತಾರೆ. ಪಾಪ.. ನಮ್ಮ ಅಧಿಕಾರಿಗಳಿಗೆ ಬಿಡುವೇ ಇಲ್ಲ. ಪ್ರಾಧಿಕಾರ ಮತ್ತು ಜಲ ನಿಯಂತ್ರಣ ಸಮಿತಿ ಸಭೆಗಳಿಗೆ ವರ್ಚುವಲ್ ಮೂಲಕ ಹಾಜರಾಗುತ್ತಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಡ್ಯಾನುಬ್ ನದಿ ನೀರು ಹಂಚಿಕೆ ಎಸ್ಎಲ್ ಭೈರಪ್ಪ ಸಲಹೆಗೆ ಮಾಜಿ ಸಿಎಂ ಸಹಮತ
ಕನ್ನಡದ ದಿನಪತ್ರಿಕೆಯೊಂದರಲ್ಲಿ ಹಿರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ಯುರೋಪಿನ ಎಂಟು ದೇಶಗಳಲ್ಲಿ ಹರಿಯುವ ಡ್ಯಾನುಬ್ ನದಿ ಹಾಗೂ ಅದರ ನೀರು ಹಂಚಿಕೆಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪ ಮಾಡಿದರು.
ಎಸ್ಎಲ್ ಭೈರಪ್ಪ ಅವರ ಹೇಳಿಕೆ ಅರ್ಥಪೂರ್ಣವಾಗಿದೆ. ಅದಕ್ಕೆ ನನ್ನ ಸಹಮತ ಇದೆ. ಯುರೋಪಿನ ಎಂಟು ದೇಶಗಳ ನಡುವೆ ಇರುವ ವಿವಾದ ಇದು. ಆ ನದಿಯ ಬಗ್ಗೆ ಬಂದಿರುವ ಕೆಲ ವರದಿಗಳು, ವಿಶ್ಲೇಷಣೆಗಳ ಬಗ್ಗೆ ನಾನು ಓದುತ್ತಿದ್ದೇನೆ. ಕೋರ್ಟ್ಗಳಲ್ಲಿ ಆ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸಾದ್ಯವಿಲ್ಲ. ನೀವೇ ಪರಸ್ಪರ ಕುಳಿತು ಪರಿಹರಿಸಿಕೊಳ್ಳಿ ಅಂತ ಅಂತಾರಾಷ್ಟ್ರೀಯ ಕೋರ್ಟ್ ಹೇಳಿದೆ ಎಂಬುದನ್ನು ಎಂದು ಅನೇಕ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ನಾವು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಷ್ಟೇ ಏಕೆ, ದೇವೇಗೌಡರು ಪ್ರಧಾನಿ ಆಗಿದ್ದಾಗ ಭಾರತ, ಬಾಂಗ್ಲಾದೇಶದ ನಡುವಿನ ಗಂಗಾ ನದಿ ನೀರಿನ ವಿವಾದವನ್ನು ಬಗೆಹರಿಸಿದರು. ಗುಜರಾತ್, ಮಧ್ಯಪ್ರದೇಶಕ್ಕೆ ದೊಡ್ಡ ಸಮಸ್ಯೆ ಆಗಿದ್ದ ನರ್ಮದಾ ನದಿ ಬಿಕ್ಕಟ್ಟನ್ನು ಸುನಾಯಾಸವಾಗಿ ಬಗೆಹರಿಸಿದರು. ಹೀಗಾಗಿ ಕಾವೇರಿ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ ಇಲ್ಲವೇ? ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಿದೆ ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ ಅಗತ್ಯ
ಅಂತಾರಾಜ್ಯ ಜಲ ವಿವಾದಗಳು ಪದೆ ಪದೇ ಕಗ್ಗಂಟು ಆಗುವುದನ್ನು ತಪ್ಪಿಸಲು ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ (integrated reservoir management system) ಅಗತ್ಯ. ಕೆಲವು ಕಡೆ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಮಾದರಿ ರೀತಿಯಲ್ಲಿ ನೀರು ಹಂಚಿಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರಕಾರ ಹಾಗೂ ಪ್ರಧಾನಮಂತ್ರಿಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಇದನ್ನೂ ಓದಿ | Cauvery Water Dispute: ಕಾವೇರಿ ನೀರು ಬಿಟ್ಟು, ರೈತರ ಬದುಕಿನ ಜತೆ ಸರ್ಕಾರ ಚೆಲ್ಲಾಟ: ಎಚ್.ಡಿ.ಕುಮಾರಸ್ವಾಮಿ
