ಕರ್ನಾಟಕ
JDS Politics : ಜೆಡಿಎಸ್ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ
JDS Politics: ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜಕೀಯ ಊಹಾಪೋಹಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಸನ: ಕುಮಾರಣ್ಣ ನಮ್ಮ ಸರ್ವೋಚ್ಚ ನಾಯಕ. ಎಚ್.ಡಿ.ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಕುಳಿತು ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಹಾಗೂ ನಾನು ಹೊಡೆದಾಡುವ ಪ್ರಶ್ನೆಯೇ ಇಲ್ಲ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (JDS Politics) ಹೇಳಿದ್ದಾರೆ.
ಹಾಸನ ಕ್ಷೇತ್ರ ಟಿಕೆಟ್ ಫೈಟ್ ಬಗ್ಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಕುಟುಂಬದವರಾದ ಕುಮಾರಣ್ಣ, ರೇವಣ್ಣ ಹೊಡೆದಾಡುತ್ತಾರೆ ಎಂದು ತಿಳಿದುಕೊಂಡಿದ್ದರೆ ಅಂತಹವರಿಗೆ ಭ್ರಮನಿರಸನ ಆಗುತ್ತದೆ. ಆತನಿಗೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿದೆ, ಹಗಲು ರಾತ್ರಿ ಎನ್ನದೆ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾನೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ʻʻನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡುವುದು ದೇವೇಗೌಡರು, ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಅವರು. ಪ್ರಜ್ವಲ್ ಹೇಳಿದರೂ ಅಷ್ಟೇ, ರೇವಣ್ಣ ಹೇಳಿದರೂ ಅಷ್ಟೇ ಎಂದ ಅವರು, ಬೇಲೂರಲ್ಲಿ, ಕೆ.ಆರ್.ಪೇಟೆಯಲ್ಲಿ ನಿಲ್ಲುತ್ತಾರೆ ಎನ್ನುತ್ತಾರೆ, ಸೀಟ್ ಕೊಟ್ಟೇವಾ? ಇವತ್ತು ಅರಕಲಗೂಡಿನಲ್ಲಿ ಟಿಕೆಟ್ ಕೊಡಿ ಎನ್ನುತ್ತಾರೆ, ಕೊಡುತ್ತೇವಾ? ಪಾಪ ಭವಾನಿ ಅವರನ್ನು ಕಾರ್ಯಕ್ರಮಕ್ಕೆ ಕರೆಯುತ್ತಾರೆ ಹೋಗಬೇಕು. ಪ್ರಜ್ವಲ್ ಹಾಗೂ ದೇವೇಗೌಡರಿಗೆ ಓಟು ಹಾಕಿದ್ದಾರೆ. ಆದ್ದರಿಂದ ಹೋಗಬೇಕಾಗುತ್ತದೆʼʼ ಎಂದರು.
ಇದನ್ನೂ ಓದಿ | Karnataka Politics : ಬಿಜೆಪಿಯಿಂದಲೂ ರಥಯಾತ್ರೆ ಪ್ಲಾನ್: ಅರುಣ್ ಸಿಂಗ್ ಸುಳಿವು
ʻʻಕಳೆದ ಮೂರು ದಿನದಿಂದ ಹಾಸನ ಟಿಕೆಟ್ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಜಿಲ್ಲೆಯ ಎಲ್ಲಾ ಸೀಟ್ ಬಗ್ಗೆ ಕುಮಾರಸ್ವಾಮಿ, ಶಾಸಕರು, ಅಧ್ಯಕ್ಷರು, ದೇವೇಗೌಡರ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ. ನಾನಾಗಲಿ, ಪ್ರಜ್ವಲ್ ಆಗಲಿ ಏನು ಹೇಳುತ್ತೇವೆ ಎಂಬುವುದು ಮುಖ್ಯವಲ್ಲ ಎಂದು ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದರು.
