ಧವಳ ಧಾರಿಣಿ ಅಂಕಣ | ವರ್ಷಕ್ಕೆ ಒಂದಲ್ಲ, ನಾಲ್ಕು ನವರಾತ್ರಿ ಹಬ್ಬಗಳು! - Vistara News

ಅಂಕಣ

ಧವಳ ಧಾರಿಣಿ ಅಂಕಣ | ವರ್ಷಕ್ಕೆ ಒಂದಲ್ಲ, ನಾಲ್ಕು ನವರಾತ್ರಿ ಹಬ್ಬಗಳು!

ನವರಾತ್ರಿ ಹಬ್ಬದಲ್ಲಿ ಲಕ್ಷ್ಮಿ, ಸರಸ್ವತಿಯರೂ ಪೂಜೆಗೊಳ್ಳುತ್ತಾರಾದರೂ ಹಬ್ಬದ ಎಲ್ಲ ಕತೆಗಳೂ ಹಬ್ಬಿಕೊಂಡಿರುವುದು ಪಾರ್ವತಿ ಅಥವಾ ದುರ್ಗೆಯ ಮಹಿಮೆಯ ಬಗ್ಗೆ. ಅನಾದಿಯಿಂದ ಪ್ರಕೃತಿಯ ಪೂಜೆಯಾಗಿದ್ದ ಹಬ್ಬಗಳು ದೇವಿಕೇಂದ್ರಿತವಾದುದು ಹೇಗೆ? ಓದಿ, ನಾರಾಯಣ ಯಾಜಿ ಅವರ ಅಂಕಣ.

VISTARANEWS.COM


on

durgadevi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾಗ – 1

dhavala dharini

ಇಳೆ ಋತುಮಾನಕ್ಕನುಸಾರವಾಗಿ ತನ್ನ ಮೇಲ್ಮೈ ಮೇಲೆ ಬಣ್ಣಬಣ್ಣದ ಉಡುಪನ್ನು ತೊಡುತ್ತಿರುವಾಗ ಸೃಷ್ಟಿಯ ಸೌಂದರ್ಯವನ್ನು ನೋಡಿದ ಮಾನವನಿಗೆ ಸಹಜವಾಗಿ ಏಕತಾನತೆಯಿಂದ ಹೊರಬಂದ ಆನಂದವೇ ಹಬ್ಬಗಳ ರೂಪದಲ್ಲಿ ಆಚರಿಸಲ್ಪಟ್ಟವು. ಮನುಷ್ಯ ತನ್ನ ವಿಕಾಸದ ಹಾದಿಯಲ್ಲಿ ನಾಗರಿಕತೆಯ ಮೆಟ್ಟಿಲಿಗೆ ಏರುವಾಗ ತನ್ನ ಸುತ್ತಲಿನ ಪರಿಸರದೊಂದಿಗೆ ತಾದಾತ್ಮ್ಯಭಾವವನ್ನು ಹೊಂದಿದ್ದ. ತಾಯಿಯಿಂದ ಪ್ರೀತಿಯ ಅನುಭವವನ್ನು ಕಂಡ ಆತನಿಗೆ ಆ ಮಮತೆಯ ಅನುಭವವಕ್ಕೆ ಮೂಲ ಈ ಪ್ರಕೃತಿ ಎನ್ನುವದು ಮನದಟ್ಟಾಯಿತು. ಹಾಗಾಗಿ ಪ್ರಕೃತಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಲಾರಂಭಿಸಿದ. ಅಥರ್ವವೇದದಲ್ಲಿ ಬರುವ ಭೂಮಿ ಸೂಕ್ತದಲ್ಲಿ,

ಯಸ್ಯಾಂ ಸಮುದ್ರ ಉತ ಸಿಂಧುರಾಪೋ ಯಸ್ಯಾಮನ್ನಂ ಕೃಷ್ಟಯಃ ಸಂಬಭೂವುಃ I
ಯಸ್ಯಾಮಿದಮ್ ಜಿನ್ವತಿ ಪ್ರಾಣದೇಜತ್ ಸಾ ನೋ ಭೂಮಿಃ ಪರ‍್ವಪೇಯೇ ದಧಾತು II ೧೨-೩

“ಯಾವ ಭೂಮಿಯಲ್ಲಿ ಸಮುದ್ರ, ನದಿ-ಪ್ರವಾಹಗಳು ಇರುವವೋ, ಯಾವ ಭೂಮಿಯು ಕೃಷಿಯ ಮೂಲಕ ನಮಗೆ ಸಮೃದ್ಧವಾದ ಅನ್ನಾದಿಗಳನ್ನು ನೀಡುತ್ತದೋ, ಯಾವ ಭೂಮಿಯ ಮೇಲೆ ನಾನಾ ವಿಧದ ಜೀವಿಗಳು ಉಪಜೀವಿಸುತ್ತದೆಯೋ ಅಂತಹ ಸರ್ವಾಶ್ರಯವಾದ ಭೂಮಿಯು ನಮಗೆ ದಿವ್ಯ ಆಸರೆಯನ್ನು ನೀಡಲಿ” ಎಂದು ಬೇಡಿಕೊಳ್ಳುವದನ್ನು ಗಮನಿಸಬಹುದು. ಋಗ್ವೇದದಲ್ಲಿ ಬರುವ ನಾಸಾದೀಯವಂತೂ ಸೃಷ್ಟಿ ಹೇಗಾಯಿತು ಎನ್ನುವದರ ಕುರಿತು ವಿವರಿಸುತ್ತದೆ. ವೇದಗಳಲ್ಲಿ ಉಷಾ, ಇಳಾ, ಸರಸ್ವತಿ ಈ ಎಲ್ಲಾ ಶಕ್ತಿಸ್ವರೂಪದ ಕುರಿತು ಹೇಳುತ್ತಿದ್ದರೂ ಅವರೆಲ್ಲರೂ ದುಷ್ಟರ ವಿರುದ್ಧ ಹೋರಾಡುವವರಾಗಿರಲಿಲ್ಲ. ಆ ಕೆಲಸವನ್ನು ಇಂದ್ರ, ವರುಣ ಮುಂತಾದವರು ಮಾಡುತ್ತಿದ್ದರು. ಋಗ್ವೇದದಿಂದ ಅಥರ್ವವೇದಕ್ಕೆ ಬರುವಾಗ ಈ ಚಿಂತನಾ ಕ್ರಮಗಳಿಗಿಂತ ನಮಗೆ ಆಸರೆಯನ್ನು ನೀಡುವ ಈ ಭೂಮಿಯೇ ನಮ್ಮ ನಾಥ, ಇದುವೇ ದೇವರು, ಭೂಮಿಯನ್ನು ಆರಾಧನೆಗಳ ಮೂಲಕ ಅಭಿವಂದಿಸಬೇಕೆನ್ನುವ ಭಾವ ಬಂದಿರುವದನ್ನು ಈ ಸೂಕ್ತದಲ್ಲಿ ಗಮನಿಸಬಹುದು.

