ಕರ್ನಾಟಕ
Puneeth Rajkumar: ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಅನ್ನೋ ಡೈಲಾಗ್ ಅವರಿಗಂತಲೇ ಬರೆದಿದ್ದಾ?
Puneeth Rajkumar: ಪುನೀತ್ ಒಬ್ಬ ಕರುಣಾಮಯಿ ಅಂದ್ರೆ ಹೌದಲ್ಲ ಅನ್ನಿಸ್ತಿತ್ತು. ಹೀಗೆ ಅವನನ್ನು ನಿಜವಾದ ಹೀರೋ ಎಂದೇ ಸಿನಿಮಾದ ಆಚೆ ನಂಬಿದ್ದೆ… ಅವನ ಜೀವನ್ಮುಖಿ ಸಮಾಜ ಸೇವೆಯನ್ನ… ಮತ್ತದೇ ನಿಷ್ಕಲ್ಮಶ ನಗುವನ್ನ ನೋಡಿಕೊಂಡೇ ಬೆಳೆದವಳು ನಾನು. ಹೀಗೆ ಇದ್ದಕ್ಕಿದ್ದಂತೆ ಒಂದು ದಿನ ಇಲ್ಲ ಅಂದರೆ ಹೇಗೆ ನಂಬಲಿ?
| ಗಾಯತ್ರಿ ರಾಜ್
ನಮ್ಮದು ದಾವಣಗೆರೆ. ಅಲ್ಲಿಯ ಪೊಲೀಸ್ ಕ್ವಾರ್ಟರ್ಸ್ನಲ್ಲೇ ನಾನು ಹುಟ್ಟಿ ಬೆಳೆದಿದ್ದು. ಮೊದಲ ಸಾಲು ಆಫೀಸರ್ ಮನೆಗಳು. ಆ ಮನೆಗಳ ಹಿಂದೆ ಹೆಡ್ ಕಾನ್ಸ್ಟೆಬಲ್, ಅದರ ಹಿಂದೆ ಪಿಸಿ, ಡ್ರೈವರ್ ಮನೆಗಳು ಅಂತ ಒಂದು ಮೂನ್ನೂರು ಕೆಂಪಂಚಿನ ಮನೆಗಳಿದ್ದವು. ಅದಕ್ಕೆಲ್ಲ ಸೇರಿ ಒಂದು ದೊಡ್ಡ ಕಾಂಪೌಂಡು… ಅದರ ಎದುರಿಗೆ ಮೇನ್ ರೋಡ್. ಮೇನ್ ರೋಡ್ ಆಚೆ ಅರುಣಾ ಟಾಕೀಸು. ನಮ್ಮ ಮನೆ ಮೊದಲ ಸಾಲಿನಲ್ಲೇ ಇದ್ದುದರಿಂದ ಟಾಕೀಸು ನಮಗೆ ಚೆನ್ನಾಗೇ ಕಾಣಿಸುತ್ತಿತ್ತು. ಅದರಲ್ಲಿ ಬರುವ ಸಿನಿಮಾಗಳ ಪೋಸ್ಟರ್ಗಳು, ಅದರ ಕಟೌಟುಗಳು! ಆ ಕಟೌಟುಗಳಿಗೆ ಹಾಕಿದ ದೊಡ್ಡ ದೊಡ್ಡ ಹಾರಗಳು! ಎಲ್ಲವೂ!
ಆದರೂ ಸಿನಿಮಾ ನೋಡುವುದು ನಮಗೆ ಸುಲಭ ಲಭ್ಯವಾಗಿರಲಿಲ್ಲ. ಅಪ್ಪ, ಕೇವಲ ರಾಜ್ ಕುಮಾರ್ ಸಿನಿಮಾಗಳನ್ನು ಮಾತ್ರ ನೋಡೋಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅದೂ ಎಲ್ಲರೂ ಚೆನ್ನಾಗಿದೆ ಅಂದ್ಮೇಲೇನೆ. ನಾನೋ ಆ ಬಣ್ಣದ ಪರದೆಯ ಹುಚ್ಚು ಹಚ್ಚಿಕೊಂಡಿದ್ದೋಳು. ಒಂದೈದು ವರ್ಷಗಳಿರಬಹುದು ನನಗಾಗ. ಟಿವಿ ಇರ್ಲಿಲ್ಲ. ಹಾಗಾಗಿ ಸಿನಿಮಾ ನಟರನ್ನು ದೇವರೆಂದು ಆರಾಧಿಸುವಷ್ಟು ಭಾವುಕತೆ ಮತ್ತು ಬಣ್ಣದ ಪರದೆಯ ಗೀಳು ಇಂದಿಗಿಂತ ತುಸು ಹೆಚ್ಚೇ ಇತ್ತು ಜನರಲ್ಲಿ. ಅದರಲ್ಲೂ ನಮ್ಮ ಹಿಂದಿನ ಸಾಲಿನ ಸಿದ್ದೇಗೌಡನ ಕುಟುಂಬದಲ್ಲಿ.
