ಕಲೆ/ಸಾಹಿತ್ಯ
ಮಕ್ಕಳ ಕಥೆ: ಬಾವಲಿಗಳು ರಾತ್ರಿಯಲ್ಲೇ ಹೊರಗೆ ಬರುವುದೇಕೆ?
ಬಾವಲಿಗಳು ರಾತ್ರಿ ಮಾತ್ರ ಹೊರಗೆ ಬರುತ್ತವೆ. ಈ ರಾತ್ರಿ ಓಡಾಟಕ್ಕೆ ಕಾರಣ ಏನೆಂದು ಯಾವತ್ತಾದರೂ ಯೋಚಿಸಿದ್ದೀರಾ? ಈ ಮಕ್ಕಳ ಕಥೆ ಓದಿ ನೋಡಿ.
ಬಾವಲಿ ಮತ್ತು ಇಲಿಗಳು ಸ್ನೇಹಿತರಾಗಿದ್ದ ಕಾಲವದು. ಇಬ್ಬರಿಗೂ ಪ್ರತಿದಿನ ಒಬ್ಬರನ್ನೊಬ್ಬರು ನೋಡಲೇಬೇಕು ಎನ್ನುವಷ್ಟು ಆತ್ಮೀಯವಾಗಿದ್ದವು. ಬಾವಲಿ ತುಂಬಾ ರುಚಿಕಟ್ಟಾಗಿ ಅಡುಗೆ ಮಾಡುತ್ತಿತ್ತು. ಇಲಿ ಅದನ್ನು ಎಷ್ಟೇ ಖುಷಿಯಿಂದ ಉಣ್ಣುತ್ತಿತ್ತು.
ಒಮ್ಮೆ ಇಲಿಗೆ ಅನುಮಾನ ಬಂತು. ತನ್ನ ಮನೆಯಲ್ಲಿ ಮಡದಿ ಎಷ್ಟೇ ಪ್ರಯತ್ನಿಸಿದರೂ ಇಷ್ಟು ಚೆನ್ನಾದ ರುಚಿ ಇರುವುದಿಲ್ಲ ಅಡುಗೆಗೆ. ಹಾಗಾದರೆ ಈ ಬಾವಲಿ ಹೇಗೆ ಅಡುಗೆ ಮಾಡುತ್ತದೆ ಎಂಬುದಾಗಿ. ಅದನ್ನು ಕೇಳಿಯೂ ಬಿಟ್ಟಿತು ಇಲಿ.
ಅದಾ? ನಾನು ಅಡುಗೆ ಮಾಡುವಾಗ ನನ್ನನ್ನೇ ನಾನು ಕುದಿಸಿ ಅಡುಗೆ ಮಾಡುತ್ತೇನೆ. ಅದಕ್ಕಾಗಿ ಅದರ ರುಚಿ ಹೆಚ್ಚುತ್ತದೆʼ ಎಂದಿತು ಬಾವಲಿ. ಇದು ಹೇಗೆ ಸಾಧ್ಯ ಎಂಬುದೇ ಇಲಿಗೆ ಅರ್ಥವಾಗಲಿಲ್ಲ. ʻತೋರಿಸುತ್ತೇನೆ ತಾಳುʼ ಎಂದ ಬಾವಲಿ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕುದಿಯಲಿಟ್ಟಿತು. ನೀರಿನಲ್ಲಿ ಗುಳ್ಳೆ ಬರುತ್ತಿದ್ದಂತೆ ತಾನೇ ನೀರೊಳಗೆ ಕುಳಿತುಕೊಂಡಿತು! ನೀರು ಸಾಕಷ್ಟು ಕುದ್ದಾದ ಮೇಲೆ ಅಲ್ಲಿಂದ ಮೇಲೆದ್ದ ಬಾವಲಿ ಅದೇ ನೀರನ್ನು ಅಡುಗೆಗೆ ಬಳಸಿತು.
ಇದನ್ನೂ ಓದಿ: ಮಕ್ಕಳ ಕಥೆ: ಆಮೆಯ ಚಿಪ್ಪಿನಲ್ಲಿ ಬಿರುಕು ಏಕಿದೆ?
ಅಡುಗೆ ರುಚಿಯಾಗಿತ್ತು. ʻಇದಾ ರಹಸ್ಯ!ʼ ಎಂದುಕೊಂಡಿತು ಇಲಿ. ಮನೆಗೆ ಹೋಗಿ ಮಡದಿಯಲ್ಲಿ ವಿಷಯ ತಿಳಿಸಿದ ಇಲಿ, ʻಇವತ್ತು ಅಡುಗೆಯನ್ನು ನಾನು ಮಾಡುತ್ತೇನೆ. ನೀನು ಪೇಟೆಗೆ ಹೋಗಿ ಇದಿಷ್ಟು ವಸ್ತುಗಳನ್ನು ತಾʼ ಎಂದು ಇಲಿಯಮ್ಮನನ್ನು ಹೊರಗೆ ಅಟ್ಟಿತು. ಹಾಗೆಯೆ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕುದಿಯುತ್ತಿರುವಾಗ ತಾನದರಲ್ಲಿ ಕುಳಿತುಕೊಂಡಿತು. ಇಲಿಯಮ್ಮ ಪೇಟೆಯಿಂದ ಮರಳಿ ಮನೆಗೆ ಬರುವಷ್ಟರಲ್ಲಿ ಕುದಿಯುವ ನೀರಿನ ಪಾತ್ರೆಯಲ್ಲಿ ಅವಳ ಗಂಡ ಸತ್ತುಬಿದ್ದಿರುವುದು ಕಾಣಿಸಿತು. ಇದರಿಂದ ಶೋಕಿತಳಾದ ಇಲಿಯಮ್ಮ ರಾಜನಿಗೆ ದೂರು ನೀಡಿದಳು.
