Women's Day 2023: ಮಹಿಳೆಯರನ್ನು ಸದ್ದಿಲ್ಲದೆ ಕಾಡುವ 5 ಕಾಯಿಲೆಗಳಿವು - Vistara News

ಆರೋಗ್ಯ

Women’s Day 2023: ಮಹಿಳೆಯರನ್ನು ಸದ್ದಿಲ್ಲದೆ ಕಾಡುವ 5 ಕಾಯಿಲೆಗಳಿವು

ಸಮಸ್ಯೆ ಇದೆ ಎಂಬುದು ತಿಳಿಯುವಷ್ಟರಲ್ಲಿ ರೋಗ ಸಾಕಷ್ಟು ಉಲ್ಭಣಿಸಿರುತ್ತದೆ. ಕೆಲವೊಮ್ಮೆ ಪ್ರಾಣಘಾತಕವೂ ಆಗಬಹುದು. ಹೀಗೆ ಗೊತ್ತಾಗದಂತೆ ಮಹಿಳೆಯರನ್ನು (Women’s Day 2023) ಕಾಡುವ ಐದು ರೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Womens Day 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಲ್ಟಿಟಾಸ್ಕಿಂಗ್‌ ಎಂಬುದು ಇತ್ತೀಚಿನ ಹೆಸರು. ಹಾಗೆಂದು ಹಲವಾರು ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವ ಕಲ್ಪನೆ ಹೊಸದಲ್ಲ. ಆಫೀಸಿನ ಕೆಲಸ, ಮನೆಯಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುವ ಹೊಣೆಗಾರಿಕೆ, ತಾಯ್ತನ ಜವಾಬ್ದಾರಿಗಳು, ಸಾಮಾಜಿಕ ಒತ್ತಡಗಳು- ಇವೆಲ್ಲ ಮಹಿಳೆಯರ ಪಾಲಿಗೆ ಎಂದಿನಿಂದಲೋ ಇದ್ದಂಥವು- ಮಲ್ಟಿಟಾಸ್ಕಿಂಗ್‌ ಎಂಬ ಪದ ಹುಟ್ಟುವ ಮೊದಲಿನಿಂದಲೇ.

Womens Day 2023

ಹೀಗೆ ಎಲ್ಲದರ ಹೊಣೆ ಹೊರುವವರಿಗೆ ತಮ್ಮ ಬಗೆಗಿನ ಕಾಳಜಿಗೆ ಸಮಯವೇ ದೊರೆಯುದೆ ಹೋಗುವುದು ಎಲ್ಲರಿಗೂ ಗೊತ್ತಿರುವ ರಹಸ್ಯ. ರಕ್ತದೊತ್ತಡ, ಮಧುಮೇಹದಂಥ ಹಲವಾರು ಸಮಸ್ಯೆಗಳು ಸದ್ದಿಲ್ಲದೆ ಬಂದು ಅಮರಿಕೊಳ್ಳುತ್ತವೆ. ಸಮಸ್ಯೆ ಇದೆ ಎಂಬುದು ತಿಳಿಯುವಷ್ಟರಲ್ಲಿ ರೋಗ ಸಾಕಷ್ಟು ಉಲ್ಭಣಿಸಿರುತ್ತದೆ, ರೋಗಿ ನರಳುವಂತಾಗುತ್ತದೆ. ಕೆಲವೊಮ್ಮೆ ಪ್ರಾಣಘಾತುಕವೂ ಆಗಬಹುದು. ಹೀಗೆ ಗೊತ್ತಾಗದಂತೆ ಬಂದೆರಗುವ ಐದು ರೋಗಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳ ಬಗ್ಗೆ ಎಚ್ಚರ ವಹಿಸಿ, ಆರೋಗ್ಯ ರಕ್ಷಿಸಿಕೊಳ್ಳಿ.

ಅಂಡಾಶಯದ ಕ್ಯಾನ್ಸರ್‌

ಸುಮಾರು 75 ಮಹಿಳೆಯರಲ್ಲಿ ಒಬ್ಬರಿಗೆ ಈ ಅಪಾಯಕಾರಿ ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ಉಲ್ಭಣಿಸುವವರೆಗೆ ತನ್ನ ಇರುವಿಕೆಯನ್ನೇ ತೋರಿಸಿಕೊಳ್ಳದಿರುವ ಈ ರೋಗ ಪತ್ತೆಯಾಗುವಷ್ಟರಲ್ಲಿ ಚಿಕಿತ್ಸೆಯೇ ಕಷ್ಟ ಎನ್ನುವಂತಾಗುತ್ತಿದೆ. ಪ್ರಾರಂಭದಲ್ಲಿ ಪತ್ತೆಯಾದರೆ ಮಹಿಳೆಯರು ಸಂಪೂರ್ಣ ಗುಣಮುಖರಾಗುವುದಕ್ಕೆ ಸಾಧ್ಯ. ಆದರೆ ರೋಗ ಮುಂದುವರಿದರೆ, ಮುಂದಿನ ಐದು ವರ್ಷ ಬದುಕುವ ಸಾಧ್ಯತೆಯೂ ಶೇ. 46ರಷ್ಟು ಮಾತ್ರ. ಈ ರೋಗದ ಲಕ್ಷಣಗಳು ಕೆಲವೊಮ್ಮೆ ಎಷ್ಟೊಂದು ಸೌಮ್ಯವಾಗಿರುತ್ತವೆ ಎಂದರೆ, ವೈದ್ಯರುಗಳನ್ನೂ ಯಾಮಾರಿಸುವಷ್ಟು! ಹಾಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ.

Womens Day 2023

ಹೃದ್ರೋಗಗಳು

ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಗ್ರಹಿಸದಿರುವ ಅಥವಾ ಗ್ರಹಿಸಿದರೂ ನಿರ್ಲಕ್ಷ ಮಾಡುವ ಸ್ವಭಾವ ಮಹಿಳೆಯರದ್ದು. ಹಾಗಾಗಿ ಎದೆ ಅಥವಾ ಭುಜ ನೋವು, ಉಸಿರು ಹಿಡಿದಂತಾಗುವುದು, ಹೊಟ್ಟೆ ತೊಳೆಸುವುದು, ಆಯಾಸ- ಇಂಥ ಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ಕುಟುಂಬದ ಹತ್ತಿರದ ಸಂಬಂಧಿಗಳಲ್ಲಿ ಇಂಥ ಕಾಯಿಲೆಗಳಿದ್ದರೆ ಎಚ್ಚರ ವಹಿಸುವುದು ಸೂಕ್ತ.

