ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ - Vistara News

ಅಂಕಣ

ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ

ಸಂವಹನದ ಮೂಲ ಶಕ್ತಿ ವ್ಯಕ್ತಿ. ಇಂದು ನಾವು ವಿದ್ಯುತ್ ಅಲೆಗಳ ಮೂಲಕ ಶಬ್ದವನ್ನು ಕೇಳಿಸಿಕೊಳ್ಳುತ್ತೇವೆ. ಕೇಳುಗರ ಅಥವಾ ಓದುವವರ ಪ್ರತಿಕ್ರಿಯೆಗಳು ಬರೆದವರಿಗೆ ತಲುಪುವುದಿಲ್ಲ. ಮಾನವ ಸಂವಹನವು ಮಾನವ ವಿಹೀನವಾಗಿದೆ. ಹೀಗಾಗಿ ಎಲ್ಲವೂ ಮಾಹಿತಿಯ ಪ್ರಸಾರದ ಹಂತದಲ್ಲಿ ಮಾತ್ರ ನಿಂತಿವೆ.

VISTARANEWS.COM


on

life circle
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
life circle

ದೈವಿಕ ಮನಸ್ಸಿನಲ್ಲಿ ಪಂಚಭೂತಗಳು ಬಹಳ ಸೂಕ್ಷ್ಮ ಮತ್ತು ಅದೃಶ್ಯ ಧರಾತಲದಲ್ಲಿ ಇರುತ್ತವೆ. ಇವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ನಮ್ಮ ಹಣೆಬರಹ/ವಿಧಿಯ ನಿಯಂತ್ರಕರಾಗಿರುವುದರಿಂದ, ಆಸೆಗಳನ್ನು ಸ್ವೀಕಾರ ಅಥವಾ ತಿರಸ್ಕಾರ ಮಾಡಲಾಗುತ್ತದೆ. ನಮ್ಮ ಬಿತ್ತನೆಗೆ ಅನುಗುಣವಾಗಿ ಕೊಯ್ಲು ಇರುತ್ತದೆ. ನಮ್ಮ ಜೀವನದ ಯಾವುದಾದರೂ ಒಂದು ಗುರಿಯನ್ನು ನಿಗದಿಪಡಿಸಿದರೆ, ಈ ಎರಡೂ ಮನಸ್ಸುಗಳಿಂದ ಒಂದೇ ಸಮಯದಲ್ಲಿ ಆಸೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ ಮತ್ತು ಅಂತಿಮವಾಗಿ ಒಂದಾಗುತ್ತವೆ. ಬಯಕೆ, ಕ್ರಿಯೆ ಮತ್ತು ಪ್ರಯತ್ನಗಳು ಸಂಪ್ರೇಷಣದಲ್ಲಿ ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. ಇಲ್ಲಿ ಒಂಟಿತನವಿಲ್ಲ. ಆದ್ದರಿಂದ, ಸಂಪ್ರೇಷಣವು ಮನ, ಪ್ರಾಣ, ಮತ್ತು ವಾಕ್ಕಿನ ಸಮ್ಮಿಲಿತ ರೂಪವಾಗಿದೆ. ಇದು ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ.

ಅಂದರೆ, ಅವರ ದೇಹ, ಆಲೋಚನೆಗಳು, ಭಾವನೆಗಳು, ಅನುಭೂತಿಗಳು ಮತ್ತು ಅವರ ಆತ್ಮ. ಆತ್ಮೀಯ ಧರಾತಲವಿಲ್ಲದೆ ಸಂಪ್ರೇಷಣವು ನಡೆಯುವುದಿಲ್ಲ. ಭಾವನೆಗಳು ಮತ್ತು ಆಸೆಗಳನ್ನು ವ್ಯಕ್ತಪಡಿಸುವುದು ಸಂಪ್ರೇಷಣದ ಮೂಲಕ. ಮನಸ್ಸು ಅದರ ಅವಿಭಾಜ್ಯ ಅಂಗವಾಗಿದೆ. ಇಂದು ಟಿ.ವಿ, ರೇಡಿಯೋ, ಜಾಲತಾಣಗಳ ದುರ್ಬಳಕೆಯಿಂದ ಸಂಪ್ರೇಷಣವು ಹಾಳಾಗಿದೆ. ಭಾಷೆ ಮಾತ್ರ ಉಳಿದಿದೆ, ವ್ಯಕ್ತಿ ಕಣ್ಮರೆಯಾಗಿದ್ದಾನೆ. ಬರಹಗಾರರ ಮತ್ತು ಓದುಗರ ನಡುವೆ ಪರಕೀಯತೆಯ ಗೋಡೆಯನ್ನು ರಚಿಸಲಾಗಿದೆ. ಪ್ರಶ್ನೆ ಉದ್ಭವಿಸುತ್ತದೆ, ಯಾರು ಯಾರಿಗಾಗಿ ಸಂವಹನೆ ನಡೆಸುತ್ತಿದ್ದಾರೆ? ವ್ಯಕ್ತಿಗಳು ಪ್ರತ್ಯಕ್ಷವಾಗಿ ಎಲ್ಲೂ ಕಾಣುವುದಿಲ್ಲ.

