ಉಡುಪಿ
Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ
Chaitra Kundapura : ಬೈಂದೂರು ವಿಧಾನಸಭಾ ಟಿಕೆಟ್ ಪಡೆಯಲು ಹೋಗಿ 5 ಕೋಟಿ ರೂ. ವಂಚನೆಗೆ ಒಳಗಾದ ಗೋವಿಂದ ಪೂಜಾರಿ ಯಾರು ಮಾರ್ರೆ ಎನ್ನುವುದು ಎಲ್ಲರೂ ಕೇಳುವ ಪ್ರಶ್ನೆ. ಎಲ್ಲರೂ ಭೋಳೇಬಸವ ಅಂದುಕೊಂಡಿರುವ ಈ ಮನುಷ್ಯನ ಬದುಕನ್ನೊಮ್ಮೆ ನೋಡಿಕೊಂಡು ಬನ್ನಿ.. ನಿಮ್ಮ ನಿಲುವು ಬದಲಾಗುತ್ತದೆ.
ಬೆಂಗಳೂರು: ಇಡೀ ರಾಜ್ಯದಲ್ಲಿ ಈಗ ಅತಿ ಹೆಚ್ಚು ಸುದ್ದಿಯಲ್ಲಿರುವುದು ಬೆಂಕಿ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಎಂಡ್ ಟೀಮ್ ಮಾಡಿದ ಅತಿದೊಡ್ಡ ವಂಚನೆಯ ಕಥೆ. ಈ ಕಥೆಯಲ್ಲಿ ವಂಚನೆಗೆ ಒಳಗಾದವರು ಉದ್ಯಮಿ ಗೋವಿಂದ ಪೂಜಾರಿ (Govinda poojari). ಗೋವಿಂದ ಪೂಜಾರಿ ಅವರ ಕಥೆ ಕೇಳಿದಾಗ ಒಮ್ಮೆ ಅಯ್ಯೋ ಅನಿಸುತ್ತದೆ, ಹೀಗೆ ವಂಚನೆಗೆ ಒಳಗಾಗುವ ಭೋಳೆ ಬಸವನಂಥವರು ಎಂಎಲ್ಎ ಆದರೆ ಹೇಗಿದ್ದೀತು ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಸಾಕಷ್ಟು ಜನ ಈ ನಿಟ್ಟಿನಲ್ಲಿ ತಮಾಷೆ ಮಾಡುತ್ತಿದ್ದಾರೆ.
ಒಂದು ಕ್ಷಣ ಚೈತ್ರಾ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ (Byndur MLA Ticket), ಅದಕ್ಕೆ ಸಂಬಂಧಿಸಿ ನಡೆದ ವಂಚನೆ, ಗೋವಿಂದ ಪೂಜಾರಿ ನೀಡಿದ ದೂರು.. ಈಗ ನಡೆಯುತ್ತಿರುವ ಅದಿಷ್ಟೂ ಬೆಳವಣಿಗೆಗಳನ್ನು ಮರೆತುಬಿಟ್ಟು ಒಂದು ಮೋಟಿವೇಷನಲ್ ಕಥೆ (Motivational story) ಕೇಳಿ.. ಕೊನೆಗೆ ಗೋವಿಂದ ಬಾಬು ಪೂಜಾರಿ ಅಂದ್ರೆ ಏನು ಎನ್ನುವುದು ನಿಮಗೇ ತಿಳಿಯುತ್ತದೆ.
ಇದು ಬಡತನದ ಬೇಗೆಯಲ್ಲಿ ಬೆಂದರೂ ದೊಡ್ಡದೇನೋ ಸಾಧನೆ ಮಾಡಲೇಬೇಕು ಎಂದು ಹಠ ತೊಟ್ಟು ಪರಿಶ್ರಮದಿಂದಲೇ ಮೇಲೆದ್ದು ನಿಂತ ವ್ಯಕ್ತಿಯೊಬ್ಬನ ಸಾಹಸದ ಕಥೆ. ಬೀದಿ ಬದಿಯಲ್ಲಿ ಕೆಲಸ ಮಾಡುವುದರಿಂದ ಆರಂಭಗೊಂಡು 5000 ಜನರಿಗೆ ಉದ್ಯೋಗ ನೀಡುತ್ತಿರುವ, ಕೋಟ್ಯಂತರ ರೂ. ದಾನ ಮಾಡುವವರೆಗೆ ಒಬ್ಬ ವ್ಯಕ್ತಿ ಹಂತ ಹಂತವಾಗಿ ಬೆಳೆದ ಯಶೋಗಾಥೆ. ಈ ಕಥೆಯನ್ನು ಅವರ ಬಾಲ್ಯದಿಂದಲೇ ಶುರು ಮಾಡೋಣ.
ಬಿಜೂರಿನ ಕಡುಬತನದ ಕುಟುಂಬದಲ್ಲಿ ಜನನ
ಗೋವಿಂದ ಪೂಜಾರಿ ಅವರು ಹುಟ್ಟಿದ್ದು ಕುಂದಾಪುರದ ಬಿಜೂರಿನ ಕಡುಬಡ ಕುಟುಂಬವೊಂದರಲ್ಲಿ. 1977ರಲ್ಲಿ ಹುಟ್ಟಿದ ಅವರಿಗೆ ಹೊಟ್ಟೆಗೆ ಸರಿಯಾಗಿ ಹಿಟ್ಟಿಲ್ಲದ ಸ್ಥಿತಿ. ತಂದೆ ಬಾಬು ಪೂಜಾರಿ ಸಾಮಾನ್ಯ ಸಣ್ಣ ಕೃಷಿಕರು. ಅದರಲ್ಲಿ ಬೆಳೆದದ್ದು ಅದಕ್ಕೇ ಎನ್ನುವ ಪರಿಸ್ಥಿತಿ.
ಇಂಥ ಕುಟುಂಬದಲ್ಲಿ ಹುಟ್ಟಿದ ಗೋವಿಂದ ಎಂಬ ಪುಟ್ಟ ಬಾಲಕನಿಗೆ ತಾನು ಕುಟುಂಬದ ಬಡತನವನ್ನು ನೀಗಬೇಕು, ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಆಸೆ. ಆಗೆಲ್ಲ ವಿದ್ಯೆ ತಲೆಗೆ ಹತ್ತದ ಹುಡುಗರಿಗೆ, ಊರು ಬಿಟ್ಟು ಓಡುವ ಹುಡುಗರಿಗೆ ಆಸರೆ ಕೊಡುತ್ತಿದ್ದುದು ಮುಂಬಯಿ ಮಹಾನಗರಿ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಕರಾವಳಿಯ ಮಕ್ಕಳೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದರೆ ಮುಂಬಯಿಗೆ ಹೋಗಿದ್ದಾರೆ ಎಂದೇ ಅರ್ಥ.