ಮೊದಲ ದಿನ ಮೊದಲ ಶೋ ಅವರೆಷ್ಟು ಮಜವಾಗಿ ನೋಡ್ತಿದ್ರೂ ಅಂದ್ರೆ… ಡ್ರೈವರ್ ಆಗಿದ್ದ ಆತ ಅದ್ಹೇಗೋ ಸುಲಭವಾಗಿ ಟಿಕೆಟು ಗಳಿಸಿ ಬಿಡ್ತಿದ್ದ. ಅದಷ್ಟೇ ಸಾಲದೆಂಬಂತೆ ನಮ್ಮ ಮನೆ ಮುಂದೆ (ಮೊದಲ ಸಾಲಲ್ಲಿತ್ತು ನಮ್ಮನೆ ಅನ್ನೋದು ಬೇರೆ) ಅವನ ಪೂರ್ತಿ ಕುಟುಂಬವನ್ನು ಕರೆದುಕೊಂಡು, ಬೆಳ್ಳಂಬೆಳಗ್ಗಿನ ಅವನ ತಿಳಿ ಷರ್ಟಿನ ಜೇಬಿನಲ್ಲಿ ಗುಲಾಬಿ ಬಣ್ಣದ ಟಿಕೆಟುಗಳನ್ನು ಬೇಕಂತಲೇ ಅದರ ಕಿವಿಯನ್ನು ಒಂದಿಷ್ಟು ಹೊರಗೆ ಕಾಣುವ ಹಾಗೆ ಇಟ್ಟುಕೊಂಡು ಮೀಸೆ ತಿರುವುತ್ತಾ ಯಾವುದೋ ಮದುವೆ ದಿಬ್ಬಿಣಕ್ಕೆ ಹೋದ ಹಾಗೆ ಹೋಗ್ತಿದ್ದ.
ಅಂದು ಬೆಳಗ್ಗೆ ನಾನೂ ಥೀಯೇಟರ್ ಫುಲ್ ಗಲಾಟೆಯಾಗ್ತಿದ್ದದ್ದು ನೋಡಿದ್ದೆ. ರಾಜಕುಮಾರ್ ಅವರ ದೊಡ್ಡ ದೊಡ್ಡ ಕಟೌಟುಗಳು ರಾರಾಜಿಸುತ್ತಿದ್ದವು. ಸಿನಿಮಾ ಮಂದಿರದ ಒಳಗೆ ನೂಕು ನುಗ್ಗಲು… ಕ್ಯೂನಲ್ಲಿ ನಿಂತು ಟಿಕೆಟು ತೆಗೆದುಕೊಳ್ಳುವಾಗ ದಬ್ಬಾಟಗಳಂತೂ ಮಾಮೂಲೇ, ಒಮ್ಮೊಮ್ಮೆ ಗಲಾಟೆಗಳೂ ಆಗಿ ಬಿಡುತ್ತಿದ್ದವು. ಆ ಹೊಡೆದಾಟ… ನಂತರ ಕ್ಯೂನಲ್ಲಿ ಟಿಕೆಟ್ ಪಡೆದು ಹೊರಬಂದಾಗ ಆ ಜನರ ಮುಖದಲ್ಲಿನ ವಿಜಯೋತ್ಸಾಹ… ಅವನ ಮನೆಯವರ ಬೆನ್ನು ತಟ್ಟುವಿಕೆ ಓಹ್… ಒಂದು ಯುದ್ಧದ ವಾತಾವರಣವೇ ಅಲ್ಲಿರ್ತಿತ್ತು. ಅದೆಲ್ಲಾ ಒಂದರ್ಧ ಗಂಟೆ ಮಾತ್ರ. ಆಮೇಲೆ ಪಿನ್ಡ್ರಾಪ್ ಸೈಲೆಂಟು. ಏರು ಧ್ವನಿಯ ಸಿನಿಮಾ ಡೈಲಾಗುಗಳು, ಡಿಶುಂಡಿಶುಂಗಳು ಮತ್ತು ಆ ಹಾಡು, “ನಗುತಾ… ನಗುತಾ… ಬಾಳು ನೀನು” ಅದೆಲ್ಲಿದ್ರೂ ಆ ಹಾಡಿಗೆ ಮುಂದಿನ ಪಡಸಾಲೆಗೆ ಬಂದು ಕಿವಿಯಾಗಿಬಿಡುತ್ತಿದ್ದೆ. ಅದು “ಪರಶುರಾಮ” ಸಿನಿಮಾವಾಗಿತ್ತು.
ನೂರು ದಿನಗಳ ಭರ್ಜರಿ ಪ್ರದರ್ಶನವನ್ನೂ ಕಂಡು ಬಿಟ್ಟಿತು. ಅದೇ ಸಮಯಕ್ಕೆ ರಾಜಕುಮಾರ್ ಕುಟುಂಬ ಮತ್ತೆ ಸಿನಿಮಾದ ಬೇರೆ ಬೇರೆಯವರೆಲ್ಲಾ ಸಂಭ್ರಮಾಚರಣೆಗಾಗಿ ದಾವಣಗೆರೆಯಲ್ಲಿ ಒಂದು ಲಾರಿ ಮೆರವಣಿಗೆ ಮಾಡಬೇಕು ಎಂದು ಬಂದು ಬಿಟ್ಟರು. ಅವತ್ತು ಪೊಲೀಸ್ ಬಂದೋಬಸ್ತಿಗೆ ಅಪ್ಪನೇ ಡ್ಯೂಟಿ ಆಫೀಸರ್. ನಾನು ಅಪ್ಪನಿಗೆ ಎಷ್ಟು ಮುದ್ದು ಅಂದ್ರೆ ಒಂದೊಂದ್ಸಾರಿ ಅವರ ಜೀಪಿನಲ್ಲಿ ನನ್ನನ್ನೂ ಕರ್ಕೊಂಡ್ ಹೋಗಿ ಬಿಡೋರು… ಆದರೆ ಅವತ್ತು ಗಲಾಟೆಯಾಗ್ಬಹುದು ಅಂತ ನನ್ನ ಕರ್ಕೊಂಡ್ ಹೋಗಿರ್ಲಿಲ್ಲ. ಡ್ರೈವರ್ ಸಿದ್ದೇಗೌಡ ಮಧ್ಯಾಹ್ನ ಊಟ ತೆಗೆದುಕೊಂಡು ಹೋಗಲು ಮನೆಗೆ ಬಂದಾಗ, ʼಅಪ್ಪ ಬೇಕುʼ ಅಂತ ನಾನು ಅಳ್ತಾ ಕೂತೆ. ಅವನು ಅಮ್ಮನಿಗೆ ನಾನೆಲ್ಲಾ ನೋಡ್ಕೋತ್ತಿನಿ ಸುಮ್ನಿರಕ್ಕ ಅಂತ ಎತ್ತುಕೊಂಡು ಹೋಗೇ ಬಿಟ್ಟಿದ್ದ.
