ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ - Vistara News

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ

ರಾಜಕುಮಾರಿಯನ್ನು ಮದುವೆಯಾಬೇಕಿದ್ದರೆ ಆಕೆ ಸಾಕಿಕೊಂಡಿದ್ದ ಬೃಹದಾಕಾರದ ಕರಡಿಯ ಜೊತೆಗೆ ಒಂದು ರಾತ್ರಿ ಇರಬೇಕಿತ್ತು. ಆ ಕರಡಿಯೋ… ಮನುಷ್ಯರನ್ನು ಕಂಡರೆ ಬಿಡುತ್ತಲೇ ಇರಲಿಲ್ಲ. ಹಾಗಾಗಿ ರಾಜಕುಮಾರಿಯ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು. ಮುಂದೆ? ಓದಿ, ಈ ಮಕ್ಕಳ ಕಥೆ.

VISTARANEWS.COM


on

Children story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಂದಾನೊಂದೂರಿನ ರಾಜನಿಗೆ ಗೊಂಬೆಯಂಥ ಮಗಳೊಬ್ಬಳಿದ್ದಳು. ಅವಳು ಬುದ್ಧಿವಂತೆ ಮತ್ತು ಧೈರ್ಯವಂತೆಯೂ ಆಗಿದ್ದಳು. ಹಾಗಾಗಿ ಅವಳಿಗೆ ತಕ್ಕ ವರನನ್ನು ಹುಡುಕಲೆಂದು ರಾಜ ತನ್ನ ಶಕ್ತಿ ಮೀರಿ ಪ್ರಯತ್ನಿಸಿದರೂ ಆಗಿರಲಿಲ್ಲ. ಇದಕ್ಕೊಂದು ಕಾರಣವೂ ಇತ್ತು. ಯಾರೇ ತನ್ನನ್ನು ವಿವಾಹ ಆಗುವುದಕ್ಕೆ ಬಂದರೂ ಆಕೆ ಒಂದು ಪ್ರಶ್ನೆ ಕೇಳುತ್ತಿದ್ದಳು. ಅದಕ್ಕೆ ಸರಿಯುತ್ತರ ನೀಡಬೇಕಿತ್ತು. ಅದರಲ್ಲಿ ಗೆದ್ದರೆ, ಆಕೆ ಸಾಕಿಕೊಂಡಿದ್ದ ಬೃಹದಾಕಾರದ ಕರಡಿಯ ಜೊತೆಗೆ ಒಂದು ರಾತ್ರಿ ಇರಬೇಕಿತ್ತು. ಆ ಕರಡಿಯೋ… ಮನುಷ್ಯರನ್ನು ಕಂಡರೆ ಬಿಡುತ್ತಲೇ ಇರಲಿಲ್ಲ. ಹಾಗಾಗಿ ರಾಜಕುಮಾರಿಯ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು.

ಪಕ್ಕದ ಊರಿನಿಂದ ಜಾಣ ದರ್ಜಿಯೊಬ್ಬ ಆ ಊರಿಗೆ ಬಂದಿದ್ದ. ಯಾವುದೋ ಮದುವೆಮನೆಗೆ ಒಳ್ಳೆಯ ಬಟ್ಟೆಗಳನ್ನು ಹೊಲಿದು ಕೊಡಬೇಕಿತ್ತು. ಬಂದ ಕೆಲಸ ಮುಗಿದ ನಂತರ ಅಲ್ಲಿನ ಜನರೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದ ದರ್ಜಿ. ಆಗ ಆ ಊರಿನ ರಾಜಕುಮಾರಿಯ ಮದುವೆಯ ವಿಷಯವೂ ಬಂತು. ಎಷ್ಟು ಹುಡುಕಿದರೂ ಆಕೆಗೆ ವರನೇ ದೊರೆಯುತ್ತಿಲ್ಲ ಎಂದು ಊರಿನವರು ಬೇಸರಿಸಿಕೊಂಡಿದ್ದರು. ತಾನೇಕೆ ಒಂದು ಕೈ ನೋಡಬಾರದು ಎಂದು ಯೋಚಿಸಿದ ದರ್ಜಿ. ಆತನ ಯೋಚನೆಯನ್ನು ಕೇಳಿ ಸುತ್ತಲಿನ ಜನಕ್ಕೆ ನಗು ತಡೆಯಲಾಗಲಿಲ್ಲ. ʻಎಂಥೆಂಥವರೇ ಕೈಸೋತು ಹೋಗಿದ್ದಾರೆ. ಇನ್ನು ನೀನ್ಯಾವ ಲೆಕ್ಕನಯ್ಯʼ ಎಂದು ಆಡಿಕೊಂಡು. ಯಾರೇನೆಂದರೂ ಮಾರನೇದಿನ ಅರಮನೆಗೆ ಹೋಗುವುದು ಎಂದು ದರ್ಜಿ ನಿರ್ಧರಿಸಿದ್ದ.