ಈ ಕ್ರಮವೇ ಮುಂದುವರಿದಂತೆ ಈ ಭೂಮಿ, ಆಕಾಶ, ಸಮಷ್ಟಿಗಳಿಗೆಲ್ಲಾ ಸರ್ವ ಅಧಿನಾಯಕನಿದ್ದಾನೆ, ಅದು ಮಾತೃಸ್ವರೂಪದ ದೇವರು ಎನ್ನುವ ಮೂಲಕ ಧಾರ್ಮಿಕ ಹಬ್ಬಗಳು ರೂಢಿಗೆ ಬಂದುದಿರಬೇಕು. ಹಾಗಾಗಿ ವೇದಕಾಲದ ಕೆಲವೇ ಜನರನ್ನು ಒಳಗೊಂಡ ಬ್ರಹ್ಮತ್ವದ ಚಿಂತನಾಪ್ರಧಾನವಾದ ಸಮಾಜಕ್ಕಿಂತ ನಂತರದ ಪುರಾಣದ ಕಾಲದ ಹೊತ್ತಿಗೆ ಆರಾಧನಾ ಪ್ರಧಾನವಾಗಿ ಸಮಗ್ರ ಜನಪದವನ್ನು ಒಳಗೊಂಡ ಉತ್ಸವವಾಗಿ ರೂಪಾಂತರಗೊಂಡಿರಬೇಕು. ಹಾಗಾಗಿ ಹಬ್ಬಗಳು ಭಾರತೀಯರ ಸಂಸ್ಕೃತಿಯಲ್ಲಿ ಬಹು ಮುಖ್ಯವಾದ ಅಂಗ.

ಈ ಹಿನ್ನೆಲೆಯಲ್ಲಿ ನವರಾತ್ರಿ ಹಬ್ಬವನ್ನು ನೋಡುವದಾದರೆ ಹಬ್ಬಗಳಲ್ಲೇ ಪ್ರಾಚೀನವಾದ ಹಬ್ಬವಾಗಿದೆ ಇದು. ಮೊದಲು ಇದು ಸುಗ್ಗಿ ಅಥವಾ ಫಲವತ್ತತೆಯ ಸಂಕೇತವಾಗಿ ಆಚರಿಸುತ್ತಿರಬೇಕು. ನಮ್ಮ ಹಬ್ಬಗಳೆಲ್ಲ ಸೂರ್ಯ, ಚಂದ್ರ, ನಕ್ಷತ್ರಗಳಿಗೆ ಸಂಬಂಧಿಸಿವೆ. ಮಳೆಗಾಲ ಕಳೆದು ಆಕಾಶ ಶುಭ್ರವಾಗುತ್ತಿರುವಂತೆ ಪ್ರಕೃತಿ ತೊಳೆದಿಟ್ಟಂತೆ ಕಾಣುತ್ತಾಳೆ. ಗದ್ದೆಯಲ್ಲಿ ನೆಟ್ಟ ಫಸಲಿನಲ್ಲಿ ತೆನೆ ಬಂದು ತೊನೆದಾಡುತ್ತಿರುತ್ತದೆ. ಕೊಟ್ಟಿಗೆಯಲ್ಲಿ ಹಸು ಕರುಗಳನ್ನು ಈಯುವದೂ ಸಹ ಹೆಚ್ಚಾಗಿ ಇದೇ ಕಾಲದಲ್ಲಿ. ಬೆಳೆ ಬಿತ್ತಿದಾಗ ಇದನ್ನು ಕದ್ದೊಯ್ಯಲು ಬರುವ ವಿರೋಧಿಗಳನ್ನು, ಕಾಡುಪ್ರಾಣಿಗಳಾದ ಕಾಡೆಮ್ಮೆ, ಆನೆ ಮೊದಲಾದವುಗಳನ್ನು ಹಣಿಯಲು ತಾಯಿಯನ್ನು ಯಾಚಿಸುವದು ಒಂದು ಸಹಜವಾದ ಪ್ರತಿಕ್ರಿಯೆ. ಹಾಗಾಗಿ ಈ ಪ್ರಾಣಿಗಳನ್ನು ಎದುರಿಸಲು ಉಗ್ರರೂಪದ ದುರ್ಗೆ ಸಿಂಹದ ಮೇಲೆ ಬಂದು ದುಷ್ಟ ಮಹಿಷಾಸುರನನ್ನು ಕೊಲ್ಲುವ ಕಥೆ ರೂಪುಗೊಂಡಿರಬೇಕು.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಕರುಣೆಯೇ ಎದೆಯೊಳಗೆ ತುಂಬಿಕೊಂಡ ಮಮತಾಮಯಿ ಮಾತೆ ಕೌಸಲ್ಯಾದೇವಿ

ನವರಾತ್ರಿಯೆಂದರೆ ಶರನ್ನವರಾತ್ರಿ ಮಾತ್ರವಲ್ಲ. ವಸಂತ ನವರಾತ್ರಿ, ಆಷಾಢ ನವರಾತ್ರಿ ಮತ್ತು ಮಾಘ ನವರಾತ್ರಿ ಎಂದು ಇನ್ನೂ ಮೂರು ನವರಾತ್ರಿಗಳಿವೆ. ಉತ್ತರ ಭಾರತ ಮತ್ತು ಪೂರ್ವಾಂಚಲದ ಕಡೆ ವಸಂತ ನವರಾತ್ರಿಯನ್ನು ಗುಡಿಪೌಡ್ವ ಹಬ್ಬವನ್ನಾಗಿ ಆಚರಿಸುತ್ತಾರೆ. ಚೈತ್ರ ಮಾಸದಲ್ಲಿ ರಾಮನ ಜನನವಾಗಿರುವದರಿಂದ ರಾಮನವಮಿಯೂ ಸಹ ಈ ನವರಾತ್ರಿಯ ದಿನಗಳಲ್ಲಿ ಬರುವದರಿಂದ ಈ ಹಬ್ಬದ ಸಂಭ್ರಮ ಮತ್ತೂ ಮಹತ್ವದ್ದಾಗಿದೆ. ಇಲ್ಲಿಯೂ ಸಹ ಶಕ್ತಿಯ ಆರಾಧನೆಗೆ ಒತ್ತು ಕೊಡಲಾಗುತ್ತದೆ.