ನನಗಿನ್ನೂ ಚೆನ್ನಾಗಿ ನೆನಪಿದೆ. ಅದೊಂದು ಜಾತ್ರೆಯಂತ್ತಿತ್ತು. ಲಾರಿಯಲ್ಲಿ ರಾಜಕುಮಾರ್ ಯಾರೂ ಅಂತಾನೇ ನಂಗೆ ಗುರುತು ಸಿಕ್ಕಿರ್ಲಿಲ್ಲ. ಆದರೆ, ಅವನು ಮಾತ್ರ ಗುರುತು ಸಿಕ್ಕಿ ಬಿಟ್ಟಿದ್ದ. ಅವನನ್ನು ಪೋಸ್ಟರ್ನಲ್ಲಿ ನೋಡಿ, ನೋಡಿ ಗುರುತು ಹಿಡಿದು ಬಿಟ್ಟಿದ್ದೆ. “ಲೋಹಿತ್” ಅಂತ ಚಪ್ಪಾಳೆ ಹಾಕಿ ಕೂಗಿದ್ದೆ. ಸಿದ್ದೇಗೌಡ ಮಾತಾಡಿಸ್ಬೇಕಾ ಅಂತ ಕೇಳಿ, ನಾನು ಹ್ಞಾಂ… ಹ್ಞೂಂ… ಅನ್ನುವುದರೊಳಗೆ ನನ್ನನ್ನೂ ಆ ಲಾರಿಯ ಮೇಲೆ ಏರಿಸಿಬಿಟ್ಟಿದ್ದ ಆ ಅಪ್ಪಟ ಕನ್ನಡ ಸಿನಿಮಾ ಅಭಿಮಾನಿ!
ಇದನ್ನೂ ಓದಿ: Puneeth Rajkumar: ಪುನೀತ್ ಅಭಿನಯದ ಟಾಪ್ 10 ಚಿತ್ರಗಳಿವು
ಲಾರಿಯಲ್ಲಿ ಜನರು ತುಂಬಿದ್ದರೂ, ನನ್ನನ್ನು ಹತ್ತಿಸಿದವರು ಪೊಲೀಸ್ ಎಂದು ಗಮನಿಸಿದವರೇ ಯಾರೂ ಏನೂ ಅನ್ನಲಿಲ್ಲ. ಎಲ್ಲರೂ ಜನರತ್ತ ಕೈ ಬೀಸುವುದರಲ್ಲೇ ಮಗ್ನರು. ನಾನೋ ತಬ್ಬಿಬ್ಬು…. ಕೆಳಗೆ ಕಣ್ಣಾಡಿಸಿದರೆ ನನ್ನ ಹತ್ತಿಸಿದ ಸಿದ್ದೇಗೌಡ ಮಾಯ! ಅಥವಾ ಅಲ್ಲೇ ಇದ್ರೂ ಆ ಜನಜಂಗುಳಿಯಲ್ಲಿ ನಂಗೆ ಕಾಣಿಸಿರಲಿಲ್ಲ. ಭಯವಾಗಿ ನನ್ನ ಗುಲಾಬಿ ಬಣ್ಣದ ಫ್ರಾಕು ಗಟ್ಟಿ ಹಿಡ್ಕೊಂಡು ಅಪ್ಪನಿಗಾಗಿ ಹುಡುಕ್ತಿದ್ದೆ. ಬಹಳ ಇಕ್ಕಟ್ಟು… ಜೊತೆಗೆ ಚಲಿಸುವ ಗಾಡಿ… ಜನರ ಕೂಗಾಟ… ಅಷ್ಟರಲ್ಲಿ ಹಿಂದಿಂದ ಯಾರದ್ದೋ ಕೈತಾಕಿ ಜೋಲಿ ತಪ್ಪಿ ಇನ್ನೇನು ಬೀಳಬೇಕು ಅವನು ನನ್ನ ಕೈ ಹಿಡಿದು ಎಳೆದುಕೊಂಡಿದ್ದ! “ಭಯ ಪಡಬೇಡ ನಾನಿದ್ದೇನೆ” ಎನ್ನುವ ಹಾಗೆ, ಅದೇ ನಿಷ್ಕಲ್ಮಶ ನಗುವಿನೊಂದಿಗೆ. ನಂಗೆ ಭಯವೇ ಮರೆತುಹೋಗಿ ನಿರುಮ್ಮಳಳಾಗಿ ನಿಂತು ಬಿಟ್ಟೆ. ಅಷ್ಟು ಸಾಲದೆಂಬಂತೆ ಅವನೇ ನನ್ನನ್ನು ಎತ್ತುಕೊಂಡು ನಿಂತ. ರಾಜಕುಮಾರ್ ಅವರು ಒಮ್ಮೆ ತಿರುಗಿ ʼಹಾ… ಹಾʼ ಅಂತ ನನ್ನ ಕೆನ್ನೆ ತಟ್ಟಿ ನಕ್ಕು ಸುಮ್ಮನಾಗಿದ್ದರು. ಅಲ್ಲಿಂದ ಗಡಿಯಾರದ ಕಂಬದ ಸರ್ಕಲ್ ಬರುವವರೆಗೂ ನನ್ನ ಎತ್ತುಕೊಂಡಿದ್ದು, ಕೊನೆಗೆ ಲಾರಿಯಲ್ಲಿ ಇಳಿಸಿದರೂ ನನ್ನ ಕೈ ಮಾತ್ರ ಗಟ್ಟಿಯಾಗಿ ಹಿಡಿದುಕೊಂಡೇ ನಿಂತಿದ್ದ. ಕೆಳಗಿಳಿಯುವಾಗ ನನ್ನ ಕೈಯಲ್ಲಿ ಬಾರ್ಬರೋನ್ ಬಿಸ್ಕಿಟ್ ಪ್ಯಾಕೆಟ್ ಕೊಟ್ಟು ಕೆನ್ನೆ ತಟ್ಟಿದ್ದ ಆ ಲೋಹಿತ್…. ಆ ಪುನೀತ್… ಆ ಅಪ್ಪು… ನನ್ನ ಮನಸ್ಸಲ್ಲಿ ಇನ್ನೂ ಅಚ್ಚಳಿಯದೆ ಕೂತಿದ್ದಾನೆ. ಇನ್ನೂ “ನಗುತಾ… ನಗುತಾ…ಬಾಳು ನೀನು ನೂರು ವರುಷಾ” ಅಂತ ತನ್ನ ಝೊಂಪೆ ಕೂದಲನ್ನು ಹಾರಿಸಿ, ಹಾರಿಸಿ ಕುಣಿಯುತ್ತಲೇ ಇದ್ದಾನೆ.