ʻʻಕುಟುಂಬ ರಾಜಕಾರಣ ಎನ್ನುವುದಾದರೆ ಎಲ್ಲ ರಾಜಕೀಯ ಪಕ್ಷದ ನಾಯಕರು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಕಾನೂನು ಮಾಡಲಿ. ಬೇಕಿದ್ದರೆ ಪ್ರಜ್ವಲ್, ಸೂರಜ್ ರಾಜಿನಾಮೆ ಕೊಡಿಸುತ್ತೇನೆ. ಕುಮಾರಸ್ವಾಮಿ ಏನು ಹೇಳುತ್ತಾರೆ ಅದೇ ನಮಗೆ ಅಂತಿಮʼʼ ಎಂದ ಅವರು, ದೇವೇಗೌಡರ ಕಣ್ಣಮುಂದೆ ಸರ್ಕಾರ ತರಬೇಕು ಎಂದು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | B.S. Yediyurappa : ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಬಿ.ಎಸ್. ಯಡಿಯೂರಪ್ಪ ಮಹತ್ವದ ಘೋಷಣೆ
ಕೊಟ್ಟ ಮಾತಿನಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕೊಟ್ಡ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದರು. ನಮಗೆ ಬಹುಮತ ಬಂದಿಲ್ಲ, ಸಾಲ ಮನ್ನಾ ಮಾಡಲು ಆಗಲ್ಲ ಎನ್ನಬಹುದಿತ್ತು. ಆದರೆ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಡಿದ್ದಾರೆ. ಹೊಸ ಶಾಲೆ, ಕಾಲೇಜುಗಳನ್ನು ಮಾಡಲು ಕುಮಾರಸ್ವಾಮಿ ಬರಬೇಕಾಯಿತು ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದರು.
ಬಿಜೆಪಿಯ ಎಲ್ಲ ನಾಯಕರು ಬಂದು ಬಂದು ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ನಮಗೆ ಶಕ್ತಿ ಇಲ್ಲ ಎಂದ ಮೇಲೆ ನಮ್ಮ ಹೆಸರು ಯಾಕೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಬಿಜೆಪಿ ಜತೆ ವಿಲೀನ ಮಾಡಲಿ ಎಂದರು.
ʻʻಹಾಸನ ಜಿಲ್ಲೆಗೆ ಸಂಬಂಧಪಟ್ಟಂತೆ ಕಳೆದ ಹತ್ತು ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಈ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದೇನೆ. ಈ ಜಿಲ್ಲೆಯ ಜನರು ರಾಜಕೀಯವಾಗಿ ದೇವೇಗೌಡರಿಗೆ, ನನಗೆ, ಪ್ರಜ್ವಲ್ಗೆ ಶಕ್ತಿ ತುಂಬಿದ್ದಾರೆ. ಜಿಲ್ಲೆಯ ಜನತೆ, ನಾಯಕರ ಆಶೀರ್ವಾದದಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಆಗಿವೆ. ಕೆಲ ಬಿಜೆಪಿ ಮುಖಂಡರು ಹಾಸನ ಬಜೆಟ್ ಎನ್ನುತ್ತಿದ್ದರು. ಈಗ ಬೇರೆ ಬೇರೆ ಜಿಲ್ಲೆಗೆ ಏನು ಅನುದಾನ ಕೊಟ್ಟಿದಾರೆ. ಹಾಗಿದ್ದರೆ ಅದು ಬಿಜೆಪಿ ಬಜೆಟ್ಟಾ? ಏನು ನನಗೆ ಗೊತ್ತಿಲ್ಲʼʼ ಎಂದರು ರೇವಣ್ಣ.
ಕರ್ನಾಟಕ
Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್ಗೆ ಬಿತ್ತು!
ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಬೆಳೆ ಹಾನಿ ಮಾಡುತ್ತಾ, ರಾಜಾರೋಷವಾಗಿ ಓಡಾಡುತ್ತಾ ಆತಂಕ ಹುಟ್ಟಿಸಿದ್ದ ಗಂಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಹನಿ ಟ್ರ್ಯಾಪ್ (Elephant trapped) ಬಳಸಿ ಹಿಡಿದಿದ್ದಾರೆ.
ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿ ರಾಮೇಶ್ವರ ದೇವಸ್ಥಾನದ ಬಳಿ ಡಿಸೆಂಬರ್ 31ರ ಮುಂಜಾನೆ ಕಾಣಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷ ಪ್ರಾಯದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ (Elephant trapped) ಹಿಡಿದಿದೆ.
ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೆರೆ, ಅಮ್ತಿ, ಮಳೂರು, ಬಳಗಟ್ಟೆ, ಕೆರೆಕೊಪ್ಪ ಸುತ್ತಮುತ್ತಲಿನ ಸುಮಾರು 320 ಹೆಕ್ಟೇರ್ ಕಿರು ಅರಣ್ಯ ಪ್ರದೇಶದಲ್ಲಿ ಆನೆ ಮೂರು ತಿಂಗಳಿನಿಂದ ಬೀಡುಬಿಟ್ಟಿತ್ತು.
ಸುತ್ತಲಿನ ರೈತರ ತೋಟಗಳ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನೆ ಹಿಡಿಯುವಂತೆ ಅಗ್ರಹಿಸಿದ್ದರು. ಇಲ್ಲಿಯವರೆಗೆ ಈ ಆನೆ ಯಾವುದೇ ಜೀವ ಹಾನಿ ಮಾಡಿರಲಿಲ್ಲವಾದರೂ ಬೆಳೆ ಹಾನಿ ಮಾಡಿತ್ತು. ವಿಶೇಷ ಎಂದರೆ ಈ ಆನೆ ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿಯೇ ಹಾಜರು ಹಾಕುತ್ತಿತ್ತು.
ಹಾಗಾಗಿ ಹಿಡಿಯುವುದು ಅನಿವಾರ್ಯ ಆಗಿತ್ತು.
ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಆನೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆನೆ ಹಿಡಿಯಲು ಸೆಣಬು, ಚೈನ್, ಅರಿವಳಿಕೆ ಮದ್ದು, ಕ್ರೇನ್, ಸಾಕಾನೆ, ಮಚಾನ್ ಮುಂತಾದ ಅಗತ್ಯತೆಗಳನ್ನು ಸಿದ್ಧಪಡಿಸಿದ್ದರು. ಆನೆ ಹೆಜ್ಜೆ ಗುರುತು ಇರುವ ಪ್ರದೇಶದ ಯಾವುದು ಎಂದು ಗುರುತಿಸಲು ಸಿಬ್ಬಂದಿ ಮೊದಲು ಕೂಂಬಿಂಗ್ ಮಾಡಿಕೊಂಡಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್ (ಶೂಟ್ ಮೂಲಕ ಅರಿವಳಿಕೆ ನೀಡುವುದು) ಮಾಡುವ ಪ್ರಯತ್ನ ನಡೆಸಿದ್ದರು.
ಆದರೆ ಈ ಗಂಡಾನೆ ವೇಗವಾಗಿ ನಾಪತ್ತೆಯಾಗುತ್ತಿದ್ದ ಕಾರಣ ತಕ್ಷಣಕ್ಕೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ ಸುಮಾರು 6.30ರಿಂದ 7 ಗಂಟೆ ಸುಮಾರಿಗೆ ಆನೆಗೆ ಮೊದಲ ಡಾಟ್ ನೀಡಲಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೊಂದು ಬೂಸ್ಟರ್ ಡಾಟ್ ನೀಡಿ ಆನೆಯ ಕಾಲುಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇನ್ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಚಾಮರಾಜನಗರದ ಡಾ. ಮುಜೀಬ್ ರೆಹಮಾನ್, ಬಂಡೀಪುರದ ಡಾ. ವಸೀಮ್, ಶಿವಮೊಗ್ಗದ ಡಾ. ವಿನಯ್, ಮೃಗಾಲಯದ ವೈದ್ಯ ಡಾ. ಮುರುಳಿ, ಶಾರ್ಪ್ ಶೂಟರ್ ಡಾ. ಅಕ್ರಮ್ ಕಾಡಾನೆಯನ್ನು ಸೆರೆ ಹಿಡಿಯಲು ವೈದ್ಯಕೀಯ ತಂಡವಾಗಿ ಕಾರ್ಯ ನಿರ್ವಹಿಸಿದ್ದರು.
