ಕರ್ನಾಟಕ
Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು
Siddaramotsava ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ ಜತೆ ಸಿದ್ದರಾಮಯ್ಯ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ಸಾರ
ಸಂದರ್ಶನ: ಮಾರುತಿ ಪಾವಗಡ, ಬೆಂಗಳೂರು
ದಾವಣಗೆರೆಯಲ್ಲಿ ಆ. 3ರಂದು ಸಿದ್ದರಾಮಯ್ಯ ಅಭಿಮಾನಿಗಳು ಅಮೃತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುವುದೇ ಈ ಕಾರ್ಯಕ್ರಮದ ಗುರಿ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ ಜತೆ ಸಿದ್ದರಾಮಯ್ಯ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ಸಾರ ಇಲ್ಲಿದೆ.
ವಿಸ್ತಾರ ನ್ಯೂಸ್: ಹುಟ್ಟು ಹಬ್ಬವೇ ಬೇಡ ಎನ್ನುತ್ತಿದ್ದ ನೀವು ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದರ ಮರ್ಮವೇನು?
ಸಿದ್ದರಾಮಯ್ಯ: ನನ್ನ ಹುಟ್ಟುಹಬ್ಬ ಆಚರಣೆ ಚರ್ಚೆ ಆಗಬಾರದು. ನಾನು ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಒಪ್ಪಿಗೆ ಕೊಟ್ಟಿರುವೆ. ಇದೇ ಮೊದಲು, ಇದೇ ಕೊನೆ. ಮುಂದೆ ಎಂದೂ ಹುಟ್ಟು ಹಬ್ಬ ಮಾಡಿಕೊಳ್ಳುವುದಿಲ್ಲ. ನಾನು 75 ದಾಟಿದ್ದೇನೆ. ಹೀಗಾಗಿ ಅಮೃತ ಮಹೋತ್ಸವ ಮಾಡೋಣ ಎಂದು ಹಿತೈಷಿಗಳು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದೇನೆ ಅಷ್ಟೆ. ದಾವಣಗೆರೆ ನಗರ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿ ಇರೋದರಿಂದ ಅಲ್ಲಿಯೇ ಮಾಡಿ ಎಂದು ಹೇಳಿದ್ದೇನೆ.
ವಿಸ್ತಾರ ನ್ಯೂಸ್: ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ?
ಸಿದ್ದರಾಮಯ್ಯ: ಅವರು ಹಲವು ಬಾರಿ ಇದನ್ನ ಹೇಳಿದ್ದಾರೆ. ನಾನೂ ಹೇಳ್ತೀನಿ, ವ್ಯಕ್ತಿ ಪೂಜೆ ಬೇಡ ಎಂದು. ಒಮ್ಮೆ ಕಾಂಗ್ರೆಸ್ಗೆ ಸೇರಿದ ಮೇಲೆ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಆ ಕೆಲಸ ಮಾಡೋರು ಲೀಡರ್. ಆ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡಬೇಕು ಹೊರತು ವ್ಯಕ್ತಿ ಪೂಜೆ ಪಕ್ಷ ಪೂಜೆ ಮುಖ್ಯವಲ್ಲ.ನಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಮಾಡಿ. ನಮ್ಮ ಸಿದ್ಧಾಂತವನ್ನ ಗಟ್ಟಿ ಧ್ವನಿಯಲ್ಲಿ ಹೇಳಿ ಎನ್ನೋದು ನನ್ನ ಕರೆ.
ವಿಸ್ತಾರ ನ್ಯೂಸ್: ದಾವಣಗೆರೆ ಸಮಾವೇಶದ ಒನ್ ಲೈನ್ ಅಜೆಂಡಾ ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಬಿಂಬಿಸುವುದಲ್ಲವೆ?
ಸಿದ್ದರಾಮಯ್ಯ: ಇದು ಸಂಪೂರ್ಣ ತಪ್ಪು. ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಅಮೃತ ಮಹೋತ್ಸವ ಮಾಡ್ತಿಲ್ಲ. ಆದರೆ, ಇದರಿಂದ ರಾಜ್ಯದಲ್ಲಿ ಪಕ್ಷಕ್ಕೆ ಬಲ ಬರುವುದನ್ನು ನಾನು ತಳ್ಳಿ ಹಾಕುವುದಿಲ್ಲ. ಚುನಾವಣೆ ಬಳಿಕ 113 ಸ್ಥಾನ ಬಂದರೆ ಶಾಸಕಾಂಗ ಪಕ್ಷದ ಸದಸ್ಯರ ಒಪ್ಪಿಗೆ ಪಡೆದು ಹೈಕಮಾಂಡ್ ಸಿಎಂ ಯಾರು ಅಂತ ನಿರ್ಧಾರ ಮಾಡುತ್ತದೆ. ಒಂದು ಸಮಾವೇಶ ಇಲ್ಲವೇ ಕಾರ್ಯಕ್ರಮ ಮಾಡಿ ಮುಂದಿನ ಸಿಎಂ ಎಂದು ಹೇಳಿಕೊಳ್ಳುವುದು ರಾಜಕೀಯ ಪ್ರಬುದ್ಧತೆ ಅಲ್ಲ.
ವಿಸ್ತಾರ ನ್ಯೂಸ್: ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕ ಜಮೀರ್ ಹೇಳಿಕೆ ಪಕ್ಷದ ಒಗ್ಗಟ್ಟಿಗೆ ಡ್ಯಾಮೇಜ್ ಅಲ್ಲವೆ? ನೀವು ಅದಕ್ಕೆ ಸಹಮತ ವ್ಯಕ್ತ ಪಡಿಸುತ್ತೀರಾ?