ಅದರ ನಂತರದಲ್ಲಿ ಲೋಹಿತ್ ಪುನೀತ್ ಆಗಿ ತೆರೆಯ ಮೇಲೆ ಬಂದ…. ಅಪ್ಪುವಾಗಿ ಎಲ್ಲರ ಮನಸೂರೆಗೊಂಡ. ತೆರೆಯ ಮೇಲಿನ ಅಪ್ಪು, ಅಂದು ನನ್ನ ಕೈಹಿಡಿದು ಲಾರಿಯಲ್ಲಿ ನಿಂತ್ತಿದ್ದ ಅಪ್ಪು, ನನಗೆ ಬೇರೆ-ಬೇರೆ ಅಂತ ಅನ್ನಿಸುತ್ತಲೇ ಇರಲಿಲ್ಲ. ತೆರೆಯ ಮೇಲೆ ಅವನೊಬ್ಬ ಅಪ್ಪಟ ಪ್ರೇಮಿ ಎನಿಸಿದರೆ ನನಗದು ಹೌದು ಅನ್ನಿಸ್ತಿತ್ತು. ಅವನೊಬ್ಬ ಕರುಣಾಮಯಿ ಅಂದ್ರೆ ಹೌದಲ್ಲ ಅನ್ನಿಸ್ತಿತ್ತು. ಹೀಗೆ ಅವನನ್ನು ನಿಜವಾದ ಹೀರೋ ಎಂದೇ ಸಿನಿಮಾದ ಆಚೆ ನಂಬಿದ್ದೆ… ಅವನ ಜೀವನ್ಮುಖಿ ಸಮಾಜ ಸೇವೆಯನ್ನ… ಮತ್ತದೇ ನಿಷ್ಕಲ್ಮಶ ನಗುವನ್ನ ನೋಡಿಕೊಂಡೇ ಬೆಳೆದವಳು ನಾನು. ಹೀಗೆ ಇದ್ದಕ್ಕಿದ್ದಂತೆ ಒಂದು ದಿನ ಇಲ್ಲ ಅಂದರೆ ಹೇಗೆ ನಂಬಲಿ? ಹೇಗೆ ಮರೆಯಲಿ ಆ ನಗುವನ್ನಾ… ಆ ಆಪ್ತತೆಯನ್ನಾ…. ನಿಗರ್ವಿ ಹೀರೋ… ನಿಜದ ದೇವ ಮಾನವನನ್ನ. ನೆನಪಿಸಿಕೊಂಡರೆ ಸಾಕು ಈಗಲೂ ಅಂಗೈಯಲ್ಲಿ ಅವನ ಬಿಸುಪಿದೆ. “ಜೊತೆಗಿರದ ಜೀವ ಎಂದಿಗೂ ಜೀವಂತ” ಅನ್ನೋ ಪರಮಾತ್ಮ ಸಿನಿಮಾದ ಈ ಡೈಲಾಗ್ ಅವನಿಗೆಂತಲೇ ಬರೆದಿದ್ದಾ?
ಕರ್ನಾಟಕ
Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು
Suicide Case: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯ: ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ವಿದ್ಯಾ (32), ಪುರುಷೋತ್ತಮ (46) ಮೃತರು. ಮೊದಲಿಗೆ ಪತಿ ಕೆಲಸಕ್ಕೆ ತೆರಳಿದ್ದಾಗ ಪತ್ನಿ ವಿದ್ಯಾ (32) ಗುರುವಾರ ಸಂಜೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪತಿ ಪುರುಷೋತ್ತಮ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಮಂಗಳೂರಿನಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವು
ಮಂಗಳೂರು: ನಗರದ ಬೆಂದೂರುವೆಲ್ ವೃತ್ತದಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸಿನಿಂದ ಇಳಿದು ರಸ್ತೆ ದಾಟುವಾಗ ಅದೇ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಐರಿನ್ ಡಿಸೋಜ (65) ಮೃತ ಮಹಿಳೆ. ಅಪಘಾತದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಧಾವಂತಕ್ಕೆ ನಾಲ್ಕು ದಿನದಲ್ಲಿ ಎರಡನೇ ಬಲಿ ಇದಾಗಿದೆ.
ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ; ನದಿಯಲ್ಲಿ ಶವ ಪತ್ತೆ
ಕಡಬ (ಮಂಗಳೂರು): ಮಾರ್ಚ್ 31ರಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ಮತ್ತು ವಿದ್ಯಾರ್ಥಿಗಳು ಇದಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇಷ್ಟರ ನಡುವೆಯೇ ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Student death) ಮಾಡಿಕೊಂಡಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗುಂಡಿಮಜಲ್ ಗ್ರಾಮದಲ್ಲಿ ಅದ್ವೈತ್ ಶೆಟ್ಟಿ (15) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಅದ್ವೈತ್ ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಮನೆಯಿಂದ ಹೊರಗೆ ಹೋದವನು ಕಣ್ಮರೆಯಾಗಿದ್ದ ಆತನಿಗಾಗಿ ಮನೆಯವರು ರಾತ್ರಿ ಇಡೀ ಹುಡುಕಾಟ ನಡೆಸಿದರು. ಬೆಳಗ್ಗೆವರೆಗೂ ಬಾಲಕ ಪತ್ತೆಯಾಗಿರಲಿಲ್ಲ.
ಗುರುವಾರ ಮುಂಜಾನೆಯೂ ಹುಡುಕಾಟ ಮುಂದುವರಿದಾಗ ಕುಮಾರಧಾರಾ ನದಿಯ ನಾಕೂರು ಗಯಾ ಎಂಬಲ್ಲಿ ನದಿಯ ಪಕ್ಕದಲ್ಲಿ ಸ್ಕೂಲ್ ಬ್ಯಾಗ್ ಪತ್ತೆಯಾಯಿತು. ಬಳಿಕ ಪುತ್ತೂರು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಯಿತು.
ಕಡಬ ಹಾಗೂ ಬೆಳ್ಳಾರೆ ಪೊಲೀಸರು ಆಗಮಿಸಿದ್ದು, ಪೋಷಕರ ಬಳಿ ವಿವರಣೆ ಪಡೆದಿದ್ದಾರೆ. ಮನೆಯವರಿಗೂ ಈ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾರ್ಚ್ 31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿರುವುದರಿಂದ ಅದರ ಭಯದಿಂದಲೇ ಪ್ರಾಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕರ್ನಾಟಕ
SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ
SELCO India: ಎಲ್ಲರಿಗೂ ಡಿಜಿಟಲ್ ಸೌಲಭ್ಯಗಳು ಕೈಗೆಟಕುವಂತೆ ಮಾಡಲು ನಮ್ಮ ನಡುವೆ ಇರುವ ಡಿಜಿಟಲ್ ಕಂದಕವನ್ನು ತುಂಬಬೇಕಿದೆ ಎಂದು ನೆಕ್ಸ್ಟ್ ಎಜುಕೇಷನ್ನ ಉಪಾಧ್ಯಕ್ಷ ಮನಮೋಹನ್ ಲಾಲ್ವಾನಿ ತಿಳಿಸಿದ್ದಾರೆ.
ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕವಾಗಿ ಸೃಷ್ಟಿಯಾಗುವ ವಿದ್ಯುನ್ಮಾನ (ಡಿಜಿಟಲ್) ಕಂದಕವನ್ನು ಯಶಸ್ವಿಯಾಗಿ ದಾಟಲು (SELCO India) ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮವು (ಡಿಇಪಿ) ಅತ್ಯುತ್ತಮ ಪರ್ಯಾಯ ಸಾಧನವಾಗಿದೆ ಎಂದು ನೆಕ್ಸ್ಟ್ ಎಜುಕೇಷನ್ನ ಉಪಾಧ್ಯಕ್ಷ ಮನಮೋಹನ್ ಲಾಲ್ವಾನಿ ಅಭಿಪ್ರಾಯಪಟ್ಟರು.
ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಗುರುವಾರ ನಡೆದ ಸೆಲ್ಕೊ ಸಂಸ್ಥೆಯ 29ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುನೆಸ್ಕೋ ಅಂದಾಜಿಸಿರುವಂತೆ ಭಾರತದಲ್ಲಿ ಸುಮಾರು 26 ಕೋಟಿ ಜನರಿಗೆ ಸರ್ಕಾರಿ ಶಾಲೆಗಳಲ್ಲಿರುವ ಡಿಜಿಟಲ್ ಸೌಲಭ್ಯಗಳು ಇನ್ನೂ ಕೈಗೆಟಕುತ್ತಿಲ್ಲ. ಹೀಗಾಗಿ ನಮ್ಮ ನಡುವೆ ಇರುವ ಇಂತಹ ಡಿಜಿಟಲ್ ಕಂದಕವನ್ನು ತುಂಬಬೇಕಿದೆ. ಸೆಲ್ಕೋ ಜತೆಗಿನ ಸಹಪಯಣದ ಸವಿನೆನಪಿಗಾಗಿ ನೆಕ್ಸ್ಟ್ ಎಜುಕೇಷನ್ ಸಂಸ್ಥೆಯು ರಾಜ್ಯದ ನಾಲ್ಕು ಸರ್ಕಾರಿ ಶಾಲೆಗಳಿಗೆ ಸಂಪೂರ್ಣ ಉಚಿತವಾಗಿ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆಯ ಮೂಲಭೂತ ಸೌಕರ್ಯವನ್ನು ಒದಗಿಸಲಿದೆ ಎಂದು ಘೋಷಿಸಿದರು.