ಬಾವಲಿಯ ಮಾತಿನಿಂದಲೇ ಇಲಿ ಸತ್ತಿದ್ದು ಎಂದು ತೀರ್ಮಾನಿಸಿದ ರಾಜ, ಬಾವಲಿಯನ್ನು ಹುಡುಕಲು ತನ್ನ ಭಟರನ್ನು ಕಳುಹಿದ. ಬಾವಲಿ ಅವರಿಗೆ ಸಿಗದೆ ಪರಾರಿಯಾಯಿತು. ಅದಕ್ಕಾಗಿಯೇ ಇಂದಿಗೂ ಬಾವಲಿಗಳು ಹಗಲಿನಲ್ಲಿ ಹೊರಗೆ ಅಡ್ಡಾಡದೆ ರಾತ್ರಿ ಮಾತ್ರ ಹೊರಗೆ ಬರುತ್ತವಂತೆ.
ಇದನ್ನೂ ಓದಿ: ಮಕ್ಕಳ ಕಥೆ: ಆಮೆ ಕಾಡಿನ ರಾಜ ಆದದ್ದು ಹೇಗೆ?
ಕಲೆ/ಸಾಹಿತ್ಯ
Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?
Nobel Peace Prize: 20ನೇ ಶತಮಾನದ ಅಹಿಂಸೆ ಪ್ರತೀಕರಾಗಿದ್ದ ಮಹಾತ್ಮ ಗಾಂಧಿ ಅವರು 1937, 1938, 1947 ಮತ್ತು 1948ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನರಾಗಿದ್ದರು.
ಪ್ರಸಕ್ತ ಸಾಲಿನ ನೊಬೆಲ್ (Nobel Prize 2023) ವಿಜೇತರ ಹೆಸರಗಳನ್ನು ಘೋಷಣೆ ಮಾಡಲಾಗುತ್ತಿದೆ. ಪ್ರತಿ ಬಾರಿ ನೊಬೆಲ್ ಪುರಸ್ಕಾರ ಘೋಷಣೆಯಾದಾಗ ಮಹಾತ್ಮ ಗಾಂಧಿ ಅವರಿಗೇಕೆ ಈ ಪ್ರಶಸ್ತಿ ದೊರೆಯಲಿಲ್ಲ (Nobel Peace Prize) ಎಂಬ ಪ್ರಶ್ನೆ ಭಾರತೀಯರು ಮಾತ್ರವಲ್ಲ ಇಡೀ ಜಗತ್ತಿಗೆ ಕಾಡುತ್ತದೆ. ಯಾಕೆಂದರೆ, ಮಹಾತ್ಮ ಗಾಂಧಿ (Mahatma Gandhi) ಅವರು ಶಾಂತಿ ಪ್ರಿಯರು. ಸತ್ಯಾಗ್ರಹ(Satyagraha), ಅಹಿಂಸೆ (non-violent) ಅವರು ಅನುಸರಿಸಿದ ಮಾರ್ಗಗಳಾಗಿದ್ದವು. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಭಾರತವು (Indian Independent Movement)ಇದೇ ಸತ್ಯಾಗ್ರಹ ಮತ್ತು ಅಹಿಂಸೆಗಳಿಂದಲೇ ಸ್ವಾತಂತ್ರವನ್ನು ಪಡೆಯಿತು. ಅವರು ಅನುಸರಿಸಿದ ಮಾರ್ಗಗಳು ಜಗತ್ತಿನಾದ್ಯಂತ ಅನೇಕರ ಇಂದಿಗೂ ಪ್ರೇರಣೆಯಾಗುತ್ತಿವೆ; ದಾರಿದೀಪವಾಗಿವೆ. ಹಾಗಿರುವಾಗ ಅವರಿಗೇಕೆ ಶಾಂತಿ ನೊಬೆಲ ಪ್ರಶಸ್ತಿ ದೊರೆಯಲಿಲ್ಲ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎಲ್ಲರೂ ಕಾಡುತ್ತಿದೆ.
20ನೇ ಶತಮಾನದ ಅಹಿಂಸೆಗೆ ಪ್ರತೀಕವಾಗಿರುವ ಮಹಾತ್ಮ ಗಾಂಧಿ ಅವರಿಗೆ ಏಕೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಿಲ್ಲ ಎಂಬ ಸಂಗತಿಯನ್ನು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯೇ ಉತ್ತರ ನೀಡಿದೆ.
ನೊಬೆಲ್ ಶಾಂತಿ ಪ್ರಶಸ್ತಿಗಾಗಿ 1937, 1938, 1947 ಮತ್ತು 1948 ಜನವರಿಯಲ್ಲಿ ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಮಹಾತ್ಮ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. 1948ರಲ್ಲಿ ಅವರು ಸಾಯುವ ಮೊದಲು ಮಹಾತ್ಮ ಗಾಂಧಿ ಅವರಿಗೆ ಬಹುಮಾನವನ್ನು ನೀಡದಿರುವುದು ತಪ್ಪು ಎಂದು ಹಲವರು ಈಗಲೂ ಭಾವಿಸುತ್ತಾರೆ.
1937ರಲ್ಲೇ ನಾಮನಿರ್ದೇಶನ
1937ರಲ್ಲಿ ನಾರ್ವೇಜಿಯನ್ ಸಂಸತ್ತಿನ ಸದಸ್ಯ ಓಲೆ ಕೊಲ್ಬ್ಜೋರ್ನ್ಸೆನ್ ಅವರು ಮಹಾತ್ಮ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಿದ್ದರು. ಅಲ್ಲದೇ, ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ 13 ಅಭ್ಯರ್ಥಿಗಳ ಪೈಕಿ ಗಾಂಧಿ ಕೂಡ ಒಬ್ಬರಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇರುವವರ ಕೆಲವರು, ಗಾಂಧಿ ಅವರು ನಿರಂತರ ಶಾಂತಿಪ್ರಿಯರಲ್ಲ. ಬ್ರಿಟಿಷರ ವಿರುದ್ಧ ಅವರು ಕರೆ ನೀಡುವ ಅಹಿಂಸಾ ಚಳವಳಿಗಳು ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಕಾರಣವಾಗುತ್ತಿವೆ ಎಂದು ಪ್ರಶಸ್ತಿ ನೀಡುವುದನ್ನು ವಿರೋಧಿಸಿದ್ದದರು. ಇದಕ್ಕಾಗಿ ಅವರು ಅವರು 1920-21ರಲ್ಲಿ ಗಾಂಧಿ ಕರೆ ನೀಡಿದ್ದ ಮೊದಲ ಅಸಹಕಾರ ಚಳವಳಿಯನ್ನು ಅವರು ಉದಾಹರಣೆಯಾಗಿ ನೀಡಿದ್ದರು. ಈ ಚಳವಳಿ ವೇಳೆ ಜನರು ಪೊಲೀಸರನ್ನು ಕೊಲೆ ಮಾಡಿದರು. ಗೋರಖ್ಪುರ ಜಿಲ್ಲೆಯ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು ಎಂಬುದು ಅವರ ವಾದಕ್ಕೆ ಕಾರಣವಾಗಿತ್ತು.