ಸಿದ್ದರಾಮಯ್ಯ: ಜಮೀರ್ ಆ ರೀತಿ ಹೇಳಿಲ್ಲ. ಆ ರೀತಿ ಹೇಳಿದ್ದಾರೆ ಅಂತ ರಾಜಕೀಯ ವಿರೋಧಿಗಳು ಹೇಳುತ್ತಿದ್ದಾರೆ ಅಷ್ಟೆ.
ವಿಸ್ತಾರ ನ್ಯೂಸ್: ಬಸವರಾಜ ಬೊಮ್ಮಾಯಿ ಸರ್ಕಾರದ ಬಗ್ಗೆ ಏನು ಹೇಳ್ತೀರಾ?
ಸಿದ್ದರಾಮಯ್ಯ: ಇದು ಅತ್ಯಂತ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ. 2018ರಲ್ಲಿ ಕೊಟ್ಟ ಪ್ರಣಾಳಿಕೆಯ ಭರವಸೆಯಲ್ಲಿ ಶೇ. 10ರಷ್ಟೂ ಈಡೇರಿಸಿಲ್ಲ. ಶೇ.40ರಷ್ಟು ಕಮಿಷನ್ ತಿನ್ನುವ ಸರ್ಕಾರ ಇದು.
ವಿಸ್ತಾರ ನ್ಯೂಸ್: ನಿಮ್ಮ ಬಳಿ ದಾಖಲೆ ಇದ್ದರೆ ನನಗೆ ಕೊಡಿ ಎಂದು ಸಿಎಂ ಕೇಳಿದ್ದಾರೆ ಕೊಡಿ…
ಸಿದ್ದರಾಮಯ್ಯ: ನಮ್ಮ ಅವಧಿಯಲ್ಲಿ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದರು. ಇವತ್ತಿಗೂ ಅವರು ದಾಖಲೆ ಕೊಟ್ಟಿಲ್ಲ. ಇವರ ಸರ್ಕಾರದಲ್ಲಿ ಶೇ. 40 ಕಮಿಷನ್ ನಡೆಯುತ್ತಿದೆ ಅಂತ ಆರೋಪ ಮಾಡಿದ್ದು ನಾನಲ್ಲ ಗುತ್ತಿಗೆದಾರರ ಸಂಘ. ಪಿಎಂಗೆ ಸಂಘವೇ ಪತ್ರ ಬರೆದಿದೆ. ಇನ್ನೇನು ದಾಖಲೆ ಬೇಕು?. ನನ್ನ ಮೇಲೆ ಏಕವಚನ ಪದಪ್ರಯೋಗ ಮಾಡುವ ಸಿಎಂ ಬಸವರಾಜ ಬೊಮ್ಮಾಯಿಗೆ ಸಂಸ್ಕೃತಿ ಇಲ್ಲ ಎಂದೇ ಹೇಳಬೇಕಾಗುತ್ತದೆ.
ವಿಸ್ತಾರ ನ್ಯೂಸ್: ಕರಾವಳಿಯ ಸರಣಿ ಕೊಲೆಗಳ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಮುಂದಾಗಿದೆಯೆ?
ಸಿದ್ದರಾಮಯ್ಯ: ಪ್ರತಿಪಕ್ಷದವರು ಸರ್ಕಾರದ ವೈಪಲ್ಯ ಹೇಳೋದು ತಪ್ಪಾ? ಸಿಎಂ ಪ್ರವೀಣ್ ಮನೆಗೆ ಹೋಗಿ ಬಂದಿದ್ದಾರೆ. ಹಾಗಾದ್ರೆ ಫಾಜಿಲ್, ಮಸೂದ್ ಮನೆಗೆ ಯಾಕೆ ಹೋಗಿಲ್ಲ? ಒಂದು ವರ್ಗಕ್ಕೆ ಮಾತ್ರ ಅವರು ಮುಖ್ಯಮಂತ್ರಿಯಾ? ಬೊಮ್ಮಾಯಿ ನಾಲಾಯಕ್ ಸಿಎಂ ರೀತಿ ನಡೆದುಕೊಂಡಿದ್ದಾರೆ.
ವಿಸ್ತಾರ ನ್ಯೂಸ್: ನೀವು ಎಸ್ಡಿಪಿಐ, ಪಿಎಫ್ಐ ಮೇಲಿನ ಕೇಸ್ ವಾಪಸು ತೆಗೆದುಕೊಂಡಿದ್ದು ತಪ್ಪಲ್ಲವೆ?
ಸಿದ್ದರಾಮಯ್ಯ: ನನ್ನ ಕಾಲದಲ್ಲಿ 23 ಜನ ಸತ್ತಿದ್ರು. ಅದು ಎಲ್ಲವೂ ಕೊಲೆ ಅಲ್ಲ. ಕೊಲೆಗಳ ಹಿನ್ನೆಲೆ ಬಗ್ಗೆ ಆಗ ಚರ್ಚೆ ಆಗಿದೆ. ನಿಮ್ಮ ಕಾಲದಲ್ಲಿ ಏನು ಕ್ರಮ ತಗೊಂಡ್ರಿ? ಎಸ್ಡಿಪಿಐ, ಪಿಎಫ್ಐ ಕಾರಣವಾಗಿದ್ರೆ ಬ್ಯಾನ್ ಮಾಡಿ. ಇಂತಹ ಸಂಘಟನೆಗಳು ಹುಟ್ಟದಂತೆ ಕಾನೂನು ತನ್ನಿ. ಸಿಎಂ ಆಗಿ ಮುಂದುವರಿಯುವ ಯಾವುದೇ ನೈತಿಕತೆ ಬೊಮ್ಮಾಯಿಗೆ ಇಲ್ಲ.