ಬೈಲಕುಪ್ಪೆಯ ತ್ಸೋ-ಇ-ಖಾಂಗಸರ್ ಚಾರಿಟಿ ಆಸ್ಪತ್ರೆಯ ಕಾಯನಿರ್ವಾಹಕ ಕಾರ್ಯದರ್ಶಿ ಸೋನಮ್ ಯೌಗ್ಯಾಲ್ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ವ್ಯವಸ್ಥೆಗಳೂ ಸೌರಮಯವಾಗುವುದರಲ್ಲಿ ಸಂಶಯವಿಲ್ಲ. ಅನಿಯಮಿತ ವಿದ್ಯುತ್ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೆಕಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅತ್ಯಂತ ತ್ವರಿತವಾಗಿ ಸೌರೀಕರಣಗೊಳ್ಳಬೇಕಿದೆ ಎಂದರು.
ಸಮಾರಂಭದಲ್ಲಿ ಸಾಧಕ ಮಹಿಳೆಯರಾದ ಕಲಬುರ್ಗಿಯ ಸೌರ ಉದ್ಯಮಿ ಭುವನೇಶ್ವರಿ, ಬೆಳಗಾವಿಯ ಸೌರ ಇಂಧನ ಸೇವೆಗಳ ಉದ್ಯಮಿ ರೇಣುಕಾತಾಯಿ ಪರಪ್ಪಗೊಳ್ ಮತ್ತು ಸೆಲ್ಕೊ ನೌಕರ ಎನ್. ಲೋಕೇಶ್ ಅವರನ್ನು ಹಾಗೂ ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮ (ಡಿಇಪಿ)ವನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಿರುವ ಐದು ಶಾಲೆಗಳ ಶಿಕ್ಷಕ ಪ್ರತಿನಿಧಿಗಳನ್ನು ನೆಕ್ಸ್ಟ್ ಎಜುಕೇಷನ್ ವತಿಯಿಂದ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ
ಸೆಲ್ಕೊ ಸಂಸ್ಥೆಯಿಂದ ಕಳೆದ ವರ್ಷ ರಾಜ್ಯಾದ್ಯಂತ ಪತ್ರಕರ್ತರಿಗಾಗಿ ಏರ್ಪಡಿಸಲಾಗಿದ್ದ 4 ಕಾರ್ಯಾಗಾರಗಳ ಅವಲೋಕನ ಕುರಿತ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸೆಲ್ಕೋ ಸಂಸ್ಥಾಪಕರು ಮತ್ತು ಮ್ಯಾಗ್ಸೆಸ್ಸೆ ಪುರಸ್ಕೃತರಾದ ಹರೀಶ್ ಹಂದೆ, ಸೆಲ್ಕೊ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ, ಸೆಲ್ಕೋ ಫೌಂಡೇಷನ್ ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ, ನಿರ್ದೇಶಕರಾದ ಹುದಾ ಜಾಫರ್, ಸೆಲ್ಕೋ ಇಂಡಿಯಾದ ಮಹಾ ಪ್ರಬಂಧಕರಾದ ಜಗದೀಶ್ ಪೈ ಹಾಗೂ ಸಿಬ್ಬಂದಿ ಹಾಜರಿದ್ದರು.
ಕರ್ನಾಟಕ
Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ
Tumkur News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರಣ್ಯ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದ್ದಾರೆ.
ತುಮಕೂರು: ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೈತರ ಮೇಲೆ ಅರಣ್ಯ ಸಿಬ್ಬಂದಿ ಮನಸೋ ಇಚ್ಛೇ ಲಾಠಿ ಚಾರ್ಜ್ ಮಾಡಿದ್ದರಿಂದ ನಾಲ್ವರು ರೈತರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ (Tumkur News) ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗಯ್ಯನಪಾಳ್ಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆಗೆ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.,
ಬಗರ್ ಹುಕುಂ ಭೂಮಿಯಲ್ಲಿ ಟ್ರಂಚ್ ಹೊಡೆಯಲು ಗ್ರಾಮಸ್ಥರು ವಿರೋಧಿಸಿದ್ದರು. ಆದರೆ, ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದರಿಂದ ಕಳೆದ 15 ದಿನಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಜಟಾಪಟಿ ನಡೆಯುತ್ತಿತ್ತು.
ಗುರುವಾರ ನೂರಕ್ಕೂ ಹೆಚ್ಚು ಸಿಬ್ಬಂದಿ ಜತೆ ಬಂದು ಅಧಿಕಾರಿಗಳು ಟ್ರಂಚ್ ಹೊಡೆಯಲು ಮುಂದಾಗಿದ್ದರು. ಈ ವೇಳೆ ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ಅರಣ್ಯ ಸಿಬ್ಬಂದಿ ರೈತರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ಮಹಿಳೆಯರು ಸೇರಿ ಹತ್ತಾರು ರೈತರಿಗೆ ಪೆಟ್ಟಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಅರಣ್ಯ ಸಿಬ್ಬಂದಿಗೂ ಗಾಯಗಳಾಗಿವೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಗಲಾಟೆ ವೇಳೆ ರೈತ ಹೋರಾಟದ ನೇತೃತ್ವ ವಹಿಸಿದ್ದ ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ಕಾಲಲ್ಲಿ ತುಳಿದು ಜೀಪ್ನಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಅರಣ್ಯ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ವಾಪಸ್ ಕಳುಹಿಸಿ ಎಂದು ಆಗ್ರಹಿಸಿ ಸ್ಥಳದಲ್ಲೇ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.
