Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ Vistara News
Connect with us

ಕರ್ನಾಟಕ

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

Viral Video: ಬೆಂಗಳೂರು ಟ್ರಾಫಿಕ್‌ ಬಗ್ಗೆ ಕತೆಗಳನ್ನು ಆಗಾಗ ಕೇಳಿರುತ್ತೀರಿ. ಇಲ್ಲಿನ ವಾಹನ ದಟ್ಟಣೆಗೆ ಜನ ಬೆಚ್ಚಿ ಬೀಳುತ್ತಾರೆ. ಅಷ್ಟರ ಮಟ್ಟಿಗೆ ವಾಹನ ದಟ್ಟಣೆಯು ಸಮಸ್ಯೆಯನ್ನು ಹುಟ್ಟು ಹಾಕಿದೆ.

VISTARANEWS.COM


on

Bus Driver
Koo

ಬೆಂಗಳೂರು: ಸಿಲಿಕಾನ್‌ ವ್ಯಾಲಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಬೆಂಗಳೂರು (Bengaluru) ತನ್ನ ಸಂಚಾರದಟ್ಟಣೆಗೂ ಜಗದ್ವಿಖ್ಯಾತಿ ಪಡೆದಿದೆ(traffic). ಪ್ರತಿನಿತ್ಯವೂ ಲಕ್ಷಗಟ್ಟಲೆ ಮಂದಿ ತಮ್ಮ ವೃತ್ತಿ ನಿಮಿತ್ತವಾಗಿ ಬೆಂಗಳೂರಿನಲ್ಲಿ ನಿತ್ಯವೂ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಮಾಡುತ್ತಿದ್ದು ಈ ಟ್ರಾಫಿಕ್‌ ಸಮಸ್ಯೆಯಿಂದ ತಮ್ಮ ಮನೆಗಳನ್ನು ಸೇರಿಕೊಳ್ಳಲು ಹರಸಾಹಸ ಪಡುತ್ತಾರೆ. ಮೆಟ್ರೋನಂತಹ ಸಾರ್ವಜನಿಕ ಸೇವೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದರೂ, ಇಂದಿಗೂ ಬೆಂಗಳೂರು ಎಂದರೆ ಟ್ರಾಫಿಕ್‌ ಜಾಮ್‌, ಟ್ರಾಫಿಕ್‌ ಎಂದರೆ ಬೆಂಗಳೂರು ಎಂಬ ಅನ್ವರ್ಥನಾಮ ಮಾತ್ರ ಬದಲಾಗಿಲ್ಲ. ಬಹಳಷ್ಟು ಮಂದಿ ಸಂಚಾರದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡ ಕಚೇರಿಯ ಅಳಿದುಳಿದ ಕೆಲಸವನ್ನೋ, ನೆಟ್‌ಫ್ಲಿಕ್ಸ್‌, ಪ್ರೈಮ್‌ನಲ್ಲಿ ಸಿನಿಮಾ, ಸೀರೀಸ್‌ ನೋಡಿಕೊಂಡೋ, ಪುಸ್ತಕ ಓದುತ್ತಲೋ, ಅಥವಾ ತಮ್ಮ ಪ್ರೀತಿಪಾತ್ರರ ಜೊತೆಗೆ ಫೋನ್‌ನಲ್ಲಿ ಹರಟುತ್ತಲೋ ಸಮಯವನ್ನು ಪೋಲಾಗದಂತೆ ಬಳಸಿಕೊಳ್ಳುವ ಮಾರ್ಗಗಳನ್ನೂ ಕಂಡುಕೊಂಡಿದ್ದಾರೆ. ಇದು ತಾವೇ ವಾಹನ ಚಲಾಯಿಸದ ಮಂದಿಯ ಕಥೆಯಾಯಿತು. ಇನ್ನು ವಾಹನ ಚಾಲನೆ ಮಾಡುವವರ ಒತ್ತಡ ಹೇಗಿದ್ದೀತು ಯೋಚಿಸಿ(Viral Video).

ಬೆಂಗಳೂರು ಟ್ರಾಫಿಕ್‌ ಎಫೆಕ್ಟ್, ಊಟ ಮಾಡಿ ಮುಗಿಸಿದ ಡ್ರೈವರ್ ವಿಡಿಯೋ

ಮುಖ್ಯವಾಗಿ ದಿನವಿಡೀ ಬೆಂಗಳೂರಿನಲ್ಲಿ ಬಸ್‌ ಚಲಾಯಿಸುವ ಡ್ರೈವರ್‌ಗಳ ಪರಿಸ್ಥಿತಿ ಹೇಗಿದ್ದೀತು ಹಾಗೂ, ಬೆಂಗಳೂರಿನ ಟ್ರಾಫಿಕ್‌ ಕೆಲವೊಮ್ಮೆ ಹೇಗಿರುತ್ತದೆ ಎಂಬುದನ್ನು ಅರಿಯಲು ಇದೀಗ ವೈರಲ್‌ ಆಗಿರುವ ಈ ವಿಡಿಯೋ ನೋಡಬೇಕು. ಸಾಯ್‌ ಚಾಂದ್‌ ಭಯ್ಯವರಪು ಎಂಬವರು ಇನ್ಸ್‌ಟಾಗ್ರಾಂ ವಿಡಿಯೋನಲ್ಲಿ ಬಸ್‌ ಡ್ರೈವರ್‌ ಒಬ್ಬರು ಟ್ರಾಫಿಕ್‌ ಜಾಂನಲ್ಲಿ ಸಿಲುಕಿರುವಾಗಲೇ ತನ್ನ ಸೀಟಿನಲ್ಲಿ ಕೂತು ಮಧ್ಯಾಹ್ನದ ಊಟ ಪೂರ್ತಿಯಾಗಿ ಉಂಡು ಮುಗಿಸುವ ವಿಡಿಯೋ ಇದು. ಟ್ರಾಫಿಕ್‌ ಜಾಂಗೆ ಹೆಸರುವಾಗಿಯಾಗಿರುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಸೆರೆ ಹಿಡಿಯಲಾಗಿರುವ ಈ ವಿಡಿಯೋನಲ್ಲಿ ಬಸ್‌ ಡ್ರೈವರ್‌ ಒಬ್ಬರು ಟ್ರಾಫಿಕ್‌ನಲ್ಲಿ ಕಾಯುತ್ತಾ ತನ್ನ ಬುತ್ತಿ ತೆರೆದು ನಿಧಾನವಾಗಿ ಕೂತು ಉಣ್ಣುವ ದೃಶ್ಯವಿದು.