ಅರಮನೆಗೆ ಬಂದ ಸಾದಾ ಉಡುಗೆಯ ದರ್ಜಿಯನ್ನು ಕಂಡು ರಾಜಕುಮಾರಿ ಬೇಸರದಿಂದ ಮುಖ ತಿರುಗಿಸಿದಳು. ಆದರೆ ಆಕೆಯ ಪ್ರಶ್ನೆಗೆ ಉತ್ತರಿಸಲು ಯಾರು ಬೇಕಾದರೂ ಪ್ರಯತ್ನಿಸಬಹುದು ಎಂದು ರಾಜನೇ ಹೇಳಿದ್ದರಿಂದ ಆಕೆ ಸುಮ್ಮನಿರಬೇಕಾಯಿತು. ಆತನೊಂದಿಗೆ ಇನ್ನೂ ಇಬ್ಬರು ಯುವಕರು ಅಲ್ಲಿದ್ದರು. ಮೂವರಿಗೂ ತನ್ನ ಎರಡೂ ಕೈ ಮುಷ್ಟಿಯನ್ನು ತೋರಿಸಿದ ಅರಸುಗುವರಿ, ʻಈ ಮುಷ್ಟಿಗಳಲ್ಲಿ ಎರಡು ಕೂದಲುಗಳಿವೆ. ಆ ಕೂದಲುಗಳ ಬಣ್ಣವೇನು ಎಂಬುದನ್ನು ಹೇಳಬಲ್ಲಿರಾ?ʼ ಎಂದು ಕೇಳಿದಳು. ಎರಡೂ ಕೂದಲುಗಳು ಒಂದೇ ಬಣ್ಣದಲ್ಲಿವೆಯೇ, ಬೇರೆ ಬಣ್ಣಗಳಲ್ಲಿವೆಯೇ ಎಂಬುದೇ ಆ ಯುವಕರಿಗೆ ತಿಳಿಯಲಿಲ್ಲ. ಕೂದಲು ಎನ್ನುತ್ತಿದ್ದಂತೆ ಹೆಚ್ಚು ಯೋಚಿಸದ ಮೊದಲ ಯುವಕ, ʻಕಪ್ಪು ಕೂದಲುʼ ಎಂದ. ʻತಪ್ಪುʼ ಎಂದಳು ರಾಜಕುಮಾರಿ. ʻಬಿಳಿ ಮತ್ತು ಕೆಂಚು ಕೂದಲುʼ ಎಂದು ಎರಡನೇ ಯುವಕ. ʻಊಹುಂ! ಇದೂ ಸರಿಯಲ್ಲʼ ಎಂದಳು ರಾಜನ ಮಗಳು. ಆವರೆಗೂ ದರ್ಜಿ ಸೂಕ್ಷ್ಮವಾಗಿ ರಾಜಕುಮಾರಿಯ ಕೂದಲನ್ನೇ ಗಮನಿಸುತ್ತಿದ್ದ. ಆಕೆ ತಲೆಯ ಮೇಲೆ ಧರಿಸಿದ್ದ ಪರದೆಯಂಥ ಬಟ್ಟೆಯಿಂದ ಕೂದಲ ಬಣ್ಣ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಕಿವಿಯ ಬಳಿ ಇಣುಕುತ್ತಿದ್ದ ಎಳೆಗಳಿಂದ ಅವಳ ಕೂದಲ ಬಣ್ಣವನ್ನು ದರ್ಜಿ ಪತ್ತೆ ಮಾಡಿದ್ದ. ʻಬಂಗಾರ ಬಣ್ಣದ ಕೂದಲುʼ ಎಂದ ಆತ. ಉತ್ತರ ಸರಿಯಿದ್ದಿದ್ದರಿಂದ ರಾಜಕುಮಾರಿ ಮೌನವಾಗಿ ತಲೆಯಾಡಿಸಿದಳು. ಬಂದ ದೊರೆ ಮಕ್ಕಳನ್ನೆಲ್ಲಾ ಬಿಟ್ಟು ಈಗ ದರ್ಜಿಯನ್ನು ವರಿಸಬೇಕೆ ಎಂಬುದು ಅವಳ ಚಿಂತೆಯಾಗಿತ್ತು. ಆದರೆ ಅಂದಿನ ರಾತ್ರಿಯನ್ನು ದೊಡ್ಡ ಕರಡಿಯ ಬೋನಿನಲ್ಲಿ ಕಳೆಯಬೇಕಲ್ಲವೇ, ಹೇಗಿದ್ದರೂ ಕರಡಿಯಂತೂ ಇವನನ್ನು ಉಳಿಸುವುದಿಲ್ಲ ಎಂದು ನೆಮ್ಮದಿ ತಳೆದಳು.