ಶ್ರೀರಾಮ ನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ
ಯಾದಗಿರಿ: ಜಿಲ್ಲೆಯ ಸುರಪುರ ನಗರದಲ್ಲಿ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ದೇವರ ಮೆರವಣಿಗೆ ವೇಲೆ ಕಾಲು ತುಳಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಸುರಪುರ ಪಟ್ಣದ ಗಾಂಧಿ ವೃತ್ತದಲ್ಲಿ ರಾಮಸೇನೆಯಿಂದ ಆಂಜನೇಯ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ಮಾಡುವ ವೇಳೆ ಗಲಾಟೆ ನಡೆದಿದೆ. ಡಿಜೆ ಸೌಂಡ್ಗೆ ಡಾನ್ಸ್ ಮಾಡುವಾಗ ಒಬ್ಬರಿಗೊಬ್ಬರು ಕಾಲು ತುಳಿತ ವಿಚಾರಕ್ಕೆ ಜಗಳ ಆರಂಭವಾಗಿದೆ. ಹೀಗಾಗಿ ಪೊಲೀಸ್ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಕರ್ನಾಟಕ
ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್ಜಿಪಿಟಿ ಉಚಿತ ಸಬ್ಸ್ಕ್ರಿಪ್ಶನ್ ನೀಡಿದ ಬೆಂಗಳೂರು ಕಂಪನಿ
ChatGPT Subscription: ಚಾಟ್ಜಿಪಿಟಿಯು ಬಹುತೇಕ ಕ್ಷೇತ್ರಗಳನ್ನು ಆವರಿಸುತ್ತಿದೆ. ಬೆಂಗಳೂರಿನ ಕ್ಯಾಪಿಟಲ್ ಮೈಂಡ್ ಎಂಬ ಕಂಪನಿಯು ಚಾಟ್ಜಿಪಿಟಿಯ ಮಹತ್ವವನ್ನು ಅರಿತು, ಅದರ ನೋಂದಣಿಯನ್ನು ಉದ್ಯೋಗಿಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ.
ಬೆಂಗಳೂರು: ಚಾಟ್ಜಿಪಿಟಿ ಚಾಟ್ಬಾಟ್ ಬಗ್ಗೆಯೇ ಈಗ ಎಲ್ಲಡೆ ಮಾತು ಕೇಳಿಬರುತ್ತಿವೆ. ಅದರಲ್ಲೂ, ಕೃತಕ ಬುದ್ಧಿಮತ್ತೆಯಿಂದ (Artificial Intelligence) ಇದು ಕಾರ್ಯನಿರ್ವಹಿಸುತ್ತಿರುವ ಕಾರಣ ಚಾಟ್ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಹೀಗಿರುವ ಮಧ್ಯೆಯೇ, ಬೆಂಗಳೂರಿನ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್ಜಿಪಿಟಿಯ ಸಬ್ಸ್ಕ್ರಿಪ್ಶನ್ಅನ್ನು (ChatGPT Subscription) ಉಡುಗೊರೆಯಾಗಿದೆ ನೀಡಿದೆ.
ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್ (Capital Mind) ಎಂಬ ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಚಾಟ್ಜಿಪಿಟಿ ಸಬ್ಸ್ಕ್ರಿಪ್ಶನ್ ನೀಡಿದೆ. ಇತ್ತೀಚೆಗೆ ಚಾಟ್ಜಿಪಿಟಿ ಬಳಕೆಯಿಂದ ಕಂಪನಿಯ ನೌಕರರ ಕಾರ್ಯದಕ್ಷತೆ ಹಾಗೂ ಉತ್ಪಾದಕೆಯು ಜಾಸ್ತಿಯಾದ ಕಾರಣ ಚಾಟ್ಜಿಪಿಟಿಯ ನೋಂದಣಿಯ ಶುಲ್ಕವನ್ನು ಕಂಪನಿಯೇ ಭರಿಸಲಿದೆ ಎಂದು ಘೋಷಿಸಲಾಗಿದೆ. ಚಾಟ್ಜಿಪಿಟಿಯ ನೋಂದಣಿ ಶುಲ್ಕವು ಮಾಸಿಕ 1,640 ರೂ. (20 ಡಾಲರ್) ಆಗಲಿದೆ. ಇಷ್ಟನ್ನೂ ಕಂಪನಿಯೇ ನೀಡಲಿದೆ.