ವಿಸ್ತಾರ ನ್ಯೂಸ್: ನೀವು ಒಂದು ಸಮುದಾಯದ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಿರಿ ಎಂಬ ಆರೋಪ ಇದೆ…
ಸಿದ್ದರಾಮಯ್ಯ: ನಾವು ಎಲ್ಲ ಸಮುದಾಯಗಳನ್ನು ಒಟ್ಟಾಗಿ ಮನುಷ್ಯರಾಗಿ ನೋಡಿದ್ದೇವೆ. ನಾವು ಯಾರನ್ನೂ ಓಲೈಕೆ ಮಾಡಿಲ್ಲ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿದ್ದೇವೆ.
ವಿಸ್ತಾರ ನ್ಯೂಸ್: ಮೊತ್ತೊಮ್ಮೆ ಸಿಎಂ ಎಂದು ನೀವು ಆಗಾಗ ಹೇಳುವುದು ಯಾಕೆ?
ಸಿದ್ದರಾಮಯ್ಯ: ನಾನು ಸಿಎಂ ಆಗಬೇಕು ಎಂದು ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್ ಸಿಎಂ ಆಗಬೇಕು ಎಂದು ಹೇಳುವುದು ತಪ್ಪಲ್ಲ. ಅಂತಿಮವಾಗಿ ಶಾಸಕಾಂಗ ಪಕ್ಷದ ಸಭೆ ಮತ್ತು ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನನಗೂ ಅವಕಾಶ ಬೇಕು ಅಂತ ಕೇಳುವುದರಲ್ಲಿ ತಪ್ಪಿಲ್ಲ.
ವಿಸ್ತಾರ ನ್ಯೂಸ್: 2023ರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿರಾ?
ಸಿದ್ದರಾಮಯ್ಯ: ಸದ್ಯ ನಾನು ಬಾದಾಮಿ ಕ್ಷೇತ್ರದ ಶಾಸಕ. ಅಲ್ಲಿಯೇ ನಿಲ್ಲಬೇಕು ಅನ್ನೋ ಒತ್ತಡ ಇದೆ. ಕೋಲಾರ, ಹುಣಸೂರು, ಹೆಬ್ಬಾಳ, ವರುಣಾ, ಚಾಮರಾಜಪೇಟೆ, ಕೊಪ್ಪಳದವರು ಕರೆಯುತ್ತಿದ್ದಾರೆ. ಬಾದಾಮಿ ದೂರ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ತಿಲ್ಲ ಅನ್ನೋ ಕೊರಗು ಇದೆ. ಬೆಂಗಳೂರಿಗೆ ಹತ್ತಿರದಲ್ಲಿ ಇರುವ ಕ್ಷೇತ್ರದಲ್ಲಿ ನಿಲ್ಲುತ್ತೇನೆ.
ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲಿಸುತ್ತಿದ್ದೇವೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ?
ಸಿದ್ದರಾಮಯ್ಯ: ನನ್ನನ್ನು ಬಹಳ ಚುನಾವಣೆಯಲ್ಲಿ ಸೋಲಿಸಲು ಜೆಡಿಎಸ್, ಬಿಜೆಪಿ ಕೆಲಸ ಮಾಡಿದೆ. ಐ ಆಮ್ ಫೈಟರ್, ಫೈಟ್ ಮಾಡ್ತೀನಿ. ವರುಣಾ, ಕೋಲಾರ, ಚಾಮರಾಜಪೇಟೆಯಲ್ಲಿ ಬಿಜಿಪಿಗೆ ಶಕ್ತಿಯೇ ಇಲ್ಲ. ಇನ್ನು ಹೇಗೆ ಸೋಲಿಸುತ್ತಾರೆ?
ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ಗದ್ದಲದ ನಡುವೆ ಸ್ಪಷ್ಟ ಬಹುಮತ ಸಾಧ್ಯವೇ?
ಸಿದ್ದರಾಮಯ್ಯ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಬಿಜೆಪಿಯಲ್ಲಿ. ಕಾಂಗ್ರೆಸ್ನಲ್ಲಿ ಬರೀ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಬಣಗಳಷ್ಟೇ ಇರೋದು. ನಮ್ಮ ರಾಜಕೀಯ ವಿರೋಧಿಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ವಿಸ್ತಾರ ನ್ಯೂಸ್: ಕುಗ್ರಾಮದಲ್ಲಿ ಹುಟ್ಟಿದ ನೀವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರುತ್ತೇನೆಂದು ಎಂದಾದರು ಕನಸು ಕಂಡಿದ್ರಾ?