ಸಂವಹನದ ಮೂಲ ಶಕ್ತಿ ವ್ಯಕ್ತಿ. ಇದು ಮಾನವೀಯ ಧರಾತಲದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಪರಿಣಾಮಕಾರಿತ್ವವನ್ನು ಅದರ ಮೇಲಿನ ಪ್ರತಿಕ್ರಿಯೆಗಳಿಂದ ಪರೀಕ್ಷಿಸಲಾಗುತ್ತದೆ. ಇಂದು ನಾವು ವಿದ್ಯುತ್ ಅಲೆಗಳ ಮೂಲಕ ಶಬ್ದವನ್ನು ಕೇಳಿಸಿಕೊಳ್ಳುತ್ತೇವೆ. ಕೇಳುಗರ ಅಥವಾ ಓದುವವರ ಪ್ರತಿಕ್ರಿಯೆಗಳು ವಾಚಕರಿಗೆ ಅಥವಾ ಬರಹಗಾರರಿಗೆ ತಲುಪುವುದಿಲ್ಲ. ಮಾನವ ಸಂವಹನವು ಮಾನವ ವಿಹೀನವಾಗಿದೆ. ಹೀಗಾಗಿ, ಎಲ್ಲಾ ವಿಷಯಗಳು, ಎಲ್ಲಾ ಪ್ರಕರಣಗಳು, ಎಲ್ಲಾ ಭಾಷೆಗಳು ಮಾಹಿತಿಯ ಪ್ರಸಾರದ ಶೈಲಿಯಲ್ಲಿ ಮಾತ್ರ ಬಂದು ನಿಂತಿವೆ. ಸಂಪ್ರೇಷಣದ ವ್ಯಾಖ್ಯಾನವು ಇದಕ್ಕೆ ಅನ್ವಯಿಸುವುದಿಲ್ಲ. ಈಗ ಜನರು ನಿಧಾನವಾಗಿ ಇದರ ಬಗ್ಗೆ ಜಾಗೃತರಾಗುತ್ತಿದ್ದಾರೆ. ಈಗ ವಿನಿಮಯದ ಪಾತ್ರ – ʻಇಂಟರಾಕ್ಟೀವ್ ಮಾಧ್ಯಮ’ ಎಂಬ ಹೊಸ ಅಭಿಯಾನ ಪ್ರಾರಂಭವಾಗಿದೆ. ಮಾಧ್ಯಮಗಳು ಯಶಸ್ಸಿಗೆ ʻಇಂಟರಾಕ್ಟಿವ್’ ಆಗಿರಬೇಕು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಎಲ್ಲರೂ ಹೇಳಲು ಪ್ರಾರಂಭಿಸಿದ್ದಾರೆ.

ಇಚ್ಛೆಯ ಸ್ಥಾನವೆಂದರೆ ಮನಸ್ಸು. ಮನಸ್ಸಿನ ಭಾರ ಹೆಚ್ಚಾದಂತೆ ಆಸೆಗಳೂ ಹೆಚ್ಚಾಗುತ್ತವೆ. ಆಸೆಗಳ ಮೇಲೆ ನಮಗೆ ನಿಯಂತ್ರಣವಿಲ್ಲ, ನಾವು ಅವುಗಳನ್ನು ರಚಿಸಲು ಸಾಧ್ಯವಿಲ್ಲ. ನಾವು ಅವುಗಳನ್ನು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಸಾಧ್ಯವಿಲ್ಲ. ನಾವು ಒಪ್ಪಿಕೊಂಡರೆ ಅವುಗಳ ಅಭಿವ್ಯಕ್ತಿಗೆ ಹಲವು ವಿಧಾನಗಳಿವೆ. ಉದಾಹರಣೆಗೆ ದೇಹ, ಶಬ್ದ, ಬುದ್ಧಿ ಇತ್ಯಾದಿಗಳನ್ನು ಶೋಧಿಸಬೇಕಾಗುತ್ತದೆ. ನಾವು ಅವುಗಳನ್ನು ನಿಗ್ರಹಿಸಿದರೆ, ಅವು ಅತೃಪ್ತರಾಗುತ್ತವೆ ಮತ್ತು ತನ್ನೊಳಗೊಳಗೆ ವಿಭಿನ್ನ ರೂಪಗಳಲ್ಲಿ ಪ್ರಕಟವಾಗಲು ಶುರುವಾಗುತ್ತವೆ.

ಸಂವಹನದ ಪ್ರಕ್ರಿಯೆಯು ಗಂಡಾಗಲೀ ಹೆಣ್ಣಾಗಲೀ, ಒಬ್ಬ ವ್ಯಕ್ತಿಯಂತೆಯೇ ಸಂಕೀರ್ಣವಾಗಿದೆ. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಮಾನವರನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವರ್ಗವು ತನ್ನದೇ ಆದ ಸಂಪ್ರೇಷಣಾ ವಿಧಾನ ಮತ್ತು ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲವು ವರ್ಗಗಳನ್ನು ಇಲ್ಲಿ ಉಲ್ಲೇಖಿಸಲು ಪ್ರಯತ್ನಿಸುತ್ತೇವೆ. ಇದರೊಂದಿಗೆ, ವ್ಯಕ್ತಿಯ ಹಿಂದಿನ ಜನ್ಮದ ಸಂಸ್ಕಾರಗಳು ಮತ್ತು ಪ್ರಸ್ತುತ ಕೌಟುಂಬಿಕ ಸಂಪ್ರದಾಯಗಳು, ಸಾಮಾಜಿಕ ಕಟ್ಟಲೆಗಳು, ತಿನ್ನುವ ಆಹಾರ, ವೈಯಕ್ತಿಕ ಪರಿಸರ, ವಯಸ್ಸು, ಲಿಂಗ, ಅಹಂಕಾರ, ಪ್ರಾಮಾಣಿಕತೆ ಮತ್ತು ಕೊನೆಗೆ ಸಂವಹನದಲ್ಲಿ ಪ್ರತಿಫಲಿಸುವ ದೃಷ್ಟಿ ಇತ್ಯಾದಿ ಹಲವು ಕಾರಣಗಳಿವೆ.