ಅದೇ ರೀತಿ ಮಾಘ ನವರಾತ್ರಿ ಚಳಿಗಾಲದಲ್ಲಿ ಬರುತ್ತಿದ್ದು, ಈ ದಿನಗಳಲ್ಲಿ ವಸಂತ ಪಂಚಮಿಯನ್ನು ಆಚರಿಸುತ್ತಾರೆ. ವಿದ್ಯೆಗೆ ಅಧಿಪತಿಯಾದ ಸರಸ್ವತಿಯ ಪೂಜೆಯನ್ನು ಈ ನವರಾತ್ರಿಗಳಲ್ಲಿ ಆಚರಿಸಲಾಗುತ್ತದೆ. ಇನ್ನು ಆಷಾಢ ನವರಾತ್ರಿಯನ್ನು ಗುಪ್ತ ನವರಾತ್ರಿ ಎಂದೂ ಕರೆಯಲಾಗುತ್ತದೆ. ಶುಕ್ಲಪಕ್ಷದ ಪ್ರತಿಪದೆಯಿಂದಾರಂಭಗೊಂಡು ದಶಮಿಯ ತನಕ ಆಚರಿಸುವ ಈ ರಾತ್ರಿಗಳು ತಾಂತ್ರಿಕ ವಿದ್ಯೆಯನ್ನು ಕೈವಶ ಮಾಡಿಕೊಳ್ಳಲು ಪ್ರಶಸ್ತ ಕಾಲ ಎಂದು ಶಾಕ್ತರು ನಂಬಿರುತ್ತಾರೆ. ಇದೂ ಸಹ ದೇವಿಯ ಆರಾಧನೆಯೇ ಆಗಿದ್ದು ದೇವಿಯ ಹತ್ತು ರೂಪಗಳಾದ ಕಾಲಿ, ತಾರ, ತ್ರಿಪುರಸುಂದರಿ, ಭುವನೇಶ್ವರಿ, ಭೈರವಿ, ಛಿನ್ನಮಸ್ತಾ (ತನ್ನ ತಲೆಯನ್ನು ತಾನೇ ತರಿದುಕೊಳ್ಳುವವಳು, ಟಿಬೇಟಿನಲ್ಲಿನ ಬೌದ್ಧರಿಗೆ ಈಕೆ ಛಿನ್ನಮುಂಡಾದೇವಿ) ಶತ್ರುಗಳನ್ನು ನಿಗ್ರಹಿಸುವ ಬಗಲಾಮುಖೀ, ಧೂಮಾವತೀ, ಮಾತಂಗಿ ಮತ್ತು ಪ್ರಸನ್ನವದನಳಾದ ಕಮಲಮುಖಿಯನ್ನು ಪೂಜಿಸುತ್ತಾರೆ. ದೇವಿಯನ್ನು ಅತ್ಯಂತ ಗುಪ್ತವಾಗಿ ಆರಾಧಿಸುವದರಿಂದ ಇದನ್ನು ಗುಪ್ತನವರಾತ್ರಿ ಎಂತಲೂ ಕರೆಯುತ್ತಾರೆ. ಮಾಘ ನವರಾತ್ರಿಯೂ ತಂತ್ರವಿದ್ಯೆಯನ್ನು ಕೈವಶ ಮಾಡಿಕೊಳ್ಳುವವರಿಗೆ ಮಹತ್ವದ ನವರಾತ್ರಿ. ಈ ನವರಾತ್ರಿಗಳು ನೇಪಾಲ ಮತ್ತು ಟಿಬೆಟ್‌ಗಳಲ್ಲಿ ರೂಢಿಯಲ್ಲಿದೆ.