ಇಂಥ ಕಾಲದಲ್ಲಿ ತನ್ನ ಕುಟುಂಬಕ್ಕೆ ನೆರವಾಗಬೇಕು ಎಂಬ ದೊಡ್ಡದೊಂದು ಕನಸು ಕಟ್ಟಿಕೊಂಡು ಅಕ್ಷರಶಃ ಉಟ್ಟ ಬಟ್ಟೆಯಲ್ಲಿ ಮುಂಬಯಿ ಮಹಾನಗರವನ್ನು ತಲುಪಿದ್ದ ಆ ಗೋವಿಂದ. ಆಗ ಅವನಿಗೆ ಕೇವಲ ಕೇವಲ 13 ವರ್ಷ ಮಾತ್ರ. ಸರಿಯಾದ ಅಕ್ಷರಾಭ್ಯಾಸವಿಲ್ಲದ ಈ ಹುಡುಗ, ಕೈಯಲ್ಲಿ ಹಣವಿಲ್ಲದ ಹುಡುಗ ಅದು ಹೇಗೋ ಬಸ್ ಹತ್ತಿ ಮುಂಬಯಿ ತಲುಪಿದ್ದ.
ಅಲ್ಲಿ ಮಾರ್ಗದ ಬದಿಯಲ್ಲಿ ಒಂದು ಕ್ಯಾಂಟೀನ್ನಲ್ಲಿ ಚಹಾದ ಗ್ಲಾಸ್ ತೊಳೆಯುವ ಕೆಲಸ ಮಾಡಲು ಆರಂಭಿಸುತ್ತಾನೆ ಹುಡುಗ. ಗ್ಲಾಸ್ ತೊಳೆಯುವ ಜತೆಗೆ ಮೆಲ್ಲಮೆಲ್ಲನೆ ಚಹಾ ಮಾಡುವುದನ್ನು ಕಲಿತುಕೊಂಡ. ಆದರೆ ಗೋವಿಂದ ಪೂಜಾರಿಗೆ ಅದೊಂದೇ ಆಂತ್ಯಿಕ ಗುರಿಯಾಗಿರಲಿಲ್ಲ. ಏನೋ ಸಾಧನೆ ಮಾಡಬೇಕು ಎನ್ನುವ ತಹತಹ ಇತ್ತು. ಹೋಟೆಲ್ನಿಂದ ಹೋಟೆಲ್ಗೆ ಜಿಗಿದ. ಚಹಾದ ಜತೆಗೆ ಅಡುಗೆ ಮಾಡಲು ಕಲಿತ. ಹಾಗೆ ಸಾಗಿದ ಪಯಣ ಬಿಎಸ್ಟಿ ಕ್ಯಾಂಟೀನ್ನಲ್ಲಿ ಅಡುಗೆ ಸಹಾಯಕನಾಗುವವರೆಗೆ ಕರೆದುಕೊಂಡು ಹೋಯಿತು.
ಮುಂದೆ ಗೋವಿಂದ ಪೂಜಾರಿ ವಯಸ್ಕನಾಗಿ ಬೆಳೆದು ನಿಲ್ಲುತ್ತಾರೆ. ಇರ್ಲಾದ ಸನ್ನಿ ಬಾರ್ನಲ್ಲಿ ಬಾಣಸಿಗನಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ, ಇದ್ಯಾವುದೂ ಅವರಿಗೆ ಅಷ್ಟೇನೂ ರುಚಿಸುವುದಿಲ್ಲ. ನಾನು ಏನೋ ಮಾಡಬೇಕು ಎನ್ನುವ ಉತ್ಸಾಹ… ಇದಲ್ಲ, ಇದಲ್ಲ ಎನ್ನುವ ನೇತಿ ಭಾವ. ಹೀಗಾಗಿ ಸ್ವ ಉದ್ಯೋಗದ ಮಾಡುವ ಕನಸಿನೊಂದಿಗೆ ಒಂದು ಜನರಲ್ ಸ್ಟೋರ್ ಓಪನ್ ಮಾಡ್ತಾರೆ. ಆದರೆ, ದುರದೃಷ್ಟ ಅದು ನಷ್ಟಕ್ಕೆ ಬಿತ್ತು.
ಆಗ ಅವರ ಕಣ್ಣಿಗೆ ಬಿದ್ದದ್ದು ಪಂಚತಾರಾ ಹೋಟೆಲ್. ಅಡುಗೆ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೂ ಪಂಚತಾರಾ ಹೋಟೆಲ್ನಲ್ಲಿ ಅಡುಗೆ ಕೆಲಸ ಸಿಗಲಿಲ್ಲ. ಆಗ ಅವರು ಹೋಟೆಲ್ನ ಕ್ಲೀನರ್ ಆಗಿ ಎಂಟ್ರಿ ಪಡೆಯುತ್ತಾರೆ! ಅಲ್ಲಿ ಅಡುಗೆ ಕೆಲಸವನ್ನೂ ಜತೆಯಾಗಿ ಮಾಡುತ್ತಾ ರುಚಿಕರ ತಿನಿಸುಗಳಿಗೆ ಹೆಸರಾದರು. ಅದೊಂದು ದಿನ ಹೋಟೆಲ್ ಆಡಳಿತ ಮಂಡಳಿ ಅವರನ್ನು ಷೆಫ್ ಸ್ಥಾನಕ್ಕೆ ಏರಿಸಿತು. ಬಿಜೂರಿನ ಪುಟ್ಟ ಹಳ್ಳಿಯ ಕಡುಬಡ ಕುಟುಂಬದ ಹುಡುಗ ಮುಂಬಯಿಯ ಪಂಚತಾರಾ ಹೋಟೆಲ್ನ ಷೆಫ್ ಆಗುವುದು ಆಗಿನ ಕಾಲಕ್ಕೆ ದೊಡ್ಡ ಸುದ್ದಿ!
ದೂರ ತೀರದಲ್ಲಿ ಕರೆಯುತ್ತಿತ್ತು ಮೋಹನ ಮುರಳಿ!
ಆದರೆ, ಗೋವಿಂದ ಪೂಜಾರಿ ಅವರಿಗೆ ನನ್ನ ಗುರಿ ಇದಿಷ್ಟೇ ಅಲ್ಲ ಅಲ್ಲ ಅಂತ ಅನಿಸುತ್ತಲೇ ಇತ್ತು. ಅವರಿಗೆ ಪಂಚ ತಾರಾ ಹೋಟೆಲ್ನ ಷೆಫ್ ಆಗುವುದಕ್ಕಿಂತಲೂ ಸ್ವಂತ ಉದ್ಯಮ ಮಾಡಿ ತಲೆ ಎತ್ತಿ ನಿಲ್ಲಬೇಕು ಎನ್ನುವ ಅತಿ ದೊಡ್ಡ ಆಸೆ ಇತ್ತು. ಹೀಗಾಗಿ ಅವರು ತಮ್ಮದೇ ಒಂದು ಕ್ಯಾಟರಿಂಗ್ ಸಂಸ್ಥೆಯನ್ನೇ ಕಟ್ಟಿಬಿಟ್ಟರು. 2007ರಲ್ಲಿ ಜನ್ಮ ತಳೆದ ಈ ಸಂಸ್ಥೆಯ ಹೆಸರು: ಶೆಫ್ ಟಾಕ್ ಕೇಟರಿಂಗ್ ಸರ್ವಿಸಸ್. ಮುಂದೆ ಇದೇ ಕಂಪನಿ ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ. (Cheftalk Food And Hospitality Services Pvt.Ltd) ಅಂತ ಚೇಂಜ್ ಆಯಿತು. ಇದು ಗೋವಿಂದ ಪೂಜಾರಿ ಮತ್ತು ಅವರ ಜತೆಗೆ ಏಳು ಮಂದಿ ಸೇರಿ ಕಟ್ಟಿದ ಸಂಸ್ಥೆ.