ಪರಿಣಾಮಕಾರಿ ಸಂವಹನವು ಇನ್ನೊಬ್ಬ ವ್ಯಕ್ತಿಯ ಆತ್ಮವನ್ನು ತಲುಪುವ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಮತ್ತು ಸಂವಹನಕಾರನಂತೆಯೇ ಸಂಕೀರ್ಣವಾಗಿರುತ್ತದೆ. ಇಲ್ಲಿ ಸ್ವೀಕರಿಸುವವರ ಮನಸ್ಸನ್ನು ಸ್ಪರ್ಶಿಸುವ ಶಕ್ತಿಯನ್ನು ಹೊಂದಿರುವ ಕಲೆ ಎಂದು ಸಂವಹನವನ್ನು ಅರ್ಥಮಾಡಿಕೊಳ್ಳುವುದು ಸೂಕ್ತವಾಗಿರುತ್ತದೆ. ಇದರಲ್ಲಿ, ಆ ವ್ಯಕ್ತಿಯು ಸಂದೇಶವನ್ನು ಸ್ವೀಕರಿಸಲು ಮತ್ತು ಅದರಂತೆ ವರ್ತಿಸುವುದು ಸಹ ಅಗತ್ಯವಾಗಿದೆ. ಸ್ವೀಕರಿಸುವವರು ಪ್ರತಿಕ್ರಿಯಿಸದಿದ್ದರೆ, ಸಂವಹನವು ನಿಷ್ಪರಿಣಾಮಕಾರಿಯಾಗಿದೆ ಎಂದರ್ಥ.

ಇಲ್ಲಿ ನಮ್ಮ ಮುಂದೆ ಎರಡು ಪದಗಳಿವೆ – ಮಾನವ ಮತ್ತು ಸಂವಹನ. ನಾವು ಈ ಎರಡನ್ನು ಸರಿಯಾಗಿ ವ್ಯಾಖ್ಯಾನಿಸಿದರೆ, ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ಯಾವುದೇ ವಸ್ತು ಅಥವಾ ವ್ಯಕ್ತಿ ಅಸ್ತಿತ್ವದಲ್ಲಿದ್ದರೆ ಅವರು ನಿರಂತರವಾಗಿ ಪರಸ್ಪರ ಸಂವಹನ ನಡೆಸುತ್ತಾರೆ. ಯಾವುದೇ ಸಾಮಾನ್ಯ ಶಕ್ತಿಯೊಂದಿಗೆ ಅಲ್ಲ, ಬದಲು ಉನ್ನತ ಮಟ್ಟದ ಶಕ್ತಿಯೊಂದಿಗೆ. ನಾವು ನಿದ್ರಿಸುತ್ತಲೇ ಇರುವಾಗಲೂ ನಮ್ಮೊಳಗೆ ಕೆಲವು ಕ್ರಿಯೆಗಳು ನಡೆಯುತ್ತಿರುತ್ತವೆ. ಇದು ಹೃದಯ ಬಡಿತ ಅಥವಾ ಉಸಿರಾಟ ಮಾತ್ರವಲ್ಲ, ಇವುಗಳಲ್ಲದೆ ಬೇರೆ ಸ್ಥಿತಿಗಳೂ ಇವೆ. ಯಾವುದೇ ಮನುಷ್ಯ ಒಂದೇ ತತ್ವವಲ್ಲ. ಮನುಷ್ಯರು ಘನ, ದ್ರವಗಳು, ಅನಿಲಗಳು ಮತ್ತು ಅತ್ಯಂತ ಸೂಕ್ಷ್ಮ ತತ್ವಗಳ ಸಂಯೋಜನೆಯಿಂದ ಮಾಡಲ್ಪಟ್ಟಿದ್ದಾರೆ. ಈ ಸಂರಚನೆಯೇ ಸಂಪ್ರೇಷಣದ ಸಾಧನವಾಗಿದೆ. ಏನನ್ನು ತಿಳಿಸಲಾಗುತ್ತದೆಯೋ ಅದು ಇದರೊಳಗೆ ಆಳವಾಗಿ ತಲುಪುತ್ತದೆ. ಸಂಪ್ರೇಷಿತ ಸಂವಾದವು ವ್ಯಕ್ತಿಯ ಒಳಗಿನಿಂದಲೇ ಸ್ವೀಕಾರ ಅಥವಾ ತಿರಸ್ಕಾರವಾಗುತ್ತದೆ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು

ಈ ಆಂತರಿಕ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ, ಈ ಆಂತರಿಕವು ವಾಯವೀಯವಾಗಿದೆ. ಈ ಆಂತರಿಕವು ಭೌತಿಕವಲ್ಲದ ಸೂಕ್ಷ್ಮ ದೇಹ. ಈ ಆಂತರಿಕವು ಮಾನಸಿಕವಾಗಿದೆ. ಭಾರತೀಯ ಸಾಹಿತ್ಯದಲ್ಲಿ, ಈ ಆಂತರಿಕವನ್ನು ಮೂರು ರೂಪಗಳಲ್ಲಿ ಪರಿಗಣಿಸಲಾಗಿದೆ – ಮನಸ್ಸು, ಬುದ್ಧಿ ಮತ್ತು ಅಹಂ. ಪ್ರತಿಯೊಂದು ಸಂಪ್ರೇಷಣದಲ್ಲೂ ಈ ಮೂರು ಪರಸ್ಪರ ಸಂಬಂಧ ಹೊಂದಿವೆ. ನೀವು ಒಂದನ್ನು ದೂರವಿಟ್ಟರೆ, ಸಂವಹನವು ಪೂರ್ಣಗೊಳ್ಳುವುದಿಲ್ಲ. ಏಕೆಂದರೆ ಯಾವುದೇ ಸಂದೇಶವು ಭಾಷೆಯ ಒಂದು ಪುಂಜ. ಭಾಷೆಯು ಶಬ್ದಗಳ, ಹಾವ-ಭಾವಗಳ ಅಥವಾ ಮೌನದ್ದೂ ಆಗಿರಬಹುದು. ಸಂದೇಶವು ಮಾಹಿತಿಯಾಗಿದೆ, ಏಕಮುಖ ಮಾಹಿತಿಯಾಗಿದೆ. ಆದರೆ, ಸಂವಹನವು ದ್ವಿಮುಖ ಪ್ರಕ್ರಿಯೆಯಾಗಿದೆ. ನಾನು ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರೆ ಅದು ಪೂರ್ಣಗೊಳ್ಳುವುದಿಲ್ಲ. ಸ್ವೀಕರಿಸುವವರು ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಲು ಅಥವಾ ಖಚಿತಪಡಿಸಲು ಸಹ ಇದು ಅಗತ್ಯವಾಗಿರುತ್ತದೆ. ಇದರರ್ಥ ಸ್ವೀಕರಿಸುವವರ ಉಪಸ್ಥಿತಿಯು ಸಂವಹನದಲ್ಲಿ ಅನಿವಾರ್ಯ ಶರತ್ತು.