ವಿಶ್ವದಾದ್ಯಂತ ಹೆಚ್ಚಾಗಿ ಎಲ್ಲರೂ ಆಚರಿಸುವ ಹಬ್ಬ ಶರನ್ನವರಾತ್ರಿಯಾದುದರಿಂದ ಅಶ್ವಯುಜ ಮಾಸದಲ್ಲಿ ಪ್ರತಿಪದೆಯಿಂದಾರಂಭಿಸಿ ದಶಮಿಯ ತನಕ ವಿಶ್ವದಾದ್ಯಂತ ಆಚರಿಸುವ ಹಬ್ಬವೇ ನವರಾತ್ರಿ ಎಂದೇ ಪ್ರಸಿದ್ಧವಾಗಿದೆ. ಕೃಷ್ಣಾವತಾರದಲ್ಲಿಯೂ ಶರದೃತುವಿನ ಮಹಿಮೆಯ ಬಣ್ಣನೆಯಿದೆ. ಇದೇ ಋತುವಿನಲ್ಲಿಯೇ ಶ್ರೀಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿರುವದು. ವಿಷ್ಣುಪುರಾಣದಲ್ಲಿ ಈ ಋತುವಿನ ಕುರಿತು “ಮಳೆಗಾಲದಲ್ಲಿ ಕುಣಿದು ಕುಪ್ಪಳಿಸಿದ ನವಿಲುಗಳು ಈ ಶರದೃತು ಬಂದ ತಕ್ಷಣ ಈ ಸಂಸಾರವು ಅಸಂಸಾರವಾಗಿದೆಯೆಂದು ತಿಳಿದು ಮೌನವಾಗಿಬಿಟ್ಟವಂತೆ. ಅದು ತನಕ ನೀರಿನ ಭಾರದಿಂದ ಕಪ್ಪಾಗಿರುವ ಮೋಡಗಳು ತಮ್ಮಲ್ಲಿದ್ದ ಸಮಸ್ತ ನೀರನ್ನೂ ಸುರಿಸಿ ಬೆಳ್ಳಗಾಗಿ ಆತ್ಮಜ್ಞಾನಿಗಳು ತಮ್ಮಲ್ಲಿರುವ ಜಡಸ್ವಭಾವವನ್ನು ಬಿಟ್ಟು ಶುದ್ಧಸ್ವರೂಪರಾಗಿ ಅಂಬರವನ್ನು (ವಸ್ತ್ರವನ್ನು) ತ್ಯಾಗ ಮಾಡುವಂತೆ ಆಕಾಶವನ್ನು (ಅಂಬರ) ಬಿಟ್ಟುಹೋದವು” ಎನ್ನುವ ವಿವರ ಬರುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ತಾಯಿಸ್ಥಾನದಲ್ಲಿ ಇಟ್ಟು ಹೋಲಿಸಲಾಗುತ್ತದೆ. ಪ್ರಪಂಚದ ಸೃಷ್ಟಿಗೆ ಪ್ರಕೃತಿ ಮತ್ತು ಪುರುಷ ಇಬ್ಬರೂ ಕಾರಣರು. ಪೂಜಾ ವಿಧಾನಕ್ಕೆ ಬರುವಾಗ ಶಿವ ಮತ್ತು ವಿಷ್ಣುವಿನ ವಿಷಯದಲ್ಲಿ ಯಾರು ಹೆಚ್ಚು ಎಂದು ಚರ್ಚೆಗಳಾಗಿರುವದನ್ನು ಕಾಣಬಹುದಾಗಿದೆ. ಆದರೆ ದೇವಿಯರ ವಿಷಯಕ್ಕೆ ಬಂದಾಗ ಪಾರ್ವತಿ, ಲಕ್ಷ್ಮಿ, ಸರಸ್ವತಿಯರ ವಿಷಯದಲ್ಲಿ ಯಾವ ವಿವಾದಗಳೂ ಆಗಿರುವದಿಲ್ಲ. ಸಂಪತ್ತಿನ ಕಾರಣಕ್ಕೆ ಲಕ್ಷ್ಮಿ, ವಿದ್ಯೆಗೆ ಅಧಿಪತಿಯಾದ ಸರಸ್ವತಿ ಮತ್ತು ಕರುಣೆಯೇ ತುಂಬಿಕೊಂಡು ಮಾತೃಸ್ಥಾನದಲ್ಲಿರುವ ಅನ್ನಪೂರ್ಣೆಯರು ಎಲ್ಲರಿಗೂ ಬೇಕು. ಹಾಗಾಗಿ ನವರಾತ್ರಿಯಲ್ಲಿ ಈ ಮೂರೂ ದೇವತೆಗಳಿಗೆ ಪೂಜೆ ಸಲ್ಲುವದು. ಲಕ್ಷ್ಮಿ ಪೂಜೆ ದೀಪಾವಳಿಗೆ ಮಹತ್ವದ್ದಾದರೂ ಎಂಟನೆಯ ನವರಾತ್ರಿಯಂದು ಲಕ್ಷ್ಮಿಪೂಜೆ ಮಾಡುವ ಕ್ರಮವುಂಟು. ಮೂಲಾ ನಕ್ಷತ್ರ ಮೆಟ್ಟಿದ ದಿನ ಸರಸ್ವತಿಯನ್ನು ಇರಿಸಿ ಪೂಜಿಸುತ್ತಾರೆ. ಶಾಲೆಗೆ ಹೋಗುವಾಗ ಕಬ್ಬಿಣದ ಕಡಲೆಯಾದ ಗಣಿತಪುಸ್ತಕವನ್ನು ಪೂಜೆಗೆ ಇರಿಸಿರುವ ದಿನಗಳ ನೆನಪು ಬರುವದುಂಟು. ಮೂರು ದಿನ ಪೂಜೆ, ಹಾಗೇ ಆ ಮೂರು ದಿನಗಳೂ ಅನಧ್ಯಯನ. ಖುಷಿಯೋ ಖುಷಿ ನಮಗೆಲ್ಲ.

ಆದರೆ ನವರಾತ್ರಿಯ ಮಹಿಮೆ ಇರುವದು ಮಾತ್ರ ದೇವಿ ಪಾರ್ವತಿಯ ಕುರಿತಾಗಿ. ಒಂದೆಡೆ ಲೋಕಕಂಟಕನಾದ ತಾರಕನೆನ್ನುವ ರಾಕ್ಷಸ ಶಿವನ ಪುತ್ರನ ಹೊರತು ತನಗೆ ಮರಣ ಬಾರದ ಹಾಗೇ ಬ್ರಹ್ಮನಿಂದ ವರವನ್ನು ಪಡೆದಿದ್ದ. ತನ್ನ ತಂದೆ ಮಾಡಿದ ನಿರೀಶ್ವರ ಯಾಗದ ಕಾರಣ ಯೋಗಾಗ್ನಿಯಲ್ಲಿ ಭಸ್ಮವಾದ ಸತಿ ಹಿಮವಂತನ ಮಗಳಾಗಿ ಜನಿಸಿ ಶಿವನನ್ನೇ ಗಂಡನನ್ನಾಗಿ ಪಡೆಯಬೇಕೆಂದು ತಪಸ್ಸನ್ನು ಆಚರಿಸುತ್ತಿದ್ದಳು. ಕಾಳಿದಾಸ ಕುಮಾರಸಂಭವದಲ್ಲಿ ತುಂಬಾ ಚೆನ್ನಾಗಿ ಈ ಕುರಿತು ಬರೆದಿದ್ದಾನೆ. ಶಿವಪುರಾಣದಲ್ಲಿ ಶಿವ ಪಾರ್ವತಿಯರ ಮದುವೆಯ ವಿಷಯ ಪುರಾಣೋಕ್ತವಾಗಿ ಬಂದರೆ ಕಾಳಿದಾಸನ ಲೇಖನಿಯಲ್ಲಿ ಇದೊಂದು ರಸಕಾವ್ಯವಾಗಿದೆ. ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಅನ್ನಾಹಾರವನ್ನು ತ್ಯಜಿಸಿದಳು. ಗಿರಿರಾಜನ ಮಗಳಾಗಿ ಜನಿಸಿ ಲೋಕಕಂಟಕನಾದ ತಾರಕನನ್ನು ವಧಿಸುವ ದಿನ ಬಂತು ಎಂದು ಲೋಕವೆಲ್ಲ ಸಂತೋಷಪಟ್ಟ ಕಾರಣಕ್ಕೆ ಶೈಲಪುತ್ರಿಯಾಗಿ ಮೊದಲ ದಿನ ಪೂಜೆಗೊಳ್ಳುವ ಈಕೆ ನಂತರ ಪ್ರತಿದಿನವೂ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಘಟನೆಗಳಿಗೂ ಪೂಜಿಸಲ್ಪಡುತ್ತಾಳೆ. ಕನ್ನಿಕೆಯಿಂದ ಹಿಡಿದು ಲೋಕಪಾವನೆಯಾದ ಸಿದ್ಧಿಧಾತ್ರಿಯಾಗಿಯೂ ಪೂಜೆಗೊಳ್ಳುವ ಪಾವನಾಮೂರ್ತಿ ಈಕೆ. ಈ ಕಾರಣಕ್ಕೆ ನವರಾತ್ರಿಯ ಪ್ರಧಾನ ದೇವತೆ ಈಕೆ ಆಗಿದ್ದಾಳೆ.