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯ ಪರಾಕಾಷ್ಠೆಯಿದು ಎಂಬ ಶೀರ್ಷಿಕೆಯಡಿ ಹಂಚಲಾಗಿರುವ ಈ ವಿಡಿಯೋಗೆ ಎರಡು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ದೊರೆತಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹಲವರು ಡ್ರೈವರ್‌ ಬಗೆಗೆ ಕಾಳಜಿ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಬೆಂಗಳೂರಿನ ಇಂಥ ಟ್ರಾಫಿಕ್‌ಗೆ ಸರಿಯಾದ ಪರಿಹಾರ ಕಂಡುಹಿಡಿಯಲಾಗದೆ ಇರುವ ಅಧಿಕಾರಿಗಳು ಹಾಗೂ ಸರ್ಕಾರವನ್ನು ತೆಗಳಿದ್ದಾರೆ.

ಡ್ರೈವರ್‌ ಒಬ್ಬನಿಗೆ ನೆಮ್ಮದಿಯಾಗಿ ಒಂದು ಕಡೆ ಕೂತು ಉಣ್ಣುವಷ್ಟು ಸಮಯವನ್ನೂ ಕೊಡದ ಈ ಟ್ರಾಫಿಕ್‌ ಸಮಸ್ಯೆ ನಿಜಕ್ಕೂ ಖೇದಕರ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಬೆಂಗಳೂರು ಟ್ರಾಫಿಕ್ಕನ್ನು ನಗೆಯಾಡುತ್ತಾ, ಡ್ರೈವರ್‌ ಅಲ್ಲೇ ಬಹುಶಃ ರಾತ್ರಿಯೂಟವನ್ನೂ ಮುಗಿಸಬೇಕಾದ ಪರಿಸ್ಥಿತಿಯೂ ಬರಬಹುದು ಎಂದಿದ್ದಾರೆ.

ಇನ್ನೂ ಕೆಲವರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದು, ʻನಾವೂ ಕೂಡಾ ಕಚೇರಿಗೆ ಹೊರಡುವಾಗ ಮನೆಯಲ್ಲಿ ಬೆಳಗಿನ ಉಪಹಾರ ತಿಂದು ಹೊರಡುವ ಬದಲು, ಮೊದಲೇ ಹೊರಟು, ದಾರಿಯಲ್ಲಿ ಟ್ರಾಫಿಕ್ಕಿನಲ್ಲಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆʼ ಎಂದಿದ್ದಾರೆ. ಇನ್ನೂ ಕೆಲವರು ೧೫ರಿಂದ ೨೦ ನಿಮಿಷಗಳ ಕಾಲ ಇದೇ ಸಿಲ್ಕ್‌ ಬೀರ್ಡ್‌ ಜಂಕ್ಷನ್‌ನಲ್ಲಿ ಒಂದೇ ರಸ್ತೆಯಲ್ಲಿ ಇರಬೇಕಾಗುತ್ತದೆ ಎಂದು ಪರಿಸ್ಥಿತಿಯ ವಾಸ್ತವವನ್ನು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video : ಇದು ರಿಯಲ್‌ ಕೆಜಿಎಫ್‌ ಕತೆ; ಸಮುದ್ರಕ್ಕೆ ಜಿಗಿದು 20 ಕೋಟಿ ರೂ. ಮೌಲ್ಯದ ಚಿನ್ನ ತೆಗೆದ ವಿಡಿಯೊ ಇಲ್ಲಿದೆ ನೋಡಿ!

ಇತ್ತೀಚೆಗಷ್ಟೇ, ಬೆಂಗಳೂರಿನ ಟ್ರಾಫಿಕ್‌ನ ಪರಿಸ್ಥಿತಿಯನ್ನು ಹೇಳುವ ಮಹಿಳೆಯೊಬ್ಬರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಮಹಿಳೆಯೊಬ್ಬರು ಸ್ಕೂಟರಿನಲ್ಲಿ ಹಿಂದೆ ಕೂತು ಲ್ಯಾಪ್‌ಟಾಪ್‌ನಲ್ಲಿ ಟ್ರಾಫಿಕ್‌ನಲ್ಲೇ ಕೆಲಸ ಮಾಡುತ್ತಿರುವ ಫೋಟೋ ಅದಾಗಿತ್ತು. ಕೋರಮಂಗಲ ಹೊರವರ್ತುಲ ರಸ್ತೆಯ ಟ್ರಾಫಿಕ್‌ನ ಫೋಟೋ ಅದಾಗಿತ್ತು. ಈ ಚಿತ್ರಗಳು ಹಾಗೂ ವಿಡಿಯೋಗಳು ಇದೀಗ ಮತ್ತೆ ಸಂಚಾರ ದಟ್ಟಣೆಯ ಬಗ್ಗೆ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕುತ್ತಿವೆ.

ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕರ್ನಾಟಕ

Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

Cauvery Dispute: ಕಾವೇರಿ ವಿಚಾರದಲ್ಲಿ ಎಲ್ಲ ಹಂತಗಳಲ್ಲಿ ನಮಗೆ ಸೋಲಾಗಲು ಪ್ರಮುಖ ಕಾರಣ, ನಾವು ಸರಿಯಾಗಿ ವಾದ ಮಾಡದೆ ಇರುವುದು, ವಾಸ್ತವಾಂಶ ತಿಳಿಸದೆ ಇರುವುದು. ಈ ಆರೋಪ ನಿಜವೇ? ಹಾಗಿದ್ದರೆ ಕರ್ನಾಟಕದ ವಾದ ಏನಿತ್ತು? ಬಾರ್‌ ಎಂಡ್‌ ಬೆಂಚ್‌ ವೆಬ್‌ಸೈಟ್‌ ಪ್ರಸ್ತುತಪಡಿಸಿದ ಅಧ್ಯಯನಾತ್ಮಕ ಅಂಶಗಳನ್ನು ನಿಮ್ಮ ಮುಂದಿಡಲಾಗಿದೆ.