ಸಿದ್ದರಾಮಯ್ಯ: ಇಲ್ಲ. ಎಂದೂ ಈ ಬಗ್ಗೆ ಕನಸು ಕಂಡಿರಲಿಲ್ಲ. ನಮ್ಮದು ರೈತ ಕುಟುಂಬ. ನಮ್ಮ ಮನೆಯಲ್ಲಿ ಯಾರಿಗೂ ರಾಜಕೀಯದ ಹಿನ್ನೆಲೆ ಇರಲಿಲ್ಲ. ನನಗೆ ಪ್ರೊ. ನಂಜುಡಸ್ವಾಮಿ ಪರಿಚಯವಾಗಿ ರಾಜಕಾರಣದ ಮೇಲೆ ಆಸಕ್ತಿ ಬಂತು. ಜನರ ಸೇವೆ ಮಾಡಬಹುದು ಅಂತ ರಾಜಕಾರಣದಲ್ಲಿ ಸಕ್ರಿಯನಾದೆ. ಮುಂದೆ ನಾನು ತಾಲ್ಲೂಕು ಬೋರ್ಡ್ ಸದಸ್ಯ , ಶಾಸಕ, ಸಿಎಂ ಆಗುವುದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಜನರ ಆಶೀರ್ವಾದ ಕಾರಣ.
ವಿಸ್ತಾರ ನ್ಯೂಸ್: ಐದು ವರ್ಷ ಸಿಎಂ ಆಗಿದ್ರಿ. ಸಾಕಷ್ಟು ಕೆಲಸ ಮಾಡಿದ್ದೀರಿ. ನಾನು ಇದನ್ನ ಮಾಡಿಲ್ಲ, ಮಾಡಬೇಕಿತ್ತು ಎಂಬ ಭಾವನೆ ಇದೆಯಾ?
ಸಿದ್ದರಾಮಯ್ಯ: ದೇವರಾಜು ಅರಸು ಬಳಿಕ ನಾನು ಐದು ವರ್ಷ ಸಿಎಂ ಆಗಿ ಕೆಲಸ ಮಾಡಿದೆ. ಎಸ್ ಎಂ ಕೃಷ್ಣಾಗೂ ಅವಕಾಶ ಸಿಕ್ಕಿತ್ತು. ಆದರೆ ಅವರು ಅವಧಿಗೂ ಮೊದಲೇ ಚುನಾವಣೆಗೆ ಹೋದ್ರು. ಕಟ್ಟಕಡೆಯ ಮನುಷ್ಯನಿಗೆ ಪ್ರಯೋಜನವಾಗುವ ಕೆಲಸ ಮಾಡಿದ್ದೇನೆ. ಎಲ್ಲವೂ ಮಾಡಿದ್ದೇನೆ ಎಂದು ಹೇಳಲ್ಲ. ಹಲವು ಕೆಲಸ ಇನ್ನೂ ಮಾಡಬೇಕಿದೆ.
ವಿಸ್ತಾರ ನ್ಯೂಸ್: ಸಿದ್ದರಾಮಯ್ಯ ಕೆಲವು ಸಮುದಾಯಗಳಿಗೆ ಸಿಮೀತವಾಗಿ ಕಾರ್ಯಕ್ರಮ ರೂಪಿಸಿದರು ಎಂಬ ಆಪಾದನೆ ಇದೆ. ಇದು 2018ರಲ್ಲಿ ಕಾಂಗ್ರೆಸ್ 80ಕ್ಕೆ ಇಳಿಯಲು ಕಾರಣವಾಯಿತು ಎನ್ನಬಹುದೆ?
ಸಿದ್ದರಾಮಯ್ಯ: ಇಂತಹ ಆರೋಪಗಳು ರಾಜಕೀಯ ಪ್ರೇರಿತ. ನಾನು ಮಾಡಿದ ಅನ್ನಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ಹತ್ತು ಹಲವು ಯೋಜನೆಗಳು ಎಲ್ಲ ವರ್ಗಗಳಿಗೂ ಸಿಕ್ಕಿವೆ. ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಮಾತ್ರ ಯೋಜನೆ ಕೊಟ್ಟರು ಎಂದು ಅಪಪ್ರಚಾರ ಮಾಡಲಾಯಿತು. ನಾನು ಮೇಲ್ಜಾತಿ ವಿರೋಧಿ ಎಂದು ಆರೋಪ ಮಾಡಿದರು. ನಾನು ಮಾಡಿದ ಯೋಜನೆಗಳು ಎಲ್ಲ ಜಾತಿಗಳಲ್ಲಿ ಇರುವ ಬಡವರಿಗೆ ಅನುಕೂಲಕರವಾಗಿತ್ತು.
ವಿಸ್ತಾರ ನ್ಯೂಸ್: ಕಾಂಗ್ರೆಸ್ ನಿಮ್ಮ ಸಾಧನೆಗಳನ್ನು ಜನರ ಮುಂದೆ ಇಡುವುದರಲ್ಲಿ ವಿಫಲವಾಯಿತೆ?