ಜಗತ್ತನ್ನು ಆವರಿಸಿದ ಕಂಟಕಗಳಿಂದ ದುರ್ಗೆಯಾಗಿ ನಮ್ಮನ್ನು ರಕ್ಷಿಸಿದ ನವರಾತ್ರಿಯ ಮಹಿಮೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಇಂದಿಗೂ ಭಾರತೀಯ ಜನಮಾನಸದಲ್ಲಿ ಗಾಂಧಿ – ನೆಹರೂ ಹೆಸರಿನ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

VISTARANEWS.COM


on

nanna desha nanna dani column ambedkar jinnah
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಪಾಕಿಸ್ತಾನಕ್ಕೆ (pakistan) ಸಂಬಂಧಿಸಿದಂತೆ, 1940ರಷ್ಟು ಹಿಂದೆಯೇ, ಡಾ।। ಅಂಬೇಡ್ಕರ್ (Dr Ambedkar) ಅವರು ಜನಸಂಖ್ಯಾ ವಿನಿಮಯವನ್ನು ಪ್ರಸ್ತಾಪಿಸಿದ್ದರು. ಕ್ವಾಯಿಡ್-ಏ-ಆಜಂ (ಮಹಾನ್ ನಾಯಕ) ಎಂದೇ ಹೆಸರಾದ ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪಾಕಿಸ್ತಾನದ ನಿರ್ಮಾತೃ. ಪಾಕಿಸ್ತಾನದ ನಿರ್ಮಾಣದ ಅನಂತರ ಅವರು ಅಲ್ಲಿನ ಗವರ್ನರ್ ಜನರಲ್ ಆದರು. ಆ ಪದವಿ ಎಂದರೆ “ಸಶಸ್ತ್ರ ಪಡೆಗಳ ಮಹಾ ದಂಡನಾಯಕ” ಎಂದರ್ಥ. ಅದು ಬಹಳ ಬಹಳ ಮಹತ್ತ್ವದ್ದು ಎಂಬುದು ಜಿನ್ನಾಗೆ ಗೊತ್ತಿತ್ತು. ಭಾರತದ “ನಮ್ಮ” ನಾಯಕರು, ಯಾವುದಕ್ಕೂ ಹೇಸದ ನೀಚ – ಕುತಂತ್ರಿ ಮೌಂಟ್ ಬ್ಯಾಟನ್ ನನ್ನೇ ಇಲ್ಲಿನ ಗವರ್ನರ್ ಜನರಲ್ ಆಗಿ ಉಳಿಸಿಕೊಂಡುದರಿಂದ ಬಹಳ ಬಹಳ ತೊಂದರೆಯಾಯಿತು. ನವನಿರ್ಮಿತ ಇಸ್ಲಾಮಿಕ್ ದೇಶ ಪಾಕಿಸ್ತಾನದ ಕಡೆಯಿಂದ ಕಾಶ್ಮೀರವನ್ನು (Kashmir) ಆಕ್ರಮಿಸಿಕೊಳ್ಳಲು, ವಶಪಡಿಸಿಕೊಳ್ಳಲು ಪಾಕ್ ಸೇನೆ ನುಗ್ಗಿ ಬರುತ್ತಿದ್ದರೂ ನಮ್ಮ ಸೇನಾ ಪ್ರತ್ಯಾಕ್ರಮಣಕ್ಕೆ ಮೌಂಟ್ ಬ್ಯಾಟನ್ ಅನುಮತಿ ನೀಡಲೇ ಇಲ್ಲ. ಅವನು ಮೂಲಭೂತವಾಗಿ ಅಂತಹ ನೀಚನೇ, ಧೂರ್ತನೇ. ಹಾಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಇಂದಿಗೂ ಪಾಕಿಸ್ತಾನದಲ್ಲಿಯೇ ಇದೆ. ನಮ್ಮ “ಮಹಾನ್” ನಾಯಕರು ಮಾಡಿದ ಇಂತಹ ಅವಿವೇಕಗಳು ಒಂದು, ಎರಡು ಅಲ್ಲ.