ಆ ದಿನ ರಾತ್ರಿಯಾಯಿತು, ದರ್ಜಿಯನ್ನು ಕರೆತಂದು ಕರಡಿಯ ಬೋನಿನೊಳಗೆ ಬಿಡಲಾಯಿತು. ತನ್ನಷ್ಟಕ್ಕೆ ಮಲಗಿದ್ದ ಕರಡಿ ಇವನನ್ನು ನೋಡಿ, ಎದ್ದು ಕುಳಿತು ಆಕಳಿಸಿತು. ಇವನು ಬೋನಿನ ಬಾಗಿಲ ಬಳಿಯೇ ಕಾಲು ಚಾಚಿ ಕುಳಿತ. ತನ್ನ ಕಿಸೆಯಲ್ಲಿದ್ದ ಯಾವುದೋ ಬೀಜವನ್ನು ತೆಗೆದು, ಅದರ ಚಿಪ್ಪನ್ನು ಹಲ್ಲುಗಳಲ್ಲಿ ʻಕಟಂʼ ಎಂದು ಕತ್ತರಿಸಿ ಮೆಲ್ಲತೊಡಗಿದ. ಆ ಬೀಜದ ಪರಿಮಳಕ್ಕೆ ಕರಡಿ ತನಗೂ ಬೇಕೆಂಬಂತೆ ಕೈಯೊಡ್ಡಿತು. ಇನ್ನೊಂದು ಕಿಸೆಯಿಂದ ಒಂದೆರಡು ಗೋಲಿಗಳನ್ನು ತೆಗೆದು ಅದರ ಕೈ ಮೇಲಿಟ್ಟ. ಅದನ್ನು ಬಾಯಿಗೆಸೆದುಕೊಂಡ ಕರಡಿಗೆ ಎಷ್ಟೇ ಪ್ರಯತ್ನಿಸಿದರೂ ಅದನ್ನು ಒಡೆದು ʻಕಟಂʼ ಮಾಡುವುದಕ್ಕೆ ಆಗಲೇ ಇಲ್ಲ. ಈತ ಮತ್ತೆ ತನ್ನ ಕಿಸೆಯಲ್ಲಿದ್ದ ಬೀಜಗಳನ್ನು ಬಾಯಿಗೆ ಹಾಕಿ, ಅದರ ಚಿಪ್ಪನ್ನು ಕಟಂ ಮಾಡಿ ತಿನ್ನತೊಡಗಿದ. ಕರಡಿಗೆ ಗಾಬರಿಯಾಯಿತು. ತನ್ನಿಂದ ಒಡೆಯುವುದಕ್ಕಾಗದ ಬೀಜಗಳನ್ನು ಈತ ಇಷ್ಟೊಂದು ಸಲೀಸಾಗಿ ಒಡೆಯುತ್ತಿದ್ದಾನಲ್ಲ, ಇವನ ಶಕ್ತಿ ಎಷ್ಟಿರಬಹುದು ಎನಿಸಿತು. ಹಾಗಾಗಿ ಆತನ ತಂಟೆಗೇ ಹೋಗದೆ ಸುಮ್ಮನೆ ಕುಳಿತಿತು ಕರಡಿ.

ಇದನ್ನೂ ಓದಿ : ಮಕ್ಕಳ ಕಥೆ: ಸನ್ಯಾಸಿ ಮತ್ತು ಇಲಿ

ಆತ ತನ್ನ ಕೋಟಿನ ಕಿಸೆಯಿಂದ ಕೊಳಲೊಂದನ್ನು ತೆಗೆದು ನುಡಿಸತೊಡಗಿದ. ಬೇಸರದಲ್ಲಿ ಕುಳಿತಿದ್ದ ಕರಡಿಗೆ ಈ ಸಂಗೀತ ಕೇಳಿ ಖುಷಿಯಾಗತೊಡಗಿತು. ಮೆಲ್ಲಗೆ ಆತನ ಬಳಿ ಬಂತು. ಕೊಳಲನ್ನು ತನ್ನ ಕೈಗೆತ್ತಿಕೊಂಡು ಊದಲು ನೋಡಿತು. ಎಷ್ಟು ಪ್ರಯತ್ನಿಸಿದರೂ ಅದಕ್ಕೆ ಶಬ್ದವನ್ನೇ ಹೊರಡಿಸಲಾಗಲಿಲ್ಲ. ಹಾಗಾಗಿ ಈತ ತುಂಬಾ ವಿಶೇಷ ವ್ಯಕ್ತಿ ಅನಿಸಿತು ಪಾಪದ ಪ್ರಾಣಿಗೆ. ಆತ ಮತ್ತೆ ಮತ್ತೆ ಕೊಳಲೂದತೊಡಗಿದ ಕರಡಿ ತಲೆದೂಗಿತು. ಎದ್ದು ಕುಣಿಯಿತು. ಕುಣಿದೂ ಕುಣಿದೂ ಸುಸ್ತಾಗಿ ನಡುರಾತ್ರಿಯ ಹೊತ್ತಿಗೆ ನಿದ್ದೆ ಹೋಯ್ತು. ಎಷ್ಟೋ ದಿನಗಳಿಂದ ಅದಕ್ಕೆ ಯಾವುದೇ ಮನರಂಜನೆ ಇಲ್ಲದೆ ಬೇಸರವಾಗಿತ್ತು. ಆ ರಾತ್ರಿಯ ಕೊಳಲಿನ ನಾದದಿಂದ ಕರಡಿಗೆ ತುಂಬಾ ಸಂತೋಷವಾಗಿತ್ತು.
ಬೆಳಗಾಯಿತು. ಹೇಗಿದ್ದರೂ ಕರಡಿ ಈ ದರ್ಜಿಯನ್ನು ಬಿಡುವುದಿಲ್ಲ ಎಂದು ನೆಮ್ಮದಿಯಿಂದ ಮಲಗಿದ್ದ ರಾಜಕುಮಾರಿಗೆ ಅಚ್ಚರಿ ಕಾದಿತ್ತು. ಕೂದಲೂ ಕೊಂಕದಂತೆ ಸುರಕ್ಷಿತವಾಗಿದ್ದ ಆತ, ರಾಜಕುಮಾರಿಯ ಎದುರಿಗಿದ್ದ. ಕರಡಿ ತನ್ನನ್ನೇನೂ ಮಾಡಲಿಲ್ಲ ಎಂಬ ದರ್ಜಿಯ ಮಾತನ್ನು ನಂಬದ ರಾಜನ ಮಗಳು, ಆತನನ್ನು ತನ್ನೆದುರಿಗೇ ಕರಡಿಯ ಬೋನಿಗೆ ಹಾಕುವಂತೆ ಹೇಳಿದಳು. ತನ್ನ ಬೋನಿನೊಳಗೆ ಬಂದ ಈತನನ್ನು ಕರಡಿ ಪ್ರೀತಿಯಿಂದ ನೆಕ್ಕಿತು. ಇದನ್ನು ಕಂಡ ರಾಜಕುಮಾರಿಗೆ ಇನ್ನಷ್ಟು ಅಚ್ಚರಿಯಾಯಿತು.