ದೇಹವು ಸಂವಹನವನ್ನು ಸ್ವೀಕರಿಸುವುದಿಲ್ಲ. ಇದು ಕೇವಲ ಒಂದು ಸಾಧನವಾಗಿದೆ. ಉದಾಹರಣೆಗೆ ದೂರವಾಣಿ ಸಾಧನವು ಮಾಹಿತಿಯನ್ನು ಸ್ವೀಕರಿಸುತ್ತದೆ, ಅದನ್ನು ಅನುವಾದಿಸುತ್ತದೆ ಮತ್ತು ಅದನ್ನು ʻರಿಸೀವರ್’ಗೆ ರವಾನಿಸುತ್ತದೆ. ದೇಹದ ಕಿವಿ, ಕಣ್ಣು, ಚರ್ಮ, ಮೂಗು ಇತ್ಯಾದಿಗಳೆಲ್ಲವೂ ಸಂದೇಶವನ್ನು ಅನುವಾದಿಸಬೇಕು. ಇವೆಲ್ಲ ಉಪಕರಣಗಳು. ಈ ಸಂದೇಶವು ಸೂಕ್ತವೇ? ಈ ಸಂದೇಶ ನನ್ನ ಯೋಗಕ್ಷೇಮಕ್ಕಾಗಿಯೇ? ಇದು ನನ್ನ ಹಿತದಲ್ಲಿದೆಯೇ? ಇಂತಹ ಹಲವು ಪ್ರಶ್ನೆಗಳ ಪಟ್ಟಿ ಮೊದಲೇ ಮನಸ್ಸಿನಲ್ಲಿ ಸಿದ್ಧವಾಗಿರುತ್ತದೆ. ಪ್ರತಿಯೊಂದು ಸಂದೇಶವೂ ಈ ಪಟ್ಟಿಯ ಮೂಲಕ ಹಾದು ಹೋಗಬೇಕು. ಅಂತಹ ಕಾರ್ಯಕ್ರಮಗಳು ನಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು, ನಮ್ಮ ಪೂರ್ವಾಗ್ರಹಗಳು, ಆಸೆಗಳು ಮತ್ತು ಏಷಣಗಳು, ಅಥವಾ ನಮ್ಮ ಸ್ವಂತ ಹಿಂದಿನ ಅನುಭವಗಳಿಗೆ ಅನುಗುಣವಾಗಿ ಹಂತಹಂತವಾಗಿ ಮಾರ್ಪಡಿಸಲ್ಪಡುತ್ತವೆ.

ಸಂದೇಶವು ಅನುಕೂಲಕರವಾಗಿದ್ದರೆ, ಅದನ್ನು ಸುಲಭವಾಗಿ ಸ್ವೀಕರಿಸಲಾಗುತ್ತದೆ. ಪ್ರತಿ ಸಂದೇಶವು ಸ್ವೀಕರಿಸುವವರಿಗೆ ಸಂಬಂಧಿಸಿದ ಮೌಲ್ಯಗಳು, ಭಾವನೆಗಳು ಮತ್ತು ಭಾವನಾತ್ಮಕ ಸ್ಪರ್ಶಗಳಿಂದ ರಚಿಸಲಾದ ಆದ್ಯತೆಗಳ ಸಿಹಿ ಮುಸುಕಿನಿಂದ ಆವರಿಸಲ್ಪಟ್ಟಿರುತ್ತವೆ. ಯಶಸ್ವಿ ಮತ್ತು ಸಕಾರಾತ್ಮಕ ಸಂವಹನಕ್ಕಾಗಿ, ಸಂದೇಶವು ಅಂತಿಮವಾಗಿ ತಲುಪುವವರೆಗೆ ಮತ್ತು ಸ್ವೀಕರಿಸುವವರಿಂದ ಸ್ವೀಕರಿಸುವವರೆಗೆ ತುಂಬಾ ಆಸಕ್ತಿದಾಯಕವಾಗಿರಬೇಕು.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ | ಕಡುಗತ್ತಲೆಯು ಸೃಷ್ಟಿ ಸ್ಥಿತಿ ಲಯಗಳ ತಾಯಿ ಹೇಗೆ?