Womens Day 2023

ಲೂಪಸ್

ಇದೊಂದು ಆಟೊಇಮ್ಯೂನ್‌ ಕಾಯಿಲೆ. ಆಟೊಇಮ್ಯೂನ್‌ ಕಾಯಿಲೆಯೆಂದರೆ, ತನ್ನದೇ ದೇಹದ ಅಂಗಗಳನ್ನು ಆಗಂತುಕನೆಂದು ತಿಳಿದ ದೇಹದ ಪ್ರತಿರೋಧಕ ವ್ಯವಸ್ಥೆ, ಅದರ ಮೇಲೆ ದಾಳಿ ಮಾಡುತ್ತದೆ. ಇಂಋ ಕಾಯಿಗೆಳಲ್ಲಿ ಸಾಮಾನ್ಯವಾಗಿ, ಶರೀರದ ಪ್ರತಿರೋಧಕ ಶಕ್ತಿಯನ್ನು ತಗ್ಗಿಸುವಂಥ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಲೂಪಸ್ ದೇಹದ ಯಾವುದೇ ಭಾಗವನ್ನು ಬಾಧಿಸಬಹುದಾದ, ಗುಣಪಡಿಸಲಾಗದ ರೋಗವಿದು. ‌ಆಗಾಗ ಜ್ವರ, ಕೀಲು ನೋವು, ಬಾಯಿ ಹುಣ್ಣು, ಬಿಸಿಲಿಗೆ ಒಡ್ಡಿದ ಭಾಗಗಳಲ್ಲಿ ಕೆಂಪು ದದ್ದುಗಳು, ಮುಖದ ಮೇಲೆ ಚಿಟ್ಟೆಯಾಕಾರದ ದದ್ದುಗಳು, ಕೂದಲು ಉದುರುವುದು, ಮೈಗ್ರೇನ್- ಇವೆಲ್ಲಾ ಲೂಪಸ್‌ನ ಲಕ್ಷಣಗಳು. ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ನರಳಿಸುವ ರೋಗವಿದು.

Womens Day 2023

ಮಧುಮೇಹ

ಇದಂತೂ ಆಬಾಲವೃದ್ಧರಾದಿಯಾಗಿ ಯಾರನ್ನೂ ಯಾವಾಗಲೂ ಬಾಧಿಸಬಹುದಾದ ರೋಗ. ಈ ಬಗ್ಗೆ ಎಲ್ಲೆಡೆ ಬೇಕಾದಷ್ಟು ಮತ್ತು ಬೇಕಾಬಿಟ್ಟಿ ಮಾಹಿತಿಗಳು ಲಭ್ಯವಿರುವುದರಿಂದ, ಸೂಕ್ತ ಚಿಕಿತ್ಸೆಯಂತೂ ದೊರೆಯದೆ ಹೋಗುವ ಪ್ರಶ್ನೆಯಿಲ್ಲ. ಆದರೆ ರೋಗದ ಲಕ್ಷಣಗಳನ್ನು ಪ್ರಾರಂಭದಲ್ಲೇ ಗ್ರಹಿಸಿದರೆ, ಮಧುಮೇಹ ಉಲ್ಭಣಿಸಿ ದೇಹದ ಇತರ ಅಂಗಗಳು ಜಖಂ ಆಗದಂತೆ ರಕ್ಷಿಸಿಕೊಳ್ಳುವುದು ಸಾಧ್ಯವಿದೆ. ಮಾತ್ರವಲ್ಲ, ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ಹತೋಟಿಯಲ್ಲಿ ಇಡುವುದು ಅಸಾಧ್ಯವಲ್ಲ.

Womens Day 2023

ಪಾರ್ಕಿನ್ಸನ್‌ ಕಾಯಿಲೆ

ನರ ಸಂಬಂಧಿ ಸಂಕೀರ್ಣ ಕಾಯಿಲೆಯಿದು. ಒಮ್ಮೆ ಈ ಕಾಯಿಲೆ ಆರಂಭವಾದರೆ ಅದನ್ನು ಸರಿಪಡಿಸಲು ಸಾಧ್ಯವಾಗದು. ಕೈ, ಕಾಲು, ತಲೆಗಳೆಲ್ಲಾ ತಮ್ಮಷ್ಟಕ್ಕೆ ಕಂಪಿಸುವುದಕ್ಕೆ, ನಡುಗುವುದಕ್ಕೆ ಪ್ರಾರಂಭಿಸುತ್ತವೆ. ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ರೋಗಿಯ ಚಲನ-ವಲನ, ಸಂವಹನಕ್ಕೆ ಸಮಸ್ಯೆಯಾಗಬಹುದು. ಮೆದುಳಿನ ನರಗಳು ನಶಿಸುವುದಕ್ಕೆ ಪ್ರಾರಂಭವಾದಾಗ, ಮೊದಲಿಗೆ ಲಕ್ಷಣಗಳು ಸೌಮ್ಯವಾಗಿಯೇ ಇರುತ್ತವೆ. ಕ್ರಮೇಣ ಕೈಕಾಲುಗಳ ಕಂಪನ ವಿಷಮಿಸುತ್ತದೆ. ಆನುವಂಶಿಕವಾಗಿಯೂ ಬರಬಹುದಾದ ಇದನ್ನು ಗುಣಪಡಿಸುವಂಥ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ನಡುಕವನ್ನು ಹತೋಟಿಯಲ್ಲಿಟ್ಟು ರೋಗಿಯ ಬದುಕನ್ನು ಆದಷ್ಟೂ ಸಾಮಾನ್ಯಗೊಳಿಸುವಂಥ ಔಷಧಿಗಳು ಲಭ್ಯವಿದೆ.

ಇದನ್ನೂ ಓದಿ: International Women’s Day : ಕಾರ್ಪೋರೇಟ್‌ ವಲಯಕ್ಕೆ ಕಣ್ಮಣಿಗಳಾಗಿ ದೇಶಕ್ಕೆ ಕೀರ್ತಿ ಈ ಮಹಿಳಾ ಉದ್ಯಮಿಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Health Tips: ನಮ್ಮ ಅನಾರೋಗ್ಯದಲ್ಲಿ ನಾವು ಬಳಸುವ ಪಾತ್ರೆಗಳ ಪಾತ್ರವೇ ಮುಖ್ಯ!

ನಾವು ಅಡುಗೆ ಮಾಡುವ ಪಾತ್ರೆಗಳು ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆಂಬುದು ಗೊತ್ತೇ? ಹಾಗಾಗಿಯೇ ಹಳೆಯ ಕಾಲದ ಹಿತ್ತಾಳೆ, ತಾಮ್ರ, ಮಣ್ಣಿನ ಪಾತ್ರೆಗಳು ಮತ್ತೆ ಜನಪ್ರಿಯಗೊಳ್ಳುತ್ತಿವೆ. ಏನು ಈ ಪಾತ್ರೆಗಳ ಮಹತ್ವ? ಇಲ್ಲಿದೆ ಈ ಕುರಿತ (Health Tips) ಉಪಯುಕ್ತ ಮಾಹಿತಿ.