VISTARANEWS.COM


on

Edited by

Cauvery water Dispute
Koo

ಬೆಂಗಳೂರು: ಕಾವೇರಿ ನೀರು ವಿಚಾರದಲ್ಲಿ (Cauvery Dispute) ಕರ್ನಾಟಕ ಎಲ್ಲ ಹಂತಗಳಲ್ಲೂ ಹಿನ್ನಡೆ ಅನುಭವಿಸಲು ಕಾರಣ ರಾಜ್ಯದ ಅಧಿಕಾರಿಗಳು (Officials of Karnataka) ಸರಿಯಾದ ವಾದ ಮಂಡಿಸದೇ ಇರುವುದು ಎನ್ನುವುದು ಹೆಚ್ಚಿನವರ ಆಪಾದನೆ. ಅದರಲ್ಲೂ ಕರ್ನಾಟಕದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಾಡಿದ್ದರಿಂದ ಸೋಲಾಯಿತು ಎನ್ನುವುದು ಇನ್ನೊಂದು ವಾದ. ಹಾಗಿದ್ದರೆ ಈ ಆರೋಪ ಸತ್ಯವೇ? ಅಥವಾ ರಾಜಕೀಯಪ್ರೇರಿತವೇ? ಹಾಗಿದ್ದರೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಮುಂದೆ ಏನೇನು ವಾದ ಮಾಡಿತ್ತು?

ಎಲ್ಲರಿಗೂ ತಿಳಿದಿರುವಂತೆ ಸೆ. 21ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ (Supreme Court) ಎತ್ತಿ ಹಿಡಿದದ್ದು ಸೆ. 19ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು. ಅದರಾಚೆಗೆ ಅದು ಯಾವ ಅಂಶವನ್ನೂ ಕೇಳಿಸಿಕೊಳ್ಳಲಿಲ್ಲ. ಹಾಗಿದ್ದರೆ ಸೆ. 19ರ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ತನ್ನ ವಾದದಲ್ಲಿ ಸೋಲು ಕಂಡಿತೇ? ಹಾಗಾಗಿ ಪ್ರಾಧಿಕಾರ ಕರ್ನಾಟಕದ ವಿರುದ್ಧವಾಗಿ ತೀರ್ಪು ನೀಡಲು, ನೀರು ಬಿಡುಗಡೆಗೆ ಆದೇಶ ನೀಡಲು ಕಾರಣವಾಯಿತೇ ಎನ್ನುವುದು ಮುಖ್ಯ ಪ್ರಶ್ನೆ.

ಇದನ್ನು ತಿಳಿಯಬೇಕು ಎಂದಾದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.19ರಂದು ನಡೆಸಿರುವ 24ನೇ ಸಭೆಯ (ತುರ್ತು ಸಭೆ) ನಡಾವಳಿಗಳನ್ನು ಗಮನಿಸಬೇಕು.

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೆ. 12ರಂದು ನೀಡಿದ ಆದೇಶದಲ್ಲಿ ಪ್ರತಿದಿನ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ವಾಸ್ತವವಾಗಿ ತಮಿಳುನಾಡಿನ ಅಧಿಕಾರಿಗಳು ಪ್ರತಿದಿನ 12,500 ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್‌ಎಸ್‌ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್‌ ನೀರು ಮಾತ್ರ ಹರಿಸಬಹುದು ಎಂದು ವಾದ ಮಾಡಿದ್ದರು. ಅಂತಿಮವಾಗಿ ಪ್ರಾಧಿಕಾರವು ಪ್ರತಿದಿನ 5000 ಕ್ಯೂಸೆಕ್ಸ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲುಆರ್‌ಸಿ) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು. ಹಾಗಿದ್ದರೆ 2500 ಕ್ಯೂಸೆಕ್‌ ನೀರು ಬಿಡಬಹುದು ಎಂದು ಒಪ್ಪಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೂ ಎದ್ದು ಬರುತ್ತದೆ. ಹೀಗೆ ಮಾಡಿದ್ದರಿಂದ ಸಮನ್ವಯ ಸೂತ್ರವಾಗಿ ಪ್ರಾಧಿಕಾರ 5000 ಕ್ಯೂಸೆಕ್‌ ನೀರು ಬಿಡಿ ಎಂದು ಹೇಳಿದೆ. ಕೊಡುವುದೇ ಇಲ್ಲ ಎಂದು ವಾದಿಸಬೇಕಿತ್ತು ಎನ್ನುವುದು ಕೆಲವರ ವಾದ.

ಹಾಗಿದ್ದರೆ ಒಟ್ಟಾರೆಯಾಗಿ ಪ್ರಾಧಿಕಾರದ ಅಂದಿನ ಸಭೆಯಲ್ಲಿ ಕರ್ನಾಟಕ ಮಾಡಿದ ವಾದ ಏನಾಗಿತ್ತು? ತಮಿಳುನಾಡು ಏನು ಹೇಳಿತ್ತು. ಬಾರ್‌ ಎಂಡ್‌ ಬೆಂಚ್‌ ವೆಬ್‌ ಸೈಟ್‌ ಸಂಗ್ರಹಿಸಿದ ಸಮಗ್ರ ಮಾಹಿತಿಯ ಸಾರವನ್ನು ಇಲ್ಲಿ ನೀಡಲಾಗಿದೆ.

ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ ಏನಿತ್ತು?