ಸಮಿತಿಯಲ್ಲಿರುವ ಇನ್ನು ಕೆಲವರು, ಗಾಂಧಿ ಅನುಸರಿಸುತ್ತಿರುವ ವಿಚಾರಧಾರೆಗಳು ಭಾರತಕ್ಕೆ ಮಾತ್ರವೇ ಅನ್ವಯವಾಗುತ್ತಿವೆ ಹೊರತು ವಿಶ್ವಕ್ಕಲ್ಲ. ನೊಬೆಲ್ ಸಮಿತಿಯ ಸಲಹೆಗಾರ ಜಾಕೋಬ್ ಎಸ್ ವರ್ಮ್-ಮುಲ್ಲರ್, “ದಕ್ಷಿಣ ಆಫ್ರಿಕಾದಲ್ಲಿ ಅವರ ಸುಪ್ರಸಿದ್ಧ ಹೋರಾಟವು ಭಾರತೀಯರ ಪರವಾಗಿ ಮಾತ್ರವೇ ಆಗಿತ್ತು ಎಂದು ಹೇಳಬಹುದು. ನಿಕೃಷ್ಟವಾಗಿ ಬದುಕುತ್ತಿದ್ದ ಕರಿಯರ ಪರವಾಗಿರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದರು.
1938, 1939ರಲ್ಲಿ ಮತ್ತೆ ನಾಮನಿರ್ದೇಶನ
1937ರಲ್ಲಿ ಚೆಲ್ವುಡ್ ಲಾರ್ಡ್ ಸೆಸಿಲ್ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದರು. ಕೊಲ್ಬ್ಜೋರ್ನ್ಸೆನ್ ಅವರು ಮತ್ತೆ ಮಹಾತ್ಮಾ ಗಾಂಧಿ ಅವರನ್ನು ಶಾಂತಿ ಪುರಸ್ಕಾರಕ್ಕಾಗಿ 1938 ಮತ್ತು 1939ರಲ್ಲಿ ನಾಮನಿರ್ದೇಶನ ಮಾಡಿದರು. ಆದರೆ, ಅವರನ್ನು ಪ್ರಶಸ್ತಿಗೆ ಪರಿಗಣಿಸಲಿಲ್ಲ. ಗಾಂಧಿ ಅವರು ಹೆಸರು ಶಾರ್ಟ್ ಲಿಸ್ಟ್ ಆಗುವ ಹೊತ್ತಿಗೆ 10 ವರ್ಷಗಳೇ ಕಳೆದು ಹೋಗಿದ್ದವು. ಅಂದರೆ, 1947 ಸಾಲಿನ ಶಾಂತಿ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾದ ಅಂತಿಮ 6 ಜನರ ಪೈಕಿ ಗಾಂಧಿ ಕೂಡ ಇದ್ದರು. ಆಗಲೂ ಐವರು ಆಯ್ಕೆ ಸಮಿತಿಯ ಸದಸ್ಯರ ಪೈಕಿ ಮೂವರು, ಭಾರತ ಮತ್ತು ಪಾಕಿಸ್ತಾನಗಳು ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿ ಗಾಂಧಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವುದಕ್ಕೆ ಹಿಂದೇಟು ಹಾಕಿದರು. ಆ ವರ್ಷ, ಕ್ವೇಕರ್ಸ್ಗೆ ಪ್ರಶಸ್ತಿಯನ್ನು ನೀಡಲಾಯಿತು.
ಹತ್ಯೆ ಆಗುವ ಕೆಲ ದಿನ ಮುಂಚೆ ಪರಿಗಣನೆ
1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರು ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು. ಇದಕ್ಕೂ ಎರಡು ದಿನಗಳ ಮುಂಚೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಹಾತ್ಮ ಗಾಂಧಿ ಅವರನ್ನು ಪ್ರಶಸ್ತಿಗೆ ಪರಿಗಣಿಸಿತ್ತು. ಸಮಿತಿಯ ಮುಂದೆ ಗಾಂಧಿ ಸೇರಿದಂತೆ ಒಟ್ಟು ಆರು ಹೆಸರುಗಳಿದ್ದವು. ಈ ಆಯ್ಕೆ ಸಮಿತಿಯಲ್ಲಿ ಕೆಲವು ನೊಬೆಲ್ ಪುರಸ್ಕೃತರೂ ಇದ್ದರು.
ಪ್ರಶಸ್ತಿ ಆಯ್ಕೆ ನಿಯಮದಂತೆ ಮರಣೋತ್ತರವಾಗಿ ಯಾರಿಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿಲ್ಲ. ಆ ಸಮಯದಲ್ಲಿ ಜಾರಿಯಲ್ಲಿರುವ ನೊಬೆಲ್ ಫೌಂಡೇಶನ್ನ ನಿಯಮಗಳ ಪ್ರಕಾರ, ಕೆಲವೇ ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರವೇ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿತ್ತು. ಹಾಗಾಗಿ ಅಂದಿನ ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ನಿರ್ದೇಶಕರಾದ ಆಗಸ್ಟ್ ಸ್ಚೌ ಅವರು ಸ್ವೀಡಿಷ್ ಪ್ರಶಸ್ತಿ ಪ್ರದಾನ ಸಂಸ್ಥೆಗಳ ಅಭಿಪ್ರಾಯವನ್ನು ಕೇಳಿದರು. ಸಮಿತಿಯ ಆಯ್ಕೆ ಮಾಡಿದ ಬಳಿಕ ಪ್ರಶಸ್ತಿ ವಿಜೇತರ ನಿಧನರಾಗಿದ್ದರೆ ಮಾತ್ರವೇ ಮರಣೋತ್ತರವಾಗಿ ನೀಡಲು ಅವಕಾಶವಿದೆ ಎಂಬ ಅಭಿಪ್ರಾಯ ಕೇಳಿ ಬಂತು.