ನಿನ್ನ ಮಾತಿಗೆ ನೀನೇ ತಪ್ಪುವಂತಿಲ್ಲ ಎಂದು ರಾಜ ಎಚ್ಚರಿಸಿದ. ಮಾತ್ರವಲ್ಲ, ದರ್ಜಿಯ ಜಾಣತನ ರಾಜನಿಗೆ ಮೆಚ್ಚುಗೆಯಾಗಿತ್ತು. ಆತ ತನ್ನ ಮಗಳನ್ನು ದರ್ಜಿಯೊಂದಿಗೆ ಮದುವೆ ಮಾಡಿಸಿದ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ : ಒಂಟೆ ಮತ್ತು ಜೀಬ್ರಾದ ಗೆಳೆತನ

ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು. ಯಾಕೆ ಗೊತ್ತೇ? ಹಾಗಾದರೆ ಈ ಕಥೆಯನ್ನು ಓದಿ.

VISTARANEWS.COM


on

Zebra and camel
Koo


ಮರುಭೂಮಿಯಿಂದ ಸ್ವಲ್ಪ ದೂರದಲ್ಲಿ ಹಸುರಾದ ಹುಲ್ಲುಗಾವಲಿತ್ತು. ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಜೀಬ್ರಾವೊಂದು ವಾಸಿಸುತ್ತಿತ್ತು. ಅದಕ್ಕೆ ಪಕ್ಕದ ಮರುಭೂಮಿಯಲ್ಲಿ ವಾಸಿಸುವ ಒಂಟೆಯೊಂದು ಸ್ನೇಹಿತನಾಗಿತ್ತು. ಇಬ್ಬರೂ ಬಾಲ್ಯದಲ್ಲೇ ಭೇಟಿಯಾಗಿ ಆಡುತ್ತಾ ಬೆಳೆದಿದ್ದರಿಂದ ಆತ್ಮೀಯ ಗೆಳೆಯರಾಗಿದ್ದವು. ವಾರದಲ್ಲಿ ನಾಲ್ಕಾರು ಬಾರಿ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದವು. ತಂತಮ್ಮ ಅನುಭವಕ್ಕೆ ಬಂದ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದವು.

ಜೀಬ್ರಾಗೆ ತನ್ನ ಬಗ್ಗೆ ಬಹಳ ಹೆಮ್ಮೆಯಿತ್ತು. ಚಂದದ ಕಪ್ಪು-ಬಿಳಿ ಪಟ್ಟೆಯ ಕೋಟು ತನ್ನ ಮೈಮೇಲಿದೆ. ಒಂಟೆಯಂತೆ ಕೊಳಕಾದ ಮಣ್ಣು ಬಣ್ಣದ ಮೈಯಲ್ಲ ತನ್ನದು; ದೇಹದ ಆಕೃತಿ ತೀಡಿದಂತೆ ಶಿಸ್ತಾಗಿದೆ, ವಿಚಿತ್ರವಾದ ಡುಬ್ಬ ಬೆನ್ನಿಲ್ಲ ತನಗೆ; ಮೈಯ ಚರ್ಮ ಮಿರಿಮಿರಿ ಮಿಂಚುತ್ತಿದೆ, ಕೂದಲು ತುಂಬಿಕೊಂಡಿಲ್ಲ. ಭಯವಾಗುವಷ್ಟು ಉದ್ದನೆಯ ರೆಪ್ಪೆಯಿಲ್ಲದೆ, ಸುಂದರ ಕಣ್ಣುಗಳಿವೆ ಎಂದೆಲ್ಲಾ ಒಳಗೊಳಗೇ ಜಂಬವಿತ್ತು. ʻಮಣ್ಣಲ್ಲಿ, ಮರಳಲ್ಲಿ ಆಡೋಣ ಬಾʼ ಎಂದು ಒಂಟೆ ಹಲವಾರು ಬಾರಿ ಜೀಬ್ರಾವನ್ನು ಕರೆದಿತ್ತು. ʻಅಯ್ಯೋ, ಇಲ್ಲಪ್ಪ. ನಾ ಬರಲ್ಲ. ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು.