  1. ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಇದಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.
  2. 2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಸಿಡಬ್ಲ್ಯುಆರ್‌ಸಿಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.
  3. ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.
  4. ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ 46.271 ಟಿಎಂಸಿ ನೀರನ್ನು ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯದಿಂದ ಹರಿಸಲಾಗಿದೆ. ಕರ್ನಾಟಕವು ನೈರುತ್ಯ ಮುಂಗಾರಿನಿಂದ ಕೇವಲ 25.689 ಟಿಎಂಸಿ ನೀರು ಸಂಗ್ರಹಿಸಿದೆ. ತಮಿಳುನಾಡು ರಾಜ್ಯವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಳೆಗಳಿಗೆ ಈಶಾನ್ಯ ಮಾರುತ ಆಧರಿಸಿದ್ದು, ಕ್ಯಾರಿಓವರ್ ಸ್ಟೋರೇಜ್ (ಮುಂಬಳಕೆ ಸಂಗ್ರಹ) ಅನ್ನು ದುರ್ಬಳಕೆ ಮಾಡಿ ಈಗಾಗಲೇ 100 ಟಿಎಂಸಿ ನೀರನ್ನು ಕರ್ನಾಟಕದಿಂದ ಪಡೆದಿದೆ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ನೀರು ದುರ್ಬಳಕೆ ಮಾಡಿಕೊಂಡಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
  5. ಮಳೆ ಕೊರತೆಯನ್ನು ನಿರ್ಧರಿಸುವಾಗ ನಿಯಂತ್ರಣ ಸಮಿತಿಯು ಕಾವೇರಿ ಪಾತ್ರದ ಒಟ್ಟು 81,155 ಚದರ ಕಿ ಮೀ ಜಲಾನಯನ ಪ್ರದೇಶವನ್ನು ಪರಿಗಣಿಸುವ ಬದಲಾಗಿ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶ 12,812 ಚದರ ಕಿ ಮೀ ಅನ್ನು ಮಾತ್ರವೇ ಪರಿಗಣಿಸುವ ಮೂಲಕ ಸ್ವೇಚ್ಛೆಯಿಂದ ನಿರ್ಧಾರ ತಳೆದಿದೆ. ಮಳೆಯ ಕೊರತೆಯನ್ನು ಆಧರಿಸಿ ಮಾತ್ರವೇ ಸಂಕಷ್ಟ ನಿರ್ಧರಿಸುವಂತಿಲ್ಲ. ಬದಲಿಗೆ ನದೀ ಮುಖಜ ಭೂಮಿಯಲ್ಲಿರುವ ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಬೇಕು. ಅಲ್ಲದೇ, ನದೀ ಮುಖಜ ಭಾಗದಲ್ಲಿನ ಈಶಾನ್ಯ ಮಳೆಮಾರುತವನ್ನೂ ಸಹ ಪರಿಗಣಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಗಳ ಕನಿಷ್ಠ ಅವಶ್ಯಕತೆ ಹಾಗೂ ವಾಸ್ತವಿಕ ಅಂಶಗಳನ್ನು ಆಧರಿಸಿ ನೀರು ಹಂಚಿಕೆ ಮಾಡುವುದು ಸೂಕ್ತವಾದ ಮಾನದಂಡವಾಗಿದೆ.
  6. ಸಿಡಬ್ಲ್ಯುಆರ್‌ಸಿಯು ಕಳೆದ 30 ವರ್ಷಗಳ ಸರಾಸರಿ ಮಳೆ ಹಾಗೂ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗಿನ ಬೆಳೆ ಆಧರಿಸಿ ಕೊರತೆ ಅಂದಾಜಿಸಿದೆ. ಆದರೆ, ಕಾವೇರಿ ನ್ಯಾಯ ಮಂಡಳಿಯು 1938-35ರಿಂದ 1971-27ರವರೆಗಿನ ಅಂಕಿ ಅಂಶ ಆಧರಿಸಿ ಸಾಮಾನ್ಯ ಮಳೆ ವರ್ಷದಲ್ಲಿ ಕಾವೇರಿ ಕೊಳ್ಳದ ನೀರು ಲಭ್ಯತೆಯನ್ನು 740 ಟಿಎಂಸಿ ಎಂದು ನಿರ್ಧರಿಸಿತ್ತು.
  7. ಕರ್ನಾಟಕ ಜಲಾಶಯಗಳ ಜಲಾನಯನ ಪ್ರದೇಶಗಳ ವಿಚಾರದಲ್ಲಿ, ಕರ್ನಾಟಕದ ಅಣೆಕಟ್ಟುಗಳ ಕೆಳಗಿರುವ ಹಾಗೂ ಬಿಳಿಗುಂಡ್ಲು ಅಂತರ ರಾಜ್ಯ ಗಡಿಗಿಂತ ಮೇಲಿರುವ ಸುಮಾರು 23,921 ಚ.ಕಿಮೀ ವ್ಯಾಪ್ತಿಯ ಮಧ್ಯಂತರ ಜಲಾನಯನ ಪ್ರದೇಶದಲ್ಲಿನ ಮಳೆ ಕೊರತೆಯನ್ನು ಸಿಡಬ್ಲ್ಯುಆರ್‌ಸಿಯು ಪ್ರಜ್ಞಾಪೂರ್ವಕವಾಗಿ ಮರೆಮಾಚಿದೆ. ಇದರ ವ್ಯಾಪ್ತಿಯು 23,921 ಚದರ ಕಿ ಮೀ ಆಗಿದೆ. ಈ ಪ್ರದೇಶದಲ್ಲಿನ ಮಳೆ ಕೊರತೆಯು ಕರ್ನಾಟಕದ ಅಣೆಕಟ್ಟುಗಳ ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಮಳೆಕೊರತೆ ಪ್ರಮಾಣವಾದ ಶೇ.54.42 ಕ್ಕಿಂತ ಹೆಚ್ಚಿದೆ.
  8. ಈ ಮಧ್ಯಂತರ ಜಲಾನಯನ ಪ್ರದೇಶದ 23,921 ಚದರ ಕಿಮೀ ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರ ಅವಧಿಯಲ್ಲಿ ಅಂದಾಜು 14.286 ಟಿಎಂಸಿ ಹರಿಯುವ ನಿರೀಕ್ಷೆ ಇತ್ತು. ಆದರೆ, ಇದರಿಂದ 2 ಟಿಎಂಸಿಗೂ ಕಡಿಮೆ ಪ್ರಮಾಣದ ಕನಿಷ್ಠ ಹರಿವಾಗಿದೆ.