1948ರಲ್ಲಿ ಯಾರಿಗೂ ಪ್ರಶಸ್ತಿ ನೀಡಲಿಲ್ಲ!
ಮರಣೋತ್ತರವಾಗಿ ಶಾಂತಿ ಪುರಸ್ಕಾರ ನೀಡಲು ಅವಕಾಶ ನೀಡಲು ಸಾಧ್ಯವಾಗದ್ದರಿಂದ ನೊಬೆಲ್ ಪ್ರಶಸ್ತಿ ಸಮಿತಿಯು ಆ ವರ್ಷ ಅಂದರೆ 1948ರಲ್ಲಿ ಯಾರಿಗೂ ಶಾಂತಿ ಪುರಸ್ಕಾರವನ್ನು ನೀಡಲಿಲ್ಲ. ಸೂಕ್ತ ವ್ಯಕ್ತಿಗಳು ಇಲ್ಲದಿರುವ ಕಾರಣಕ್ಕೆ ಪ್ರಶಸ್ತಿ ನೀಡುತ್ತಿಲ್ಲ ಎಂದು ಸಮಿತಿ ಹೇಳಿತು. 1948ರಲ್ಲಿ ಗಾಂಧಿ ಅವರಿಗೆ ಪ್ರಶಸ್ತಿ ನೀಡಬೇಕು ಎಂಬುದು ಬಹುತೇಕ ಆಯ್ಕೆ ಸಮಿತಿಯ ಸದಸ್ಯರ ಅಭಿಪ್ರಾಯವಾಗಿತ್ತು. ಆದರೆ, ಅಷ್ಟೋತ್ತಿಗೆ ಕಾಲ ಮಿಂಚಿ ಹೋಗಿತ್ತು.
ಈ ಸುದ್ದಿಯನ್ನೂ ಓದಿ: Nobel Prize 2023: ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್!
1960 ಬಳಿಕ ಹಲವರಿಗೆ ಮರಣೋತ್ತರವಾಗಿ ಪ್ರಶಸ್ತಿ
ಮರಣೋತ್ತರವಾಗಿ ಶಾಂತಿ ಪುರಸ್ಕಾರ ನೀಡಲು ಸಾಧ್ಯವಿಲ್ಲ ಎಂದಿದ್ದ ನೊಬೆಲ್ ಪ್ರಶಸ್ತಿ ಸಮಿತಿಯು 1960ರ ಬಳಿಕ ಯುರೋಪ್ ಹಾಗೂ ಅಮೆರಿಕದ ಹಲವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಿದೆ. ಆದರೆ, ಗಾಂಧಿ ಅವರಿಗೇಕೆ ನೀಡಲಿಲ್ಲ ಎಂಬ ಪ್ರಶ್ನೆಗೆ ಸಮಿತಿ ಹೊಸ ವ್ಯಾಖ್ಯಾನವನ್ನು ನೀಡಿತು.
ಹಿಂದಿನ ಪ್ರಶಸ್ತಿ ಪುರಸ್ಕೃತರಿಗಿಂತ ಗಾಂಧಿ ತುಂಬಾ ಭಿನ್ನವಾಗಿದ್ದರು. ಗಾಂಧಿ ಅವರು ನಿಜವಾದ ರಾಜಕಾರಣಿಯಾಗಿರಲಿಲ್ಲ ಅಥವಾ ಅಂತಾರಾಷ್ಟ್ರೀಯ ಕಾನೂನಿನ ಪ್ರತಿಪಾದಕರಾಗಿರಲಿಲ್ಲ. ಪ್ರಾಥಮಿಕವಾಗಿ ಮಾನವೀಯ ಪರಿಹಾರ ಕಾರ್ಯಕರ್ತರಲ್ಲ ಮತ್ತು ಅಂತಾರಾಷ್ಟ್ರೀಯ ಶಾಂತಿ ಸಂಘಟನೆಗಳ ಸಂಘಟಕರಾಗಿರಲಿಲ್ಲ. ಈ ಪ್ರಶಸ್ತಿಗೆ ಅವರ ಅರ್ಹತೆಯು ಬೇರೆಯದ್ದೇ ಆಗಿತ್ತು. ಅವರು ವಿಭಿನ್ನವಾದ ಅರ್ಹತೆಯನ್ನು ಹೊಂದಿದವರು ಎಂದು ಸಮಿತಿ ತನ್ನ ನಿರ್ಧಾರವನ್ನುಸಮರ್ಥಿಸಿ ಕೊಂಡಿತು.
ನೊಬೆಲ್ಗಿಂತ ಮಿಗಿಲಾದವರು ಗಾಂಧಿ
ಜಗತ್ತಿನ ಶ್ರೇಷ್ಠ ಪ್ರಶಸ್ತಿ ಎನಿಸಿರುವ ನೊಬೆಲ್ ಶಾಂತಿ ಪುರಸ್ಕಾರ ಗಾಂಧಿ ಅವರಿಗೆ ನೀಡದ್ದಕ್ಕೆ ಅವರ ಅನುಯಾಯಿಗಳಲ್ಲಿ ಬೇಸರವಿಲ್ಲ. ಯಾಕೆಂದರೆ, ಮಹಾತ್ಮ ಗಾಂಧಿ ಅವರು ಈ ಎಲ್ಲ ಪ್ರಶಸ್ತಿಗಿಂತ ಮಿಗಿಲಾದವರು. ಈ ಪ್ರಶಸ್ತಿ ವ್ಯಾಪ್ತಿಗೆ ಮೀರಿದ ವ್ಯಕ್ತಿತ್ವ ಅವರದ್ದಾಗಿತ್ತು. 20ನೇ ಶತಮಾನದ ಶಾಂತಿದೂತರಾಗಿದ್ದ ಗಾಂಧಿಜಿ ಅವರಿಗೆ ಯಾವ ಪ್ರಶಸ್ತಿಗಳು ಸಮನಲ್ಲ. ಹಾಗಾಗಿ, ನೊಬೆಲ್ ಮಾತ್ರವಲ್ಲ, ಅದಕ್ಕಿಂತ ಹಿರಿದಾದ ಪ್ರಶಸ್ತಿ ಕೂಡ ಗಾಂಧಿ ಮುಂದೆ ಕುಬ್ಜವಾಗುತ್ತಿತ್ತು ಎಂಬ ವಾದವೂ ಇದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
P. Sainath: ಸಂವಿಧಾನ ರಕ್ಷಿಸುವ ಹೊಣೆ ನಮ್ಮ ಮೇಲಿದೆ: ಪಿ. ಸಾಯಿನಾಥ್
P. Sainath: ಬಹುರೂಪಿ ಪ್ರಕಾಶನದಿಂದ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರ ರಚನೆಯ, ಲೇಖಕ ಜಿ.ಎನ್.ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು’ ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದು ತುರ್ತು ಅಗತ್ಯವಾಗಿದ್ದು, ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಪತ್ರಕರ್ತ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಪಿ.ಸಾಯಿನಾಥ್ (P. Sainath) ಅವರು ತಿಳಿಸಿದರು.