VISTARANEWS.COM


on

Cooking utensils Health Tips
Koo

ಅಡುಗೆ ಮನೆಯ ಸ್ವರೂಪಗಳು ಹಿಂದಿನ ಕಾಲಕ್ಕಿಂತ ಇಂದಿಗೆ ನೂರಕ್ಕೆ ನೂರರಷ್ಟು ಬದಲಾಗಿವೆ. ಮಾಡುವ ಅಡುಗೆಯ ವಿಷಯದಲ್ಲಿ ಅಲ್ಲ ಇಲ್ಲಿ ಹೇಳುತ್ತಿರುವುದು; ಅಡುಗೆ ಮನೆಯ ಕಾಣುವ-ಮನಗಾಣುವ ವಿಷಯಕ್ಕೆ ಇದು ಅನ್ವಯ. ಉದಾ, ಸ್ಟೀಲ್‌ ಪಾತ್ರೆಗಳು, ಗಾಜಿನ ಅಥವಾ ನಾನ್‌ಸ್ಟಿಕ್‌ ಪಾತ್ರೆಗಳು ಮಾತ್ರವೇ ಈಗಿನ ಅಡುಗೆ ಮನೆಗಳಲ್ಲಿ ಕಾಣಸಿಗುತ್ತವೆ. ಕಾಲಕ್ಕೆ ತಕ್ಕಂತೆ ನಡೆಯುವುದರಲ್ಲಿ ತಪ್ಪೇನಿಲ್ಲ. ಇದರರ್ಥ ಹಳೆಯದನ್ನೆಲ್ಲಾ ಬಿಡಬೇಕೆಂದೂ ಅಲ್ಲ. ಹಳೆಯ ಕಾಲದ ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಭಾಯಿಸುವುದು ಕಷ್ಟ. ಫಳಫಳ ಎನಿಸುವುದಕ್ಕೆ ಪದೇಪದೆ ಹುಳಿ ಹಾಕಿ ಉಜ್ಜಬೇಕು, ಮೊದಲಿನಂತೆ ಕಲಾಯಿ ಹಾಕುವವರೂ ಇಲ್ಲ ಈಗ- ಇಂಥ ಎಲ್ಲಾ ತಕರಾರುಗಳೂ ಸಮ್ಮತವೇ. ಆದರೆ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ನಾವೀಗ ಒಮ್ಮತಕ್ಕೆ ಬರಬಹುದಲ್ಲ. ಅದರಲ್ಲೂ ಇತ್ತೀಚೆಗೆ ದೊರೆಯುವ ತಾಮ್ರ, ಪಿಂಗಾಣಿ ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಗೆ ಸರಳ ಮತ್ತು ನೋಡುವುದಕ್ಕೆ ಸುಂದರ. ಕೆಲವು ಅಡುಗೆಗಳಿಗೆ ಕಬ್ಬಿಣ ಅಥವಾ ಮಣ್ಣಿನ ಪಾತ್ರೆಗಳು ಸೂಕ್ತ. ಏನು (Health Tips) ಅವುಗಳ ಮಹತ್ವ?

kitchen utensil

ಪೌಷ್ಟಿಕಾಂಶ ಕಾಪಾಡುತ್ತದೆ

ತಾಮ್ರ, ಹಿತ್ತಾಳೆಯ ಪಾತ್ರೆಗಳು ಒಮ್ಮೆ ಬಿಸಿಯಾದರೆ ದೀರ್ಘಕಾಲದವರೆಗೆ ಬಿಸಿ ಕಾಯ್ದುಕೊಂಡಿರುತ್ತವೆ. ಮಾತ್ರವಲ್ಲ, ಇಡೀ ಪಾತ್ರೆ ಒಂದೇಸಮ ಬಿಸಿಯಾಗುತ್ತದೆ, ಹೆಚ್ಚು-ಕಡಿಮೆ ಇಲ್ಲದಂತೆ. ಇದರಿಂದ ಇಂಥ ಪಾತ್ರೆಗಳಲ್ಲಿ ಮಾಡುವ ಅಡಿಗೆಗಳನ್ನು ದೀರ್ಘಕಾಲ ಬೆಂಕಿಯಲ್ಲಿ ಇಡುವುದು ಬೇಡ. ಸ್ವಲ್ಪ ಕಾಲ ಉರಿಯಲ್ಲಿಟ್ಟರೂ ಸಾಕು, ಉಳಿದಂತೆ ಪಾತ್ರೆಯ ಶಾಖಕ್ಕೇ ಬೇಯುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಲೆಯ ಕಾವಿನಲ್ಲಿ ಹಾಗೆಯೇ ಬಿಟ್ಟರೆ ದೀರ್ಘಕಾಲದವರೆಗೆ ಬಿಸಿ ಕಾಪಾಡಿಕೊಂಡು, ಮತ್ತೆಮತ್ತೆ ಬಿಸಿ ಮಾಡುವ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಪೌಷ್ಟಿಕಾಂಶ ಮತ್ತು ಇಂಧನ- ಎರಡೂ ಉಳಿಯುತ್ತವೆ.

ಸೋಂಕುಗಳಿಗೆ ಕಡಿವಾಣ

ತಾಮ್ರ ಮತ್ತು ಹಿತ್ತಾಳೆಯಲ್ಲಿಟ್ಟ ಆಹಾರದ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ಅದರಲ್ಲೂ ನೆಗಡಿ-ಕೆಮ್ಮು-ದಮ್ಮಿನಂಥ ಸಮಸ್ಯೆಗಳಿಗೆ ಪದೇಪದೆ ತುತ್ತಾಗುವವರಿಗೆ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿಟ್ಟ ನೀರು ಕುಡಿಸುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ. ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ, ರಕ್ತದಲ್ಲಿ ಹಿಮೋಗ್ಲೋಬಿನ್‌ ವೃದ್ಧಿಗೆ ಸಹಾಯಕವಾಗುತ್ತದೆ. ತಾಮ್ರದ ಪಾತ್ರೆಯ ನೀರು ಕುಡಿಯುವುದರಿಂದ ದೇಹದಲ್ಲಿ ಉರಿಯೂತಗಳು ಕಡಿಮೆಯಾಗುತ್ತವೆ. ಕೀಲುನೋವಿನಂಥ ಸಮಸ್ಯೆಗಳಿಗೆ ಇದು ಉಪಯುಕ್ತ.

ಕಬ್ಬಿಣದ ಪಾತ್ರೆಗಳು

ಇಂಥವು ಬಳಕೆಯಲ್ಲಿರುವುದೇ ಬೆರಳೆಣಿಕೆಯಷ್ಟು. ಅದರಲ್ಲೂ ಬಾಣಲೆ ಮತ್ತು ತವಾಗಳು ಕಬ್ಬಿಣದ್ದಾದರೆ ಸೂಕ್ತ. ದೋಸೆ, ರೊಟ್ಟಿ, ಪಡ್ಡು ಇಂಥ ಕಾವಲಿಗಳು ಮೊದಲಿನಿಂದಲೂ ಕಬ್ಬಿಣದ್ದೇ ಇರುತ್ತಿದ್ದವು. ಇವುಗಳನ್ನೆಲ್ಲ ನಾನ್‌ಸ್ಟಿಕ್‌ಗೆ ಬದಲಾಯಿಸಿ ಹಲವು ಕಾಲ ಸಂದಿದೆ. ಆದರೆ ಹುರಿಯುವ, ಕರಿಯುವ, ಬೇಯಿಸುವ ಪಾತ್ರೆ ಕಬ್ಬಿಣದ್ದಾದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನೀಗಿಸಲು ಸಹಾಯವಾಗಬಹುದು. ರಕ್ತಹೀನತೆಯಂಥ ತೊಂದರೆಗಳು ಗಂಟಿಕ್ಕಿಕೊಳ್ಳದಂತೆ ಕಾಪಾಡಿಕೊಳ್ಳಬಹುದು.