  9. ಸಾಮಾನ್ಯ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಕೋಟಾ ಪ್ರಕಾರ 36.76 ಟಿಎಂಸಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸಬೇಕು. 2023ರ ಸೆಪ್ಟೆಂಬರ್ 13ರಿಂದ 27ರ ಅವಧಿಯಲ್ಲಿ 18.38 ಟಿಎಂಸಿ ಬಿಡಬೇಕಿದೆ. ಆದರೆ, ಮಳೆ ಕೊರತೆಯ ಕಾರಣಕ್ಕೆ 10.002 ಟಿಎಂಸಿ ಕಳೆದು 8.378 ಟಿಎಂಸಿ ಅಥವಾ ಪ್ರತಿ ದಿನ 6400 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ನಿರ್ಧರಿಸುವ ಮೂಲಕ ಸಿಡಬ್ಲ್ಯುಆರ್‌ಸಿ ಪ್ರಮಾದ ಎಸಗಿದೆ. ಈ ಅಂದಾಜು ಸ್ವೇಚ್ಛೆಯಿಂದ ಕೂಡಿದೆ. ಏಕೆಂದರೆ ಸೆಪ್ಟೆಂಬರ್‌ನಲ್ಲಿ ನೈರುತ್ಯ ಮುಂಗಾರು ವಿಫಲವಾಗಿದೆ. ಅಲ್ಲದೆ, ಹವಾಮಾನ ಇಲಾಖೆಯ ಅಂದಾಜನ್ನು ಗಣನೆಗೆ ತೆಗೆದುಕೊಂಡರೆ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಇನ್ನೂ ಹೆಚ್ಚಿರಲಿದೆ. ಈ ನೆಲೆಯಲ್ಲಿ 2023ರ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸುವ ಮೂಲಕ ಸಿಡಬ್ಲ್ಯುಆರ್‌ಸಿ ತರ್ಕದಲ್ಲಿ ವಿಫಲವಾಗಿದೆ.
  10. ನದಿ ಮುಖಜ ಭಾಗದಲ್ಲಿನ ಅಂತರ್ಜಲ ಲಭ್ಯತೆಯನ್ನು ಸಿಡಬ್ಲ್ಯುಆರ್‌ಸಿ ಅನುಕೂಲಕ್ಕೆ ತಕ್ಕಂತೆ ಅವಗಣನೆ ಮಾಡಿದೆ. ಈಶಾನ್ಯ ಮಾರುತವು ತಮಿಳುನಾಡಿನ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಇದನ್ನು ಸಿಡಬ್ಲ್ಯುಆರ್‌ಸಿ ಪರಿಗಣಿಸಿಲ್ಲ. ಬಾಕಿ ಇರುವ ತಿಂಗಳ ಅವಧಿಗೆ (ಮುಂದಿನ ಜೂನ್‌ವರೆಗೆ) ಕರ್ನಾಟಕಕ್ಕೆ ಕನಿಷ್ಠ ಅಗತ್ಯವಾಗಿ 106 ಟಿಎಂಸಿ ನೀರು ಬೇಕಿದೆ ಎಂಬುದನ್ನು ಸಿಡಬ್ಲ್ಯುಆರ್‌ಸಿ ಗಣನೆಗೆ ತೆಗೆದುಕೊಳ್ಳುವಲ್ಲಿ ಎಡವಿದೆ. ಕರ್ನಾಟಕದ ಜಲಾಶಯಗಳಲ್ಲಿ ಸದ್ಯ 54.114 ಟಿಎಂಸಿ ನೀರು ಇದ್ದು, ಸರಾಸರಿ ಮಳೆಯ ಪ್ರಮಾಣಕ್ಕೆ ಶೇ.54 ಮಳೆ ಕೊರತೆಯನ್ನು ಸೇರಿಸಿದರೆ ಒಳಹರಿವು 44.78 ಟಿಎಂಸಿ ಮಾತ್ರ ಇರುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಒಟ್ಟ ನೀರು ಲಭ್ಯತೆಯ ಪ್ರಮಾಣ 98.854 ಟಿಎಂಸಿ ಮಾತ್ರ ಆಗಲಿದೆ. ಆದರೆ, ನಾವು ಕಳೆದ ಮೂವತ್ತು ವರ್ಷಗಳ ಅತಿ ಹೆಚ್ಚು ಮಳೆ ಕೊರತೆಯ ವರ್ಷಗಳಲ್ಲಿನ ಪ್ರತಿ ತಿಂಗಳ ಕನಿಷ್ಠ ಒಳಹರಿವನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸೆಪ್ಟೆಂಬರ್‌ ತಿಂಗಳ ಉಳಿಕೆ ಅವಧಿಯ 10 ಟಿಎಂಸಿಯೂ ಸೇರಿದಂತೆ ಡಿಸೆಂಬರ್‌ ವರೆಗಿನ ನೀರು ಲಭ್ಯತೆಯ ಪ್ರಮಾಣ ಒಟ್ಟು 20 ಟಿಎಂಸಿ ದಾಟುವುದಿಲ್ಲ. ಈ ನೆಲೆಯಲ್ಲಿ ಗಮನಿಸಿದರೆ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 74.114 ಟಿಎಂಸಿ ಮೀರುವ ಸಾಧ್ಯತೆ ಇಲ್ಲ. ಹಾಗಾಗಿ, ಕರ್ನಾಟಕದ ಅಗತ್ಯ ಬಳಕೆಗೆ ಮಿತಿಗೊಳಿಸಲಾದ 106 ಟಿಎಂಸಿ ನೀರಿನ ಪ್ರಮಾಣವು ಸಹ ಲಭ್ಯವಾಗದೆ ಹೋಗಬಹುದು.
  11. ಸಿಡಬ್ಲ್ಯುಆರ್‌ಸಿಯು ಬಿಳಿಗುಂಡ್ಲುವಿನಲ್ಲಿ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 7.799 ಟಿಎಂಸಿ ಕೊರತೆಯಾಗಿದೆ ಎಂದು ಅಂದಾಜಿಸಿರುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬರುವ ತಿಂಗಳುಗಳಲ್ಲಿ ಸಿಡಬ್ಲ್ಯುಆರ್‌ಸಿ ಅಂದಾಜಿಸಿರುವ ಕೊರತೆಯು ಶೇ. 45.58 ಮಾತ್ರವಲ್ಲ. ಇದು ಇನ್ನೂ ಹೆಚ್ಚಾಗಲಿದೆ.
  12. ಈಶಾನ್ಯ ಮಳೆಮಾರುತವು ತಮಿಳುನಾಡಿನಲ್ಲಿ ಸಾಧಾರಣವಾಗಿ 45 ದಿನ ಇರಲಿದೆ. ತಮಿಳುನಾಡಿನಲ್ಲಿ ಅಂತರ್ಜಲವು 20ರಿಂದ 30 ಟಿಎಂಸಿ ಇದ್ದು, ಹಾಲಿ ನೀರು ಸಂಗ್ರಹ ಮತ್ತು ಅಂದಾಜು 60 ಟಿಎಂಸಿ ನೀರು ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದು ಬರುವುದರಿಂದ ತಮಿಳುನಾಡು ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕದ ರೈತರಿಗೆ ಅಗತ್ಯವಾಗಿರುವ ಕನಿಷ್ಠ ನೀರಾವರಿ ಅಗತ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯತೆಯ ದೃಷ್ಟಿಯಿಂದ ನೀರು ಬಿಡುಗಡೆ ಮಾಡಲಾಗದು. ವಿಶೇಷವಾಗಿ ಜಗತ್ತಿನ ತಂತ್ರಜಾನ ಹಬ್ ಆಗಿರುವ ಬೆಂಗಳೂರು ವಾರ್ಷಿಕ 100 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಕೆ ಮಾಡುತ್ತಿದ್ದು, ಇದರ ಕುಡಿಯುವ ನೀರಿನ ಅವಶ್ಯಕತೆಯ ದೃಷ್ಟಿಯಿಂದ ನೀರು ಹರಿಸಲಾಗದು.
  13. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.