ಆ ವರ್ಷ ಆ ಪ್ರಾಂತ್ಯಕ್ಕೆಲ್ಲಾ ಬರಗಾಲ ಬಂತು. ಹುಲ್ಲುಗಾವಲಿನಲ್ಲಿ ದೂರ ದೂರದವರೆಗೆ ಎಲ್ಲೂ ನೀರು ದೊರೆಯದೆ ಪರದಾಡುವ ಸ್ಥಿತಿ ಉಂಟಾಯಿತು. ಹುಲ್ಲುಗಾವಲಿನ ಉಳಿದೆಲ್ಲಾ ಪ್ರಾಣಿಗಳಂತೆಯೇ ಜೀಬ್ರಾ ಸಹ ಕಂಗಾಲಾಯಿತು. ಒಂಟೆಯ ಜೊತೆಗಿನ ಭೇಟಿಯಲ್ಲಿ ತನ್ನ ಆತಂಕವನ್ನು ಹಂಚಿಕೊಂಡಿತು. ʻನೀರಿಲ್ಲದಿದ್ದರೆ ಬದುಕೋದು ಹೇಗೆ? ಇಲ್ಲಿಂದ ತುಂಬಾ ದೂರ ನಡೆದ ಮೇಲೆ ಸ್ವಲ್ಪ ನೀರಿರೊ ಕೆರೆ ಇದೆಯಂತೆ. ಏನು ಮಾಡೋದು ಗೊತ್ತಾಗ್ತಿಲ್ಲʼ ಎಂದು ದುಗುಡದಿಂದ ಹೇಳಿತು.

ಆದರೆ ಒಂಟೆ ನಿರಾತಂಕವಾಗಿತ್ತು. ಬರಗಾಲದಿಂದ ಉಂಟಾಗುವ ಕಷ್ಟಗಳ ಬಗ್ಗೆ ಅದರ ಮುಖದಲ್ಲಿ ಯಾವ ಬೇಸರವೂ ಇರಲಿಲ್ಲ. ʻನಮಗೇ ನೀರಿಲ್ಲ ಅಂದಮೇಲೆ, ಮರುಭೂಮಿಯಲ್ಲಿ ನಿಮಗಿನ್ನೂ ಕಷ್ಟತಾನೆ?ʼ ಕೇಳಿತು ಜೀಬ್ರಾ. ʻಮಳೆಯಿಲ್ಲದ್ದು, ನೀರಿಲ್ಲದಿರುವುದು ನಮಗೆ ಮಾಮೂಲಿ. ಅದಕ್ಕೆ ಆತಂಕವೆಲ್ಲಾ ಇಲ್ಲʼ ಎಂದಿತು ನಗುತ್ತಾ. ಜೀಬ್ರಾ ಮುಖದಲ್ಲಿ ಚಿಂತೆಯ ಗೆರೆಗಳು ಹೋಗಲಿಲ್ಲ.

ʻಮರುಭೂಮಿಯಲ್ಲಿ ನೀರುಣಿಸುವ ಒಯಸಿಸ್‌ಗಳಿವೆ. ನಾವು ನೀರು ಬೇಕೆನಿಸಿದಾಗ ಅಲ್ಲಿಗೆ ಹೋಗುತ್ತೇವೆ. ನಿನ್ನನ್ನೂ ಬೇಕಿದ್ದರೆ ಕರೆದೊಯ್ಯುತ್ತೇನೆʼ ಎಂದಿತು ಒಂಟೆ. ಆದರೆ ಆ ಸುಡುಬಿಸಿಯಾದ ಮರಳಿನಲ್ಲಿ ನಡೆಯುವುದು ಹೇಗೆ? ಮರಳು ಗಾಳಿ ಬೀಸಿದರೆ ಅದನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಜೀಬ್ರಾಗೆ.

ʻನಮ್ಮ ದೇಹ ಜೀಬ್ರಾಗಳಂತೆ ತಿದ್ದಿ-ತೀಡಿದಂತಿಲ್ಲ, ನಿಜ. ಆದರೆ ಬಿಸಿ ಮರಳಿನಲ್ಲಿ ನಡೆಯಲು ಅನುಕೂಲವಾಗುವ ಹಾಗಿದೆ. ಬೆನ್ನಿನ ಮೇಲಿರುವ ಡುಬ್ಬಿನಿಂದಲೇ ತಿಂಗಳುಗಟ್ಟಲೆ ನಾವು ನೀರು ಕುಡಿಯದೆಯೂ ಬದುಕಿರುವುದು. ನಮ್ಮ ಚರ್ಮ, ಕಣ್ಣು ರೆಪ್ಪೆಗಳೆಲ್ಲಾ ಮರಳು ಗಾಳಿಯನ್ನು ತಡೆಯುವುದಕ್ಕೆಂದೇ ಹೀಗಿವೆ. ಮರಳುಗಾಡಿನಲ್ಲಿ ಬದುಕುವುದಕ್ಕೆ ನಮ್ಮಂತೆ ಇದ್ದರೆ ಮಾತ್ರವೇ ಸಾಧ್ಯʼ ಎಂದಿತು ಒಂಟೆ. ಜೀಬ್ರಾಗೆ ತನ್ನ ತಪ್ಪಿನ ಅರಿವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ʻಮರಳುಗಾಡಿನಲ್ಲಿ ಹಗಲಿಗೆ ಬಿಸಿ ಇದ್ದಂತೆಯೇ ರಾತ್ರಿ ತಂಪಾಗುತ್ತದೆ. ರಾತ್ರಿಯ ವೇಳೆ ನಿನ್ನನ್ನು ಒಯಸಿಸ್‌ ಬಳಿಗೆ ಕರೆದೊಯ್ಯುತ್ತೇನೆ. ಬೇಕಷ್ಟು ನೀರು ಕುಡಿದು, ದೂರದ ನೀರಿರುವ ಕೆರೆಯತ್ತ ಹೊರಡು. ಬರಗಾಲ ಕಳೆದ ಮೇಲೆ ಮರಳಿ ಬಾʼ ಎಂದಿತು ಒಂಟೆ. ಮಿತ್ರನ ಒಳ್ಳೆಯತನಕ್ಕೆ ಸಂತೋಷಪಟ್ಟ ಜೀಬ್ರಾ, ಒಂಟೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