ಬೆಂಗಳೂರಿನಲ್ಲಿ ‘ಬಹುರೂಪಿ’ ಪ್ರಕಾಶನ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಿ. ಸಾಯಿನಾಥ್ ಅವರ ರಚನೆಯ, ಜಿ.ಎನ್ ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು’ (The Last Heroes: Foot Soldiers of Indian Freedom) ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ರೂಪಿಸುತ್ತಿರುವ ಕಾಯ್ದೆಗಳು ಜನ ವಿರೋಧಿಯಾಗಿವೆ. ಅವು ಸಮಾಜವನ್ನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ರೈತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ರೈತರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಾಗಿರಲಿಲ್ಲ, ಅದು ಪರೋಕ್ಷವಾಗಿ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಳವಳಿಯಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ | Bangalore Onion: ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ; ರಫ್ತು ಸುಂಕ ವಿನಾಯಿತಿ ನೀಡಿದ ಕೇಂದ್ರ
ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ಬಿಡುಗಡೆ ಸಿಕ್ಕಿಲ್ಲ ಎನ್ನುವುದು ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಅಳಲು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕೊನೆಗೊಂಡಾಗ, ಜಾತಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾದಾಗ ಸಂಪೂರ್ಣ ಬಿಡುಗಡೆ ಸಿಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆದರೆ, ಬಿಡುಗಡೆ ಎಂಬುದರ ವ್ಯಾಪ್ತಿ ತುಂಬಾ ಹಿರಿದಾಗಿದೆ. ಇದನ್ನು ಪಡೆದುಕೊಳ್ಳಲು ನಾವೆಲ್ಲರೂ ಒಂದಾಗಬೇಕಿದೆ. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆಗಳನ್ನು ತಡೆಗಟ್ಟಬೇಕಾಗಿದೆ ಎಂದು ಕರೆ ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ವಾಸ್ತವವಾಗಿ ಅವರೇ ಸ್ವಾತಂತ್ರ್ಯದ ನಿಜ ಹೋರಾಟಗಾರ್ತಿಯರಾದರೂ, ಯಾವುದೇ ಪಟ್ಟಿಗೂ ಸೇರ್ಪಡೆಗೊಳಿಸದೆ, ಅವರೆಲ್ಲರನ್ನೂ ಕಡೆಗಣಿಸಲಾಗಿದೆ. ಮನೆಗಳಲ್ಲಿ ಅಡುಗೆ ಮಾಡಿಕೊಂಡು, ಕುಟುಂಬವನ್ನು ನಿರ್ವಹಿಸುವ ಜತೆಗೆ ಕೃಷಿ ಕಾರ್ಯವನ್ನೂ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಮಹಿಳೆಯರು ಸಹಕರಿಸಿದ್ದಾರೆ. ಕೆಲವೊಮ್ಮೆ ಬಂದೂಕು ಹಿಡಿದುಕೊಂಡು, ಇಲ್ಲವೇ ಶಸ್ತ್ರಾಸ್ತ್ರಗಳ ಸಾಗಾಟದಂತ ಕಾರ್ಯಗಳಲ್ಲೂ ನೆರವಾಗಿದ್ದಾರೆ. ಆದರೆ, ಇವರು ಯಾರೂ ಗುಂಡು ಹಾರಿಸಿಲ್ಲ, ಜೈಲಿಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಶಾಹಿಯ ಕೆಂಪುಪಟ್ಟಿ ನಿಲುವು ಅವರು ಯಾರಿಗೂ ಸ್ವಾತಂತ್ರ್ಯ ಯೋಧರು ಎಂಬ ಸ್ಥಾನಮಾನ ಸಿಗದಂತೆ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, 1990ರ ದಶಕದಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಮುಕ್ತ ನೀತಿ ಜಾರಿಗೊಳಿಸಿದರು. ಇದರ ಜತೆಗೆ ಲಾಲ್ ಕೃಷ್ಣ ಅಡ್ವಾಣಿಯವರು ನಡೆಸಿದ ರಥಯಾತ್ರೆ ನಡೆಸಿದರು. ಈ ಎರಡು ಘಟನೆಗಳು ಇಡೀ ದೇಶವನ್ನು ಆಳವಾಗಿ ಘಾಸಿಗೊಳಿಸಿವೆ. ಈ ಗಾಯಗಳು ಮಾಗಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | High Court : ಕೊಟ್ಟ ಹಣ ಮರಳಿ ಕೇಳುವುದು ಆತ್ಮಹತ್ಯೆಗೆ ಪ್ರಚೋದನೆ ಆಗಲ್ಲ ಎಂದ ಹೈಕೋರ್ಟ್
1992ರಿಂದ 2017ರ ನಡುವೆ ರಾಷ್ಟ್ರದಾದ್ಯಂತ 17 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಗೆ ಬಡತನ ಹೆಚ್ಚಾಗುತ್ತಲೇ ಹೋಗುತ್ತಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಚಕಾರವೆತ್ತದೆ, ಈ ಯಾವುದೇ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಬಂಡವಾಳಶಾಹಿಗಳ ಪರವಾದ ನಿಲುವು ಪ್ರಕಟಪಡಿಸುತ್ತಾ, ತಮ್ಮ ಜವಾಬ್ದಾರಿ ಮರೆಯುತ್ತಿವೆ. ಇದು ಜಾಗತೀಕರಣ ಕರಾಳತೆಗೆ ಹಿಡಿದ ಕೈಗನ್ನಡಿ ಎಂದರು.