ಈ ಸಂಸ್ಥೆ ಬೆಳೆದುನಿಂತ ರೀತಿಯನ್ನೊಮ್ಮೆ ನೋಡಿ
ಒಮ್ಮೆ ಗೂಗಲ್ ಮಾಡಿ ನೋಡಿ.. ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿಮಿಟೆಡ್ ಎಂಬ ಸಂಸ್ಥೆ ಎಷ್ಟು ಅಗಾಧವಾಗಿ ಬೆಳೆದಿದೆ ಎಂದು ಗೊತ್ತಾಗುತ್ತದೆ. ಈ ಸಂಸ್ಥೆಯಲ್ಲಿ ಈಗ ಇರುವ ಉದ್ಯೋಗಿಗಳ ಸಂಖ್ಯೆ 5000. ಮಹಾರಾಷ್ಟ್ರದಲ್ಲಿ ಹುಟ್ಟಿದ ಈ ಸಂಸ್ಥೆ ಈಗ ಕರ್ನಾಟಕ, ಜಾರ್ಖಂಡ್, ಗುಜರಾತ್ನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಅತ್ಯಾಧುನಿಕ ಕಿಚನ್ಗಳನ್ನು ನಿರ್ಮಿಸಿಕೊಂಡು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆಯನ್ನು ನೀಡುತ್ತಿದೆ. ಗೊತ್ತಿರಲಿ, ಇದೇ ಸಂಸ್ಥೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಕಿಚನನ್ನು ಹೊಂದಿದೆ. ಇದು ಐಎಸ್ಒ ಮಾನ್ಯತೆಯನ್ನೂ ಪಡೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದೆ.
ಎಷ್ಟೊಂದು ಬ್ಯುಸಿನೆಸ್ ಮಾಡುತ್ತಿದ್ದಾರೆ ನೋಡಿ…
ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಾ 13ನೇ ವಯಸ್ಸಿಗೆ ಮುಂಬಯಿಯ ಬೀದಿಯಲ್ಲಿ ನಿಂತಿದ್ದ ಹುಡುಗ ತನ್ನ 40ರ ವಯಸ್ಸಿನ ಹೊತ್ತಿಗೆ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದರು. ಹಾಗಂತ ತಾವು ಬಂದ ದಾರಿಯನ್ನು ಮರೆಯಲಿಲ್ಲ. ತಾವೇ ಷೆಫ್ ಆಗಿ ನಿಂತು ಅಡುಗೆ ಮಾಡಲೂ ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಜತೆ ಕೆಲಸ ಮಾಡುವ ಹುಡುಗರನ್ನು ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವ ದೊಡ್ಡ ಗುಣ ತೋರಿದರು.
ಗೋವಿಂದ ಪೂಜಾರಿ ಅವರು ಕೇವಲ ಕ್ಯಾಟರಿಂಗ್ ಉದ್ಯಮಕ್ಕೂ ಸೀಮಿತವಾಗಲಿಲ್ಲ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್ ತಯಾರಿಸುವ ಕಂಪನಿ ಸ್ಥಾಪಿಸಿದರು.
ಪ್ರಜ್ಞಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿದರು. ಇವತ್ತು ಅವರದು ನೂರಾರು ಕೋಟಿ ವಹಿವಾಟು ನಡೆಸುವ ಚೈನ್ ಆಫ್ ಬ್ಯುಸಿನೆಸ್.
ನೆನಪಿರಲಿ, ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಕೆಲಸಗಾರರನ್ನು ಒದಗಿಸಿ ಕೊಡುವ ಕೆಲಸ ಮಾಡುತ್ತಿರುವುದು ಇದೇ ಗೋವಿಂದ ಪೂಜಾರಿ. ಅದರಲ್ಲೂ ತಮ್ಮೂರಿನ ಹುಡುಗರು ಎಂದು ಕುಂದಾಪುರ ಭಾಗದ ಹುಡುಗರನ್ನು ಬಸ್ಗಳಲ್ಲಿ ಹತ್ತಿಸಿ ಹತ್ತಿಸಿ ತರುತ್ತಿದ್ದಾರೆ.
ಸಂದಿರುವ ಪ್ರಶಸ್ತಿಗಳು ಹಲವಾರು
ಕೇವಲ ಪರಿಶ್ರಮದಿಂದ, ಹಠದಿಂದ ದೊಡ್ಡ ಉದ್ಯಮ ಸಂಸ್ಥೆಯನ್ನು ಆರಂಭ ಮಾಡಿರುವ ಗೋವಿಂದ ಪೂಜಾರಿ ಅವರಿಗೆ ಫಾಸ್ಟೆಸ್ಟ್ ಗ್ರೋವಿಂಗ್ ಪುಡ್ ಸರ್ವೀಸ್ ಕಂಪನಿ – ಎಐಎಫ್ 2017, ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್ಸಿ 2018, ಫಾಸ್ಟೆಸ್ಟ್ ಗ್ರೋವಿಂಗ್ ಎಂಟರ್ಪ್ರೈಸ್ – ಬಿಸಿಸಿಐ ಆ್ಯಂಡ್ ಎಚ್ಡಿಎಫ್ಸಿ ಬ್ಯಾಂಕ್ 2019 ಮತ್ತು ಆಹಾರೋದ್ಯಮ ಸಾಧನಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸಿಕ್ಕಿವೆ.
ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕುಂದಾಪುರ ದೇಶಮಂ!
ಇಷ್ಟೆಲ್ಲ ಸಾಧನೆ ಮಾಡಿದ ಬಳಿಕವೂ ಅವರಿಗೆ ನೆಮ್ಮದಿ ಇಲ್ಲ. ಹಾಗಂತ ಇನ್ನಷ್ಟು ದುಡ್ಡು ಮಾಡಬೇಕು ಎನ್ನುವ ಆಸೆಯಲ್ಲ. ಬದಲಾಗಿ ನಾನು ಸಮಾಜಕ್ಕೆ, ನನ್ನ ಊರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವ ತವಕ. ತನ್ನ ಕೈಗೆ ದುಡ್ಡು ಬರಲಾರಂಭಿಸಿದ ದಿನದಿಂದಲೇ ಊರಿನ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅವರು ದಾನ ನೀಡಲು ಶುರು ಮಾಡಿದ್ದರು.
ಈಗ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಉಪ್ಪುಂದದಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಹತ್ತಾರು ಸಂಘ ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ ಹುಟ್ಟೂರಲ್ಲಿ ಶಾಲೆ ಕಟ್ಟಬೇಕು, ಉದ್ದಿಮೆಯನ್ನು ವಿಸ್ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು ಎನ್ನುವ ದೊಡ್ಡ ಕನಸಿಗ ಇವರು.