monkey story
Koo

ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಊರಂಚಿನಲ್ಲಿ ಆತನಿಗೊಂದು ಸುಂದರವಾದ ತೋಟವಿತ್ತು. (kIds Corner) ಹಲವು ರೀತಿಯ ಫಲಭರಿತ ಮರಗಳು, ನಾನಾ ಬಣ್ಣದ ಹೂವಿನ ಗಿಡಗಳನ್ನೆಲ್ಲಾ ಆತ ಅಲ್ಲಿ ಬೆಳೆಸಿದ್ದ. ಆ ತೋಟದ ಮೇಲೆ ಆತನಿಗೆ ಬಹಳ ಪ್ರೀತಿಯೂ ಇತ್ತು. ಆ ತೋಟ ಸಾಕಷ್ಟು ವಿಸ್ತಾರವಾಗಿ ಇದ್ದಿದ್ದರಿಂದ ಅದನ್ನು ನೋಡಿಕೊಳ್ಳುವುದಕ್ಕೆ ಮಾಲಿಯೊಬ್ಬನನ್ನು ನೇಮಿಸಿಕೊಂಡ. ಆ ಮಾಲಿಯೂ ತನ್ನ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದ.

ಬೇಸಿಗೆ ಶುರುವಾಯಿತು. ನೆತ್ತಿ ಸುಡುವಂಥ ಬಿಸಿಲಿನಿಂದಾಗಿ ಶ್ರೀಮಂತನ ತೋಟದ ಗಿಡಗಳೆಲ್ಲಾ ಬಸವಳಿದು ಹೋಗುತ್ತಿದ್ದವು. ಹಾಗಾಗಿ ಪ್ರತೀದಿನ ಬಾವಿಯಿಂದ ನೀರೆತ್ತಿಕೊಂಡು ಎಲ್ಲಾ ಗಿಡಗಳಿಗೂ ನೀರುಣಿಸಬೇಕಾಗುತ್ತಿತ್ತು. ಆಗ ಮಾತ್ರವೇ ಬಾಡದಂತೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಈ ಕೆಲಸಕ್ಕೆ ಮಾಲಿಗೇನೂ ಬೇಸರವಿರಲಿಲ್ಲ. ಅವನಿಗೆ ಬೇಸರವಿದ್ದಿದ್ದು ಒಂದೇ ಕಾರಣಕ್ಕೆ. ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ.

ಒಮ್ಮೆ ಆತನ ಊರಿನ ಜಾತ್ರೆ ಬಂತು. ತನ್ನ ಕುಟುಂಬವನ್ನೆಲ್ಲಾ ಆ ಜಾತ್ರೆಗೆ ಕರೆದೊಯ್ಯಬೇಕು. ತಾನೂ ಅಲ್ಲೆಲ್ಲಾ ಅಡ್ಡಾಡಬೇಕು ಎಂಬ ಆಸೆ ಆತನಿಗಿತ್ತು. ಆದರೆ ಎಷ್ಟೇ ಕೇಳಿದರೂ ಸಾಹುಕಾರ ರಜೆ ಕೊಡುವುದಿಲ್ಲ ಎಂಬುದು ಆತನಿಗೆ ಖಾತ್ರಿಯಾಗಿತ್ತು. ಹಾಗೆಂದು ತಾನು ಮರಳಿ ಬರುವಷ್ಟರಲ್ಲಿ ಎರಡು ದಿನಗಳಾಗುತ್ತವೆ, ಅಷ್ಟರಲ್ಲಿ ಗಿಡಗಳೆಲ್ಲಾ ಬಾಡಿ ಹೋಗುತ್ತವೆ ಎಂಬುದೂ ಆತನಿಗೆ ತಿಳಿದಿತ್ತು. ಸಮೀಪದ ಕಾಡಿನಲ್ಲಿ ಯಾರಿಂದಲಾದರೂ ತನಗೆ ನೆರವು ದೊರೆಯಬಹುದೇ ಎಂದು ಯೋಚಿಸಿದ. ಆತನಿಗೆ ಉಪಾಯವೊಂದು ಹೊಳೆಯಿತು.

ಪಕ್ಕದ ಕಾಡಿನಲ್ಲಿ ದೊಡ್ಡ ಹಿಂಡು ಮಂಗಗಳು ವಾಸವಾಗಿದ್ದವು. ಆ ಮಂಗಗಳ ರಾಜನನ್ನು ಮಾಲಿ ಭೇಟಿ ಮಾಡಿದ. ಅಪರೂಪಕ್ಕೊಮ್ಮೆ ತಮ್ಮ ಹಿಂಡು ಆ ತೋಟಕ್ಕೆ ಭೇಟಿ ನೀಡಿದಾಗ, ಹೆದರಿಸಿ ಓಡಿಸುತ್ತಿದ್ದ ಈ ಮಾಲಿ ಈಗ ತನ್ನನ್ನೇಕೆ ನೋಡಲು ಬಂದಿದ್ದಾನೆ ಎಂದು ಮಂಗರಾಜನಿಗೆ ಕುತೂಹಲವಾಯಿತು. ವಿಷಯವೇನು ಎಂದು ಮಾಲಿಯನ್ನು ವಿಚಾರಿಸಿದ.