ಕಂಪನಿ ಸಿಇಒ ಟ್ವೀಟ್
“ಚಾಟ್ಜಿಪಿಟಿಯಿಂದ ನೌಕರರ ಉತ್ಪಾದಕತೆ ಹೆಚ್ಚಾಗಿದೆ. ಅದರಲ್ಲೂ, ಕಿರಿಯ ಉದ್ಯೋಗಿಗಳ ಉತ್ಪಾದಕತೆಯು 5 ಪಟ್ಟು ಜಾಸ್ತಿಯಾಗಿದೆ. ಕೋಡಿಂಗ್ ರಚನೆ ಸೇರಿ ಹಲವು ವಿಧಗಳಲ್ಲಿ ನೌಕರರಿಗೆ ಚಾಟ್ಜಿಪಿಟಿಯು ಅನುಕೂಲವಾಗಿದೆ. ಬೇರೆ ವ್ಯಕ್ತಿಯ ನೆರವಿಲ್ಲದೆ, ಚಾಟ್ಜಿಟಿಪಿಯ ಸಹಾಯದಿಂದಲೇ ನೌಕರರು ಹಲವು ವಿಷಯಗಳನ್ನು ಕಲಿಯುತ್ತಿದ್ದಾರೆ. ಇದರಿಂದ ಕಂಪನಿಯ ಉತ್ಪಾದಕತೆಯು ಹೆಚ್ಚಾಗಿದೆ. ಎಲ್ಲ ಕೆಲಸವೂ ಈಗ ಉತ್ಕೃಷ್ಟ ಮಟ್ಟದಲ್ಲಿ ಸಾಗುತ್ತಿದೆ. ಹಾಗಾಗಿ, ನೌಕರರಿಗೆ ಉಚಿತವಾಗಿ ಚಾಟ್ಜಿಪಿಟಿ ನೋಂದಣಿ ನೀಡಲಾಗುತ್ತಿದೆ” ಎಂದು ಕಂಪನಿಯ ಸಿಇಒ ವಶಿಷ್ಠ ಅಯ್ಯರ್ ಮಾಹಿತಿ ನೀಡಿದ್ದಾರೆ.
ಉದ್ಯೋಗ/ಉದ್ಯಮ ವಲಯವನ್ನು ಚಾಟ್ ಜಿಪಿಟಿ ಕಬಳಿಸುತ್ತಿದೆ, ಮನುಷ್ಯರು ಮಾಡುವ ಹಲವು ಸೃಜನಾತ್ಮಕ ಕೆಲಸಗಳನ್ನು ಇದು ಮಾಡುತ್ತಿರುವ ಕಾರಣ, ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಮನೆಮಾಡಿದೆ. ಚಾಟ್ಜಿಪಿಟಿ ಬಳಕೆ ಮಾಡುತ್ತಿರುವ ಅನೇಕರು ಒಂದಲ್ಲ ಒಂದು ಕಾರಣಕ್ಕೆ ಇದನ್ನು ಹೊಗಳುತ್ತಿದ್ದಾರೆ. ಲೇಖಕರು, ಕಂಟೆಂಟ್ ರೈಟರ್ಗಳು, ಕೋಡಿಂಗ್ ಕ್ಷೇತ್ರದಲ್ಲಿರುವವರಿಗೆ ಚಾಟ್ಜಿಪಿಟಿಯು ಮಾರಕ ಎಂಬ ವರದಿಗಳು ಕೂಡ ಲಭ್ಯವಾಗಿವೆ.
ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಚಾಟ್ ಜಿಪಿಟಿಯಿಂದ ನನ್ನ ನಾಯಿ ಬದುಕುಳಿಯಿತು ಎಂದು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ತಿಳಿಸಿದ್ದರು. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಚಾಟ್ಬಾಟ್ ಚಾಟ್ಜಿಪಿಟಿಯಿಂದ ತಮಗೆ ಆದ ಸಹಾಯವನ್ನು ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ನಾಯಿಯ ಜೀವನನ್ನು ಉಳಿಸಿದ್ದು ಚಾಟ್ಜಿಪಿಟಿ’ ಎಂದು ಬರೆದುಕೊಂಡಿದ್ದು, ಅದು ಹೇಗೆ ಎಂಬುದನ್ನೂ ವಿವರಿಸಿದ್ದರು. @peakcooper ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಟೋರಿ ಹಂಚಿಕೊಳ್ಳಲಾಗಿದೆ. ಅನಾರೋಗ್ಯಕ್ಕೀಡಾದ ನನ್ನ ನಾಯಿ ಸ್ಯಾಸಿಗೆ ಏನಾಗಿದೆ ಎಂದು ಕಂಡು ಹಿಡಿಯಲು ಪಶುವೈದ್ಯರಿಗೂ ಸಾಧ್ಯವಾಗಲಿಲ್ಲ. ಆದರೆ ಚಾಟ್ಬಾಟ್ ಚಾಟ್ಜಿಪಿಟಿ ನನ್ನ ನಾಯಿಯ ರೋಗ ಪತ್ತೆ ಮಾಡಿ, ಅದನ್ನು ಉಳಿಸಿಕೊಟ್ಟಿತು’ ಎಂದಿದ್ದರು.
ಇದನ್ನೂ ಓದಿ: ChatGpt: ನಾಯಿಯ ಜೀವ ಉಳಿಸಿದ ಚಾಟ್ಜಿಪಿಟಿ; ಪಶುವೈದ್ಯರಿಗೂ ಗೊತ್ತಾಗಲಿಲ್ಲ ಎಂದ ಶ್ವಾನದ ಮಾಲೀಕ
-
ಕರ್ನಾಟಕ16 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್17 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್14 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!
ಸಾಂಗತ್ಯ
17 March 2023, 1:15 AM at 1:15 am
ಪುನೀತ್ ರಾಜಕುಮಾರ್ ಬಗ್ಗೆ ನಾನು ಬರೆದ ಲೇಖನವನ್ನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಆದರೆ ನನ್ನ ಫೋಟೋ ಬದಲಾಗಿ ಬೇರೊಬ್ಬರ ಫೋಟೋ ಪ್ರಕಟವಾಗಿದೆ ದಯವಿಟ್ಟು ಗಮನಿಸಿ. ನಮಸ್ಕಾರಗಳೊಂದಿಗೆ ಸಾಂಗತ್ಯ ಬೆಂಗಳೂರು.