ಸಕ್ರೇಬೈಲು ಆನೆ ಬಿಡಾರದ 4 ಆನೆಗಳಾದ ಭಾನುಮತಿ, ಸಾಗರ್, ಬಾಲಣ್ಣ, ಬಹದ್ದೂರ್, ನಾಲ್ವರು ಮಾವುತರು, ಎಂಟು ಮಂದಿ ಕಾವಾಡಿಗಳು, ತೀರ್ಥಹಳ್ಳಿ, ಮೇಗರವಳ್ಳಿ, ಮಂಡಗದ್ದೆ ವಲಯಾರಣ್ಯದ ಸಿಬ್ಬಂದಿ, ಎಸಿಎಫ್ ಪ್ರಕಾಶ್ ಹಾಗೂ ವನ್ಯಜೀವಿ ವಿಭಾಗದ ಸಹಕಾರದಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಡಿಎಫ್ಒ ಶಿವಶಂಕರ್ ತಿಳಿಸಿದ್ದಾರೆ.
ಸಾಕು ಹೆಣ್ಣಾನೆ ಭಾನುಮತಿ ಬಳಸಿ ಕಾಡಲ್ಲಿರುವ ಆನೆಯನ್ನು ಸೆಳೆಯುವ ತಂತ್ರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯೋಗ ಮಾಡಿದ್ದಾರೆ. ಹನಿ ಟ್ರ್ಯಾಪ್ಗಾಗಿ ಹೆಣ್ಣಾನೆಯನ್ನು ಕಾಡಾನೆ ಓಡಾಡುವ ಸ್ಥಳಗಳಲ್ಲಿ ಕಟ್ಟಲಾಗುತ್ತದೆ. ವಾಸನೆ ಗ್ರಹಿಸಿ ಸುತ್ತಲ ಪ್ರದೇಶಲ್ಲಿ ಹೆಣ್ಣಾನೆ ಇರುವುದನ್ನು ಗಂಡಾನೆಗಳು ಗ್ರಹಿಸುತ್ತವೆ.
ಇದೇ ರೀತಿ ಮಧ್ಯ ಕಾಡಿನಿಂದ ಡಾಟ್ಗೆ ಅನುಕೂಲವಾಗುವ ಕಡೆಗೆ ಹೆಣ್ಣಾನೆಯನ್ನು ಓಡಾಡಿಸಿ ಒಂದು ಪ್ರದೇಶದಲ್ಲಿ ಕಟ್ಟುತ್ತಾರೆ. ಆನೆ ಬರುವ ಸಾಧ್ಯತೆ ಇದ್ದರೆ ವೈದ್ಯರ ತಂಡ ಮಚಾನ್ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಾರೆ. ಕಾಡಾನೆ ಕಂಡು ಬಂದ ತಕ್ಷಣ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಈಗ ಇಲ್ಲಿ ಸೆರೆ ಹಿಡಿದ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದನ್ನೂ ಓದಿ : Elephant calf rescued : ತಾಯಿಯಿಂದ ಬೇರ್ಪಟ್ಟು ಡ್ಯಾಂ ಬಳಿ ಬಂದಿದ್ದ ಮರಿಯಾನೆ, ಮತ್ತೆ ಹಿಂಡಿಗೆ ಸೇರಿಸಿದ ಜನ
ಕರ್ನಾಟಕ
Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ
Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಅಧಿಕಾರಿಗಳು ನಿತ್ಯ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 31ರಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election 2023) ಮುಹೂರ್ತ ನಿಗದಿಯಾಗುತ್ತಲೇ ರಾಜ್ಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಕೋಟಿ ಕೋಟಿ ರೂಪಾಯಿಯನ್ನು ಸಾಗಣೆ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳ ಹದ್ದಿನ ಕಣ್ಣಿನಿಂದ ಕೋಟ್ಯಂತರ ರೂಪಾಯಿಯನ್ನು ಸಾಗಣೆ ಮಾಡುವುದು ಕಷ್ಟವಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೋಟಿ ಕೋಟಿ ರೂಪಾಯಿಯನ್ನು ಜಪ್ತಿ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದ 6.44 ಕೋಟಿ ರೂಪಾಯಿ ಹಾಗೂ 17 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಹಣ ಹಾಗೂ ಚಿನ್ನ ಜಪ್ತಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಕಿರುವ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ಟಾಟಾ ಏಸ್ ವಾಹನವನ್ನು ತಪಾಸಣೆ ಮಾಡಿದ್ದಾರೆ. ಇದೇ ವೇಳೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ, ಚಿನ್ನ ಹಾಗೂ ಬೆಳ್ಳಿ ದೊರೆತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ 30 ಲಕ್ಷ ರೂ. ಪತ್ತೆ
ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ 30 ಲಕ್ಷ ರೂಪಾಯಿ ಪತ್ತೆಯಾಗಿದೆ. ಲಾಲ್ ಬಾಗ್ ದಕ್ಷಿಣ ಗೇಟ್ ಬಳಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ಇಬ್ಬರನ್ನು ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಗುಜರ್ ಹಾಗೂ ರತನ್ ಗುಪ್ತಾ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ 1.39 ಕೋಟಿ ರೂ. ವಶಕ್ಕೆ
ಶಿವಮೊಗ್ಗ: ಜಿಲ್ಲೆಯ ಹರಕೆರೆ ಚೆಕ್ ಪೋಸ್ಟ್ನಲ್ಲಿ 1.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ತಪಾಸಣೆ ನಡೆಸುತ್ತಿರುವ ವೇಳೆ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೆ ಬೊಲೆರೋ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಹಾಗಾಗಿ, ಪೊಲೀಸರು ಹಣ ಮತ್ತು ಚಾಲಕ ರವಿ ಮುಡಬೂಳ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕರ್ನಾಟಕ
Communal Harmony : ಉರೂಸ್ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು
ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮ ಸೌಹಾರ್ದ (Communal harmony) ಪರಂಪರೆಯ ಕೊಂಡಿಯಾಗಿ ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿತು. ಉರೂಸ್ ಸಂದರ್ಭದಲ್ಲಿ ಹಿಂದು ಸ್ವಾಮೀಜಿಗಳನ್ನು ಇಲ್ಲಿ ಗೌರವಿಸಲಾಯಿತು, ಆಶೀರ್ವಾದ ಪಡೆಯಲಾಯಿತು.
ವಿಜಯನಗರ: ಧರ್ಮ ಧರ್ಮಗಳ ನಡುವೆ ಸಂಘರ್ಷ, ಒಂದು ಧರ್ಮದ ಜಾತ್ರೆಗೆ ಇನ್ನೊಬ್ಬರು ಹೋಗಬಾರದು, ವ್ಯಾಪಾರ ಮಾಡಬಾರದು ಎನ್ನುವ ಧರ್ಮ ದಂಗಲ್ಗಳ ನಡುವೆ ಹೂವಿನಹಡಗಲಿ ಸೌಹಾರ್ದದ (Communal Harmony) ಸಂಭ್ರಮಕ್ಕೆ ಸಾಕ್ಷಿಯಾಯಿತು.
ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರ ಭಾವೈಕ್ಯ ಸಂಗಮವಾದ ಗುರು ಹಜರತ್ ಮೆಹಬೂಬ ಸುಭಾನಿಗಳವರ ಉರೂಸು ಕಾರ್ಯಕ್ರಮ ವೈಭವದಿಂದ ಜರುಗಿತು. ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರೂಸು ಆಚರಣೆಗೆ ಮುಸ್ಲಿಂ ಬಾಂದವರು ಗ್ರಾಮದ ವಿರಕ್ತ ಮಠದ ಶ್ರೀ ಚನ್ನಬಸವ ಶ್ರೀಗಳನ್ನು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಬರಮಾಡಿಕೊಂಡು ದರ್ಶನಾಶೀರ್ವಾದ ಪಡೆದರಲ್ಲದೆ ಶ್ರೀಗಳ ಜೊತೆ ಹಿಂದೂ ಮುಖಂಡರನ್ನು ಗೌರವಿಸಿ ಸನ್ಮಾನಿಸಿದರು.