ಅದ್ಯಾಕೋ ಹುಟ್ಟಿತು ಶಾಸಕನಾಗುವ ಕನಸು
ಇಷ್ಟೊಂದು ಸಾಧನೆ, ಸಾಮಾಜಿಕ ಕಳಕಳಿ ಮತ್ತು ಸಮಾಜಸೇವೆ ನಡೆಸುವ ಉಮೇದಿ ಹೊಂದಿದ್ದ ಅವರ ಕಿವಿಯೊಳಗೆ ಯಾರೋ ನೀವು ಶಾಸಕರಾದರೆ ಇನ್ನಷ್ಟು ಕೆಲಸ ಮಾಡಬಹುದು ಎಂಬ ಮಾತನ್ನು ಉಸುರಿದ್ದರು. ಹೌದಲ್ಲ ಎಂದು ಅನಿಸಿದ ಗೋವಿಂದ ಪೂಜಾರಿ ಅವರು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಾಗ ಸಿಕ್ಕಿದ್ದೇ ಚೈತ್ರಾ ಕುಂದಾಪುರ. ಮುಂದಿನ ಕಥೆ ಎಲ್ಲವೂ ಎಲ್ಲರಿಗೂ ಗೊತ್ತಿದೆ.
ಇದನ್ನೂ ಓದಿ : Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!
ಹಾಗಂತ, ಐದು ಕೋಟಿ ರೂ. ಕಳೆದುಕೊಂಡೆ ಎಂದು ಬೇಜಾರು ಮಾಡಿಕೊಂಡು ಕುಳಿತುಕೊಳ್ಳುವ ಜಾಯಮಾನ ಗೋವಿಂದ ಪೂಜಾರಿ ಅಲ್ಲ ಅನಿಸುತ್ತದೆ. ಬದುಕಿನುದ್ದಕ್ಕೂ ಹಲವು ಏಳುಬೀಳು, ಅಪಮಾನಗಳನ್ನು ಕಂಡೇ ಎದ್ದುನಿಂತವರು ಈ ಗೋವಿಂದ ಪೂಜಾರಿ. ಒಂದು ವಂಚನೆಯ ಕಥೆಯೊಳಗೆ ಹುದುಗಿದ್ದ ಸ್ಫೂರ್ತಿದಾಯಕ ಬದುಕು ಎಲ್ಲರಿಗೂ ಖಂಡಿತ ಇಷ್ಟವಾಗಲೇಬೇಕು.
ಇದನ್ನೂ ಓದಿ; Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್ಬ್ರಾಂಡ್ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!
ಉಡುಪಿ
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
Dr HS Shetty : ಸಾಧಕ ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ ಅವರಿಗೆ ಶುಕ್ರವಾರ ಹಾಲಾಡಿಯ ನಾಗರಿಕರು ಹುಟ್ಟೂರ ಸನ್ಮಾನ ಆಯೋಜಿಸಿದ್ದರು. ತಮ್ಮೂರಿನ ಹುಡುಗ ಇಷ್ಟು ಎತ್ತರಕ್ಕೇರಿದ್ದು, ಸಾಧನೆಯೊಂದಿಗೆ ಸೇವೆ ಮಾಡುತ್ತಿರುವುದು, ಡಾಕ್ಟರ್ ಆಫ್ ಸೈನ್ಸ್ ಗೌರವ ಗಳಿಸಿದ್ದು ಅವರನ್ನು ಪುಳಕಿತಗೊಳಿಸಿದೆ.
ಬೆಂಗಳೂರು: ರಾಜ್ಯದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿ, ವಿಭಿನ್ನ ಔದ್ಯಮಿಕ ಮತ್ತು ಸೇವಾ ಪರಿಕಲ್ಪನೆಗಳೊಂದಿಗೆ ಮುನ್ನಡೆಯುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಮೂಲದ ಡಾ.ಎಚ್.ಎಸ್. ಶೆಟ್ಟಿ (Dr HS Shetty) ಅವರಿಗೆ ಹುಟ್ಟೂರಿನ ಜನರೆಲ್ಲ ಸೇರಿ ಶುಕ್ರವಾರ (ಸೆ. 22) ಅತ್ಯಂತ ಗೌರವಾದರಗಳಿಂದ ಸನ್ಮಾನ ಮಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (Vishweshwarayya Technical University) ಡಾ. ಶೆಟ್ಟಿ ಅವರ ಸಾಧನೆಗಾಗಿ ಡಾಕ್ಟರ್ ಆಫ್ ಸೈನ್ಸ್ (Doctor of Science) ನೀಡಿ ಗೌರವಿಸಿದ್ದನ್ನು ಊರಿನ ಜನ ತಮ್ಮೂರಿನ ಕಿರೀಟಕ್ಕೆ ಮುಡಿದ ಗರಿ ಎಂಬಂತೆ ಸಂಭ್ರಮಿಸಿದರು.
ಶುಕ್ರವಾರ ಬೆಳಗ್ಗೆ ಹಾಲಾಡಿಯ ಶಾಲಿನಿ. ಜಿ. ಶಂಕರ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಗಣ್ಯರೂ ಅತ್ಯಂತ ಕಷ್ಟದ ಬಾಲ್ಯದಿಂದ, ಕಷ್ಟಪಟ್ಟು ವಿದ್ಯಾಭ್ಯಾಸ ಪಡೆದು, ಕಠಿಣ ಪರಿಶ್ರಮದೊಂದಿಗೆ ಅದ್ವಿತೀಯ ಸಾಧನೆ ಮಾಡುತ್ತಿರುವ ಡಾ. ಎಚ್.ಎಸ್ ಶೆಟ್ಟಿ ಅವರ ಆದರ್ಶ ಮತ್ತು ಆದರಣೀಯ ಬದುಕನ್ನು ಕೊಂಡಾಡಿದರು. ಅವರು ವೃತ್ತಿಪರ ಬದುಕಿನಲ್ಲಿ ಮಾಡಿದ ಸಾಧನೆಯ ಜತೆಗೆ ಅವರು ತಮ್ಮ ಊರು, ನಾಡಿಗಾಗಿ ಮಾಡುತ್ತಿರುವ ಸೇವೆ, ಬಡ ಮಕ್ಕಳ ಶಿಕ್ಷಣಕ್ಕೆ ಅವರು ಬೆಂಗಾವಲಾಗಿ ನಿಂತಿರುವ ಬಗೆಯನ್ನು ತೆರೆದಿಟ್ಟರು.