ಇದನ್ನೂ ಓದಿ: Cauvery Dispute : ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶ ಕೋರುವುದು ತಪ್ಪಲ್ಲ; ಮಾಜಿ ಅಡ್ವೊಕೇಟ್‌ ಜನರಲ್‌ ಬಿ.ವಿ ಆಚಾರ್ಯ

ಹಾಗಿದ್ದರೆ ತಮಿಳುನಾಡು ವಾದ ಏನಾಗಿತ್ತು?

  • ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಫಸಲು ಬೆಳೆಯಲಾಗುತ್ತಿದೆ ಎಂಬ ಕರ್ನಾಟಕದ ವಾದದಲ್ಲಿ ಸತ್ಯವಿಲ್ಲ.
  • ನೀರು ಸಂಗ್ರಹಕ್ಕೆ ಸೌಲಭ್ಯ ಇದ್ದರೂ ತಮಿಳುನಾಡು ಸಮರ್ಥವಾಗಿ ನೀರು ಬಳಕೆ ಮಾಡುತ್ತಿಲ್ಲ ಎಂಬ ವಾದ ಸರ್ವಥಾ ಸರಿಯಲ್ಲ. ಕುರುವೈಗೆ ನ್ಯಾಯಮಂಡಳಿಯ ಬೆಳೆ ನೀರು ಅಗತ್ಯದ (ಸಿಡಬ್ಲುಆರ್) ಪ್ರಕಾರ ಜೂನ್-ಆಗಸ್ಟ್‌ನಲ್ಲಿ 30 ಟಿಎಂಸಿ ಬೇಕಿದೆ. ಜುಲೈ-ಆಗಸ್ಟ್‌ನಲ್ಲಿ ಸಾಂಬಾ ಬೆಳೆಗೆ 32 ಟಿಎಂಸಿ ನೀರು ಬೇಕಿದೆ. ಭೂಮಿ ಹದಗಳಿಸಲು ಮತ್ತು ಬಿತ್ತನೆಗೆ ಹೆಚ್ಚಿನ ನೀರು ಬೇಕಿದೆ. ಒಟ್ಟಾರೆ 95 ಟಿಎಂಸಿ ನೀರು ಬೇಕಿದ್ದು, ಜೂನ್ 12ರಿಂದ 31ರವರೆಗೆ ಮೆಟ್ಟೂರಿನಲ್ಲಿ 68.357 ಟಿಎಂಸಿ ಮಾತ್ರ ನೀರಿದೆ.
  • ಈಶಾನ್ಯ ಮಳೆಮಾರುತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಈ ವೇಳೆ ಚಂಡಮಾರುತದಿಂದಾಗಿ ಬೆಳೆಗೆ ಹಾನಿ ಉಂಟಾಗಿದ್ದೂ ಇದೆ. ನೈರುತ್ಯ ಮಾನ್ಸೂನ್ ವಿಫಲವಾಗಿರುವುದರಿಂದ ಈಶಾನ್ಯ ಮಾನ್ಸೂನ್ ಸಹ ವಿಫಲವಾಗುವ ಸಾಧ್ಯತೆ ಇದೆ.
  • ಪ್ರಸಕ್ತ ವರ್ಷದಲ್ಲಿ ಕರ್ನಾಟಕ 1.701 ಲಕ್ಷ ಎಕರೆ ಪ್ರದೇಶದಲ್ಲಿ ಫಸಲು ಮಾಡಿದೆ ಎಂದು ಹೇಳಿದೆ. 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕವು 25.662 ಟಿಎಂಸಿ ನೀರನ್ನು ನಾಲ್ಕು ಪ್ರಮುಖ ಜಲಾಶಯಗಳಿಂದ ಕಾಲುವೆಗಳ ಮೂಲಕ ಹರಿಸಿಕೊಂಡಿದೆ. ಇದರ ಜೊತೆಗೆ ಕೆಆರ್‌ಎಸ್‌ ಮತ್ತು ಕಬಿನಿ ಅಣೆಕಟ್ಟುಗಳ ಕಾಲುವೆಗಳ ಮೂಲಕ ಹರಿಸಿರುವ ನೀರಿನ ಮಾಹಿತಿಯನ್ನು ಕರ್ನಾಟಕ ನೀಡಿಲ್ಲ.
  • 2023ರ ಜೂನ್‌ನಿಂದ 2024ರ ಜನವರಿಯವರೆಗೆ ನಾಲ್ಕು ಜಲಾಶಯಗಳಿಂದ 72 ಟಿಎಂಸಿ ಕರ್ನಾಟಕಕ್ಕೆ ಬೇಕಿದೆ. ಆದರೆ, ಕರ್ನಾಟಕವು ಈಗಾಗಲೇ ಶೇ. 50ರಷ್ಟು ನೀರುಬಳಕೆ ಮಾಡಿದೆ.
  • ತಮಿಳುನಾಡು ವಾದವನ್ನು ಪರಿಗಣಿಸದೇ ಸೆಪ್ಟೆಂಬರ್ 13ರಿಂದ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಅರ್‌ಸಿ ಆದೇಶಿಸಿದೆ. ಪ್ರೊ-ರಾಟಾ ತತ್ವದ ಅಡಿ ವಿಮುಖವಾಗಿರುವುದು ಮತ್ತು 12,500 ಕ್ಯೂಸೆಕ್ಸ್‌ನಿಂದ 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ತಮಿಳುನಾಡಿನ ಅಧಿಕಾರಿಗಳು ವಾದಿಸಿದ್ದಾರೆ.