ಅಲ್ಲದೆ, ಯುಎಸ್ ಬಿಆರ್ (United States Bureau of Reclamation-USBR) ಎಂಬ ಅಮೆರಿಕ ಸಂಸ್ಥೆಯ ನಿರ್ದೇಶನದಂತೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಜಗತ್ತಿನ ಅನೇಕ ದೇಶಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ನೀರಿನ ಸದ್ಬಳಕೆ, ಹಂಚಿಕೆ ಬಗ್ಗೆ ಆ ಸಂಸ್ಥೆಯ ಮಾರ್ಗಸೂಚಿಯನ್ನು ನಾವೂ ಅಳವಡಿಸಿಕೊಳ್ಳಬಹುದೆ ಎನ್ನುವ ಬಗ್ಗೆಯೂ ಕೇಂದ್ರ ಸರ್ಕಾರ ಆಲೋಚನೆ ಮಾಡಬೇಕು ಅಥವಾ ಆ ಸಂಸ್ಥೆಯ ನೆರವನ್ನೆ ಪಡೆದು ಕಾವೇರಿ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು, ಅಲ್ಲವೇ ಎಂದು ಕುಮಾರಸ್ವಾಮಿ ಅವರು ಸಲಹೆ ಮಾಡಿದರು.
ಕರ್ನಾಟಕ
Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ
Cauvery Water Dispute: ರಾಜ್ಯದ ಸ್ಥಿತಿ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು: ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು. ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) (Cauvery Water Dispute) ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ವೈ.ವಿಜಯೇಂದ್ರ ಅವರು, ‘ಗಾಯದ ಮೇಲೆ ಬರೆ’ ಎಳೆದಂತೆ ಸಿಡಬ್ಲ್ಯುಆರ್ಸಿಯಿಂದ ಮತ್ತೆ 3000 ಕ್ಯೂಸೆಕ್ ನೀರು ಬಿಡುವ ಆದೇಶ ಪಡೆದು, ಸರ್ಕಾರವು ಕರ್ನಾಟಕದ ಪಾಲಿಗೆ ಕರಾಳ ಶಾಸನ ಬರೆಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕರುನಾಡು ಉದ್ವಿಗ್ನ ಗೊಂಡಿದೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ರೈತ ಬಂಧುಗಳು ಕಂಗಾಲಾಗಿದ್ದಾರೆ. ಇಷ್ಟಾದರೂ ಕಾವೇರಿ ಉಳಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಥವಾಗಿ ಹೋರಾಡಲು ಕನಿಷ್ಠ ಕಾಳಜಿಯೂ ತೋರದೇ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉಡಾಫೆಯ ಮಾತನಾಡಿಕೊಂಡು ಕನ್ನಡಿಗರ ಕತ್ತು ಹಿಸುಕುತ್ತಿದ್ದಾರೆ. ಕಾವೇರಿ ಪರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ…
— Vijayendra Yediyurappa (@BYVijayendra) September 26, 2023
ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್ವೈ
CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಸೆ. 13ರಂದು ಹದಿನೈದು ದಿನಗಳವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನೀಡಿದ ಆದೇಶ ಊರ್ಜಿತದಲ್ಲಿರುವುದರಿಂದ ಸೆ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ. ಆಗ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶವು ಅಕ್ಟೋಬರ್ 15ರವರೆಗೆ ಜಾರಿಯಲ್ಲಿ ಇರಲಿದ್ದು, ಅಲ್ಲಿವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ.
CWRC ಯ ಮುಂದೆ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದ ಕರ್ನಾಟಕ
ಇದಕ್ಕಿಂತ ಮೊದಲು ಕರ್ನಾಟಕವು ತನ್ನ ನೀರಿನ ಪರಿಸ್ಥಿತಿಯ ವಿವರಣೆಯನ್ನು ನೀಡಿತು.