ಈ ಗ್ರಹಿಸುವವನು ʻನಾನು’ ಸ್ವತಃ ವ್ಯಕ್ತಿ. ವ್ಯಕ್ತಿಯ ದೇಹ, ಮನಸ್ಸು ಮತ್ತು ಹೃದಯ (ಭೌತಿಕ ರೂಪದಲ್ಲಲ್ಲ) ಕೇವಲ ಸಾಧನಗಳು, ಒಂದೋ ಯೋಜಕರು ಅಥವಾ ಸಂವಹನದ ಉಪಕರಣಗಳು. ಹೀಗಾಗಿ ʻನಾನೇ’ ಸಂಪ್ರೇಷಕ, ʻನಾನೇ’ ಗ್ರಹಿಸುವವನು. ಪ್ರತಿಯೊಬ್ಬರೂ ಈ ಕೆಳಗಿನ ಧರಾತಲಗಳಲ್ಲಿ ವಾಸಿಸುತ್ತಾರೆ. ಪ್ರತಿಯೊಂದು ಧರಾತಲಕ್ಕೆ ತನ್ನದೇ ಆದ ಸಂಪ್ರೇಷಣ-ಮಾನದಂಡ ಇರುತ್ತದೆ. ಅದನ್ನು ಅದೇ ಧರಾತಲದಲ್ಲಿ ಗ್ರಹಿಸುವವರು ಸ್ವೀಕರಿಸುತ್ತಾರೆಯೇ ಹೊರತು ಅದಕ್ಕಿಂತ ಮೇಲಿನ ಅಥವಾ ಕೆಳಗಿನ ಧರಾತಲದಲ್ಲಲ್ಲ. ಹೀಗೆ ‘ನಾನು’ ಮಾತ್ರ ಸಂಪ್ರೇಷಣ ನಡೆಸಿದಾಗ ಅದು ‘ನನ್ನವರೆಗೆ’ ತಲುಪುತ್ತದೆ.

life

ಈ ʻನಾನು’ ಎಂಬುದರ ಮೂಲಕ ಬೌದ್ಧಿಕ ಸಂದೇಶಗಳ ವಿಶ್ಲೇಷಣೆಯನ್ನು ಕೇವಲ ಬುದ್ಧಿಯ ಮಟ್ಟದಲ್ಲಿ ಮಾತ್ರ ಮಾಡಲಾಗುತ್ತದೆ, ಅದನ್ನು ಮೀರಿ ಅಲ್ಲ. ಸ್ವೀಕರಿಸುವವರ ಬುದ್ಧಿಯು ಅದನ್ನು ಒಪ್ಪಿಕೊಳ್ಳಬಹುದೇ ಅಥವಾ ಇಲ್ಲವೇ? ಗೊತ್ತಿಲ್ಲ. ಅಂತೆಯೇ, ಭಾವನೆಗಳನ್ನು ಭಾವನಾತ್ಮಕ ಸಮತಲದಲ್ಲಿ ಮಾತ್ರ ಸಂವಹನ ಮಾಡಬಹುದು. ದೇಹ ಭಾಷೆಯ ವಿಷಯವೂ ಅದೇ, ಅದು ದೇಹವನ್ನು ಮೀರಿ ಪ್ರಯಾಣಿಸಲು ಸಾಧ್ಯವಿಲ್ಲ. ಹಾಗಾಗಿ ʻನಾನು’ ಮಾತ್ರ ಸಂವಹನ ನಡೆಸಿದಾಗ ಅದು ʻನನ್ನನ್ನು’ ತಲುಪುತ್ತದೆ. ಅಹಂ ಅಥವಾ ಅಹಂಕಾರ ಎಂದೂ ಕರೆಯಲ್ಪಡುವ ʻನಾನು’ ಪದವು ಧರಾತಲದೊಂದಿಗೆ ಸಂಪರ್ಕಗೊಂಡಾಗ ಮಾತ್ರ ಸಂಪ್ರೇಷಣವು ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ನಮಗೆ ಸೂಚನೆ, ಅದರ ಔಚಿತ್ಯ, ಭಾವನೆಗಳು, ಭಾಷೆ ಮತ್ತು ಉಪಕರಣಗಳು ಬೇಕಾಗುತ್ತವೆ. ಅವೆಲ್ಲವೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಕೇವಲ ಮಾಹಿತಿಯ ಪ್ರಸಾರವು ಸಂಪ್ರೇಷಣವಲ್ಲ. ಸಂಪೂರ್ಣ ಸಂಪ್ರೇಷಣದಲ್ಲಿ ವ್ಯಕ್ತಿತ್ವದ ಎಲ್ಲಾ ನಾಲ್ಕು ಧರಾತಲಗಳು- ದೇಹ, ಬುದ್ಧಿ, ಮನಸ್ಸು ಮತ್ತು ಆತ್ಮ, ಒಟ್ಟಿಗೆ ಕೊಡುಗೆ ನೀಡುತ್ತವೆ.

ಆದರೆ, ಇಂದು ಈ ನಾಲ್ಕು ಸ್ತರಗಳ ವ್ಯಕ್ತಿತ್ವವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಹೇಗೆ, ಅದನ್ನು ಸಂಪೂರ್ಣವಾಗಿ ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ ಎಂಬುದು ಸವಾಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಕೇವಲ ಎರಡನ್ನು ಪಕ್ವಗೊಳಿಸುತ್ತಿದೆ. ಅವುಗಳೆಂದರೆ- ಸ್ಥೂಲವಾಗಿ ದೈಹಿಕ ಆರೋಗ್ಯ ಮತ್ತು ಮಾಹಿತಿಯನ್ನು ವಿಶ್ಲೇಷಿಸುವ ಬುದ್ಧಿವಂತಿಕೆಯ ಸಾಮರ್ಥ್ಯದ ಬೆಳವಣಿಗೆ. ಇತರ ಎರಡು ಧರಾತಲಗಳಾದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಎಂಬವನ್ನು ಪ್ರಪಾತಕ್ಕೆ ಬೀಳಲೆಂದೇ ತಳ್ಳಿಬಿಟ್ಟಿದ್ದಾರೆ.