weight loss

ತೂಕ ಇಳಿಕೆ

ನಮ್ಮ ದೇಹದ ಜೀರ್ಣಾಂಗವನ್ನು ಚುರುಕುಗೊಳಿಸುವಂಥ ಅಂಶಗಳು ಈ ಲೋಹಗಳಿಗಿವೆ. ಹಾಗಾಗಿ ಆಸಿಡಿಟಿ, ಅಜೀರ್ಣ, ವಾಯುಪ್ರಕೋಪ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರಮಾಡಲು ನೆರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಟ್ಟು, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ. ಜೀರ್ಣಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ, ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆದು, ತೂಕ ಇಳಿಸುವುದಕ್ಕೂ ಸಹಕಾರಿಯಾಗುತ್ತದೆ. ಮಾತ್ರವಲ್ಲ, ನಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯವನ್ನೂ ಉತ್ತಮಪಡಿಸುತ್ತದೆ.

Heart Health In Winter

ಹೃದಯಾರೋಗ್ಯ

ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ತಾಮ್ರಕ್ಕಿದೆ. ಈ ಲೋಹಗಳನ್ನು ನಿಯಮಿತವಾಗಿ ಬಳಸಿದಲ್ಲಿ ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ನೆರವು ದೊರೆತು ಹೃದಯಾರೋಗ್ಯ ಉತ್ತಮಪಡಿಸಲು ಅನುಕೂಲವಾಗಲಿದೆ. ದೇಹಕ್ಕೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ, ಆಹಾರದ ಗುಣಮಟ್ಟ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಉತ್ತಮ ಆಯ್ಕೆ.

ಗಾಜು, ಪಿಂಗಾಣಿ

ಕೆಲವು ಆಹಾರಗಳ ತಯಾರಿಕೆ ಮತ್ತು ಶೇಖರಣೆಗೆ ಈ ಪಾತ್ರೆಗಳು ಸೂಕ್ತ. ಉದಾ, ತುಪ್ಪವನ್ನು ಗಾಜು ಅಥವಾ ಪಿಂಗಾಣಿಯ ಪಾತ್ರೆಗಳಲ್ಲಿ ಇಡಬಹುದು. ಇದೇ ರೀತಿಯಲ್ಲಿ ಉಪ್ಪು, ಖಾರ ಮುಂದಿರುವಂಥ ಉಪ್ಪಿನ ಕಾಯಿ, ತೊಕ್ಕುಗಳಿಗೂ ಈ ಪಾತ್ರೆಗಳೇ ಯೋಗ್ಯ. ಆದರೆ ಇವುಗಳು ಕೈತಪ್ಪಿ ಬೀಳದಂತೆ ಜಾಗ್ರತೆ ಮಾಡುವುದು ಸವಾಲಿನದ್ದು. ಮಣ್ಣಿನ ಪಾತೆರಗಳು ಸಹ ಇತ್ತೀಚೆಗೆ ಜನಪ್ರಿಯವಾಗಿವೆ. ಮೆಗ್ನೀಶಿಯಂ, ಫಾಸ್ಫರಸ್‌, ಕ್ಯಾಲ್ಶಿಯಂನಂಥ ಖನಿಜಗಳು ನಮಗೆ ದಕ್ಕಬೇಕೆಂದರೆ ಮಣ್ಣಿನ ಗಡಿಗೆಗಳಲ್ಲಿ ಅಡುಗೆ ಮಾಡುವುದು ಒಳ್ಳೆಯದು. ಇವುಗಳನ್ನು ಸುಟ್ಟು ಒಮ್ಮೆ ಹದಗೊಳಿಸಿಕೊಂಡರೆ (ಅಂಥದ್ದೇ ದೊರೆಯುತ್ತದೆ) ಮತ್ತೆ ವರ್ಷಾನುವರ್ಷಗಳ ಕಾಲ ಬಳಸಬಹುದು.

ಇದನ್ನೂ ಓದಿ: Weight Loss Tips: ದಾಲ್ಚಿನ್ನಿ ಚಕ್ಕೆಯ ನೀರು ಸೇವಿಸಿ, ನಿರಾಯಾಸವಾಗಿ ತೂಕ ಇಳಿಸಿ!

Continue Reading

ಆರೋಗ್ಯ

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

ಬೆಳಗಿನ ಹೊತ್ತು ಚಹಾ ಕುಡಿಯಬೇಕೆ ಅಥವಾ ತಾಜಾ ಹಣ್ಣಿನ ರಸ (Tea or Juice?) ಸೇವಿಸಬೇಕೆ? ಈ ಎರಡೂ ಪೇಯಗಳಿಗೆ ಅದರದ್ದೇ ಆದ ಇತಿ-ಮಿತಿಗಳಿವೆ. ರುಚಿ ಮತ್ತು ಆಯ್ಕೆ ಅವರವರಿಗೆ ಬಿಟ್ಟಿದ್ದು ಎನ್ನುವುದು ಹೌದಾದರೂ, ಈ ಎರಡೂ ಆಯ್ಕೆಗಳಿಗೆ ಅದರದ್ದೇ ಆದ ಗುಣಾವಗುಣಗಳಿವೆ. ಏನವು? ಇಲ್ಲಿದೆ ಈ ಕುರಿತ ವಿಶೇಷ ಲೇಖನ.

VISTARANEWS.COM


on

Tea or Juice
Koo

ಬೆಳಗ್ಗೆ ಏಳುತ್ತಿದ್ದಂತೆ ನಮ್ಮ ದಿನ (Tea or Juice?) ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಬೇಕು. ನಿಧಾನಕ್ಕೆ ಕಣ್ಣುಜ್ಜುತ್ತಾ ಮೈಮುರಿಯುತ್ತಾ ಆಕಳಿಸುತ್ತಾ ಈ ಲೋಕಕ್ಕೆ ಬರುತ್ತೇವೆ. ಕೆಲವರಿಗೆ ಬೆಳಗ್ಗೆ ಎಚ್ಚರವಾದರೂ ದಿನ ಶುರುವಾಗುವುದಕ್ಕೆ ಸ್ವಲ್ಪ ಹೆಚ್ಚೇ ಹೊತ್ತು ಬೇಕಾಗಬಹುದು. ಅಂಥವರಿಗೊಂದು ಕಪ್‌ ಖಡಕ್‌ ಚಹಾ ಸಿಕ್ಕಿದರೆ ಎಲ್ಲವೂ ಸುಸೂತ್ರ. ಕೆಲವರಿಗೆ ಕಾಫಿಯಾದರೆ ಒಳ್ಳೆಯದು. ಅಂತೂ ಬೆಳಗಿನ ಡೋಸ್‌ ಕೆಫೇನ್‌ ಹೊಟ್ಟೆ ಸೇರಿದರೆ ಅಂಗಾಂಗಗಳೆಲ್ಲ ಚುರುಕಾಗುತ್ತವೆ. ದಿನದ ಶ್ರೀಕಾರ ಸರಿಯಾಗಿ ಆದಂತೆ. ಆದರೆ ಬೆಳಗಿನ ಹೊತ್ತು ಚಹಾ ಬದಲು ಹಣ್ಣಿನ ರಸ ಕುಡಿಯುವುದು ಒಳ್ಳೆಯದು ಎನ್ನುತ್ತಾರಲ್ಲ… ಯಾವುದು ಸರಿ? ಯಾವುದು ಸರಿಯಲ್ಲ?