25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ಮನವಿ ಮಾಡಿತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್
ಇದಕ್ಕೆ ಪ್ರತಿಯಾಗಿ ತಮಿಳುನಾಡು ನಿಯಮ ಪ್ರಕಾರ 12500 ಕ್ಯೂಸೆಕ್ ನೀರು ಪ್ರತಿದಿನವೂ ಬಿಡುಗಡೆ ಮಾಡಬೇಕು ಎಂಬ ವಾದವನ್ನೇ ಮುಂದೆ ಮಾಡಿತು.
ಅಂತಿಮವಾಗಿ ನಿಯಂತ್ರಣ ಸಮಿತಿಯು ನೀರಿನ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತು.
ಇದೀಗ ಕರ್ನಾಟಕವು ಈ ಅದೇಶವನ್ನು ಮತ್ತೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅವಕಾಶವಿದೆ.
ಕಲೆ/ಸಾಹಿತ್ಯ
Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
Yakshagana Show: ಮದರ್ ಫೌಂಡೇಶನ್ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಬೆಂಗಳೂರು: ರಾಜ್ ಭಟ್ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.
ಮದರ್ ಫೌಂಡೇಶನ್ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್, ಶಶಾಂಕ್, ಶ್ರೀನಿವಾಸ್ ಪ್ರಭು, ಸುಜನ್ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.
ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್ ವಿಶ್ವನಾಥ್, ಹಾಸ್ಯ ಪಾತ್ರಗಳಲ್ಲಿ ರಮೇಶ್ ಭಂಡಾರಿ, ಸಿತಾರಾಮ ಕುಮಾರ್ ಅಭಿನಯಿಸಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ರುಚಿಮತಿಯಾಗಿ ಸಂತೋಷ್ ಹಿಲಿಯಾಣ, ದೂತನಾಗಿ ಸೀತಾರಾಮ್ ಕುಮಾರ್, ಬ್ರಾಹ್ಮಣನಾಗಿ ಶ್ರೀಧರ್ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್, ಪಾಸ್ತಿಯಾಗಿ ಹರೀಶ್ ಜಪ್ತಿ, ದೃಮಿಳ ಆಗಿ ಕಾರ್ತಿಕ್ ಕಣ್ಣಿ ಬಣ್ಣ ಹಚ್ಚಲಿದ್ದಾರೆ.
ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್ ಭಂಡಾರಿ, ಪ್ರಕಾಶ್ ಕಿರಾಡಿ, ವಿಶ್ವನಾಥ್ ಹೆನ್ನಾಬೈಲ್ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್ ಹೆಗಡೆ, ಶ್ರೀಕಾಂತ್ ರಟ್ಟಾಡಿ, ನಾಗರಾಜ್ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್ ಬುಕಿಂಗ್ಗಾಗಿ ರಾಜ್ ಭಟ್ ಮೊ.9019776411 ಸಂಪರ್ಕಿಸಿ.
ವಿಜಯನಗರ
Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ
Vijayanagara News: ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಜರುಗಿತು.
ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ (Foot and Mouth Disease Vaccination campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಕರೆ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI SO Recruitment 2023: ಎಸ್ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಇದೇ ವೇಳೆ ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಗುಂಬಳಗುಂಟೆ ಪಶುವೈದ್ಯಾಧಿಕಾರಿ ಡಾ. ಮಂಜುಶ್ರೀ, ಚಿರತಗುಂಡು ಪಶುವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಜಬೀಉಲ್ಲ, ಡಾ. ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ
Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
Death News: ಸೊರಬ ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ(80) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸೊರಬ: ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ (80) ಮಂಗಳವಾರ ಬೆಳಿಗ್ಗೆ ನಿಧನರಾದರು. (Death News)
ಕೇವಲ ನಾಲ್ಕನೇ ತರಗತಿ ಓದಿ, ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮೂರು ಕೃತಿಗಳನ್ನು ರಚಿಸಿದ್ದರು.
ಕಾವ್ಯಗಳನ್ನು ರಾಗದ ಮೂಲಕ ರಚಿಸಿ ಮನ್ನಣೆ ಪಡೆದ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರ ವಯೋಸಹಜ ನಿಧನಕ್ಕೆ ಅಭಾಸಾಪ ಸೇರಿದಂತೆ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಕಸಾಪ, ಕಜಾಪ, ಕಸಾಸಾಂವೇ ಸಾಹಿತ್ಯ ಘಟಕಗಳು ಕಂಬನಿ ಮಿಡಿದಿವೆ.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ12 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ4 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema15 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ15 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್11 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ12 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