ಡಾ. ಎಚ್.ಎಸ್. ಶೆಟ್ಟಿ ಮತ್ತು ಡಾ. ಸುಮನಾ ಶೆಟ್ಟಿ ದಂಪತಿ ಹುಟ್ಟೂರಿನ ಜನರ ಪ್ರೀತಿ, ಗಣ್ಯರ ಅಭಿಮಾನದ ನುಡಿಗಳಿಂದ ಬದುಕಿನ ಸಾರ್ಥಕ್ಯದ ಅನುಭೂತಿಯನ್ನು ಅನುಭವಿಸಿದರು. ಸಾವಿರಾರು ಜನರು ಸೇರಿದ್ದ ಸಭಾಂಗಣದಲ್ಲಿ ಮಗನ ಸಾಧನೆಯ ಪುಟಗಳು ಒಂದೊಂದಾಗಿ ತೆರೆದುಕೊಂಡಾಗ ಕೇಳಿದ ಚಪ್ಪಾಳೆಗಳಿಗೆ ಕಿವಿಯಾದ ಡಾ. ಎಚ್.ಎಸ್ ಶೆಟ್ಟಿ ಅವರ ತಾಯಿ ನಿವೃತ್ತ ಶಿಕ್ಷಕಿ ಸರೋಜಿನಿ ಶೆಟ್ಟಿ ಅವರು ಧನ್ಯತೆಯ ಕ್ಷಣಗಳನ್ನು ಎದೆಯೊಳಗೆ ತುಂಬಿಕೊಂಡರು. ಶಿಕ್ಷಕರಾಗಿದ್ದ ತಂದೆ ಹೆಗ್ಗುಂಜೆ ರಾಜೀವ್ ಶೆಟ್ಟಿ ಅವರ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಡಾ. ಶೆಟ್ಟಿ ಅವರು ನಡೆಸುತ್ತಿರುವ ಸಾಮಾಜಿಕ ಕೈಂಕರ್ಯಗಳು ಅನ್ಯಾದೃಶ ಎಂದು ಜನರು ಕೊಂಡಾಡಿದ ಕ್ಷಣಗಳು ಸಭಾಂಗಣವನ್ನೇ ಭಾವುಕಗೊಳಿಸಿದವು.
ಎತ್ತರಕ್ಕೇರಿದರೂ ಬಡವರ ಸೇವೆಗೆ ನಿಂತ ಸಾಧಕನಿಗೆ ಸನ್ಮಾನ
ಡಾ ಎಚ್.ಎಸ್.ಶೆಟ್ಟಿ ಅವರು ಹೋಟೆಲ್ ಉದ್ಯಮಿಯಾಗಿ ಹೊಸ ಎತ್ತರಕ್ಕೆ ಏರಿದ ಬಳಿಕ ಉದ್ಯಮವನ್ನು ಹಲವು ದಿಕ್ಕುಗಳಲ್ಲಿ ವಿಸ್ತರಿಸಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದನೆ, ವಿದೇಶಕ್ಕೆ ರಫ್ತು ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ. ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್ ಎಕ್ಸ್ಪೋರ್ಟ್ ಅವಾರ್ಡ್ ಲಭಿಸಿದೆ. ಅದೆಲ್ಲವನ್ನೂ ಮೀರಿದ್ದು ಅವರ ಸಮಾಜ ಸೇವೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಸಾವಿರಾರು ಮಕ್ಕಳಿಗೆ ಉಚಿತ ಸಮವಸ್ತ್ರ, ಶಾಲೆಗಳಿಗೆ ಕೊಡುಗೆ ನೀಡುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕ ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಅವರ ವೈವಿಧ್ಯಮಯ ಆಸಕ್ತಿಯನ್ನು ಕಂಡು ನಿಬ್ಬೆರಗಾದ ಜನ ʻನಮ್ಮೂರ ಸಾಧಕʼನನ್ನು ಖುಷಿಯಿಂದ ಸನ್ಮಾನಿಸಿ ಸಂಭ್ರಮಿಸಿದರು.
ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ
ಸಾಧಕನ ಸನ್ಮಾನಕ್ಕೆ ನೆರೆದಿತ್ತು ಗಣ್ಯರ ದಂಡು
ಡಾ. ಎಚ್.ಎಸ್. ಶೆಟ್ಟಿ ಅವರ ಸನ್ಮಾನ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಸ್ತಾರ ನ್ಯೂಸ್ನ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ, ಉದ್ಯಮಿ ಎಂ. ದಿನೇಶ್ ಹೆಗ್ಡೆ, ಹಾಲಾಡಿಯ ಗ್ರಾ.ಪಂ ಅಧ್ಯಕ್ಷ ಅಶೋಕ ಶೆಟ್ಟಿ ಭಾಗವಹಿಸಿ ಸನ್ಮಾನಿಸಿ ಖುಷಿಪಟ್ಟರು.
ದೇವರೇ ಇವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು ಲಕ್ಷ್ಮೀ ಹೆಬ್ಬಾಳ್ಕರ್
ಸಮಾರಂಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಆ ದೇವರೇ ನಿಮಗೆ ಈ ರೀತಿಯಾಗಿ ಶಕ್ತಿ ತುಂಬಿ ಕಳುಹಿಸಿಕೊಟ್ಟಿದ್ದಾನೆ. ಯಾಕೆಂದರೆ, ಎಲ್ಲರಿಗೂ ಈ ರೀತಿಯ ಮನಸು, ಹೃದಯ ವೈಶಾಲ್ಯ ಬರುವುದಿಲ್ಲ ಎಂದು ಹೇಳಿದರು. ಎಚ್.ಎಸ್. ಶೆಟ್ಟಿ ಅವರು ಸಾಧನೆಯಲ್ಲೂ ಸಮಾಜ ಸೇವೆಯಲ್ಲೂ ನಮಗೆ ಆದರ್ಶಪ್ರಾಯರು ಎಂದು ಹೃದಯ ತುಂಬಿ ಮಾತನಾಡಿದರು.
ತಮ್ಮ ಜೀವನದ ಶಿಲ್ಪಿ ತಾವೇ ಆದ ಎಚ್.ಎಸ್.ಶೆಟ್ಟಿ: ಹರಿಪ್ರಕಾಶ್ ಕೋಣೆಮನೆ
ವಿವೇಕಾನಂದರು ಹೇಳಿದ ಒಂದು ಮಾತು ಎಚ್.ಎಸ್. ಶೆಟ್ಟಿ ಅವರಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ನಿನ್ನ ಜೀವನದ ಶಿಲ್ಪಿ ನೀನೇ ಎಂಬ ವಿವೇಕಾನಂದರ ಮಾತಿನಂತೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡ ಸಾಧಕ ಎಚ್.ಎಸ್. ಶೆಟ್ಟಿ ಅವರು ಎಂದವರು ವಿಸ್ತಾರ ನ್ಯೂಸ್ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ.