ಸಿದ್ದರಾಮಯ್ಯ: ಹೌದು. ನಮ್ಮ ಸಾಧನೆಗಳನ್ನು ಜನರ ಮುಂದೆ ಗಟ್ಟಿಯಾಗಿ ನಾವು ಹೇಳಲಿಲ್ಲ. ನಮ್ಮ ಪಕ್ಷದವರು ಸತ್ಯ ಹೇಳುವುದಕ್ಕೆ ಹಿಂದೇಟು ಹಾಕುತ್ತಾರೆ. ಜನರಿಗೆ ಸತ್ಯ ಏನು ಅಂತ ಗೊತ್ತಾಗಲ್ಲ. ನಮ್ಮ ಕಾರ್ಯಕರ್ತರು ಮತ್ತು ನಾಯಕರು ಗಟ್ಟಿಯಾಗಿ ಹೇಳಬೇಕಿತ್ತು. ನಾವು ಜನ ಸಂಪರ್ಕ ಮಾಡದೇ ಇದ್ದಿದ್ದೇ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರ ಮಾಡುವುದರಲ್ಲಿ ಯಶಸ್ವಿಯಾದವು. ಬಿಜೆಪಿಯವರು ಸುಳ್ಳು ಬೇಕಾದ್ರೆ ನೂರು ಬಾರಿ ಹೇಳಿ ಸತ್ಯ ಎಂದು ಸಾಧಿಸುತ್ತಾರೆ. ನಮ್ಮವರು ಸತ್ಯ ಇರೋದನ್ನ ಹೇಳುವುದಕ್ಕೂ ಹಿಂಜರಿಯುತ್ತಾರೆ. ಇದೇ ನಮ್ಮ ಹಿನ್ನಡೆಗೆ ಮೂಲ.
ವಿಸ್ತಾರ ನ್ಯೂಸ್: ಮೊದಲ ಬಜೆಟ್ ವೇಳೆ ನಿಮ್ಮ ಅನುಭವ ಹೇಗಿತ್ತು?
ಸಿದ್ದರಾಮಯ್ಯ: 1994ರಲ್ಲಿ ಹಣಕಾಸು ಮಂತ್ರಿಯಾದೆ. ಸಿದ್ದರಾಮಯ್ಯಗೆ ನೂರು ಕುರಿ ಲೆಕ್ಕ ಹಾಕಲೂ ಬರುವುದಿಲ್ಲ. ಈ ರಾಜ್ಯದ ಬಜೆಟ್ ಹೇಗೆ ನಿಭಾಯಿಸುತ್ತಾರೆ ಎಂದು ಕೆಲವರು ಬರೆದರು. ನಾನು ಇದನ್ನ ಸವಾಲಾಗಿ ಸ್ವೀಕರಿಸಿದೆ. ನಾನು ಬಜೆಟ್ ಮಂಡಿಸಿದ ಮರು ದಿನ ಪ್ರಮುಖ ಇಂಗ್ಲಿಷ್ ಪತ್ರಿಕೆಯೊಂದು, ಇದು ಅತ್ಯುತ್ತಮ ಬಜೆಟ್ ಎಂದು ಸಂಪಾದಕೀಯ ಬರೆಯಿತು. ಅದನ್ನ ನೋಡಿ ನನಗೆ ಸಮಾಧಾನವಾಯಿತು. ನನಗೂ ಬಜೆಟ್ ಮಂಡಿಸುವ ಸಾಮಾರ್ಥ್ಯ ಇದೆ ಎಂಬ ವಿಶ್ವಾಸ ಬಂತು. ಯಾವುದೇ ವ್ಯಕ್ತಿಯನ್ನು ಜಾತಿಯ ಮೇಲೆ ಅಳತೆ ಮಾಡಬಾರದು!
ವಿಸ್ತಾರ ನ್ಯೂಸ್: ನಿಮ್ಮ ಮನೆಯ ಬಜೆಟ್ ಬಗ್ಗೆ ಯಾವತ್ತಾದರೂ ಗಮನ ಹರಿಸಿದ್ದು ಇದೆಯಾ? ನಿಮ್ಮ ಮನೆಯ ತಿಂಗಳ ಬಜೆಟ್ ಎಷ್ಟು?
ಸಿದ್ದರಾಮಯ್ಯ: ನಾನು ಯಾವತ್ತೂ ಮನೆಗೆ ಏನು ಬೇಕು ಎಂದು ಕೇಳಿಲ್ಲ. ನಮ್ಮ ಊರಿನಿಂದ ದವಸಧಾನ್ಯಗಳು ಬರುತ್ತವೆ. ಎಣ್ಣೆ,ತುಪ್ಪ,ಬೆಣ್ಣೆ ತರಕಾರಿ ಅಕ್ಕಿ ಬರುತ್ತವೆ. ಮನೆಗೆ ಇತ್ತಿಷ್ಟು ಹಣ ಬೇಕು ಎಂದಾಗ ಕೊಡ್ತೀನಿ. ನನ್ನ ಹೆಂಡತಿ ನಮ್ಮ ಮನೆಯ ವ್ಯವಹಾರ ನೋಡಿಕೊಳ್ಳುತ್ತಾರೆ. ನನ್ನ ಮಕ್ಕಳ ಶಿಕ್ಷಣ ಸಹ ಅವರೇ ನೋಡಿಕೊಂಡಿದ್ದರು. ಇಂದಿಗೂ ನಮ್ಮ ಮನೆಯ ತಿಂಗಳ ಬಜೆಟ್ ಎಷ್ಟು ಅನ್ನೋದು ನನಗೆ ಗೊತ್ತಿಲ್ಲ.
ವಿಸ್ತಾರ ನ್ಯೂಸ್: ನಿಮ್ಮ ಅಧಿಕಾರದ ಅವಧಿಯಲ್ಲಿ ಕುಟುಂಬದ ಹಸ್ತಕ್ಷೇಪ ಇತ್ತೇ?