Continue Reading

ಕರ್ನಾಟಕ

Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್‌ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

Bus Accident: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಮಲ್ಲದಗುಡ್ಡದ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿದೆ. ಲಾರಿಗೆ ಇಂಡಿಕೇಟರ್‌ ಹಾಕದೆ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

VISTARANEWS.COM


on

Edited by

Bus Accident In Raichur
Koo

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ (Sindhanur) ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಡಿಕ್ಕಿಯಾಗಿದ್ದು (Bus Accident), 32 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಸಿಂಧನೂರಿನಿಂದ ಅಂಕಲಿಮಠದ ಕಡೆಗೆ ಹೊರಟ್ಟಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿಯಾಗಿದೆ. ಬಸ್‌ ಕಂಡಕ್ಟರ್‌ ಸೇರಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನು ಸಣ್ಣ ಪುಟ್ಟ ಗಾಯಗಳಾದವರಿಗೆ ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Bus Accident
ಅಪಘಾತದ ತೀವ್ರತೆಗೆ ಬಸ್‌ ನಜ್ಜುಗುಜ್ಜಾಗಿದೆ

ಇಂಡಿಕೇಟರ್‌ ಹಾಕದಿರುವುದೇ ಕಾರಣ

ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಚಾಲಕನು ಇಂಡಿಕೇಟರ್‌ ಹಾಕದಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಲಾರಿ ಚಾಲಕನು ಇಂಡಿಕೇಟರ್‌ ಹಾಕದೆ ಲಾರಿಯನ್ನು ನಿಲ್ಲಿಸಿದ್ದಾನೆ. ಬಸ್‌ ಎದುರಿಗೆ ಲಾರಿ ಬಂದಿದ್ದು, ಸೈಡ್‌ ಕೊಡಲು ಹೋದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬಸ್‌ ನಜ್ಜುಗುಜ್ಜಾಗಿದೆ. ಸಿಂಧನೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ವಾರದ ಹಿಂದಷ್ಟೇ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಒಂದೇ ಕುಟುಂಬದ ಐವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಹಾಗೆಯೇ, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯಲ್ಲಿ ನಡೆದ ಅಪಘಾತದಲ್ಲಿ ಈ ಸಾವು ಸಂಭವಿಸಿದೆ. ಅಥಣಿಯ ಕುಟುಂಬದವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ನಡೆದಿರುವ ಭೀಕರ ಅಪಘಾತ ಇದಾಗಿದೆ.

Continue Reading

ಬೆಂಗಳೂರು

World Heart Day: ಹೃದಯ ಆರೋಗ್ಯ ಜಾಗೃತಿಗಾಗಿ ಸಾಗರ್ ಆಸ್ಪತ್ರೆಯಿಂದ ‌ಸೈಕ್ಲೋಥಾನ್; 500 ಮಂದಿ ಭಾಗಿ

World Heart Day: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಸಾಗರ್ ಆಸ್ಪತ್ರೆಯಿಂದ ಸೈಕ್ಲೋಥಾನ್ ಆಯೋಜಿಸಲಾಗಿತ್ತು. ಸೈಕ್ಲೋಥಾನ್ ಮೂಲಕ ಸಾರ್ವಜನಿಕರಿಗೆ ಹೃದಯ ಆರೋಗ್ಯ ಜಾಗೃತಿ ಮೂಡಿಸಲಾಯಿತು.

VISTARANEWS.COM


on

Edited by

cyclothon in Bangalore
Koo

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಹೆಸರಾಗಿರುವ ಸಾಗರ್ ಆಸ್ಪತ್ರೆಯಿಂದ ವಿಶ್ವ ಹೃದಯ ದಿನ (World Heart Day) ಹಿನ್ನೆಲೆಯಲ್ಲಿ ಹೃದಯ ಆರೋಗ್ಯ ಜಾಗೃತಿಗಾಗಿ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿತ್ತು. ಸುಮಾರು 500 ಸೈಕಲ್ ಸವಾರರು ಭಾಗವಹಿಸಿದ್ದ ಸೈಕ್ಲೋಥಾನ್‌ಗೆ ತಜ್ಞ ವೈದ್ಯ ಡಾ.ಡಬ್ಲ್ಯು.ಡಿ. ಮೋಹನ್ ಅವರು ಚಾಲನೆ ನೀಡಿದರು.

ನಂತರ ಖ್ಯಾತ ನಟಿ ಪೂಜಾ ಗಾಂಧಿ ಅವರು ಸಿಪಿಆರ್‌ ತರಬೇತಿ ‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಾಗರ್ ಆಸ್ಪತ್ರೆಯ ನಿರಂತರ ಪ್ರಯತ್ನ ಶ್ಲಾಘನೀಯ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳ ಆತಂಕಕಾರಿ ಹೆಚ್ಚಳದ ಹಿನ್ನೆಲೆಯಲ್ಲಿ, ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

Prizes for cyclothon winners

ಸಿಪಿಆರ್ ತರಬೇತಿ

ಬನಶಂಕರಿಯ ಸಾಗರ್ ಹಾಸ್ಪಿಟಲ್ಸ್‌ನಲ್ಲಿ ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಸುಹಾಸ್ ಮತ್ತು ತಂಡ ಜೀವ ಉಳಿಸುವ ವಿಶೇಷ ಸಿಪಿಆರ್ ಬಗ್ಗೆ ತರಬೇತಿ ನೀಡಿದರು. ತುರ್ತು ಸಂದರ್ಭದಲ್ಲಿ ‌ಜೀವ ಉಳಿಸಲು ಇದು ಸಹಾಯಕ.

ಬಿಎಸ್‌ಕೆಯ ಸಾಗರ್ ಹಾಸ್ಪಿಟಲ್ಸ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಕಿಶೋರ್ ಕೆಎಸ್ ಹಾಗೂ ಸಮಾಲೋಚಕ ಹೃದ್ರೋಗ ತಜ್ಞ ಡಾ.ಬಿ.ಕೆ.ರಘುನಂದನ್ ಆರೋಗ್ಯಕರ ಹೃದಯಕ್ಕಾಗಿ ಸಲಹೆಗಳನ್ನು ನೀಡಿದರು.

ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷೆ ಎಂ.ಎಸ್.ಇಶಿಕಾ ಮುಲ್ತಾನಿ, ಅವರು ವಿಶ್ವ ಹೃದಯ ದಿನದಂದು ಸಾರ್ವಜನಿಕರಲ್ಲಿ ಹೃದಯ ಸ್ವಾಸ್ಥ್ಯದ ಜಾಗೃತಿಗಾಗಿ ಸೈಕ್ಲೋಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದರು.

Pooja Gandhi distributes prizes

ಇದನ್ನೂ ಓದಿ | Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?

ಸಾಗರ್ ಆಸ್ಪತ್ರೆ ಸಮೂಹವು ದಶಕಗಳಿಂದ ರೋಗಿಗಳಿಗೆ ಗುಣಮಟ್ಟದ ಮತ್ತು ಸರಿಯಾದ ಆರೈಕೆಯನ್ನು ನೀಡಲು ಬದ್ಧವಾಗಿರುವ ಪ್ರಮುಖ ಆರೋಗ್ಯ ಸಂಸ್ಥೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ನುರಿತ ವೈದ್ಯರ ತಂಡವನ್ನು ಹೊಂದಿದ್ದು, ಸಮುದಾಯಕ್ಕೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದ್ದ ಸೈಕಲ್‌ ಸವಾರರು.