ಜಿನ್ನಾ ಪಾಕಿಸ್ತಾನದ “ಫಾದರ್ ಆಫ್ ದ ನೇಷನ್” ಸಹ ಆದರು. ಅವರ ಚಿತ್ರವೇ ಪಾಕಿಸ್ತಾನದ ಕರೆನ್ಸಿ ನೋಟುಗಳ ಮೇಲೆ ಇಂದಿಗೂ ರಾರಾಜಿಸುತ್ತಿದೆ. ಪಾಕ್ ನಿರ್ಮಾಣಕ್ಕೆ ಮೊದಲೇ, ಅವಿಭಜಿತ ಭಾರತದಲ್ಲಿಯೇ ಜಿನ್ನಾ 1941ರಲ್ಲಿ “ದ ಡಾನ್” ಇಂಗ್ಲಿಷ್ ಪತ್ರಿಕೆಯನ್ನು ಹುಟ್ಟುಹಾಕಿದರು. “ದ ಡಾನ್” ಮುಸ್ಲಿಂ ಲೀಗಿನ ಮುಖವಾಣಿಯಾಗಿ ಬೆಳೆಯಿತು. ಅಭಿಲೇಖಾಗಾರಗಳಲ್ಲಿ (Archives) ದೊರೆಯುವ ಈ ಪತ್ರಿಕೆಯ ಸಂಚಿಕೆಗಳು, ಪ್ರಚಲಿತ ಸುಳ್ಳು ಇತಿಹಾಸವನ್ನೇ ಓದುತ್ತ ಬಂದವರಿಗೆ ಆಘಾತವನ್ನೇ ಉಂಟುಮಾಡುತ್ತವೆ.

1946-47ರ ಅತ್ಯಂತ ಭಯಾನಕ ಕಾಲಘಟ್ಟದಲ್ಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಕಾರಣದಿಂದ, 20ಲಕ್ಷಕ್ಕೂ ಹೆಚ್ಚು ಜನರ ಹತ್ಯೆ, ಆ ಕಾಲಕ್ಕೆ ಅತಿ ದೊಡ್ಡ ಸಂಖ್ಯೆ ಎನಿಸುವ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿ ವಲಸೆ ಹೋಗಿದ್ದು, ಅಕ್ಷರಶಃ ಅನೇಕ ಲಕ್ಷ ಹೆಣ್ಣುಮಕ್ಕಳ ಮೇಲೆ ಬರ್ಬರ ಅತ್ಯಾಚಾರ ಆದುದು ಕಟುವಾಸ್ತವ. ವಿಭಜನೆಯ ಮಹಾಕ್ಷೋಭೆಯನ್ನು ನಿರ್ವಹಿಸಲು “ಬ್ರಿಟಿಷರ ಪ್ರೀತಿಪಾತ್ರ”ರಂತೂ ಸಂಪೂರ್ಣವಾಗಿ ಅಸಮರ್ಥರಾಗಿದ್ದರು ಮತ್ತು ಗಮನಿಸಿ ನೋಡಿದರೆ, ಅವರ ಎಲ್ಲ ನಿರ್ಧಾರ – ಉದ್ದೇಶಗಳೂ ಅನುಮಾನಕ್ಕೆ ಕಾರಣವಾಗುತ್ತವೆ. ಪ್ರಸ್ತುತ ಬಾಂಗ್ಲಾದೇಶಕ್ಕೆ ಸೇರಿಹೋಗಿರುವ ಇಡೀ ನೋವಾಖಾಲೀ ಪ್ರದೇಶದಲ್ಲಿ ನಡೆದ ಮುಸ್ಲಿಮರ ದೌರ್ಜನ್ಯ, ಅತ್ಯಾಚಾರ, ಜಿಜಿಯಾ ತೆರಿಗೆ ಹಾಕುವುದು, ನರಸಂಹಾರಗಳು ಬೀಭತ್ಸ ಸ್ವರೂಪದವು. ವಿಚಿತ್ರವೆಂದರೆ, ಅಲ್ಲಿನ ಹಿಂದೂಗಳು ರೋಸಿಹೋಗಿ ಪ್ರತ್ಯಾಘಾತ ನೀಡಲು ಉದ್ಯುಕ್ತರಾದಾಗ, ಮಹಾತ್ಮರು ಅಲ್ಲಿಗೇ “ಶಾಂತಿಸ್ಥಾಪನೆಗೆಂದು ಹೋಗಿ” ಹಿಂದೂಗಳ ಕೈಕಟ್ಟಿಹಾಕಿದರು. ಅಂತೆಯೇ, ಬಿಹಾರದ ಮುಸ್ಲಿಮರ ಹಿಂಸೆ ಅತ್ಯಾಚಾರಗಳು ಮಿತಿಮೀರಿ, ಅಲ್ಲಿನ ಹಿಂದೂಗಳೂ ತಿರುಗೇಟು ನೀಡಲು ಪ್ರಾರಂಭಿಸಿದಾಗ ನೆಹರೂ ಅವರು ಬಿಹಾರದ ಮೇಲೆ ಬಾಂಬ್ ಹಾಕುವುದಾಗಿ ಘರ್ಜಿಸಿದರು.

ನಿಜೇತಿಹಾಸದ ಪುಟಗಳನ್ನು ಗಮನಿಸಿ ವಿಶ್ಲೇಷಿಸಿದಾಗ, ಹಿಂದೂ ಸಮಾಜಕ್ಕೆ ತನ್ನ “ಸ್ವಯಂಘೋಷಿತ ಶತ್ರುಗಳು” ಯಾರು, “ಅಘೋಷಿತ ಶತ್ರುಗಳು” ಯಾರು ಎನ್ನುವುದು ಅಂದಿಗೂ ಗೊತ್ತಾಗಿಲ್ಲ, ಇಂದಿಗೂ ಅರ್ಥವಾಗುತ್ತಿಲ್ಲ, ಎನಿಸಿ ವಿಷಾದವೆನಿಸಿಬಿಡುತ್ತದೆ.