Tea or Juice

ಯಾವುದು ಒಳ್ಳೆಯದು?

ಬೆಳಗಿನ ಹೊತ್ತು ಚಹಾ ಕುಡಿಯಬೇಕೊ ಅಥವಾ ತಾಜಾ ಹಣ್ಣಿನ ರಸವನ್ನೋ ಎಂಬುದೀಗ ಪ್ರಶ್ನೆ. ಈ ಎರಡೂ ಪೇಯಗಳಿಗೆ ಅದರದ್ದೇ ಆದ ಇತಿ-ಮಿತಿಗಳಿವೆ. ಬೆಳಗಿನ ಹೊತ್ತು ಗ್ರೀನ್‌ ಟೀ ಅಥವಾ ಬ್ಲಾಕ್‌ ಟೀ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ವಿಫಲವಾಗಿ ದೊರೆಯುತ್ತವೆ. ಇದರಿಂದ ದೇಹದಲ್ಲಿರುವ ಉರಿಯೂತಗಳನ್ನು ಕಡಿಮೆ ಮಾಡಲು ನೆರವು ದೊರೆಯುತ್ತದೆ. ಜೊತೆಗೆ ಇದರಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಅಂಶವು, ಸೋಮಾರಿ ದೇಹವನ್ನು ಸ್ವಲ್ಪ ಚುರುಕಾಗಿಸುತ್ತದೆ; ಚಯಾಪಚಯವನ್ನು ಹೆಚ್ಚಿಸುತ್ತದೆ; ಮೆದುಳಿಗೆ ಚೈತನ್ಯ ನೀಡಿ ದೇಹ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ.
ತಾಜಾ ಹಣ್ಣಿನ ರಸದ ಬಗ್ಗೆ ಹೇಳುವುದಾದರೆ, ಯಾವುದೇ ಬೆಲ್ಲ-ಸಕ್ಕರೆಗಳನ್ನು ಸೇರಿಸದೆ, ಅಂಗಡಿಯಿಂದ ತಂದಿದ್ದದೆ ಶುದ್ಧ ಹಣ್ಣಿನ ರಸವನ್ನೇ ಕುಡಿದರೆ ಲಾಭಗಳು ಸಾಕಷ್ಟಿವೆ. ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ದೊರೆಯುತ್ತದೆ. ಜೊತೆಗೆ ಬೆಳಗಿನ ಹೊತ್ತು ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ಸುಲಭವಾಗಿ ಮತ್ತು ಯಥೇಚ್ಛವಾಗಿ ಮರುಪೂರಣ ಮಾಡಬಹುದು. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮಿತಿಗಳೇನು?

ಚಹಾ ಅಂದಾಕ್ಷಣ ಗ್ರೀನ್‌ ಟೀ, ಬ್ಲಾಕ್‌ ಟೀ ಕುಡಿಯುವವರು ಕಡಿಮೆ. ಸರಿಯಾಗಿ ಹಾಲು, ಸಕ್ಕರೆ ಸುರಿದೇ ಚಹಾ ಸಿದ್ಧಗೊಳ್ಳುತ್ತದೆ. ಗ್ರೀನ್‌ ಟೀನಲ್ಲಿರುವ ಲಾಭಗಳು ಈ ಇಂಗ್ಲಿಷ್‌ ಚಹಾದಲ್ಲಿ ದೊರೆಯುವುದು ಕಡಿಮೆ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಈ ಚಹಾ ಕುಡಿದರೆ ಬಹಳಷ್ಟು ಮಂದಿ ಆಸಿಡಿಟಿ, ಹೊಟ್ಟೆಯುಬ್ಬರ, ಎದೆಯುರಿ ಮತ್ತು ಇತರ ಜೀರ್ಣಾಂಗಗಳ ಸಮಸ್ಯೆಯನ್ನು ಎದುರಿಸಬಹುದು. ಅದೂ ಅಲ್ಲದೆ, ಈ ರೀತಿಯ ಚಹಾ ಸೇವನೆಯಿಂದ ದೇಹಕ್ಕೆ ಕೆಫೇನ್‌ ಅಂಶ ಅಧಿಕವಾಗುತ್ತದೆ. ಇದು ಎಲ್ಲರಿಗೂ ಹೊಂದದೇ ಇರಬಹುದು.
ಹಣ್ಣಿನ ರಸ ಎನ್ನುತ್ತಿದ್ದಂತೆ ಅಂಗಡಿಯಿಂದ ಖರೀದಿಸಿದ ಪ್ಯಾಕ್‌ ಉಪಯೋಗಿಸುವವರೇ ಹೆಚ್ಚು. ಇದರಲ್ಲಿ ಕೃತಕ ಬಣ್ಣ, ಸಕ್ಕರೆಯಂಶಗಳಿರಬಹುದು. ಇದರಿಂದ ಸಮಸ್ಯೆಯಾದೀತು. ತಾಜಾ ಮತ್ತು ಶುದ್ಧ ಹಣ್ಣಿನ ರಸವಾದರೂ ಮಧುಮೇಹಿಗಳಿಗೆ ತೊಂದರೆ ಆಗಬಹುದು. ಮಧುಮೇಹ ಇಲ್ಲದಿದ್ದರೂ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸ ಕುಡಿಯುವುದರಿಂದ ಬಹಳಷ್ಟು ಜನರಿಗೆ ಸಕ್ಕರೆಯಂಶ ದಿಢೀರ್‌ ಏರಿಕೆ ಆಗಬಹುದು. ಹಾಗಾಗಿ ಇದರೊಂದಿಗೆ ಪ್ರೊಟೀನ್‌ ಮತ್ತು ನಾರಿಯುಕ್ತ ಉಪಾಹಾರ ಸೇವನೆ ಅಗತ್ಯ.

Masala Tea

ಎಷ್ಟು ಬಗೆಗಳಿವೆ?