ಡಾ.ಎಚ್.ಎಸ್ ಶೆಟ್ಟಿ ಅವರು ಎಲ್ಲೂ ವಿರಮಿಸುವವರಲ್ಲ. ಒಂದು ನಿರ್ದಿಷ್ಟ ಉದ್ಯಮಕ್ಕೆ ಅಂಟಿಕೊಳ್ಳುವವರಲ್ಲ. ಹೊಸತನ್ನು ಹುಡುಕುತ್ತಾ ಹೋಗುವುದು ಅವರ ಜಾಯಮಾನ. ಅದಕ್ಕಾಗಿಯೇ ಅವರು ಬೆಹರಿನ್ನಲ್ಲಿ ಇದ್ದ ಒಳ್ಳೆಯ ಉದ್ಯಮವನ್ನು, ಅಮೆರಿಕದ ಕಂಪನಿಯ ಉದ್ಯೋಗ ಆಫರನ್ನು ತಿರಸ್ಕರಿಸಿ ಭಾರತಕ್ಕೆ ಬಂದವರು ಎಂಬುದನ್ನು ನೆನಪಿಸಿದರು. ತಾವು ತಮ್ಮ ಊರಿನಲ್ಲೇ ಉದ್ಯಮ ಸ್ಥಾಪನೆ ಮಾಡಿ, ಊರಿನವರಿಗೆ ಕೆಲಸ ಕೊಡಬೇಕು, ತಮ್ಮ ಉದ್ಯಮದ ಲಾಭ, ತೆರಿಗೆ ಎಲ್ಲವೂ ತಮ್ಮ ದೇಶಕ್ಕೇ ಸೇರಬೇಕು ಎಂಬ ಕಾರಣಕ್ಕಾಗಿ ಅವರು ಭಾರತಕ್ಕೆ, ತಮ್ಮ ಊರಿಗೆ ಮರಳಿದ್ದಾರೆ ಎಂದು ಹೇಳಿದರು.
ಎಚ್.ಎಸ್. ಶೆಟ್ಟಿ ಅವರು ಈಗ ಶ್ರೀಮಂತರಾಗಿರಬಹುದು. ಆದರೆ, ತಮ್ಮ ಬಾಲ್ಯದ ನೋವನ್ನು ಅವರು ಮರೆತಿಲ್ಲ. ಈಗ ಅದೆಷ್ಟೋ ಬಡ ಮಕ್ಕಳಿಗೆ ಶಿಕ್ಷಣದ ಸವಲತ್ತುಗಳನ್ನು ಒದಗಿಸುವ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸೇರಿದಂತೆ ಸವಲತ್ತು ಒದಗಿಸಿದ್ದಾರೆ. ಅದಕ್ಕೆ ಅವರು ವರ್ಷಂಪ್ರತಿ ಖರ್ಚು ಮಾಡುವ ಮೊತ್ತ ಏಳೆಂಟು ಕೋಟಿ ರೂ. ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಹುಟ್ಟೂರು, ನಾಡಿಗಾಗಿ ಹಲವು ಕೊಡುಗೆ ಘೋಷಿಸಿದ ಡಾ.ಎಚ್.ಎಸ್ ಶೆಟ್ಟಿ
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಚ್.ಎಸ್. ಶೆಟ್ಟಿ ಅವರು ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡರು. ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟದ ಜೀವನ ಸವೆಸಿ ಪಂಚೆ ಸೀನನಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಬದುಕಿಗೆ ದಾರಿದೀಪವಾಗಿದ್ದ ಹಾಲಾಡಿಯ ಹಿರಿಯ ವ್ಯಕ್ತಿ ವಿ.ಆರ್. ಪಟೇಲ್ ಹಿರಿಯಣ್ಣ ಶೆಟ್ಟರ ನಿಧನ, ನಂತರ ಒದಗಿದ ಅತಂತ್ರ ಸ್ಥಿತಿ, ಅಮ್ಮನ ಸೂಚನೆಯಂತೆ ಊರು ಬಿಡಬೇಕಾಗಿ ಬಂದದ್ದು, ಮುಂಬಯಿಯ ಧಾರಾವಿಯ ಉದ್ಯೋಗ, ಗಲ್ಫ್ನಲ್ಲಿ ಮಾಡಿದ ಉದ್ಯಮ, ಮರಳಿ ಭಾರತಕ್ಕೆ ಬಂದದ್ದು, ಬೇರೇನೋ ಮಾಡಬೇಕು ಎನ್ನುವ ತುಡಿತ ತಮ್ಮನ್ನು ಉದ್ಯಮಿಯಾಗಿ ರೂಪಿಸಿದ ಪ್ರೇರಣಾದಾಯಿ ಕಥೆ ಹೇಳಿದರು.
ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂಬ ಹಿರಿಯಣ್ಣ ಶೆಟ್ಟರ ನುಡಿ, ಡಸ್ಟರ್ ಸಿಗದೆ ಇದ್ದಾಗ ರಾಷ್ಟ್ರ ಧ್ವಜದಲ್ಲೇ ಬೋರ್ಡ್ ಒರೆಸಲು ಹೊರಟ ಮೇಸ್ಟ್ರನ್ನು ತಡೆದು ನಿಲ್ಲಿಸಿದ ಸಾಯಿಬ್ರು ಮಾಸ್ಟ್ರ ದೇಶಪ್ರೇಮ, ಬೇರೆಯವರಿಗಾಗಿಯೇ ಬದುಕಿದ ಅಜ್ಜಿಯ ನಿಸ್ವಾರ್ಥ ಬದುಕಿನ ಒಂದೊಂದು ಕಥೆಗಳು ತಮ್ಮಲ್ಲಿ ಮೂಡಿಸಿದ ಭಾವಗಳೇ ಈವತ್ತಿನ ಈ ಸ್ಥಿತಿಗೆ ಕಾರಣ ಎಂದು ನೆನೆದರು.
ಸನ್ಮಾನ ಸ್ವೀಕರಿಸಿದ ಕ್ಷಣದಲ್ಲಿ ತಮ್ಮೂರು ಮತ್ತು ನಾಡಿಗೆ ಇನ್ನಷ್ಟು ಹೊಸ ಸೇವಾ ಯೋಜನೆಗಳನ್ನು ಡಾ. ಎಚ್ ಎಸ್ ಶೆಟ್ಟಿ ಅವರು ಪ್ರಕಟಿಸಿದರು. ಅವರು ಹೇಳಿದ್ದಿಷ್ಟು:
1. ಬ್ರಹ್ಮಾವರದಲ್ಲಿ ಅತಿ ವಿಶಿಷ್ಟವಾದ ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆಯ ಸರ್ಕಾರಿ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುತಿದ್ದೇವೆ. ಡಿಸೆಂಬರ್ನಲ್ಲಿ ಅದರ ಉದ್ಘಾಟನೆ ನಡೆಯಲಿದೆ.
2. ಹಾಲಾಡಿಯಲ್ಲಿರುವ ಸಣ್ಣ ಸಣ್ಣ ಶಾಲೆಗಳನ್ನು ಸೇರಿಸಿ ಒಂದು ದೊಡ್ಡ ಪಬ್ಲಿಕ್ ಸ್ಕೂಲ್ ಮಾಡುತ್ತೇನೆ. ನನ್ನೂರಿನ ಮಕ್ಕಳು ಚೆನ್ನಾಗಿ ಓದಬೇಕು ಎನ್ನುವುದು ನನ್ನಾಸೆ.