ʻಮಂಗರಾಜ, ನನಗೆ ಎರಡು ದಿನಗಳ ಮಟ್ಟಿಗೆ ನಮ್ಮೂರಿಗೆ ಹೋಗಬೇಕು. ನನಗೆ ನಮ್ಮ ಸಾಹುಕಾರರು ರಜೆ ಕೊಡುತ್ತಿಲ್ಲ. ಹಾಗಾಗಿ ನೀವೆಲ್ಲಾ ಸೇರಿ ನನಗೊಂದು ಉಪಕಾರ ಮಾಡಬೇಕುʼ ಎಂದು ಮಾಲಿ ವಿನಂತಿಸಿದ.
ʻಉಪಕಾರವೇ! ನಮಗೆಲ್ಲಾ ಮಾಲಿ ಕೆಲಸ ಮಾಡಲು ಬರುವುದಿಲ್ಲʼ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮಂಗರಾಜ.

ʻಅಯ್ಯೋ! ತುಂಬಾ ಕಷ್ಟದ ಕೆಲಸವಲ್ಲ. ತೋಟದ ಬಾವಿಯಿಂದ ನೀರೆತ್ತಿ ಎಲ್ಲಾ ಗಿಡಗಳಿಗೂ ಹಾಕಬೇಕು, ಅಷ್ಟೆ. ಗಿಡ ಹಸಿರಾಗಿದ್ದರೆ ನಾನು ರಜೆಯ ಮೇಲೆ ಹೋದರೂ ನಮ್ಮ ಸಾಹುಕಾರರು ಬಯ್ಯುವುದಿಲ್ಲ. ಇದೊಂದು ಉಪಕಾರ ಮಾಡಿʼ ಎಂದು ಕೇಳಿದ ಮಾಲಿ. ಮಂಗಗಳು ಒಪ್ಪಿಕೊಂಡವು. ಈತ ನೆಮ್ಮದಿಯಿಂದ ಸಂಸಾರ ಸಮೇತ ಜಾತ್ರೆಗೆ ಹೋದ.

ಮಾರನೇದಿನ ಮಂಗಗಳ ಹಿಂಡು ತೋಟಕ್ಕೆ ಬಂದಿಳಿಯಿತು. ಒಂದೆರಡು ಮಂಗಗಳು ಬಾವಿಯಿಂದ ನೀರೆತ್ತುವ ಕೆಲಸವನ್ನು ಶುರು ಹಚ್ಚಿದವು. ಉಳಿದವು ಗಿಡಗಳಿಗೆ ನೀರು ಹಾಕುವ ಕೆಲಸ ವಹಿಸಿಕೊಂಡವು. ಆದರೆ ಅವುಗಳಿಗೊಂದು ಗಂಭೀರವಾದ ಸಮಸ್ಯೆ ಎದುರಾಯಿತು. ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ತಮ್ಮ ರಾಜನನ್ನು ಕೇಳಿದವು. ʻಅಯ್ಯೋ! ಈ ವಿಷಯವನ್ನು ಮಾಲಿಯ ಬಳಿ ಕೇಳಲೇ ಇಲ್ಲವಲ್ಲ. ನನ್ನ ಪ್ರಜೆಗಳಿಗೆ ರಾಜನಾಗಿ ಏನಾದರೂ ಉತ್ತರ ಹೇಳಬೇಕುʼ ಎಂದು ಯೋಚಿಸಿದ ಮಂಗರಾಜ, ಗಿಡಗಳ ಬೇರು ಎಷ್ಟು ದೊಡ್ಡದಿದೆಯೋ ಅಷ್ಟು ಹೆಚ್ಚು ನೀರು ಹಾಕಿ ಎಂದು ಸೂಚಿಸಿತು.

ಬೇರು ಎಷ್ಟು ದೊಡ್ಡದಿದೆ ಎಂದು ನೋಡುವುದು ಹೇಗೆ ಎಂದು ಮಂಗಗಳು ತಂತಮ್ಮಲ್ಲೇ ಚರ್ಚಿಸಿದವು. ʻಕಿತ್ತು ನೋಡೋಣʼ ಎಂದು ಒಂದು ಮಂಗ. ಎಲ್ಲರಿಗೂ ಸರಿ ಎನಿಸಿತು. ಒಂದಿಷ್ಟು ಮಂಗಗಳು ಕೀಳುವ ಕಾರ್ಯ ವಹಿಸಿಕೊಂಡರೆ, ಇನ್ನಷ್ಟು ನೀರು ಹಾಕುವ ಹಾಗೂ ಮತ್ತಷ್ಟು ಪುನಃ ನೆಡುವ ಕೆಲಸ ವಹಿಸಿಕೊಂಡವು. ಕೆಲವೇ ನಿಮಿಷಗಳಲ್ಲಿ ಇಡೀ ತೋಟ ಬುಡಮೇಲಾಯಿತು. ಒಂದು ಗಿಡವನ್ನು ಇನ್ನೊಂದು ಗಿಡದ ಪಕ್ಕ ಹಿಡಿದು ಬೇರಿನ ಉದ್ದ ನೋಡುವುದು, ನೀರಲ್ಲಿ ತೇಲಿಸುವುದು ಮಾಡುತ್ತಾ, ಇಡೀ ತೋಟವನ್ನು ಕೆಸರು ಗದ್ದೆಯನ್ನಾಗಿ ಮಾಡಿದವು. ಬಾವಿಯ ನೀರೆಲ್ಲಾ ಖರ್ಚಾಗುತ್ತಾ ಬಂದಂತೆ ಇವರ ಕೆಲಸವೂ ಪೂರ್ಣಗೊಂಡಿತು. ಮಾಲಿ ಒಪ್ಪಿಸಿದ್ದ ಕೆಲಸವನ್ನು ಮಾಡಿ ಮುಗಿಸಿದ ತೃಪ್ತಿಯಿಂದ ಎಲ್ಲವೂ ಕಾಡಿನತ್ತ ತೆರಳಿದವು.