1992ರ ನಂತರದಲ್ಲಿ ರಾಷ್ಟ್ರದಲ್ಲಿ ಬೌದ್ಧಿಕ ಸ್ಥಿತ್ಯಂತರಗಳು ಉಂಟಾಗಿವೆ. ಅದುವರೆಗೂ ಸಮಾಜವಾದ, ಸಮಾನತೆ ಎಂದು ಸಂವಿಧಾನಿಕ ಪರಿಭಾಷೆಯಲ್ಲಿ ಮಾತನಾಡುತ್ತಿದ್ದವರು ಮತೀಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಆದರೆ, ಪಿ. ಸಾಯಿನಾಥ್ ಅವರ ʼಕೊನೆಯ ಹೀರೋಗಳುʼ ಕೃತಿಯಲ್ಲಿರುವ 16 ಮಂದಿ ಸ್ವಾತಂತ್ರ್ಯ ಯೋಧರು ಎಂದಿಗೂ ಇಂಥ ಸ್ಥಿತ್ಯಂತರಕ್ಕೆ ಒಳಗಾಗಲಿಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ನಿಲುಗಳು, ತಾವು ರೂಢಿಸಿಕೊಂಡಿದ್ದ ಗಾಂಧಿವಾದದ ಅಂಶಗಳನ್ನು ಆಧರಿಸಿ ಜೀವನ ಸಾಗಿಸಿದರು ಎಂದು ಹೇಳಿದರು.
ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಮಾತನಾಡಿ, ದಾಖಲೆಗಳಲ್ಲಿ ಇಲ್ಲದಿರುವ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ದನಿಯಾದದ್ದು ಸಾಯಿನಾಥ್ ಅವರ ವಿಶೇಷ. ಸ್ವಾತಂತ್ರ್ಯ ಹೋರಾಟದ ಈ ಕಾಲಾಳು ಯೋಧರಿಂದ ಸ್ಫೂರ್ತಿ ಪಡೆಯೋಣ ಎಂದು ಆಶಿಸಿದರು.
ಇದನ್ನೂ ಓದಿ | Cauvery Dispute: ಕೇಂದ್ರವು 4 ರಾಜ್ಯಗಳ ಜತೆ ಚರ್ಚಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಲಿ: ಎಸ್.ಎಂ. ಕೃಷ್ಣ
ಕಾರ್ಯಕ್ರಮದಲ್ಲಿ ಅನುವಾದಕ ಜಿ.ಎನ್. ಮೋಹನ್, ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಸದಸ್ಯರು, ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷರಾದ ಎನ್ ಆರ್ ವಿಶುಕುಮಾರ್, ಸಂಸ್ಕೃತಿ ಚಿಂತಕರಾದ ಡಾ.ವಿಜಯಮ್ಮ, ಬಹುರೂಪಿಯ ಸಂಸ್ಥಾಪಕರಾದ ಶ್ರೀಜಾ ವಿ.ಎನ್. ಉಪಸ್ಥಿತರಿದ್ದರು.
ಕೃತಿ: ಕೊನೆಯ ಹೀರೋಗಳು: ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರು
ಲೇಖಕ: ಪಿ. ಸಾಯಿನಾಥ್
ಅನುವಾದ: ಜಿ.ಎನ್. ಮೋಹನ್
ಪ್ರಕಾಶನ: ಬಹುರೂಪಿ, ಬೆಂಗಳೂರು
ಸಂಪರ್ಕ: 70191 82729
ಕಲೆ/ಸಾಹಿತ್ಯ
World Culture Festival: ಸಂಗೀತ, ನೃತ್ಯಗಳ ಮೂಲಕ ‘ವಸುದೈವ ಕುಟುಂಬಕಂ’ ಸಂದೇಶ ಸಾರಿದ ವಿಶ್ವ ಸಾಂಸ್ಕೃತಿಕ ಉತ್ಸವ
World Culture Festival: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಆಯೋಜಿಸಿರುವ ಆರ್ಟ್ ಆಫ್ ಲಿವಿಂಗ್ನ 4ನೇ ಆವೃತ್ತಿಯ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಮೊದಲ ದಿನವಾದ ಶುಕ್ರವಾರ 10 ಲಕ್ಷ ಮಂದಿ ಭಾಗಿಯಾಗಿದ್ದರು.
ಬೆಂಗಳೂರು: ವಾಷಿಂಗ್ಟನ್ ಡಿ.ಸಿ.ಯ ಪ್ರತಿಷ್ಠಿತ ನ್ಯಾಷನಲ್ ಮಾಲ್ನಲ್ಲಿ ಶುಕ್ರವಾರ ಚಾಲನೆಗೊಂಡ ಆರ್ಟ್ ಆಫ್ ಲಿವಿಂಗ್ನ 4ನೇ ಆವೃತ್ತಿಯ ವಿಶ್ವ ಸಾಂಸ್ಕೃತಿಕ ಉತ್ಸವವು (World Culture Festival), ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಜಾಗತಿಕ ಸಂದೇಶವನ್ನು ಸಾರಿತು. ಉತ್ಸವದಲ್ಲಿ 180 ದೇಶಗಳಿಂದ ದಾಖಲೆಯ 10 ಲಕ್ಷ ಜನರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಜಾಗತಿಕ ಗಣ್ಯರು, ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನಗಳನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ಇತರ ಹೆಸರಾಂತ ಕಲಾವಿದರು ವಸುದೈವ ಕುಟುಂಬಕಂ ಸಂದೇಶದೊಂದಿಗೆ ಒಂದುಗೂಡಿದ್ದರು.
ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರಿಂದ ಅಮೆರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ ಗಾಯನ ಮಾಡಲಾಯಿತು. 1000 ಜನರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು ಪಂಚಭೂತಂ ಎಂಬ ಪ್ರದರ್ಶನವು ನಡೆಯಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದನವು ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯದಿಂದ ಪ್ರದರ್ಶನಗಳು ನಡೆದವು.
ಇದನ್ನೂ ಓದಿ | Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್
ಅಂತಿಮವಾಗಿ, ‘ಒನ್ ಲವ್’ ಆಚರಣೆಯೊಂದಿಗೆ, ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಎಲ್ಲರ ಮುಖದಲ್ಲೂ ನಗು ಮೂಡಿಸೋಣ: ಗುರುದೇವ ಶ್ರೀ ಶ್ರೀ ರವಿಶಂಕರ್
ಜಾಗತಿಕ ಮಾನವತಾವಾದಿ, ಶಾಂತಿದೂತ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾತನಾಡಿ, ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಜಗತ್ತು ತುಂಬಾ ವೈವಿಧ್ಯಮಯವಾಗಿದೆ, ಆದರೂ ನಮ್ಮ ಮಾನವೀಯ ಮೌಲ್ಯಗಳಲ್ಲಿ ಏಕತೆ ಇದೆ. ಇಂದು, ಈ ಸಂದರ್ಭದಲ್ಲಿ, ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದು ಮಾನವೀಯತೆ. ಅದರಿಂದಲೇ ನಾವೆಲ್ಲರೂ ಮಾಡಲ್ಪಟ್ಟಿರುವುದು ತಿಳಿಸಿದರು.
ಜ್ಞಾನದ ಬೆಂಬಲವಿಲ್ಲದಿದ್ದರೆ ಯಾವುದೇ ಆಚರಣೆಯು ಸತ್ವವನ್ನು ಹೊಂದಿರುವುದಿಲ್ಲ ಮತ್ತು ಆ ಜ್ಞಾನವು ನಮ್ಮೆಲ್ಲರೊಳಗಿದೆ. ನಾವೆಲ್ಲರೂ ವಿಭಿನ್ನವಾಗಿದ್ದರೂ, ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ಮತ್ತೊಮ್ಮೆ ಎಲ್ಲರಿಗೂ ಹೇಳುತ್ತೇವೆ – ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸೇರಿದವರು. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಂದ ಸ್ವೀಕರಿಸಿ ಎದುರಿಸೋಣ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸನ್ನು ಕಾಣೋಣ ಎಂದರು.
ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಮಾತನಾಡಿ, ನಾವೆಲ್ಲರೂ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮ ಭೂಮಿಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಸವಾಲುಗಳನ್ನು ನಾವು ಎದುರಿಸುವುದು ಸಹಜ. ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ, ಪರಸ್ಪರ ಅವಲಂಬಿತ ಜಗತ್ತಿನಲ್ಲಿ, ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು, ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು ಎಂದು ತಿಳಿಸಿದರು.
ದಿ ರೆವರೆಂಡ್ ಬಿಷಪ್ ಎಮೆರಿಟಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋದ ಪೋಪ್, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಚಾನ್ಸೆಲರ್ ಎಮೆರಿಟಸ್ ಹೋಲಿ ಸೀ ಅವರು ಮಾತನಾಡಿ, “ವಿಶ್ವ ಶಾಂತಿಯನ್ನು ಹೊಂದಲು, ನಮ್ಮಲ್ಲಿ ಆಂತರಿಕ ಶಾಂತಿಯಿರಬೇಕು. ಶಾಂತಿಯನ್ನು ಸಂವಹನ ಮಾಡಲು, ನಾವು ಶಾಂತಿಯಿಂದ ಬದುಕಬೇಕು ಮತ್ತು ಶಾಂತಿಯಿಂದ ಬದುಕಲು, ನಮಗೆ ಆರ್ಟ್ ಆಫ್ ಲಿವಿಂಗ್ ಅಗತ್ಯವಿದೆ. ಶಾಂತಿಯಿಂದ ಬದುಕುವ ಕಲೆಯನ್ನು ಹೊಂದಲು, ನಾವು ದೇವರೊಂದಿಗೆ ಸಂವಹನವನ್ನು ಹೊಂದಿರಬೇಕು. ದೇವರು ಮಾನವನಿಗೆ ಶತ್ರುವಲ್ಲ. ದೇವರು ಒಬ್ಬ ಸ್ನೇಹಿತ, ದೇವರು ಅಂದರೆ ಪ್ರೀತಿ. ದೇವರನ್ನು ಹೊಂದಲು, ನಾವು ಧ್ಯಾನಕ್ಕೆ, ಪ್ರಾರ್ಥನೆಗೆ ಹಿಂತಿರುಗಬೇಕಾಗಿದೆ. ನಾವು ನಮ್ಮ ಮೂಲಕ್ಕೆ ಹಿಂತಿರುಗಬೇಕಾಗಿದೆ ಎಂದರು.
ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರು ಮಾತನಾಡಿ, “ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ಗೋಡೆಗಳನ್ನು ಒಡೆಯುತ್ತದೆ, ಮಾತುಕತೆ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಜಗತ್ತನ್ನು ಒಟ್ಟುಗೂಡಿಸುತ್ತದೆ. ಜನರು ಮತ್ತು ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಂಸ್ಕೃತಿಯು ಎಲ್ಲಾ ಜಾಗತಿಕ ನಾಗರಿಕರ ನಡುವೆ ಪ್ರಬಲ ವಿನಿಮಯವನ್ನು ರಚಿಸಬಹುದು. ಇಂದು, ಪ್ರಪಂಚದ ಎಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆಯು, ಯುನೈಟೆಡ್ ಸ್ಟೇಟ್ಸ್ನ ನ್ಯಾಷನಲ್ ಮಾಲ್ನಲ್ಲಿ ಒಟ್ಟುಗೂಡಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಏಕತೆ ಮತ್ತು ವೈವಿಧ್ಯತೆಯ ಸ್ಫೂರ್ತಿದಾಯಕ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. ನಮಗೆ ಇಂತಹ ಹೆಚ್ಚು ಹೆಚ್ಚು ಆಚರಣೆಗಳು, ಹೆಚ್ಚು ಒಗ್ಗೂಡುವಿಕೆ, ಹೆಚ್ಚು ಶಾಂತಿ ಮತ್ತು ಹೆಚ್ಚಿನ ಸಹಕಾರ, ಐಕ್ಯಭಾವ ಮತ್ತು ಪಾಲುದಾರಿಕೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ದೊಡ್ಡ ಸವಾಲುಗಳ ಮೇಲೆ ನಾವು ಹೀಗೆಯೇ ಮುನ್ನುಗ್ಗಿ ಮುಂದುವರಿಯುತ್ತೇವೆ. ಇದೇ ರೀತಿ ನಾವು ಶಾಂತಿಯನ್ನು ನಿರ್ಮಿಸುತ್ತೇವೆ ಎಂದರು.