ಡಾ|| ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ಜನಸಂಖ್ಯಾ ವಿನಿಮಯವನ್ನು ಕಾಂಗ್ರೆಸ್ ಒಪ್ಪಿದ್ದರೆ ಕೋಟಿಗಟ್ಟಲೆ ಹಿಂದೂಗಳ ಮಾನಹಾನಿ, ಪ್ರಾಣಹಾನಿಗಳನ್ನು ತಪ್ಪಿಸಬಹುದಿತ್ತು. ವಿಚಿತ್ರ ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ವಿಭಜನೆಯ ಮಹಾದುರಂತಕ್ಕೆ ಮೊದಲೇ ಮುಸ್ಲಿಂ ಲೀಗ್ ಸಹ, ಜನಸಂಖ್ಯಾ ವಿನಿಮಯಕ್ಕೆ (Exchange of Population) ಒತ್ತಾಯಿಸಿತ್ತು. ಅಷ್ಟೇ ಅಲ್ಲ, “ಕಾಂಗ್ರೆಸ್ ರಕ್ತಪಾತವನ್ನು ಬಯಸುತ್ತದೆ” ಎಂದು ಟೀಕಿಸಿತ್ತು. “ಡಾನ್” ಪತ್ರಿಕೆಯ 1946ರ ಡಿಸೆಂಬರ್ 3ರ ಸಂಚಿಕೆಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಲಾಹೋರ್ ಮೂಲದ ಈ ಸುದ್ದಿ ಮತ್ತು “Exchange of Population – A most practicable solution” ಮತ್ತು “Congress prefers Bloodshed to Peaceful Settlement” ಎನ್ನುವ ಶೀರ್ಷಿಕೆಗಳು ನಮ್ಮ ದುಃಖವನ್ನು ಮಡುಗಟ್ಟಿಸಿಬಿಡುತ್ತವೆ. ಸ್ವತಃ ಮುಸ್ಲಿಂ ಲೀಗ್ ಈ ವಿನಿಮಯಕ್ಕೆ ಒತ್ತಾಯಿಸಿದರೂ, ನಮ್ಮ ನಾಯಕರು ಬೇಕೆಂದೇ ವಿನಿಮಯವನ್ನು ಅನುಷ್ಠಾನಗೊಳಿಸದೇ, ಎಂತಹ ಅಕಾರ್ಯವನ್ನೆಸಗಿಬಿಟ್ಟರಲ್ಲಾ ಎನಿಸಿಬಿಡುತ್ತದೆ.

ಇದಕ್ಕೂ ಮೊದಲೇ ಇದೇ “ಡಾನ್” ಪತ್ರಿಕೆಯ (ದಿನಾಂಕ 26ನೆಯ ನವೆಂಬರ್ 1946) ಕರಾಚಿ ಮೂಲದ ಸುದ್ದಿಯಲ್ಲಿಯೂ “Exchange of Population Question must be taken up immediately” (ಹಿಂದೂ – ಮುಸ್ಲಿಂ ಜನಸಮುದಾಯದ ವಿನಿಮಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು) ಎನ್ನುವ ಒತ್ತಾಯವಿದೆ. ಆದರೂ ಗಾಂಧೀ – ನೆಹರೂ ಮತ್ತು ಕಾಂಗ್ರೆಸ್ಸಿಗರ ಹೃದಯ ಹಿಂದೂಗಳಿಗಾಗಿ ಕರಗಲೇ ಇಲ್ಲ, ಮರುಗಲೇ ಇಲ್ಲ.

partition

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ಸ್ವತಃ ಮುಸ್ಲಿಂ ಲೀಗ್ ಒತ್ತಾಯಿಸಿದ ಜನಸಂಖ್ಯಾ ವಿನಿಮಯ ಏಕೆ ಆಗಲಿಲ್ಲ? ವಿಭಜನೆಯನ್ನೇ ಒಪ್ಪುವುದಿಲ್ಲ, ಎನ್ನುತ್ತಿದ್ದ ಗಾಂಧೀಜಿಯವರು ಜೂನ್ 1947ರ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಪ್ರತಿಭಟನೆ ಪ್ರತಿರೋಧಗಳನ್ನು ಮಾಡದೆಯೇ ವಿಭಜನೆಯನ್ನು ಏಕೆ ಒಪ್ಪಿಕೊಂಡರು, ಎನ್ನುವುದನ್ನೂ ಪ್ರಶ್ನಿಸಬೇಕಾಗುತ್ತದೆ. ದೇಶವಿಭಜನೆಗೆ, ಹತ್ಯಾಕಾಂಡಕ್ಕೆ ಕಾಂಗ್ರೆಸ್ಸಿಗರು RSS – ಸಾವರ್ಕರ್ – ಹಿಂದೂ ಮಹಾಸಭಾಗಳನ್ನು ಅಂದಿಗೂ ದೂಷಿಸುತ್ತಿದ್ದರು, ಇಂದಿಗೂ ಹೊಣೆ ಮಾಡುತ್ತಾರೆ. ಡಾ।। ಲೋಹಿಯಾ ತಮ್ಮ “GUILTY MEN OF PARTITION” ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಅಂದಿನ ವಿಶೇಷವೆಂದರೆ, ಇವರೀರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ಸಾರ್ವಜನಿಕ ಭಾಷಣಗಳಲ್ಲಿ “ದೇಶ ತುಂಡು ಮಾಡುವ ಮುನ್ನ, ನನ್ನ ದೇಹವನ್ನು ತುಂಡರಿಸಲಿ” ಎನ್ನುತ್ತಿದ್ದ ಗಾಂಧೀಜಿಯವರು ಮಾತ್ರ ಆ ನಿರ್ಣಾಯಕ ಸಭೆಯಲ್ಲಿ ವಿಭಜನೆಯನ್ನು ವಿರೋಧಿಸಲೇ ಇಲ್ಲ. ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದರು, ಡಾ।। ಲೋಹಿಯಾ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