3. ಚೆನ್ನೈ ಐಐಟಿಯ ಪ್ರಾಧ್ಯಾಪಕರಿಂದ ಕರ್ನಾಟಕದ 150 ಶಾಲೆಗಳಿಗೆ ದೂರ ಶಿಕ್ಷಣ ಕೋಚಿಂಗ್ ಒದಗಿಸುವ ಮೆಗಾ ಪ್ರಾಜೆಕ್ಟ್ ಶುರುವಾಗಲಿದೆ. ಮೊದಲ ವರ್ಷ ಈ ಯೋಜನೆಗೆ ನಾಲ್ಕು ಕೋಟಿ ರೂ. ಬೇಕು. ಉಡುಪಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಈ ಕೋಚಿಂಗ್ ಇರುತ್ತದೆ. ಹಾಲಾಡಿ ಶಾಲೆಯನ್ನೂ ಆಯ್ಕೆ ಮಾಡಿದ್ದೇನೆ. ತಮ್ಮ ಮಾತೃಭಾಷೆಯಲ್ಲಿ ಓದಿದ ಮಕ್ಕಳೂ ದೊಡ್ಡ ಸಾಧನೆ ಮಾಡಬಲ್ಲರು ಎನ್ನುವುದನ್ನು ಇಸ್ರೋ ಸಾಧನೆಯ ಹಿಂದಿರುವ ವಿಜ್ಞಾನಿಗಳನ್ನು ನೋಡಿ ಅರಿತಿದ್ದೇನೆ. ಅಂಥಹುದೇ ಸಾಧಕರಾಗಲು ಅವರಿಗೆ ಮಾರ್ಗದರ್ಶನ ಮಾಡುವ ಆಸೆ ನನ್ನದು ಎಂದರು ಡಾ.ಎಚ್.ಎಸ್ ಶೆಟ್ಟಿ.
ಡಾ.ಎಚ್.ಎಸ್ ಶೆಟ್ಟಿ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇಲ್ಲಿ ನೋಡಿ…
ಇದನ್ನೂ ಓದಿ: VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ
ಉಡುಪಿ
Weather report : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ತಗ್ಗದ ಅಬ್ಬರ
Rain News : ಉತ್ತರ ಒಳನಾಡಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಲ್ಲಿ ಸಾಮಾನ್ಯವಾಗಿದೆ. ಸೆ.23-24ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಬೆಂಗಳೂರು: ಇನ್ನರೆಡು ದಿನ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚೆನಯನ್ನು (weather report) ನೀಡಲಾಗಿದೆ.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ.
ಗುಡುಗು ಜತೆಗೆ ಬಿರುಗಾಳಿ ಮುನ್ನೆಚ್ಚರಿಕೆ
ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.
ಬೆಂಗಳೂರಲ್ಲಿ ವ್ಯಾಪಕ ಮಳೆ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
ನೈರುತ್ಯ ಮುಂಗಾರು ಗುರುವಾರ ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಸೇಡಂನಲ್ಲಿ 7 ಸೆಂ.ಮೀ ಮಳೆಯಾಗಿದೆ. ಚಿಂಚೋಳಿ, ಸುಲೇಪೇಟದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಕದ್ರಾ, ಚಿತ್ತಾಪುರ, ಸೈದಾಪುರ, ಇಂಡಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಕಾರವಾರ, ಮುಧೋಳೆ ಜೇವರ್ಗಿ, ಶಹಾಪುರ, ಬೆಂಗಳೂರು ನಗರ, ಕುಣಿಗಲ್ನಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ಕ್ಯಾಸಲ್ ರಾಕ್, ಗೇರ್ಸೊಪ್ಪ, ಆಳಂದ, ನೆಲೋಗಿ, ಅಡಕಿ, ಯಡ್ರಾಮಿ, ಗುಂಡಗುರ್ತಿ ಕಟ್ಕೋಲ್ , ದೇವದುರ್ಗ , ಧಾರವಾಡ, ಕುಂದಗೋಳ , ಬೀದರ್ PTO, ಬೀದರ್, ಔರಾದ್ , ದೇವರಹಿಪ್ಪರಗಿ , ಶ್ರೀರಂಗಪಟ್ಟಣ ಹಾಗೂ ಪೊನ್ನಂಪೇಟೆ, ಬೆಂಗಳೂರು ಹಾಲ್ ವಿಮಾನ ನಿಲ್ದಾಣ ತಲಾ 1 ಸೆಂ. ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
FB profile deleted : ಹಿಂದು ಜಾಗರಣ ವೇದಿಕೆಯ ರಾಜ್ಯ ನಾಯಕರ ಫೇಸ್ ಬುಲ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರಲ್ಲಿ ಸರ್ಕಾರದ ಕೈವಾಡವನ್ನು ನಾಯಕರು ಸಂಶಯಿಸಿದ್ದಾರೆ.
ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಘಟನೆಯಾಗಿರುವ ಹಿಂದು ಜಾಗರಣ ವೇದಿಕೆಯ (Hindu Jagarana Vedike) 20ಕ್ಕೂ ಅಧಿಕ ಮುಖಂಡರ (Hindu Leaders) ಫೇಸ್ ಬುಕ್ ಪ್ರೊಫೈಲ್ಗಳನ್ನು (FB profile Deleted) ಏಕಕಾಲದಲ್ಲಿ ಡಿಲೀಟ್ (Facebook profiles deleted) ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯ ರಾಜ್ಯದ ಪ್ರಮುಖರ ಪ್ರೊಫೈಲ್ಗಳು ಇದ್ದಕ್ಕಿದ್ದಂತೆಯೇ ಕಾಣೆಯಾಗಿವೆ.
ವಿಸ್ತಾರ ನ್ಯೂಸ್ಗೆ ಈ ವಿಚಾರವನ್ನು ತಿಳಿಸಿರುವ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ (Shrikant Shetty Karkala) ಅವರು ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಿಂಜಾವೇಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಇದು ಸರಕಾರದ ಸೂಚನೆಯಂತೆ ತೆಗೆದುಹಾಕಿದ್ದೋ, ಹ್ಯಾಕರ್ಸ್ಗಳನ್ನು ಬಳಸಿ ಮಾಡಿದ್ದಾರೋ ? ಎಂಬುವುದರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂ ವಿಚಾರಗಳನ್ನು, ಹೋರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎನ್ನುವುದು ನಮ್ಮ ಸಂಶಯ. ಈ ರೀತಿಯಾಗಿ ನಡೆದಿರುವ ಈ ಸೈಬರ್ ದಾಳಿ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕುತಂತ್ರ ಎಂದು ಅವರು ಆರೋಪಿಸಿದರು.
ʻʻ2014ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಅ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೂ ಮುಖಂಡರ ಪೇಜ್ ಗಳನ್ನು ತೆಗೆದು ಹಾಕಿರುವ ಸಾಧ್ಯತೆಗಳಿವೆʼʼ ಎಂದು ಅವರು ಹೇಳಿದರು.