ಸಿದ್ದರಾಮಯ್ಯ: ನನ್ನ ಹೆಂಡತಿ ಸಾಮಾನ್ಯ ಕುಟುಂಬದಿಂದ ಬಂದವಳು. ಎಂದೂ ನನ್ನ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಅದು ರಾಜಕೀಯ ಆಗಿರಬಹುದು, ಕಚೇರಿ ವಿಚಾರವಾಗಿರಬಹುದು. ಅಷ್ಟರ ಮಟ್ಟಿಗೆ ನಾನು ಅದೃಷ್ಟವಂತ. ನನ್ನ ತಂದೆ, ನನ್ನ ಸಹೋದರರೂ ಹಸ್ತಕ್ಷೇಪ ಮಾಡಿಲ್ಲ.ಮಗ ರಾಕೇಶ್ನಿಗೆ ರಾಜಕೀಯದಲ್ಲಿ ಆಸಕ್ತಿ ಇತ್ತು. ನನ್ನ ಕ್ಷೇತ್ರ ನೋಡಿಕೊಳ್ಳುತ್ತಿದ್ದ. ಅವನು ಬದುಕಿರುವವರೆಗೂ ಕ್ಷೇತ್ರದಲ್ಲಿ ರಾಜಕೀಯವಾಗಿ ನನಗೆ ಸಮಸ್ಯೆ ಇರಲಿಲ್ಲ. ಅವನು ಸತ್ತ ಮೇಲೆ ನನಗೆ ಸಮಸ್ಯೆಯಾಯಿತು. ಆ ಸ್ಥಾನ ಈಗ ಯತೀಂದ್ರ ತುಂಬುತ್ತಿದ್ದಾನೆ. ಜನರು ಸಹ ಯತೀಂದ್ರನನ್ನು ಒಪ್ಪಿಕೊಳ್ಳುತ್ತಿದ್ದಾರೆ.
ವಿಸ್ತಾರ ನ್ಯೂಸ್: ನಿಮ್ಮ ಸಹೋದರರು ರಾಜಕೀಯಕ್ಕೆ ಬರಲು ನೀವು ಅಡ್ಡಿಯಾದಿರಿ ಎಂಬ ಮಾತಿದೆ.
ಸಿದ್ದರಾಮಯ್ಯ: ನೋ ನೋ ನೋ. ನಮ್ಮ ಕುಟುಂಬ ರಾಜಕೀಯದ ಕುಟುಂಬವಲ್ಲ. ನಮ್ಮ ಅಣ್ಣ ಮಾತ್ರ ಪಂಚಾಯಿತಿ ಮಟ್ಟದಲ್ಲಿ ಓಡಾಡುತ್ತಿದ್ದ. ವೋಟ್ ಹಾಕಿಸಲು ಓಡಾಡುತ್ತಿದ್ದ ನಮ್ಮ ಸಹೋದರರು ಬೇಸಾಯಕ್ಕೆ ಸೀಮಿತರಾಗಿದ್ದರು. ರಾಜಕಾರಣಕ್ಕೆ ಬರಬೇಕು ಎಂದು ಅವರು ಎಂದೂ ಹೇಳಲಿಲ್ಲ.
ವಿಸ್ತಾರ ನ್ಯೂಸ್: ಚಾಮುಂಡೇಶ್ವರಿಯಲ್ಲಿ ನಿಮ್ಮ ಸೋಲಿಗೆ ನಿಜವಾದ ಕಾರಣ ಏನು ?
ಸಿದ್ದರಾಮಯ್ಯ: ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತು. ಶ್ರೀನಿವಾಸ್ ಪ್ರಸಾದ್, ವಿಶ್ವಾನಾಥ್ ನನ್ನ ಸೋಲಿಗೆ ಪ್ರಯತ್ನ ಮಾಡಿದರು. ಕೆಲವರು ಹ್ಯಾಂಡ್ ಬಿಲ್ ಹಂಚಿಕೆ ಮಾಡಿದರು. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗ್ತಾನೆ ಸೋಲಿಸಿ ಅಂತ ಹ್ಯಾಂಡ್ ಬಿಲ್ ಹಂಚಿದರು. ಇದನ್ನು ಹಾಕಿಸಿದ್ದು ಯಾರು ಅಂತ ಗೊತ್ತಾಗಲಿಲ್ಲ. ಆದ್ರೆ ಹತ್ತು ವರ್ಷಗಳ ಕಾಲ ಕ್ಷೇತ್ರ ಬಿಟ್ಟಿದ್ದು ಸಹ ಹಿನ್ನಡೆಗೆ ಕಾರಣ. ಹಳ್ಳಕ್ಕೆ ಬಿದ್ದವನಿಗೆ ನೂರೆಂಟು ಕಲ್ಲು ಅನ್ನೋ ರೀತಿ ಆ ಟೈಮ ಲ್ಲಿ ನನ್ನ ಸೋಲಿಸಲು ಷಡ್ಯಂತ್ರ ನಡೆಯಿತು.
ಆರೋಗ್ಯ
Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!
Chamarajanagar oxygen tragedy: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021ರಲ್ಲಿ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ ಮೇ 2ರಂದು 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆಗ್ರಹಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಬೆಂಗಳೂರು: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಅವಧಿಯ ಟೆಂಡರ್ಗಳ ಮರು ಪರಿಶೀಲನೆ ಮಾಡಾಗುತ್ತದೆ. ಅನುಮಾನ ಬಂದ ಟೆಂಡರ್ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಕರ್ನಾಟಕ
Manja Thread: ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ತೆಗೆಯಿತು ಅಮಾಯಕನ ಪ್ರಾಣ!