ಇದನ್ನೂ ಓದಿ : ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸಾಹುಕಾರ ತೋಟದ ವೀಕ್ಷಣೆಗೆ ಬಂದ. ನೋಡಿದರೆ… ಇಡೀ ತೋಟ ಆನೆ ಹೊಕ್ಕಂತಿತ್ತು. ಕೆಂಡಾಮಂಡಲವಾದ ಶ್ರೀಮಂತ ಎಲ್ಲಿ ಹುಡುಕಿದರೂ ಮಾಲಿ ಮಾತ್ರ ಕಾಣಲಿಲ್ಲ. ಜಾತ್ರೆ ಮುಗಿಸಿದ ಮಾಲಿ ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಮರಳಿ ಬಂದ. ಆತನಿಗಾಗಿಯೇ ಕಾಯುತ್ತ ಕುಳಿತಿದ್ದ ಸಾಹುಕಾರ. ತೋಟದ ಸ್ಥಿತಿ ಕಂಡು ಮಾಲಿಯ ಕಣ್ಣಲ್ಲೂ ನೀರು ಬಂತು. ಜಾತ್ರೆಗೆ ಹೋಗಬೇಕಿದ್ದರಿಂದ ತಾನು ಮಾಡಿ ಹೋಗಿದ್ದ ಬದಲಿ ವ್ಯವಸ್ಥೆಯ ಬಗ್ಗೆ ಸಾಹುಕಾರನಲ್ಲಿ ಹೇಳಿದ ಮಾಲಿ ಕ್ಷಮೆ ಕೋರಿದ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ತಾನೆ ಲಾಭ!

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಕುದುರೆ ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ. ಯಾಕೆ ಗೊತ್ತೇ? ಕಥೆ ಓದಿ.

VISTARANEWS.COM


on

Horse riding
Koo

ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್‌ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.

ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.

ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.

ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.

ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.

ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

leopard
Koo

ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್‌ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್‌ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.

ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್‌ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.

ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.

ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್‌ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್‌ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್‌ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.

ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.

ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.

ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.

Continue Reading
Advertisement
Mohan Bhagwat
ದೇಶ2 mins ago

Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Congress instigates bombers We are crushing traitors through NIA PM Narendra Modi
Lok Sabha Election 20246 mins ago

PM Narendra Modi: ಬಾಂಬರ್‌ಗಳಿಗೆ ಕಾಂಗ್ರೆಸ್ ಕುಮ್ಮಕ್ಕು; ನಾವು NIA ಮೂಲಕ ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಿದ್ದೇವೆ ಎಂದ ಮೋದಿ

Election Commission
ದೇಶ7 mins ago

Election Commission: ಎಎಪಿಯ ಪ್ರಚಾರ ಗೀತೆಗೆ ಬದಲಾವಣೆ ಸೂಚಿಸಿದ ಚುನಾವಣಾ ಆಯೋಗ; ಕಾರಣವೇನು?

T20 World Cup 2024
ಕ್ರೀಡೆ9 mins ago

T20 World Cup 2024: ಸಭೆ ನಡೆಸಿದ ರೋಹಿತ್​, ಅಗರ್ಕರ್​; ಈ ಆಟಗಾರನಿಗೆ ಅವಕಾಶವಿಲ್ಲ!

Foods rich in vitamin D
ದೇಶ15 mins ago

Vitamin D: ಎಚ್ಚರ..ಎಚ್ಚರ! ಕ್ಯಾನ್ಸರ್‌ಗೂ ಕಾರಣವಾಗುತ್ತೆ ವಿಟಮಿನ್‌ ಡಿ ಕೊರತೆ

TCS World 10K
ಕ್ರೀಡೆ23 mins ago

TCS World 10K : ಲಿಲಿಯನ್ ಕಸಾಯಿತ್, ಪೀಟರ್ ಮ್ವಾನಿಕಿ ಚಾಂಪಿಯನ್​

IPL 2024 Points Table
ಕ್ರೀಡೆ40 mins ago

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

PM Narendra Modi proposing arecanut millets and fisheries
Lok Sabha Election 202449 mins ago

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi in Sirsi
Lok Sabha Election 20241 hour ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ವೈರಲ್ ನ್ಯೂಸ್2 hours ago

Viral Video: ಹೆಂಡತಿಯನ್ನ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra Modi in Sirsi
Lok Sabha Election 20241 hour ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ6 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202423 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಟ್ರೆಂಡಿಂಗ್‌