ಇದನ್ನೂ ಓದಿ | Rajyotsava Award 2023 : ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಹೆಸರು ನಾಮನಿರ್ದೇಶನ ಮಾಡಿ; ಅ. 15 ಕೊನೆ ದಿನ
ವಾಷಿಂಗ್ಟನ್ ಡಿಸಿಯ ಮೇಯರ್ ಮುರಿಯಲ್ ಬೌಸರ್, ಮಿಚಿಗನ್ ಕಾಂಗ್ರೆಸಿಗ ಥಾನೆದರ್, ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಹಕುಬುನ್ ಶಿಮೊಮುರಾ, ಯುಎನ್ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೈಮ್, ಹಾಗೆಯೇ ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು, ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂಘರ್ಷದ ಜಗತ್ತಿನಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಸಹಬಾಳ್ವೆಗಾಗಿ ತಮ್ಮ ಸಾಮಾನ್ಯ ದೃಷ್ಟಿಯನ್ನು ಹಂಚಿಕೊಂಡರು.
ಕರ್ನಾಟಕ
Rajyotsava Award 2023 : ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಹೆಸರು ನಾಮನಿರ್ದೇಶನ ಮಾಡಿ; ಅ. 15 ಕೊನೆ ದಿನ
Kannada Rajyotsava Award 2023: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ನೀವು ಕೂಡಾ ಸಾಧಕರ ಹೆಸರನ್ನು ಶಿಫಾರಸು ಮಾಡಬಹುದು. ಅಕ್ಟೋಬರ್ 15ರವರೆಗೆ ಕಾಲಾವಕಾಶವಿದೆ.
ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ (Kannada Rajyotsava) ಸಂದರ್ಭದಲ್ಲಿ ನಾಡಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2023 (Rajyotsava Award 2023) ನೀಡಲಾಗುತ್ತದೆ. ಈ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಸಾಧಕರ ಹೆಸರನ್ನು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ (Public Nomination) ನೀಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಗೆ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶದಿಂದ ಕಳೆದ ಕೆಲವು ವರ್ಷದಿಂದ ಆನ್ಲೈನ್ನಲ್ಲಿ ಸಾಧಕರ ಹೆಸರು ಮತ್ತು ವಿವರವನ್ನು ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿಯೂ ಶಿಫಾರಸಿಗೆ ಮನವಿ ಮಾಡಲಾಗಿದ್ದು, ಸೇವಾ ಸಿಂಧು ಪೋರ್ಟಲ್ (Sewa Sindhu Portal) ಮೂಲಕ ಅಕ್ಟೋಬರ್ 1ರಿಂದ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 15ರಂದು ನಾಮ ನಿರ್ದೇಶನಕ್ಕೆ ಕೊನೆಯ ದಿನವಾಗಿರುತ್ತದೆ.
ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆ ಇರುತ್ತದೆ. ಅದರಲ್ಲಿ ಸಾಧಕರ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ವಿವರಗಳನ್ನು ಒದಗಿಸಬೇಕಾಗುತ್ತದೆ.
ರಾಜ್ಯದ ಮೂಲೆ ಮೂಲೆಯಲ್ಲಿ ಎಲೆಮರೆಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವ ಉದ್ದೇಶದಿಂದ ಈ ನಾಮ ನಿರ್ದೇಶನ ಅವಕಾಶ ನೀಡಲಾಗಿದೆ.
ಪ್ರತಿ ವರ್ಷವೂ ಈ ನಾಮಕರಣಕ್ಕೆ ಅವಕಾಶವಿರುತ್ತದೆ. ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ಮೇಲ್ಪಟ್ಟವರನ್ನು ಮಾತ್ರ ಶಿಫಾರಸು ಮಾಡಬಹುದಾಗಿರುತ್ತದೆ. ಇದರಲ್ಲಿ ಕ್ರೀಡಾ ವಿಭಾಗರದಲ್ಲಿ ವಯಸ್ಸಿನ ವಿನಾಯಿತಿ ಇರುತ್ತದೆ.
2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ, ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಿದಾಗ ಸುಮಾರು 28000ಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವರ ಪೈಕಿ ಸಾಧನೆ, ಜಿಲ್ಲಾವಾರು ಮಾನದಂಡಗಳನ್ನು ಪರಿಗಣಿಸಿ 67 ಸಾಧಕರನ್ನು ಆಯ್ಕೆ ಮಾಡಿ ಗೌರವಿಸಲಾಗಿತ್ತು.
ಈ ಬಾರಿ 68 ಮಂದಿ ಸಾಧಕರಿಗೆ ಪ್ರಶಸ್ತಿ
ಈ ಬಾರಿ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಗಿರುವುದರಿಂದ 68 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಆನ್ಲೈನ್ ಮೂಲಕ ಬಂದಿರುವ ಅರ್ಜಿಗಳನ್ನು ಪ್ರತ್ಯೇಕಿಸಿ ಅವುಗಳನ್ನು ತಜ್ಞರ ತಂಡದ ಮುಂದೆ ಇಟ್ಟು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಇದಕ್ಕಾಗಿಯೇ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಮಾಡಲಾಗುತ್ತದೆ.
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