ಇದನ್ನೂ ಓದಿ : Udhayanidhi Stalin: ಸಂಸತ್ಗೆ ಮುರ್ಮುರನ್ನು ಆಹ್ವಾನಿಸದಿರುವುದೇ ಸನಾತನ ಧರ್ಮ ಎಂದ ಉದಯನಿಧಿ
ಆದರೆ, ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವಂಥದ್ದಲ್ಲ. ನಾವು ಕೇವಲ ಫೇಸ್ ಬುಕ್ ಹುಲಿಗಳು ನಾವಲ್ಲ. ಹಿಂಜಾವೇ ಜನರ ಮಧ್ಯೆ ಕೆಲಸ ಮಾಡಿದೆ, ಮುಂದೆಯು ಮಾಡಲಿದೆʼʼ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸನಾತನ ಧರ್ಮ ಕುರಿತ ಕೋರ್ಟ್ ಅಭಿಮತ ಹಿಂದೂ ದ್ವೇಷಿಗಳ ಕಣ್ಣು ತೆರೆಸಲಿ
ಹಿಂದು ಜಾಗರಣ ವೇದಿಕೆ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರೂ ಆಗಲೇ ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಶ್ರೀಕಾಂತ್ ಶೆಟ್ಟಿ ಅವರ ಆರೋಪ.
ನಮ್ಮ ಹೋರಾಟ ಹಿಂದೂ ವಿರೋಧಿಗಳನ್ನು ಭಸ್ಮ ಮಾಡಲಿದೆ
ಜಾಗರಣ ವೇದಿಕೆ ಅಧಿಕೃತ ಫೇಸ್ಬುಕ್ ಪೇಜನ್ನು ಬ್ಯಾನ್ ಮಾಡಲಾಗಿದೆ. ಹಿಂದೂ ಚಳುವಳಿಯ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗಿದೆ. ಹಿಂದು ಜಾಗರಣ ವೇದಿಕೆಯ ಧ್ವನಿಯನ್ನು ಹತ್ತಿಕ್ಕುವ ಶಕ್ತಿಗಳಿಗೆ ಬೆದರುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ದೋ.ಕೇಶವ ಮೂರ್ತಿ ಹೇಳಿದ್ದಾರೆ.
ʻʻಕಳೆದ ವಾರದಿಂದ ಜಾಗರಣ ವೇದಿಕೆಯ ಪ್ರಮುಖರನ್ನೇ ಗುರಿಯಾಗಿಸಲಾಗಿದೆ. ಹಿಂದೂ ಚಳುವಳಿಯನ್ನು ಜನರಿಗೆ ತಲುಪಿಸುವ ಮಾರ್ಗ ತಡೆಯಲಾಗಿದೆ. ರಾಜ್ಯ ಸರಕಾರಿ ಕೃಪಾಪೋಷಿತ ವ್ಯವಸ್ಥೆಗಳು ದಾಳಿ ನಡೆಸುತ್ತಿದೆʼʼ ಎಂದು ಹೇಳಿರುವ ಅವರು, ʻʻನಾವು ಸೋಷಿಯಲ್ ಮೀಡಿಯಾ ನಂಬಿ ಹಿಂದೂ ಹೋರಾಟಗಳನ್ನು ಸಂಘಟಿಸಿಲ್ಲ. ಜನರ ನಡುವೆಯೇ ಹೊರಾಟಗಳು ಎದ್ದು ಹಿಂಜಾವೆ ರೂಪುಗೊಂಡಿದೆ. ನಮ್ಮ ಹೋರಾಟ ಹಿಂದೂ ವಿರೋಧಿಗಳನ್ನು ಭಸ್ಮ ಮಾಡಲಿದೆʼʼ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಉಡುಪಿ
Weather Report : ರಾಜ್ಯದಲ್ಲಿ ವಾರಾಂತ್ಯದವರೆಗೂ ಮಳೆ ಗಸ್ತು!
Rain News : ರಾಜ್ಯದ 20 ಜಿಲ್ಲೆಗಳಲ್ಲಿ ಮಳೆರಾಯನಿಗೆ ಬಿಡುವೇ ಇರುವುದಿಲ್ಲ. ವಾರಾಂತ್ಯದವರೆಗೂ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಬೆಂಗಳೂರು: ರಾಜ್ಯದಲ್ಲಿ ವಾರಾಂತ್ಯದವರೆಗೂ ಮಳೆರಾಯನ (Rain News) ಗಸ್ತು ಇರಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದರೆ, ಇತ್ತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಭರ್ಜರಿ ಮಳೆಯಾಗುವ (Weather report) ಸಾಧ್ಯತೆ ಇದೆ.
ಬೆಂಗಳೂರು ಟು ಮೈಸೂರು ಭಾರಿ ಮಳೆ
ದಕ್ಷಿಣ ಒಳನಾಡಿನ ಮೈಸೂರು, ರಾಮನಗರ ಮತ್ತು ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ , ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮಂಡ್ಯದಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿಯ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ವಿಜಯಪುರದಲ್ಲಿ ಅಲ್ಲಲ್ಲಿ ಹಗುರದಿಂದ ಕೂಡಿದ ಮಳೆ ಇರಲಿದೆ.
ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಲ್ಲಿ ರಾತ್ರಿಗೆ ಮಳೆ ಕಾಟ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕೆಲವೆಡೆ ಬಿರುಗಾಳಿ ಸಾಧ್ಯತೆ
ಮುಂದಿನ 48 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ಇನ್ನುಳಿದಂತೆ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
ಇದನ್ನೂ ಓದಿ: Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ – 21 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 22 ಡಿ.ಸೆ
ಗದಗ: 30 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 24 ಡಿ.ಸೆ
ಕಲಬುರಗಿ: 32 ಡಿ.ಸೆ – 23 ಡಿ.ಸೆ
ಬೆಳಗಾವಿ: 29 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ಸೆಪ್ಟೆಂಬರ್ 22ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನ ಮಟ್ಟ (ಅಡಿಗಳಲ್ಲಿ) | ಒಳ ಹರಿವು (ಕ್ಯೂಸೆಕ್) | ಹೊರ ಹರಿವು (ಕ್ಯೂಸೆಕ್) |
ಕೆಆರ್ಎಸ್ ಜಲಾಶಯ (KRS Dam) | 38.04 | 20.61 | 6016 | 5735 |
ಆಲಮಟ್ಟಿ ಜಲಾಶಯ (Almatti Dam) | 519.6 | 114.73 | 405 | 405 |
ಮಲಪ್ರಭಾ ಜಲಾಶಯ (Malaprabha Dam) | 633.80 | 21.44 | 0 | 194 |
ಘಟಪ್ರಭಾ ಜಲಾಶಯ (Ghataprabha Dam) | 662.91 | 42.40 | 2311 | 181 |
ತುಂಗಾಭದ್ರಾ ಜಲಾಶಯ (Tungabhadra Dam) | 497.71 | 62.92 | 4378 | 10316 |
ಭದ್ರಾ ಜಲಾಶಯ (Bhadra Dam) | 657.73 | 43.23 | 290 | 290 |
ಕಬಿನಿ ಜಲಾಶಯ (Kabini Dam) | 696.13 | 14.80 | 3166 | 4390 |
ಹಾರಂಗಿ (Harangi Dam) | 871.38 | 8.06 | 1335 | 2791 |
ಲಿಂಗನಮಕ್ಕಿ (Linganamakki Dam) | 554.44 | 68.30 | 5493 | 5393 |
ಹೇಮಾವತಿ (Hemavathi Dam) | 890.58 | 17.66 | 4986 | 1300 |
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್