ಬೆಳಗ್ಗೆ ಕುಡಿಯುವುದಕ್ಕೆ ಚಹಾ ಮಾತ್ರ ಸರಿ ಎನ್ನುವವರು ಹಾಲು ಬೆರೆಸಿದ ಚಹಾವನ್ನೇ ಕುಡಿಯಬೇಕೆಂದಿಲ್ಲ. ಬ್ಲಾಕ್‌ ಟೀ, ಗ್ರೀನ್‌ ಟೀ ಇದಕ್ಕೆ ಒಳ್ಳೆಯ ಪರ್ಯಾಯಗಳು. ಅದಿಲ್ಲದಿದ್ದರೆ, ನಿಂಬೆ ಚಹಾ, ಪುದೀನಾ ಚಹಾ, ಶುಂಠಿ ಚಹಾ, ಏಲಕ್ಕಿ-ಚಕ್ಕೆ ಹಾಕಿದ (ಹಾಲಿಲ್ಲದ) ಮಸಾಲೆ ಚಹಾ, ನಿಂಬೆಹುಲ್ಲು, ತುಳಸಿ ಮುಂತಾದವುಗಳನ್ನು ಹಾಕಿದ ಹರ್ಬಲ್‌ ಚಹಾ- ಹೀಗೆ ಚಹಾ ಸವಿಯುವವರಿಗೆ ತರಹೇವಾರಿ ಆಯ್ಕೆಗಳಿವೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯಕ್ಕೆ ಉಪಯುಕ್ತವಾದವು.

Image Of Fruit Juices Role in Managing Blood Sugar Levels

ಯಾವೆಲ್ಲ ಜ್ಯೂಸ್‌ ಸೇವಿಸಬಹುದು?

ಕಿತ್ತಳೆ ರಸ ಹೆಚ್ಚಿನ ಜನರಿಗೆ ಇಷ್ಟವಾಗುವಂಥದ್ದು. ವಿಟಮಿನ್‌ ಸಿ ಹೇರಳವಾಗಿರುವ ಇದನ್ನು ಕುಡಿಯುವುದರಿಂದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸಬಹುದು. ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯವನ್ನು ಸಹ ಭದ್ರವಾಗಿ ಇರಿಸಿಕೊಳ್ಳಬಹುದು. ಸೇಬು ರಸವೂ ರುಚಿಕಟ್ಟಾಗಿರುತ್ತದೆ. ವಿಟಮಿನ್‌ ಸಿ ಮತ್ತು ಪೊಟಾಶಿಯಂ ಹೆಚ್ಚಿರುವ ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುವುದಲ್ಲದೆ ಜೀರ್ಣಾಂಗಗಳ ಕ್ಷಮತೆಯೂ ಹೆಚ್ಚುತ್ತದೆ. ಹುಳಿ ಮತ್ತು ಸಿಹಿಗಳನ್ನು ಸಮಾನವಾಗಿ ಹೊಂದಿರುವ ಅನಾನಸ್‌ ರಸ ಸೇವನೆಯಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ಬ್ರೊಮೆಲಿನ್‌ ಎಂಬ ಉತ್ಕರ್ಷಣ ನಿರೋಧಕ ಹೆಚ್ಚಿರುವ ಈ ರಸದಿಂದ ಜೀರ್ಣಾಂಗಗಳೂ ಚುರುಕಾಗುತ್ತವೆ. ಇದಲ್ಲದೆ, ಕ್ಯಾರೆಟ್‌, ಬೀಟ್‌ರೂಟ್‌, ಸೌತೆಕಾಯಿ ರಸಗಳನ್ನು ಸೇವಿಸುವವರೂ ಇದ್ದಾರೆ. ಈ ಯಾವುದೇ ರಸಗಳ ಜೊತೆಗೆ ನಾಲ್ಕಾರು ಹನಿ ನಿಂಬೆ ರಸ ಸೇರಿಸಿದರೆ ಅಥವಾ ಯಾವುದಾದರೂ ಬೆರ್ರಿಗಳನ್ನು ಸೇರಿಸಿದರೆ ರುಚಿ ಇಷ್ಟವಾಗಬಹುದು. ಇದಕ್ಕೆ ಶುಂಠಿ, ಪುದೀನಾದಂಥ ಘಮಗಳನ್ನೂ ಸೇರಿಸಿಕೊಳ್ಳುವವರಿದ್ದಾರೆ.

ಇದನ್ನೂ ಓದಿ: Dry Fruits: ಡ್ರೈಫ್ರುಟ್ಸ್‌ಗಳನ್ನು ಯಾವಾಗ, ಎಷ್ಟು ತಿನ್ನಬೇಕು? ಈ ಮಾಹಿತಿ ತಿಳಿದಿರಲಿ

Continue Reading

ಬೆಂಗಳೂರು

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Summer Hot : ಬೆಂಗಳೂರು ಸೇರಿ ಕರ್ನಾಟಕವೇ ಕಾದ ಕಾವಲಿಯಂತಾಗಿದೆ. ಬಿಸಿಲ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅತಿಯಾದ ತಾಪಮಾನದಿಂದ ಅನಾರೋಗ್ಯ ಸಮಸ್ಯೆಗಳು ಸಂಭವಿಸಬಹುದು. ಹೀಗಾಗಿ ಆರೋಗ್ಯ ಇಲಾಖೆಯು ಸಲಹೆ-ಸೂಚನೆಯ ಮಾರ್ಗಸೂಚಿಯನ್ನು (Health Tips) ಪ್ರಕಟಿಸಿದೆ.

VISTARANEWS.COM


on

By

Health Tips
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಸೂರ್ಯನ ತಾಪವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇವರಿಸುವ ಸೂರ್ಯನ ಶಾಖವು ಜನರು ಆರೋಗ್ಯದ ಮೇಲೂ ಪರಿಣಾಮ (Health Tips) ಬೀರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು (Health Department) ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬ ಸಲಹೆಗಳನ್ನೂ ನೀಡಲಾಗಿದೆ. ಜತೆಗೆ ಮಾಲೀಕರು ಹಾಗೂ ಕೆಲಸಗಾರರಿಗೂ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು (Health Tips) ಕೈಗೊಳ್ಳಲಾಗಿದೆ.

ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?

ಸಾಮಾನ್ಯವಾಗಿ ದೇಹದ ಉಷ್ಣತೆಯು 36.4 ಡಿ.ಸೆ ನಿಂದ 37.2 ಡಿ.ಸೆ ಇರಲಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು (prickly heat), ಊತಗಳು ( ಕೈ-ಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ), ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾಶ್ವವಾಯು ಉಂಟಾಗಲಿದೆ. ಕೆಲವೊಮ್ಮೆ ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು ಹಾಗೂ ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗಲಿದೆ.

ಏನು ಮಾಡಬೇಕು?
-ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ. ನೀರಿನ ಸೇವನೆ ಅತ್ಯುತ್ತಮ.
-ಹೆಚ್ಚು ನೀರು ಕುಡಿಯುವುದು. ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಸೇವಿಸಿ. ಜತೆಗೆ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ ಹಾಗು ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
-ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
-ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
-ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಿರಿ.
-ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
-ಸಾಧ್ಯವಾದಷ್ಟು ಒಳಾಂಗಣದಲ್ಲಿದ್ದು, ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿ.