ಈವೇಳೆ ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಮಾತನಾಡಿ, ʻನಮ್ಮ ಗ್ರಾಮದ ನೂತನ ಮಠಕ್ಕೆ ಚನ್ನಬಸವ ಶ್ರೀಗಳ ಆಗಮನ ಹೊಸ ಚೈತನ್ಯವನ್ನುಂಟು ಮಾಡಿದೆ. ಕೆಲ ವರ್ಷದಿಂದ ಸ್ವಲ್ಪ ಮರೀಚಿಕೆಯಾಗಿದ್ದ ಭಾವೈಕ್ಯತೆಗೆ ಮತ್ತೆ ಹೊಸ ಚಿಗುರು ಬಂದಂತಾಗಿದೆ. ಹಿಂದೂ ಮತ್ತು ಮುಸ್ಲಿಂ ಬಾಂದವರಿಗೆ ಶ್ರೀಗಳು ಕೊಂಡಿಯಾಗಿ ಸಮಾಜದ ಎಲ್ಲಾ ಮತ ಬಾಂಧವರಿಗೆ ಸದಾ ನೆರಳಾಗಿರಲಿʼ ಎಂದು ಆಶಯ ವ್ಯಕ್ತಪಡಿಸಿದರು.
ಉರೂಸು ಅಂಗವಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕಿದರು. ಸಂತಾನ ಫಲ ಬೇಡಿದ ಭಕ್ತರು ತಮಗೆ ಸಂತಾನವಾದ ಮಗುವಿನ ತೂಕದ ಸಕ್ಕರೆಯನ್ನು ಸ್ವಾಮಿಗೆ ಅರ್ಪಿಸಿ ಕೃಪೆಯನ್ನು ಪಡೆದರು.
ರೈತ ಬಾಂಧವರು ತಮ್ಮ ಎತ್ತುಗಳನ್ನು ಶೃಂಗರಿಸಿ ಚಕ್ಕಡಿ ಹೂಡಿ ದರ್ಗಾಕ್ಕೆ ಬರುವ ಭಕ್ತರಿಗೆ ಬೆಲ್ಲದ ಸಿಹಿ ನೀರು ಹಂಚುವುದರ ಮೂಲಕ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಳಲು ಹಾಗೂ ಸುತ್ತ ಮುತ್ತಗ್ರಾಮದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜ ಬಾಂಧವರು ಇದ್ದರು.
ಇದನ್ನೂ ಓದಿ :Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ
ಕರ್ನಾಟಕ
Suicide case : ಮೊಬೈಲ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್!
ಮನೆಯಲ್ಲಿ ಒಂಟಿಯಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ 27ರ ಯುವಕ ಮೊಬೈಲ್ನಲ್ಲಿ ಸ್ಟೇಟಸ್ (Whatsapp status) ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಟೇಟಸ್ ನೋಡಿದವರು ಅಲ್ಲಿಗೆ ತಲುಪುವಾಗ ಪ್ರಾಣಪಕ್ಷಿ ಹಾರಿ ಹೋಗಿತ್ತು.
ನೆಲ್ಯಾಡಿ: ಯುವಕನೊಬ್ಬ ಮೊಬೈಲ್ನಲ್ಲಿ ಸ್ಟೇಟಸ್ (Whatsapp status)ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್ 30ರ ಮಧ್ಯರಾತ್ರಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ.
ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.
ಅವರೂ ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ
ಶಿವಮೊಗ್ಗ: ಇಲ್ಲಿನ ಮಿಳಘಟ್ಟದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide Case) ಶರಣಾಗಿದ್ದಾರೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮಳಘಟ್ಟದ ಸಂಗೀತ (21) ಮೃತ ಮಹಿಳೆ. ಇವರು ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ವಿವಾಹವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ಕೈಗೊಂಡಿದ್ದಾರೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ :Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ ನಾಲ್ಕು ಗಂಟೆ ಕಾಲ ನಿರಂತರ ಅತ್ಯಾಚಾರ
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್