ಸಂಪ್ರೇಷಣದಲ್ಲೂ ಅನೇಕ ಧರಾತಲಗಳಿವೆ. ಅವುಗಳಲ್ಲಿ ಪ್ರಮುಖವಾದವು ತನ್ನೊಂದಿಗೆ ಮತ್ತು ತನ್ನ ದೇಹದೊಂದಿಗೆ ಸಂವಹನ ನಡೆಸುವುದು. ನಮ್ಮ ದೇಹ, ಮನಸ್ಸು ಮತ್ತು ಆಂತರಿಕ ಆತ್ಮದಿಂದ ನಾವು ಸ್ವೀಕರಿಸುವ ಸಂದೇಶಗಳು ಮತ್ತು ನಾವು ಮುಂದಕ್ಕೆ ಕಳುಹಿಸುವ ಸಂದೇಶಗಳು ಸಮಾಜದೊಂದಿಗಿನ ನಮ್ಮ ಬಾಹ್ಯ ಸಂವಹನದ ಅಡಿಪಾಯದ ಕಲ್ಲುಗಳಾಗಿವೆ. ಈ ಸಂಪ್ರೇಷಣ ಪದದ ಬಗ್ಗೆ ನಾವು ಎಷ್ಟು ಗಂಭೀರವಾಗಿರುತ್ತೇವೆ ಎಂಬುದರಿಂದಲೇ ಅದರ ಪರೀಕ್ಷೆಯಾಗುತ್ತದೆ. ದೇಹವು ಸಂದೇಶಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ದೂರವಾಣಿಯಾಗಿದೆ. ಇದು ಸಂದೇಶದ ಅಗತ್ಯಕ್ಕೆ ಅನುಗುಣವಾಗಿ ಮಾತನಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ, ಆದರೆ ಅದೇ ಸಮಯದಲ್ಲಿ ಮೌನವಾಗಿರುತ್ತದೆ. ದೇಹವು ಸಂದೇಶವಾಹಕ ಅಥವಾ ಸಂದೇಶವನ್ನು ಸ್ವೀಕರಿಸುವವನೂ ಅಲ್ಲ. ದೇಹದ ಕ್ರಿಯೆಗಳು ಮತ್ತು ಅವುಗಳೊಂದಿಗಿನ ಸಂಭಾಷಣೆಯ ವಿಷಯ, ಸ್ವರ ಇತ್ಯಾದಿಗಳನ್ನು ಮೆದುಳಿನಿಂದ, ದೇಹದ ಬೌದ್ಧಿಕ ಅಂಗಗಳಿಂದ ಅಂದರೆ ದೇಹದ ಗಣಕದಿಂದ ನೋಡಲಾಗುತ್ತದೆ, ಕೇಳಿಸಿಕೊಳ್ಳಲಾಗುತ್ತದೆ, ವಿಶ್ಲೇಷಿಸಲಾಗುತ್ತದೆ ಮತ್ತು ಅಂತಿಮವಾಗಿ ಸಂಕೇತಗಳನ್ನು ವಾಚಿಸಲಾಗುತ್ತದೆ ಅಥವಾ ಸ್ವೀಕರಿಸಿದ ಸಂದೇಶವಾಗಿ ಅನುವಾದಿಸಲಾಗುತ್ತದೆ; ಆದರೆ ಅಂತಹ ಯಾವುದೇ ಕ್ರಮವು ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಪ್ರತಿಯೊಂದು ಸಂದೇಶವು ಭೌತಿಕ ಭಾಗ, ಬೌದ್ಧಿಕ ಅರ್ಥ ಮತ್ತು ಭಾವನಾತ್ಮಕ ನಿವೇಶ ಹೊಂದಿರುತ್ತದೆ. ಆದ್ದರಿಂದ ಅದೇ ಸಮಯದಲ್ಲಿ ಆ ಸಂದೇಶವು ಅದರ ಪೂರ್ಣ ಉದ್ದೇಶ/ಗುರಿಯೊಂದಿಗೆ ಆತ್ಮವನ್ನು ತಲುಪುವುದೂ ಸಹ ಅವಶ್ಯಕ. ಈ ಭಾವನೆಗಳು ಮತ್ತು ಉದ್ದೇಶಗಳು ಸಾಮಾನ್ಯವಾಗಿ ಮನಸ್ಸಿನ ಮೂಲಕ ಮಾತ್ರ ಆತ್ಮವನ್ನು ತಲುಪುತ್ತವೆ. ಆಂಗ್ಲದಲ್ಲಿ ಇದಕ್ಕೆ ಬೇರೆ ಪದ ಇಲ್ಲದ ಕಾರಣ ತಲೆಗೆ ಸಂಬಂಧಿಸಿದಂತೆ ಮೈಂಡ್ ಎನ್ನಲಾಗುತ್ತದೆ. ಭಾರತೀಯ ದರ್ಶನದಲ್ಲಿ ಇದು ʻಮನ’ ಅಥವಾ ʻಮಾನಸ’ ಆಗಿದೆ. ಇದನ್ನು ಕಾಮನೆಗಳು, ಭಾವನೆಗಳು ಮತ್ತು ಸಂವಹನದ ಉಗ್ರಾಣವೆಂದು ಪರಿಗಣಿಸಲಾಗಿದೆ. ಬುದ್ಧಿಯಿಂದ ರವಾನೆಯಾಗುವ ಯಾವುದೇ ಸಂದೇಶವು ಮನಸ್ಸನ್ನು ತಲುಪುವುದಿಲ್ಲ, ಅದು ಸ್ವೀಕರಿಸುವವರ ಮಸ್ತಿಷ್ಕ ಅಥವಾ ಬುದ್ಧಿಯನ್ನು ಮಾತ್ರ ತಲುಪುತ್ತದೆ. ವಾದಗಳು, ಸ್ವೀಕಾರ-ತಿರಸ್ಕಾರ ಇತ್ಯಾದಿಗಳು ಸ್ವೀಕರಿಸುವವರ ಮನಸ್ಸಿನಲ್ಲಿ ಸುಲಭವಾಗಿ ಉದ್ಭವಿಸಬಹುದು. ಜೀವನದಲ್ಲಿ ಅನೇಕ ರೀತಿಯ ಅಂತರ್ದ್ವಂದ್ವಗಳಿಗೆ ಬುದ್ಧಿವಂತಿಕೆಯು ಮುಖ್ಯ ಕಾರಣವೆಂದು ಸಾಬೀತಾಗುತ್ತದೆ. ಈ ಬುದ್ಧಿಶಕ್ತಿಯ ಮೂಲಕ ನಮ್ಮ ಅಹಂಕಾರವನ್ನು ಹೆಚ್ಚಾಗಿ ವ್ಯಕ್ತಪಡಿಸಲಾಗುತ್ತದೆ. ಬುದ್ಧಿಯು ಸಾಮಾನ್ಯವಾಗಿ ವಿರುದ್ಧವಾದ ಅಭಿಪ್ರಾಯಗಳನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಪ್ರಪಂಚದ ಹೆಚ್ಚಿನ ಬುದ್ಧಿಜೀವಿಗಳು ಈ ವರ್ಗಕ್ಕೆ ಸೇರುತ್ತಾರೆ. ಆದರೆ ಇದಕ್ಕೆ ಅಪವಾದವಾಗಿರುವವರು ಋಷಿಗಳು ಮತ್ತು ವಿಜ್ಞಾನಿಗಳ ಎತ್ತರವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಕತ್ತಲೆಗೆ ಕರೆದೊಯ್ಯುವುದೇ ಬೆಳಕು?