ಇದನ್ನೂ ಓದಿ: Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

ಈ ಕೆಲಸವನ್ನು ಮಾಡಬಾರದು

-ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಿ.
-ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
-ಮಧ್ಯಾಹ್ನ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
-ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
-ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
-ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನಾಪಮಾನವು ಅಪಾಯಕಾರಿಯಾಗಬಹುದು.
-ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್‌ ಅಥವಾ ಅದಕ್ಕಿಂತ ಹೆಚ್ಚಿನ ನೀರು ಕುಡಿಬೇಕು

Heat wave

ಅಗ್ನಿ ಅವಘಡದ ಕುರಿತು ಎಚ್ಚರಿಕೆ ವಹಿಸಿ

ಬೇಸಿಗೆ ಸಮಯದಲ್ಲಿ ಅತಿಯಾದ ತಾಪಮಾನದಿಂದ ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಅನಾಹುತಗಳಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆಯನ್ನು ವಹಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲಾ ಹಂತದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ, ಬೆಂಕಿ ನಂದಿಸುವ ಉಪಕರಣಗಳ ಲಭ್ಯತೆ ಇರಬೇಕು. ಅಗ್ನಿಶಾಮಕ ದಳದಿಂದ No Objection Certificate ಅನ್ನು ಹೊಂದಿರಬೇಕು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಆರೋಗ್ಯ ಸಂಸ್ಥೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

ಹೊಸದರಲ್ಲಿ ಮೆತ್ತಗಿದ್ದ ದಿಂಬುಗಳು (Side effects of pillow) ಕ್ರಮೇಣ ಗಟ್ಟಿಯಾಗಿ ಒತ್ತಲಾರಂಭಿಸಿದರೆ, ಅದರ ಮೇಲೆ ಇನ್ನೊಂದು ದಿಂಬು ಹಾಕಿಕೊಳ್ಳಬಹುದು. ಅಥವಾ ಹೊಸದಾದ ಇನ್ನೂ ಎತ್ತರದ ದಿಂಬು ಖರೀದಿಸುವ ಯೋಚನೆಯೂ ಬಂದೀತು. ಹೀಗೆ ಎತ್ತರದ ದಿಂಬುಗಳ ಬಳಕೆಯಿಂದ ಬರುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

VISTARANEWS.COM


on

Side Effects Of Pillow
Koo

ಮೆತ್ತನೆಯ ದಿಂಬಿಗೆ ತಲೆ ಕೊಟ್ಟರೆ (Side effects of pillow) ನಿದ್ದೆ ಸದ್ದಿಲ್ಲದೆಯೆ ಆವರಿಸುತ್ತದೆ ಎಂಬ ಭಾವ ಬಹಳಷ್ಟು ಜನರಲ್ಲಿದೆ. ವಿಷಯ ಹೌದು, ಆರಾಮದಾಯಕ ಹಾಸಿಗೆ-ದಿಂಬುಗಳು ಗಾಢ ನಿದ್ದೆಗೆ ಪೂರಕವೇ. ಮುಖ್ಯವಾಗಿ ಕುತ್ತಿಗೆ ಮತ್ತು ಬೆನ್ನಿಗೆ ಸುಖ ನೀಡುವಂಥ ದಿಂಬು ಮಾತ್ರವೇ ಚೆನ್ನಾದ ನಿದ್ದೆಯನ್ನು ನೀಡಬಲ್ಲದು. ಆದರೆ ದಿಂಬುಗಳೇನು ಶಾಶ್ವತವಾಗಿ ಇರುವಂತೆ ಸಿದ್ಧಗೊಂಡವಲ್ಲ. ಹೊಸದರಲ್ಲಿ ಸುಖ ನೀಡುತ್ತಿದ್ದ ಮೆತ್ತೆಗಳು ಕೆಲಕಾಲದ ನಂತರ ಗಂಟುಗಂಟಾಗಿ ಮಲಗಿದವರ ಮೈಗೆ ಒತ್ತಲಾರಂಭಿಸುತ್ತವೆ. ಹೊಸದರಲ್ಲಿ ಮೆತ್ತಗಿದ್ದ ದಿಂಬುಗಳು ಕ್ರಮೇಣ ಗಟ್ಟಿಯಾಗಿ ಒತ್ತಲಾರಂಭಿಸಿದರೆ, ಅದರ ಮೇಲೆ ಇನ್ನೊಂದು ದಿಂಬು ಹಾಕಿಕೊಳ್ಳಬಹುದು. ಅಥವಾ ಹೊಸದಾದ ಇನ್ನೂ ಎತ್ತರದ ದಿಂಬು ಖರೀದಿಸುವ ಯೋಚನೆಯೂ ಬಂದೀತು. ಕ್ರಮೇಣ ತನ್ನ ಮೃದುತ್ವವನ್ನು ಕಳೆದುಕೊಂಡು, ತಗ್ಗಿ ಗಟ್ಟಿಯಾಗುವ ದಿಂಬುಗಳ ಗುಣದಿಂದ, ಈ ಯೋಚನೆ ಬಂದಿದ್ದರೆ ಅದು ಸಹಜ. ಆದರೆ ಹಾಗೆ ಎತ್ತರದ ದಿಂಬುಗಳನ್ನು ಬಳಸಿದರೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಅಥವಾ ಒಂದಕ್ಕಿಂತ ಹೆಚ್ಚು ದಿಂಬುಗಳನ್ನು ತಲೆ, ಕುತ್ತಿಗೆ, ಬೆನ್ನು ಎಂದು ಎಲ್ಲೆಂದರಲ್ಲಿ ಒತ್ತರಿಸಿಕೊಂಡರೂ ತೊಂದರೆ ತಪ್ಪಿದ್ದಲ್ಲ. ಎತ್ತರದ ದಿಂಬುಗಳ ಬಳಕೆಯಿಂದ ಬರುವ ಸಮಸ್ಯೆಗಳೇನು?

Sleeping

ಭಂಗಿ ಹಾಳಾಗುತ್ತದೆ

ಮಲಗುವುದಕ್ಕೆ ಆರಾಮದಾಯಕ ಭಂಗಿಯನ್ನು ಅನುಸರಿಸುವುದು ಮುಖ್ಯ. ಎತ್ತರದ ದಿಂಬನ್ನು ಹಾಕಿಕೊಳ್ಳುವುದರಿಂದ ಕುತ್ತಿಗೆ ಮತ್ತು ಬೆನ್ನಿನ ಭಂಗಿಗಳು ಹಾಳಾಗುತ್ತವೆ. ತೀರಾ ಎತ್ತರದ ದಿಂಬುಗಳು ಬೆನ್ನು ಹುರಿಯನ್ನು ಅತಿಯಾಗಿ ಬಾಗಿಸಿ, ಕುತ್ತಿಗೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಭುಜ, ಕುತ್ತಿಗೆ, ಬೆನ್ನಿನ ಮೇಲ್ಭಾಗಗಳಲ್ಲಿ ನೋವು, ಒತ್ತಡ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ಸ್ನಾಯುಗಳ ಮೇಲೆ ಒತ್ತಡ