“ಡಾನ್” ಪತ್ರಿಕೆಯ 4ನೆಯ ಡಿಸೆಂಬರ್ 1946ರ ಪತ್ರಿಕೆಯಲ್ಲಿ ಲಕ್ನೋ (ಇಂದಿನ ಉತ್ತರ ಪ್ರದೇಶದ ರಾಜಧಾನಿ) ಮೂಲದ ಸುದ್ದಿಯಲ್ಲಿ ಅಂದಿನ ಸಿಂಧ್ ಪ್ರಾಂತದ ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಹುಸೇನ್ ಹಿದಾಯತುಲ್ಲಾ “ಸಿಂಧ್ ಪ್ರಾಂತದಲ್ಲಿ ನೆಲೆಸುವ ಉತ್ತರ ಪ್ರದೇಶದ ಮುಸ್ಲಿಮರಿಗಾಗಿ ಕೃಷಿ ಭೂಮಿ ನೀಡಲು ವ್ಯವಸ್ಥೆ” ಮಾಡುವುದಾಗಿ ಹೇಳಿದ್ದ. ಇತಿಹಾಸ ಬಹಳ ಬಹಳ ವಿಚಿತ್ರವಾದುದು. ಪಾಕಿಸ್ತಾನದ ಕಲ್ಪನೆ ಅಂಕುರಿಸಿದ್ದೇ ಉತ್ತರಪ್ರದೇಶದಲ್ಲಿ. ಇಂದಿಗೂ ಅಲ್ಲಿ ರಾರಾಜಿಸುತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿಯೇ “ಹಿಂದೂ ಮುಸ್ಲಿಂ ಸಹಬಾಳ್ವೆ ಸಾಧ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶವೇ ಬೇಕು” ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಶತಮಾನದ ಕಾಲ ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದವರು ಮುಸ್ಲಿಂ ಪ್ರತ್ಯೇಕತೆಯನ್ನೇ ಪೋಷಿಸಿಕೊಂಡು ಬಂದರು. ಆದರೂ, ದೆಹಲಿ, ಬಿಹಾರ, ಮುಖ್ಯವಾಗಿ ಉತ್ತರಪ್ರದೇಶ ಮುಂತಾದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಗಾಂಧಿ – ನೆಹರೂ ಜೋಡಿ ಬಿಡಲೇ ಇಲ್ಲ. ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಇಲ್ಲೇ ಉಳಿಸಿಕೊಂಡರು ಮತ್ತು ಸಂವಿಧಾನದ ಕೆಲವು ಅನುಚ್ಛೇದಗಳಲ್ಲಿ (ಅನುಚ್ಛೇದ 29, 30 ಇತ್ಯಾದಿ) ಅಲ್ಪಸಂಖ್ಯಾತರ ಹೆಸರಿನಲ್ಲಿ ಅಪರಿಮಿತ ಹಕ್ಕುಗಳನ್ನೂ ಸೌಲಭ್ಯಗಳನ್ನೂ ನೀಡಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅನೇಕ ಮುಸ್ಲಿಮರು, ಅಲ್ಲಿ ಅವರಿಗೆ “ಸರಿಹೋಗದೆ” ಮತ್ತೆ ಭಾರತಕ್ಕೆ ಹಿಂತಿರುಗಿ ಬಂದಾಗ, ಅವರ ಎಲ್ಲ ಆಸ್ತಿಪಾಸ್ತಿ ಉಳಿಸಿಕೊಟ್ಟರು, ವಾಪಸ್ ಕೊಡಿಸಿದರು. ಎರಡೂ ದೇಶಗಳ ಹಿಂದೂಗಳು ಮಾತ್ರ ತುಂಬಾ ತುಂಬಾ ದುರದೃಷ್ಟಶಾಲಿಗಳು. ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದ ಬಹುಪಾಲು ಎಲ್ಲ ಹಿಂದೂಗಳ ಕಗ್ಗೊಲೆಯಾಯಿತು, ಬಲವಂತದ ಮತಾಂತರವಾಯಿತು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಂತೂ ಅವರ್ಣನೀಯ. ಅಲ್ಲಿ ಅಳಿದುಳಿದ ಸಿಖ್ಖರ ಸ್ಥಿತಿಯೂ ತೀರಾ ಹೀನಾಯ.

ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಈ ಎಲ್ಲ ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಗಾಂಧಿ – ನೆಹರೂ ಹೆಸರಿನಲ್ಲಿ ಬಡಾವಣೆಗಳು, ರಸ್ತೆಗಳು, ವೃತ್ತಗಳು, ಶಾಲೆಗಳು, ಸಂಸ್ಥೆಗಳನ್ನು ಹುಟ್ಟುಹಾಕಿದರೆ, ಸಹಜವಾಗಿ ಇಡೀ ಜನಕೋಟಿ “ಇವರೇ ಈ ದೇಶವನ್ನು ಕಟ್ಟಿ ಬೆಳೆಸಿದವರು, ಇವರೇ ಕಡಿದು ಕಟ್ಟೆಹಾಕಿದವರು” ಎಂದುಕೊಂಡುಬಿಡುತ್ತದೆ. ನಮಗೆಲ್ಲ ಆದುದೂ ಅದೇ! ಇಂದಿಗೂ ಭಾರತೀಯ ಜನಮಾನಸದಲ್ಲಿ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ.

ಪುಣ್ಯಕ್ಕೆ ಈಚಿನ ವರ್ಷಗಳಲ್ಲಿ ಮಹತ್ತ್ವದ ಅನೇಕ ಸತ್ಯಸಂಗತಿಗಳು, ದಾಖಲೆಗಳು ಜನರ ಮುಂದೆ ಕಾಣಿಸಿಕೊಳ್ಳುತ್ತಿವೆ. ಆ ಎಲ್ಲ ಬಹುಪಾಲು ದಾಖಲೆಗಳೂ ನಮ್ಮೊಳಗೆ ಉತ್ಪಾತವನ್ನೇ ಮಾಡುತ್ತಿವೆ, ಮಾಡಿಬಿಡುತ್ತವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading
Advertisement
Virat kohli
ಪ್ರಮುಖ ಸುದ್ದಿ13 seconds ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊಗಳು

Union Minister Pralhad Joshi latest statement about channagiri case
ಕರ್ನಾಟಕ3 mins ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ60 mins ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ1 hour ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ1 hour ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ1 hour ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ2 hours ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

opposition of the girl friend family to the marriage Suicide of a offended lover
ಕ್ರೈಂ2 hours ago

Self Harming: ಮದುವೆಗೆ ಪ್ರೇಯಸಿ ಕುಟುಂಬಸ್ಥರ ವಿರೋಧ; ನೊಂದ ಪ್ರಿಯಕರ ಆತ್ಮಹತ್ಯೆ

International Suryamitra Annual Award Ceremony on 27th May
ಕರ್ನಾಟಕ2 hours ago

Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

Engineers suspended
ಕರ್ನಾಟಕ2 hours ago

Engineers Suspended: ಸರ್ಕಾರಿ ಐಬಿಯಲ್ಲಿ ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳ ಅಮಾನತು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