ಮತ್ತೊಂದೆಡೆ, ಮನಸ್ಸು ಆತ್ಮಕ್ಕೆ ಎಲ್ಲಕ್ಕಿಂತ ಹತ್ತಿರದಲ್ಲಿದೆ. ಇದು ಭಾವನೆಗಳು, ಆಲೋಚನೆಗಳು ಇತ್ಯಾದಿಗಳನ್ನು ಸ್ವೀಕರಿಸುವವರ ಮನಸ್ಸಿಗೆ ರವಾನಿಸುತ್ತದೆ. ಈ ಭಾವನೆಗಳು ಆ ಬೌದ್ಧಿಕ ಸಂದೇಶದ ಮೇಲೆ ಗೆಲುವು ಸಾಧಿಸುತ್ತವೆ. ಸ್ವೀಕರಿಸುವವರಿಂದ ಸಂದೇಶವನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಈ ಭಾವನೆಗಳು ಮುಖ್ಯ ಆಧಾರವಾಗಿದೆ. ಈ ಭಾವನೆಗಳ ಬೆಂಬಲವಿಲ್ಲದೆ ಯಾವುದೇ ಸಂದೇಶವು ಪೂರ್ಣಗೊಳ್ಳುವುದಿಲ್ಲ. ಇದು ಕೇವಲ ಯಾಂತ್ರಿಕವಾದದ್ದೇ ಹೊರತು ಮಾನವೀಯವಲ್ಲ; ಆದರೆ ಅದರಲ್ಲಿ ಮಾನವ ಹೃದಯವೂ ಅಗತ್ಯ.

ನಮ್ಮ ಮನಸ್ಸು ನಮ್ಮ ಇಂದ್ರಿಯಗಳಿಂದ ನಿಯಂತ್ರಿಸಲ್ಪಡುತ್ತದೆ. ಅದು ನಮ್ಮ ದೇಹವನ್ನು ನಿಯಂತ್ರಿಸುತ್ತದೆ. ನಮ್ಮ ಕಿವಿ, ಮೂಗು, ಕಣ್ಣು, ಚರ್ಮ, ನಾಲಿಗೆ ಇತ್ಯಾದಿಗಳ ಮೂಲಕ ಈ ಮನಸ್ಸನ್ನು ತಲುಪುವ ಸಂದೇಶಗಳು ಮನಸ್ಸನ್ನು ನಿರಂತರವಾಗಿ ಕಾರ್ಯನಿರತವಾಗಿರಿಸುತ್ತದೆ. ಈ ಸಂದೇಶಗಳು ಹಲವಾರು; ವಿರೋಧಾತ್ಮಕ, ತಪ್ಪುದಾರಿಗೆಳೆಯುವ ಅಥವಾ ಅನಗತ್ಯವಾಗಿರಬಹುದು. ನಮ್ಮಲ್ಲಿ ಮೂಡುತ್ತಿರುವ ಭಾವನೆಗಳು ಹೇಗೆ ಸಂವಹನಗೊಳ್ಳುತ್ತಿವೆ? ಈ ಸೂಕ್ಷ್ಮ ಧರಾತಲಕ್ಕೆ ಹೋದರೆ ನಮಗೆ ತಿಳಿಯುತ್ತದೆ- ನನ್ನ ಆಲೋಚನೆಗಳು ನನ್ನ ದೇಹದ ರೋಮರೋಮಗಳಲ್ಲಿ ಪ್ರಕಟವಾಗುತ್ತವೆ. ನಾವು ಯಾವಾಗ ಏನನ್ನಾದರೂ ಬರೆಯುತ್ತೇವೆಯೋ, ಯಾವುದಾದರೂ ಚಿತ್ರವನ್ನು ಬಿಡಿಸುತ್ತೇವೆಯೋ, ಏನಾದರೂ ಸೃಜನಾತ್ಮಕ ರಚನೆಯನ್ನು ಮಾಡುತ್ತೇವೆಯೋ, ಆಗ ಆ ಭಾವನೆಗಳು ಸ್ವಯಂಚಾಲಿತವಾಗಿ ಮತ್ತಷ್ಟು ಹರಡುತ್ತವೆ. ಪ್ರಾರ್ಥನೆ, ಪೂಜೆ, ಪಠಣ, ಇತ್ಯಾದಿ, ನವವಿಧ ಭಕ್ತಿಯ ಎಲ್ಲಾ ಕಾರ್ಯಗಳು ಏಕಮುಖ ಸಂಪ್ರೇಷಣ. ಇವುಗಳಲ್ಲಿ ಮೌನ ಸಂಪ್ರೇಷಣ ಮತ್ತು ಆತ್ಮಸಂವಾದವೂ ಸೇರಿದೆ. ಇವೆಲ್ಲವೂ ಆತ್ಮದೊಂದಿಗೆ, ತಮ್ಮ ಇಷ್ಟದತ್ತ, ಪ್ರೀತಿಯತ್ತ, ಆತ್ಮೀಯರತ್ತ ಬೆಸೆದುಕೊಂಡ ಭಾವನಾತ್ಮಕ ಸಂಭಾಷಣೆಗಳಾಗಿವೆ. ಆದರೆ ನೀವು ಆಳವಾಗಿ ನೋಡಿದರೆ, ಇದು ಒಂದೇ ಮುಖದ ಸಂವಹನೆ ಅಲ್ಲ. ಯಾವುದಾದರೂ ಸೂತ್ರಗಳು ಮಾಧ್ಯಮದ ಪಾತ್ರವನ್ನು ನಿರ್ವವಹಿಸುತ್ತದೆ.