ಯಾವುದೇ ಒಂದು ಭಂಗಿಯಲ್ಲಿ ಸ್ವಲ್ಪ ಕಾಲ ಇದ್ದಾಗಲೇ ನಮಗೆ ಕಿರಿಕಿರಿ ಉಂಟಾಗುತ್ತದೆ. ಉದಾ, ಒಂಟಿ ಕಾಲಲ್ಲಿ ಎರಡು ನಿಮಿಷ ನಿಲ್ಲುವುದೇ ಕಷ್ಟ, ನಿಂತರೂ ಕಾಲು ನೋವು ಅನುಭವಕ್ಕೆ ಬರುತ್ತದೆ. ಹಾಗಿರುವಾಗ ಆರಾಮವಲ್ಲದ ಮತ್ತು ಸೂಕ್ತವಲ್ಲದ ಭಂಗಿಯಲ್ಲಿ ಇಡೀ ರಾತ್ರಿ ಮಲಗಿದರೆ ಸ್ನಾಯುಗಳ ಮೇಲೆ ಬೀಳುವಂಥ ಒತ್ತಡವನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೆಳಗ್ಗೆ ಏಳುವಾಗಲೇ ಸುಸ್ತಾಗಿ, ತಲೆ, ಕುತ್ತಿಗೆಯೆಲ್ಲಾಭಾರವಾದ ಅನುಭವವನ್ನು ನೀಡುತ್ತದೆ.

Breathing problem

ಉಸಿರಾಟದ ತೊಂದರೆ

ನೆಗಡಿಯಾದಾಗ ದಿಂಬು ಎತ್ತರಿಸಿಕೊಂಡು ಮಲಗುವುದು ಬಹಳಷ್ಟು ಜನರ ರೂಢಿ. ಇದರಿಂದ ಮೂಗು ಕಟ್ಟಿದ ತೊಂದರೆಯಿಂದ ಕೊಂಚ ಆರಾಮ ದೊರೆಯುತ್ತದೆ. ಹಾಗೆಂದು ಸದಾಕಾಲ ಅದೇ ಭಂಗಿಯಲ್ಲಿ ಮಲಗುವುದು ಸೂಕ್ತವಲ್ಲ. ಇದರಿಂದ ಶ್ವಾಸನಾಳಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗುತ್ತದೆ. ಸಶಬ್ದ ಉಸಿರಾಟ, ಉಬ್ಬಸದಂಥ ತೊಂದರೆಗಳು ಗಂಟು ಬೀಳಬಹುದು. ದೀರ್ಘವಾಗಿ ಉಸಿರಾಡಲು ಆಗುವುದಿಲ್ಲ ಎಂಬ ಭಾವನೆ ಬರಬಹುದು.

ealthy internal organs of human digestive system / highlighted blue organs

ಜೀರ್ಣಾಂಗಗಳ ತೊಂದರೆ

ದಿಂಬಿಗೂ ಜೀರ್ಣಾಂಗಗಳಿಗೂ ಏನು ಸಂಬಂಧ? ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದು ಯೋಚಿಸಬಹುದು. ತಲೆ, ಕುತ್ತಿಗೆಯ ಭಾಗಗಳು ಒಂದೇ ಪಂಕ್ತಿಯಲ್ಲಿ ಸರಿಯಾಗಿ ಜೋಡಿಸಿಕೊಂಡು ಇರದಿದ್ದರೆ ಎದೆಯುರಿ, ಹುಳಿತೇಗಿನಂಥ ತೊಂದರೆಗಳಿಗೆ ದಾರಿ ಮಾಡಬಹುದು. ಅದರಲ್ಲೂ ಊಟ ಆದ ತಕ್ಷಣ ಹೀಗೆ ಕುತ್ತಿಗೆ, ತಲೆಗಳನ್ನು ಎತ್ತರಿಸಿ ಮಲಗಿಕೊಳ್ಳುವುದು ಸರಿಯಲ್ಲ.

ಪರಿಚಲನೆಗೆ ಅಡಚಣೆ

ಭುಜ, ತೋಳು ಮತ್ತು ಬೆನ್ನಿನ ಮೇಲ್ಭಾಗಗಳಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುವುದಕ್ಕೆ ಎತ್ತರದ ದಿಂಬುಗಳು ಅಡಚಣೆ ಮಾಡುತ್ತವೆ. ಇದರಿಂದ ತೋಳು, ಬೆರಳುಗಳಲ್ಲಿ ಚುಚ್ಚಿದ ಅನುಭವ, ಮರಗಟ್ಟಿದಂತಾಗುವುದು, ಜೋಮು ಹಿಡಿಯುವುದು ಸಾಮಾನ್ಯ. ಆದರೆ ದೀರ್ಘಕಾಲದವರೆಗೆ ಇದೇ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಂಡರೆ ನರಸಂಬಂಧಿ ತೊಂದರೆಗಳು ಕಾಣಬಹುದು.

Winter Headache

ತಲೆನೋವು

ಬೆಳಗ್ಗೆ ಏಳುತ್ತಿದ್ದಂತೆಯೇ ತಲೆನೋವಿನ ಅನುಭವವೇ? ಕುತ್ತಿಗೆ, ಭುಜವೆಲ್ಲ ನೋಯುತ್ತಿರುವ ಇಲ್ಲವೇ ಮರಗಟ್ಟಿದ ಹಾಗಿದೆಯೇ? ನಿಮ್ಮ ದಿಂಬಿನ ದೋಷವೇ ಇರಬಹುದು. ಮಲಗಿದ ಭಂಗಿಯ ತೊಂದರೆಯಿಂದಾಗಿ ದಿನವೂ ನಿದ್ರೆ ಸರಿಯಾಗುತ್ತಿಲ್ಲ ಎಂದಾದರೆ, ಮೈಗ್ರೇನ್‌ ಅಥವಾ ಅರೆತಲೆಶೂಲೆ ಅಂಟಿಕೊಳ್ಳುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Tips To Prevent Acne: ಮೊಡವೆ ಬರದಂತೆ ತಡೆಯಬೇಕೆ? ಇಲ್ಲಿದೆ ಪರಿಹಾರ!

Continue Reading
Advertisement
Cooking utensils Health Tips
ಆರೋಗ್ಯ7 mins ago

Health Tips: ನಮ್ಮ ಅನಾರೋಗ್ಯದಲ್ಲಿ ನಾವು ಬಳಸುವ ಪಾತ್ರೆಗಳ ಪಾತ್ರವೇ ಮುಖ್ಯ!

Karnataka Weather
ಮಳೆ38 mins ago

Karnataka Weather : ಉತ್ತರದಲ್ಲಿ ಬಿಸಿಲ ಏಟು; ಮಲೆನಾಡು, ಕರಾವಳಿಯಲ್ಲಿ ಮಳೆಯಾಟ

Tea or Juice
ಆರೋಗ್ಯ1 hour ago

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

kea
ಕರ್ನಾಟಕ6 hours ago

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

Viral News: Holi at delhi metro
ದೇಶ7 hours ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Water Crisis
ಪ್ರಮುಖ ಸುದ್ದಿ7 hours ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ8 hours ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್8 hours ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ8 hours ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202417 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202419 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