Continue Reading

ಕರ್ನಾಟಕ

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

VISTARA TOP 10 NEWS : ಕಾವೇರಿ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಂಡ್ಯ ಬಂದ್‌ ಯಶಸ್ವಿಯಾಗಿದೆ. ಬೆಂಗಳೂರು ಬಂದ್‌ ರೆಡಿಯಾಗಿದೆ. ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರ ತಲುಪಿದೆ. ಹೀಗೆ ದಿನ ವಿಶೇಷ ಬೆಳವಣಿಗೆಗಳ ಸುತ್ತು ನೋಟವೇ ವಿಸ್ತಾರ ಟಾಪ್‌ 10 ನ್ಯೂಸ್‌

VISTARANEWS.COM


on

Edited by

Vistara Top 10 News 2309
Koo

1.ರಾಜಧಾನಿಯಲ್ಲಿ ತೀವ್ರಗೊಂಡ ಕಾವೇರಿ ಹೋರಾಟ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ
ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಸೆ. 26ರಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್

2. ರೈತ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್‌ ಸಕ್ಸಸ್‌‌‌‌: ರಾಜ್ಯಾದ್ಯಂತ ವ್ಯಾಪಿಸಿದ ಜ್ವಾಲೆ
ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್‌ (Mandya bandh) ಯಶಸ್ವಿಯಾಯಿತು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ 3 ಸಲಹೆಗಳು

3. ಕಾಂಗ್ರೆಸ್‌ನಲ್ಲಿ ನಿಲ್ಲದ ಡಿಸಿಎಂ ರಗಳೆ- ಮೂರಲ್ಲ, ಐವರು ಡಿಸಿಎಂ ಬೇಕೆಂದ ರಾಯರೆಡ್ಡಿ
ರಾಜ್ಯದಲ್ಲಿ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕು ಬೇಡಿಕೆಯ ನಡುವೆಯೇ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ದೇವೇಗೌಡರ ತುಮಕೂರು ಸ್ಪರ್ಧೆಗೆ ಬಿಜೆಪಿ ಸಂಸದರ ವಿರೋಧ

4. ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ ಏಳು ಮಂದಿ ಪರಪ್ಪನ ಅಗ್ರಹಾರ ಜೈಲಿಗೆ, 14 ದಿನ ನ್ಯಾಯಾಂಗ ಸೆರೆ
ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್‌ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ಕೋರ್ಟ್ ತಾತ್ಕಾಲಿಕ ನಿರ್ಬಂಧ

5. ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ

ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

6 ಲೋಕ ಸಮರ ಹೊತ್ತಲ್ಲೇ ವಾರಾಣಸಿಯಲ್ಲಿ ಅಭಿವೃದ್ಧಿ ಪರ್ವ: ಕ್ರಿಕೆಟ್‌ ಸ್ಟೇಡಿಯಂಗೆ ಮೋದಿ ಶಂಕುಸ್ಥಾಪನೆ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. 330 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಸ್ಟೇಡಿಯಂ ಶಿವನಿಗೆ ಸಮರ್ಪಣೆ ಎಂದಿದೆ ಬಿಸಿಸಿಐ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ವಾರಾಣಸಿ ಕ್ರಿಕೆಟ್‌ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ

7. ಭಾರತದ ಬೆನ್ನಿಗೆ ನಿಂತ ಅಮೆರಿಕ: ಆನೆ ಜತೆ ಇರುವೆ ಕಾಳಗಕ್ಕೆ ಇಳಿದಿದೆ ಅಂತ ಕೆನಡಾಗೆ ವ್ಯಂಗ್ಯ
ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಜತೆಗೆ “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್;‌ ಕೆನಡಾ ಆರೋಪಕ್ಕೆ ಏನೆಂದಿತು?

8. ಸುಂದರ ಆಟಗಾರ ಶುಭಮನ್​ ಗಿಲ್​ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಮುಂಬಯಿ:  ಸಾರಾ ತೆಂಡೂಲ್ಕರ್ ಮತ್ತು ಶುಭಮನ್​ ಗಿಲ್​ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship)​ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೀಗ ಸಾರಾ ಅವರು ಮಾಡಿರುವ ಟ್ವೀಟ್​ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
 ವಿಜಯ್ ಸೇತುಪತಿ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಬ್ಯುಸಿ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್‌ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಸಿಲ್ಕ್‌ ಸ್ಮಿತಾ ಶವದ ಮೇಲೆ ನಡೆದಿತ್ತಂತೆ ಸಾಮೂಹಿಕ ಅತ್ಯಾಚಾರ: ನಟಿಯ ಪುಣ್ಯತಿಥಿಯಂದೇ ಹೊರಬಿತ್ತು ಸತ್ಯ
ಸಿಲ್ಕ್‌ ಸ್ಮಿತಾ (Silk Smitha) ಎಂಬ ಅಪ್ಸರೆಯಂಥ ನಟಿ ಬದುಕಿನಲ್ಲಿ ಏನೆಲ್ಲ ಅನುಭವಿಸಿದರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಭಯಾನಕ ಸುದ್ದಿ ಮತ್ತೊಮ್ಮೆ ವೈರಲ್‌ ಆಗಿದೆ. ಏನಿದು ಪೈಶಾಚಿಕ ಕೃತ್ಯ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Cauvery water Dispute
ಕರ್ನಾಟಕ11 mins ago

Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

Bus Accident In Raichur
ಕರ್ನಾಟಕ27 mins ago

Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್‌ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

DUSU Election Result
ದೇಶ57 mins ago

DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್;‌ ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ

fruits and cold cough
ಆರೋಗ್ಯ2 hours ago

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

new kannada book yabli
ಕಲೆ/ಸಾಹಿತ್ಯ2 hours ago

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

cryptocurrency fraud
ಅಂಕಣ2 hours ago

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

pak human right
ಕ್ರಿಕೆಟ್2 hours ago

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

dina bhavishya
ಪ್ರಮುಖ ಸುದ್ದಿ3 hours ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Narendra Modi
ದೇಶ8 hours ago

Narendra Modi : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭದ್ರತೆ ಉಲ್ಲಂಘನೆಗೆ ಯತ್ನಿಸಿದ ವ್ಯಕ್ತಿ ಬಂಧನ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

dina bhavishya
ಪ್ರಮುಖ ಸುದ್ದಿ3 hours ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

ಟ್ರೆಂಡಿಂಗ್‌