Manja Thread: ಇದುವರೆಗೂ ಪಕ್ಷಿಗಳ ಪ್ರಾಣ ತೆಗೆಯುತ್ತಿದ್ದ ಗಾಳಿಪಟದ ಮಾಂಜಾ ದಾರ, ಈಗ ಅಮಾಯಕ ಯುವಕನ ಪ್ರಾಣವನ್ನೇ ತೆಗೆದುಬಿಟ್ಟಿದೆ. ಸತತ ಆರು ದಿನಗಳ ಜೀವನ್ಮರಣ ಹೋರಾಟ ನಡೆಸಿ, ನರಳಾಡಿ ಪ್ರಾಣ ಬಿಟ್ಟಿದ್ದಾನೆ.
ಗದಗ: ಕಳೆದ ಜೂ.4ರಂದು ಕಾರ ಹುಣ್ಣಿಮೆ ವೇಳೆ ಹಾರಿಸಿದ ಗಾಳಿಪಟದ ಚೈನೀಸ್ ಮಾಂಜಾ ದಾರವು (Manja Thread) ಸವಾರನ ಕುತ್ತಿಗೆ ಸಿಲುಕಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿ ರವಿ ಮೃತ ದುರ್ದೈವಿ.
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ವೇಳೆ ಗಾಳಿಪಟ ಹಾರಿಸುವ ಪರಿಪಾಠ ಇದೆ. ಆದರೆ ಇದೆ ಸಂಭ್ರಮವು ಬೈಕ್ ಸವಾರರಿಗೆ ಸಂಚಕಾರ ತಂದೊಡ್ಡಿದೆ. ಗದಗ ನಗರದ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ರವಿ, ಬೈಕ್ನಲ್ಲಿ ಹೋಗುವಾಗ ಗಾಳಿಪಟದ ದಾರ ಕತ್ತು ಸೀಳಿತ್ತು. ರಕ್ತದ ಮಡುವಿನಲ್ಲೇ ಸ್ಥಳೀಯರು ಆಟೋ ಮೂಲಕ ರವಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹರಿತವಾದ ದಾರವು ರವಿಯ ಕತ್ತನ್ನು ಬಲವಾಗಿ ಸೀಳಿದ್ದರಿಂದ, ಆರು ದಿನ ಬಳಿಕ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ಕಾಳಸಂತೆಯಲ್ಲಿ ಸಿಗ್ತಿದೆ ಅಪಾಯಕಾರಿ ದಾರ
ರಾಜ್ಯದಲ್ಲಿ ಚೈನೀಸ್ ಮಾಂಜಾ ದಾರ ಮಾರಾಟವು ನಿಷೇಧ ಇದ್ದರೂ, ಗದಗ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ಕಡಿವಾಣ ಬಿದ್ದಿಲ್ಲ. ಕಾಳಸಂತೆಗಳಲ್ಲಿ ಈ ಅಪಾಯಕಾರಿ ದಾರ ಮಾರಾಟವಾಗುತ್ತಿದೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ ಭಾನುವಾರ (ಜೂ.4) ಕಾರ ಹುಣ್ಣಿಮೆಯ ದಿನದಂದು ಹಾರಿಸಿದ ಗಾಳಿಪಟದ ದಾರದಿಂದಾಗಿ ರೈಲ್ವೆ ಪೊಲೀಸ್ ಸೇರಿ ನಾಲ್ಕೈದು ಜನರಿಗೆ ಗಾಯವಾಗಿತ್ತು. ಬೈಕ್ನಲ್ಲಿ ಹೋಗುವಾಗ ಕತ್ತು, ಕೈ-ಕಾಲುಗಳಿಗೆ ಹರಿತವಾದ ದಾರದಿಂದ ಗಾಯಗಳಾಗಿತ್ತು. ಈ ರೀತಿಯ ಅವಘಡಗಳು ನಡೆಯುತ್ತಿದ್ದರೂ, ಸಂಬಂಧಪಟ್ಟವರು ಗಪ್ ಚುಪ್ ಆಗಿದ್ದಾರೆ.
ಇದನ್ನೂ ಓದಿ: Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್ ವಾಪಸ್; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್
ಅಪಾಯಕಾರಿ ಮಾಂಜಾ ದಾರಕ್ಕೆ ಕಡಿವಾಣ ಹಾಕುವಂತೆ ವಿಸ್ತಾರ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ಆದರೆ ಅಧಿಕಾರಿ ವರ್ಗ ಮಾತ್ರ ಕೈ ಕಟ್ಟಿ ಕುಳಿತು ನಿರ್ಲಕ್ಷ್ಯತನ ತೋರಿತ್ತು. ಇದರ ಪರಿಣಾಮ ಈಗ ಕಾರ ಹುಣ್ಣಿಮೆ ವೇಳೆ ಮಾಂಜಾ ದಾರದಲ್ಲಿ ಗಾಳಿಪಟ ಹಾರಿಸಿದ ಕಾರಣದಿಂದಾಗಿ ಸವಾರರು ಗಂಭೀರ ಗಾಯಗೊಂಡಿದ್ದರು. ಅದರಲ್ಲಿ ಒಬ್ಬ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 15 ದಿನಗಳ ಹಿಂದಷ್ಟೇ ಚೈನೀಸ್ ಮಾಂಜಾ ದಾರ ಮಾರಾಟವನ್ನು ತಡೆಯುವಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯತನ ತೋರಿಸಿದ್ದಾರೆಂದು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!
ಬೆಂಗಳೂರು: ಅನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್ (Viral News) ಆಗಿದೆ.
ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ಮನವಿ ಪತ್ರದಲ್ಲೇನಿದೆ?
ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು, ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.
ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.
ಉಡುಪಿ
Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್ ವಾಪಸ್; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್
Govt School: ಶಾಲಾ ಮಕ್ಕಳಿಗೆ ಕುಡಿಯಲು ನೀರು ಕೊಡಿ (Drinking Water) ಎಂದು ಶಿಕ್ಷಕರು ಕೇಳಿದರೆ, ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು, ಶಾಲೆಗೆ ನೀರು ಕೊಡಬೇಡ ವಾಪಸ್ಸು ಬಾ ಎಂದು ಟ್ಯಾಂಕರ್ ಚಾಲಕನನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಆಡಿಯೋ ವೈರಲ್ ಆಗಿದೆ.
ಉಡುಪಿ: ಇಲ್ಲಿನ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರ ವರ್ತನೆಗೆ ಪಂಚಾಯತ್ ಸದಸ್ಯರು ಕಿಡಿಕಾರಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂದು ಶಿಕ್ಷಕರು ಪತ್ರವೊಂದನ್ನು ಬರೆದಿದ್ದರು. ಹೀಗಾಗಿ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಶಾಲೆಗೆ ನೀರಿನ ಟ್ಯಾಂಕರ್ ಅನ್ನು ಕಳಿಸಿದ್ದರು. ಆದರೆ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನಿಗೆ ಅವಾಜ್ ಹಾಕಿ ನೀರು ಕೊಡಬೇಡ ಬಾ ಎಂದು ವಾಪಸ್ ಕರೆಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆಡಿಯೊವೊಂದು ಬಹಿರಂಗಗೊಂಡಿದ್ದು, ವೈರಲ್ (Viral news) ಆಗಿದೆ.
ಟ್ಯಾಂಕರ್ ಚಾಲಕನ ತರಾಟೆ ತೆಗೆದುಕೊಂಡ ಪಂಚಾಯತ್ ಸದಸ್ಯ
ಶಾಲೆಗೆ ನೀರು ತಲುಪಿಸದ ಹಿನ್ನೆಲೆಯಲ್ಲಿ ಚಾಲಕನಿಗೆ ಫೋನ್ ಮೂಲಕ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಗೆ ಯಾಕೆ ನೀರು ಪೂರೈಸಿಲ್ಲ ಎಂದು ಪಂಚಾಯತ್ ಸದಸ್ಯ ಕೇಳಿದಾಗ, ಅಧ್ಯಕ್ಷರು ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದಿದ್ದಾರೆ. ಹೀಗಿರುವಾಗ ನಾನೇನು ಮಾಡಲಿ ಸರ್ ಎಂದು ಅಸಹಾಯಕತೆ ತೋರಿದ್ದಾನೆ. ಚಾಲಕ ಹಾಗೂ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪಂಚಾಯತ್ ಸದಸ್ಯ
ವಂಡ್ಸೆ ವ್ಯಾಪ್ತಿಗೆ ಬರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಶಾಲೆಯ ಶಿಕ್ಷಕರು ಶಾಲೆಗೆ ನೀರು ಬೇಕೆಂದು ಗ್ರಾಮ ಪಂಚಾಯತ್ಗೆ ಪತ್ರವೊಂದನ್ನು ಬರೆದಿದ್ದರು.
ಶಿಕ್ಷಕರ ಲಿಖಿತ ಪತ್ರಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಪಂಚಾಯತ್ ವತಿಯಿಂದ ಕಳೆದ ಜೂ 7ರಂದು ಮಧ್ಯಾಹ್ನ 12:30ರ ಸುಮಾರಿಗೆ ಶಾಲೆಗೆ ನೀರಿನ ಟ್ಯಾಂಕರ್ ಕಳುಹಿಸಿದ್ದರು. ಆದರೆ, ಪಂಚಾಯತ್ ಅಧ್ಯಕ್ಷ ಟ್ಯಾಂಕರ್ ಚಾಲಕನಿಗೆ ಫೋನ್ ಮಾಡಿ ʻನೀರು ಕೊಡಬೇಡ ವಾಪಸ್ ಬಾʼ ಎಂದು ತಿಳಿಸಿದ್ದರಂತೆ.
ಹೀಗಾಗಿ ಚಾಲಕ ಶಾಲಾ ಆವರಣದಲ್ಲೇ 2,750 ಲೀಟರ್ ಬ್ಯಾರಲ್ ಇರಿಸಿ ವಾಪಸ್ ಆಗಿದ್ದಾನೆ. ಬಳಿಕ ಜೂನ್ 8ರ ಬೆಳಗ್ಗೆ ಪುನಃ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನನ್ನು ಕರೆಸಿ, ಶಾಲೆಗೆ ನೀರು ಕೊಡುವುದು ಬೇಡ, ನೀರು ಕೊಟ್ಟಲ್ಲಿ ನೀರಿನ ಬಿಲ್ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
ಹೀಗಾಗಿ ಪಂಚಾಯತ್ ಅಧ್ಯಕ್ಷರ ಬೇಜವಾಬ್ದಾರಿಗೆ ಬೇಸತ್ತಿರುವ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡದಂತೆ ಪಿಡಿಒ ಮತ್ತು ನೀರಿನ ಚಾಲಕನಿಗೆ ಧ್ಕಮಿ ಹಾಕಿದ್ದಾರೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜತೆಗೆ ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema21 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema24 hours ago
Sara Ali Khan: ಶುಭ್ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್