ಚಿತ್ರ ಅಥವಾ ವಿಗ್ರಹವನ್ನು ನೋಡಿದಾಗ, ಸಂತೋಷದ ಅಲೆ ಅಥವಾ ಭಾವನೆಯು ಮನಸ್ಸಿಗೆ, ಆತ್ಮಕ್ಕೆ ತಲುಪುತ್ತದೆ. ಇನ್ನೊಂದು ಕಡೆಯಿಂದ ಕೆಲವು ಸೂಚನೆಗಳು ಅಥವಾ ಸಂದೇಶಗಳು ನಿರಂತರವಾಗಿ ಸ್ವೀಕರಿಸುತ್ತಿರುವಂತೆ ತೋರುತ್ತಿರುತ್ತದೆ. ದಾರ್ಶನಿಕ ಭಾಷೆಯಲ್ಲಿ ಹೇಳುವುದಾದರೆ ಒಂದು ಅನುಭೂತಿಯು ಒಳಗಿನವರೆಗೆ ತಲುಪುತ್ತಿದೆ. ಇದೂ ಸಹ ಏಕಮುಖಿ ಎಂದು ಹೇಳಲಾಗದ ಸಂಪ್ರೇಷಣ. ಏಕೆಂದರೆ ನಾವು ನೋಡುತ್ತಿರುವ ವ್ಯಕ್ತಿಯ ಚಿತ್ರವು ನಮ್ಮ ಆತ್ಮದಲ್ಲಿಯೂ ಕುಳಿತಿದೆ ಮತ್ತು ನಾವು ಆತ್ಮದಲ್ಲಿ ಕುಳಿತಿರುವ ಮೂರ್ತಿಯೊಂದಿಗೆ ಸಂವಾದ ಮಾಡುತ್ತಿದ್ದೇವೆ, ನಾವು ನಮ್ಮೊಂದಿಗೆ ಮಾತನಾಡುತ್ತಿದ್ದೇವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

ತಾಯಿ ಹೃದಯದ ಅಳಲು (Mother Sentiment) ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು…..ಇತ್ತೀಚೆಗೆ ಬಾಲಕಿಯರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯಗಳ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ಬರೆದ ಸುದೀರ್ಘ ಪತ್ರದ ಸಾರ ಇಲ್ಲಿದೆ.

VISTARANEWS.COM


on

Mother Sentiment
Koo

| ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

ಪ್ರೀತಿಯ ಮಗಳೇ,
ಅರೆ! ನಿನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ (Mother Sentiment) ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು ಎಂದು ಗಾಬರಿಯಾಗಬೇಡ. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.
ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ, ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ (Higher Education) ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.

ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ಪ್ರೀತಿಯ ಕೂಸು ನೀನು

ನಮ್ಮ ಮನೆಯ ಪ್ರೀತಿಯ ಕೂಸು ನೀನು. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್‌ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು, ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ

ಯಾವುದೂ ತಪ್ಪಲ್ಲ ನಿಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ. ದುಸ್ವಪ್ನಗಳಂತಲ್ಲ.

ನಮ್ಮ ಜೊತೆಗೆ ಬರುವುದು ನಮ್ಮವರು ಮಾತ್ರ

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು. ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಆರ್ಥಿಕ ಶಿಸ್ತು ಇರಲಿ

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ. ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು. ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ.

ಕ್ಷಣಿಕ ಆಸೆಗೆ ಬಲಿಯಾಗಬೇಡ

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು. ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.
ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.

ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು. ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.

ಇದನ್ನೂ ಓದಿ: AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading
Advertisement
Prajwal Revanna Case
ಪ್ರಮುಖ ಸುದ್ದಿ19 mins ago

Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

Hemchand Manjhi
ದೇಶ36 mins ago

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Prajwal Revanna Case
ಕರ್ನಾಟಕ1 hour ago

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

Rahul Gandhi
ದೇಶ1 hour ago

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Karnataka Weather Forecast
ಮಳೆ1 hour ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್2 hours ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ2 hours ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ2 hours ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ2 hours ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Surya Prakash Maayi director dies
ಕಾಲಿವುಡ್2 hours ago

Surya Prakash: ʻಮಾಯಿʼ ಸಿನಿಮಾ ಖ್ಯಾತಿಯ ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ಇನ್ನಿಲ್ಲ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